ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು ‘ಕಿಂಗ್ ಮೇಕರ್’ ಆಗಿ ಹೊರಹೊಮ್ಮಿದೆ.
ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ 41 ಶಾಸಕರ ಬೆಂಬಲ ಅಗತ್ಯವಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್ಡಿಎ ಒಕ್ಕೂಟವು 202 ಶಾಸಕರನ್ನು ಹೊಂದಿದ್ದು, ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು.
ಐದನೇ ಸ್ಥಾನವನ್ನು ಗೆಲ್ಲಲು ಎನ್ಡಿಎಗೆ ಇನ್ನೂ 3 ಶಾಸಕರ ಬೆಂಬಲದ ಕೊರತೆಯಿದೆ. ಮತ್ತೊಂದೆಡೆ, ಆರ್ಜೆಡಿ ನೇತೃತ್ವದ ಮಹಾಘಟಬಂಧನವು ಕೇವಲ 35 ಶಾಸಕರನ್ನು ಹೊಂದಿದ್ದು, ಗೆಲುವಿಗಾಗಿ ಓವೈಸಿ ಪಕ್ಷದ 5 ಶಾಸಕರ ಹಾಗೂ ಒಬ್ಬ ಬಿಎಸ್ಪಿ ಶಾಸಕನ ಬೆಂಬಲವನ್ನು ಅವಲಂಬಿಸಿದೆ.
ಎಐಎಂಐಎಂ ಪಕ್ಷವು ಐದನೇ ಸ್ಥಾನಕ್ಕೆ ತನ್ನದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಇದು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಹಿನ್ನಡೆಯುಂಟುಮಾಡಿದ್ದು, ಎನ್ಡಿಎಗೆ ಲಾಭವಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.
ಎಐಎಂಐಎಂನ 5 ಶಾಸಕರು ಯಾವ ಕಡೆ ವಾಲುತ್ತಾರೋ ಅಥವಾ ಅವರು ಸ್ವತಂತ್ರವಾಗಿ ಸ್ಪರ್ಧಿಸಿದರೆ ಮತಗಳು ಹೇಗೆ ವಿಭಜನೆಯಾಗುತ್ತವೆಯೋ ಎಂಬುದು ಐದನೇ ಸೀಟಿನ ಫಲಿತಾಂಶವನ್ನು ನಿರ್ಧರಿಸಲಿದೆ.
ಸದ್ಯದ ರಾಜಕೀಯ ಬೆಳವಣಿಗೆಯ ಪ್ರಕಾರ, ಎಐಎಂಐಎಂ ಬೆಂಬಲವಿಲ್ಲದೆ ಯಾವುದೇ ಒಕ್ಕೂಟವು ಐದನೇ ಸ್ಥಾನವನ್ನು ಖಚಿತವಾಗಿ ಗೆಲ್ಲಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಏಪ್ರಿಲ್ 9ರಂದು ಬಿಹಾರದ ಐದು ರಾಜ್ಯಸಭಾ ಸದಸ್ಯರಾದ ಜೆಡಿ (ಯು)ನ ಹರಿವಂಶ್ ನಾರಾಯಣ್ ಸಿಂಗ್ ಮತ್ತು ರಾಮ್ ನಾಥ್ ಠಾಕೂರ್, ಆರ್ಜೆಡಿಯ ಪ್ರೇಮ್ ಚಂದ್ ಗುಪ್ತಾ ಮತ್ತು ಅಮರೇಂದ್ರ ಧಾರಿ ಸಿಂಗ್ ಹಾಗೂ ಆರ್ಎಲ್ಎಂನ ಉಪೇಂದ್ರ ಕುಶ್ವಾಹ ಅವರ ಅಧಿಕಾರವಧಿ ಮುಕ್ತಾಯಗೊಳ್ಳಲಿದೆ. ಈ ಪೈಕಿ ಹರಿವಂಶ್ ನಾರಾಯಣ್ ಸಿಂಗ್ ಪ್ರಸ್ತುತ ರಾಜ್ಯಸಭೆಯ ಉಪಾಧ್ಯಕ್ಷರಾಗಿದ್ದಾರೆ. ರಾಮ್ ನಾಥ್ ಠಾಕೂರ್ ಕೇಂದ್ರ ಸಚಿವರಾಗಿದ್ದಾರೆ.


