Homeಮುಖಪುಟಮೀಸಲಾತಿ: ತುಷ್ಟೀಕರಣದ ತಂತ್ರವಾಗುತ್ತಿರುವ ಸಮಾನತೆಯ ಅಸ್ತ್ರ: ಎ ನಾರಾಯಣ

ಮೀಸಲಾತಿ: ತುಷ್ಟೀಕರಣದ ತಂತ್ರವಾಗುತ್ತಿರುವ ಸಮಾನತೆಯ ಅಸ್ತ್ರ: ಎ ನಾರಾಯಣ

ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದೂ ಹಲವಾರು ಸ್ವತಂತ್ರ ಜಾತಿಗಳು ಇನ್ನೂ ಅದರಿಂದ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ. ಯಾಕೆಂದರೆ ಮೀಸಲಾತಿಯ ಒಳಗೂ ಸ್ಪರ್ಧೆ ಇದೆ. ಆ ಸ್ಪರ್ಧೆಯಲ್ಲಿ ಅವರ ಪಟ್ಟಿಯಲ್ಲಿ ಸೇರಿಹೋಗಿರುವ ಇತರ ಬಲಿಷ್ಠ ಜಾತಿಯವರ ಜತೆಗೆ ಸೆಣಸುವ ಸಾಮರ್ಥ್ಯ ಈ ಸಣ್ಣ ಜಾತಿಗಳಲ್ಲಿ ಇಲ್ಲ. ಒಂದು ವೇಳೆ ಅಂತಹ ಸಣ್ಣಪುಟ್ಟ ಧ್ವನಿ ಇಲ್ಲದ ಜಾತಿಗಳು ಮೀಸಲಾತಿ ನೀತಿಯಲ್ಲಿ ಬದಲಾವಣೆ ಅಥವಾ ಸುಧಾರಣೆ ಕೇಳಿದರೆ ಅದಕ್ಕೆ ಅರ್ಥ ಇದೆ.

- Advertisement -
- Advertisement -

ಕರ್ನಾಟಕದಲ್ಲಿ ಜಾತಿ ಶಕ್ತಿ ಅಪಾಯಕಾರಿಯಾಗಿ ಮತ್ತೊಮ್ಮೆ ಎದ್ದುನಿಂತಿದೆ. ಜಾತಿ-ಉಪಜಾತಿಗಳ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಕರ್ನಾಟಕದ ಪ್ರಬಲ ಜಾತಿಗಳೆಲ್ಲಾ ಗಟ್ಟಿ ಧ್ವನಿಯಲ್ಲಿ ಮುಂದಿಡುತ್ತಿವೆ. ಇಲ್ಲಿ ಎರಡು ವಿಷಯಗಳಿವೆ. ಒಂದು ಮೀಸಲಾತಿಯದ್ದು. ಇನ್ನೊಂದು ಮೀಸಲಾತಿಯ ನೆಪ ಮುಂದಿರಿಸಿಕೊಂಡು ಕಟ್ಟಲಾಗುತ್ತಿರುವ ರಾಜಕೀಯ ಹಿತಾಸಕ್ತಿಗಳ ವ್ಯೂಹ ರಚನೆಯದ್ದು. ಮೇಲ್ನೋಟಕ್ಕೆ ಮೀಸಲಾತಿಯ ಪ್ರಶ್ನೆ ಜಟಿಲ ಅಂತ ಅನ್ನಿಸಬಹುದು. ಹಾಗೇನಿಲ್ಲ. ಮೀಸಲಾತಿಯ ವಿಚಾರ ಹೆಚ್ಚುಕಡಿಮೆ ಸ್ಪಷ್ಟವಾಗಿಯೇ ಇದೆ. ಇಲ್ಲಿ ನಿಜವಾಗಿ ಜಟಿಲವಾಗಿಯೂ, ನಿಗೂಢವಾಗಿಯೂ, ಅಪಾಯಕಾರಿಯಾಗಿಯೂ ಹೊಂಚು ಹಾಕುತ್ತಿರುವುದು ಮೀಸಲಾತಿಯ ಬೇಡಿಕೆಯ ಹಿಂದಿನ ಸಾಮಾಜಿಕ-ರಾಜಕೀಯ ಹಿತಾಸಕ್ತಿಗಳು. ಅವುಗಳನ್ನು ಬಯಲಿಗೆಳೆಯುವ ಮಾಧ್ಯಮ ಶಕ್ತಿ, ಅವುಗಳಿಗೆ ಮುಖಾಮುಖಿಯಾಗಬೇಕಾಗಿದ್ದ ರಾಜಕೀಯ ಶಕ್ತಿ, ಅವುಗಳನ್ನು ತಟಸ್ಥಗೊಳಿಸಲು ಶ್ರಮಿಸಬೇಕಾಗಿದ್ದ ಆಧ್ಯಾತ್ಮಿಕ ಶಕ್ತಿ ಇತ್ಯಾದಿಗಳೆಲ್ಲವೂ ಕರ್ನಾಟಕದ ಪಾಲಿಗೆ ಹೆಚ್ಚುಕಡಿಮೆ ಸತ್ತೇ ಹೋಗಿವೆ.

ಮೀಸಲಾತಿಯದ್ದು ಅಷ್ಟೇನೂ ಜಟಿಲವಲ್ಲದ ಪ್ರಶ್ನೆ ಅಲ್ಲ ಅಂತ ಮೇಲೆ ಹೇಳಿದ್ದಕ್ಕೆ ಕಾರಣವಿದೆ ಮತ್ತು ಆ ಕಾರಣ ಹೀಗಿದೆ. ಕರ್ನಾಟಕದಲ್ಲೀಗ ಎಲ್ಲಾ ಜಾತಿಗಳಿಗೂ ಮೀಸಲಾತಿ ಇದೆ. ಕರ್ನಾಟಕದಲ್ಲಿ ಮೀಸಲಾತಿಗೆ ಅರ್ಹ ಎನ್ನುವ ಪಟ್ಟಿಯಲ್ಲಿ (ಪರಿಶಿಷ್ಟ ಜಾತಿ/ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು) ಹೆಚ್ಚುಕಡಿಮೆ ಶೇಕಡಾ ತೊಂಬತ್ತೊಂಬತ್ತರಷ್ಟು ಜಾತಿಗಳು (ಧಾರ್ಮಿಕ ಅಲ್ಪಸಂಖ್ಯಾತರನ್ನೂ ಒಳಗೊಂಡು) ಸೇರಿ ಎಷ್ಟೋ ಸಮಯವಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆಯದ ಒಂದು ಸಣ್ಣ ಪ್ರಮಾಣದ ಜಾತಿಗಳಿಗೆ ಈಗ ಕೇಂದ್ರ ಸರಕಾರ ಘೋಷಿಸಿರುವ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೀಸಲಾತಿ ಇದೆ. ಎಂಬಲ್ಲಿಗೆ ಮೀಸಲಾತಿ ಎನ್ನುವುದು ಈಗ ಸರ್ವತ್ರವಾಯಿತು. ಆದ ಕಾರಣ ಈಗ ಯಾವುದೇ ಜಾತಿ ಪಂಗಡದವರು ನಮ್ಮನ್ನು ಮೀಸಲಾತಿಯಿಂದ ಹೊರಗಿಡಲಾಗಿದೆ ಎಂಬ ಬೇಡಿಕೆ ಇಡುವ ಪ್ರಮೇಯವೇ ಇಲ್ಲ.

ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದೂ ಹಲವಾರು ಸ್ವತಂತ್ರ ಜಾತಿಗಳು ಇನ್ನೂ ಅದರಿಂದ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ. ಯಾಕೆಂದರೆ ಮೀಸಲಾತಿಯ ಒಳಗೂ ಸ್ಪರ್ಧೆ ಇದೆ. ಆ ಸ್ಪರ್ಧೆಯಲ್ಲಿ ಅವರ ಪಟ್ಟಿಯಲ್ಲಿ ಸೇರಿ ಹೋಗಿರುವ ಇತರ ಬಲಿಷ್ಠ ಜಾತಿಯವರ ಜತೆಗೆ ಸೆಣಸುವ ಸಾಮರ್ಥ್ಯ ಈ ಸಣ್ಣ ಜಾತಿಗಳಲ್ಲಿ ಇಲ್ಲ. ಒಂದುವೇಳೆ ಅಂತಹ ಸಣ್ಣಪುಟ್ಟ ಧ್ವನಿ ಇಲ್ಲದ ಜಾತಿಗಳು ಮೀಸಲಾತಿ ನೀತಿಯಲ್ಲಿ ಬದಲಾವಣೆ ಅಥವಾ ಸುಧಾರಣೆ ಕೇಳಿದರೆ ಅದಕ್ಕೆ ಅರ್ಥ ಇದೆ. ಹಾಗೆ ಮಾಡುವಾಗಲೂ ಅವರ ಬಳಿ ತಮ್ಮ ಜಾತಿಗೆ ಈತನಕ ಮೀಸಲಾತಿಯಿಂದ ಏನು ಸಿಗಬೇಕಿತ್ತೋ ಅದು ಸಿಕ್ಕಿಲ್ಲ ಎನ್ನುವ ನಿಖರವಾದ ಪ್ರತ್ಯಕ್ಷ-ಪ್ರಮಾಣ ಅಂಕಿ-ಅಂಶ ಇರಬೇಕು. ಈಗ ಕರ್ನಾಟಕದಲ್ಲಿ ಮೀಸಲಾತಿಗೆ ಬೇಡಿಕೆ ಇಟ್ಟಿರುವ ಬಹುತೇಕ ಪ್ರಬಲ ಜಾತಿ-ಉಪಜಾತಿಗಳು ಯಾವುದೇ ದೃಷ್ಟಿಯಿಂದ ನೋಡಿದರೂ ಮೀಸಲಾತಿಯಿಂದ ಯಾವ ಪ್ರಯೋಜನವನ್ನು ಪಡೆಯಬೇಕಿತ್ತೋ ಆ ಪ್ರಯೋಜನವನ್ನು ಮೀಸಲಾತಿಯಿಂದಾಗಿ ಅಥವಾ ತಮ್ಮ ಸ್ವಂಥ ಬಲದಿಂದಾಗಿ ಪಡೆಯದವರೂ ಅಲ್ಲ, ಪಡೆಯಲಾಗದವರೂ ಅಲ್ಲ. ಅವರ ಬೇಡಿಕೆಗೆ ಪೂರಕವಾದ ಅಂಕಿ-ಅಂಶಗಳೂ ಇಲ್ಲ. ಹಾಗಿರುವಾಗ ವಿಷಯ ಬಹಳ ಸ್ಪಷ್ಟವಾಗಿದೆ. ಈ ಸಮುದಾಯಗಳು ಮುಂದಿರಿಸಿರುವ ಮೀಸಲಾತಿ ಸಂಬಂಧೀ ಬೇಡಿಕೆಗಳಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆ ಇಲ್ಲ.

PC : Prajavani

ಮೀಸಲಾತಿಯ ವಿಚಾರದಲ್ಲಿ ಒಂದು ವಿಚಾರವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಮೀಸಲಾತಿ ಎಂಬುದು ಬಡತನ ನಿರ್ಮೂಲನಾ ಯೋಜನೆ ಅಲ್ಲ. ಚಾರಿತ್ರಿಕವಾಗಿ ಅವಕಾಶ ವಂಚಿತ ವರ್ಗಗಳಿಗೆ, ಈಗ ಇರುವ ಪ್ರಬಲ ವರ್ಗಗಳೊಂದಿಗೆ ಸ್ಪರ್ಧಿಸಿ ಅಧಿಕಾರ ಮತ್ತು ಅರ್ಥ ವ್ಯವಸ್ಥೆಯಲ್ಲೊಂದಷ್ಟು ಅವಕಾಶ ಪಡೆಯುವುದು ಅಸಾಧ್ಯ. ಅಂತವರಿಗೆ ನೆರವು ಒದಗಿಸಲು ಮೀಸಲಾತಿ ಇರುವುದು. ಬಡತನ ನಿರ್ಮೂಲನ ಯೋಜನೆಗೆ ಆರ್ಥಿಕ ಹಿಂದುಳಿದಿರುವಿಕೆ ಆಧಾರ ಆಗಿರಬೇಕು ಎನ್ನುವುದರಲ್ಲಿ ಅರ್ಥವಿದೆ. ಆದರೆ ಮೀಸಲಾತಿಗೆ ಆರ್ಥಿಕ ಹಿಂದುಳಿದಿರುವಿಕೆ ಒಂದೇ ಮಾನದಂಡವಾಗಬಾರದು. ಇದು ಚರ್ಚಿಸುವ ವಿಷಯವಲ್ಲ. ಇದು ಎಂದೋ ಇತ್ಯರ್ಥವಾದ ಮತ್ತು ನ್ಯಾಯಾಲಯಗಳು ಮತ್ತೆ ಮತ್ತೆ ಒತ್ತಿ ಹೇಳಿದ ವಿಷಯ. ಇದು ಗೊತ್ತಿದ್ದೂ ಶೇ.10 ಮೀಸಲಾತಿಯನ್ನು ಕೇಂದ್ರ ಸರಕಾರ ಆರ್ಥಿಕ ಹಿಂದುಳಿದುರುವಿಕೆಯ ಮಾನದಂಡದ ಮೇಲೆ ನೀಡಿದಾಗ, ದೇಶಕ್ಕೆ ದೇಶವೇ ಮೌನ ವಹಿಸಿದ್ದ ರಾಜಕೀಯದ ಮುಂದುವರಿದ ಭಾಗವಾಗಿ ಈಗಿನ ಮೀಸಲಾತಿ ಚಳವಳಿಯನ್ನೂ ನಾವು ನೋಡಬೇಕಾಗುತ್ತದೆ. ಮೀಸಲಾತಿ ಸಾಮಾಜಿಕ ನ್ಯಾಯದ ಅಸ್ತ್ರವಾಗಿ ಉಳಿಯದೆ, ರಾಜಕೀಯ ತುಷ್ಟೀಕರಣದ ತಂತ್ರವಾಗುತ್ತಿರುವ ಪ್ರಕ್ರಿಯೆಯೊಂದು ದೇಶದಲ್ಲಿ ನಡೆಯುತ್ತಿದೆ. ಅದೀಗ ಕರ್ನಾಟಕದಲ್ಲಿ ತನ್ನದೇ ಆದ ರೀತಿಯಲ್ಲಿ ಪ್ರಕಟಗೊಳ್ಳುತ್ತಿದೆ.

ಈಗ ಮೀಸಲಾತಿ ಹೆಚ್ಚಳ ಅಥವಾ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಲ್ಲಟ – ಇತ್ಯಾದಿಗಳನ್ನು ಕೇಳುತ್ತಿರುವ ಜಾತಿಗಳ ಬೇಡಿಕೆ ಸರಿ ಇದೆಯೇ ಇಲ್ಲವೇ ಅಂತ ನಿರ್ಧರಿಸುವುದಕ್ಕೆ ಇರುವ ಮಾಪನ ಒಂದೇ. ಅದು ಆಯಾ ಜಾತಿಯವರು ಅಧಿಕಾರ ವ್ಯವಸ್ಥೆಯಲ್ಲಿ ಮತ್ತು ಅರ್ಥವ್ಯವಸ್ಥೆಯಲ್ಲಿ ಎಷ್ಟು ಪಾಲು ಪಡೆದಿದ್ದಾರೆ ಎನ್ನುವ ಪ್ರಶ್ನೆ. ಆಯಾ ಜಾತಿಗಳಿಗೆ ಸಂಬಂಧಿಸಿದ ಜನಪ್ರತಿನಿಧಿಗಳು ಎಷ್ಟಿದ್ದಾರೆ, ಮಂತ್ರಿಗಳು ಎಷ್ಟಿದ್ದಾರೆ, ಉನ್ನತ ಸರಕಾರೀ ಸೇವೆಯಲ್ಲಿ ಎಷ್ಟು ಮಂದಿ ಇದ್ದಾರೆ, ಬಹಳ ಉನ್ನತ ಅಂತ ಪರಿಗಣಿಸಲಾಗದೆ ಹೋದರೂ ಆಯಕಟ್ಟಿನ ಸ್ಥಾನದಲ್ಲಿ (ಉದಾಹರಣೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಇತ್ಯಾದಿ ಹುದ್ದೆಗಳು) ಎಷ್ಟು ಮಂದಿ ಇದ್ದಾರೆ ಎನ್ನುವ ಪ್ರಶ್ನೆ. ಗಣನೀಯ ಸಂಖ್ಯೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಪಡೆದ ಯಾವ ಜಾತಿಗೂ ಮೀಸಲಾತಿ ಹೆಚ್ಚಿಸಿ ಅಂತ ಕೇಳುವ ಹಕ್ಕಿಲ್ಲ. ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಈ ಸ್ಥಾನಗಳ ಸಂಖ್ಯೆಯನ್ನು ಅವರ ಜಾತಿಯವರು ಪಡೆದಿದ್ದಾರೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಅದೇ ರೀತಿ ಅರ್ಥವ್ಯವಸ್ಥೆಯಲ್ಲಿ ಇವರ ಸ್ಥಾನವೇನು ಎನ್ನುವುದು ಮುಖ್ಯವಾಗುತ್ತದೆ. ಒಂದುವೇಳೆ ಈ ಜಾತಿಗಳ ಮಂದಿ ಸಾಕಷ್ಟು ಪ್ರಮಾಣದ ಭೂಮಿ ಹೊಂದಿದ್ದಾರೆ, ದೊಡ್ಡ ಕೈಗಾರಿಕೆಗಳ ಒಡೆತನ ಹೊಂದಿದ್ದಾರೆ, ಅಥವಾ ದೊಡ್ಡ ದೊಡ್ಡ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದಾದರೆ ಅಂತವರಿಗೆ ಕೂಡಾ ಮೀಸಲಾತಿಯಲ್ಲಿ ಪಾಲು ಕೇಳುವ ಅಥವಾ ಇರುವ ಪಾಲಿನಲ್ಲಿ ಹೆಚ್ಚಳ ಕೇಳುವ ನೈತಿಕ ಹಕ್ಕು ಇಲ್ಲ.

ಒಂದು ಪ್ರಶ್ನೆ ಬರುತ್ತದೆ. ಆರ್ಥಿಕವಾಗಿ ಬಲಿಷ್ಠರಾಗಿದ್ದು, ಅಧಿಕಾರ ವ್ಯವಸ್ಥೆಯಲ್ಲಿ ಪಾಲು ಇಲ್ಲದಿದ್ದರೆ ಅದು ಅಸಮತೋಲನ ಅಲ್ಲವೇ? ಅಂತಹ ವರ್ಗಗಳು ಅಧಿಕಾರದಲ್ಲಿ ಪ್ರಾತಿನಿಧ್ಯ ಬೇಕು ಎಂದು ಮೀಸಲಾತಿಗಾಗಿ ಬೇಡಿಕೆ ಇಟ್ಟರೆ ತಪ್ಪೇನು ಅಂತ ಅನ್ನಿಸಬಹುದು. ಮೇಲ್ನೋಟಕ್ಕೆ ಸರಿ ಅಂತ ಕಾಣುವ ಈ ಪ್ರಶ್ನೆಗೆ ಉತ್ತರಿಸುವುದಕ್ಕೆ ಮೊದಲು ಇನ್ನೊಂದು ಅಂಶವನ್ನು ಕಂಡುಕೊಳ್ಳಬೇಕಿದೆ. ಆರ್ಥಿಕವಾಗಿ ಸಬಲವಾಗಿ ಅಧಿಕಾರದಲ್ಲಿ ಪಾಲು ಇಲ್ಲದೆ ಇದ್ದ ಒಂದು ಜಾತಿಯವರು ಮೀಸಲಾತಿ ಕೇಳಿದರೆ ಅದರಲ್ಲಿ ತಪ್ಪೇನಿಲ್ಲ. ಆದರೆ ಅವರು ಈಗಾಗಲೇ ಅಧಿಕಾರದಲ್ಲಿ ಪಾಲು ಪಡೆಯದ್ದಕ್ಕೆ ಏನು ಕಾರಣ ಎನ್ನುವ ಪ್ರಶ್ನೆಗೆ ಮೊದಲು ಉತ್ತರಿಸಬೇಕಾಗುತ್ತದೆ. ಹಲವಾರು ಜಾತಿಗಳು ಸ್ವಯಂ ಇಚ್ಛೆಯಿಂದ ಸಂಬಳ ಪಡೆಯುವ ನೌಕರಿಗಳನ್ನು ಬಯಸುವುದಿಲ್ಲ. ಒಂದುವೇಳೆ ಬಯಸಿದ್ದರೆ ಅವರು ಅದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು.

ಕರಾವಳಿ ಕರ್ನಾಟಕದಲ್ಲಿ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಕೊಂಡ ಒಂದು ಜಾತಿಯವರು ಸರಕಾರೀ ಉದ್ಯೋಗದಲ್ಲಿ ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಹೀಗಾಗಿರುವುದು ತಾರತಮ್ಯದಿಂದಲ್ಲ ಅಥವಾ ಅವರಿಗೆ ಅಂತಹ ಅವಕಾಶಗಳನ್ನು ಪಡೆದುಕೊಳ್ಳಲು ಚಾರಿತ್ರಿಕವಾಗಿ ಸಾಧ್ಯವಿರಲಿಲ್ಲ ಎನ್ನುವ ಕಾರಣಕ್ಕಲ್ಲ. ಭೂಮಾಲಿಕರ ಎಷ್ಟೋ ವರ್ಗಗಳು ಕೂಡಾ ಒಂದು ಕಾಲದಲ್ಲಿ ಸರಕಾರಿ ನೌಕರಿ ಬೇಡ ಎಂದು ತೀರ್ಮಾನಿಸಿದ ಕಾರಣಕ್ಕೆ ಅವನ್ನು ಪಡೆದಿರಲಾರವು. ಆ ಕಾರಣಕ್ಕಾಗಿ ಈಗ ಮೀಸಲಾತಿ ಕೇಳಿದರೆ ಅದನ್ನು ಒಪ್ಪಲಾಗದು. ಈ ತನಕ ಸಾಮಾಜಿಕ ತಾರತಮ್ಯದ ಕಾರಣಕ್ಕೆ ಯಾರು ಅವಕಾಶವಂಚಿತರಾಗಿ ಉಳಿದಿದ್ದಾರೆ ಮತ್ತು ಇಂದಿನ ಪರಿಸ್ಥಿತಿಯಲ್ಲೂ ಕೂಡಾ ಮೀಸಲಾತಿ ಇಲ್ಲದೆಹೋದರೆ ಅವಕಾಶಗಳನ್ನು ಪಡೆದುಕೊಳ್ಳಲು ಯಾರು ಅಶಕ್ತರಾಗಿದ್ದಾರೆ ಅವರು ಮಾತ್ರ ಮೀಸಲಾತಿ ಕೇಳುವುದರಲ್ಲಿ ಅರ್ಥವಿದೆ. ಎಷ್ಟೋ ಜಾತಿಗಳು ಇಂದಿಗೂ ಮೀಸಲಾತಿ ಇಲ್ಲದೆ ಸಾಮಾನ್ಯ ವರ್ಗದಲ್ಲಿ (general category) ಸ್ಪರ್ಧಿಸಿದರೆ ಅವಕಾಶ ಪಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಮೀಸಲಾತಿ ನೀಡಬೇಕಾಗಿರುವುದು ಅಂತವರಿಗೆ ಮಾತ್ರ.

ಸಾಮಾನ್ಯ ವರ್ಗದಲ್ಲಿ ಈಗ ಆಯ್ಕೆಯಾಗುತ್ತಿರುವ ಅಭ್ಯರ್ಥಿಗಳಲ್ಲಿ ಯಾವ ವರ್ಗದವರು ಎಷ್ಟೆಷ್ಟು ಮಂದಿ ಇದ್ದಾರೆ ಎನ್ನುವುದು ಯಾವ ಯಾವ ಜಾತಿಯವರು ಎಷ್ಟೆಷ್ಟು ಮೀಸಲಾತಿಗೆ ಅರ್ಹರು ಎನ್ನುವುದಕ್ಕೆ ಇನ್ನೊಂದು ಆಧಾರವಾಗಬಹದು. ಎಲ್ಲದಕ್ಕಿಂತಲೂ ಮುಖ್ಯವಾಗಿ, ಒಂದು ಜಾತಿಯಲ್ಲಿ ಒಂದು ಸಾರ್ವಭೌಮ ಸರಕಾರವನ್ನು ನಡುಗಿಸಬಲ್ಲ ಮಠಾಧೀಶರುಗಳು ಇದ್ದಾರೆ ಎಂದಾದರೆ ಅದು ಕೂಡಾ ಆ ಜಾತಿಯ ಪ್ರಾಬಲ್ಯದ ಸಂಕೇತವಾಗುತ್ತದೆ ಮತ್ತು ಆ ಜಾತಿ ಮೀಸಲಾತಿಗೆ ಅರ್ಹವೇ ಎನ್ನುವುದನ್ನು ನಿರ್ಧರಿಸುವ ಒಂದು ಅಂಶವೂ ಆಗುತ್ತದೆ ಮತ್ತು ಆಗಬೇಕು. ಈ ಹಿನ್ನೆಲೆಯಲ್ಲಿ ನೋಡಿದರೆ ಈಗ ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಳ ಕೇಳುತ್ತಿರುವ ಯಾವ ವರ್ಗದವರ ಬೇಡಿಕೆಗೂ ಯಾವ ಅರ್ಥವೂ ಕಾಣಿಸುತ್ತಿಲ್ಲ. ಈ ಹೋರಾಟಗಳಿಗೆ ಯಾವುದೇ ರೀತಿಯ ಅಂಕಿ-ಅಂಶ ಆಧಾರಿತ ವಾಸ್ತವದ ಆಧಾರವಿಲ್ಲ.

ಇವರು ಅಧಿಕಾರ ವ್ಯವಸ್ಥೆಯಲ್ಲಿ ಈಗಾಗಲೇ ಸಾಕಷ್ಟು ಅವಕಾಶಗಳನ್ನು ಕಬ್ಜೆ ಮಾಡಿಕೊಂಡವರೇ ಆಗಿದ್ದಾರೆ. ಯಾರೋ ಯಾವುದೋ ಜಾತಿಯ ನಾಯಕರಾಗಿ ಹೊರಹೊಮ್ಮಲು, ಯಾರೋ ಯಾವುದೋ ಜಾತಿಯ ಓಟು ಪಡೆದುಕೊಳ್ಳಲು ವಿವಿಧ ಜಾತಿಗಳಿಗೆ ಮೀಸಲಾತಿ ಹೆಚ್ಚಿಸಬೇಕು ಎನ್ನುವ ಬೇಡಿಕೆಗಳನ್ನು ಈಗ ಮುಂದಿಡಲಾಗುತ್ತಿದೆ. ಒಂದು ಜಾತಿಯವರು ಇಂತಹ ಬೇಡಿಕೆ ಮುಂದಿಟ್ಟಾಗ ಇನ್ನೊಂದು ಜಾತಿಯವರು ಅದನ್ನು ಕೇಳಲಾರಂಭಿಸುತ್ತಾರೆ. ಅಥವಾ ಪ್ರತಿಭಟಿಸಲಾರಂಭಿಸುತ್ತಾರೆ. ಯಾಕೆಂದರೆ, ಒಂದು ಜಾತಿಯವರ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದಾದರೆ ಇನ್ಯಾರದ್ದೋ ಮೀಸಲಾತಿ ಪ್ರಮಾಣವನ್ನು ಕಡಿಮೆ ಮಾಡಬೇಕಾಗುತ್ತದೆ. ಉದಾಹರಣೆಗೆ ಲಿಂಗಾಯತರು, ಹಿಂದುಳಿದ 2ಎ ಪ್ರವರ್ಗದಲ್ಲಿ ಪಾಲು ಕೇಳುವುದನ್ನು ಆ ಪ್ರವರ್ಗದಲ್ಲಿ ಈಗಾಗಲೇ ಇರುವ ಹಿಂದುಳಿದ ವರ್ಗದವರು ಪ್ರತಿಭಟಿಸಲಾರಂಭಿಸಿದ್ದಾರೆ. ಅಲ್ಲಿಗೆ ಎಲ್ಲವೂ ಗೋಜಲುಗೋಜಲಾಗಿ ಕಾಣಿಸಲಾರಂಭಿಸುತ್ತದೆ.

ಈ ರೀತಿ ಮೀಸಲಾತಿಯ ಕುರಿತು ಒಟ್ಟು ಗೊಂದಲ ನಿರ್ಮಿಸುವ ಉದ್ದೇಶ ಹೊಂದಿದ ಕೆಲ ರಾಜಕೀಯ ಹಿತಾಸಕ್ತಿಗಳೇ ಈಗ ಕಾಣಿಸಿಕೊಂಡಿರುವ ಮೀಸಲಾತಿ ಹೋರಾಟಗಳನ್ನು ಹುಟ್ಟುಹಾಕಿದ್ದಾರೆ ಎನ್ನುವ ಒಂದು ಅಭಿಪ್ರಾಯವಿದೆ. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಸಮಗ್ರವಾಗಿ ಅವಲೋಕಿಸಿದರೆ ಈ ಅಭಿಪ್ರಾಯವನ್ನು ಅಲ್ಲಗಳೆಯಲಾಗದು. ಮೀಸಲಾತಿಯನ್ನು ನೇರವಾಗಿ ವಿರೋಧಿಸಲಾಗದೆ ಅದರ ವಿರುದ್ಧ ಪರೋಕ್ಷವಾಗಿ ಅಭಿಪ್ರಾಯ ರೂಪಿಸುವ ಕೆಲಸವೊಂದು ಬಹಳ ಕಾಲದಿಂದ ನಡೆಯುತ್ತಲೇ ಇತ್ತು. ಇಂಟರ್ನೆಟ್ ಯುಗ ಆರಂಭವಾದ ನಂತರವಂತೂ ತಂತ್ರಜ್ಞಾನ ಅನುವು ಮಾಡಿಕೊಟ್ಟ ಅನಾಮಧೇಯತೆಯನ್ನು ಬಳಸಿಕೊಂಡು ಮೀಸಲಾತಿಯ ಬಗ್ಗೆ ಇನ್ನಿಲ್ಲದ ಅಪಪ್ರಚಾರ ನಡೆಸಲಾಯಿತು. ಅದರಿಂದ ಏನೂ ಪ್ರಯೋಜನ ಇಲ್ಲ ಎಂದು ಅರಿವಾಗುತ್ತಿದ್ದಂತೆ ಈಗ ಹೊಸತೊಂದು ತಂತ್ರಗಾರಿಕೆ ಆರಂಭವಾಗಿದೆ. ಅದು ಹೆಚ್ಚು ಹೆಚ್ಚು ಪ್ರಮಾಣದ ಮೀಸಲಾತಿಯನ್ನು ಎಲ್ಲರೂ ಎಲ್ಲೆಂದರಲ್ಲಿ, ಯಾವ ಆಧಾರವೂ ಇಲ್ಲದೆ ಭಾವನಾತ್ಮಕ ಹಿನ್ನೆಲೆಯಲ್ಲಿ ಕೇಳುವುದು; ಅದರ ಸುತ್ತ ಸಾಮಾನ್ಯ ಜನರನ್ನು ಪ್ರಚೋದಿಸುವುದು. ಹೀಗೆ ಸಂಪೂರ್ಣ ಗೊಂದಲಮಯವಾದ ಒಂದು ಸನ್ನಿವೇಶ ಸೃಷ್ಟಿಸಿ ಮೀಸಲಾತಿಯಲ್ಲಿ ತಮಗೆ ಬೇಕಾದ ಒಂದು ಬದಲಾವಣೆ ತರಲು ವೇದಿಕೆ ಸೃಷ್ಟಿಸುವುದೇ ಈ ಎಲ್ಲ ಹೋರಾಟಗಳನ್ನು ಹುಟ್ಟುಹಾಕಿದವರ ಮೂಲ ಉದ್ದೇಶ ಇದ್ದಂತೆ ಕಾಣಿಸುತ್ತದೆ.

ಮೀಸಲಾತಿಯನ್ನು ತಲೆಬುಡ ಇಲ್ಲದೆ ವಿರೋಧಿಸುವವರು ಒಂದು ವಿಚಾರ ಅರ್ಥಮಾಡಿಕೊಳ್ಳಬೇಕು. ಈ ದೇಶದಲ್ಲಿ ಮೀಸಲಾತಿಯಿಂದಾಗಿ ಅದನ್ನು ಪಡೆದ ವರ್ಗಕ್ಕೆ ಎಷ್ಟು ಲಾಭವಾಯಿತೋ ಗೊತ್ತಿಲ್ಲ. ಆದರೆ ಒಂದಂತೂ ನಿಜ. ಮೀಸಲಾತಿ ಇದ್ದದ್ದಕ್ಕೆ ನಮ್ಮ ಅಧಿಕಾರವ್ಯವಸ್ಥೆಯಲ್ಲಿ ಇಷ್ಟಾದರೂ ಈ ವರ್ಗಗಳು ಒಳಗೊಳ್ಳುವುದಕ್ಕೆ ಸಾಧ್ಯವಾಗಿದೆ. ಈ ಅಲ್ಪಪ್ರಮಾಣದ ಹಂಚಿಕೆಯಾದರೂ ನಡೆಯದೆ ಹೋಗಿದ್ದರೆ ಅಧಿಕಾರ ವ್ಯವಸ್ಥೆಯಲ್ಲಿ ದೊಡ್ಡದೊಂದು ಅಸಮತೋಲನ-ಅಸಮಾನತೆ ಸೃಷ್ಟಿಯಾಗಿ ಅದು ಹುಟ್ಟುಹಾಕಬಹುದಾಗಿದ್ದ ರೋಷದಿಂದ ಸಮಾಜದಲ್ಲಿ ಭೀಕರ ಸಂಘರ್ಷವೊಂದು ನಡೆದುಹೋಗುತಿತ್ತು. ಭಾರತ ಒಂದು ಸಮಾಜವಾಗಿ-ಒಂದು ದೇಶವಾಗಿ ಇನ್ನೂ ಒಂದಾಗಿರುವಲ್ಲಿ ಮೀಸಲಾತಿಯ ಪಾತ್ರವನ್ನು ಕಡೆಗಣಿಸುವ ತಪ್ಪನ್ನು ಯಾರೂ ಮಾಡಬಾರದು.

ಇಷ್ಟೆಲ್ಲಾ ತಿಳಿದೇ ಸಂವಿಧಾನ ನಿರ್ಮಾತೃಗಳು ಮೀಸಲಾತಿಯನ್ನು ಸಂವಿಧಾನದಲ್ಲಿ ಸೇರಿಸಿರುವುದು. ಅದನ್ನು ವಿರೋಧಿಸುವುದು ಎಂದರೆ ಸಂವಿಧಾನ ನಿರ್ಮಾತೃಗಳ ಯೋಚನಾ ಶಕ್ತಿಯನ್ನು ಮತ್ತು ಅವರ ನೈತಿಕತೆಯನ್ನು ಪ್ರಶ್ನಿಸಿದ ಹಾಗೆ. ಅದೇ ರೀತಿಯಲ್ಲಿ ಬೇಕಾಬಿಟ್ಟಿಯಾಗಿ ಮೀಸಲಾತಿಯ ಹೆಚ್ಚಳವನ್ನು ಮತ್ತು ವಿವಿಧ ರೀತಿಯ ಮಾರ್ಪಾಡುಗಳನ್ನು ಕೇಳುವವರೂ ಸಂವಿಧಾನ ನಿರ್ಮಾತೃಗಳಿಗೆ ಅಪಚಾರ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಯಾವ ಆಧಾರದಲ್ಲಿ ಮೀಸಲಾತಿ ಸಿಗಬೇಕು ಎಂದು ಹೇಳಲಾಗಿದೆಯೋ, ಅದೇ ಆಧಾರದಲ್ಲಿ ಮಾತ್ರ ಮೀಸಲಾತಿಯನ್ನು ಕೇಳುವುದರಲ್ಲಿ ಮತ್ತು ನೀಡುವುದರಲ್ಲಿ ಅರ್ಥವಿದೆ. ಇನ್ಯಾವುದೇ ಆಧಾರದಲ್ಲಿ ಅದನ್ನು ಕೇಳುವುದು ಮತ್ತು ನೀಡುವುದು ಅಪ್ಪಟ ತುಷ್ಟೀಕರಣ ರಾಜಕೀಯ.

ಕೊನೆಯದಾಗಿ ಇನ್ನೊಂದು ವಿಷಯ. ಜಾತಿ ಇದ್ದ ಕಾರಣಕ್ಕೆ ಮೀಸಲಾತಿ ಬೇಕಾಯಿತು. ಅಂದರೆ ಜಾತಿಯಿಂದಾಗಿ ಮೀಸಲಾತಿ ಬಂತು. ಮೀಸಲಾತಿಯಿಂದಾಗಿ ಜಾತಿ ಮುಂದೊಂದು ದಿನ ಅಪ್ರಸ್ತುತವಾಗಿ ಬಿಡುತ್ತದೆ ಎನ್ನುವುದು ಸಂವಿಧಾನದ ಆಶಾವಾದವಾಗಿತ್ತು. ಆದರೆ ಈಗ ಆಗುತ್ತಿರುವುದೇ ಬೇರೆ. ಈಗ ಮೀಸಲಾತಿ ಜಾತಿಯನ್ನು ಶಾಶ್ವತಗೊಳಿಸುವ ಒಂದು ಅಸ್ತ್ರವಾಗಿಬಿಟ್ಟಿದೆ.. ಜಾತಿಗಳು ತಾವು ಎಂದೆಂದಿಗೂ ತಮ್ಮ ಅನನ್ಯತೆಯನ್ನು ಹಾಗೆ ಉಳಿಸಿಕೊಳ್ಳಲು ಮೀಸಲಾತಿಯ ಆಕರ್ಷಣೆಯು ಪ್ರೇರೇಪಿಸುತ್ತಿರುವಂತೆ ಕಾಣಿಸುತ್ತದೆ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


ಇದನ್ನೂ ಓದಿ: ಮೀಸಲಾತಿ ವಿರೋಧಿ-ಮೀಸಲಾತಿ ಹೆಚ್ಚಳ ಬೇಡಿಕೆಯ ರಾಜಕೀಯದ ನಡುವೆ ಸವಲತ್ತು ಉಳಿಸಿಕೊಳ್ಳುವ ಮಸಲತ್ತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...