Homeಅಂಕಣಗಳುಬಹುಜನ ಭಾರತ; ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿರುವ ಸಮಾಜ

ಬಹುಜನ ಭಾರತ; ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿರುವ ಸಮಾಜ

- Advertisement -
- Advertisement -

ಬ್ರಿಟಿಷರ ನೇಣುಗಂಬಕ್ಕೆ ನಗುನಗುತ್ತಲೇ ಕೊರಳೊಡ್ಡಿದ್ದ ಆ ಸ್ವಾತಂತ್ರ್ಯ ಕ್ರಾಂತಿಯ ಕಿಡಿ ಉಸಿರಾಡಿದ್ದು ಇಪ್ಪತ್ಮೂರೇ ವರ್ಷ. ಉಕ್ಕು ಹರೆಯದ ಈ ಬಿಸಿ ಗುಂಡಿಗೆ ದಾಸ್ಯದ ವಿರುದ್ಧ ಮಾತ್ರವೇ ಅಲ್ಲ, ಸಮ ಸಮಾಜ, ಸಹಬಾಳುವೆಗಾಗಿ ಮಿಡಿದ ಪರಿ ಅಭೂತಪೂರ್ವ.

ಭಗತ್ ಸಿಂಗ್ ದೇಹ ಬಹು ಹಿಂದೆಯೇ ಮಣ್ಣು ಸೇರಿರಬಹುದು. ಆದರೆ ಕೋಮುವಾದ, ಅಮಾನವೀಯ ಅಸ್ಪೃಶ್ಯತೆ, ಧರ್ಮ-ಜಾತಿಗಳ, ಮೇಲು- ಕೀಳುಗಳ ನೆವದಲಿ ನಡೆವ ಕ್ರೌರ್ಯ-ಶೋಷಣೆ ವಿರುದ್ಧ ಆತ ಎತ್ತಿದ ದನಿ ಇಂದಿಗೂ ಪ್ರಸ್ತುತ.

ಬ್ರಿಟಿಷರು ಗಲ್ಲಿಗೇರಿಸಿದ್ದು ಕೇವಲ ಆತನ ದೇಹವನ್ನು. ಆದರೆ ಆತನ ಅಜರಾಮರ ಆತ್ಮವನ್ನು, ಸ್ವಸ್ಥ ಸಮಾಜ ಕುರಿತು ಆತ ಕಂಡ ಕನಸುಗಳನ್ನು, ಆತನ ವಿಚಾರಗಳನ್ನು ಅನುದಿನವೂ ಉರಿಕಂಬಕ್ಕೆ ಏರಿಸುತ್ತಿದ್ದೇವೆ.

’ಸಾಂಪ್ರದಾಯಿಕ ದಂಗೆಗಳು ಮತ್ತು ಅವುಗಳ ಇಲಾಜು’ ಎಂಬುದಾಗಿ 1927ರಲ್ಲಿ ಭಗತ್ ಬರೆದ ಲೇಖನ ಇಂದಿನ ಭಾರತದ ಸ್ಥಿತಿಗತಿಗೂ ಹಿಡಿದ ಕೈಗನ್ನಡಿ.

“…ಇಂಡಿಯಾದ ಇಂದಿನ ಪರಿಸ್ಥಿತಿ ಅತೀವವಾಗಿ ಉಲ್ಬಣಿಸಿದೆ. ಒಂದು ಧರ್ಮದ ಅನುಯಾಯಿಗಳು ಹಠಾತ್ತನೆ ಇತರೆ ಧರ್ಮಗಳ ವಿರುದ್ಧ ಕಡು ಹಗೆತನದ ಕತ್ತಿ ಹಿಡಿದಿದ್ದಾರೆ. ಹಿಂದು ಸಿಖ್ಖರೆಂಬ ಏಕೈಕ ಕಾರಣಕ್ಕೆ ಮುಸ್ಲಿಮರು ಹಿಂದು ಮತ್ತು ಸಿಖ್ಖರನ್ನೂ, ಮುಸಲ್ಮಾನರೆಂಬ ಕಾರಣಕ್ಕಾಗಿ ಹಿಂದು ಮತ್ತು ಸಿಖ್ಖರು ಮುಸಲ್ಮಾನರನ್ನೂ ಕ್ರೂರವಾಗಿ ಕೊಲ್ಲಲಾಗುತ್ತಿದೆ… ರಾಜಕೀಯ ನಾಯಕರು ನಿರ್ಲಜ್ಜರಾಗಿ ವರ್ತಿಸುತ್ತಿದ್ದಾರೆ. ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸುವ ಶಪಥ ತೊಟ್ಟಿರುವ ಮತ್ತು ಸಮಾನ ರಾಷ್ಟ್ರೀಯತೆ ಕುರಿತು ಹಗಲಿರುಳು ಭಾಷಣ ಮಾಡುವ ತಲೆಯಾಳುಗಳು ಒಂದೋ ಲಜ್ಜೆಯಿಂದ ತಲೆತಗ್ಗಿಸಿ ಬಾಯಿ ಹೊಲಿದುಕೊಂಡಿದ್ದಾರೆ ಇಲ್ಲವೇ ಧರ್ಮಾಂಧತೆಯ ದುಷ್ಟ ಗಾಳಿಯ ದಿಕ್ಕಿನತ್ತ ಓಲಾಡುತ್ತಿದ್ದಾರೆ… ತುಟಿ ಬಿಚ್ಚದೆ ಬೇಲಿಯ ಮೇಲೆ ಮುಖ ಮುಚ್ಚಿ
ಕುಳಿತಿರುವವರ ಸಂಖ್ಯೆಯೂ ಸಣ್ಣದೇನಲ್ಲ”.

ಕೋಮುವಾದದ ದಳ್ಳುರಿಗೆ ಎಣ್ಣೆ ಎರೆವ ಪತ್ರಿಕೆಗಳ ಕುರಿತು ಭಗತ್ ಹೇಳಿದ್ದು: “…ಕೋಮು ದಂಗೆಗಳಿಗೆ ಪ್ರಚೋದನೆ ನೀಡುವ ಇತರೆ ಪ್ರಮುಖ ಪಾತ್ರಧಾರಿಗಳ ಸಾಲಿಗೆ ಪತ್ರಕರ್ತರೂ ಸೇರುತ್ತಾರೆ. ಒಂದು ಕಾಲಕ್ಕೆ ಬಹುಗಣ್ಯ ಕಸುಬು ಎಂದು ಪರಿಗಣಿಸಲಾಗಿದ್ದ ಪತ್ರಿಕೋದ್ಯಮ ಈಗ ತಿಪ್ಪೆಯಾಗಿ ಬದಲಾಗಿದೆ. ಒಬ್ಬರ ವಿರುದ್ಧ ಮತ್ತೊಬ್ಬರು ತಲೆಬರೆಹಗಳಲ್ಲಿ ಕೂಗಿ ಕಿರುಚುತ್ತಾರೆ, ಪರಸ್ಪರರನ್ನು ಕೊಲ್ಲುವ ಉನ್ಮಾದಗಳನ್ನು ಜನರಲ್ಲಿ ಪ್ರಚೋದಿಸುತ್ತಿದ್ದಾರೆ… ಪತ್ರಿಕೆಗಳು ತೀವ್ರತರದ ಆಸ್ಫೋಟಕ ಮತ್ತು ಅತೀವ ಪ್ರಚೋದಕ ಲೇಖನಗಳನ್ನು ಪ್ರಕಟಿಸಿ ಕೋಮುವಾದೀ ಜ್ವಾಲೆಯನ್ನು ಹತ್ತು ಹಲವು ಸ್ಥಳಗಳಲ್ಲಿ ಭುಗಿಲೆಬ್ಬಿಸುತ್ತಿವೆ… ತಳಮಳ ತಳ್ಳಂಕಗಳ ಈ ಸ್ಥಿತಿಯಲ್ಲಿ ಸಮಚಿತ್ತವನ್ನು, ಸಮತೂಕವನ್ನು ಪ್ರದರ್ಶಿಸಿದ ಪತ್ರಕರ್ತರು ಕೆಲವೇ ಕೆಲವರು”.

“…ಜನತೆಯಲ್ಲಿ ಅರಿವು ಮೂಡಿಸಿ ಅವರ ಮೆದುಳುಗಳನ್ನು ನಿರ್ಮಲವಾಗಿ ಇರಿಸುವುದು, ಸಂಕುಚಿತವಾದದ ಬಿಲಗಳಿಂದ ಹೊರಗೆಳೆದು ತರುವುದು, ಕೋಮುವಾದೀ ಭಾವನೆಗಳನ್ನು ಕೆರೆದು ತೆಗೆದು ತೊಳೆದು ಪರಸ್ಪರ, ಸಾಮರಸ್ಯ ಮೂಡಿಸುವುದು ಪತ್ರಿಕೆಗಳ ಅಸಲು ಕರ್ತವ್ಯ….. ಬದಲಾಗಿ ಅರಿವುಗೇಡಿತನ, ಸಂಕುಚಿತ ಪಂಥವಾದ- ಕೋಮುವಾದಗಳನ್ನು ಜನರ ಮನಸುಗಳಲ್ಲಿ ಬಿತ್ತಿ ಗಲಭೆಗಳನ್ನು ಎಬ್ಬಿಸುವುದೇ ಅವರ ಮುಖ್ಯ ಗುರಿ ಎನ್ನಿಸುತ್ತಿದೆ. ಈಗಿನ ಇಂಡಿಯಾದ ಪರಿಸ್ಥಿತಿಯನ್ನು ನೋಡಿದರೆ ರಕ್ತಕಣ್ಣೀರು ಕಪಾಳಕ್ಕೆ ಇಳಿವುದಲ್ಲದೆ, ಕಟ್ಟಕಡೆಗೆ ಈ ದೇಶದ ಪರಿಸ್ಥಿತಿ ಏನಾದೀತು ಎಂಬ ಪ್ರಶ್ನೆ ಏಳುತ್ತದೆ”.

“ಜನ ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸಬೇಕಿದ್ದರೆ, ದೀನ ದರಿದ್ರರು ಮತ್ತು ರೈತರು ಮತ್ತು ದುಡಿಯುವ ವರ್ಗಗಳಿಗೆ ಬಂಡವಾಳಶಾಹಿಯೇ ಅವರ ಅಸಲು ಶತ್ರು ಎಂಬ ವಾಸ್ತವವನ್ನು ತಿಳಿಸಿ ಹೇಳಬೇಕಿದೆ. ಅವರ ಕೈಯಲ್ಲಿನ ದಾಳ ಆಗದಂತೆ, ಅವರ ಮೋಸ ಮರೆಗಳ ಹುನ್ನಾರಗಳಿಗೆ ಬಲಿಯಾಗದಂತೆ ಎಚ್ಚರಗೊಳಿಸಬೇಕಿದೆ. ಎಲ್ಲ ಜಾತಿ, ವರ್ಣ, ಜನಾಂಗ, ರಾಷ್ಟ್ರೀಯತೆಯ ಭೇದ ಭಾವವಿಲ್ಲದೆ ಒಗ್ಗಟ್ಟಿನಿಂದ ತಮ್ಮ ಹಕ್ಕುಗಳಿಗೆ ಹೋರಾಡಬೇಕೆಂಬ ಅರಿವನ್ನು ಎಲ್ಲ ಬಡವರಲ್ಲಿ ಮೂಡಿಸಬೇಕಿದೆ”.

ಬ್ರಿಟಿಷರ ಬಂಧಿಯಾಗಿ ಕಳೆದ ಬದುಕಿನ ಕಟ್ಟಕಡೆಯ ಎರಡು ವರ್ಷಗಳಲ್ಲಿ ಭಗತ್, ಮಾರ್ಕ್ಸ್‌ವಾದದ ಕಡೆ ನಡೆದಿದ್ದ. ಲಾಹೋರ್ ಒಳಸಂಚಿನ ಪ್ರಕರಣದಲ್ಲಿ 1930ರ ಜನವರಿ 21ರಂದು ವಿಚಾರಣೆಗೆಂದು ಕೋರ್ಟಿಗೆ ಹಾಜರಾಗಿದ್ದ ಭಗತ್ ಮತ್ತು ಸಂಗಾತಿಗಳು ಧರಿಸಿದ್ದು ಕೆಂಪು ಕೊರಳವಸ್ತ್ರಗಳನ್ನು. ಕೂಗಿದ್ದು ಸಮಾಜವಾದೀ ಕ್ರಾಂತಿ ಚಿರಾಯು ಆಗಲಿ… ಕಮ್ಯೂನಿಸ್ಟ್ ಇಂಟರನ್ಯಾಷನಲ್ ಚಿರಾಯು ಆಗಲಿ… ಚಿರಾಯುವಾಗಲಿ ಜನ ಜನತೆ… ಲೆನಿನ್ ಹೆಸರಿಗೆ ಅಳಿವಿಲ್ಲ… ಇಂಪೀರಿಯಲಿಸಮ್ಮಿಗೆ ಧಿಕ್ಕಾರ… ಇತರೆ ಇತ್ಯಾದಿ ಘೋಷಣೆಗಳನ್ನು.

ಕಡೆಯ ವರ್ಷಗಳ ಜೈಲುವಾಸದಲ್ಲಿ ಭಗತ್ ಓದಿನ ಬೀಸು, ಆತ ಬರೆದ 146 ಪುಟಗಳ ಜೈಲು ಟಿಪ್ಪಣಿಗಳಲ್ಲಿ ಪ್ರತಿಫಲಿಸಿದೆ. 108 ಲೇಖಕರ ಪುಸ್ತಕಗಳನ್ನು ಅರಗಿಸಿಕೊಂಡು ಬರೆದುಕೊಂಡ ಉಲ್ಲೇಖಗಳು ಮತ್ತು ಟಿಪ್ಪಣಿಗಳಿವು. ಎಂಗೆಲ್ಸ್‌ನ ಸಮಾಜವಾದ, ಯುಟೋಪಿಯನ್ ಅಂಡ್ ಸೈಂಟಿಫಿಕ್, ಕುಟುಂಬ, ಖಾಸಗಿ ಆಸ್ತಿಪಾಸ್ತಿ ಮತ್ತು ಪ್ರಭುತ್ವ, ಮಾರ್ಕ್ಸ್ ಮತ್ತು ಎಂಗೆಲ್ಸ್‌ನ ದಿ ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ, ಬಟ್ರ್ಯಾಂಡ್ ರಸೆಲ್, ಥಾಮಸ್ ಪೇನ್, ದೊಸ್ತೋವ್‌ಸ್ಕಿ, ಬುಖಾರಿನ್, ವ್ಹಿಟ್ಮ್ಯಾನ್, ಒಮರ್ ಖಯ್ಯಾಮನ ಕೃತಿಗಳಿಂದ ಧಾರಾಳ ಉಲ್ಲೇಖಗಳಿವೆ.

ಗಲ್ಲಿಗೇರುವ ಹಿಂದಿನ ವರ್ಷ ಭಗತ್ ಬರೆದ “ನಾನೇಕೆ ನಾಸ್ತಿಕ” ಮತ್ತು “ಎಳೆಯ ರಾಜಕೀಯ ಕಾರ್ಯಕರ್ತರಿಗೆ” ಕೃತಿಗಳಲ್ಲಿ ಲೆನಿನ್ನನ ಲೆಫ್ಟ್ ವಿಂಗ್ ಕಮ್ಯೂನಿಸಮ್, ಇಂಪೀರಿಯಲಿಸಮ್ ದಿ ಹೈಯೆಸ್ಟ್ ಸ್ಟೇಜ್ ಆಫ್ ಕ್ಯಾಪಿಟಲಿಸಂನ ಸ್ಪಷ್ಟ ಪ್ರಭಾವಗಳನ್ನು ಇತಿಹಾಸಕಾರರು ಕಂಡಿದ್ದಾರೆ.

“ಅಸಲು ಕ್ರಾಂತಿಕಾರಿ ಸೈನ್ಯಗಳಿರುವುದು ಹಳ್ಳಿಗಳಲ್ಲಿ ಮತ್ತು ಫ್ಯಾಕ್ಟರಿಗಳಲ್ಲಿ… ಅವರೆಂದರೆ ರೈತರು ಮತ್ತು ಕಾರ್ಮಿಕರು” – ನೇಣಿಗೇರಿದ ಎರಡು ತಿಂಗಳ ಮುನ್ನ 1931ರ ಫೆಬ್ರವರಿ ಎರಡರಂದು ಬರೆದ ‘To the young political workers’ ಲೇಖನದಲ್ಲಿ ಕಾಣಬರುವ ಈ ಸಾಲುಗಳು ಆತನ ಒಲವು ನಿಲುವುಗಳನ್ನು ನಿಚ್ಚಳಗೊಳಿಸುತ್ತವೆ.


ಇದನ್ನೂ ಓದಿ: ’ಡಿಸ್‌ಮ್ಯಾಂಟ್ಲಿಂಗ್ ಗ್ಲೋಬಲ್ ಹಿಂದುತ್ವ’ ಕೇಸರಿಕೂಟದಲ್ಲಿ ಕಿಚ್ಚು ಹಚ್ಚಿದ್ದು ಏಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...