Homeಅಂಕಣಗಳುಗೌರಿ ಕಾರ್ನರ್: ಇಡೀ ಮಾನವ ಕುಲಕ್ಕೆ ಜನ್ಮ ನೀಡಿದ ಸ್ತ್ರೀ

ಗೌರಿ ಕಾರ್ನರ್: ಇಡೀ ಮಾನವ ಕುಲಕ್ಕೆ ಜನ್ಮ ನೀಡಿದ ಸ್ತ್ರೀ

ಸಾಮಾನ್ಯವಾಗಿ ‘ಕುಟುಂಬ’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಪುರುಷ ಎಂದು ನಂಬಲಾಗಿದೆ. ಆದರೆ ಅದು ತಪ್ಪು. ವಾಸ್ತವವಾಗಿ ಗಂಡು ಮಕ್ಕಳು ದೊಡ್ಡವರಾದ ಮೇಲೆ ಅವರು ಬೇಟೆಗೆ ಹೋಗುತ್ತಿದ್ದಾಗ ಮಕ್ಕಳು ಮತ್ತು ತನ್ನ ಕುಲದ ಇತರರನ್ನು ನೋಡಿಕೊಳ್ಳುತ್ತಿದ್ದದ್ದು ಮಹಿಳೆ. ಆದ್ದರಿಂದ ‘ಕುಟುಂಬ’ ಮತ್ತು ಅದರ ಲಾಲನೆಪಾಲನೆಯ ಜವಾಬ್ದಾರಿಯನ್ನು ಹೊತ್ತದ್ದು ಮಹಿಳೆ.

- Advertisement -
- Advertisement -

ಸಾಮಾನ್ಯವಾಗಿ ಇತಿಹಾಸಕಾರರು ಮಾನವಕುಲದ ಮೂಲ ಇರುವುದು ಆಹಾರಕ್ಕಾಗಿ ಬೇಟೆಯಾಡುತ್ತಿದ್ದ, ಅದಕ್ಕೆಂದು ಸಲಕರಣೆಗಳನ್ನು ತಯಾರಿಸಿದ ಪುರುಷನಲ್ಲಿ ಎಂದು ವಾದಿಸುತ್ತಾರೆ. ಆದರೆ ವಾಸ್ತವವಾಗಿ ಮಾನವಕುಲದ ಕತೆ ಪ್ರಾರಂಭವಾಗುವುದು ಪುರುಷನಿಂದಲ್ಲ, ಬದಲಾಗಿ ಮಹಿಳೆಯಿಂದ. ಯಾಕೆಂದರೆ ಆಕೆಯೇ ಆದಿಕಾಲದಿಂದ ಇವತ್ತಿನ ತನಕ ತನ್ನ ದೇಹದಲ್ಲಿ ಮಾನವನ ಮೂಲ ಮಾತೃಕೆಯನ್ನು ಹೊತ್ತುಬಂದಿರುವುದು. ಮಾತ್ರವಲ್ಲ, ಆಕೆ ವಿಕಾಸದ ಪ್ರಕ್ರಿಯೆಯಲ್ಲಿ ತನ್ನ ದೇಹದೊಳಗೆ ಮಾಡಿಕೊಂಡ ಬದಲಾವಣೆಯಿಂದಾಗಿಯೇ ಮಾನವವಂಶ ಬೆಳೆಯುವಂತೆ ಮಾಡಿದಳು. ಅಷ್ಟೇ ಮುಖ್ಯವಾಗಿ ಮಹಿಳೆಯಲ್ಲಿ ಬೆಳೆದ ಮಾತೃತ್ವ ಗುಣವೇ ಮನುಷ್ಯರಲ್ಲಿ ಸಂವಹನ ಕಲೆ ಮತ್ತು ಸಾವಯವ ಗುಣ ಮೂಡಿ ನಾಗರಿಕತೆ ಬೆಳೆಯಲು ಕಾರಣವಾಯಿತು ಎಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಆದರೂ ಇದು ಸತ್ಯ.

ಈಗ ವಿಜ್ಞಾನಿಗಳು ಕೂಡ “ಮಹಿಳೆಯೇ ಮಾನವಕುಲದ ಬಲಶಾಲಿ ಮೂಲ ಲಿಂಗ. ಪುರುಷ ಹೆಚ್ಚೆಂದರೆ ಅನುಬಂಧ” ಎಂದು ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಮುಖ್ಯ ಕಾರಣ ಮನುಷ್ಯರ ಜೀವಕೋಶದ ರಚನೆಯಲ್ಲಿ ಮಹಿಳೆಯ ‘ಎಕ್ಸ್’ ಕ್ರೋಮಸೋಮ್ ಪ್ರಧಾನವಾಗಿರುವುದು. ಹೆಣ್ಣುಮಕ್ಕಳು ಹುಟ್ಟುವಾಗ ಅವರು ಮತ್ತೊಂದು ‘ಎಕ್ಸ್’ ಕ್ರೋಮಸೋಮ್‌ಅನ್ನು ಪಡೆಯುತ್ತಾರೆ. ಆದರೆ ಗಂಡು ಮಕ್ಕಳು ಹುಟ್ಟುವಾಗ ಅವರು ಬೇರೆಯದೇ ಆದ ‘ವೈ’ ಕ್ರೋಮಸೋಮ್ ಅನ್ನು ಪಡೆಯುತ್ತಾರೆ. ವಿಜ್ಞಾನಿಗಳು ‘ವೈ’ ಕ್ರೋಮಸೋಮ್‌ಅನ್ನು ‘ಎಕ್ಸ್’ ಕ್ರೋಮಸೋಮಿನ ಅಂಗವಿಕಲ ರೂಪ ಎಂದೂ, ಅದನ್ನು ‘ಜೆನೆಟಿಕ್ ಎರರ್’ ಎಂದೂ ಕರೆಯುತ್ತಾರೆ! ಮಹಿಳೆಯ ದೇಹದಲ್ಲಿರುವ ಅಂಡಾಣು ಪುರುಷನ ದೇಹದಿಂದ ಬರುವ ಶುಕ್ರಕ್ಕಿಂತ ನೂರಾರು ಪಟ್ಟು ದೊಡ್ಡದಾಗಿದ್ದು ಹುಟ್ಟುವ ಮಗುವಿಗೆ ಕೊಡಬೇಕಾದ ಎಲ್ಲಾ ಪ್ರಧಾನ ಜೆನೆಟಿಕ್ ಸಂದೇಶಗಳನ್ನು ರವಾನಿಸುತ್ತದೆ. ಈ ಎಲ್ಲ ಕಾರಣಗಳಿಗೆ ಇತಿಹಾಸಕಾರರು “ಸ್ತ್ರೀತ್ವವೇ ಮಾದರಿ. ಮನುಕುಲಕ್ಕೆ ಆಕೆಯೇ ಮೂಲ” ಎನ್ನುತ್ತಾರೆ.

ಇತ್ತೀಚೆಗೆ ನಡೆದಿರುವ ಹಲವಾರು ಸಂಶೋಧನೆಗಳ ಪ್ರಕಾರ ಜಗತ್ತಿನ ಮನುಷ್ಯರೆಲ್ಲರ ಮೂಲವೂ ಓರ್ವ ಮಹಿಳೆಯೇ. ಖ್ಯಾತ ಬರ್ಕ್ಲಿ, ಕ್ಯಾಲಿಫೋರ್ನಿಯಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪ್ರತ್ಯೇಕವಾಗಿ ನಡೆಸಿದ ಸಂಶೋಧನೆಗಳು ಮಾನವ ಕುಲದ ಡಿಎನ್‌ಎನಿಂದ ‘ಫಿಂಗರ್ ಪ್ರಿಂಟ’ನ್ನು ಪಡೆದು ಅದನ್ನು ಪರೀಕ್ಷಿಸಿದಾಗ ಗೊತ್ತಾಗಿದ್ದು ಏನೆಂದರೆ ಎಲ್ಲರಲ್ಲೂ – ಅವರು ಯಾವುದೇ ದೇಶ, ಪ್ರಾಂತ್ಯ, ಬಣ್ಣ, ಬುಡಕಟ್ಟು ಇತ್ಯಾದಿಗೆ ಸೇರಿದವರಾಗಿದ್ದರೂ – ಇರುವುದು ಒಂದೇ ‘ಫಿಂಗರ್ ಪ್ರಿಂಟ್’ ಎಂಬುದು. ಆ ‘ಫಿಂಗರ್ ಪ್ರಿಂಟ್’ ಸಹಸ್ರಾರು ವರ್ಷಗಳಿಂದ ಬದಲಾಗದೆ ಹಾಗೆಯೇ ಉಳಿದು ಬಂದಿದೆಯಲ್ಲದೆ ಅದು ಮೂಲತಃ ಮಹಿಳೆಯಿಂದಲೇ ಬಂದಿದೆ. ಆ ಮಹಿಳೆ 3,00,000 ವರ್ಷಗಳ ಹಿಂದೆ ಆಫ್ರಿಕಾದಲ್ಲಿದ್ದಳು ಎಂದೂ, ಆನಂತರ ಆಕೆಯಿಂದ ಹುಟ್ಟಿದ ಜನ ಜಗತ್ತಿನಾದ್ಯಂತ ಹರಡಿಹೋದರು ಎಂದೂ ಈ ಸಂಶೋಧನೆಗಳು ಸ್ಪಷ್ಟಪಡಿಸಿವೆ.

ಸುಮಾರು 5,00,000 ವರ್ಷಗಳ ಹಿಂದೆ ಆದ್ಯರೂಪದ ಮಾನವವಂಶ ತನ್ನ ಹಿಂಗಾಲುಗಳ ಮೇಲೆ ನಿಂತಾಗಿನಿಂದ ಮಾನವ ಜಾತಿಯ ಬೆಳವಣಿಗೆಯಲ್ಲಿ ಮಹಿಳೆಯು ಪುರುಷನಿಗಿಂತ ಪ್ರಮುಖ ಪಾತ್ರ ವಹಿಸಿದ್ದಾಳೆ. ಅದರಲ್ಲಿ ಮುಖ್ಯವಾದದ್ದು ಆಕೆಯ ದೇಹದಲ್ಲಾದ ಒಂದು ಮುಖ್ಯ ಬದಲಾವಣೆ. ಮನುಷ್ಯನಂತೆ ಉನ್ನತ ಶ್ರೇಣಿಯ ಸಸ್ತನಿಗಳಾದ ಚಿಂಪಾಂಜಿ, ಗೊರಿಲ್ಲಾ ಮತ್ತು ಒರಾಂಗ್‌ಉಟಾನ್‌ಗಳ (ನರವಾನರ) ಮಹಿಳೆಯರಲ್ಲಿ ಬೆದೆ ಬರುವುದು ಅಪರೂಪಕ್ಕೆ. ಆ ಕಾರಣಕ್ಕೆ ಅವು ಐದಾರು ವರ್ಷಗಳಲ್ಲಿ ಒಂದು ಮರಿಗೆ ಜನ್ಮ ನೀಡುತ್ತವೆ. ಆದ್ದರಿಂದಲೇ ಅವು ಈಗ ಜಗತ್ತಿನಾದ್ಯಂತ ಕಡಿಮೆ ಸಂಖ್ಯೆಯಲ್ಲಿದ್ದು ಸಂರಕ್ಷಿಸಲ್ಪಟ್ಟಿವೆ. ಆದರೆ ಅದೇ ಸಸ್ತನಿ ಜಾತಿಗೆ ಸೇರಿದ ಮಾನವ ಮಹಿಳೆಯ ದೇಹದಲ್ಲಿ ತಿಂಗಳಿಗೊಮ್ಮೆ ಋತುಚಕ್ರ ಸಂಭವಿಸುತ್ತದೆ. ಇದರ ಅರ್ಥ ಆಕೆ ಗೊರಿಲ್ಲಾಗಳಂತೆ ಐದು ವರ್ಷಕ್ಕೊಮ್ಮೆ ಹಡೆಯುವ ಬದಲು ಪ್ರತಿ ತಿಂಗಳೂ ಗರ್ಭ ಧರಿಸುವ ಅವಕಾಶವನ್ನು ಪಡೆದಳು. ಈ ಒಂದು ಬದಲಾವಣೆಯಿಂದಾಗಿ ಆಕೆ ಹೆಚ್ಚೆಚ್ಚು ಮಕ್ಕಳನ್ನು ಹಡೆದು ಮಾನವ ಕುಲ ನಾಶವಾಗದಂತೆ ನೋಡಿಕೊಂಡಳು. ಇದರರ್ಥ ಬೇಟೆಯಾಡುತ್ತಿದ್ದ ಪುರುಷನಿಗಿಂತಲೂ ಋತುಮತಿಯಾಗುವ ಮೂಲಕ ಮಹಿಳೆ ಮಾನವ ಕುಲವನ್ನು ಉದ್ಧಾರ ಮಾಡಿದಳು ಎಂಬುದು ವಿಜ್ಞಾನಿಗಳ ತರ್ಕ.

ಇದರೊಂದಿಗೆ ಆಕೆ ಪುರುಷನ ದೇಹದಲ್ಲೂ ಒಂದು ಮುಖ್ಯ ಬದಲಾವಣೆಗೆ ಕಾರಣಳಾದಳು. ಕಿಂಗ್‌ಕಾಂಗ್ ತರಹದ ಬೃಹತ್ ಗಾತ್ರದ ಪುರುಷ ಗೊರಿಲ್ಲಾಗಳ ಜನನಾಂಗ ಚಿಕ್ಕದಾಗಿರುತ್ತದೆ. ಅದಕ್ಕೆ ಹೋಲಿಸಿದರೆ ಮಾನವ ಪುರುಷನ ಜನನಾಂಗ ದೊಡ್ಡದು. ಅದು ಹೇಗೆ ಸಾಧ್ಯವಾಯಿತು ಎಂಬುದು ಕುತೂಹಲಕಾರಿಯಾಗಿದೆ. ಹೋಮಿನಿಡ್ ಮಹಿಳೆ ತನ್ನ ಹಿಂಗಾಲುಗಳ ಮೇಲೆ ನಡೆಯಲು ಪ್ರಾರಂಭಿಸಿದಾಗ ಆಕೆಯ ಯೋನಿಯು ಮುಂದಿನ ಭಾಗಕ್ಕೆ ಬಂದಿತಲ್ಲದೆ ಕೆಳದಿಕ್ಕಿನತ್ತ ಸರಿಯಿತು. ಜೊತೆಗೆ ಆಕೆಯ ಗರ್ಭಕೋಶವೂ ಆಕೆಯ ದೇಹದಲ್ಲಿ ಆಳಕ್ಕೆ ಹೋಯಿತು. ಬಾಯಿಗೆಟುಕದ ಎಲೆಗಳಿಗಾಗಿ ಹೇಗೆ ಜಿರಾಫೆಯ ಕತ್ತು ಬೆಳೆಯುತ್ತಾ ಹೋಯಿತೋ ಅದೇ ತತ್ವವನ್ನಾಧರಿಸಿ ಮಹಿಳೆಯ ಗರ್ಭಕೋಶಕ್ಕೆ ಹತ್ತಿರವಾಗಲು ಪುರುಷನ ಜನನಾಂಗವೂ ಬೆಳೆಯಿತು!

ದಿನಗಳನ್ನು ಲೆಕ್ಕಹಾಕುವುದನ್ನು ಮೊದಲು ಕಲಿತದ್ದೂ ಮಹಿಳೆಯೇ. ಹೇಗೆ ಎನ್ನುತ್ತೀರಾ? ಎಲ್ಲರಿಗೂ ಗೊತ್ತಿರುವಂತೆ ಪ್ರಾಚೀನಕಾಲದಲ್ಲಿ ಹಲವಾರು ಸಮುದಾಯಗಳು ಬಳಸುತ್ತಿದ್ದದ್ದು ಲೂನಾರ್ ಕ್ಯಾಲೆಂಡರ್‌ಅನ್ನು. ಅದಕ್ಕೆ ಕಾರಣ ಚಂದ್ರನ ಚಲನವಲನಕ್ಕೂ, ಪ್ರತಿ ತಿಂಗಳು ಮಹಿಳೆಯ ದೇಹದಲ್ಲಾಗುತ್ತಿದ್ದ ಬದಲಾವಣೆಗೂ ಇದ್ದ ಸಂಬಂಧ. 28 ದಿನಗಳಿಗೊಮ್ಮೆ ಹೊಸ ಚಂದ್ರ ಉದಯಿಸುವಂತೆ ಸಾಮಾನ್ಯವಾಗಿ ಅಷ್ಟೇ ದಿನಗಳಲ್ಲಿ ಮಹಿಳೆಗೆ ರಕ್ತಸ್ರಾವವಾಗುತಿತ್ತು! ತನ್ನ ದೇಹದ ಕ್ಯಾಲೆಂಡರ್ ಮತ್ತು ಪ್ರಕೃತಿಯ ಕ್ಯಾಲೆಂಡರ್ ನಡುವಿನ ಸಂಬಂಧವನ್ನು ಗುರುತಿಸಿ ದಿನಗಳನ್ನು ಲೆಕ್ಕ ಹಾಕಲಾರಂಭಿಸಿದ್ದು ಮಹಿಳೆಯಲ್ಲದೆ ಇನ್ಯಾರು?!

ಆಧುನಿಕ ಮಾನವನಾಗಿ ರೂಪಗೊಳ್ಳುವ ಮುನ್ನ ಮಾನವಕುಲ ಇನ್ನೂ ಹೋಮಿನಿಡ್ ಆಗಿದ್ದಾಗಿನಿಂದಲೂ – ಅಂದರೆ ಸುಮಾರು 5,00,000 ವರ್ಷಗಳ ಹಿಂದೆ – ತನ್ನವರನ್ನು ಘೋಷಿಸುತ್ತಿದ್ದದ್ದು ಮಹಿಳೆಯೇ ಹೊರತು ಪುರುಷನಲ್ಲ ಎಂಬುದೂ ಸಾಬೀತಾಗಿದೆ. ಆಹಾರಕ್ಕಾಗಿ ಬೇಟೆ ಆಡುವುದರಿಂದ ಹಿಡಿದು ತನ್ನ ವಂಶದ ಉಳಿವಿನ, ಬೆಳವಣಿಗೆಯ ಪ್ರತಿ ಹಂತದಲ್ಲೂ ಆಕೆಯ ಕೊಡುಗೆ ಇದ್ದೇ ಇದೆ. ಆದಿಕಾಲದ ಪಳೆಯುಳಿಕೆಯನ್ನು ಅಧ್ಯಯನ ಮಾಡಿರುವವರ ಪ್ರಕಾರ ಆಗಿನ ಹೋಮಿನಿಡ್ ಮಹಿಳೆಯರು ಇಪ್ಪತ್ತು ವರ್ಷ ವಯಸ್ಸಾಗುವ ಹೊತ್ತಿಗೆ ಸಾವನ್ನಪ್ಪುತ್ತಿದ್ದರು. ಕೆಲವೇ ಕೆಲವರು ಮಾತ್ರ ಮೂವತ್ತನ್ನು ತಲುಪುತ್ತಿದ್ದರು. ಅಪರೂಪಕ್ಕೆ ಕೆಲವರು ನಲವತ್ತನ್ನು ದಾಟುತ್ತಿದ್ದರು. ಆಗಿನ ಕಾಲದ ಮಹಿಳೆಯರು ಅಲ್ಪಾಯುಷಿಗಳಾಗಿದ್ದರೂ ಬದುಕನ್ನು ಸಾಗಿಸಲು ಹಲವಾರು ಕಲೆಗಳನ್ನು ಮೈಗೂಡಿಸಿಕೊಂಡಿದ್ದರು. ಅವುಗಳಲ್ಲಿ ಆಹಾರ ಸಂಗ್ರಹಣೆ, ಮಕ್ಕಳ ಪೋಷಣೆ, ಪ್ರಾಣಿಗಳ ಚರ್ಮದಿಂದ ಬಟ್ಟೆ ಇತ್ಯಾದಿಗಳನ್ನು ರೂಪಿಸುವುದು, ಕುಂಬಾರಿಕೆ, ಅಡುಗೆ, ಪ್ರಕೃತಿಯಲ್ಲಿ ಸಿಗುವ ಹುಲ್ಲು ಇತ್ಯಾದಿಗಳಿಂದ ಬುಟ್ಟಿಗಳನ್ನು ಸೃಷ್ಟಿಸುವುದು, ಹಲ್ಲು ಮತ್ತು ಮೂಳೆಗಳಿಂದ ಮಣಿ ಮತ್ತು ಇತರೆ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು, ಆಶ್ರಯತಾಣಗಳನ್ನು ಕಟ್ಟುವುದು, ಔಷಧ ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳನ್ನು ಪತ್ತೆ ಮಾಡುವುದು, ಪ್ರಾಣಿಗಳ ಚರ್ಮವನ್ನು ಬೇರ್ಪಡಿಸುವ, ಗೆಣಸುಗಳ ಸಿಪ್ಪೆಯನ್ನು ಸುಲಿಯುವ ಇತ್ಯಾದಿ ಸಲಕರಣೆಗಳನ್ನೂ ಮಹಿಳೆಯರೇ ಮಾಡುತ್ತಿದ್ದರು.

ಆದಿಕಾಲದಲ್ಲೂ ಆಹಾರಕ್ಕಾಗಿ ಮಹಿಳೆಯರು ಪುರುಷರನ್ನು ಸಂಪೂರ್ಣವಾಗಿ ಅವಲಂಬಿಸಿರಲಿಲ್ಲ. ಯಾಕೆಂದರೆ ಆತ ಬೇಟೆಗೆಂದು ಹೋದಾಗ ಆಹಾರ ಸಿಗುತ್ತಿದ್ದದ್ದು ಅಪರೂಪಕ್ಕೆ ಮಾತ್ರ. ಈಗಲೂ ಹಲವಾರು ಬುಡಕಟ್ಟುಗಳ ಪುರುಷರು ಬೇಟೆಯಾಡುತ್ತಿದ್ದು ಅವರು ಮನೆಗೆ ಮಾಂಸ ತರುವುದು ಒಮ್ಮೊಮ್ಮೆ ಮಾತ್ರ. ಅಂತಹ ಸಮುದಾಯಗಳು ಇವತ್ತಿಗೂ ಇದ್ದರೆ ಅದಕ್ಕೆ ಕಾರಣ ಆ ಸಮುದಾಯಗಳ ಮಹಿಳೆಯರು ಸಂಗ್ರಹಿಸುವ ಆಹಾರ. ಮಾತ್ರವಲ್ಲ, ಯಾವ ಹಣ್ಣು, ಯಾವ ಸೊಪ್ಪು ತಿನ್ನಲು ಯೋಗ್ಯ, ಯಾವ ಬೀಜವನ್ನು ಕಾಪಾಡಿಟ್ಟುಕೊಳ್ಳಬೇಕು, ಯಾವುದಕ್ಕೆ ಔಷಧಿಯ ಗುಣ ಇದೆ ಎಂಬ ಅರಿವು ಇರುವುದೂ ಆ ಸಮುದಾಯಗಳ ಮಹಿಳೆಯರಲ್ಲೇ. ಆದಿಕಾಲದ ಮಹಿಳೆಯೂ ಇವರಿಗಿಂತ ಭಿನ್ನವಾಗಿರಲಿಲ್ಲ. ಹಾಗೆ ಸಿಕ್ಕ ಆಹಾರವನ್ನು ಹದ ಮಾಡುವ, ಸುಲಿಯುವ ಸಲಕರಣೆಗಳನ್ನು ಕಂಡುಹಿಡಿದದ್ದೂ ಮಹಿಳೆಯೇ. ಅಂದರೆ ಕೃಷಿಯನ್ನು ಮೊದಲು ಅಭ್ಯಸಿಸಿದ್ದು ಮಹಿಳೆಯೇ.

ಸಾಮಾನ್ಯವಾಗಿ ‘ಕುಟುಂಬ’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಪುರುಷ ಎಂದು ನಂಬಲಾಗಿದೆ. ಆದರೆ ಅದು ತಪ್ಪು. ವಾಸ್ತವವಾಗಿ ಗಂಡು ಮಕ್ಕಳು ದೊಡ್ಡವರಾದ ಮೇಲೆ ಅವರು ಬೇಟೆಗೆ ಹೋಗುತ್ತಿದ್ದಾಗ ಮಕ್ಕಳು ಮತ್ತು ತನ್ನ ಕುಲದ ಇತರರನ್ನು ನೋಡಿಕೊಳ್ಳುತ್ತಿದ್ದದ್ದು ಮಹಿಳೆ. ಆದ್ದರಿಂದ ‘ಕುಟುಂಬ’ ಮತ್ತು ಅದರ ಲಾಲನೆಪಾಲನೆಯ ಜವಾಬ್ದಾರಿಯನ್ನು ಹೊತ್ತದ್ದು ಮಹಿಳೆ. ಈಗಲೂ ಹೆಚ್ಚಿನ ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಯೇ ಕುಟುಂಬದ ಮುಖ್ಯಸ್ಥೆ ಆಗಿರುವುದು ಆ ಪದ್ಧತಿಯ ಮುಂದುವರಿಕೆ ಎಂದು ನಂಬಲಾಗಿದೆ.

ಈಗಿನ ಆಧುನಿಕ ಕಾಲದಲ್ಲಿ ಮಹಿಳೆಯರ ಮೇಲೆ ಹಲವಾರು ತರಹದ ಶೋಷಣೆ ನಡೆಯುತ್ತಿದೆ. ಮಹಿಳೆ ಎಂದರೆ ಅಬಲೆ, ಸಮಾನ ಸ್ಥಾನಮಾನಕ್ಕೆ ಅರ್ಹಳಲ್ಲ, ತನ್ನ ಜೀವಮಾನವಿಡೀ ಪುರುಷನನ್ನು ಅವಲಂಬಿಸುವವಳು ಎಂಬ ಕಲ್ಪನೆ ಈಗಲೂ ಇದೆ. ಇಂತಹ ಧೋರಣೆಯಿಂದಾಗಿಯೇ ಆಕೆಯ ಮೇಲೆ ದೈಹಿಕ ದಾಳಿ, ಅತ್ಯಾಚಾರ ಇತ್ಯಾದಿಗಳು ನಡೆಯುತ್ತಿರುತ್ತವೆ. ಆದರೆ ಪ್ರಾಚೀನ ಕಾಲದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿತ್ತು! ಆದಿಮಾನವನಾಗಿದ್ದ ಕಾಲದಲ್ಲಿ ಬದುಕಿ ಬಾಳುವುದೇ ಕಷ್ಟವಾಗಿದ್ದರಿಂದ ಆಹಾರ ಸಂಗ್ರಹಣೆಯಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದ, ಗಿಡಮೂಲಿಕೆಗಳ ಶಕ್ತಿ ಗೊತ್ತಿದ್ದ ಮಹಿಳೆಗೆ ಮರ್ಯಾದೆ ಕೊಡಲಾಗುತ್ತಿತ್ತು. ಈ ಗುಣವನ್ನು ಈಗಲೂ ಬುಡಕಟ್ಟು ಸಮುದಾಯಗಳಲ್ಲಿ ಕಾಣಬಹುದಾಗಿದೆ. ಅಂತಹ ಸಮುದಾಯಗಳಲ್ಲಿ ಮಹಿಳೆಯರ ಮೇಲೆ ಪುರುಷರು ಹಕ್ಕು ಚಲಾಯಿಸುವಂತಿಲ್ಲ. ಆಕೆಯ ಶ್ರಮದ ಫಲವನ್ನು ಕಿತ್ತುಕೊಳ್ಳುವಂತಿಲ್ಲ. ಆಕೆಯ ಚಲನವಲನಗಳ ಮೇಲೆ ನಿಯಂತ್ರಣಗಳನ್ನು ಹೇರುವಂತಿಲ್ಲ. ಆಕೆಯ ಕನ್ಯತ್ವ, ಶೀಲ ಇತ್ಯಾದಿಗಳ ಮಾತು ಬಿಡಿ ಆಕೆಯ ದೇಹದ ಮೇಲೆ ಪುರುಷ ತನ್ನ ಅಧಿಪತ್ಯವನ್ನು ಸಾರುವಂತಿಲ್ಲ. ಇದು ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಇದ್ದ ಸ್ವಾತಂತ್ರ್ಯ ಮತ್ತು ಗೌರವ.

ಶಿಲಾಯುಗದಲ್ಲೂ ಮಹಿಳೆಯರು ಹಲವಾರು ಸಮುದಾಯಗಳಲ್ಲಿ ನಾಯಕಿಯರಾಗಿ, ಕತೆಗಾರರಾಗಿ, ವೈದ್ಯರಾಗಿ, ನ್ಯಾಯ ಕೊಡುವವರಾಗಿ ವಿವಿಧ ಪಾತ್ರಗಳನ್ನು ವಹಿಸುತ್ತಿದ್ದರು ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸುತ್ತಿವೆ. ಮುಖ್ಯವಾಗಿ ಇವೆಲ್ಲವುಗಳೊಂದಿಗೆ ಆಕೆ ತನಗಿದ್ದ ಇನ್ನೊಂದು ಶಕ್ತಿಯನ್ನೂ ಚಲಾಯಿಸುತ್ತಿದ್ದಳು. ಅದು ಮಕ್ಕಳನ್ನು ಹಡೆಯುವ ಮತ್ತು ಆ ಮೂಲಕ ತನ್ನ ಸಮುದಾಯವನ್ನು ಮುನ್ನಡೆಸುವ ಶಕ್ತಿ!

ಇಂತಹ ಹಲವಾರು ಕುತೂಹಲಕಾರಿ ಅಂಶಗಳನ್ನು, ಒಳನೋಟಗಳನ್ನು, ಸಂಶೋಧನೆಗಳ ಮಾಹಿತಿಯನ್ನು ಹೊಂದಿರುವ, ರೋಸಲಿಂಡ್ ಮೈಲ್ಸ್ ಎಂಬಾಕೆ ಬರೆದಿರುವ ‘ಹೂ ಕುಕ್ಡ್ ದಿ ಲಾಸ್ಟ್ ಸಪ್ಪರ್’ ಎಂಬ ಪುಸ್ತಕವನ್ನು ಮೊನ್ನೆ ಮಿತ್ರ ಸಂವರ್ತ ಸಾಹಿಲ್ ಈಮೇಲ್ ಮಾಡಿದರು. ಮಹಿಳೆಯರ ಇತಿಹಾಸವನ್ನು ಚಿತ್ರಿಸಿರುವ ಈ ಪುಸ್ತಕದ ಮೊದಲನೆ ಚಾಪ್ಟರ್‌ನಲ್ಲಿರುವ ಹಲವು ವಿಷಯಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಎಲ್ಲ ಮಹಿಳೆಯರ ಪರವಾಗಿ ಇಂತಹ ಅದ್ಭುತ ಪುಸ್ತಕವನ್ನು ಬರೆದಿರುವ ರೋಸಲಿಂಡ್ ಮೈಲ್ಸ್ ಅವರಿಗೆ ಒಂದು ದೊಡ್ಡ ಥಾಂಕ್ಯೂ!

(ಜುಲೈ 10, 2013ರಂದು ಗೌರಿಯವರು ಬರೆದಿದ್ದ ಕಂಡಹಾಗೆ ಅಂಕಣದ ಆಯ್ದ ಭಾಗ ಇದು. ಕಂಡಹಾಗೆ ಸಂಗ್ರಹ-4ನ್ನು ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿದೆ)


ಇದನ್ನೂ ಓದಿ: ಗೌರಿ ಕಾರ್ನರ್; ಅಪ್ಪ: ‘ನಾನು ಚಿಕ್ಕವಳಾಗಿದ್ದಾಗ ಅಪ್ಪನನ್ನು ‘owl’ ಎಂದು ಕರೆಯುತ್ತಿದ್ದೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...