Homeಮುಖಪುಟಅಪರಾಧದ ಮರುವ್ಯಾಖ್ಯಾನ; ಪ್ರಭುತ್ವ, ಪ್ರತಿರೋಧ ಮತ್ತು ಪ್ರಜಾಪ್ರಭುತ್ವ

ಅಪರಾಧದ ಮರುವ್ಯಾಖ್ಯಾನ; ಪ್ರಭುತ್ವ, ಪ್ರತಿರೋಧ ಮತ್ತು ಪ್ರಜಾಪ್ರಭುತ್ವ

ಆಳುವ ಸರ್ಕಾರಗಳು ಸಂವಿಧಾನವನ್ನು ಎತ್ತಿಹಿಡಿಯುವ ಜನತೆಗೆ ಅದು ಕೊಡಮಾಡುವ ಹಕ್ಕುಗಳನ್ನು ಗೌರವಿಸುವ ಮೂಲಕ ಇವುಗಳನ್ನು ಬಲಪಡಿಸುವ ಅಗತ್ಯವನ್ನು ಬೇಕೆಂದೇ ಕಡೆಗಣಿಸುತ್ತಾ ಬರುತ್ತವೋ ಅವು ಜನತೆ, ಸಂವಿಧಾನ ಮತ್ತು ಇವುಗಳ ಕೂಸಾದ ಸರ್ಕಾರಗಳ ನಡುವಣ ಚಾರಿತ್ರಿಕ ಸಂಬಂಧವನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಸೋಲುತ್ತವೆ.

- Advertisement -
- Advertisement -

ಕೊರೊನಾ ವೈರಸ್ ಎಂಬ ಇದುವರೆಗೂ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವಿದ್ಯಮಾನ, ಜನರು ಇದುವರೆಗೆ ಪಾಲಿಸಿಕೊಂಡು ಬಂದಿದ್ದ ತಮ್ಮ ಸಾಮಾಜಿಕ ಅಭ್ಯಾಸಗಳನ್ನು ಮತ್ತು ರೂಢಿಗಳನ್ನು ಮರುಪರಿಶೀಲಿಸಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಇವುಗಳಲ್ಲಿ ಒಂದು ಅಪರಾಧಕ್ಕೆ ಸಂಬಂಧಿಸಿದ ನಮ್ಮ ಧೋರಣೆಗಳು.

ಇತ್ತೀಚೆಗೆ ಜಯರಾಜ್ ಮತ್ತು ಬೆನಿಕ್ಸ್ (ತಂದೆ ಮತ್ತು ಮಗ), ತೂತುಕುಡಿಯ ಸಾತಾನ್‌ಕುಳಂ ಪೋಲಿಸ್ ಸ್ಟೇಷನ್‌ನ ರಘು ಗಣೇಶ್ ಮತ್ತು ಬಾಲಕೃಷ್ಣನ್ ಎಂಬ ಸಬ್ ಇನ್ಸ್ಪೆಕ್ಟರ್‌ಗಳ ಹಿಂಸೆ ಮತ್ತು ಥಳಿತದಿಂದ ಸಾವಿಗೀಡಾದರು. ಸಹಜವಾಗಿಯೇ ತಮಿಳುನಾಡಿನ ಸಿಐಡಿ, ಈ ಪೊಲೀಸರನ್ನು ಬಂಧಿಸಿತು; ಹೈಕೋರ್ಟಿನ ಮಧುರೈ ಬೆಂಚು ಪ್ರಕರಣದ ಕುರಿತು ತನಿಖೆ ನಡೆಸಲು ಆದೇಶಿಸಿತು ಮತ್ತು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸಿಬಿಐಗೆ ತಿಳಿಸಲಾಯಿತು.

ಇದರಲ್ಲಿ ಯಾವುದು ಅಸಹಜ ಎಂದರೆ ‘ಅಪರಾಧ’ವೆಂದು ಪರಿಗಣಿಸಲಾದ ಆ ಕೃತ್ಯ. ಕೊಲೆಗೀಡಾದ ಈ ಇಬ್ಬರು ತಮ್ಮ ಸಣ್ಣ ಅಂಗಡಿಯ ಕದ ಮುಚ್ಚುವಲ್ಲಿ ಅರ್ಧ ಗಂಟೆ ತಡ ಮಾಡಿದ್ದರು. ಕೊರೊನಾಕ್ಕೆ ಸಂಬಂಧಿಸಿದ ನಿರ್ಬಂಧದಂತೆ ವ್ಯಾಪಾರ ವಹಿವಾಟುಗಳು ಇಂತಿಷ್ಟೇ ಹೊತ್ತು ಮಾತ್ರ ನಿಗದಿಪಡಿಸಿರುವುದರಿಂದ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳು ಈ ಸಂಗತಿಯನ್ನು ನಿಯಮಗಳ ಉಲ್ಲಂಘನೆಯೆಂದು ಪರಿಗಣಿಸಿದ್ದರು. ಇದರಿಂದಾಗಿ ಕೊಲೆಗಾರರು ಮತ್ತು ಕೊಲ್ಲಲ್ಪಟ್ಟವರೂ ಸೇರಿ ಒಟ್ಟು ನಾಲ್ಕು ಮಂದಿ ಮತ್ತು ಅವರ ಕುಟುಂಬಗಳು ದುರಂತವನ್ನು ಕಾಣಬೇಕಾಯಿತು.

ತಮಿಳುನಾಡು ಲಾಕಪ್‌ಡೆತ್‌: ಎರಡು ಪ್ರಕರಣಗಳನ್ನು ದಾಖಲಿಸಿದ ಸಿಬಿಐ
ಜಯರಾಜ್ ಮತ್ತು ಬೆನಿಕ್ಸ್

ಪೊಲೀಸರ ಈ ಹೇಯ ಕ್ರೌರ್ಯವನ್ನು ಯಾವುದೇ ನಾಗರಿಕ ಸಮಾಜ ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಬಾಗಿಲು ತಡವಾಗಿ ಮುಚ್ಚಿದ ಸಂಗತಿಗೆ ಸಂಬಂಧಿಸಿದಂತೆ ಅಪರಾಧದ ಪರಿಕಲ್ಪನೆಯನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಸಮಾಜಶಾಸ್ತ್ರಜ್ಞ, ಎಮಿಲಿ ಡೆರ್‍ಖೈಮ್, ದಶಕಗಳ ಹಿಂದೆಯೇ ಯಾವುದನ್ನು ಸಾಂಪ್ರದಾಯಿಕ ನ್ಯಾಯ ತೀರ್ಮಾನದ ಮೂಲಕ ಅಪರಾಧ ಅಥವಾ ಅಪರಾಧವಿರಬಹುದು ಎಂದು ಪರಿಗಣಿಸಲಾಗುತ್ತದೋ ಅದರ ಹಿಂದೆ ಮೊತ್ತಮೊದಲನೆಯದಾಗಿ, ಅಂತಹ ದೊಡ್ಡ ಸಂಗತಿಯೇ ಇಲ್ಲದಿರಬಹುದು ಎಂದು ಹೇಳಿದ್ದರು.

ಅವರು ತಮ್ಮ ಕೃತಿ ‘ದಿ ರೂಲ್ಸ್ ಆಫ್ ಸೋಷಿಯಲಾಜಿಕಲ್ ಮೆಥಡ್‌ನಲ್ಲಿ (1) “ಕೇವಲ ಸಂತರೇ ಇರುವಂತಹ ಸಮಾಜವನ್ನು ಕಲ್ಪಿಸಿಕೊಳ್ಳಿ, ಆದರ್ಶ ಜನರೇ ತುಂಬಿರುವ ಪರಿಪೂರ್ಣ ಪರಿಸರ. ನಿಜವಾದ ಅರ್ಥದಲ್ಲಿ ಅಪರಾಧಗಳು ಅಲ್ಲಿನವರಿಗೆ ಅರಿಯದ ವಿಚಾರ. ಆದರೆ ಸಾಮಾನ್ಯ ಮನುಷ್ಯರ ಮಟ್ಟಿಗೆ ಕ್ಷುಲ್ಲಕವೆನಿಸುವ ತಪ್ಪುಗಳೂ ಅಲ್ಲಿ ದೊಡ್ಡ ಪ್ರಮಾದಗಳಂತೆ ಕಾಣುತ್ತವೆ. ಆದರೆ ಆಗಲೂ ಸಮಾಜ ನ್ಯಾಯ ತೀರ್ಮಾನ ಮಾಡುವ ಮತ್ತು ಶಿಕ್ಷಿಸುವ ಅಧಿಕಾರ ಹೊಂದಿದ್ದರೆ, ಈ ಕೃತ್ಯಗಳನ್ನು ಅದು ಅಪರಾಧ ಎಂದು ವ್ಯಾಖ್ಯಾನಿಸುತ್ತದೆ ಮತ್ತು ಇವುಗಳನ್ನು ಹಾಗೆಯೇ ನೋಡುತ್ತದೆ.”

ಈ ವಿಚಿತ್ರ ಘಟನೆ ಕೇವಲ ಒಂದು ಅಪವಾದವಾಗಿದ್ದರೆ ಈ ಪ್ರಶ್ನೆ ಅಷ್ಟೊಂದು ತುರ್ತಿನದ್ದಾಗಿರುತ್ತಿರಲಿಲ್ಲ. ಇನ್ನೂ ಹಲವು ಘಟನೆಗಳು ನಮ್ಮ ಮುಂದಿವೆ, ಗುಂಪು ಹತ್ಯೆ, ವ್ಯಕ್ತಿ ಸ್ವಾತಂತ್ಯ್ರವನ್ನು ನಿರಾಕರಿಸುವ ಖಾಪ್ ಪಂಚಾಯತ್‌ಗಳು, ಅಂಧಶ್ರದ್ಧೆಯುಳ್ಳ ಸಂಸ್ಥೆಗಳು ಹೊರಡಿಸುವ ಫತ್ವಾಗಳು, ಮಾಧ್ಯಮಗಳು ನಡೆಸುವ ವಿಚಾರಣೆಗಳು, ಭಿನ್ನ ನಿಲುವನ್ನು ಹೊಂದಿರುವವರಿಗೆ ದೇಶದ್ರೋಹಿಗಳ ಹಣೆಪಟ್ಟಿ ಹಚ್ಚುವ ವಿವಿಧ ಸೈದ್ಧಾಂತಿಕ ಸಂಘಟನೆಗಳು ಹೆಚ್ಚುತ್ತಿರುವುದು ಗಂಭೀರ ವಿಶ್ಲೇಷಣೆಯತ್ತ ನಮ್ಮನ್ನು ಸೆಳೆಯುತ್ತದೆ. ಇವುಗಳಲ್ಲಿ ಯಾವೊಂದನ್ನೂ ನಾವು ಸಮರ್ಥಿಸುವುದು ಸಾಧ್ಯವಿಲ್ಲ.

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿಲ್ಲದೇ ಇದ್ದಲ್ಲಿ ಮತ್ತು ಅದು ತನ್ನ ಸಂವಿಧಾನದ ನಿಯಮಗಳಿಗೆ ಬದ್ಧವಾಗಿರದೇ ಇದ್ದಲ್ಲಿ ಇಂಥವುಗಳನ್ನು ಸಮರ್ಥಿಸುವ ಪ್ರಯತ್ನಕ್ಕೆ ಅವಕಾಶವಿತ್ತು. ಆದರೆ ವೈವಿಧ್ಯಮಯ ಜನರು, ಸಂಸ್ಕೃತಿ, ಭಾಷೆ ಮತ್ತು ನಂಬಿಕೆಗಳು ನ್ಯಾಯ(ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ), ಸ್ವಾತಂತ್ಯ್ರ (ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆ), ಮತ್ತು ಸಮಾನತೆಯನ್ನು (ಸ್ಥಾನಮಾನ ಮತ್ತು ಅವಕಾಶ) ಖಾತ್ರಿಗೊಳಿಸುವ ಸಂವಿಧಾನಕ್ಕೆ ನಿಷ್ಠೆಯನ್ನು ಪ್ರಕಟಿಸುವ ಮೂಲಕ ಒಂದು ದೇಶವಾಗಿ ಬೆಸೆದುಕೊಂಡಿವೆ.

PC:Wikimedia Commons

ಸಂವಿಧಾನದ ಈ ಪ್ರಸ್ತಾವನೆ ಅದರ ಎಲ್ಲ ಅರ್ಥದಲ್ಲೂ ‘ಸಂಪೂರ್ಣ’ವಾಗಿದೆ. ಆದರೆ ಮೇಲೆ ಹೇಳಲಾದ ಅಪರಾಧದ ವಿವಾದಾಸ್ಪದ ವ್ಯಾಖ್ಯೆಯು ಸಂವಿಧಾನದಲ್ಲಿ ಛಾಪಿಸಲಾದ ಮೌಲ್ಯಗಳಿಗೆ ಸಂವಾದಿಯಾಗಿಲ್ಲ ಎಂಬುದು ವಿಷಾದನೀಯ. ನಾನು ಈ ಹಿನ್ನಲೆಯಲ್ಲಿ ಎರಡು ಬೇರೆ ಬೇರೆಯಾದ, ಆದರೆ ಮೂಲಭೂತವಾಗಿ ಬೆಸೆದುಕೊಂಡಿರುವ ಪ್ರಕರಣಗಳನ್ನು ನಿಮ್ಮ ಮುಂದಿಡುತ್ತೇನೆ.

ಇವುಗಳಲ್ಲಿ ಮೊದಲನೆಯದು ಡಿಎನ್‌ಟಿ(DNT)ಗೆ ಸಂಬಂಧಿಸಿದ್ದರೆ ಎರಡನೆಯದು ಯುಎಪಿಎ(UAPA)ಗೆ ಸಂಬಂಧಿಸಿದ್ದಾಗಿದೆ. ಡಿಎನ್‌ಟಿಯ ವಿಸ್ತೃತ ರೂಪ ಡಿನೋಟಿಫೈಡ್ ಮತ್ತು ಅಲೆಮಾರಿ ಬುಡಕಟ್ಟು ಎಂಬುದಾಗಿದೆ. ಅಪರಾಧದ ಕುರಿತ ನಮ್ಮ ವಸಾಹತುಶಾಹಿ ಆಡಳಿತಗಾರರ ಈ ಮಹಾ ತಪ್ಪುಗ್ರಹಿಕೆಗೆ 150 ವರ್ಷಗಳು ಸಮೀಪಿಸುತ್ತಿದ್ದಂತೆ ಇದನ್ನು ತೆರೆದಿಡುವುದು ಅಗತ್ಯವಾಗಿದೆ.

1820 ರ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳು ರಾಜ್ಯಗಳಿಂದ ಪ್ರತ್ಯೇಕವಾದ ಆದರೆ ಇನ್ನೂ ಶಸ್ತಾಸ್ತ್ರಗಳನ್ನು ಹೊಂದಿರುವ ಸಣ್ಣ ಅಲೆಮಾರಿ ಗುಂಪುಗಳ ಸೈನಿಕರನ್ನು ಕುರಿತು ಆತಂಕಿತರಾದರು. ಇವರನ್ನು ಶಸ್ತಾಸ್ತ್ರರಹಿತರಾಗಿಸಲು ಮತ್ತು ಇವರಿಂದ ಒದಗಬಹುದಾದ ಅಪಾಯಗಳನ್ನು ಇಲ್ಲವಾಗಿಸಲು ಆಡಳಿತವು ‘ಕಣ್ಗಾವಲು ಮತ್ತು ಸಮೀಕ್ಷಾ’ಯೋಜನೆಯನ್ನು ಆರಂಭಿಸಿತು. ಮೂಲತಃ ಸೈನಿಕ ತರಬೇತಿ ಪಡೆದಿದ್ದ ವಿಲಿಯಂ ಹೆನ್ರಿ ಸ್ಲೀಮನ್, (1788-1856) ಅವರನ್ನು ಯೋಜನೆಯ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು. ನಂತರದ ಕೆಲವು ದಶಕಗಳ ಕಾಲ ಸ್ಲೀಮನ್ ಮಧ್ಯ ಭಾರತದಲ್ಲಿ ನಡೆದ ಸಶಸ್ತ್ರ ಕಾದಾಟದ ದಾಖಲೆಗಳನ್ನು ನಿಖರವಾಗಿ ಇಟ್ಟುಕೊಂಡ. ಮತ್ತು ಅವುಗಳಲ್ಲಿ ಪಾಲ್ಗೊಂಡ ಜನರ ಪಟ್ಟಿಯನ್ನು ಜಾತಿಗನುಗುಣವಾಗಿ ಸಿದ್ಧಪಡಿಸಿದ.

1870ರಲ್ಲಿ, ಅಂದರೆ 150 ವರ್ಷಗಳ ಹಿಂದೆ ಆಗಷ್ಟೇ ಭಾರತಕ್ಕೆ ವೈಸ್‌ರಾಯ್ ಆಗಿ ಕಳುಹಿಸಲಾಗಿದ್ದ ಲಾರ್ಡ್ ಮೇಯೋ, ಈ ಕುರಿತು ಕಾನೂನು ರೂಪಿಸುವ ನಿಟ್ಟಿನಲ್ಲಿ ಮುಂದಾದ ಮತ್ತು 1871 ಅಕ್ಟೋಬರ್‌ನಲ್ಲಿ ಮೊತ್ತಮೊದಲನೆಯ ‘ಕ್ರಿಮಿನಲ್ ಟ್ರೈಬ್ಸ್ ಆಕ್ಟ್’(ಸಿಟಿಎ) ಅನ್ನು ಜಾರಿಗೊಳಿಸಲಾಯಿತು. ಇದರ ಜೊತೆಗೆ ಈ ಹಿಂದೆ ಸ್ಲೀಮನ್ ಸಿದ್ಧಪಡಿಸಿದ್ದ ಪಟ್ಟಿಯಿಂದ ತೆಗೆದುಕೊಂಡ ಜಾತಿ ಮತ್ತು ಸಮುದಾಯಗಳ ಹೆಸರುಗಳನ್ನು ಲಗತ್ತಿಸಲಾಯಿತು.

ಅಪರಾಧವನ್ನು ಆನುವಂಶಿಕವಾದ ವೃತ್ತಿಯನ್ನಾಗಿ ಪರಿಭಾವಿಸಿಕೊಂಡ 1871 ರಲ್ಲಿ ಜಾರಿಗೆ ತಂದ ಸಿಟಿಎಯ ಮೂಲಭೂತ ತಿಳುವಳಿಕೆಯೇ ದೋಷಪೂರ್ಣವಾಗಿದೆ. ಇದೂ ಕೂಡಾ ಹಿಂಸಾತ್ಮಕ ಸಂಘರ್ಷ ಕುರಿತು ಸ್ಲೀಮನ್‌ನ ತಪ್ಪು ಗ್ರಹಿಕೆ ಮತ್ತು ಅವನು ಪುಸ್ತಕಗಳ ಮೂಲಕ ಬ್ರಿಟಿಷ್ ಓದುಗರ ಮನಸ್ಸಲ್ಲಿ ಯಶಸ್ವಿಯಾಗಿ ಹರಿಯಬಿಟ್ಟ ‘ಥಗ್ಗೀ’ಯ (ಪಾತಕಿ) ಮಿತ್ ಅನ್ನು ಆಧರಿಸಿದೆ.

PC: Arre

ಮೊದಲ ಸಿಟಿಎ ಹಲವು ಪರಿಷ್ಕರಣೆಗಳಿಗೆ ಒಳಗಾಯಿತು. ಇದರ ಕೊನೆಯ ತಿದ್ದುಪಡಿ ನಡೆದದ್ದು 1924ರಲ್ಲಿ. ಪ್ರತೀ ತಿದ್ದಪಡಿಯಲ್ಲಿಯೂ ನೋಟಿಫೈಡ್ ಜಾತಿ ಮತ್ತು ಸಮುದಾಯಗಳ ಪಟ್ಟಿ ವಿಸ್ತೃತಗೊಳ್ಳುತ್ತಾ ಹೋಯಿತು. ಇದರಿಂದಾಗಿ ಯಾರೆಲ್ಲ ಈ ಪಟ್ಟಿಯೊಳಗೆ ಬರುತ್ತಾರೋ ಅವರು ಏನನ್ನಾದರೂ ಮಾಡಲಿ, ಮಾಡದೇ ಇರಲಿ, ಕಾನೂನಿನ ಕಣ್ಣಲ್ಲಿ ಅವರನ್ನು ಅಪರಾಧಿಗಳೆಂದು ಅಥವಾ ಅಪರಾಧ ಮಾಡಬಹುದಾದವರೆಂದು ಕಾಣಲು ಶುರುವಾಯಿತು.

ಇವರ ಓಡಾಟದ ಮೇಲೆ ನಿರ್ಬಂಧ ಹೇರಲಾಯಿತು. ದೂರ ಪ್ರಯಾಣವನ್ನು ತಡೆಹಿಡಿಯಲಾಯಿತು. ಇವರಲ್ಲಿ ಬಹುದೊಡ್ಡ ಸಂಖ್ಯೆಯ ಜನರನ್ನು ಸುಧಾರಣಾ ಶಿಬಿರಗಳಲ್ಲಿ(ಒಂದರ್ಥದಲ್ಲಿ ಜೈಲುಗಳು) ಕೂಡಿಹಾಕಲಾಯಿತು. ರೈಲ್ವೆ ಹಳಿಗಳು, ಅಣೆಕಟ್ಟುಗಳು, ಸಾರ್ವಜನಿಕ ಕಟ್ಟಡಗಳ ನಿರ್ಮಾಣದಲ್ಲಿ ಇವರನ್ನು ವೇತನವಿಲ್ಲದೆ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳಲಾಯಿತು. ಮಕ್ಕಳು, ಮಹಿಳೆಯರೂ ಈ ಶಿಕ್ಷೆಗೆ ಹೊರತಾಗಲಿಲ್ಲ.

ನೋಟಿಫೈಡ್ ಸಮುದಾಯಗಳನ್ನು ಹೀನಾಯವಾಗಿ ನಡೆಸಿಕೊಳ್ಳುವುದರ ಬಗ್ಗೆ ಕ್ರೋಧ ಎಷ್ಟಿತ್ತೆಂದರೆ ಸಿಟಿಎ ಜಾರಿಯಾದ ನಾಲ್ಕು ತಿಂಗಳ ಬಳಿಕ ಫೆಬ್ರವರಿ 1872 ರಲ್ಲಿ ಅಂಡಮಾನಿನಲ್ಲಿ ಬಂಧಿಯಾಗಿದ್ದ ಶೇರ್ ಅಲಿ ಅಫ್ರಿದಿಯಿಂದ ಲಾರ್ಡ್ ಮೇಯೋನ ಹತ್ಯೆಯಾಗುತ್ತದೆ. ಅಫ್ರಿದಿಯನ್ನು ಮಾರ್ಚ್ 1873 ರಂದು ಗಲ್ಲಿಗೇರಿಸಲಾಗುತ್ತದೆ. 1873 ರ ಹೊತ್ತಿಗೆ ಸ್ಲೀಮನ್, ಮೇಯೋ, ಅಫ್ರಿದಿ ಯಾರೂ ಇಲ್ಲದಿದ್ದರೂ ದಶಕಗಳ ಕಾಲ, ಪೀಳಿಗೆಯಿಂದ ಪೀಳಿಗೆಯವರೆಗೆ ಲಕ್ಷಾಂತರ ನೋಟಿಫೈಡ್ ಸಮುದಾಯಗಳು ತಮ್ಮ ನಿರ್ಬಂಧಿತ ವಸತಿ ಪ್ರದೇಶಗಳಲ್ಲಿ ತೊಳಲಾಡುವುದು ಮುಂದುವರೆಯಿತು.

ಭಾರತ ಸ್ವತಂತ್ರವಾದಾಗಲೂ ಅವರನ್ನು ಕೂಡಲೇ ಬಿಡುಗಡೆಗೊಳಿಸಲಿಲ್ಲ. ನಂತರ ಸುಮಾರು ಐದು ವರ್ಷಗಳ ಬಳಿಕ ಆಗಸ್ಟ್ 1952 ರಲ್ಲಿ ಜವಹರಲಾಲ್ ನೆಹರು ಅವರು ಇವರನ್ನು ಡಿನೋಟಿಫೈ ಮಾಡಿ ಸಿಟಿಎ ಬದಲಿಗೆ ‘ಹ್ಯಾಬಿಚುವಲ್ ಅಫೆಂರ‍್ಸ್ ಆಕ್ಟ್’ ತರಲು ನಿರ್ಧರಿಸಿದರು. 1871 ರ ಸಿಟಿಎಗೆ ಮೊದಲು ಈ ಸಮುದಾಯಗಳು ಅಲೆಮಾರಿಗಳಾಗಿದ್ದವರು. 1952 ರಿಂದ ಇವರನ್ನು ಡಿನೋಟಿಫೈಡ್ ಮತ್ತು ಅಮೆಮಾರಿ ಸಮುದಾಯಗಳೆಂದು(ಡಿಎನ್‌ಟಿ) ಕರೆಯಲಾಯಿತು.

ಆದರೆ ಇವರನ್ನು ಅಂಟಿಕೊಂಡಿರುವ ಪೂರ್ವಾಗ್ರಹಗಳು ಮತ್ತು ಕಳಂಕಗಳು ಇನ್ನೂ ಮುಂದುವರೆದಿವೆ. ಎಸ್‌ಸಿ, ಎಸ್‌ಟಿ ಪಟ್ಟಿಗೆ ಇವರನ್ನು ಸೇರಿಸಿಕೊಳ್ಳುವ ಕೆಲಸ ಸ್ವಲ್ಪಮಟ್ಟಿಗೆ ಆಗಿದೆ. ಭೂಮಿರಹಿತವಾಗಿ, ಜೀವನೋಪಾಯದ ಇತರ ದಾರಿಗಳೂ ಇಲ್ಲವಾಗಿ ಮೂಲಭೂತವಾದ ಕನಿಷ್ಠ ಮನುಷ್ಯ ಅಸ್ತಿತ್ವವನ್ನು ವ್ಯಾಖ್ಯಾನಿಸುವ ಸೂಚಕಗಳ ಮಟ್ಟಕ್ಕಿಂತ ತುಂಬಾ ಕೆಳಮಟ್ಟದಲ್ಲಿ ಇವರು ಜೀವಿಸುತ್ತಿದ್ದಾರೆ. ಭಾರತದಲ್ಲಿ 2020 ರ ಹೊತ್ತಿಗೆ ಅವರ ಅಂದಾಜು ಸಂಖ್ಯೆ 14 ಕೋಟಿಯಷ್ಟಿದೆ. ಅಪರಾಧ ಕುರಿತ ತಪ್ಪಾದ ಗ್ರಹಿಕೆಯಿಂದ ಉಂಟಾದ ಬಹುದೊಡ್ಡ ಮನುಷ್ಯ ನಿರ್ಮಿತ ದುರಂತಕ್ಕೆ ಇವರು ಸಾಕ್ಷಿಯಾಗಿ ನಿಲ್ಲುತ್ತಾರೆ.

ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ(ಯುಎಪಿಎ) ಸದುದ್ದೇಶದೊಂದಿಗೆ ಮತ್ತು ಉತ್ತಮ ಅಂತಾರಾಷ್ಟ್ರೀಯ ನಡವಳಿಕೆಯಾಗಿ ಆರಂಭವಾಯಿತು. ಅಲ್-ಕೈದಾ ಅಮೆರಿಕಾದಲ್ಲಿ ನಡೆಸಿದ 9/11 ದಾಳಿಗೆ ಪ್ರತಿಕ್ರಿಯೆಯಾಗಿ ವಿಶ್ವಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳ ಭಯೋತ್ಪಾದನಾ ವಿರೋಧಿ ನಡೆಗಳಿಗೆ ಕಾನೂನಾತ್ಮಕ ಬೆಂಬಲ ನೀಡುವ ಅಗತ್ಯವನ್ನು ಮನಗಂಡು 2001 ರಲ್ಲಿ ಸೂಕ್ತ ಕಾನೂನುಗಳನ್ನು ರೂಪಿಸಲು ಸದಸ್ಯ ರಾಷ್ಟ್ರಗಳ ಬಳಿ ಮನವಿ ಮಾಡಿಕೊಂಡಿತು.

ಇದಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಹಲವು ನಿರ್ಣಯಗಳ ಬಳಿಕ ಮತ್ತು ಅದರಲ್ಲೂ ಮುಖ್ಯವಾಗಿ 2008 ರ ಯುಎನ್ ಸೆಕ್ಯುರಿಟಿ ಕೌನ್ಸಿಲ್ ರೆಸೊಲ್ಯೂಷನ್ 1822 ರ ಬಳಿಕ ಭಾರತ ಯುಎಪಿಎಯನ್ನು ರೂಪಿಸಿತು. 2019 ರಲ್ಲಿ ಇದರ ತಿದ್ದುಪಡಿ ಸಂಸತ್ತಿನ ಮೂಲಕ ಆಗಸ್ಟ್‌‌ನಲ್ಲಿ ಅನುಮೋದನೆಗೊಂಡಿತು. ಈ ಹಿಂದೆ ಸಂಘಟನೆಗಳಿಗೆ ಮಾತ್ರ ಅನ್ವಯಿಸುವಂತಿದ್ದ ಇದರ ಸೆಕ್ಷನ್ 35 ಅನ್ನು, ಈ ತಿದ್ದುಪಡಿಯಲ್ಲಿ ವ್ಯಕ್ತಿಗಳಿಗೂ ಅನ್ವಯಿಸುವಂತೆ ಮಾಡಲಾಯಿತು.

ಈ ಮರುವ್ಯಾಖ್ಯಾನದ ಫಲಿತಾಂಶ ಈಗ ನಮ್ಮ ಮುಂದೆ ಇದೆ. ಏಪ್ರಿಲ್‌ನಲ್ಲಿ ಜಮ್ಮು ಕಾಶ್ಮೀರದ 26 ವರ್ಷದ ಫೋಟೋ ಜರ್ನಲಿಸ್ಟ್ ಮಸ್ರತ್ ಜಹ್ರಾಳನ್ನು ಈ ಕಾಯ್ದೆಯಡಿ ಬಂಧಿಸಲಾಯಿತು. ದೆಹಲಿಯಲ್ಲಿ ಮೀರನ್ ಹೈದರ್, ಸಫೂರಾ ಜರ್ಗರ್, ಜಾಮಿಯಾದ ಇನ್ನೂ ಎಳೆಯ ಹುಡುಗರು ಹಾಗೂ ಜೆಎನ್‌ಯುನ ಉಮರ್ ಖಾಲಿದ್‌ರನ್ನು ಬಂಧಿಸಿದ್ದು ಇದೇ ಕಾಯ್ದೆಯಡಿ. ಅಸ್ಸಾಂನಲ್ಲಿ ಅಖಿಲ್ ಗೊಗೊಯ್ ಡಿಸೆಂಬರ್ 2019ರಿಂದ ಜೈಲಿನಲ್ಲಿದ್ದಾರೆ.

PC: Shafaqna

ಕಳೆದ ವರ್ಷ ಪುಣೆಯಲ್ಲಿ ನಡೆದ ಸಭೆಯಲ್ಲಿ ಹಿಂಸೆಗೆ ಪ್ರಚೋದನೆ ನೀಡಿದರೆಂಬ ಕಾರಣವೊಡ್ಡಿ ಈ ಕರಾಳ ಕಾನೂನಿನಡಿಯಲ್ಲಿ ಭಾರತದ ಅನೇಕ ಮಹತ್ವದ ಚಿಂತಕರನ್ನು ಬಂಧಿಸಲಾಗಿದೆ. ಇವರಲ್ಲಿ ಗೌತಮ್ ನವ್ಲಖಾ ಮತ್ತು ಆನಂದ ತೇಲ್ತುಂಬ್ಡೆಯವರೂ ಸೇರಿದ್ದಾರೆ. ಇದನ್ನು ನಾನು ಬರೆಯುತ್ತಿದ್ದಂತೆಯೇ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಹನಿ ಬಾಬು ಮುಸಲಿರ‍್ವಿತ್ತಿಲ್ ತಾರಯಿಲ್ ಅವರನ್ನು ಇದೇ ಕಾನೂನಿನಡಿಯಲ್ಲಿ ಬಂಧಿಸಿರುವುದು ದಿನಪತ್ರಿಕೆಗಳಲ್ಲಿ ಸದ್ದು ಮಾಡುತ್ತಿದೆ. ಎಐಎಸ್‌ಎನ(ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್) ದೆಹಲಿಯ ಅಧ್ಯಕ್ಷ ಕವಲ್‌ಪ್ರೀತ್ ಕೌರ್ ಅವರನ್ನೂ ವಿಚಾರಣೆಗೊಳಪಡಿಸಲಾಗಿದೆ. ಇದು ಯಎಪಿಎ ಅಡಿಯಲ್ಲಿ ಬಂಧಿತರಾದವರ ಸಂಪೂರ್ಣ ಪಟ್ಟಿಯಲ್ಲ.

ಯುಎಪಿಎ, ಇದಕ್ಕೆ ಪೂರಕವಾದ ನ್ಯಾಯಾಂಗ ವ್ಯವಸ್ಥೆ ಸೇರಿಕೊಂಡು ಪ್ರಭುತ್ವಕ್ಕೆ ಕಸಿವಿಸಿಯೊಡ್ಡುವ ಪ್ರಶ್ನೆಗಳನ್ನು ಕೇಳುವವರ ವಿರುದ್ಧ ಬಳಸುವ, ಚಿಂತನೆಗಳನ್ನು ಮತ್ತು ವಿಚಾರಗಳನ್ನು ದಮನಮಾಡುವ ಮಾರಕ ಆಯುಧವಾಗಿಬಿಟ್ಟಿದೆ. 2014-19 ರ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಚಿಂತಕರಾದ ಎಂ.ಎಂ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ಬೃಹತ್ ಪ್ರಮಾಣದ ಸಾರ್ವಜನಿಕ ಪ್ರತಿಭಟನೆಯನ್ನು ಹುಟುಹಾಕಿತ್ತು. ಆದರೆ ಯುಎಪಿಎಯ ಅಡಿ ಬಂಧಿಸಿರುವ ಪ್ರಕರಣಗಳ ವಿರುದ್ಧ ಇದೇ ಪ್ರಮಾಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ; ಮತ್ತು ಯುಎಪಿಎ ಕಾನೂನಿನ ಸ್ವರೂಪದ ಕಾರಣದಿಂದ ಅದು ಆಗುವುದೂ ಇಲ್ಲ.

ಭಯೋತ್ಪಾದಕ ಚಟುವಟಿಕೆಗಳ ಮತ್ತು ದೇಶದ್ರೋಹದ ಆರೋಪಗಳು ಪ್ರಭುತ್ವದಿಂದ ಹೊರಿಸಲ್ಪಟ್ಟಾಗ ಸಂಪೂರ್ಣ ಮುಗ್ಧ ವ್ಯಕ್ತಿಗಳ ಸುತ್ತಲೂ ಒಂದು ಬಗೆಯ ಸಾರ್ವಜನಿಕ ಸಂದೇಹದ ವಾತಾವರಣ ಸೃಷ್ಟಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಭುತ್ವ, ಸ್ವತಂತ್ರವಾಗಿ ಚಿಂತಿಸುವುದು, ಭಿನ್ನ ಯೋಚನೆ ಹೊಂದಿರುವುದು, ಸಾರ್ವಜನಿಕ ವಿಚಾರಗಳ ಕುರಿತಾದ ಸರ್ಕಾರದ ನಡೆಯ ಬಗ್ಗೆ ಸಮ್ಮತಿ ಇಲ್ಲದಿರುವುದನ್ನು ಅಪರಾಧವಾಗಿ ಮಾರ್ಪಡಿಸಿದೆ. ಈ ಹಿಂದೆ ಸಂಪೂರ್ಣವಾಗಿ ಮುಗ್ಧರಾಗಿದ್ದ ಸಮುದಾಯಗಳನ್ನು ಅಪರಾಧ ಎಸಗುವವರೆಂಬ ಸಂದೇಹದ ವಲಯದಲ್ಲೇ ಇರಿಸಿದಂತೆ ಇಂದಿನ ಪ್ರಭುತ್ವ ಭಿನ್ನ ದನಿಗಳನ್ನು ಭಯೋತ್ಪಾದನೆ ಹಾಗೂ ದೇಶದ್ರೋಹವೆಂಬ ಹಣೆಪಟ್ಟಿ ಹಚ್ಚಿ ಕೂರಿಸಿದೆ. ಆಳುವ ಸರ್ಕಾರಗಳು ಅವು ಸಂಘಟಿತವಾಗಿರುವ ಸ್ವರೂಪದಿಂದಲೇ ಸದಾ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಾನೂನನ್ನು ತಮಗೆ ಬೇಕಾದಂತೆ ತಿರುಚುತ್ತವೆ.

ಆದರೆ ಇದು ಸಂವಿಧಾನ ಮತ್ತು ಅದು ಖಾತರಿಗೊಳಿಸುವ ಮೂಲಭೂತ ಹಕ್ಕುಗಳನ್ನು ಈ ಪ್ರಕ್ರಿಯೆಯಲ್ಲಿ ಮೂಲೆಗುಂಪಾಗಿಸುತ್ತದೆೆ. ಆದಾಗ್ಯೂ, ಇದನ್ನು ಸರಿಯಾದ ಐತಿಹಾಸಿಕ ಅನುಕ್ರಮಣಿಕೆಯಲ್ಲಿ ಇರಿಸಿ ಹೇಳುವುದಾದರೆ, ಸರ್ಕಾರಗಳು ಸಂವಿಧಾನದ ಕೂಸುಗಳು. ಯಾವಾಗ ಆಳುವ ಸರ್ಕಾರಗಳು ಸಂವಿಧಾನವನ್ನು ಎತ್ತಿಹಿಡಿಯುವ ಜನತೆಗೆ ಅದು ಕೊಡಮಾಡುವ ಹಕ್ಕುಗಳನ್ನು ಗೌರವಿಸುವ ಮೂಲಕ ಇವುಗಳನ್ನು ಬಲಪಡಿಸುವ ಅಗತ್ಯವನ್ನು ಬೇಕೆಂದೇ ಕಡೆಗಣಿಸುತ್ತಾ ಬರುತ್ತವೋ ಅವು ಜನತೆ, ಸಂವಿಧಾನ ಮತ್ತು ಇವುಗಳ ಕೂಸಾದ ಸರ್ಕಾರ ಇವುಗಳ ನಡುವಣ ಚಾರಿತ್ರಿಕ ಸಂಬಂಧವನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಸೋಲುತ್ತವೆ. ಈ ಭಿನ್ನದನಿಗಳ ದಮನ, ಅಂತಿಮವಾಗಿ ಯಾರು ಪ್ರಜಾಪ್ರಭುತ್ವದ ನೆಲೆಗಟ್ಟನ್ನೇ ಛಿದ್ರ ಮಾಡಲು ಯತ್ನಿಸುತ್ತಿದ್ದಾರೋ ಅವರನ್ನೇ ಛಿದ್ರವಾಗಿಸುತ್ತದೆ.

ಜಿ.ಎನ್.ದೇವಿ
(ಭಾರತದ ಪ್ರಸಿದ್ಧ ಚಿಂತಕರಲ್ಲಿ ಒಬ್ಬರಾದ ಜಿ.ಎನ್. ದೇವಿ ಅವರು, ಪೀಪಲ್ ಲಿಂಗ್ಯುಸ್ಟಿಕ್ಸ್ ಸರ್ವೇ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಅವರು ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿಂತನೆಗಳನ್ನು ಬರಹಗಳ ಮೂಲಕ ಮೂಡಿಸುತ್ತಾರೆ. ಚಳವಳಿಗಳ ಸಂಗಾತಿಯಾಗಿರುವ ಜಿ. ಎನ್. ದೇವಿ ದಕ್ಷಿಣಾಯನ ಚಳವಳಿಯ ಸಂಚಾಲಕರು ಕೂಡ.)

PC: Openthe Magazine

ಉಲ್ಲೇಖ:
(1) Emile Durkheim, The Rules of Sociological Method, Sarah A. Solovay and John H. Mueller (trans) and George E. C. Catlin (ed.), New York, The Free Press, 1938, p. 51


ಓದಿ: 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...