Homeಕರ್ನಾಟಕಉಕ್ರೇನ್‌ ವಿರುದ್ಧ ಯುದ್ಧ ವಿರೋಧಿಸಿ ರಷ್ಯಾ ಪ್ರಜೆಗಳ ಪ್ರತಿಭಟನೆ; 700 ಜನರ ಬಂಧನ

ಉಕ್ರೇನ್‌ ವಿರುದ್ಧ ಯುದ್ಧ ವಿರೋಧಿಸಿ ರಷ್ಯಾ ಪ್ರಜೆಗಳ ಪ್ರತಿಭಟನೆ; 700 ಜನರ ಬಂಧನ

- Advertisement -
- Advertisement -

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಆಕ್ರಮಣ ಮಾಡಲು ಸೈನ್ಯವನ್ನು ಕಳುಹಿಸಿದ ನಂತರ ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ಬಿರುಸುಪಡೆದಿದೆ. ರಷ್ಯಾದ ಪೊಲೀಸರು ಹಲವು ನಗರಗಳಲ್ಲಿ 700ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ಸ್ವತಂತ್ರ ಮಾಧ್ಯಮಗಳು ವರದಿ ಮಾಡಿವೆ.

ಮಧ್ಯ ಮಾಸ್ಕೋದ ಪುಷ್ಕಿನ್ ಚೌಕದ ಬಳಿ ಸುಮಾರು 2,000 ಜನರು ಜಮಾಯಿಸಿದ್ದರು. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 1,000 ಜನರು ಸೇರಿದ್ದರು ಎಂದು ಸ್ಥಳದಲ್ಲಿದ್ದ ಎಎಫ್‌ಪಿ ವರದಿಗಾರರು ತಿಳಿಸಿದ್ದಾರೆ.

ರಷ್ಯಾ ಜನತೆಯ ವಿರೋಧದ ನಡುವೆ ಉಕ್ರೇನ್‌ ಮೇಲೆ ಆಕ್ರಮಣ ನಡೆಯುತ್ತಿದೆ. ಹೆಚ್ಚಿನ ಪ್ರತಿಭಟನಾ ನಿರತ ನಾಯಕರನ್ನು ಹತ್ಯೆ ಮಾಡಲಾಗಿದೆ, ಜೈಲಿನಲ್ಲಿಡಲಾಗಿದೆ ಅಥವಾ ದೇಶದಿಂದ ಹೊರದೂಡಲಾಗಿದೆ ಎಂದು ವರದಿಗಳಾಗಿವೆ.

ಪುಟಿನ್ ವಿರುದ್ಧ ರಷ್ಯಾದಲ್ಲಿ ಬಹುದೊಡ್ಡ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರನ್ನು ಕಳೆದ ಎರಡೂವರೆ ವರ್ಷಗಳಿಂದ ಜೈಲಿನಲ್ಲಿ ಇರಿಸಲಾಗಿದೆ.

ಗುರುವಾರ ಮುಂಜಾನೆ ಪುಟಿನ್ ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದ ನಂತರ ರಷ್ಯಾದ ಹಲವಾರು ಕಾರ್ಯಕರ್ತರು ಜನರು ಬೀದಿಗಿಳಿಯುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಕರೆ ನೀಡಿದ್ದಾರೆ.

ಮಾಸ್ಕೋದಲ್ಲಿ, ಪ್ರತಿಭಟನಾಕಾರರು ಪುಷ್ಕಿನ್ ಚೌಕದಲ್ಲಿ ಸೇರಿ “ಯುದ್ಧ ಬೇಡ!” ಎಂದು ಘೋಷಣೆ ಕೂಗಿದ್ದಾರೆ.

“ನಾನು ಆಘಾತಕ್ಕೊಳಗಾಗಿದ್ದೇನೆ. ನನ್ನ ಸಂಬಂಧಿಕರು ಮತ್ತು ಪ್ರೀತಿಪಾತ್ರರು ಉಕ್ರೇನ್‌ನಲ್ಲಿ ವಾಸಿಸುತ್ತಿದ್ದಾರೆ” ಎಂದು 23 ವರ್ಷದ ಅನಸ್ತಾಸಿಯಾ ನೆಸ್ಟುಲ್ಯ ಮಾಸ್ಕೋದಲ್ಲಿ ಹೇಳಿದರು.

“ನಾನು ಅವರಿಗೆ ಫೋನ್ ಮೂಲಕ ಏನು ಹೇಳಬಹುದು? ನೀವು ಅಲ್ಲಿಯೇ ಇರಿ ಎನ್ನಬಹುದೆ?” ಎಂದು ಅವರು ಕೇಳಿದರು. “ಅನೇಕರು ಪ್ರತಿಭಟಿಸಲು ಹೆದರುತ್ತಾರೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸೇಂಟ್ ಪೀಟರ್ಸ್ಬರ್ಗ್‌‌ನಲ್ಲಿ ಸೇರಿದ್ದ ಅನೇಕರು ಇದೇ ರೀತಿಯ ಹೇಳಿಕೆಗಳನ್ನು ನೀಡಿ ಪುಟಿನ್‌ ವಿರುದ್ಧ ಸಿಡಿದೆದ್ದಿದ್ದಾರೆ.

“ಅಧಿಕಾರಿಗಳಿಗೆ ಹುಚ್ಚು ಹಿಡಿದಿದೆ ಎಂಬ ಭಾವನೆ ನನ್ನಲ್ಲಿದೆ” ಎಂದು 27 ವರ್ಷದ ಸ್ವೆಟ್ಲಾನಾ ವೋಲ್ಕೊವಾ ತಿಳಿಸಿದ್ದಾರೆ. ರಷ್ಯಾದಲ್ಲಿ ಪ್ರತಿಭಟನೆ ಮಾಡಲು ಕೆಲವೇ ಜನರು ಸಿದ್ಧರಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಅಪಪ್ರಚಾರದಿಂದ ಜನರನ್ನು ಮೂರ್ಖರನ್ನಾಗಿಸಲಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಮೂವರು ಪೊಲೀಸ್ ಅಧಿಕಾರಿಗಳು ಅವರನ್ನು ಎಳೆದೊಯ್ಯುತ್ತಿದ್ದಂತೆ, ಯುವಕನೊಬ್ಬ- “ನೀವು ಯಾರೊಂದಿಗೆ ಹೋರಾಡುತ್ತಿದ್ದೀರಿ? ಪುಟಿನ್ ಅವರನ್ನು ಬಂಧಿಸಿ” ಎಂದು ಘೋಷಣೆ ಕೂಗಿದನು.

ಇತ್ತೀಚಿನ ವರ್ಷಗಳಲ್ಲಿ ಪ್ರತಿಭಟನಾ ಕಾನೂನುಗಳನ್ನು ರಷ್ಯಾ ಕಠಿಣಗೊಳಿಸಿದೆ. ಸಾಮಾನ್ಯವಾಗಿ ಸಾಮೂಹಿಕ ಬಂಧನಗಳನ್ನು ಮಾಡುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ.

ಜೈಲಿನಲ್ಲಿರುವ ವಿರೋಧ ಪಕ್ಷದ ನಾಯಕ ನವಲ್ನಿ ಅವರು ಉಕ್ರೇನ್ ಮೇಲಿನ ಆಕ್ರಮಣವನ್ನು ವಿರೋಧಿಸಿದ್ದಾರೆ. “ನಾನು ಈ ಯುದ್ಧದ ವಿರುದ್ಧ ಇದ್ದೇನೆ” ಎಂದು ನವಲ್ನಿ ಅವರು ಸ್ವತಂತ್ರ ಟೆಲಿವಿಷನ್ ಚಾನೆಲ್ ಡೋಜ್ ಪ್ರಕಟಿಸಿದ ವೀಡಿಯೊದಲ್ಲಿ ತಿಳಿಸಿದ್ದಾರೆ.

“ದೇಶದೊಳಗಿನ ಸಮಸ್ಯೆಗಳನ್ನು ಮುಚ್ಚಿಹಾಕಲು, ರಷ್ಯಾ ಸರ್ಕಾರ ಎಸಗಿರುವ ತಪ್ಪುಗಳನ್ನು ಜನರಿಗೆ ತಿಳಿಯದಂತೆ ಮುಚ್ಚಿ ಹಾಕಲು ರಷ್ಯಾ ಮತ್ತು ಉಕ್ರೇನ್ ನಡುವಿನ ಈ ಯುದ್ಧ ನಡೆಯುತ್ತಿದೆ” ಎಂದು 45 ವರ್ಷದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಯುದ್ಧ-ವಿರೋಧಿ ನಿಲುವು ಹೊಂದಿರುವವರು ಪ್ರತಿಭಟನೆಗಳನ್ನು  ನಡೆಸದಂತೆ ರಷ್ಯಾ ಅಧಿಕಾರಿಗಳು ಎಚ್ಚರಿಕೆಗಳನ್ನು ನೀಡಿದ್ದಾರೆ.

ಪ್ರಮುಖ ಅಪರಾಧಗಳನ್ನು ತನಿಖೆ ಮಾಡುವ ಸರ್ಕಾರಿ ಸಂಸ್ಥೆಯಾದ ತನಿಖಾ ಸಮಿತಿಯು ಎಚ್ಚರಿಕೆ ನೀಡಿದ್ದು, ರಷ್ಯನ್ನರು ವಿದೇಶಿ ರಾಜಕೀಯ ಪರಿಸ್ಥಿತಿಗೆ ಸಂಬಂಧಿಸಿದ ಅನಧಿಕೃತ ಪ್ರತಿಭಟನೆಗಳಿಗೆ ಸೇರಿದರೆ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದಿದೆ.


ಇದನ್ನೂ ಓದಿರಿ: ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಸೂಕ್ತ ಕ್ರಮ: ಬಸವರಾಜ ಬೊಮ್ಮಾಯಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...