ಒಂಬತ್ತು ವರ್ಷದ ದಲಿತ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಫೋಟೋಗಳನ್ನು ಟ್ವೀಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಟ್ವಿಟರ್ ಖಾತೆ ಅಮಾನತುಗೊಂಡಿತ್ತು. ಇದೀಗ ಆಗಸ್ಟ್ 14 ರ ಶನಿವಾರದಂದು ಅವರ ಖಾತೆಯನ್ನು ಮತ್ತೇ ಮರುಸ್ಥಾಪಿಸಲಾಗಿದೆ.
“ರಾಹುಲ್ ಗಾಂಧಿಯ ಟ್ವಿಟರ್ ಖಾತೆಯನ್ನು ಅನ್ಲಾಕ್ ಮಾಡಲಾಗಿದೆ” ಎಂದು ಪಕ್ಷದ ವಕ್ತಾರರೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ರಾಹುಲ್ ಗಾಂಧಿಯ ಖಾತೆಯೊಂದಿಗೆ ಅಮಾನತುಗೊಂಡ ಇತರ ಕೆಲವು ನಾಯಕರ ಖಾತೆಗಳನ್ನು ಸಹ ಮರುಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಟ್ವಿಟರ್ ಖಾತೆ ಸ್ಥಗಿತ: ‘ಪ್ರಜಾಪ್ರಭುತ್ವದ ಮೇಲಿನ ದಾಳಿ’ ಎಂದ ರಾಹುಲ್ ಗಾಂಧಿ
‘ಪ್ರಜಾಪ್ರಭುತ್ವದ ರಚನೆಯ ಮೇಲೆ ದಾಳಿ’: ಗಾಂಧಿ
ಟ್ವಿಟರ್ ಕಾಂಗ್ರೆಸ್ ಪಕ್ಷ ಮತ್ತು ಅದರ ಹಲವು ನಾಯಕರ ಖಾತೆಗಳನ್ನು ಲಾಕ್ ಮಾಡಿದ ಒಂದು ದಿನದ ನಂತರ, ಆಗಸ್ಟ್ 13 ರ ಶುಕ್ರವಾರದಂದು ವಿಡಿಯೋವೊಂದನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧ, ಟ್ವಿಟರ್ನ ಈ ಕ್ರಮದ ವಿರುದ್ಧ ತನ್ನ ಪ್ರತಿಭಟನೆಯನ್ನು ದಾಖಲಿಸಿದ್ದರು.
“ಇದು ದೇಶದ ಪ್ರಜಾಪ್ರಭುತ್ವ ಸಂರಚನೆಯ ಮೇಲಿನ ದಾಳಿ” ಎಂದು ರಾಹುಲ್ ಗಾಂಧಿ “ಟ್ವಿಟ್ಟರ್ನ ಅಪಾಯಕಾರಿ ಆಟ” ಎಂಬ ಶೀರ್ಷಿಕೆಯಿರುವ ವೀಡಿಯೊದಲ್ಲಿ ಹೇಳಿದ್ದರು.
“ನನ್ನ ಟ್ವಿಟ್ಟರ್ ಅನ್ನು ಲಾಕ್ ಮಾಡುವ ಮೂಲಕ, ಅವರು ನಮ್ಮ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸಿ ಒಂದು ಕಂಪೆನಿಯು ತನ್ನ ವ್ಯವಹಾರವನ್ನು ಮಾಡುತ್ತಿದೆ. ಒಬ್ಬ ರಾಜಕಾರಣಿಯಾಗಿ, ನಾನು ಅದನ್ನು ಇಷ್ಟಪಡುವುದಿಲ್ಲ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದರು.
“ಟ್ವಿಟರ್ ಖಾತೆ ನಿರ್ಬಂಧ ರಾಹುಲ್ ಗಾಂಧಿಯ ಮೇಲಿನ ದಾಳಿ ಅಲ್ಲ. ನಾನು 19 ರಿಂದ 20 ಮಿಲಿಯನ್ ಫಾಲೋವರ್ಸ್ ಹೊಂದಿದ್ದೇನೆ. ನೀವು ಅವರ ಅಭಿಪ್ರಾಯದ ಹಕ್ಕನ್ನು ಕೂಡ ನಿರಾಕರಿಸುತ್ತಿದ್ದೀರಿ” ಎಂದು ರಾಹುಲ್ ಗಾಂಧಿ ಯೂಟ್ಯೂಬ್ ವಿಡಿಯೊ ಮೂಲಕ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಅತ್ಯಾಚಾರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಜೊತೆಯಲ್ಲಿರುತ್ತೇನೆ: ರಾಹುಲ್ ಗಾಂಧಿ
ಟ್ವಿಟ್ಟರ್ ಕಂಪನಿಯನ್ನು ಪಕ್ಷಪಾತಿ ಎಂದು ಕರೆದಿದ್ದ ರಾಹುಲ್ ಗಾಂಧಿ, “ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿಯಾಗುತ್ತಿದೆ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಅವಕಾಶವಿಲ್ಲ. ಮಾಧ್ಯಮವನ್ನು ನಿಯಂತ್ರಿಸಲಾಗುತ್ತಿದೆ. ಇಂತಹ ಸಮಯದಲ್ಲಿ ನಾವು ಟ್ವಿಟರ್ನಲ್ಲಿ ನಮ್ಮ ಆಲೋಚನೆಗಳನ್ನು ಹಾಕಬಹುದು ಎಂದು ನಾನು ಭಾವಿಸಿದೆ. ಆದರೆ ಅದು ಸಾಧ್ಯವಿಲ್ಲ. ಟ್ವಿಟರ್ ವಾಸ್ತವವಾಗಿ ತಟಸ್ಥ, ವಸ್ತುನಿಷ್ಠ ವೇದಿಕೆಯಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಅದು ಸರ್ಕಾರ ಹೇಳುವುದನ್ನು ಕೇಳುತ್ತದೆ” ಎಂದು ಆರೋಪಿಸಿದ್ದರು.
ಟ್ವಿಟರ್ ಪ್ರತಿಕ್ರಿಯೆ
ಟ್ವಿಟರ್ ತಾನು ಯಾವುದೆ ಪ್ರಭಾವಕ್ಕೆ ಒಳಗಾಗಿಲ್ಲ ಎಂದು ಹೇಳಿದ್ದು, “ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೊಳಿಸಲಾಗಿದೆ” ಎಂದು ತಿಳಿಸಿದೆ.
“ನಮ್ಮ ನಿಯಮಗಳನ್ನು ಉಲ್ಲಂಘಿಸಿ ಚಿತ್ರವನ್ನು ಪೋಸ್ಟ್ ಮಾಡಿದ ಹಲವಾರು ಟ್ವೀಟ್ಗಳ ಮೇಲೆ ನಾವು ಕ್ರಿಯಾಶೀಲ ಕ್ರಮ ಕೈಗೊಂಡಿದ್ದೇವೆ. ಕೆಲವು ಖಾಸಗಿ ಮಾಹಿತಿಯು ಹೆಚ್ಚಿನ ಅಪಾಯವನ್ನು ಹೊಂದಿದೆ. ಟ್ವಿಟರ್ನ ಗುರಿ ಯಾವಾಗಲೂ ವ್ಯಕ್ತಿಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸುವುದು” ಎಂದು ಟ್ವಿಟರ್ ಹೇಳಿದೆ.
ಇದನ್ನೂ ಓದಿ: ದಲಿತರ ಮಗಳು ಕೂಡ ದೇಶದ ಮಗಳು: ದೆಹಲಿ ಅತ್ಯಾಚಾರ ಕೊಲೆಗೆ ರಾಹುಲ್ ಗಾಂಧಿ ಆಕ್ರೋಶ
ವಿಡಿಯೋ ನೋಡಿ: ಬೇಗೂರು ಕೆರೆ ಉಳಿಸುವಂತೆ ಹೈಕೋರ್ಟ್ ಆದೇಶ. ಅಕ್ರಮವಾಗಿ ಶಿವ ವಿಗ್ರಹ ಅನಾವರಣಗೊಳಿಸಿದವರ ವಿರುದ್ಧ ಕ್ರಮಕ್ಕೆ ತಾಕೀತು.