ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಅವರು ಭಾರತೀಯ ರೈತ ಹೋರಾಟಕ್ಕೆ ಬೆಂಬಲ ನೀಡಿದ ನಂತರ ಹೋರಾಟವು ಅಂತಾರಾಷ್ಟ್ರೀಯವಾಗಿ ಚರ್ಚೆಗೊಳಗಾಗಿದೆ. ಸರ್ಕಾರವು ಇದನ್ನು ವಿರೋಧಿಸಿದ್ದು ವಿದೇಶಿಯರು ದೇಶದ ಆಂತರಿಕ ವಿಷಯದಲ್ಲಿ ತಲೆ ಹಾಕಬಾರದು ಎಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯ ನೀಡಿರುವ ಭಾರತೀಯ ಕಿಸಾನ್ ಯುನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್, “ರಿಹಾನ್ನಾ ಹಾಗೂ ಗ್ರೇಟಾ ಥನ್ಬರ್ಗ್ ಯಾರು ಎಂಬುದು ಗೊತ್ತಿಲ್ಲ. ಅವರು ನಮಗೇನು ಕೊಡುತ್ತಿಲ್ಲ ಅಥವಾ ನಮ್ಮಿಂದ ಏನನ್ನೂ ಕಸಿದುಕೊಳ್ಳುತ್ತಿಲ್ಲ. ವಿದೇಶಿ ಸೆಲೆಬ್ರಿಟಿಗಳು ರೈತರ ಪ್ರತಿಭಟನೆಯನ್ನು ಬೆಂಬಲಿಸಿದರೆ ಅದರಲ್ಲಿ ಸಮಸ್ಯೆ ಏನಿದೆ” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿದ ರಿಹಾನ್ನಾ: ಗೌರವಾರ್ಥವಾಗಿ ಹಾಡು ಸಮರ್ಪಿಸಿದ ದಿಲ್ಜಿತ್!
ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ದೆಹಲಿ ಪೊಲೀಸರು ಘರ್ಷನೆ ನಡೆಸಿದ ನಂತರ ಅಲ್ಲಿ ಇಂಟರ್ನೆಟ್ ಕಡಿತಗೊಳಿಸಿರುವುದನ್ನು ಉಲ್ಲೇಖಿಸಿ ಸಿಎನ್ಎನ್ ಹೋರಾಟದ ಬಗ್ಗೆ ವರದಿ ಮಾಡಿತ್ತು. ಇದನ್ನು ತನ್ನ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದ ಪಾಪ್ ತಾರೆ ರಿಹಾನ್ನಾ “ರೈತ ಹೋರಾಟದ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ” ಎಂದು ಪ್ರಶ್ನಿಸಿದ್ದರು.
ರಿಹಾನ್ನಾ ಟ್ವೀಟ್ ಮಾಡಿದ ನಂತರ ಹೋರಾಟವು ಜಾಗತಿಕವಾಗಿ ಸದ್ದು ಮಾಡಿದ್ದು ಹಲವಾರು, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ರೈತ ಹೋರಾಟದ ಪರವಾಗಿ ಟ್ವೀಟ್ ಮಾಡಿದ್ದರು. ಇದರಿಂದ ಅಸಮಧಾನ ಗೊಂಡಿದ್ದ ಕೇಂದ್ರ ಸರ್ಕಾರ ರೈತರ ಸಮಸ್ಯೆಯು ದೇಶದ ಆಂತರಿಕ ವಿಷಯ, ವಿದೇಶಿಯರು ತಲೆ ಹಾಕಬಾರದು ಎಂದು ಹೇಳಿತ್ತು. ಜೊತೆಗೆ ರೈತರನ್ನು ಬೆಂಬಲಿಸಿದ ಹ್ಯಾಶ್ಟ್ಯಾಗ್ಗಳ ವಿರುದ್ದ ಕೆಲವು ಹ್ಯಾಶ್ಟ್ಯಾಗ್ಗಳನ್ನು ನೀಡಿತ್ತು. ಇದನ್ನು ಅನುಸರಿಸಿ ಭಾರತೀಯ ಸೆಲೆಬ್ರಿಟಿಗಳು ಸರ್ಕಾರದ ಪರ ಬ್ಯಾಟ್ ಬೀಸಿದ್ದರು.
ಈ ಮಧ್ಯೆ ರೈತ ಹೋರಾಟದ ಪರವಾಗಿ ಮಾತನಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್, ತನ್ನ ಟ್ವೀಟ್ ಒಂದರಲ್ಲಿ ಹೋರಾಟಕ್ಕೆ ಹೇಗೆ ಬೆಂಬಲಿಸಬಹುದು ಎಂಬ ಟೂಲ್ಕಿಟ್ ಅನ್ನು ಹಂಚಿಕೊಂಡಿದ್ದರು. ಇದೀಗ ಪೊಲೀಸರು ಈ ಟೂಲ್ಕಿಟ್ ಅನ್ನು ರಚಿಸಿದವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ರಿಹಾನ್ನಾ ಟ್ವೀಟ್ ಪರಿಣಾಮ-ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ!