ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 26 ಪ್ರವಾಸಿಗರನ್ನು ‘ಹುತಾತ್ಮರು’ ಮತ್ತು ದಾಳಿ ನಡೆದ ಸ್ಥಳವನ್ನು ‘ಶಹೀದ್ ಹಿಂದೂ ಕಣಿವೆ ಪ್ರವಾಸಿ ತಾಣ’ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ (ಮೇ 20) ತಿರಸ್ಕರಿಸಿದೆ.
ಆಯುಷ್ ಅಹುಜಾ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸುಮೀತ್ ಗೋಯೆಲ್ ಅವರಿದ್ದ ಪೀಠ ಆದೇಶ ಪ್ರಕಟಿಸಿದೆ ಎಂದು livelaw.in ವರದಿ ಮಾಡಿದೆ.
“ಕಾರ್ಯಾಂಗಕ್ಕೆ ಮಾತ್ರ ಮೀಸಲಾಗಿರುವ ನೀತಿ ನಿರೂಪಣಾ ಕ್ಷೇತ್ರಕ್ಕೆ ನ್ಯಾಯಾಲಯ ಪ್ರವೇಶಿಸುವುದಿಲ್ಲ” ಎಂದು ಹೇಳಿದ ಪೀಠ, ಸೂಕ್ತ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಲು ಅರ್ಜಿದಾರಿಗೆ ಸೂಚಿಸಿದೆ ಮತ್ತು 30 ದಿನಗಳ ಒಳಗೆ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುತ್ತದೆ” ಎಂದಿದೆ.
ಭಯೋತ್ಪಾದಕ ದಾಳಿಯಲ್ಲಿ ಸತ್ತವರನ್ನು ಹುತಾತ್ಮರೆಂದು ಘೋಷಿಸುವುದು ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಬರುತ್ತದೆಯೇ? ದಯವಿಟ್ಟು ಒಂದು ಪೂರ್ವನಿದರ್ಶನವನ್ನು ಒದಗಿಸಿ. ಇದು ಆಡಳಿತಾತ್ಮಕ ವಿಷಯ ಮತ್ತು ನೀತಿಯ ಪ್ರಶ್ನೆಯಾಗಿದ್ದು, ಇದನ್ನು ನಿರ್ಧರಿಸಲು ಕಾರ್ಯಾಂಗಕ್ಕೆ ಬಿಡಬೇಕು. ನಾವು ಅದನ್ನು ಮಾಡಬಹುದೇ?” ಎಂದು ವಿಚಾರಣೆಯ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ನಾಗು ಅವರು ಅರ್ಜಿದಾರರನ್ನು ಮೌಖಿಕವಾಗಿ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಅರ್ಜಿದಾರರಾದ ಅಹುಜಾ, “ಧರ್ಮದ ಹೆಸರಿನಲ್ಲಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ತಲೆಗೆ ಗುಂಡು ಹಾರಿಸಿದ್ದಾರೆ. ಮೃತರು ಅವರನ್ನು ಸೈನಿಕರಂತೆ ಎದುರಿಸಬೇಕಾಯಿತು” ಎಂದಿದ್ದಾರೆ.
ಪಿಐಎಲ್ ವಿರೋಧಿಸಿ ಕೇಂದ್ರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಹಾಯಕ ಮಹಾನಿರ್ದೇಶಕ ಸತ್ಯ ಪಾಲ್ ಜೈನ್, “ಅರ್ಜಿದಾರರಿಗೆ ಭಾರತ ಸರ್ಕಾರ ಏನು ಮಾಡುತ್ತಿದೆ ಎಂದು ತಿಳಿದಿಲ್ಲ. ಗೃಹ ಸಚಿವರು ಘಟನೆ ನಡೆದ ದಿನ ಸಂಜೆ ಶ್ರೀನಗರಕ್ಕೆ ಭೇಟಿ ನೀಡಿದ್ದರು. ನಾವು ಇತರ ರಾಷ್ಟ್ರದೊಂದಿಗೆ ಯುದ್ಧದ ಅಂಚಿನಲ್ಲಿದ್ದೇವೆ. ಹಾಗಾಗಿ, ಇಂತಹ ವಿಷಯಗಳನ್ನು ಚರ್ಚೆ ಮಾಡುವ ಸಮಯ ಇದಲ್ಲ, ನಾವು ಇತರ ವಿಷಯಗಳಿಗೆ ಆದ್ಯತೆ ನೀಡುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಯಾವುದೇ ಸೈನಿಕರು ಸತ್ತರೂ ಸಹ, ಅವರನ್ನು ಪ್ರಶಸ್ತಿಗೆ ಪರಿಗಣಿಸಬೇಕು. ಆದರೆ, ಅದನ್ನು ತಕ್ಷಣವೇ ನೀಡಲಾಗುವುದಿಲ್ಲ. ಸಮಯ ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ಕನಿಷ್ಠ ಒಂದು ವರ್ಷ” ಎಂದು ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಹೇಳಿದ್ದಾರೆ.
ಪಿಐಎಲ್ ಸಂಬಂಧ ನ್ಯಾಯಾಲಯ ಮೇ 6 ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಸೌಜನ್ಯ : livelaw.in & barandbench.com
ನ್ಯಾಯಾಂಗ ಸೇವೆಗೆ ಅರ್ಹತೆ ಪಡೆಯಲು ಮೂರು ವರ್ಷಗಳ ವಕೀಲಿಕೆ ಕಡ್ಡಾಯ: ಸುಪ್ರೀಂ ಕೋರ್ಟ್