ಪಂಜಾಬ್ನಲ್ಲಿ ಶನಿವಾರ ನಡೆದ ಪಾಲಿಕೆ ಮತ್ತು ಪುರಸಭೆ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಕಳಪೆ ಪ್ರದರ್ಶನ ನೀಡಿದ್ದು, ಐದರಲ್ಲಿ ಒಂದು ಪಾಲಿಕೆಯಲ್ಲಿ ಮಾತ್ರ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಜೊತೆಗೆ, 44 ಮುನ್ಸಿಪಲ್ ಮತ್ತು ನಗರ ಪಂಚಾಯತ್ಗಳಲ್ಲಿ ಎಎಪಿ 26 ಅನ್ನು ಅಷ್ಟೆ ಗೆದ್ದುಕೊಂಡಿದೆ. ಪಂಜಾಬ್
ಪಟಿಯಾಲ ಮುನಿಸಿಪಲ್ ಕಾರ್ಪೊರೇಶನ್ ಅನ್ನು ಎಎಪಿ ಗೆದ್ದುಕೊಂಡಿದ್ದು, ಲುಧಿಯಾನ ಮತ್ತು ಜಲಂಧರ್ ಮುನ್ಸಿಪಲ್ ಕಾರ್ಪೊರೇಶನ್ಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಅಮೃತಸರ ಮತ್ತು ಫಗ್ವಾರಾ ಮುನ್ಸಿಪಲ್ ಕಾರ್ಪೊರೇಶನ್ಗಳಲ್ಲಿ ಬಹುಮತ ಸಾಧಿಸಲು ಸೋತುಹೋಗಿದೆ. ಕಾಂಗ್ರೆಸ್ ಅಮೃತಸರ ಮುನ್ಸಿಪಲ್ ಕಾರ್ಪೋರೇಶನ್ ಅನ್ನು ಗೆದ್ದಿದ್ದು, ಫಗ್ವಾರದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 3,300 ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಮತ್ತು ಒಟ್ಟು 37.32 ಲಕ್ಷ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರು. ಚುನಾವಣೆಯಲ್ಲಿ 65.85% ದಷ್ಟು ಮತದಾನವಾಗಿತ್ತು. ಪಂಜಾಬ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ತವರು ಕ್ಷೇತ್ರವಾದ 60 ಸದಸ್ಯ ಬಲದ ಪಟಿಯಾಲಾ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಎಎಪಿ 53 ಸ್ಥಾನಗಳಲ್ಲಿ 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಅಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ನಾಲ್ಕು ಸ್ಥಾನಗಳನ್ನು ಗೆದ್ದರೆ, ಎಸ್ಎಡಿ ಎರಡು ಸ್ಥಾನಗಳನ್ನು ಗೆದ್ದಿದೆ. ಉಳಿದಂತೆ ಪಾಲಿಕೆಯ ಏಳು ವಾರ್ಡ್ಗಳಿಗೆ ಚುನಾವಣೆ ಮುಂದೂಡಲಾಗಿದೆ.
ಲುಧಿಯಾನದಲ್ಲಿ ಎಎಪಿ 95 ರಲ್ಲಿ 41 ಸ್ಥಾನಗಳನ್ನು ಗೆದ್ದುಕೊಂಡಿತು, ಬಹುಮತಕ್ಕೆ ಏಳು ಸ್ಥಾನಗಳ ಕೊರತೆಯಿದೆ. ಕಾಂಗ್ರೆಸ್ 30, ಬಿಜೆಪಿ 19, ಎಸ್ಎಡಿ 2 ಮತ್ತು ಸ್ವತಂತ್ರ ಅಭ್ಯರ್ಥಿಗಳು 3 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಎಎಪಿಯ ಇಬ್ಬರು ಹಾಲಿ ಶಾಸಕರ ಪತ್ನಿಯರು ಲುಧಿಯಾನ ಚುನಾವಣೆಯಲ್ಲಿ ಸೋತಿದ್ದು ಎಎಪಿಗೆ ದೊಡ್ಡ ಹಿನ್ನಡೆಯಾಗಿದೆ. ಜೊತೆಗೆ ಕಾಂಗ್ರೆಸ್ ನ ಮಾಜಿ ಸಚಿವ ಭರತ್ ಭೂಷಣ್ ಆಶು ಅವರ ಪತ್ನಿ ಮಮತಾ ಆಶು ಕೂಡ ಸೋತಿದ್ದಾರೆ.
ಜಲಂಧರ್ನಲ್ಲಿ ಎಎಪಿ 85 ರಲ್ಲಿ 38 ರಲ್ಲಿ ಗೆದ್ದಿದೆ. ಇಲ್ಲಿ ಕಾಂಗ್ರೆಸ್ 25, ಬಿಜೆಪಿ 19, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಒಂದರಲ್ಲಿ ಗೆಲುವು ಸಾಧಿಸಿದೆ. ಎರಡು ವಾರ್ಡ್ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಮೃತಸರದಲ್ಲಿ 85 ವಾರ್ಡ್ಗಳಲ್ಲಿ ಕಾಂಗ್ರೆಸ್ 43, ಎಎಪಿ 24, ಬಿಜೆಪಿ ಒಂಬತ್ತು, ಎಸ್ಎಡಿ ನಾಲ್ಕು ಮತ್ತು ಸ್ವತಂತ್ರ ಅಭ್ಯರ್ಥಿಗಳು ಐದು ವಾರ್ಡ್ಗಳನ್ನು ಗೆದ್ದಿದ್ದಾರೆ.
ಫಗ್ವಾರಾದಲ್ಲಿ ಕಾಂಗ್ರೆಸ್ 22, ಎಎಪಿ 12, ಬಿಜೆಪಿ 4, ಬಿಎಸ್ಪಿ ಮೂರು, ಎಸ್ಎಡಿ ಮೂರು ಮತ್ತು ಸ್ವತಂತ್ರ ಅಭ್ಯರ್ಥಿಗಳು 6 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಯಾವ ಪಕ್ಷವೂ ಬಹುಮತದ 26 ಸ್ಥಾನಗಳನ್ನು ಮುಟ್ಟಲಿಲ್ಲ. ಆದಾಗ್ಯೂ, ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 50 ಸದಸ್ಯರಿರುವ ಪಾಲಿಕೆಯಲ್ಲಿ ಬಿಎಸ್ಪಿ ಕಾಂಗ್ರೆಸ್ ಅನ್ನು ಬೆಂಬಲಿಸುವ ಸಾಧ್ಯತೆಯಿದೆ.
ರಾಜ್ಯದ ಐದು ದೊಡ್ಡ ಮುನ್ಸಿಪಲ್ ಕಾರ್ಪೊರೇಶನ್ಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಸಿಗದಿದ್ದು ಮಾತ್ರವಲ್ಲದೆ, ಪಕ್ಷವು ತನ್ನ ಭದ್ರಕೋಟೆಯಾದ ಸಂಗ್ರೂರ್ನಲ್ಲಿ ದೊಡ್ಡ ಹಿನ್ನಡೆ ಅನುಭವಿಸಿದೆ. ಏಕೆಂದರೆ ಸ್ಥಳೀಯ ಪುರಸಭೆಯ 29 ಸ್ಥಾನಗಳಲ್ಲಿ ಏಳನ್ನು ಮಾತ್ರ ಗೆಲ್ಲಲು ಪಕ್ಷಕ್ಕೆ ಸಾಧ್ಯವಾಯಿತು. ಮುಖ್ಯಮಂತ್ರಿ ಭಗವಂತ್ ಮಾನ್, ಎಎಪಿ ಪಂಜಾಬ್ ಅಧ್ಯಕ್ಷ ಅಮನ್ ಅರೋರಾ ಮತ್ತು ರಾಜ್ಯ ಹಣಕಾಸು ಸಚಿವ ಹರ್ಪಾಲ್ ಚೀಮಾ ಅವರ ತವರು ಜಿಲ್ಲೆ ಬರ್ನಾಲಾ ವಿಧಾನಸಭಾ ಉಪಚುನಾವಣೆಯ ನಂತರ ಪಕ್ಷಕ್ಕೆ ಇದು ಸತತ ಎರಡನೇ ಸೋಲಾಗಿದೆ.
ಈ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅಕಾಲಿದಳ ಹೀನಾಯ ಸೋಲು ಕಂಡಿವೆ. ಬಿಜೆಪಿ ಕೇವಲ 7 ಪ್ರತಿಶತದಷ್ಟು ಸ್ಥಾನಗಳನ್ನು ಗೆದ್ದಿದೆ, ಅದರ 69 ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ. ಅದೇ ರೀತಿ, ಅಕಾಲಿದಳ ಕೇವಲ 3 ಪ್ರತಿಶತದಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಅದರ 31 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಎಸ್ಪಿ 5 ವಿಜೇತರನ್ನು ಹೊಂದಿತ್ತು ಮತ್ತು ಕೇವಲ 0.5 ಶೇಕಡಾ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು.
ಇದನ್ನೂ ಓದಿ: ಬ್ರಿಟಿಷರನ್ನು ಓಡಿಸಿದ್ದು ಸತ್ಯಾಗ್ರಹವಲ್ಲ, ಶಸ್ತ್ರಾಸ್ತ್ರ – ಬಿಹಾರ ರಾಜ್ಯಪಾಲ ವಿವಾದಾತ್ಮಕ ಹೇಳಿಕೆ


