Homeಕರ್ನಾಟಕಆಪರೇಷನ್ ಕಮಲದಲ್ಲಿ ಶುರುವಾಯ್ತು ಕೃಷ್ಣ ಗಾರುಡಿ: ಒಕ್ಕಲಿಗ ವರ್ಸಸ್ ಒಕ್ಕಲಿಗೆ! ಇದು ಆರೆಸ್ಸೆಸ್ಸಿನ ಹೊಸ...

ಆಪರೇಷನ್ ಕಮಲದಲ್ಲಿ ಶುರುವಾಯ್ತು ಕೃಷ್ಣ ಗಾರುಡಿ: ಒಕ್ಕಲಿಗ ವರ್ಸಸ್ ಒಕ್ಕಲಿಗೆ! ಇದು ಆರೆಸ್ಸೆಸ್ಸಿನ ಹೊಸ ದಾಳ

ಈಗ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿ, ಸರ್ಕಾರ ಮುಂದುವರೆದರೆ ಅದು ಸಂಘ ಪರಿವಾರಕ್ಕೆ ಇನ್ನೂ ಖುಷಿಯ ವಿಷಯವೇ.

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಮತ್ತೆ ರಾಜ್ಯ ಬಿಜೆಪಿಯ ಏಕೈಕ ಅಜೆಂಡಾ ಆಪರೇಷನ್ ಕಮಲ ಶುರುವಾಗಿದೆ. ಈ ಸಲ ಅದರ ನೆಲೆಯನ್ನು ಒಕ್ಕಲಿಗ ಬೆಲ್ಟಿಗೆ ಶಿಫ್ಟ್ ಮಾಡುವ ಮೂಲಕ ಬಿಜೆಪಿ ಹೊಸ ಆಟ ಶುರು ಮಾಡಿದೆ. ಪ್ರತಿ ಸಲ ಯಡಿಯೂರಪ್ಪರನ್ನು ಮುಂದಿಟ್ಟುಕೊಂಡು ಆಪರೇಷನ್ ಕಮಲಕ್ಕೆ ಕೈ ಹಾಕಿದಾಗ, ಲಿಂಗಾಯತರು ಒಕ್ಕಲಿಗ ಸರ್ಕಾರವನ್ನು ಕೆಡವಲು ಹೊರಟಿದ್ದಾರೆ ಎಂಬ ಜನಾಭಿಪ್ರಾಯ ಅಲ್ಲಲ್ಲಿ ತೇಲಿ ಬರುತ್ತಿತ್ತು. ಆದರೆ, ಈ ಸಲ ಬಿಜೆಪಿ ಹೊಸ ತಂತ್ರಕ್ಕೆ ಮೊರೆ ಹೋಗಿದೆ. ಇದರ ಹಿಂದೆ ಸಂಘ ಪರಿವಾರ ಇದೆ, ದೆಹಲಿಯ ಬಿಜೆಪಿ ದೊರೆಗಳೂ ಇದ್ದಾರೆ!

ರಾಜ್ಯ ರಾಜಕಾರಣದಲ್ಲಿ ಚಲಾವಣೆ ಕಳೆದುಕೊಂಡ ನಾಣ್ಯ ಎಸ್.ಎಂ.ಕೃಷ್ಣರವರ ಮನೆಯಲ್ಲಿ ಮತ್ತೆ ಆಪರೇಷನ್ ಕಮಲದ ಮುನ್ನುಡಿ ಬರೆಯಲಾಗಿದೆ. ಅಲ್ಲಿ ಯಡಿಯೂರಪ್ಪರ ಜೊತೆ ಪಕ್ಷೇತರ(?) ಸಂಸದೆ ಸುಮಲತಾ ಇರುವಾಗಲೇ ಕಾಂಗ್ರೆಸ್‍ನ ಸ್ವಘೋಷಿತ ಭಿನ್ನಮತೀಯ ನಾಯಕ ರಮೇಶ ಜಾರಕಿಹೊಳಿ ಮತ್ತು ಕಾಂಗ್ರೆಸ್ ಶಾಸಕ ಡಾ.ಸುಧಾಕರ ಜೊತೆ ಹಾಜರು! ಅಲ್ಲಿ ಬಿಜೆಪಿಯ ಆರ್.ಅಶೋಕರ ಉಪಸ್ಥಿತಿಯೂ ಇತ್ತು! ಲಿಂಗಾಯತರು ಒಕ್ಕಲಿಗ ಸರ್ಕಾರ ಕೆಡವಿದರು ಎಂಬ ಅಪಾದನೆ ಬರಬಾರದು ಎಂದೆಲ್ಲ ಯೋಚಿಸಿ ಬಿಜೆಪಿ ಈ ಆಟ ಶುರು ಮಾಡಿದೆಯೇ? ಇದರ ಹಿಂದೆ ಆರೆಸ್ಸೆಸ್ ಪಾತ್ರವೂ ಇದೆಯೇ?

ಒಕ್ಕಲಿಗ ನೆಲೆಯ ಹಿಂದೊಂದು ಷಡ್ಯಂತ್ರ!

ಇಲ್ಲಿ ನೆಪ ಮಾತ್ರಕ್ಕೆ ಎಸ್.ಎಂ.ಕೃಷ್ಣ ಎಂಬ ಒಕ್ಕಲಿಗ ನಾಯಕ(?)ನ ಮನೆ ಆಪರೇಷನ್ ಕಮಲದ ನೆಲೆ ಆಗಿರುವಂತಿದೆ ತೋರುತ್ತಿದೆಯಾದರೂ, ಇದರ ಹಿಂದೆ ಒಂದು ಷಡ್ಯಂತ್ರವೇ ಇದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟು ಎಲ್ಲ ಕಡೆ ಫೇಲಾಗಿರುವ ಬಿಜೆಪಿಗೆ ಕರ್ನಾಟಕದಲ್ಲೂ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಲು ಎರಡು ಸಾರಿಯೂ ಅಡ್ಡಿಯಾಗಿದ್ದು ಒಕ್ಕಲಿಗ ಪ್ರಾಬಲ್ಯದ ಏರಿಯಾದಲ್ಲಿ ಅದರ ಅನುಪಸ್ಥಿತಿ. ಆದರೆ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಅದು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೂ ತನ್ನ ಗೆಲುವನ್ನು ವಿಸ್ತರಿಸಿದೆ. ಮೈಸೂರನ್ನೂ ತನ್ನ ಹಿಡಿತದಲ್ಲೇ ಉಳಿಸಿಕೊಂಡಿದೆ. ಮಂಡ್ಯದಲ್ಲಿ ಗೆದ್ದ ಸುಮಲತಾರನ್ನೂ ಹೆಚ್ಚೂ ಕಡಿಮೆ ಬುಟ್ಟಿಗೆ ಹಾಕಿಕೊಂಡಿದೆ.

ಅಂದರೆ ಅದಕ್ಕೆ ಅಧಿಕಾರ ಹಿಡಿಯಲು ಕೊರತೆಯಾಗುತ್ತಿದ್ದ ಸೀಟುಗಳನ್ನು ತುಂಬಿಕೊಳ್ಳಲು ಬೇಕಾಗಿದ್ದ ಒಕ್ಕಲಿಗ ಬೆಲ್ಟ್‍ನೊಳಕ್ಕೆ ಅದು ಸಣ್ಣ ಮಾನ್ಯತೆ ಪಡೆದಿದೆ. ಹಾಗಂತ ಅದರರ್ಥ ಒಕ್ಕಲಿಗರೆಲ್ಲ ಬಿಜೆಪಿ ಪರ ಓಟು ಮಾಡಿದಂತೆಯೂ ಅಲ್ಲ. ಹಾಸನ, ಮೈಸೂರು, ಮಂಡ್ಯಗಳಲ್ಲಿ ಒಕ್ಕಲಿಗರೇನೂ ಪೂರ್ತಿಯಾಗಿ ಜೆಡಿಎಸ್ ಕೈಬಿಟ್ಟಿಲ್ಲ. ಆದರೆ ಈ ಸಲದ ಸಂದರ್ಭದ ಲಾಭ ಪಡೆದ ಬಿಜೆಪಿ ಒಕ್ಕಲಿಗ ಪ್ರದೇಶಕ್ಕೆ ವಿಸ್ತರಿಸಿದ್ದಂತೂ ಸತ್ಯ. ಇದನ್ನು ಹಾಗೇ ಮುಂದುವರಿಸಿಕೊಂಡು ವಿಸ್ತರಿಸುತ್ತ ಹೋಗುವುದು ಆರೆಸ್ಸೆಸ್ಸಿನ ಪ್ಲಾನ್. ಅದಕ್ಕೆ ಈಗ ಹೊಸ ಸರ್ಕಾರ ಮಾಡಲೇಬೇಕೆಂಬ ಅತ್ಯುತ್ಸಾಹವೂ ಇಲ್ಲ. ಅದು ಯಡಿಯೂರಪ್ಪರಿಗೆ ಮಾತ್ರವೇ ಇರಬಹುದು.

ಸುಧಾಕರ್

ಸಂಘ ಪರಿವಾರದ ಉದ್ದೇಶ ಸಿದ್ದರಾಮಯ್ಯರ ಹೆಸರನ್ನು ಬದ್ನಾಮ್ ಮಾಡುವುದು. ಈಗಾಗಲೇ ಅದು ಲಿಂಗಾಯತರಲ್ಲಿ ಅವರ ಹೆಸರು ಕೆಡಿಸಲು ಏನೇನೋ ಕುತಂತ್ರ ಮಾಡಬೇಕೋ ಅದನ್ನೆಲ್ಲ ಮಾಡಿ ಯಶಸ್ವಿಯಾಗಿದೆ. 2018ರ ವಿಧಾನಸಭಾ ಚುನಾವಣೆ ಹೊತ್ತಿಗೆ ಅದು ಒಕ್ಕಲಿಗರನ್ನು ಸಿದ್ದರಾಮಯ್ಯ ವಿರುದ್ಧ ಎತ್ತಿ ಕಟ್ಟುವಲ್ಲಿಯೂ ಸಫಲವಾಗಿತ್ತು. ಅದರ ಲಾಭ ಸಿಕ್ಕಿದ್ದು ಜೆಡಿಎಸ್‍ಗೆ. ಜೆಡಿಎಸ್ ಗೆದ್ದ ಕ್ಷೇತ್ರಗಳಲ್ಲಿನ ಗೆಲುವಿನ ಅಂತರ ಅದನ್ನು ತೋರಿಸುತ್ತದೆ. ಆದರೆ, ಅಂತಿಮವಾಗಿ ಸರ್ಕಾರ ರಚಿಸಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್.

ಈಗ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿ, ಸರ್ಕಾರ ಮುಂದುವರೆದರೆ ಅದು ಸಂಘ ಪರಿವಾರಕ್ಕೆ ಇನ್ನೂ ಖುಷಿಯ ವಿಷಯವೇ. ಆಗ ಸಿದ್ದರಾಮಯ್ಯ ಜೊತೆಗೆ ದೇವೇಗೌಡ ಮತ್ತು ಕುಮಾರಸ್ವಾಮಿಯ ಹೆಸರನ್ನೂ ಬದ್ನಾಮ್ ಮಾಡುವ ಸಂಚನ್ನು ಅದು ಮಾಡಿದೆ. ಅದಕ್ಕೆ ಪೂರಕವಾಗಿ ಆಗಾಗ ಸುದ್ದಿ ಸೃಷ್ಟಿಸಲು ದೃಶ್ಯ ಮಾಧ್ಯಮಗಳೂ, ಸುಳ್ ಸೃಷ್ಟಿಸಲು ಬಿಜೆಪಿಯ ಫೇಕ್ ಯುನಿವರ್ಸಿಟಿಗಳೂ ಇದ್ದೇ ಇವೆ.

ಬಿ.ಸಿ ಪಾಟೀಲ್

ಸದ್ಯಕ್ಕೆ 8-10 ಶಾಸಕರು ಸಲೀಸಾಗಿ ಸಿಕ್ಕರೆ ಯಡಿಯೂರಪ್ಪಗೆ ಅವಕಾಶ ಮಾಡಿ ಕೊಡುವುದು, ಇಲ್ಲದಿದ್ದರೆ ಸಿದ್ದರಾಮಯ್ಯ-ಕುಮಾರಸ್ವಾಮಿ ಗಟ್ಟಿಯಾಗಿದ್ದನ್ನೇ ನೆಗೆಟಿವ್ ಆಗಿ ಬಿಂಬಿಸಿ ಒಕ್ಕಲಿಗ ಬೆಲ್ಟಿನಲ್ಲೂ ತನ್ನ ಪಾರುಪತ್ಯ ಸ್ಥಾಪಿಸುವುದು ಸಂಘ ಪರಿವಾರದ ಉದ್ದೇಶ. ಈಗಲೇ ಸರ್ಕಾರ ರಚಿಸುವುದಕ್ಕಿಂತ ವಿಧಾನಸಭೆ ವಿಸರ್ಜನೆ ಆದ ನಂತರ ಸ್ವಂತ ಬಲದ ಮೇಲೆಯೇ ಅಧಿಕಾರ ಪಡೆದರೆ ಒಳ್ಳೆಯದು ಎಂಬುದು ದಿಲ್ಲಿ ದೊರೆಗಳು ಮತ್ತು ಆರೆಸ್ಸೆಸ್‍ನ ಯೋಜನೆ. ಇಲ್ಲಿ ಯಡಿಯೂರಪ್ಪ ಒಂದು ಪಾನ್ ಅಷ್ಟೇ.. ಈ ಸಲ ಆಪರೇಷನ್ ಕಮಲ ಯಶಸ್ವಿಯಾದರೂ, ಆಗದಿದ್ದರೂ ಯಡಿಯೂರಪ್ಪಗೆ ಕೇಂದ್ರ ಸಚಿವ ಸ್ಥಾನವನ್ನೋ, ರಾಜ್ಯಪಾಲರ ಹುದ್ದೆಯನ್ನೋ ಅಥವಾ ಅವರ ಮಗ ರಾಘವೇಂದ್ರನಿಗೆ ಕೇಂದ್ರದಲ್ಲಿ ರಾಜ್ಯ ಸಚಿವ ಸ್ಥಾನ ದಯಪಾಲಿಸುವ ಮೂಲಕ ಯಡಿಯೂರಪ್ಪನವರ ರಾಜ್ಯ ರಾಜಕೀಯಕ್ಕೆ ಅಂತ್ಯ ಹಾಡುವ ಏರ್ಪಾಡನ್ನೂ ಬಿಜೆಪಿ ಸಂಘ ಪರಿವಾರ ಮಾಡಿಕೊಂಡಿದೆ.

ಆಟದ ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿ!

ಕಮಠಹಳ್ಳಿ

ಮಧ್ಯಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ ಸುದ್ದಿ ಬರುತ್ತಿದ್ದಂತೆ ಅಲ್ಲಿನ ಬಿಜೆಪಿ ರಾಜ್ಯ ಘಟಕಕ್ಕೆ ಅಮಿತ್ ಶಾ ಕಡೆಯಿಂದ ಒಂದು ತುರ್ತು ಸಂದೇಶ ಹೋಗಿತು. ಅಲ್ಲಿನ ಬಿಜೆಪಿ ರಾಜ್ಯ ನಾಯಕರು ಫಲಿತಾಂಶ ಪೂರ್ತಿ ಬರುವ ಮೊದಲೇ ರಾಜ್ಯಪಾಲರನ್ನು ಭೇಟಿಯಾಗಿ, ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ವಿಶ್ವಾಸಮತ ಕಳೆದುಕೊಂಡಿದೆ, ಅದು ವಿಶ್ವಾಸಮತ ಸಾಬೀತು ಮಾಡಬೇಕು ಎಂದು ಮನವಿ ಸಲ್ಲಿಸಿದರು. ಅಂದರೆ, ಅಲ್ಲಿ ಕೇವಲ ಕೆಲವೇ ಸೀಟುಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಈಗ ಮತ್ತೆ ಅಲ್ಲಿ ಅಧಿಕಾರ ಸ್ಥಾಪನೆಗೆ ಅಡ್ಡ ಮಾರ್ಗ ಹಿಡಿದಿದೆ. ರಾಜಸ್ಥಾನದಲ್ಲೂ ಈ ಪ್ರಯೋಗ ಮಾಡಬಹುದಿತ್ತು, ಆದರೆ ಕಷ್ಟವಿದೆ. ಛತ್ತೀಸಘಡದಲ್ಲಂತೂ ಸಾಧ್ಯವೇ ಇಲ್ಲ, ಅಲ್ಲಿ ಬಿಜೆಪಿಗೆ ಬಹಳ ಕಡಿಮೆ ಸೀಟುಗಳು ಬಂದಿವೆ. ಮಧ್ಯಪ್ರದೇಶದ ನಂತರ ಉಳಿದಿದ್ದು ಕರ್ನಾಟಕ. ಇಲ್ಲಿ ವರ್ಷದಿಂದ ನಡೆಸಿರುವ ಮಸಲತ್ತನ್ನು ಈ ಸಲವಾದರೂ ಜಾರಿಗೆ ತರೋಣ ಎಂಬ ಹಟಕ್ಕೆ ಬಿಜೆಪಿ ಹೈಕಮಾಂಡ್ ಬಿದ್ದಿದೆ.

ಭೀಮಾನಾಯ್ಕ

ಮೊದಲ ಬಾರಿ ಒಕ್ಕಲಿಗರು ಬಹುಸಂಖ್ಯಾತರಾಗಿರುವ ಮತ್ತು ಪ್ರಾಬಲ್ಯ ಹೊಂದಿರುವ ಭಾಗದಲ್ಲಿ ಸೀಟುಗಳ ಲೆಕ್ಕದಲ್ಲಿ ನೆಲೆ ಕಂಡುಕೊಂಡಿರುವ ಬಿಜೆಪಿಗೆ ಅದನ್ನು ಹಾಗೇ ಮುಂದುವರೆಸುವ ಆಶೆಯೂ ಇದೆ. ಸಿಕ್ಕಿರುವ ನೆಲೆಯನ್ನು ಕಳೆದುಕೊಳ್ಳಬಾರದು ಎಂಬ ಆಶಯದಲ್ಲಿ ಅದು, ‘ಲಿಂಗಾಯತರಿಂದ ಒಕ್ಕಲಿಗ ಸರ್ಕಾರ ಬಿತ್ತು’ ಎಂಬ ಅಪವಾದ ತನ್ನ ಮೇಲೆ ಬರದಂತೆ ಎಚ್ಚರ ವಹಿಸಿ ಹೆಜ್ಜೆ ಇಟ್ಟಂತಿದೆ. ಇದಕ್ಕೆ ಪೂರಕವಾಗಿ ಮೊದಲ ಭಾಗವಾಗಿ, ಎಸ್ಸೆಂ ಕೃಷ್ಣ ಎಂಬ ಚಲಾವಣೆ ಕಳೆದುಕೊಂಡ ನಾಣ್ಯವನ್ನು ಉಜ್ಜಿ ಉಜ್ಜಿ ಮತ್ತೆ ಒಕ್ಕಲಿಗರ ನಾಯಕ ಎಂದು ಬಿಂಬಿಸುವ ಯತ್ನಕ್ಕೂ ಕೈ ಹಾಕಿದೆ. ಅದರ ಫಲವಾಗಿಯೇ ರವಿವಾರ ಎಸ್‍ಎಂ. ಕೃಷ್ಣರ ಮನೆಯಲ್ಲಿ ಆಪ್‍ಕಮಲದ ಬಹದೊಡ್ಡ ನಿರೀಕ್ಷಿತ ಫಲಾನುಭವಿ ಯಡಿಯೂರಪ್ಪ, ನಂತರದ ಫಲಾನುಭವಿಯಾಗಲು ಹೊರಟ ಕಾಂಗ್ರೆಸ್‍ನ ರಮೇಶ ಜಾರಕಿಹೊಳಿ, ಸುಧಾಕರ ಕಾಣಿಸಿಕೊಂಡಿದ್ದಾರೆ. ಅಲ್ಮೋಸ್ಟ್ ತಮಗೇ ಗೊತ್ತಿಲ್ಲದಂತೆ ಬಿಜೆಪಿಯಿಂದ ತಿಂಗಳ ಹಿಂದೆಯೇ ಹೈಜಾಕಾಗಿರುವ ಸಂಸದೆ ಸುಮಲತಾರೂ ಅಲ್ಲಿದ್ದರು. ಸದ್ಯ ಬೆಂಗಳೂರು ಭಾಗದಲ್ಲಿ ಒಕ್ಕಲಿಗ ನಾಯಕ ಅನಿಸಿಕೊಂಡ ಆರ್.ಅಶೋಕ್ ಕೂಡ ಅಲ್ಲಿದ್ದರು. ಇದು ಆಪರೇಷನ್ ಕಮಲದ ಹೊಸ ರೂಪಕ್ಕೆ ಬಿಜೆಪಿಯಷ್ಟೇ ಅಲ್ಲ, ಆರೆಸ್ಸೆಸ್ ಬರೆದ ಮುನ್ನುಡಿಯೂ ಹೌದು…

ನಂಬರ್ ಗೇಮೇ ಫೈನಲ್!

ಪ್ರತಾಪ್ ಗೌಡ

ಸಂಘ ಪರಿವಾರದ ಒಳ ಹುನ್ನಾರ ಏನೇ ಇರಲಿ, ಈ ಸಲ ಮಾತ್ರ ಮುಖ್ಯಮಂತ್ರಿ ಆಗಲೇಬೇಕೆಂದು ಯಡಿಯೂರಪ್ಪ ಶತಾಯಗತಾಯ ರೆಡಿ ಆಗಿದ್ದಾರೆ. ಈಗಾಗಲೇ ಸಂಘ ಪರಿವಾರ ಅವರನ್ನು ತೆರೆಮರೆಯಲ್ಲಿ ತುಳಿಯುತ್ತಿರುವುದನ್ನು ಅರಿತಿರುವ ಅವರು, ಮುಂದಿನ ಚುನಾವಣೆ ಎದುರಿಸಿ ಸಿಎಂ ಆಗುವ ಕನಸನ್ನೇ ಕೈ ಬಿಟ್ಟಿದ್ದಾರೆ. ಸೋ, ಈಗ ಹೇಗಾದರೂ, ಬೈ ಹುಕ್ ಆರ್ ಕ್ರುಕ್, ಅವರೀಗ ಸಿಎಂ ಆಗಲೇಬೇಕು.

ಅದಾಗಬೇಕೆಂದರೆ ಮೈತ್ರಿ ಬಣದ ಶಾಸಕರನ್ನು ಸೆಳೆಯಬೇಕು. ಸೆಳೆಯಲು ಅದೇನೂ ಲವ್ ಗೇಮ್ ಅಲ್ಲವಲ್ಲ. ಅದೆಲ್ಲ ಗೊತ್ತಿರುವ ಯಡಿಯೂರಪ್ಪ ಸಾಕಷ್ಟು ಅಮೌಂಟು ಇಟ್ಟುಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಮೈತ್ರಿ ಬಣದ 16 ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಹೌದು, ಈಗಲ್ಲ ಹೋದ ವರ್ಷದ ಜುಲೈ ತಿಂಗಳಿನಿಂದಲೇ ಮೈತ್ರಿ ಬಣದ 16-20 ಶಾಸಕರು ಸಂಪರ್ಕದಲ್ಲಿ ಇದ್ದೇ ಇದ್ದಾರೆ. ಆದರೆ ಅವರೆಲ್ಲ ಯಾಕೆ ಈ ಕಡೆ ಜಿಗಿಯುತ್ತಿಲ್ಲ? ಗೋಕಾಕಿನ ಶಾಸಕ ಕಾಂಗ್ರೆಸ್‍ನ ರಮೇಶ ಜಾರಕಿಹೊಳಿ ಈಗ ‘ಭಿನ್ನಮತೀಯ’ ಶಾಸಕರನ್ನು ಬಿಜೆಪಿಗೆ ತರುವ ಆತ್ಮವಿಶ್ವಾಸದೊಂದಿಗೆ ಮತ್ತೆ ಎಂಟನೇ ಸಲ ಕಣಕ್ಕೆ ಇಳಿದಿದ್ದಾರೆ.

ನಾಗೇಂದ್ರ

ಈಗ ಅಂಕಿಸಂಖ್ಯೆಗೆ ಬರೋಣ. 224 ಸದಸ್ಯರ ವಿಧಾನಸಭೆಯಲ್ಲಿ ಈಗ ಬಿಜೆಪಿ ಶಾಸಕರ ಸಂಖ್ಯೆ 105 (ಚಿಂಚೋಳಿ ಗೆಲುವಿನ ಕಾರಣದಿಂದ 104 ಇದ್ದದ್ದು 105 ಆಗಿದೆ)…. ಈ ಸಂಖ್ಯೆಯ ಆಧಾರದಲ್ಲಿ ಅದು ವಿಶ್ವಾಸಮತ ಗಳಿಸಬೇಕೆಂದರೆ, ವಿಧಾನಸಭೆಯ ಸಂಖ್ಯಾಬಲ 209ಕ್ಕೆ ಕುಸಿಯಬೇಕು. ಅಂದರೆ ಕನಿಷ್ಠ 15 ಮೈತ್ರಿ ಶಾಸಕರ ರಾಜಿನಾಮೆಯನ್ನು ಅದು ಕೊಡಿಸಬೇಕು! ರಮೇಶ ಜಾರಕಿಹೊಳಿಯಿಂದ ಇದು ಸಾಧ್ಯವಾ?
ಪಕ್ಷೇತರಾದ ರಾಣೆಬೆನ್ನೂರಿನ ಆರ್.ಶಂಕರ್ ಮತ್ತು ಮುಳಬಾಗಿಲಿನ ನಾಗೇಶ್ ಬಿಜೆಪಿಗೆ ಬೆಂಬಲಿಸಿದರೆ, ಆಗ ವಿಧಾನಸಭೆಯ ಸಂಖ್ಯಾಬಲವನ್ನು 214ಕ್ಕೆ ಇಳಿಸಲು ಬಿಜೆಪಿ 10 ಮೈತ್ರಿ ಶಾಸಕರ ರಾಜಿನಾಮೆ ಕೊಡಿಸಬೇಕು… ಇದಾದರೂ ಸಾಧ್ಯವೇ? ಸಾಧ್ಯವಾದರೂ ಆರು ತಿಂಗಳಲ್ಲಿ ಬಿಜೆಪಿ ಈ 10 ಉಪ ಚುನಾವಣೆಗಳಲ್ಲಿ ಕನಿಷ್ಠ 7 ಸೀಟುಗಳನ್ನು ಗೆಲ್ಲಲೇಬೇಕು…. ಅಂದರೆ ಯಡಿಯೂರಪ್ಪಗೆ ಹೇಗೋ ಅಧಿಕಾರ ಸಿಕ್ಕರೆ, ಅಲ್ಲಿಂದ ಅತಂತ್ರದ ಪರ್ವವೇ ಅರಂಭವಾಗಲಿದೆ!

ದದ್ದಲ್

ಆದರೆ, ಆರೆಸ್ಸೆಸ್ಸಿನ ಗುರಿ ಸದ್ಯಕ್ಕೆ ಅಧಿಕಾರ ಹಿಡಿಯುವುದಲ್ಲ. ಈ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಲೇ ಹೋಗುವುದು, ಮೈತ್ರಿ ಗಟ್ಟಿಯಾದಂತೆಲ್ಲ ಸಿದ್ದು-ಕುಮಾರಸ್ವಾಮಿ ಎಲ್ಲ ಒಂದೇ ಎಂದು ಅಪಪ್ರಚಾರ ಮಾಡುವುದು, ಆ ಮೂಲಕ ಈ ಇಬ್ಬರೂ ನಾಯಕರನ್ನು ಜನರ ಕಣ್ಣಲ್ಲಿ ವಿಲನ್ ಮಾಡುವುದು. ಈ ಕುತಂತ್ರ ಮಾಡಲು ಹೇಗೂ ಅವರ ಮಾಧ್ಯಮಗಳೇ ಇವೆಯಲ್ಲ? ಕಾಂಗ್ರೆಸ್, ಜೆಡಿಎಸ್‍ಗಳ ನಾಯಕರಿಗೆ ಈಗಲೂ ಬುದ್ಧಿ ಬರದಿದ್ದರೆ….?

ಆಪರೇಷನ್ ಕಮಲ: ಜಾರಕಿಹೊಳಿಯ ‘ಜಾರು ಬಂಡಿಯಾಟ’!

ರಮೇಶ್ ಜಾರಕಿಹೊಳಿ

ಗೋಕಾಕಿನ ಶಾಸಕ ರಮೇಶ ಜಾರಕಿಹೊಳಿಯೇ ಆಪರೇಷನ್ ಕಮಲದ ಕೇಂದ್ರಬಿಂದು. ಈ ‘ಅಲೆಮಾರಿ’ ಮನುಷ್ಯನ ಮೇಲೆಯೇ ಬಿಜೆಪಿ ಹೆಚ್ಚು ಅವಲಂಬಿತವಾಗಿದೆ. ಈತ ಜಾರುಬಂಡೆಯ ಮೇಲಿನ ತುದಿಯಲ್ಲಿ ಕುಳಿತು, ಜಾರಿ ಬಂದೇ ಬಿಟ್ಟೆ ಎನ್ನುತ್ತಲೇ ಇದ್ದರೆ, ಕೆಳಗೆ ಯಡಿಯೂರಪ್ಪ ರೆಪ್ಪೆ ಬಡಿಯದೇ ಕಾಯುತ್ತಲೇ ಇದ್ದಾರೆ. ಜಾರಕಿಹೊಳಿ ಇಂದೇ ಪಾಳೆ ಹಚ್ಚಿದ್ದವರು ಒಬ್ಬೊಬ್ಬರಾಗಿ ಆಟವೇ ಸಾಕು ಎಂದು ತೆಪ್ಪಗಾಗಿದ್ದಾರೆ. ಸದ್ಯ ಅಥಣಿಯ ಮಹೇಶ ಕುಮಟಳ್ಳಿ, ಹಿರೆಕೇರೂರಿನ ಬಿ.ಸಿ. ಪಾಟೀಲ್, ಬಳ್ಳಾರಿ ಜಿಲ್ಲೆಯ ನಾಗೇಂದ್ರ, ಗಣೇಶ್, ಭೀಮಾನಾಯ್ಕ, ಆನಂದಸಿಂಗ್, ಮಸ್ಕಿಯ ಪ್ರತಾಪಗೌಡ ಪಾಟೀಲ, ರಾಯಚೂರು ಗ್ರಾಮಾಂತರದ ಬಸನಗೌಡ ದದ್ದಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಪಕ್ಷೇತರರಾದ ರಾಣೆಬೆನ್ನೂರಿನ ಆರ್.ಶಂಕರ್ ಮತ್ತು ಮುಳಬಾಗಿಲಿನ ನಾಗೇಶ್- ಈ ಎಲ್ಲರೂ ಬಿಜೆಪಿಗೆ ಸಪೋರ್ಟು ಮಾಡಲಿರುವವರು ಎಂಬ ಲಿಸ್ಟ್ ಇಟ್ಟುಕೊಂಡು ರಮೇಶ ಜಾರಕಿಹೊಳಿ ಹೆಣಗುತ್ತಿದ್ದಾರೆ. ಈಗ ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಲು ಈ ಶಾಸಕರಿಗೆಲ್ಲ ಭಯವಿದೆ. ಗೆದ್ದು ಒಂದು ವರ್ಷವಷ್ಟೇ ಆಗಿರುವುದರಿಂದ ಮತ್ತೆ ಬೇರೆ ಚಿಹ್ನೆಯೊಂದಿಗೆ ಜನರ ಎದುರು ಹೋಗಲು ಇವರಿಗೆಲ್ಲ ಭಯ. ಇಷ್ಟು ದಿನ ಕ್ಷೇತ್ರದ ಕಡೆ ಹಾಯದೇ ರೆಸಾರ್ಟು, ಬೆಂಗಳೂರು ಎನ್ನುತ್ತಿದ್ದ ಈ ಮಹಾಶಯರು ಈಗಲೂ ಸಿದ್ದರಾಮಯ್ಯ ಸಂಪರ್ಕದಲ್ಲೂ ಇದ್ದಾರೆ.

ಇನ್ನು ರಮೇಶ ಜಾರಕಿಹೊಳಿಯನ್ನು ಎಸ್.ಎಂ. ಕೃಷ್ಣರ ಮನೆಗೆ ಕರೆದೊಯ್ದ ಡಾ.ಸುಧಾಕರ ಥೇಟು ದಲ್ಲಾಳಿ ತರಹದ ಮನುಷ್ಯ. ಮುಂಬೈನಲ್ಲಿ ಸಾಕಷ್ಟು ವ್ಯವಹಾರ ಇಟ್ಟುಕೊಂಡಿರುವ ಈ ಮನುಷ್ಯ ಹಿಂದೆ ಮತ್ತು ಈಗಲೂ ಕೃಷ್ಣರ ಸೇವಕ. ಹಾಗೆಯೇ ಸಿದ್ದರಾಮಯ್ಯ ಜೊತೆಗೂ ಸಂಬಂಧವಿದೆ. ಈ ಸಾರಿಯ ಚುನಾವಣಾ ಫಲಿತಾಂಶದ ನಂತರವೂ ಸಿದ್ದರಾಮಯ್ಯ ಈತನ ಮನೆಯಲ್ಲೇ ಕೆಲ ಹೊತ್ತು ವಿಶ್ರಾಂತಿ ಪಡೆದು ಬಂದಿದ್ದರು.

ಹೆಬ್ಬಾರ್

ಇನ್ನು ವಿಧಾನಸಭೆ ವಿಸರ್ಜನೆ ಮಾಡಿ, ಹೊಸ ಚುನಾವಣೆ ಎದುರಿಸುವುದು ಎಂದರೆ ಇವರ್ಯಾರು ಅದನ್ನಂತೂ ಸುತರಾಂ ಒಪ್ಪಲಾರರು. ಆದರೆ ಇವರನ್ನು ಇಟ್ಟುಕೊಂಡೇ ಸರ್ಕಾರದ ಹೆಸರನ್ನು ಕೆಡಿಸುವ ಸಂಚನ್ನಂತೂ ಆರೆಸ್ಸೆಸ್ ರೂಪಿಸುತ್ತಿದೆ.

ಜನರ ಕಷ್ಟಗಳಿಗೆ ಸ್ಪಂದಿಸುವ ರಚನಾತ್ಮಕ ಕೆಲಸಗಳನ್ನು ಮಾಡುವುದಕ್ಕೆ ಆದ್ಯತೆ ನೀಡದೇ ಬೇರೆ ಮಾರ್ಗವಿಲ್ಲ ಈ ಸರ್ಕಾರಕ್ಕೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾರ್ವತ್ರಿಕ ಮುಷ್ಕರ | ಕೆಲ ರಾಜ್ಯಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತ; ಬ್ಯಾಂಕಿಂಗ್, ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ 'ಕಾರ್ಮಿಕ, ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿಗಳ' ವಿರುದ್ಧ ಕಾರ್ಮಿಕ ಸಂಘಟನೆಗಳು ಗುರುವಾರ (ಫೆ.12) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದಿಂದ ವಿವಿಧ ರಾಜ್ಯಗಳಲ್ಲಿ ಜನ ಜೀವನ...

ಅದಾನಿ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್‌ಗೆ ಶಿಕ್ಷೆ: ‘ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೊಡೆತ’ ಎಂದ ಪತ್ರಕರ್ತರ ಸಂಘಟನೆಗಳು

ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತನಿಖಾ ಪತ್ರಕರ್ತ ರವಿ ನಾಯರ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಮತ್ತು ಹಲವಾರು ಪತ್ರಿಕಾ ಸಂಸ್ಥೆಗಳು...

‘ನಾವು ಯಾರನ್ನೂ ನಿಂದಿಸಿಲ್ಲ’: ಚೇಂಬರ್ ‘ದುರ್ವರ್ತನೆ’ ಆರೋಪಕ್ಕೆ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ 

ನವದೆಹಲಿ: ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ತಮ್ಮ ಪಕ್ಷದ ಸಂಸದರು "ಅನುಚಿತವಾಗಿ ವರ್ತಿಸಿದ್ದಾರೆ" ಎಂದು ಆರೋಪಿಸಿದಾಗ, ಅವರನ್ನು ಬೆಂಬಲಿಸಿದ್ದೇನೆ ಎಂದು ಹೇಳಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸದೀಯ ವ್ಯವಹಾರಗಳ...

‘ಭಾರತಕ್ಕೆ ಮರಳಲು ಇದು ಕೊನೆಯ ಅವಕಾಶ’: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್‌ ಎಚ್ಚರಿಕೆ

ಭಾರತದ ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ ನ್ಯಾಯಾಲಯದ ಪ್ರಕ್ರಿಯೆಗಳಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್, ಅವರಿಗೆ ಭಾರತಕ್ಕೆ ಮರಳಲು “ಒಂದು ಕೊನೆಯ ಅವಕಾಶ” ನೀಡಿದೆ. ಒಂದು ವೇಳೆ...

ಕೆಲಸದ ಸ್ಥಳದಲ್ಲಿ ಜಾತಿ ತಾರತಮ್ಯದ ಬಗ್ಗೆ ರಾಜ್ಯಸಭೆಯಲ್ಲಿ ಖರ್ಗೆ ಕಳವಳ; ಒಡಿಶಾ ಅಂಗನವಾಡಿ ಘಟನೆ ಉಲ್ಲೇಖ

ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಜಾತಿ ತಾರತಮ್ಯದ ಕುರಿತು ರಾಜ್ಯಸಭೆಯಲ್ಲಿ ಗುರುವಾರ (ಫೆ.12) ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಒಡಿಶಾದ ಅಂಗನವಾಡಿಯೊಂದರಲ್ಲಿ ದಲಿತ ಮಹಿಳೆ ತಯಾರಿಸಿದ ಆಹಾರವನ್ನು...

ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ...

‘ಆಕೆಯ ಜೀವ ಮುಖ್ಯ’: ಅಮೆರಿಕದ ಪೊಲೀಸ್ ಅಧಿಕಾರಿ ವೇಗದ ಚಾಲನೆಯಿಂದ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

2023 ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಚಾಲನೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಡಿಕ್ಕಿ ಹೊಡೆದ ಕಾರಣ ಸಾವನ್ನಪ್ಪಿದ ಭಾರತದ 23 ವರ್ಷದ ಪದವೀಧರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ಸಿಯಾಟಲ್ ನಗರವು...

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ಲೋಕಸಭೆ ಅಧಿವೇಶನದಲ್ಲಿ ಗುರುವಾರ (ಫೆ.12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿಲುವಳಿ ಸೂಚನೆ ಸಲ್ಲಿಸಿದ್ದು, ಅವರ ಸಂಸತ್ತಿನ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್...

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾ ಬಂಧನ

2026 ಫೆಬ್ರವರಿ 8, ಭಾನುವಾರದಂದು ವಿಐಪಿ ರಸ್ತೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದ ಹೈ ಪ್ರೊಫೈಲ್ ಲ್ಯಾಂಬೋರ್ಗಿನಿ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು...

ಫೆಬ್ರವರಿ 12 ರಂದು ಭಾರತ್ ಬಂದ್| ಹಲವು ರಾಜ್ಯಗಳಲ್ಲಿ ಬಂದ್ ಗೆ ಪೂರ್ಣ ಬೆಂಬಲ: ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12, ಗುರುವಾರ ಸಾರ್ವತ್ರಿಕ ಮುಷ್ಕರಕ್ಕೆ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿದೆ. ಕರ್ನಾಟಕದಲ್ಲಿಯೂ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರದ 4...