ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗಳ ಭರ್ತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಪರೀಕ್ಷೆಗಳಲ್ಲಿ ಸಂದರ್ಶನದ ಅಂಕವನ್ನು 25ಕ್ಕೆ ಕಡಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ರಾಜ್ಯಸಭೆಯ ಜೆಡಿಎಸ್ ಸದಸ್ಯ ಎಚ್.ಡಿ.ದೇವೇಗೌಡ ವಿರೋಧಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ದೇವೇಗೌಡರು, “ಸಾಂವಿಧಾನಿಕ ಸಂಸ್ಥೆಯಾಗಿರುವ ಕೆಪಿಎಸ್ಸಿಯಲ್ಲಿ ಕಾಲಕಾಲಕ್ಕೆ ಬದಲಾವಣೆ ಅಗತ್ಯ. ಆದರೆ, ಅಂತಹ ಬದಲಾವಣೆಗಳು ಎಲ್ಲ ಕಾಲಕ್ಕೂ ಹೊಂದಿಕೆಯಾಗಬೇಕು ಮತ್ತು ಕೇಂದ್ರ ಲೋಕ ಸೇವಾ ಆಯೋಗದ ಮಾದರಿಯಲ್ಲೇ ಇರಬೇಕು” ಎಂದು ಹೇಳಿದ್ದಾರೆ.
ಆಯೋಗವು ಇತ್ತೀಚಿನ ದಿನಗಳಲ್ಲಿ ಬದಲಾವಣೆಯ ನೆಪದಲ್ಲಿ ಸರ್ವಸಮ್ಮತವಾದ ಮತ್ತು ಬಹುಕಾಲದಿಂದ ಅನುಸರಿಸುತ್ತಿರುವ ಪ್ರಮಾಣಿತ ಕಾರ್ಯವಿಧಾನಗಳಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುವಂತೆ ಭಾಸವಾಗುತ್ತಿದೆ. ಇಂತಹ ದೂರದೃಷ್ಟಿಯಿಲ್ಲದ ಬದಲಾವಣೆಗಳಿಂದ ಭವಿಷ್ಯದಲ್ಲಿ ಉತ್ತಮ ಮತ್ತು ಕಾರ್ಯದಕ್ಷತೆಯುಳ್ಳ ಅಧಿಕಾರಿಗಳನ್ನು ಆಯ್ಕೆಮಾಡಲು ಕಷ್ಟವಾಗಬಹುದು ಎಂದಿದ್ದಾರೆ.
ಆಯೋಗದಲ್ಲಿ ದೀರ್ಘಕಾಲದಿಂದ ಜಾರಿಯಲ್ಲಿದ್ದ ಪ್ರಮಾಣಿತ ಕಾರ್ಯವಿಧಾನವನ್ನು 2020ರ ಜೂನ್ 4ರಂದು ಬದಲಾವಣೆ ಮಾಡಲಾಗಿತ್ತು. ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 150ರಿಂದ 50ಕ್ಕೆ ಇಳಿಕೆ ಮಾಡಲಾಗಿತ್ತು. ಈಗ ಅದನ್ನು 25ಕ್ಕೆ ಇಳಿಸುವ ತೀರ್ಮಾನ ಮಾಡಲಾಗಿದೆ. ಇಂತಹ ತೀರ್ಮಾನದಿಂದ ಗ್ರಾಮೀಣ ಪ್ರದೇಶದ ಸ್ಪರ್ಧಾ ಆಕಾಂಕ್ಷಿಗಳಿಗೆ ತೊಂದರೆಯಾಗುತ್ತದೆ ಎಂದು ದೇವೇಗೌಡ ಹೇಳಿದ್ದಾರೆ.
ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಕೆಪಿಎಸ್ಸಿ ಕುರಿತು ಸಾರ್ವಜನಿಕರಲ್ಲಿ ಗೌರವ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ. ಈ ಎಲ್ಲ ಋಣಾತ್ಮಕ ತೀರ್ಮಾನಗಳನ್ನು ಕೈಬಿಡಬೇಕು. ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲೇ ಮುಖ್ಯ ಪರೀಕ್ಷೆಯ ಅಂಕಗಳು ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿರಿ: ಏಪ್ರಿಲ್ 10ರಿಂದ ಮೇ 15ವರೆಗೆ ಶಾಲೆಗಳಿಗೆ ಬೇಸಿಗೆ ರಜೆ
ದೇವೆಗೌಡರೆ, ನಿಮ್ಮಂತಹ ರಾಜಕೀಯ ವ್ಯಕ್ತಿಗಳ ಕೃಪಾ ಕಟಾಕ್ಷದಿಂದ KPSC ಎಂಬ ಸ್ವತಂತ್ರ ಸಂಸ್ಥೆ ಭ್ರಷ್ಟಾಚಾರಿಗಳ ಕೂಪವಾಗಿದೆ. ನಿಮಗೆ ಮಾನ ಮರ್ಯಾದೆ ಎನಾದರೂ ಇದ್ದರೆ ತೆಪ್ಪಗೆ ಬಾಯಿ ಮುಚ್ಚಿಕೊಂಡು ಇರಿ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೇ ದಿಕ್ಕರಿಸಿ 2011 ರ ನೇಮಕಾತಿ ಸಿಂಧು ಗೊಳಿಸಲು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಾಗಲೇ ನಿಮ್ಮ ಯೋಗ್ಯತೆ ಎನು ಎಂದು ರಾಜ್ಯದ ಜನ ಕಂಡಿದ್ದಾರೆ.