Homeಮುಖಪುಟಪುನೀತ್ ನುಡಿನಮನ; ಕರ್ನಾಟಕದ ಮನೆಮಗನ ನಿರ್ಗಮನ

ಪುನೀತ್ ನುಡಿನಮನ; ಕರ್ನಾಟಕದ ಮನೆಮಗನ ನಿರ್ಗಮನ

- Advertisement -
- Advertisement -

‘ಜೊತೆಗಿರದ ಜೀವ ಎಂದಿಗೂ ಜೀವಂತ’ ಪುನೀತ್ ರಾಜ್‌ಕುಮಾರ್ ನಮ್ಮನಗಲಿದ ದಿನ ಮೇಷ್ಟ್ರು ಬರಗೂರು ರಾಮಚಂದ್ರಪ್ಪನವರು ಪ್ರತಿಕ್ರಿಯಿಸಿದ ಬಗೆಯಿದು. ಹೌದು, ಸಾವು ನಮ್ಮ ಬದುಕಿನ ಸಹಜ ವಿದ್ಯಮಾನ. ಸತ್ತ ಮೇಲೆ ಎಲ್ಲರೂ ದಿವಂಗತರಾಗುತ್ತಾರೆ. ಆದರೆ ಸಾವು ಕೆಲವರನ್ನು ನಮ್ಮಿಂದ ಕಿತ್ತುಕೊಂಡಾಗ ಇದ್ದಕ್ಕಿದ್ದಂತೆ ಅವರು ನಿಧನರಾದರು ಎಂದು ನಂಬಲು ಹಲವು ದಿನಗಳು ಬೇಕಾಗುತ್ತವೆ. ಪುನೀತ್ ಸಾವು ಇಂತಹ ಮರ್ಮಾಘಾತವನ್ನು ಉಂಟುಮಾಡಿದೆ. ಜನರ ಪ್ರತಿಕ್ರಿಯೆಗಳನ್ನು ನೋಡಿದರೆ ಕರ್ನಾಟಕವು ತನ್ನ ಮನೆಯ ಮಗನನ್ನು ಕಳೆದುಕೊಂಡಿದೆ ಎಂದು ಭಾಸವಾಗುತ್ತಿದೆ.

ಕರ್ನಾಟಕದಲ್ಲಿ ಅಭಿನಯಕಲೆ, ಗಾಯನ ಮತ್ತು ಸಜ್ಜನಿಕೆ ಹೀಗೆ ಹಲವು ಅರ್ಥಗಳಿಗೆ ಸಂವಾದಿಯಾಗಿ ಒಂದು ’ವಿಶ್ವವಿದ್ಯಾಲಯ’ ಎಂದೇ ಡಾ. ರಾಜ್ ಅವರನ್ನು ಗುರುತಿಸಲಾಗುತ್ತದೆ. ಈ ಮುತ್ತುರಾಜನ ಕೊನೆಯ ಮಗ ಹುಟ್ಟಿದಾಗ ’ಲೋಹಿತ’ನಾಗಿ, ಬೆಳೆದಂತೆಲ್ಲಾ ’ಪುನೀತ’ನಾದರೂ ’ಅಪ್ಪು’ವಾಗಿ ವಾತ್ಸಲ್ಯದ, ಅಭಿಮಾನದ ಭಾವವಾಗಿ ಉಳಿದುಹೋದದ್ದು ಈ ಕ್ಷಣಕ್ಕೆ ಚರಿತ್ರೆ.

ರಾಜ್‌ಕುಮಾರ್ ಎನ್ನುವ ಕಲಾವಿದನೊಂದಿಗೆ ಕನ್ನಡ ಸಿನಿಮಾ, ಕನ್ನಡ ಸಮಾಜ, ಕನ್ನಡದ ಅಭಿಮಾನ ಎನ್ನುವುದೆಲ್ಲ ಪರಸ್ಪರ ಎಂಬಂತೆ ವಿಶಿಷ್ಟವಾಗಿಯೂ ಜೊತೆಜೊತೆಗೆ ಬೆಳೆದದ್ದನ್ನು ಎಂದಿಗೂ ಯಾರೂ ನಿರಾಕರಿಸುವಂತಿಲ್ಲ. ಈ ನೆಲದ ಶ್ರಮಿಕ ಸಮುದಾಯವನ್ನು ಪ್ರತಿನಿಧಿಸುವ ನಟನೊಬ್ಬ ’ಕನ್ನಡಕ್ಕೊಬ್ಬನೇ ರಾಜ್ ಕುಮಾರ್’ ಎಂಬಂತೆ ಬೆಳೆದದ್ದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಅಂತೆಯೇ ಅದು ಹೂವಿನ ಹಾದಿಯೂ ಆಗಿರಲಿಲ್ಲ. ಅವೆಷ್ಟೋ ಸಂಕಟ ಅವಮಾನಗಳನ್ನು ಮೀರಿ ಬೆಳೆದ ’ಬೇಡರ ಕಣ್ಣಪ್ಪ’ ’ದೇವತಾ ಮನುಷ್ಯ’ನಾದದ್ದು ನಿರಂತರವಾದ ಶ್ರಮದಿಂದ ಮತ್ತು ಬದ್ಧತೆಯ ಭಾವದಿಂದ. ಇಂತಹ ವ್ಯಕ್ತಿತ್ವವನ್ನು ’ಬೆವರಿನ ಮನುಷ್ಯ’ ಎಂದು ಬರಗೂರರು ಗುರುತಿಸುವುದಿಲ್ಲಿ ಉಲ್ಲೇಖಾರ್ಹ. ಇಂತಹ ವ್ಯಕ್ತಿತ್ವದಿಂದ, ಪರಿಧಿಯಿಂದ ಬಂದ ಮೂರು ಮಕ್ಕಳು ನಟನೆಯನ್ನೇ ವೃತ್ತಿಯಾಗಿಸಿಕೊಂಡದ್ದು ಕನ್ನಡ ಸಿನಿಮಾರಂಗದ ದಾಖಲೆಯೂ ಹೌದು. ಮೂವರದ್ದೂ ವಿಭಿನ್ನ ಹಾದಿ, ಅದರಲ್ಲಿ ಅಪ್ಪುವಿನದು ಮತ್ತಷ್ಟು ವಿಭಿನ್ನ.

ಬೆಳೆದಂತೆಲ್ಲಾ ರಾಜ್‌ಕುಮಾರನ ಮಗನೆಂಬ ಹಿರಿಮೆ, ತುಂಟತನ ಉಢಾಫೆಗಳನ್ನೆಲ್ಲಾ ಆಗಾಗ ನೆನಪು ಮಾಡಿಕೊಂಡ ಪುನೀತ್ ಆ ಬಗೆಗೆ ಸಾಕಷ್ಟು ಆತ್ಮಾವಲೋಕನ ಮಾಡಿಕೊಂಡದ್ದು ನಮಗೆಲ್ಲಾ ತಿಳಿದ ವಿಷಯ. ಹೌದು. ಸಹಜವಾದ ಬದುಕಿನ ಕ್ರಮವಿದು. ಬಹಳ ಸಲ ಪುನೀತ್ ರಾಜ್‌ಕುಮಾರ್ ನಮ್ಮ ಮನೆಯ ಮಗನಾದದ್ದು ಸದಾ ಅಪ್ಪುವಾಗಿಯೇ ಉಳಿದದ್ದು ಹೀಗೆ ಸರಳವಾಗಿ, ಸಹಜವಾಗಿ, ಬಹು ಜನರ ಬದುಕಿನೊಂದಿಗೆ ಮಿಳಿತವಾಗುತ್ತಲೇ ಬದುಕಿದ ಕಾರಣದಿಂದ ಎನ್ನುವುದನ್ನು ನಾವು ಮರೆಯುವುದು ಹೇಗೆ? ‘ನೀವೆಸೆದ ಚಿಲ್ಲರೆಯನ್ನು ಹಣೆಯಲ್ಲಿ ಎತ್ತಿಕೊಂಡ ಮಗ ನಾನು’ ಎನ್ನುವ ಸಾಲೊಂದು ಅಪ್ಪುವಿನ ಹಾಡಿನಲ್ಲಿದೆ. ಹೀಗೆ ಹೇಳಿಕೊಂಡ ಪ್ರೀತಿಯ ಎದೆಗಾರಿಕೆ ಸಾಮಾನ್ಯವಲ್ಲ. ಹಾಗಾಗಿಯೇ ಮತ್ತೆಮತ್ತೆ ‘ಅಭಿಮಾನಿಗಳೇ ನಮ್ಮನೆ ದೇವ್ರು’ ಎನ್ನುವುದು ಪ್ರತಿಧ್ವನಿಸಿದಂತಾಗುತ್ತದೆ. ‘ನೀವೇ ನನಗೆ ಹೆಸರಿಟ್ಟವರು’ ಎಂಬಲ್ಲಿ ಎಲ್ಲರ ಮನೆಯ ಮಗನಾಗುವ ಭಾವವಾಗುತ್ತದೆ. ‘ತೊಟ್ಟಿಲು ತೂಗಿ ನನ್ನ ಬೆಳೆಸಿದಿರಮ್ಮಾ ನಿಜ್ವಾಗ್ಲೂ ನಿಮ್ಮ ಮನೆ ಮಗ ನಾನು’ ಎಂಬ ಸಾಲುಗಳು ಕರ್ನಾಟಕದಾದ್ಯಂತ ಕೋಟ್ಯಂತರ ತಾಯಂದಿರು ಅಪ್ಪು ನಮ್ಮ ಮನೆಯ ಮಗ ಎಂದು ಭಾವಿಸಲು ಕಾರಣವಾಗಿರಬಹುದು. ತುಸು ಭಾವುಕ ಎನ್ನಿಸಬಹುದಾದರೂ ಹೀಗೆ ನಡೆದದ್ದು ಸುಳ್ಳಲ್ಲ. ಇಂದಿಗೆ ನಮ್ಮ ನಡುವೆ ಸಂಬಂಧಗಳೆಲ್ಲಾ ಸಂಕೀರ್ಣವಾಗಿ, ಯಾಂತ್ರಿಕಗೊಳ್ಳುತ್ತಿವೆ ಎನ್ನಿಸುತ್ತಿರುವ ಹೊತ್ತಿಗೂ ’ಅಪ್ಪು’ ಎನ್ನುವ ಹರೆಯದ ಮಗನನ್ನು ಕಳೆದುಕೊಂಡು ಮಕ್ಕಳಿಂದ ವೃದ್ಧರಾದಿಯಾಗಿ ಎಲ್ಲರೂ ಕಣ್ಣೀರಿಟ್ಟಾಗ, ಮತ್ತೆಮತ್ತೆ ಅವನನ್ನು ದೈಹಿಕವಾಗಿ ನಮ್ಮ ನಡುವೆ ಇಲ್ಲ ಎನ್ನುವುದನ್ನು ನಂಬಲಿಕ್ಕಾಗದ ಸಂಗತಿ.

ಬಾಲನಟನಾಗಿ ವಸಂತಗೀತ, ಭಾಗ್ಯವಂತ, ಎರಡು ನಕ್ಷತ್ರಗಳು, ಚಲಿಸುವ ಮೋಡಗಳು, ಯಾರಿವನು ಚಿತ್ರಗಳಲ್ಲಿ ನಟಿಸಿದ ಆ ಪುಟ್ಟ ಹುಡುಗನ ಲವಲವಿಕೆ ಇನ್ನೂ ನೆನಪಿಂದ ಮಾಸೇ ಇಲ್ಲ. ಪರಶುರಾಮದಲ್ಲಿ ದಿಢೀರನೆ ಸ್ವಲ್ಪ ದೊಡ್ಡವನಾದ ಹುಡುಗನನ್ನು ಕಂಡು ಅಚ್ಚರಿ ಪಡುತ್ತಿದ್ದಾಗ ನಡುವೆಯೇ ಆತನೇ ’ಅಪ್ಪು’ವಾಗಿ ಯುವ ನಾಯಕನಾದದ್ದು ಕಾಲದ ವೇಗವನ್ನು ಅನುಮಾನದಿಂದಲೇ ನೋಡುವಂತೆ ಮಾಡಿದ್ದು ಸುಳ್ಳಲ್ಲ. ಅಪ್ಪುವಿನ ಹುಡುಗುತನ, ’ಅಭಿ’ಯಲ್ಲಿನ ಸಾಹಸ, ’ವೀರ ಕನ್ನಡಿಗ’ನ ಅನ್ವರ್ಥ ಹಲವಾರು ಸಿನಿಮಾಗಳು ಹತ್ತಾರು ಪಾತ್ರಗಳು; ಮಿಲನ, ಪೃಥ್ವಿ, ಅರಸುವಿನಂತಹ ಸಿನಿಮಾಗಳ ಪಾತ್ರಗಳು ಪುನೀತ್‌ನಿಂದಷ್ಟೇ ಸಾಧ್ಯ ಎನ್ನುವಂತೆ ರೂಪುಗೊಂಡವು. ಪಾತ್ರದಿಂದ ಪಾತ್ರಕ್ಕೆ, ಚಿತ್ರದಿಂದ ಚಿತ್ರಕ್ಕೆ ‘ವಾವ್!’ ಎನ್ನುವಂತೆ ಅಭಿಮಾನಿಗಳ ಮುಂದೆಯೇ ಬೆಳೆಯುತ್ತಾ ಸಾಗಿದ ಅಪ್ಪು ಹೀಗೆ ಇದ್ದಕ್ಕಿದ್ದಂತೆ ಹೇಳದೇ ಕೇಳದೆ ಹೋದದ್ದಕ್ಕೆ ಯಾರನ್ನು ಹೊಣೆ ಮಾಡುವುದು? ಯಾರನ್ನು ಪ್ರಶ್ನಿಸುವುದು? ಇವೆಲ್ಲಾ ಉತ್ತರವೇ ಇಲ್ಲದ ಪ್ರಶ್ನೆಗಳು….

ವರನಟನ ಪುತ್ರರೆಂಬ ಸುವರ್ಣ ಚೌಕಟ್ಟಿನ ವಾಸ್ತವ ಅವರನ್ನು ಆವರಿಸಿಕೊಂಡಿದ್ದನ್ನು ಮೀರಿ ಬೆಳೆಯುವುದು ಖಂಡಿತವಾಗಿಯೂ ಸುಲಭವಾಗಿರಲ್ಲ ಮತ್ತುದು ಸಾಮಾನ್ಯ ಸಂಗತಿಯೂ ಅಲ್ಲ. ಅದನ್ನು ಮೀರಿ ಬೆಳೆದ ಸಹೋದರ ಶಿವರಾಜ್ ಕುಮಾರ್ ದಾರಿಯಲ್ಲಿಯೇ ಬೆಳೆದ ಪುನೀತ್ ಅದನ್ನು ಬೇಗನೇ ಮೈಗೂಡಿಸಿಕೊಂಡರು. ಹಾಗಾಗಿಯೇ ಅಭಿಮಾನಿಗಳು ಅವರನ್ನು ’ಪವರ್ ಸ್ಟಾರ್’ ಎಂದು ಕರೆದದ್ದು ಇರಬಹುದು.

ಸಾಮಾನ್ಯವಾಗಿ ಯಶಸ್ಸು ಎನ್ನುವುದೇ ಒಂದು ಅಮಲೇರಿದ ಕುದುರೆಯಂತೆ. ಅದು ಸಾಕಷ್ಟು ಭ್ರಮೆಗಳನ್ನು ಅಹಂಕಾರಗಳನ್ನು ತುಂಬಿಬಿಡುತ್ತದೆ. ಅಂತಹ ಉದಾಹರಣೆಗಳು ನಮ್ಮ ಕಣ್ಮುಂದೆ ಸಾಕಷ್ಟಿವೆ. ಆದರೆ ಸದಾ ನೆಲದ ಕಡೆಗೆ ಕಣ್ಣಾಗಿ ಎಲ್ಲವನ್ನು ವಿಶ್ವಾಸ, ಹೃದಯವಂತಿಕೆ ಮತ್ತು ವಿನಯದಿಂದಲೇ ಸ್ವೀಕರಿಸುತ್ತಾ ಜೀವನ ಪ್ರೀತಿಯನ್ನು ಪುನೀತ್ ಉಳಿಸಿಕೊಂಡದ್ದು ಸಾಮಾನ್ಯ ಸಂಗತಿಯಲ್ಲ. ಮತ್ತೆ ಮತ್ತೆ ’ಕನ್ನಡದ ಕೋಟ್ಯಾಧಿಪತಿ’ಯಲ್ಲಿ ನಿರಂತರವಾಗಿ ತನ್ನತನವನ್ನು ದಾಖಲಿಸಿಕೊಂಡ ಪುನೀತ್ ರಾಜ್‌ಕುಮಾರ್‌ನನ್ನು ಅವಶ್ಯ ನೆನೆಯಬೇಕು. ಆ ತನ್ನತನ ಇಲ್ಲವಾಗಿದ್ದರೆ ’ಕೌನ್ ಬನೇಗಾ ಕರೋಡ್‌ಪತಿ’ಯ ಅಮಿತಾಬ್‌ರಂತಹ ದೊಡ್ಡ ಪ್ರಭಾವಳಿಯಿಂದ ತಪ್ಪಿಸಿಕೊಳ್ಳುವುದು ಖಂಡಿತವಾಗಿ ಸಾಧ್ಯವಾಗುತ್ತಿರಲಿಲ್ಲ. ತನ್ನ ನಡವಳಿಕೆಯಿಂದ ತನ್ನಪ್ಪನನ್ನು ನೆನಪಿಸುತ್ತಿದ್ದ ಪುನೀತ್ ರಾಜ್‌ಕುಮಾರ್ ಖಂಡಿತವಾಗಿ ಕರ್ನಾಟಕದ ’ಯುವರತ್ನ’ನಾಗುವ ಅನ್ವರ್ಥವಾಗಿದ್ದು ಸುಳ್ಳಲ್ಲ.

ಪುನೀತ್ ಮೌನವಾಗಿಯೇ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದ್ದುದು, ಹೊಸಬರನ್ನು, ಹೊಸತನವನ್ನು ಗೌರವಿಸುತ್ತಿದ್ದ ನಿಲುವು, ನಿರಂತರವಾಗಿ ಸೃಜನಶೀಲತೆಗೆ ತೆರೆದುಕೊಳ್ಳುತ್ತಿದ್ದ ಬಗೆಯೆಲ್ಲವೂ ಈಗ ಪರದೆ ಸರಿದಂತೆ ನಮ್ಮೆದುರು ಕಾಣುತ್ತಿರುವಾಗ ಈ ಬಗೆಯ ಯಾವ ಮಾತುಗಳೂ ಉತ್ಪ್ರೇಕ್ಷೆಯಲ್ಲ ಎನ್ನುವುದು ಸ್ಪಷ್ಟವಾಗಬಹುದು.

ಒಂದು ಕಾಲಕ್ಕೆ ಸಿನಿಮಾ ಮಂದಿರಗಳು ನಮ್ಮ ಜನರ ಮುಖ್ಯ ಆಕರ್ಷಣೆಯೂ, ಬದುಕಿನ ನಿಲುವುಗನ್ನಡಿಯೂ ಆಗಿದ್ದವು. ಜನ ಅಲ್ಲಿ ನೇರ ಭಾಗಿಗಳಾಗಿ ತಮ್ಮನ್ನು ಸಿನಿಮಾ ಪಾತ್ರ, ಸನ್ನಿವೇಶ, ಹಾಡುಗಳು ಎಂಬೆಲ್ಲಾ ಬಗೆಯಲ್ಲಿ ಕಂಡುಕೊಳ್ಳುತ್ತಿದ್ದ ಕಾಲ ಮರೆಯಾಗಿದೆ. ಇಂದು ವಾಣಿಜ್ಯ ಸಂಕಿರಣಗಳೆಂಬ ಮಾಲ್‌ಗಳಲ್ಲಿ ಕನ್ನಡ ಸಿನೆಮಾಗಳ ಪ್ರದರ್ಶನವೇ ಅಪರೂಪವಾಗುತ್ತಿದೆ. ಇಂತಹ ಸಮಯದಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ ಕನ್ನಡ ಸಿನಿಮಾಗಳನ್ನು ನೋಡಲು ಜನ ಕುಟುಂಬ ಸಮೇತರಾಗಿ ಬರುವಂತೆ ಮಾಡುವುದಕ್ಕೆ ಪುನೀತ್ ಸಿನಿಮಾಗಳು ಸಹಕರಿಸವೆ.

ಅಪ್ಪನಂತೆ ಮಗನೂ ಸಂಬಂಧ ಸಾರ್ಥಕತೆಯ ಹಪಾಹಪಿಗಳ ಕಥನಗಳಲ್ಲಿ ಅಭಿನಯಿಸಿದ ಆಕಾಶ್, ರಾಮ್, ಹುಡುಗರು, ಪವರ್ ಸ್ಟಾರ್, ದೊಡ್ಮನೆ ಹುಡುಗ, ಅಂಜನಿ ಪುತ್ರ ಮುಂತಾದ ಸಿನಿಮಾಗಳು ಮತ್ತೆಮತ್ತೆ ಪುನೀತ್‌ನನ್ನು ಮನೆಯ ಅಪ್ಪುವನ್ನಾಗಿಸಿದ್ದು ಗಮನಾರ್ಹವಾದ ಸಂಗತಿಯೇ ಹೌದು.

ಸಿನಿಮಾದಂತಹ ಚಿತ್ತಾಕರ್ಷಕ ಜಗತ್ತಿನಲ್ಲಿದ್ದು, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಯಾವುದೇ ಗಾಸಿಪ್‌ಗಳಿಗೆ ಒಳಗಾಗದಂತೆ ಬದುಕುವುದು ಸುಲಭವಲ್ಲ. ಸ್ಪರ್ಧಾತ್ಮಕ ಸಿನಿಮಾ ಜಗತ್ತು ದಾರಿತಪ್ಪಿಸಲು ಖಂಡಿತವಾಗಿಯೂ ಮತ್ತೆಮತ್ತೆ ಅವೆಷ್ಟೋ ಸವಾಲುಗಳನ್ನು ಸೃಷ್ಟಿಸುತ್ತಿರುವಾಗಲೂ ಅಪ್ಪು ಅವುಗಳಿಂದ ದೂರವಾಗಿ, ಎಚ್ಚರವಾಗಿ ಉಳಿದದ್ದು ಮಾದರಿಯಾಗಬೇಕಾದದ್ದು.

ಮೂಲತಃ ದೃಶ್ಯ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಿರುವಾಗ ಅದೊಂದು ಸಾಂಸ್ಕೃತಿಕ ಜವಾಬ್ದಾರಿಯೂ ಹೌದು. ಈಚಿನ ದಿನಗಳಲ್ಲಿ ಅದು ಉಂಟು ಮಾಡುತ್ತಿರುವ ಅಪಾಯಗಳೂ ಕಡಿಮೆಯಲ್ಲ. ಇಂತಲ್ಲಿಯೇ ಪುನೀತ್ ನಮಗೆ ಆದರ್ಶ ’ಯುವ ರಾಯಭಾರಿ’ಯಂತೆಯೂ ಕಂಡದ್ದು ಮಾತ್ರ ಸಕಾಲಿಕ ಬೆಳವಣಿಗೆಯಾಗಿತ್ತು.

ನಾಟಕಗಳನ್ನು ಆರಂಭ ಕಾಲದಲ್ಲಿ ನೋಡುವುದೇ ಒಂದು ವ್ಯಸನ ಮತ್ತು ತಪ್ಪು ಎನ್ನುವ ಅಭಿಪ್ರಾಯವಿದ್ದುದು, ಕ್ರಮೇಣ ಅದು ಕಲೆಯಾಗುತ್ತಾ, ಹವ್ಯಾಸವಾಗುತ್ತಾ ಮುಂದೆ ಸಿನಿಮಾಗಳ ಮೂಲವಾಯ್ತು. ಸಿನಿಮಾಗಳು ಆರಂಭಕ್ಕೆ ಮಡಿವಂತಿಕೆಯ ಅಪಾಯಗಳಿಗೆ ಎದುರಾಗಿ ನಂತರ ಮಹತ್ವದ ಮನರಂಜನೆಯ ಮಾಧ್ಯಮವಾದಾಗ ಚಲನಚಿತ್ರಗಳು, ನಟರು, ಚಿತ್ರಗೀತೆಗಳೆಲ್ಲವೂ ಸಾಮಾಜಿಕ ಸಾಂಸ್ಕೃತಿಕ ರೂಪಕಗಳಾದಾಗ ಅದಕ್ಕೊಂದು ವಿಶಿಷ್ಟ ಬೆಡಗು ದೊರೆತಿದ್ದು ರಾಜಕುಮಾರ್ ಎಂಬ ಕಲಾವಿನಿಂದ. ಅದು ಮುಂದುವರೆದು ಆತ ರಾಜಣ್ಣನಾದದ್ದು, ಆತನಿಗೆ ತನ್ನ ಅಭಿಮಾನಿಗಳೇ ದೇವರಾದದ್ದು ಈಗ ಕನ್ನಡ, ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ. ಅದನ್ನು ಅತ್ಯಂತ ಅರ್ಥಪೂರ್ಣವಾಗಿ ಮುಂದುವರೆಸಿಕೊಂಡು ಹೊರಟಿದ್ದ ಪುನೀತ್ ರಾಜ್‌ಕುಮಾರ್ ಹೀಗೆ ಯಾರೂ ಊಹಿಸದ ಹಾಗೆ ದಿಢೀರನೆ ಕಾಣದಂತೆ ಮಾಯವಾದದ್ದು ಇನ್ನೂ ಅರಗಿಸಿಕೊಳ್ಳಲಾಗದ ಸಂಗತಿ. ಈ ಬಾರಿ ಕನ್ನಡ ರಾಜ್ಯೋತ್ಸವ, ದೀಪಾವಳಿಯಂತಹ ಆಚರಣೆಗಳೂ ಮನೆಯ ಮಗ ಅಪ್ಪುವನ್ನು ಕಳೆದುಕೊಂಡ ಸೂತಕದಲ್ಲೇ ಕಳೆದುಹೋದದ್ದು, ಪ್ರತೀ ಹಳ್ಳಿ ನಗರಗಳಲ್ಲೆಲ್ಲಾ ಅಪ್ಪುವಿನ ನೆನಪಿನ ಚಿತ್ರಪಟಗಳು ಹೆಜ್ಜೆಹೆಜ್ಜೆಗೂ ಕಾಣುವಂತಾದದ್ದು, ಬಹು ದೊಡ್ಡ ವ್ಯಕ್ತಿತ್ವವೊಂದು ನಮ್ಮನ್ನು ಮೀರಿ, ಅಸಹಾಯಕರನ್ನಾಗಿಸಿ ಸಾಗಿಹೋದ ದುರಂತದ ಸೂಚಕವೇ ಹೌದು. ಲೆಕ್ಕವಿಡದಷ್ಟು ಲಕ್ಷಾಂತರ ಮಂದಿ ನಾಡಿನ ಮೂಲೆಮೂಲೆಯಿಂದ ರಾಜಧಾನಿಗೆ ಬಂದು ಅಪ್ಪುವಿಗಾಗಿ ಕಣ್ಣೀರಿಟ್ಟಿದ್ದು, ರಾಜ್‌ಕುಮಾರ್ ಅವರ ಸಾವಿನ ದಿನವನ್ನೇ ನೆನಪಿಗೆ ತಂದದ್ದೂ ಹೌದು. ಇದು ಸಾರ್ಥಕ ಬದುಕಿನ ಪರಿಪೂರ್ಣತೆಯ ಅರಿವಿನ ’ಮಾನವ ಜನ್ಮ ದೊಡ್ಡದು’ ಎನ್ನುವುದಕ್ಕೆ ಉದಾಹರಣೆ.

ಕೆಲವರ ಅಕಾಲಿಕ ನಿಧನದ ದುರಂತವನ್ನು ದೊಡ್ಡ ನಷ್ಟ ಎನ್ನುವ ಮಾತಿದೆ. ಆದರೆ ಪುನೀತ್ ರಾಜ್‌ಕುಮಾರ್‌ನಂತಹ ನಟನ ಈ ಕಣ್ಮರೆ ಸರಳ ಮತ್ತು ಸಾಂಪ್ರದಾಯಿಕ ಮಾತುಗಳನ್ನು ಮೀರಿದ್ದೇ ಹೌದು. ಇದು ಅನಿರೀಕ್ಷಿತವಾಗಿ ಅಸಹಜವೆನ್ನುವಂತೆ ಸೃಷ್ಟಿಯಾದ ಶೂನ್ಯ. ಇದನ್ನು ಖಂಡಿತವಾಗಿ ಯಾರೂ ಸುಲಭದಲ್ಲಿ ತುಂಬಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಜಡವಾಯಿತೇನೋ ಅನ್ನಿಸುವುದು ಕೂಡ ಉತ್ಪ್ರೇಕ್ಷೆಯಲ್ಲ. ಅಪ್ಪುವಿನ ನಿರ್ಗಮನ ಕರ್ನಾಟಕದ ಜನಮಾನಸವನ್ನು ಹಲವು ಕಾಲ ಕಾಡುತ್ತದೆ. ಏಕೆಂದರೆ ಕರ್ನಾಟಕವು ತನ್ನ ಮನೆಯ ಮಗನನ್ನು ಕಳೆದುಕೊಂಡಿದೆ.

ಡಾ. ಜಿ. ಪ್ರಶಾಂತ ನಾಯಕ

ಡಾ. ಜಿ. ಪ್ರಶಾಂತ ನಾಯಕ
ಪ್ರಾಧ್ಯಾಪಕರು, ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯ


ಇದನ್ನೂ ಓದಿ: ಚಿತ್ರರಂಗದ ’ಯುವರತ್ನ’ ಪುನೀತ್ ರಾಜ್‌ಕುಮಾರ್‌ ಅವರ ಅಪರೂಪದ ಚಿತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನಸಿನ ಮಾತುಗಳ ಮೂಲಕ ನೈಜತೆಯನ್ನು ಹೇಳುತ್ತಲೇ ರಾಜ್ ಮನೆತನದೊಂದಿಗೆ ಮನೆಮಗ ಪುನೀತ್ ಅವರ ಬೆಳವಣಿಗೆಯ ಆ ಭಾವ …ಬದುಕನ್ನ ಮನಮಿಡಿಯುವಂತೆ ಚಿತ್ರಿಸಿರುವಿರಿ …ಧನ್ಯವಾದಗಳು ಸರ್…??

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...