Homeಮುಖಪುಟರಣವೀರ್ ಅಲ್ಲಾಹಬಾದಿಯಾ ಪ್ರಕರಣ; ಹಾಸ್ಯದ ಹೆಸರಿನಲ್ಲಿ ಘನತೆ ಕುಂದಿಸುವ ಜೋಕುಗಳು

ರಣವೀರ್ ಅಲ್ಲಾಹಬಾದಿಯಾ ಪ್ರಕರಣ; ಹಾಸ್ಯದ ಹೆಸರಿನಲ್ಲಿ ಘನತೆ ಕುಂದಿಸುವ ಜೋಕುಗಳು

- Advertisement -
- Advertisement -

ಕಳೆದ ಕೆಲವು ವಾರಗಳಿಂದ ’ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಎಂಬ ಕಾರ್ಯಕ್ರಮದ ಬಗ್ಗೆ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ ಪಡೆದ ರಣವೀರ್ ಅಲ್ಲಾಹಬಾದಿಯಾ ಎಂಬ ಖ್ಯಾತ ಯೂಟ್ಯೂಬರ್ ಒಬ್ಬ ತೀರಾ ಅಶ್ಲೀಲವಾಗಿ ಈ ಕಾರ್ಯಕ್ರಮದಲ್ಲಿ ಹೇಳಿಕೆಯೊಂದನ್ನು ನೀಡಿರುವ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಪ್ರಮುಖ ಮಾಧ್ಯಮಗಳು ಅದರಲ್ಲೂ ಮಡಿಲು ಮಾಧ್ಯಮಗಳು (ಗೋದಿ ಮೀಡಿಯಾ) ಕೂಡಾ ಈ ಹೇಳಿಕೆಯನ್ನು ತಮ್ಮ ಮೊದಲ ಪ್ರಾಶಸ್ತ್ಯದ ಸುದ್ದಿಯಾಗಿ ಪ್ರಸಾರ ಮಾಡುತ್ತಿವೆ. ಈ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ಕೂಡಾ ಚರ್ಚೆಯಾಗಿದ್ದು, ಸುಮಾರು 30ರಿಂದ 40 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಯಕ್ರಮದ ವಿಡಿಯೋವನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಯಿತು. ಮಹಾರಾಷ್ಟ್ರದ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕೂಡಾ ಹೇಳಿಕೆ ನೀಡಿ ’ಸಭ್ಯತೆ’ಯ ಮಿತಿಯನ್ನು ಮೀರಿದರೆ, ಯಾರಾದರೂ ಸರಿ ಕ್ರಮ ಕೈಗೊಳ್ಳಲಾಗುತ್ತದೆ, ಎಂಬ ಹೇಳಿಕೆ ನೀಡಿದ್ದನ್ನು ನೋಡಿದರೆ- ಮಾಧ್ಯಮಗಳು, ನ್ಯಾಯಾಲಯ, ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ಈ ಪ್ರಕರಣದ ಬಗ್ಗೆ ಯಾವ ಮಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದರ ಚಿತ್ರಣ ನಮಗೆ ದೊರೆಯುತ್ತದೆ.

ಏನಿದು ಇಂಡಿಯಾಸ್ ಗಾಟ್ ಲ್ಯಾಟೆಂಟ್ ವಿವಾದ?

’ಗಾಟ್ ಟ್ಯಾಲೆಂಟ್ ಮತ್ತು ಕಿಲ್ ಟೋನಿ ಎಂಬ ಕಾರ್ಯಕ್ರಮದಿಂದ ಸ್ಫೂರ್ತಿ ಪಡದು ಇಂಡಿಯಾಸ್ ಗಾಟ್ ಲ್ಯಾಟೆಂಟ್ ಎಂಬ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮದ ಸೃಷ್ಟಿಕರ್ತ ಸಮಯ್ ರೈನಾ ಎಂಬ ಖ್ಯಾತ ಸ್ಟಾಂಡ್ ಅಪ್ ಕಮೀಡಿಯನ್. ಕಾರ್ಯಕ್ರಮದಲ್ಲಿ ಸ್ಪರ್ಧಿಗಳು 90 ಸೆಕೆಂಡ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಸ್ಪರ್ಧಿಗಳು ಈ ವೇದಿಕೆಯಲ್ಲಿ ಹಾಡುಗಾರಿಕೆ, ನೃತ್ಯ, ಮ್ಯಾಜಿಕ್ ಮತ್ತು ಹಾಸ್ಯ ಸೇರಿದಂತೆ ವಿವಿಧ ಪ್ರತಿಭಾ ಪ್ರದರ್ಶನ ನೀಡಬಹುದು. ಈ ವೇಳೆ ವೇದಿಕೆಯಲ್ಲಿ ನಾಲ್ಕೈದು ತೀರ್ಪುಗಾರರು ಅವರ ಜೊತೆಗೆ ಸಂವಹನ ನಡೆಸುತ್ತಾರೆ. ನಂತರ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಮುಖ್ಯವಾಗಿ ಈ ಕಾರ್ಯಕ್ರಮದ ಉದ್ದೇಶ ಮನರಂಜನೆಯಾಗಿದೆ. ಗಂಭೀರ ಸ್ಪರ್ಧೆಯ ಬದಲು ವಿನೋದ ಮತ್ತು ಪ್ರೇಕ್ಷಕರನ್ನು ನಗಿಸುವುದರ ಮೇಲೆ ಕೇಂದ್ರೀಕರಿಸಿದ “ಅನಗತ್ಯ ರಿಯಾಲಿಟಿ ಶೋ (unnecessary reality show)”ಅನ್ನು ನಡೆಸುವುದು ಸಮಯ್ ರೈನಾ ಅವರ ಪರಿಕಲ್ಪನೆಯಾಗಿತ್ತು.

ಆದಾಗ್ಯೂ, ಈ ಮನರಂಜನೆ ಕಾರ್ಯಕ್ರಮವು ತನ್ನ ವಿನೋದ ಮತ್ತು ನಗೆಯನ್ನು ಸಮಾಜದ ದುರ್ಬಲ ವ್ಯಕ್ತಿಗಳ ಮೇಲೆ ಅಥವಾ ಮತ್ತೊಬ್ಬರ ದುಃಖ-ನೋವುಗಳನ್ನು ಜೋಕ್‌ಗಳನ್ನಾಗಿಸಿ, ಸ್ಟೀರಿಯೋಟೈಪ್‌ಅನ್ನು ಉತ್ತೇಜಿಸುವ ಅಥವಾ ಅವರನ್ನು ಕೀಳಾಗಿ ಕಾಣುವ ಹಲವು ಮಿತಿಗಳಲ್ಲಿ ಈ ಹಿಂದೆಯೇ ನರಳಿದೆ. ಕಾರ್ಯಕ್ರಮದಲ್ಲಿ ಭಾಗಹಿಸುವ ಸ್ಪರ್ಧಿಗಳಿಂದ ಹಿಡಿದು, ಕಾರ್ಯಕ್ರಮದ ತೀರ್ಪುಗಾರರವರೆಗೆ ಹಾಸ್ಯದ ಸೋಗಿನಲ್ಲಿ ಮಹಿಳೆಯರು ಮತ್ತು ಅಂಗವಿಕಲ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಹಲವು ಬಾರಿ ನೀಡಿದ್ದಾರೆ. ನಿರ್ದಿಷ್ಟ ಘಟನೆಗಳ ಬಗ್ಗೆ ಹೇಳುವುದಾದರೆ, ಸ್ಪರ್ಧಿಯೊಬ್ಬರು ನಟಿ ದೀಪಿಕಾ ಪಡುಕೋಣೆ ಅವರ ಮಾನಸಿಕ ಆರೋಗ್ಯದ ಹೋರಾಟಗಳನ್ನು ಅಪಹಾಸ್ಯ ಮಾಡಿದ್ದು ಈ ಹಿಂದೆಯೇ ವಿವಾದವಾಗಿತ್ತು. ಜೊತೆಗೆ ಕೋಲ್ಕತ್ತಾ ವೈದ್ಯೆಯ ಅತ್ಯಾಚಾರದ ಪ್ರಕರಣದ ಬಗ್ಗೆ ಬಂಗಾಳಿಗಳನ್ನು ಅಪಹಾಸ್ಯ ಮಾಡಲಾಗಿತ್ತು. ಅದರ ಮುಂದುವರಿಕೆಯಾಗಿಯೇ, ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಂದ ಉತ್ತಮ ಯೂಟ್ಯೂಬರ್ ಪ್ರಶಸ್ತಿ ಪಡೆದ ರಣವೀರ್ ಅಲ್ಲಹಾಬಾದಿಯ ತೀರ್ಪುಗಾರರಾಗಿ ಭಾಗವಹಿಸಿ, ’ತಂದೆ – ತಾಯಿ ಲೈಂಗಿಕ ಚುಟುವಟಿಕೆ ನಡೆಸುವಾಗ ನೀವೂ ಮಧ್ಯ ಪ್ರವೇಶಿಸುತ್ತೀರ’ ಎಂಬ ಮಾತುಗಳನ್ನಾಡಿದ್ದರು.

ಸಮಯ್ ರೈನಾ

ಅವರ ಈ ಹೇಳಿಕೆಯ ನಂತರ ಕಾರ್ಯಕ್ರಮದ ಈ ಹಿಂದಿನ ಹಲವು ಅಶ್ಲೀಲ ಹೇಳಿಕೆಗಳ ವಿಡಿಯೋಗಳು ವೈರಲ್ ಆದವು. ಪ್ರಸ್ತುತ ಹೇಳಿಕೆಯ ಬಗ್ಗೆ ರಣವೀರ್ ಅಲ್ಲಾಹಬಾದಿಯ ವಿರುದ್ಧ, ಮಹಾರಾಷ್ಟ್ರದ ಥಾನೆಯಲ್ಲಿ ಮತ್ತು ಅಸ್ಸಾಂನ ಗುವಾಹಟಿಯಲ್ಲಿ ದೂರು ದಾಖಲಾಗಿದೆ. ಅವರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರ ತೀರ್ಪುಗಾರರು ಮತ್ತು ಕಾರ್ಯಕ್ರಮದ ಮೂಲ ರುವಾರಿಯಾದ ಸಮಯ್ ರೈನಾ ವಿರುದ್ಧ ಕೂಡಾ ದೂರು ದಾಖಲಾಗಿವೆ. ರಣವೀರ್ ನಿರೀಕ್ಷಣಾ ಜಾಮೀನು ಪ್ರಕರಣದ ವಿಚಾರಣೆ ವೇಳೆ ಅಲ್ಲಾಹಬಾದಿಯಾ ಅವರ ಹೇಳಿಕೆ ’ವಿಕೃತ’ ಎಂದು ಟೀಕಿಸಿದ್ದ ನ್ಯಾಯಾಲಯ, ಆತ ನುಡಿದ ಮಾತುಗಳು “ಕೊಳಕು ಮನಸ್ಸನ್ನು” ಪ್ರತಿಬಿಂಬಿಸುತ್ತವೆ ಎಂದು ಹೇಳಿದೆ. ಅಲ್ಲಾಹಬಾದಿಯಾ ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದ್ದು, ಅವರ ಪಾಸ್‌ಪೋರ್ಟ್‌ಅನ್ನು ಪೊಲೀಸರ ವಶಕ್ಕೆ ನೀಡುವುದು ಮತ್ತು ಮುಂದಿನ ಸೂಚನೆ ಬರುವವರೆಗೆ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ತಡೆಯುವುದು ಮುಂತಾದ ಷರತ್ತುಗಳನ್ನು ವಿಧಿಸಿದೆ.

ಜೋಕ್‌ಗಳ ಹೆಸರಿನಲ್ಲಿ ಜನಾಂಗೀಯತೆ, ಸ್ತ್ರೀ ದ್ವೇಷ ಮತ್ತು ಬಾಡಿ ಶೇಮಿಂಗ್

ಪ್ರಸ್ತುತ ವಿವಾದದ ಸುಳಿಯಲ್ಲಿ ಸಿಲುಕಿರುವ ಸಮಯ್ ರೈನ ಯೂಟ್ಯೂಬ್‌ನನಲ್ಲಿ 73 ಲಕ್ಷ ಮತ್ತು ಇನ್ಸ್‌ಟಾಗ್ರಾಮ್‌ನಲ್ಲಿ 60 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ರಣವೀರ್ ಅಲ್ಲಾಹಬಾದಿಯಾ ಕೂಡಾ ಯೂಟ್ಯೂಬ್‌ನಲ್ಲಿ ಸುಮಾರು 70 ಲಕ್ಷ ಸಬ್‌ಸ್ಕ್ರೈಬರ್ಸ್‌ಅನ್ನು ಹೊಂದಿದ್ದಾರೆ. ಇಷ್ಟು ದೊಡ್ಡ ಜನಸಮೂಹವನ್ನು ತಲುಪುವ ಈ ಜನರು ಮಹಿಳಾ ವಿರೋಧಿ, ಬಾಡಿ ಶೇಮಿಂಗ್ ಮಾತುಗಳನ್ನು ಸಾಮಾನ್ಯ ಎಂಬಂತೆ ಸಾರ್ವಜನಿಕವಾಗಿ ನುಡಿಯುತ್ತಾರೆ. ಕಾರ್ಯಕ್ರಮದ ಉದ್ದಕ್ಕೂ ಬೆಹನ್ ಚೂ*, ಬೆಹನ್ ಕಾ ** ಎಂಬ ಅಶ್ಲೀಲ ಬೈಗುಳವನ್ನು ಹೇಳುತ್ತಲೇ ಇರುತ್ತಾರೆ. ಇವೆಲ್ಲವೂ ಒಂದು ಪಕ್ಷ ಯಾರನ್ನೂ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿಲ್ಲದಿದ್ದರೂ, ಆ ಬೈಗುಳಗಳು ಐತಿಹಾಸಿಕವಾಗಿ ಮಹಿಳಾ ವಿರೋಧಿಯಾದವು ಮತ್ತು ಅಂತಹ ಭಾವನೆಗಳನ್ನು ಜನಸಾಮಾನ್ಯರಲ್ಲಿ ಉತ್ತೇಜಿಸಬಲ್ಲವು ಎಂಬ ಸಾಮಾನ್ಯ ಪ್ರಜ್ಞೆ ಒಬ್ಬ ಕಲಾವಿದನಿಗೆ ಇರಬೇಕಾದ್ದು ಮುಖ್ಯ. ಇವೆಲ್ಲವೂ ಸಾಮಾನ್ಯ ಎಂಬಂತೆ ಇವರು ಬಳಸುವಾಗ ವೇದಿಕೆ ಮುಂದಿನ ವೀಕ್ಷಕರು ಕೂಡಾ ಅಟ್ಟಹಾಸದಿಂದ ನಗುತ್ತಾರೆ. ಇವರೆಲ್ಲರ ಪಾಲಿಗೆ ಇವೆಲ್ಲವೂ ಜೋಕುಗಳಷ್ಟೆ! ದೊಡ್ಡ ಪ್ರೇಕ್ಷಕ ಸಮೂಹದ ಮೇಲೆ ಪ್ರಭಾವ ಬೀರುವ ಇಂತಹ ಸಾರ್ವಜನಿಕ ವ್ಯಕ್ತಿಗಳ ಕಾರ್ಯಕ್ರಮ ಮತ್ತು ಮಾತುಗಳು ತಮ್ಮ ರಾಜಕೀಯ ಅಜೆಂಡಾಗಳಿಗೆ ಸಹಕರಿಸುತ್ತವೆ ಎಂಬ ಕಾರಣಕ್ಕಾಗಿ ಪ್ರಗತಿ ವಿರೋಧಿ ರಾಜಕೀಯ ಸಂಘಟನೆಗಳು ಅವರನ್ನು ಬೆಳೆಸುತ್ತಲೇ ಬಂದಿವೆ.

ಆದಾಗ್ಯೂ, ಅವರೇ ಬೆಳೆಸಿದ ಈ ಪ್ರತಿಭೆಯನ್ನು ಇದೀಗ ಸಡನ್ ಆಗಿ ಯಾಕೆ ವಿರೋಧ ಮಾಡಲಾಗುತ್ತದೆ ಎಂಬುದನ್ನು ಹುಡುಕಿಕೊಂಡು ಹೋದರೆ, ನಾವು ತಲುಪುವುದು ಕುಂಭಮೇಳದ ಕಡೆಗೆ. ಕುಂಭಮೇಳದಲ್ಲಿ ನಡೆದ ಸಾಲುಸಾಲು ವಿಫಲತೆಗಳು, ಸಾವುನೋವುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ರಣವೀರ್ ಅಲ್ಲಾಹಬಾದಿಯಾ ಅವರನ್ನು ಗುರಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈಗಾಗಲೆ ತಿಳಿಸಿದಂತೆ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಈ ಹಿಂದಿನಿಂದಲೂ ಕೂಡಾ ಬಾಡಿ ಶೇಮಿಂಗ್, ಸ್ಟ್ರೀ ದ್ವೇಷವನ್ನು ಸಂಭ್ರಮಿಸುವ ಮಾತುಗಳು ಹೇರಳವಾಗಿದ್ದವು. ಆದರೆ ಈ ಬಾರಿ ಪ್ರಭುತ್ವಕ್ಕೆ ತನ್ನ ವೈಫಲ್ಯಗಳನ್ನು ಅಡಗಿಸಿಕೊಳ್ಳಲು ಒಂದು ಜಾಗ ಬೇಕಿತ್ತು. ಅದಕ್ಕಾಗಿ ಈಗ ’ಲ್ಯಾಟೆಂಟನ್ನು ಗುರಿಯಾಗಿಸಲಾಗುತ್ತಿದೆ. ಮಡಿಲು ಮಾಧ್ಯಮಗಳು ತಾನು ತೀರಾ ಸಭ್ಯಸ್ಥನ ರೀತಿಯಲ್ಲಿ ನಡೆದುಕೊಳ್ಳುತ್ತಾ, ರಿಯಾಲಿಟಿ ಷೋಗಳು ಹೇಗೆ ನಡೆಯಬೇಕು ಎಂದು ಪಾಠ ಮಾಡುತ್ತಿವೆ.

ವಾಸ್ತವದಲ್ಲಿ ರಣವೀರ್ ಅಲ್ಲಾಹಬಾದಿಯಾಗೆ ಪಾಠ ಮಾಡುವ ಎಲ್ಲಾ ಮಾಧ್ಯಮಗಳು ಈ ಹಿಂದಿನಿಂದಲೂ ಅಸೂಕ್ಷ್ಮತೆಗಳನ್ನು ಸಾಮಾನ್ಯೀಕರಿಸಿದವುಗಳೇ ಆಗಿವೆ. ಮಹಿಳೆಯರನ್ನು, ಮುಸ್ಲಿಮರನ್ನು, ದಲಿತರನ್ನು ನಿಂದಿಸುವುದು, ಅವರನ್ನು ರಾಕ್ಷಸರಂತೆ ಬಿಂಬಿಸುವುದು, ಅವರ ಮೇಲೆ ’ಹಾಸ್ಯ ಚಟಾಕಿ’ಗಳನ್ನು ತೇಲಿ ಬಿಡುವುದನ್ನು ಮಾಡಿಕೊಂಡೇ ಬಂದಿದೆ. ಮಹಿಳೆಯರ ತೀರಾ ವೈಯಕ್ತಿಕ ವಿಚಾರಗಳನ್ನು, ಅವರ ದೇಹದ ಬಗ್ಗೆ ಅಪಹಾಸ್ಯ ಮಾಡಿಕೊಂಡು, ಅವರ ಹಾವಭಾವಗಳ ಬಗ್ಗೆ ಅವಹೇಳನ ಮಾಡಿಕೊಂಡು ಜೋಕುಗಳನ್ನು ಹರಡಿರುವುದು ಇವೇ ಮಾಧ್ಯಮಗಳಾಗಿವೆ. ಇಂತಹವೆಲ್ಲದವುಗಳನ್ನು ಮಾಡಿರುವ ಮಾಧ್ಯಮಗಳು ಈಗ ಬೋಧನೆಗಿಳಿದಿರುವುದು ವಿಪರ್ಯಾಸ! ಬಿಗ್‌ಬಾಸ್ ಕಾರ್ಯಕ್ರಮಗಳಂತಹ ಕೆಟ್ಟ ಶೋಗಳನ್ನು ವೈಭವೀಕರಿಸುವ, ಅವುಗಳನ್ನು ಪ್ರಮೋಟ್ ಮಾಡುವ ಮಾಧ್ಯಮಗಳು ಈಗ ಪಾಠ ಹೇಳುವ ಮೂಡ್‌ಗೆ ಹೊರಳಿಕೊಂಡಿವೆ.

ಬಲಹೀನ ಸಮುದಾಯಗಳ ಬಗ್ಗೆ ಜೋಕ್‌ಗಳನ್ನು ಕಟ್ಟಿ ನಗುವುದನ್ನು ನಮ್ಮ ಸಮಾಜ ಈ ಹಿಂದಿನಿಂದಲೂ ಮಾಡಿಕೊಂಡೆ ಬಂದಿದೆ. ಸಿನಿಮಾ, ಸಾಮಾಜಿಕ ಮಾಧ್ಯಮ, ಪತ್ರಿಕೆ ಸೇರಿದಂತೆ ಎಲ್ಲಾ ಮಾಧ್ಯಮಗಳ ಮೂಲಕ ಇಂತಹ ಮನೋಭಾವವನ್ನು ನಿರಂತರವಾಗಿ ಬೆಳೆಸುತ್ತಲೇ ಇವೆ. ಜಾತಿ, ಲಿಂಗ, ಪ್ರಾದೇಶಿಕತೆ, ಆಹಾರ, ಧರ್ಮ, ಭಾಷೆ, ಅಂಗವಿಕಲತೆಗೆ ಸಂಬಂಧಿಸಿ ದುರ್ಬಲ ಸಮುದಾಯಗಳನ್ನು ಮತ್ತು ಆ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳನ್ನು ಗೇಲಿ ಮಾಡುವುದು, ಅವರ ಸುತ್ತ ಬೈಗುಳ ಸೃಷ್ಟಿ ಮಾಡುವುದು ಅಥವಾ ಅವರನ್ನು ಹಾಸ್ಯದ ವಸ್ತುವನ್ನಾಗಿ ಮಾಡುವುದನ್ನು ಸಾಮಾನ್ಯ ಎಂಬಂತೆ ನಮ್ಮ ಸಮಾಜ ಪರಿಗಣಿಸಿದೆ. ಇಂತಹ ಮನಸ್ಥಿತಿ ಆ ದಮನಿತ ಸಮುದಾಯಗಳ ಮೇಲೆ ನಡೆಸುವ ಶೋಷಣೆಯನ್ನೂ ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಬೆಳೆಯುತ್ತದೆ ಎನ್ನುವುದೇ ದುರಂತ.

“ಹೆಚ್ಚಿನ ಸಂದರ್ಭದಲ್ಲಿ ಇಂತಹ ಹಾಸ್ಯಗಳನ್ನು ಮಾಡುವುದು ಸಮಾಜದಲ್ಲಿ ಬಲಿಷ್ಠ ಸಮುದಾಯದಿಂದ ಬಂದಿರುವವರೇ ಆಗಿರುತ್ತಾರೆ” ಎಂದು ಹೇಳುತ್ತಾರೆ ಸಾಮಾಜಿಕ ಕಾರ್ಯಕರ್ತ ವಿ.ಎಲ್. ನರಸಿಂಹಮೂರ್ತಿ. “ಇಂತಹ ಜೋಕ್‌ಗಳ ಪಾತ್ರಗಳೆಲ್ಲವೂ ’ಮೇಲ್ಜಾತಿ’ಯದ್ದಾಗಿದ್ದರೂ, ಇವರು ಗೇಲಿ ಮಾಡುವುದು ತಳಸಮುದಾಯಗಳನ್ನಾಗಿರುತ್ತದೆ” ಎನ್ನುತ್ತಾರವರು. ಸ್ಲಂಗಳ ಜೀವನ ತೋರಿಸುತ್ತೇನೆ ಎಂದು ಹೇಳಿಕೊಂಡು ಮಾಡಲಾಗುವ ಕನ್ನಡ ಸಿನಿಮಾಗಳಲ್ಲಿ ಸ್ಲಂ ಎಂದರೆ ಹೀಗೆಯೆ, ಎಂಬಂತೆ ಷರಾ ಬರೆದು, ಅಲ್ಲಿನ ಜನರನ್ನು ಭಯಾನಕ ಎಂಬಂತೆ ತೋರಿಸುವುದು ನಡೆಯುತ್ತಲೇ ಇವೆ. ಈ ಸಿನಿಮಾಗಳು ಸ್ಲಂನಲ್ಲಿ ವಾಸಿಸುವ ಜನರ ಮೇಲಿರುವ ಸ್ಟೀರಿಯೋಟೈಪ್ ಅಭಿಪ್ರಾಯಗಳನ್ನು ಮತ್ತಷ್ಟು ಬೆಳೆಸುತ್ತವೆ. ಮುಸ್ಲಿಮರು ಎಂದರೆ ತುಂಬಾ ಮಕ್ಕಳು ಮಾಡುವವರು, ಎಲ್ಲರೂ ಗಡ್ಡ ಬಿಟ್ಟು ಗಡುಸಾಗಿ ಮಾತನಾಡುತ್ತಾರೆ, ಕೊಳಕಾಗಿರುತ್ತಾರೆ, ಕತ್ತಲ್ಲಿ ಹಸಿರು ತಾಯಿತ ಹಾಕಿರುತ್ತಾರೆ, ’ನಮ್ದುಕೆ, ನಿಮ್ದುಕೆ’ ಎಂದು ಮಾತನಾಡುತ್ತಾರೆ ಎಂಬಂತೆ ತೋರಿಸಿ ಅವರ ಬಗ್ಗೆ ಜೋಕ್‌ಗಳನ್ನು ಸೃಷ್ಟಿಸಿ ತೇಲಿಬಿಡಲಾಗುತ್ತದೆ. ದೊಡ್ಡ ಹೊಟ್ಟೆಯವರನ್ನು, ಕನ್ನಡಕ ಹಾಕಿರುವವರನ್ನು, ತಲೆಯಲ್ಲಿ ಕೂದಲು ಇರದೆ ಇರುವವರನ್ನು, ಕಪ್ಪು ಚರ್ಮದವರನ್ನು, ಟ್ರಾನ್ಸ್ ಜೆಂಡರ್‌ಗಳನ್ನು, ಮೆಳ್ಳೆಗಣ್ಣುಗಳಿರುವ ಜನರನ್ನು ನಮ್ಮ ಸಮಾಜ ಈ ಹಿಂದಿನಿಂದಲೂ ಆಡಿಕೊಂಡೇ ಬಂದಿದೆ. ಸಾಮಾಜಿಕ ಮಾಧ್ಯಮಗಳು ಈ ಜನರ ಮೇಲೆ ಮತ್ತಷ್ಟು ಜೋಕುಗಳನ್ನು ಸೃಷ್ಟಿ ಮಾಡುತ್ತವೆ.

ಈ ಎಲ್ಲಾ ಸಂದರ್ಭಗಳಲ್ಲಿ ಬಹಳ ಸಾಮಾನ್ಯ ವಿಚಾರ ಏನೆಂದರೆ, ಈ ರೀತಿಯ ಹಾಸ್ಯ ಸಮಾಜದ ದುರ್ಬಲ ಮತ್ತು ತಳ ಸಮುದಾಯಗಳ ಬಗ್ಗೆ ಅಸ್ತಿತ್ವದಲ್ಲಿರುವ ಪೂರ್ವಾಗ್ರಹಗಳನ್ನು ಬಲಪಡಿಸುತ್ತದೆ ಜೊತೆಗೆ ಅಸಮಾನತೆಯನ್ನು ಮತ್ತಷ್ಟು ಬೆಳೆಸುತ್ತದೆ. ಲೈಂಗಿಕ ಹಾಸ್ಯಗಳು ಅತ್ಯಾಚಾರದ ಗಂಭೀರತೆಯ ಬಗೆಗಿನ ಗ್ರಹಿಕೆಗಳನ್ನು ಕುಗ್ಗಿಸುತ್ತದೆ ಮತ್ತು ಮಹಿಳೆಯರನ್ನು ಲೈಂಗಿಕ ವಸ್ತುಗಳನ್ನಾಗಿ ಪರಿಗಣಿಸುತ್ತದೆ. ಜೊತೆಗೆ ಸಮಾಜದಲ್ಲಿ ಪ್ರಿವಿಲೆಜ್ ಇಲ್ಲದ ಸಮುದಾಯಗಳಿಗೆ ಇಂತಹ ಹಾಸ್ಯಗಳು ಬೆದರಿಸುವಿಕೆಯಾಗಿಯೂ ಪರಿಣಮಿಸುತ್ತದೆ. ಬಹಳ ಮುಖ್ಯವಾಗಿ ಯಾವುದು ಹಾಸ್ಯ, ಯಾವುದು ಅವಹೇಳನ ಎಂಬ ಸೂಕ್ಷ್ಮತೆಯನ್ನು ತಿಳಿಸಿಕೊಡುವ, ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ.

ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತು ಮಾಡಲು ಕೇಂದ್ರದ ನೀತಿ ಸಾರಾ ಸಗಟಾಗಿ ತಿರಸ್ಕರಿಸಿ: ರಾಜ್ಯ ಸರ್ಕಾರಕ್ಕೆ ಸಂಯುಕ್ತ ಹೋರಾಟ ಸಮಿತಿ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಕ್ನೋ | 12 ವರ್ಷದ ಬಾಲಕ ಉನೈಝ್ ಗುಂಡೇಟಿಗೆ ಬಲಿ : ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದ ಕುಟುಂಬ

ಉತ್ತರ ಪ್ರದೇಶದ ಲಕ್ನೋದಲ್ಲಿ 12 ವರ್ಷದ ಬಾಲಕನೊಬ್ಬ ಗುಂಡೇಟಿನಿಂದ ಮೃತಪಟ್ಟಿದ್ದು, ಆತನನ್ನು ಕೊಲೆ ಮಾಡಲಾಗಿದೆ. ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ದೇಶದ ಗಮನ ಸೆಳೆದಿದ್ದು, ಸಾಮಾಜಿಕ...

ಕೇರಳ: ಪೊಲೀಸರ ‘ದುರುದ್ದೇಶಪೂರಿತ ಮೊಕದ್ದಮೆ’ಗಾಗಿ ನಿವೃತ್ತ ಸೇನಾ ಅಧಿಕಾರಿಗೆ ಕೇರಳ ನ್ಯಾಯಾಲಯದಿಂದ 5 ಲಕ್ಷ ರೂ. ಪರಿಹಾರ ಘೋಷಣೆ

ಕೊಲ್ಲಂ, ಕೇರಳ: ಪೊಲೀಸರ "ದುರುದ್ದೇಶಪೂರಿತ ಮೊಕದ್ದಮೆ"ಗಾಗಿ ನಿವೃತ್ತ ಸೇನಾ ಅಧಿಕಾರಿಯೊಬ್ಬರಿಗೆ ಕೇರಳ ನ್ಯಾಯಾಲಯವು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ.  ಪ್ರಿನ್ಸಿಪಲ್ ಮುನ್ಸಿಫ್ ರಾಗಿ ಎಸ್. ಅವರು, 54 ವರ್ಷದ ನಿವೃತ್ತ ನಾಯಕ್ ಸುಬೇದಾರ್...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಒಳಚರಂಡಿಗೆ ಇಳಿದು ಇಬ್ಬರು ಪೌರ ಕಾರ್ಮಿಕರು ಸಾವು: ವಿಷಕಾರಿ ಅನಿಲ ಶಂಕೆ

ಇಂದೋರ್‌ನ ಚೋಯಿತ್ರಮ್ ಆಸ್ಪತ್ರೆ ಬಳಿ ಸೋಮವಾರ ಒಳಚರಂಡಿ ಒಳಗೆ ಇಳಿದ ಕಾರಣ ಕರಣ್ ಮತ್ತು ಅಜಯ್ ಎಂದು ಗುರುತಿಸಲಾದ ಇಂದೋರ್ ಮಹಾನಗರ ಪಾಲಿಕೆಯ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ವಲಯ 13ರ...

‘ಅತೃಪ್ತ ಆತ್ಮಗಳ ಹತಾಶ ಹೇಳಿಕೆ’ : ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ....

‘ಖಮೇನಿ ಹತ್ಯೆ ಬಗ್ಗೆ ಮೋದಿ ಸರ್ಕಾರದ ಮೌನ ತಟಸ್ಥವಲ್ಲ, ಬದಲಿಗೆ ಪದತ್ಯಾಗ’: ಸೋನಿಯಾ ಗಾಂಧಿ

ಮಂಗಳವಾರ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಗ್ಗೆ ಮೋದಿಯವರ ಮೌನವು ತಟಸ್ಥವಲ್ಲ, ಬದಲಾಗಿ ತ್ಯಾಗವಾಗಿದೆ...

ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರು ಸಾವು

ಟೆಕ್ಸಾಸ್‌ನ ಆಸ್ಟಿನ್ ನಗರದ ಬಾರ್ ಒಂದರ ಹೊರಗಡೆ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಭಯೋತ್ಪಾದನಾ ಕೃತ್ಯವಾಗಿರಬಹುದು ಎಂಬ ಶಂಕೆಯ ಮೇಲೆ ತನಿಖೆ...

ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್ : ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ

ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ ಒಂದಾದ 'ಹಾರ್ಮುಜ್ ಜಲಸಂಧಿ'ಗೆ ವ್ಯಾಪಿಸಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು...

ಹುಬ್ಬಳ್ಳಿಯಲ್ಲಿ ವಲಸೆ ಕಾರ್ಮಿಕನ ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪ ಎದುರಿಸುತ್ತಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎನ್‌ಕೌಂಟರ್ ಪ್ರಕರಣವನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಂದ ಸ್ವತಂತ್ರ ತನಿಖೆಗೆ ವಹಿಸಿ ಸೋಮವಾರ...

ಇದು ಇರಾಕ್ ಅಲ್ಲ, ಇರಾನ್ ಜೊತೆಗಿನ ಸಂಘರ್ಷ ‘ಅಂತ್ಯವಿಲ್ಲದ ಯುದ್ಧವಲ್ಲ’ : ಅಮೆರಿಕ ರಕ್ಷಣಾ ಕಾರ್ಯದರ್ಶಿ

ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ಜಂಟಿ ದಾಳಿಯು 'ಅಂತ್ಯವಿಲ್ಲದ್ದು' ಅಥವಾ ಸುದೀರ್ಘವಾದುದ್ದಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸೋಮವಾರ (ಮಾ.2) ತಿಳಿಸಿದ್ದಾರೆ. ಈ ಸಂಘರ್ಷವು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಯುವುದಿಲ್ಲ...

ಉತ್ತರ ಪ್ರದೇಶ| ಶಾಲಾ ಬಸ್ಸಿನ ನೆಲಹಾಸು ಕುಸಿದು 7 ವರ್ಷದ ಬಾಲಕಿ ಸಾವು; ಇಬ್ಬರ ಬಂಧನ

ಉತ್ತರ ಪ್ರದೇಶದ ಅಲಿಗಢದಲ್ಲಿ ಶಾಲಾ ಬಸ್ಸಿನ ನೆಲಹಾಸು ಕುಸಿದು ಕೆಳಗೆ ಬಿದ್ದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಖಾಸಗಿ ಶಾಲೆಯ ವ್ಯವಸ್ಥಾಪಕ ಮತ್ತು ಬಸ್ ಚಾಲಕನನ್ನು ಬಂಧಿಸಲಾಗಿದೆ ಎಂದು...