ಉತ್ತರಪ್ರದೇಶ ಸರಕಾರವು ಅಳವಡಿಸಿಲಾಗಿದ್ದ ಹಿಂಸಾಚಾರದ ಆರೋಪ ಹೊತ್ತ ಸಿಎಎ ಪ್ರತಿಭಟನಾಕಾರರ ಭಾವಚಿತ್ರವುಳ್ಳ ಎಲ್ಲಾ ಪೋಸ್ಟರ್ಗಳು ಮತ್ತು ಹೋರ್ಡಿಂಗ್ಗಳನ್ನು ಕೂಡಲೇ ತೆಗೆದುಹಾಕಬೇಕು ಎಂದು ಅಲಹಾಬಾದ್ ಹೈಕೋರ್ಟ್ ಇಂದು ಯೋಗಿ ಸರ್ಕಾರಕ್ಕೆ ಆದೇಶಿಸಿದೆ.
ತೆರವುಗೊಳಿಸುವುದಲ್ಲದೆ ಮಾರ್ಚ್ 16 ರೊಳಗೆ ಈ ಕುರಿತು ರಿಜಿಸ್ಟ್ರಾರ್ ಜನರಲ್ ಗೆ ವರದಿ ನೀಡಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ. ಈ ಮೂಲಕ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.
ಉತ್ತರ ಪ್ರದೇಶ ಸರಕಾರ ಸಿಎಎ ಪ್ರತಿಭಟನೆಯಲ್ಲಿ ಹಿಂಸಾಚಾರ ಮಾಡಿದ್ದಾರೆಂದು ಆರೋಪಿಸಿ ಆಸ್ತಿ ಮುಟ್ಟುಗೋಳು ನೋಟಿಸು ನೀಡಿದ್ದಲ್ಲದೆ ಲಕ್ನೋದಾದ್ಯಂತ ಆರೋಪಿಗಳ ಪೋಟೋ ಹಾಗೂ ವಿಳಾಸಗಳ ಸಹಿತ ಹೋರ್ಡಿಂಗ್ಸ್ ಗಳನ್ನು ಹಾಕಿತ್ತು.
ಉತ್ತರ ಪ್ರದೇಶದ ಉಚ್ಛನ್ಯಾಯಾಲಯವಾದ ಅಲಹಾಬಾದ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಈ ಪ್ರಕರಣವನ್ನು ಆದಿತ್ಯವಾರ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದರು
ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ನಡೆಯಬೇಕಿದ್ದ ವಿಚಾರಣೆಯು ಸರ್ಕಾರದ ಕೋರಿಕೆಯ ಮೇಲೆ ಸಂಜೆ 3 ಕ್ಕೆ ಮುಂದೂಡಿತ್ತು. ಆ ಸಮಯದಲ್ಲಿ ಮುಖ್ಯ ನ್ಯಾಯಾಧೀಶರು ಸರಕಾರಕ್ಕೆ ನಾಗರಿಕರ ಖಾಸಗಿತನ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹಕ್ಕಿಲ್ಲ, ವಿಚಾರಣೆ ಪ್ರಾರಂಭವಾಗುವ ಮೊದಲೇ ಸರಕಾರ ಅದನ್ನು ಸರಿಪಡಿಸುವ ಬಗ್ಗೆ ಭರವಸೆಯಿದೆ” ಎಂದು ಹೇಳಿದ್ದರು.
ನಂತರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ವಿಚಾರಣೆಯಲ್ಲಿ, ನ್ಯಾಯಾಲಯವು ಸರಕಾರಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿತು. ಪ್ರಶ್ನೆಗಳಿಗೆ ಸರ್ಕಾರಿ ಪ್ರತಿನಿಧಿಗಳು ಉತ್ತರಿಸಿದರು. ಈ ಕುರಿತು ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದ್ದ, ನ್ಯಾಯಾಲಯ ಇಂದು ಮಧ್ಯಾಹ್ನ ತೀರ್ಪು ನೀಡಿದೆ.
ಆದಿತ್ಯವಾರ ರಜಾದಿನವಾದರು ಇದರ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೈಕೋರ್ಟ್ ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಅವರ ನ್ಯಾಯಾಲಯವು ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿತ್ತು.
ಅನೇಕ ಆರೋಪಿಗಳಿಗೆ ವೈಯಕ್ತಿಕ ಆಸ್ತಿ ಲಗತ್ತು ನೋಟಿಸ್ಗಳನ್ನು ಈಗಾಗಲೇ ಸರ್ಕಾರ ಕಳುಹಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಹೋರ್ಡಿಂಗ್ಗಳನ್ನು ಹಾಕಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ ಎಂದು ಎನ್ಡಿಟಿವಿ ವರದಿ ಮಾಡಿತ್ತು.