ನೀಟ್ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಉಂಟಾಗುವ ಮಾನಸಿಕ ನೋವಿನ ಬಗ್ಗೆ ನನಗೆ ತಿಳಿದಿದೆ ಎಂದು ಬಹುಭಾಷಾ ನಟಿ ಸಾಯಿ ಪಲ್ಲವಿ ಹೇಳಿದ್ದಾರೆ. ಸ್ವತಃ ವೈದ್ಯರೂ ಆಗಿರುವ ಸಾಯಿ ಪಲ್ಲವಿ, ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ನೀಟ್ ಆತ್ಮಹತ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಜೊತೆಗೆ, ನಾನು ಯಾವತ್ತಿದ್ದರೂ ವಿದ್ಯಾರ್ಥಿಗಳ ಪರ ಎಂದು ಹೇಳಿದ್ದಾರೆ.
“ವೈದ್ಯಕೀಯವು ಸಮುದ್ರದಂತಹ ಅಧ್ಯಯನವಾಗಿದೆ. ಪರೀಕ್ಷೆಯ ಸಮಯದಲ್ಲಿ ಪ್ರಶ್ನೆಗಳು ಎಲ್ಲಿಂದ ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ನಾವು ಮಾನಸಿಕ ಖಿನ್ನತೆಗೆ ಒಳಗಾಗುತ್ತೇವೆ. ಪೋಷಕರು ಮತ್ತು ಸ್ನೇಹಿತರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಆತ್ಮವಿಶ್ವಾಸ ತುಂಬಬೇಕು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘ನೀಟ್-2021’ ಪರೀಕ್ಷೆ – ವಿದ್ಯಾರ್ಥಿಗಳು ತಿಳಿದಿರಲೇ ಬೇಕಾದ ಕೆಲ ಹೊಸ ನಿಯಮಗಳಿವು!
“ನನ್ನ ಕುಟುಂಬದಲ್ಲಿ ಕೂಡಾ ನೀಟ್ ಆತ್ಮಹತ್ಯೆಯಂತಹ ದುರಂತದ ಸಂಭವಿಸಿದೆ. ಅಂಕಗಳು ಕಡಿಮೆಯಾಗಿದ್ದಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಅಲ್ಲಿಯವರೆಗೆ ಅಷ್ಟು ಕಡಿಮೆ ಅಂಕ ಪಡೆದಿರಲಿಲ್ಲ. ಇದರಿಂದಾಗಿ ಅವರಿಗೆ ಕೀಳರಿಮೆ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡರು” ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
“ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಅವರ ಕುಟುಂಬಕ್ಕೆ ಅರಗಿಸಿಕೊಳ್ಳಲಾಗುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ನಾನು ಸುಲಭವಾಗಿ ಹೇಳಬಲ್ಲೆ. ಆದರೆ ಆ ಸ್ಥಾನದಲ್ಲಿ ಇರುವವರಿಗೆ ಮಾತ್ರ ಅದರ ನೋವು ತಿಳಿದಿದೆ. ಅವರು ಯಾಕೆ ಆ ತೀರ್ಮಾನಕ್ಕೆ ಬಂದರು ಎಂದು ಕೂಡಾ ನೋಡಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ಪೋಷಕರು ಮತ್ತು ಸ್ನೇಹಿತರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಆತ್ಮವಿಶ್ವಾಸ ತುಂಬಬೇಕು. ಹದಿನೆಂಟು ವರ್ಷದೊಳಗಿನ ವಿದ್ಯಾರ್ಥಿಗಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೃದಯ ವಿದ್ರಾವಕ. ನನಗೆ ಈ ವಿದ್ಯಾರ್ಥಿಗಳ ನೋವು ಮತ್ತು ಅವರ ಸಮಸ್ಯೆಗಳು ತಿಳಿದಿದೆ. ಈ ವಿಷಯದಲ್ಲಿ ನಾನು ಯಾವಾಗಲೂ ವಿದ್ಯಾರ್ಥಿಗಳ ಪರ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಹುಪಾಲು ವಿದ್ಯಾರ್ಥಿಗಳಿಗೆ ‘ನೀಟ್’ ಬೇಡ: ನ್ಯಾಯಮೂರ್ತಿ ರಾಜನ್