ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ.
ಮಾರುತಿ ಧಕ್ನೆ(42) ವಿರುದ್ಧ ದೂರು ದಾಖಲಾಗಿದ್ದು, ಅವರು ಚಿಪ್ ಬಳಸಿ ಇವಿಎಂಗಳನ್ನು ತಿರಚಬಹುದು ಎಂದು ಹೇಳಿ ಹಣವನ್ನು ಕೋರಿದ್ದಾರೆ ಎಂದು ಆರೋಪಿಸಲಾಗಿದೆ. ನಿರ್ದಿಷ್ಟ ಅಭ್ಯರ್ಥಿಯ ಪರವಾಗಿ ಈ ರೀತಿಯಾಗಿ ಮಾಡುತ್ತೇವೆ ಎಂದು ಮಾರುತಿ ಧಕ್ನೆ ಹೇಳಿರುವ ಬಗ್ಗೆ ಪಿಟಿಐ ವರದಿ ಮಾಡಿದೆ. ಮಹಾರಾಷ್ಟ್ರದ ಪಥರ್ಡಿಯ ನಿವಾಸಿ ಧಕ್ನೆ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಉಧಮ್ಪುರದಲ್ಲಿ ನೆಲೆಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ನಮ್ಮ ಆರಂಭಿಕ ತನಿಖೆಯ ವೇಳೆ ಅವರು ದೊಡ್ಡ ಮಟ್ಟದಲ್ಲಿ ಸಾಲವನ್ನು ಹೊಂದಿದ್ದಾರೆಂದು ಹೇಳಿದ್ದಾರೆ, ಆದ್ದರಿಂದ ಹಣವನ್ನು ಗಳಿಸಲು ಈ ಯೋಜನೆಯನ್ನು ಹಾಕಿಕೊಂಡಿದ್ದರು. ಮಾರುತಿ ಧಕ್ನೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಮತ್ತು 511ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಛತ್ರಪತಿ ಸಂಭಾಜಿನಗರ ಪೊಲೀಸ್ ಆಯುಕ್ತ ಮನೋಜ್ ಲೋಹಿಯಾ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು, ಇವಿಎಂಗಳನ್ನು ತಿರುಚಲು ಶಿವಸೇನಾ(ಯುಬಿಟಿ) ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಜಮ್ಮುವಿನಲ್ಲಿ ನಿಯೋಜಿಸಲಾದ ಸೇನಾ ಯೋಧನನ್ನು ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ. ಯೋಧ ಸಾಲವನ್ನು ಹೊಂದಿದ್ದರು. ಇವಿಎಂಗಳ ಬಗ್ಗೆ ಅವರಿಗೆ ಯಾವುದೇ ಜ್ಞಾನ ಇರಲಿಲ್ಲ, ಅವರು ಕೇವಲ ಮೋಸ ಮಾಡುವ ಉದ್ದೇಶದಿಂದ ಈ ರೀತಿ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
ಅಂಬಾದಾಸ್ ದಾನ್ವೆ ಅವರನ್ನು ಪುಣೆಯಲ್ಲಿ ಒಮ್ಮೆ ಭೇಟಿಯಾಗಿದ್ದ ಮಾರುತಿ ಧಕ್ನೆ, ಇಂದು ಅವರನ್ನು ಭೇಟಿಯಾಗಿ ಪಕ್ಷದ ಮುಖಂಡರಿಂದ ಹಣ ಪಡೆಯಲು ಬಂದಿದ್ದಾರೆ. ಅವರಿಗೆ 1 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿ ಅವರನ್ನು ಮತ್ತೆ ಕರೆಸಲಾಗಿದೆ. ಈ ಬಗ್ಗೆ ಅಂಬಾದಾಸ್ ದನ್ವೆ ಸಹೋದರ ನೀಡಿದ ದೂರಿನ ಆಧಾರದಲ್ಲಿ ಅವರನ್ನು ಆರ್ಥಿಕ ಅಪರಾಧ ವಿಭಾಗದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಲೋಕಸಭೆ ಚುನಾವಣೆಯ ಹಿನ್ನೆಲೆ ಈ ಹಿಂದೆ ಔರಂಗಾಬಾದ್ ಎಂದು ಕರೆಯಲಾಗುತ್ತಿದ್ದ ಛತ್ರಪತಿ ಸಂಭಾಜಿನಗರ ಕ್ಷೇತ್ರದಲ್ಲಿ 4ನೇ ಹಂತದಲ್ಲಿ ಮತದಾನ ಮೇ 13ರಂದು ನಡೆಯಲಿದೆ. ಇವಿಎಂ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಭುಗಿಲೆದ್ದಿರುವ ಮಧ್ಯೆ ಈ ಬೆಳವಣಿಗೆ ನಿಜಕ್ಕೂ ಪ್ರಕರಣದ ನಿಷ್ಪಕ್ಷಪಾತ ತನಿಖೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತಿದೆ.
ಇದನ್ನು ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ರಿಕೆಟ್ ತಂಡದಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುತ್ತದೆ: ಮತ್ತೆ ದ್ವೇಷ ಬಿತ್ತಿದ ಮೋದಿ