Homeಕರ್ನಾಟಕಹೊಸ ಸಂಪುಟ; ಬಿಡಿ ಚಿತ್ರಗಳಲ್ಲಿ ಸಿಗುವ ಪೂರ್ಣ ಚಿತ್ರಣ

ಹೊಸ ಸಂಪುಟ; ಬಿಡಿ ಚಿತ್ರಗಳಲ್ಲಿ ಸಿಗುವ ಪೂರ್ಣ ಚಿತ್ರಣ

- Advertisement -
- Advertisement -

ಯಡಿಯೂರಪ್ಪನವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಾಯಿತು ಎಂಬ ಕುರಿತು ಬಿಜೆಪಿಯಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಭ್ರಷ್ಟಾಚಾರ ಹೆಚ್ಚಾಗಿತ್ತು ಎನ್ನುವುದಾದರೆ ಈಗ ಭ್ರಷ್ಟಾಚಾರ ಹೇಗೆ ಕಡಿಮೆಯಾಗುತ್ತದೆ ಎಂಬುದು ಹೊಸ ಸಂಪುಟದಿಂದ ಗೊತ್ತಾಗುವಂತಿಲ್ಲ. ವಯಸ್ಸಿನ ಕಾರಣವನ್ನು ಯಡಿಯೂರಪ್ಪನವರೇ ಪರೋಕ್ಷವಾಗಿ ಹೇಳಿದ್ದಾರಾದರೂ, ಅದನ್ನೂ ವರಿಷ್ಠರು ಹೇಳಿಲ್ಲ. ಮುಖ್ಯಮಂತ್ರಿ ಪದಕ್ಕೆ ಏರಿಸುವಾಗಲೇ 75 ದಾಟಿತ್ತಲ್ಲಾ ಎಂಬ ಪ್ರಶ್ನೆಗೆ ಏನು ಉತ್ತರ ಹೇಳುವುದು ಎಂಬ ಇಕ್ಕಟ್ಟು ಅವರದ್ದಿರಬಹುದು. ಸಿಎಂ ಪುತ್ರ ವಿಜಯೇಂದ್ರ ಎಲ್ಲದರಲ್ಲೂ ತಲೆ ಹಾಕುತ್ತಿದ್ದರು ಮತ್ತು ಫಲವತ್ತಾದ ಖಾತೆಗಳನ್ನು ನೇರವಾಗಿ ಅಥವಾ ಡಮ್ಮಿ ಮಂತ್ರಿಗಳಿಂದ ನಿಭಾಯಿಸುತ್ತಿದ್ದರು ಎಂಬುದೇ ಕಾರಣವಾಗಿದ್ದರೆ, ಈಗಲೂ ಅವೇ ಇಬ್ಬರು ಡಮ್ಮಿ ಮಂತ್ರಿಗಳಿಗೆ ಭಾರೀ ಖಾತೆಗಳನ್ನು ನೀಡಲಾಗಿದೆ. ಅಂದರೆ ಈಗಲೂ ಈ ಖಾತೆಗಳಲ್ಲಿ ವಿಜಯೇಂದ್ರ ಕೈ ಹಾಕುತ್ತಾರೆ ಮತ್ತು ಆ ಮೂಲಕ ರಾಜ್ಯದ ಯೋಜನಾ ವೆಚ್ಚದ ಕಾಲುಭಾಗ ಅವರ ಕೈಯ್ಯಲ್ಲೇ ಇದ್ದಂತಾಗುತ್ತದೆ. ಭ್ರಷ್ಟ ಆದಾಯ ತರುವ ಇನ್ನೂ ಕೆಲವು ಖಾತೆಗಳೂ ಎರಡೂ ಕಡೆಗೆ ಹಂಚಿಕೆಯಾಗಿವೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲವಾದರೂ ಈ ಸಂಪುಟ ರಚನೆ ಮತ್ತು ಹೊಸ ಮುಖ್ಯಮಂತ್ರಿಯ ನಡೆಗಳ ಬಿಡಿ ಚಿತ್ರಗಳು ಒಟ್ಟು ಸೇರಿದರೆ ಪೂರ್ಣ ಚಿತ್ರಣ ಸಿಗುವ ಸಾಧ್ಯತೆಯಿದೆ.

ಫಲವತ್ತಾದ ಖಾತೆಗಳು

ಈ ಸದ್ಯ ಬೃಹತ್ ನೀರಾವರಿ, ಲೋಕೋಪಯೋಗಿ, ಇಂಧನ ಮತ್ತು ಬೆಂಗಳೂರು ಅಭಿವೃದ್ಧಿಗಳು ಒಟ್ಟು ಯೋಜನಾ ವೆಚ್ಚದ ಅರ್ಧಕ್ಕೂ ಹೆಚ್ಚು ಪಾಲನ್ನು ಕಬಳಿಸುವ ಫಲವತ್ತಾದ ಖಾತೆಗಳಾಗಿವೆ. ಕಾಮಗಾರಿ ಅಥವಾ ಖರೀದಿ ಇರುವ ಈ ಇಲಾಖೆಗಳನ್ನು ಅತ್ಯಂತ ಪ್ರಭಾವಿಗಳೇ ಹಿಡಿಯುತ್ತಾರೆ. ಬೆಂಗಳೂರು ಅಭಿವೃದ್ಧಿ ಸಿಎಂ ಬೊಮ್ಮಾಯಿಯವರ ಕೈಯ್ಯಲ್ಲೇ ಇದ್ದರೆ, ಇಂಧನವನ್ನು ಹೈಕಮ್ಯಾಂಡ್ ಕ್ಯಾಂಡಿಡೇಟಾದ ಸುನಿಲ್‌ಕುಮಾರ್ ಕೈಯ್ಯಲ್ಲಿ ಕೊಟ್ಟಿದ್ದಾರೆ. ಇನ್ನೆರಡು ಅಷ್ಟು ಪ್ರಭಾವಿಗಳಲ್ಲದ ಆದರೆ ಯಡಿಯೂರಪ್ಪ ನಿಷ್ಠರಾದ ಗೋವಿಂದ ಕಾರಜೋಳ ಮತ್ತು ಸಿ.ಸಿ.ಪಾಟೀಲರಿಗೆ ವಹಿಸಲಾಗಿದೆ. ಅಲ್ಲಿಗೆ ಎರಡೂ ಬಣಗಳಿಗೂ ಮೇಯಲು ಸಮಾನ ಅವಕಾಶ ಕಲ್ಪಿಸಿದಂತಾಗಿದೆ.

ನೇರವಾಗಿ ಬಜೆಟ್‌ನಿಂದ ದೋಚದಿದ್ದರೂ, ಬೇರೆ ಆದಾಯ ಇರುವುದು ಕಂದಾಯ ಮತ್ತು ಬೃಹತ್ ಕೈಗಾರಿಕೆಗಳಲ್ಲಿ. ಇವುಗಳಲ್ಲಿ ಒಂದನ್ನು ಯಡಿಯೂರಪ್ಪ ನಿಷ್ಠ ಅಶೋಕರಿಗೂ, ಇನ್ನೊಂದು ಬಹುತೇಕ ಹೈಕಮಾಂಡ್ ನಿಷ್ಠ ನಿರಾಣಿಯವರಿಗೂ ನೀಡಲಾಗಿದೆ. ಇದರ ಅರ್ಥವನ್ನು ಅವರವರಿಗೆ ಅನಿಸಿದ ಹಾಗೆ ಮಾಡಿಕೊಳ್ಳಬಹುದು.

ಯಾಕಾಗಿ ಸವದಿ ಡಿಸಿಎಂ ಆಗಿದ್ದರು ಎಂಬ ಉಳಿದುಕೊಂಡ ಪ್ರಶ್ನೆ

ಯಡಿಯೂರಪ್ಪನವರಿಗೆ ತಿಂಗಳುಗಟ್ಟಲೆ ಕಾಡಿ ಸಂಪುಟ ರಚನೆಗೆ ಅಸ್ತು ಎಂದ ಹೈಕಮಾಂಡ್ ಯಾರೂ ನಿರೀಕ್ಷಿಸಿರದ ಮೂವರು ಡಿಸಿಎಂಗಳನ್ನೂ ದಯಪಾಲಿಸಿತ್ತು. ಅವರಲ್ಲೊಬ್ಬರು ಮುಖ್ಯಮಂತ್ರಿಯ ಜಾತಿಗೇ ಸೇರಿದ ಲಕ್ಷ್ಮಣ ಸವದಿ, ವಿಧಾನಸಭೆಯಲ್ಲಿ ಸೋತಿದ್ದ ಅಭ್ಯರ್ಥಿ. ಈ ಮಧ್ಯೆ ಅವರನ್ನು ಎಂಎಲ್‌ಸಿಯನ್ನಾಗಿಯೂ ಮಾಡಲಾಗಿತ್ತು. ಈಗ ಅವರು ಇದ್ದಕ್ಕಿದ್ದಂತೆ ಸಚಿವ ಸ್ಥಾನಕ್ಕೂ ಬಂದಿಲ್ಲ. ಇನ್ನಿಬ್ಬರು ಡಿಸಿಎಂಗಳು ಮಂತ್ರಿಗಳಾಗಿ ಮುಂದುವರೆದಿದ್ದಾರೆ. ಹಾಗಾದರೆ ಸವದಿಯಲ್ಲಿ ಏನು ಕಂಡು ಡಿಸಿಎಂ ಮಾಡಿದ್ದಿರಿ? ಏನು ಕಾಣದೇ ಕಿತ್ತು ಹಾಕಿದಿರಿ? ಇದಕ್ಕೆ ಉತ್ತರವನ್ನು ಯಾರು ಬಲ್ಲರು?

PC: Mangalorean.com

ಪರೀಕ್ಷೆಯಲ್ಲಿ ಫೇಲಾದದ್ದು ಪರೀಕ್ಷಾ ಸಚಿವರು, ಮತ್ತೆ ಬಂದವರೂ ಅಯ್ನೋರು

ಚಾಮರಾಜನಗರ ಜಿಲ್ಲೆಯಲ್ಲಾದ ಆಕ್ಸಿಜನ್ ಅವಘಡದ ಕಾರಣಕ್ಕೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಂತ್ರಿ ಸ್ಥಾನ ಕಳೆದುಕೊಂಡರು ಎಂದರೆ ಯಾರೂ ನಂಬುವುದಿಲ್ಲ. ಕೋವಿಡ್ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಖಾತರಿ ಮಾಡುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದಕ್ಕಿಂತ ಪರೀಕ್ಷೆ ಖಾತರಿ ಮಾಡುವುದಕ್ಕೆ ಹೆಚ್ಚು ಗಮನ ಹರಿಸಿದ್ದು ಅವರ ಖ್ಯಾತಿ. ಅದನ್ನು ಬಿಟ್ಟರೆ ಅವರ ಅಪಾರ ಸಾಧನೆಯೇನೂ ಈ ಸಾರಿ ಕಣ್ಣಿಗೆ ಬಿದ್ದಿಲ್ಲ. ಆದರೆ ಗಮನ ಹರಿಸಬೇಕಾದ ಸಂಗತಿಯೇನೆಂದರೆ, ಬಿಜೆಪಿ ಸರ್ಕಾರದಲ್ಲಿ (ಯಡಿಯೂರಪ್ಪನವರ ಮೊದಲ ಇನ್ನಿಂಗ್ಸ್‌ನಿಂದ ಆರಂಭಿಸಿ ಇಲ್ಲಿಯವರೆಗೆ) ಪ್ರಾಥಮಿಕ ಶಿಕ್ಷಣ ಖಾತೆ ಬ್ರಾಹ್ಮಣರಿಗೆ ಮಾತ್ರ. ಸುರೇಶ್ ಕುಮಾರ್ ಜಾಗಕ್ಕೆ ಬಂದವರು ತಿಪಟೂರಿನ ಬ್ರಾಹ್ಮಣ ಶಾಸಕ ಬಿ.ಸಿ.ನಾಗೇಶ್.

ಲಿಂಬಾವಳಿಯೇಕೆ ಅನರ್ಹ?

ಇನ್ನೂ ಖಾಲಿ ಉಳಿದಿರುವ (ಖಾಲಿಯಂತೇನೂ ಇಲ್ಲ; ಆದರೆ ಸಚಿವರಾಗಬಹುದಾದ ಗರಿಷ್ಠ ಸಂಖ್ಯೆಯ ಸ್ಥಾನಗಳು ಇನ್ನೂ ತುಂಬಿಲ್ಲ) ಸ್ಥಾನಕ್ಕೆ ಯಾರು ಬರುತ್ತಾರೆ ಎಂದು ಯಾರೂ ಲೆಕ್ಕ ಹಾಕಿಟ್ಟಿಲ್ಲವಾದರೂ, ಈ ಸಾರಿಯಂತೂ ಅರವಿಂದ ಲಿಂಬಾವಳಿ ಮಂತ್ರಿಯಲ್ಲ. ಯಡಿಯೂರಪ್ಪ ಮೊದಲ ಇನ್ನಿಂಗ್ಸ್‌ನಲ್ಲಿ ಬೋವಿ ಜನಾಂಗಕ್ಕೆ ಸೇರಿದ ಲಿಂಬಾವಳಿಯೂ ಸೇರಿದಂತೆ ಈ ಹಿಂದೆ ಮೂವರು ಅದೇ ಸಮುದಾಯಕ್ಕೆ ಸೇರಿದ ಮಂತ್ರಿಗಳಿದ್ದರು. ಮಾದಿಗ ಸಮುದಾಯವನ್ನು ತನ್ನ ಮತಬ್ಯಾಂಕಿನೊಳಕ್ಕೆ ಸೇರಿಸಿಕೊಳ್ಳಲು ಬೇಕಾದ ಪ್ರಯತ್ನ ಶುರು ಮಾಡಿದ್ದರೂ, ಬಿಜೆಪಿಯ ಕಡೆಯಿಂದ ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಅಸ್ಪೃಶ್ಯ ದಲಿತರಿಗೇ ಹೆಚ್ಚು ಟಿಕೆಟ್ ಕೊಡಲಾಗಿತ್ತು. ಅದರ ಜೊತೆಗೆ ಪಕ್ಷೇತರನಾಗಿ ಒಳಕ್ಕೆ ಬಂದಿದ್ದ ಶಿವರಾಜ ತಂಗಡಿಯನ್ನೂ ಮಂತ್ರಿಯನ್ನಾಗಿಸಲು ಆ ರೀತಿ ಮಾಡಲಾಗಿತ್ತು. ಆದರೆ ಈ ಸಾರಿ ಲಂಬಾಣಿ ಸಮುದಾಯಕ್ಕೆ ಸೇರಿದ್ದ ಪ್ರಭು ಚೌಹಾಣ್ ಬಿಟ್ಟರೆ ಉಳಿದವರಿಗೆ ಅವಕಾಶವಿಲ್ಲವಾಗಿದೆ. ತನ್ನ ಕ್ಷೇತ್ರದ ಜೊತೆಗೆ ತನ್ನ ಭಾವನೆಂಟ ರಘುವಿನ ಕ್ಷೇತ್ರಕ್ಕಷ್ಟೇ ಪ್ರಭಾವ ಹೊಂದಿರುವ ಲಿಂಬಾವಳಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲವೆಂದು ಬಿಜೆಪಿ ಭಾವಿಸಿದಂತಿದೆ.

ಪರಿಶಿಷ್ಟ ಪಂಗಡಕ್ಕೊಂದು ಖಾತೆ

ಮುಖ್ಯಮಂತ್ರಿಯಾದ ನಂತರ ಖಾತೆ ಹಂಚುವ ಮೊದಲೇ ಹೊಸ ಖಾತೆಯನ್ನೂ ಬೊಮ್ಮಾಯಿ ಶುರು ಮಾಡಿದರು. ಅದೇ ಪರಿಶಿಷ್ಟ ಪಂಗಡ ಖಾತೆ. ಕರ್ನಾಟಕದ ಆದಿವಾಸಿ ಗಿರಿಜನರು ಎಸ್‌ಟಿ (ಶೆಡ್ಯೂಲ್ಡ್ ಟ್ರೈಬ್) ಕೋಟಾದಲ್ಲಿ ಪಡೆದುಕೊಂಡಿದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಅನುಕೂಲ ಪಡೆದುಕೊಂಡಿದ್ದು ಅವರಿಗಿಂತ ಎಲ್ಲ ರೀತಿಯಲ್ಲೂ ಬಲಾಢ್ಯರಾದ ನಾಯಕ/ವಾಲ್ಮೀಕಿ ಸಮುದಾಯ. ಮಧ್ಯ ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಈ ಸಮುದಾಯವನ್ನು ಶ್ರೀರಾಮುಲು ಮೂಲಕ ಗೆದ್ದುಕೊಳ್ಳುವಲ್ಲಿ ಬಿಜೆಪಿಯು ಸಾಕಷ್ಟು ಯಶಸ್ವಿಯಾಗಿತ್ತು. ಅದಕ್ಕೆ ತಕ್ಕುನಾಗಿ ಶ್ರೀರಾಮುಲುರನ್ನು ಡಿಸಿಎಂ ಆಗಿ ಮಾಡುವುದಾಗಿ ಹೇಳುತ್ತಲೇ ಬರಲಾಗಿತ್ತು. ದೆಹಲಿಯಲ್ಲೂ ಅಧಿಕಾರದಲ್ಲಿಲ್ಲದೇ, ಇಲ್ಲೂ ಪೂರ್ಣ ಅಧಿಕಾರವಿಲ್ಲದೇ ’ಸಂಪನ್ಮೂಲ ಕೊರತೆಯಿಂದ’ ’ಕಷ್ಟ ಪಡಬೇಕಾಗಿ’ ಬಂದಿದ್ದ ಬಿಜೆಪಿಯು ಹಿಂದೆ ರೆಡ್ಡಿ ಹಾಗೂ ರಾಮುಲುಗಳ ಅಗಾಧ ಗಣಿ ಲೂಟಿ ಹಣವನ್ನು ಆಧರಿಸಬೇಕಾಗಿ ಬಂದಿತ್ತು. ಅವರೇ ಲೋಡುಗಟ್ಟಲೇ ಶಾಸಕರನ್ನು ಆಪರೇಷನ್ ಮಾಡಿ ಎತ್ತಿಕೊಂಡು ಬಂದು ಬಿಜೆಪಿ ಸರ್ಕಾರವನ್ನು ಗಟ್ಟಿಗೊಳಿಸಿದ್ದರು. ಈ ಸಾರಿ ಅಂತಹ ಅಗತ್ಯವೇನೂ ಇರದಂತೆ ’ಗಟ್ಟಿಕುಳ’ಗಳಾಗಿ ಹಲವರು ಸಮೃದ್ಧರಾಗಿದ್ದಾರೆ. ಹೀಗಾಗಿ ರಾಮುಲುಗೆ ಡಿಸಿಎಂ ಇನ್ನು ಕನಸೇ ಸರಿ.

ಆದರೆ ನಾಯಕ/ವಾಲ್ಮೀಕಿ ಸಮುದಾಯವನ್ನು ಹಾಗೇ ಬಿಡಲಾದೀತೇ? ಹಾಗಾಗಿ ಪ್ರತ್ಯೇಕ ಖಾತೆ. ಈ ಹಿಂದೆ ಕೊಟ್ಟಿದ್ದಕ್ಕಿಂತ ಅನುದಾನ ಹೆಚ್ಚು ಕೊಡದಿದ್ದರೂ, ನಮಗೊಂದು ಖಾತೆ ಕೊಟ್ಟರು ಎಂದಾದರೂ ಖುಷಿಗೊಳ್ಳುವ ಐಡೆಂಟಿಟಿ ರಾಜಕಾರಣಕ್ಕೆ ಇದರಿಂದ ಹೆಚ್ಚಿನ ಉಮೇದು ಸಿಗುತ್ತದೆ.

ಸರಳ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಮೊದಲ ಆದ್ಯತೆ ಏನಾಗಿತ್ತು?

ಸರಳರೆಂದು ಕರೆಸಿಕೊಳ್ಳುವುದಷ್ಟೇ ಅಲ್ಲದೇ, ನಿಜಕ್ಕೂ ಸರಳರಾಗಿರುವ ಕೋಟಾ ಶ್ರೀನಿವಾಸ ಪೂಜಾರಿಯವರದ್ದು ಬಿಲ್ಲವ ಸಮುದಾಯ. ಹಿಂದಿನ ಸಂಪುಟದಲ್ಲಿ ಅವರದ್ದು ’ದೇವರ ಖಾತೆ’ – ಮುಜರಾಯಿ. ಈ ಸಾರಿ ಬಡ್ತಿ ಸಿಕ್ಕು ಸಮಾಜ ಕಲ್ಯಾಣ ಸಚಿವರಾಗಿದ್ದಾರೆ. ಅವರು ಸಚಿವರಾಗುವ ಹೊತ್ತಿಗೆ, ಅದರಿಂದ ಪರಿಶಿಷ್ಟ ಪಂಗಡವನ್ನು ಬೇರೆಯಾಗಿಸಲಾಗಿದೆ. ಸ್ವತಃ ದಲಿತರಲ್ಲದ ಪೂಜಾರಿಯವರು, ಖಾತೆ ಪಡೆದ ನಂತರ ಮೊದಲು ಆಯ್ದುಕೊಂಡ ಮಹತ್ವ ಕೆಲಸವೇನು ಗೊತ್ತೇ? ಹೊಸ ಗೃಹ ಸಚಿವರನ್ನು ಭೇಟಿಯಾಗಿ ’ಹಿಂದೂ ಕಾರ್ಯಕರ್ತರ ಮೇಲೆ’ ಹಾಕಲಾದ ಕೇಸುಗಳನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದು!

ಇನ್ನು ಅವರ ಎರಡನೆಯ ಆದ್ಯತೆ ಶ್ಲಾಘನೀಯವೇ. ಅದು ಎಸ್‌ಸಿ ಸಮುದಾಯಕ್ಕೆ ನೀಡುವ ಮನೆ ಗ್ರಾಂಟ್‌ಅನ್ನು ಐದು ಲಕ್ಷಕ್ಕೇರಿಸುವ ಆಲೋಚನೆ.

ಮುಂದಿನ ಆದ್ಯತೆಗಳು ಸ್ಪಷ್ಟವಾಗುತ್ತಿವೆಯೇ?

ದೆಹಲಿಯ ಜಂತರ್ ಮಂತರ್‌ನಲ್ಲಿ ಕೋಮು ಪ್ರಚೋದಕ ಘೋಷಣೆ ಕೂಗಿದ್ದು ಸುದ್ದಿಯಾಗುತ್ತಿರುವ ಹೊತ್ತಿನಲ್ಲೇ ಕರ್ನಾಟಕದಲ್ಲೂ ಮಂಗಳೂರಿನ ಭಜರಂಗದಳದ ಶರಣ್ ಪಂಪ್‌ವೆಲ್ ಸಹಾ ಅಂತಹುದೇ ಮಾತನ್ನಾಡಿದ್ದಾರೆ. ಸಚಿವ ಈಶ್ವರಪ್ಪ ಬಾಯಿಗೆ ಬಂದಂತೆ ಅಸಭ್ಯವಾಗಿ ಮಾತನಾಡಿದ್ದಾರೆ. ಸ್ವತಃ ಮುಖ್ಯಮಂತ್ರಿ ತಾನು ಸಾಂವಿಧಾನಿಕ ಪೀಠದಲ್ಲಿ ಕೂತಿದ್ದೇನೆಂಬುದನ್ನು ಮರೆತು ಆರೆಸ್ಸೆಸ್ ಕಚೇರಿಗೆ ಹೋಗಿ ಬರುವುದು, ಪಕ್ಷದ ಕಾರ್ಯಕ್ರಮಗಳಲ್ಲಿ ಇತರ ಪಕ್ಷಗಳಿಗೆ ಹೋಲಿಸಿ ಬಹಿರಂಗವಾಗಿ ಟೀಕಿಸುವುದನ್ನು ಮಾಡುತ್ತಿದ್ದಾರೆ.

ಆರ್ಥಿಕ ಬಿಕ್ಕಟ್ಟು, ಅಭಿವೃದ್ಧಿ ಸೂಚ್ಯಂಕಗಳೆಲ್ಲದರಲ್ಲೂ ಹಿಂದೆ ಬಿದ್ದಿರುವ ದೇಶದಲ್ಲಿ ಮತ್ತೆ ಅಧಿಕಾರ ಪಡೆದುಕೊಳ್ಳಲು ಬೇಕಾದದ್ದು ಸಾಮಾಜಿಕ ಬಿಕ್ಕಟ್ಟು. ಅದಕ್ಕೆ ಬೇಕಾದ ಕಾರ್ಯಸೂಚಿ ಇದ್ದಕ್ಕಿದ್ದಂತೆ ಚುರುಕು ಪಡೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಬರುವ ಹಾಗೆ ಮೇಲಿನ ನಡೆಗಳಿವೆ. ಕೆಲವು ಪ್ರಗತಿಪರರು ಆಶಿಸಿದ ಹಾಗೆ ಅಷ್ಟು ಕೋಮುವಾದಿಯಲ್ಲದಂತೆ ನಡೆದುಕೊಳ್ಳುವ ಯಾವ ಭರವಸೆಯನ್ನೂ ಹೊಸ ಮುಖ್ಯಮಂತ್ರಿ ಬೊಮ್ಮಾಯಿಯವರು ಇನ್ನೂ ಮೂಡಿಸಿಲ್ಲ. ಯಾವುದಕ್ಕೂ ಮುಂದಿನ ದಿನಗಳು ಇದನ್ನು ಸ್ಪಷ್ಟಪಡಿಸಲಿವೆ.

ಒಟ್ಟಾರೆಯಾಗಿ ಕರ್ನಾಟಕವನ್ನು, ದೇಶದ ಆರ್ಥಿಕ ಬಿಕ್ಕಟ್ಟನ್ನು, ಯಡಿಯೂರಪ್ಪನವರನ್ನು ನಿಭಾಯಿಸುವುದು ಯಾವುದರಲ್ಲೂ ಖಚಿತ ನಡೆಗಳು ಸಾಧ್ಯವಾಗದ ಸರ್ಕಾರದ ಬಲಬಿಡಂಗಿ ನಿರ್ಧಾರಗಳು ಎಲ್ಲದರಲ್ಲೂ ಎದ್ದು ಕಾಣುತ್ತಿವೆ. ಮೇಲಿನ ಬಿಡಿಚಿತ್ರಗಳೂ ಅವನ್ನೇ ಸಾಬೀತುಪಡಿಸುತ್ತಿವೆ.


ಇದನ್ನೂ ಓದಿ: ಹೊಸ ಮಂತ್ರಿಮಂಡಲ ಹಳೆಯ ಅಸಮತೋಲನ: ಎ ನಾರಾಯಣ

ಇದನ್ನೂ ಓದಿ: ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ: ಕಾಂಗ್ರೆಸ್ ಆಕ್ರೋಶ, ಕ್ಷಮೆ ಕೇಳಿದ ಈಶ್ವರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...