ನಿವೃತ್ತ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎ.ಕೆ.ರಾಜನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ‘ನೀಟ್’(ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಪರಿಣಾಮದ ಕುರಿತ 165 ಪುಟಗಳ ವರದಿಯನ್ನು ಸಲ್ಲಿಸಿದೆ. ಮುಖ್ಯಮಂತ್ರಿಗೆ ಅದರ ಪ್ರಮುಖ ಅಂಶಗಳ ಬಗ್ಗೆ ತಿಳಿಸಲಾಗಿದೆ ಎಂದು ನ್ಯಾಯಮೂರ್ತಿ ರಾಜನ್ ವರದಿಯನ್ನು ಸಿಎಂಗೆ ಹಸ್ತಾಂತರಿಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ದತ್ತಾಂಶವನ್ನು ಆಧರಿಸಿದ ಮತ್ತು ವೈಯಕ್ತಿಕ ಅಭಿಪ್ರಾಯಗಳಿಲ್ಲದ ವರದಿಯು ಭಾಗೀದಾರರ(ವಿದ್ಯಾಥಿಗಳು, ಶಿಕ್ಷಣ ಸಂಸ್ಥೆಗಳು, ಪೋಷಕರು) 86,000 ಪ್ರಾತಿನಿಧ್ಯಗಳನ್ನು ಒಳಗೊಂಡಿದೆ. ಬಹುಪಾಲು ಜನರು ನೀಟ್ ಬೇಡ ಎಂದು ಹೇಳಿದ್ದಾರೆ ಎಂದು ರಾಜನ್ ತಿಳಿಸಿದ್ದಾರೆ.
ಇದನ್ನೂ ಓದಿ: ಸೆಪ್ಟೆಂಬರ್ 12 ರಂದು ‘ನೀಟ್ ಯುಜಿ 2021’ ಪರೀಕ್ಷೆ – ಜುಲೈ 13 ರಿಂದ ಅರ್ಜಿ ಪ್ರಾರಂಭ
ರಾಷ್ಟ್ರೀಯ ಪರೀಕ್ಷೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾತನಾಡಿದ ರಾಜನ್, ಗ್ರಾಮೀಣ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ, ಮಾನಸಿಕ, ಆರ್ಥಿಕ ಮತ್ತು ಕಾನೂನು ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳಿವೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪರೀಕ್ಷೆಯು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಯೇ ಎಂದು ವಿಶ್ಲೇಷಿಸಲು ಕಳೆದ ತಿಂಗಳು ಮುಖ್ಯಮಂತ್ರಿ ಸ್ಟಾಲಿನ್ ಅವರು ಈ ಸಮಿತಿಯನ್ನು ರಚಿಸಿದ್ದರು. ಒಂದು ವೇಳೆ ಸಮಸ್ಯೆ ಇದ್ದರೆ, ಪರಿಹಾರ ಕ್ರಮಗಳು ಮತ್ತು ಪರ್ಯಾಯ ಪ್ರವೇಶ ವಿಧಾನವನ್ನು ಸಹ ಈ ಸಮಿತಿ ಸೂಚಿಸಲಿದೆ.
ಇದನ್ನೂ ಓದಿ: ನೀಟ್-ಪಿಜಿ ಪರೀಕ್ಷೆ 4 ತಿಂಗಳು ಮುಂದೂಡಿಕೆ: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಕೊರೊನಾ ಕರ್ತವ್ಯಕ್ಕೆ
“ಶಿಫಾರಸುಗಳನ್ನು ಪರಿಗಣಿಸಿದ ನಂತರ ಸರ್ಕಾರವು ಮುಂದಿನ ಕ್ರಮವನ್ನು ಪ್ರಾರಂಭಿಸುತ್ತದೆ” ಎಂದು ತಮಿಳುನಾಡು ಸರ್ಕಾರ ವರದಿಯ ಕುರಿತು ಹೇಳಿದೆ. ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ತಮಿಳುನಾಡಿಗೆ ಐತಿಹಾಸಿಕ ಕರ್ತವ್ಯವಿದೆ. ನೀಟ್ನ ಪರಿಣಾಮಗಳನ್ನು ಪರಿಹರಿಸಲು ಸರ್ಕಾರ ನಿರ್ಧರಿಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ಸಮಿತಿಯನ್ನು ರದ್ದುಗೊಳಿಸುವಂತೆ ಕೋರಿ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಲಾಗಿತ್ತು.
ತಮಿಳುನಾಡಿನಲ್ಲಿ, ಆಡಳಿತಾರೂಢ ಡಿಎಂಕೆ ಮತ್ತು ಪ್ರತಿಪಕ್ಷ ಎಐಎಡಿಎಂಕೆ ಎರಡು ಪಕ್ಷಗಳೂ ನೀಟ್ ಅನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದೆ. ಈ ಪರೀಕ್ಷೆಯು ಗ್ರಾಮೀಣ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯವನ್ನು ನಿರಾಕರಿಸುತ್ತದೆ ಎಂದು ಈ ಪಕ್ಷಗಳು ಆರೋಪಿಸಿತ್ತಿವೆ.
ಇದನ್ನೂ ಓದಿ: ಇದು ನೀಟ್ ಪರೀಕ್ಷೆ ನಡೆಸಲು ಸರಿಯಾದ ಸಮಯವೆ?: ಕೇಂದ್ರಕ್ಕೆ ಎಂ. ಕೆ. ಸ್ಟಾಲಿನ್