Homeಅಂಕಣಗಳುಟಿಬೆಟ್ ಮತ್ತು ಕವಿ ಟೆಂಜಿನ್ ಬಗ್ಗೆ

ಟಿಬೆಟ್ ಮತ್ತು ಕವಿ ಟೆಂಜಿನ್ ಬಗ್ಗೆ

ಟೆಂಜಿನ್ ಅಪರೂಪದ ಹೋರಾಟಗಾರ. ಈತ ಕನ್ನಡಿಗರ ಗಮನವನ್ನು ಸೆಳೆದಿದ್ದು 2005ರಲ್ಲಿ. ಅವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ)ಗೆ ಚೀನಾದ ಪ್ರಧಾನಿ ವೆನ್ ಜಿಯಾಬೊ ಬರಲಿದ್ದರು

- Advertisement -
- Advertisement -

| ಗೌರಿ ಲಂಕೇಶ್ |

ಈಗ ಎಲ್ಲಿನೋಡಿದರಲ್ಲಿ ಚುನಾವಣಾ ಬಗ್ಗೆಯೇ ಚರ್ಚೆ, ಬಾಜಿ, ಲೆಕ್ಕಾಚಾರ ಇತ್ಯಾದಿಗಳು. ಟಿವಿ ಚಾನೆಲ್‍ಗಳಲ್ಲಿ, ದಿನ ಪತ್ರಿಕೆಗಳಲ್ಲಿ, ಅಷ್ಟೇ ಏಕೆ ಈ ನಿಮ್ಮ ಪತ್ರಿಕೆಯ ಹಲವಾರು ಪುಟಗಳಲ್ಲೂ ಚುನಾವಣೆಗಳ ಬಗೆಗಿನ ವರದಿಗಳೇ ತುಂಬಿವೆ. ಆದ್ದರಿಂದ ನನಗೂ, ನಿಮಗೂ ಒಂದು ಪುಟ್ಟ ಬ್ರೇಕ್ ಸಿಗಲೆಂದು ಚುನಾವಣಾ ಹೊರತಾಗಿರುವ ವಿಷಯದ ಬಗ್ಗೆ ಬರೆಯಬೇಕೆನಿಸುತ್ತದೆ. ಇದಕ್ಕೆ ಪ್ರೇರಣೆ ನೀಡಿದ್ದು ಟಿಬೆಟ್‍ನ ಕವಿ ಮತ್ತು ಹೋರಾಟಗಾರ ಟೆಂಜಿನ್ ಟ್ಸಂಡು ಅವರು ಇತ್ತೀಚೆಗೆ ಬರೆದಿರುವ ಲೇಖನ.

ಟೆಂಜಿನ್ ಅಪರೂಪದ ಹೋರಾಟಗಾರ. ಈತ ಕನ್ನಡಿಗರ ಗಮನವನ್ನು ಸೆಳೆದಿದ್ದು 2005ರಲ್ಲಿ. ಅವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ)ಗೆ ಚೀನಾದ ಪ್ರಧಾನಿ ವೆನ್ ಜಿಯಾಬೊ ಬರಲಿದ್ದರು. ಅವರ ಭೇಟಿಯನ್ನು ವಿರೋಧಿಸಿ ಕರ್ನಾಟಕದಲ್ಲಿರುವ ಟಿಬೆಟಿಯನ್ನರು ಹಲವು ಪ್ರತಿಭಟನೆಗಳನ್ನು ಮಾಡಿದ್ದರು. ಆದರೆ ಈ ಟೆಂಜಿನ್ ಅವರೆಲ್ಲರಿಗಿಂತ ಹಲವು ಹೆಜ್ಜೆ ಮುಂದೆ ಹೋಗಿದ್ದರು. ಒಂದೆರಡು ದಿನಗಳ ಹಿಂದೆಯೇ ಐಐಎಸ್‍ಸಿಯ ಮುಖ್ಯ ಕಟ್ಟಡದಲ್ಲಿ ಅವಿತುಕೊಂಡ ಟೆಂಜಿನ್ ಚೀನಾದ ಜಿಯಾಬೋ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆಯೇ ಕಟ್ಟಡದ ಮೇಲುಗಡೆ ಪ್ರತ್ಯಕ್ಷವಾಗಿ ಜಿಯಾಬೋ ಅವರ ತಲೆಯ ಮೇಲೆ ಟಿಬೆಟ್‍ನ ಧ್ವಜವನ್ನು ಹಾರಿಸಿದರಲ್ಲದೆ, ಅವರ ವಿರುದ್ಧ ಘೋಷಣೆಗಳನ್ನೂ ಕೂಗಿದರು. ಟಿಂಜನ್ ಅವರ ಉದ್ದೇಶ ಚೀನಾದ ಪ್ರಧಾನಿ ಮೇಲೆ ಭಯೋತ್ಪಾದಕ ಕೃತ್ಯವನ್ನು ಎಸಗುವುದಾಗಿರಲಿಲ್ಲ. ಬದಲಾಗಿ ತನ್ನ ಟಿಬೆಟ್ ಸಮಾಜದ ಮೇಲೆ ಚೀನಾ ಎಸಗುತ್ತಿರುವ ಭಯೋತ್ಪಾದಕ ಕೃತ್ಯಗಳತ್ತ ಜಗತ್ತಿನ ಗಮನವನ್ನು ಸೆಳೆಯುವುದಾಗಿತ್ತು.

ಟೆಂಜಿನ್ ಅವರ ಈ ಅಪರೂಪದ ಪ್ರತಿಭಟನೆಯಿಂದಾಗಿ ಭಾರತದ ಭದ್ರತಾ ಪಡೆ ವ್ಯವಸ್ಥೆಗೆ ಮುಜುಗರವಾಗಿತ್ತಲ್ಲದೆ, ಚೀನಾಕ್ಕೆ ಮುಖಭಂಗವಾಗಿತ್ತು. ಟೆಂಜಿನ್ ಅವರ ವಿರುದ್ಧ ಹಲವಾರು ಕಾನೂನು ಕ್ರಮಗಳನ್ನು ಜರುಗಿಸಿದ ಭಾರತದ ಸರ್ಕಾರ ಅವಮಾನಗೊಂಡಿದ್ದ ಚೀನಾವನ್ನು ಸಂತೈಸಲು ಆ ದೇಶದ ಸರ್ಕಾರದ ಮುಂದೆ ಡೊಗ್ಗು ಸಲಾಮು ಹೊಡೆದಿತ್ತು.

2006ರಲ್ಲಿ ಚೀನಾದ ಅಧ್ಯಕ್ಷ ಹು ಜಿಂಟಾವೊ ಭಾರತಕ್ಕೆ ಭೇಟಿ ನೀಡಿದಾಗ ಚೀನಾದ ಸರ್ಕಾರದ ಅಪೇಕ್ಷೆಯಂತೆ ಟಿಂಜನ್ ಅವರ ಚಲನವಲನಗಳನ್ನು 14 ದಿನಗಳ ಕಾಲ ಧರ್ಮಶಾಲಾ ಪ್ರದೇಶಕ್ಕೆ ಸೀಮಿತಗೊಳಿಸಿ ಅವರ ಮೇಲೆ ಕಟ್ಟೆಚ್ಚರ ಇಡಲಾಗಿತ್ತು.

ಚೀನಾದ ಸಾಂಸ್ಕೃತಿಕ ಕ್ರಾಂತಿ ಅಂತ್ಯಗೊಂಡು ಆ ದೇಶ ಮಾವೋನ ಹಿಡಿತಕ್ಕೆ ಸಿಕ್ಕ ನಂತರ ಆತ ಟಿಬೆಟ್‍ಅನ್ನು ಚೀನಾದ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಲಾರಂಭಿಸಿದ. ಆಗ ಟಿಬೆಟ್ ಜನರ ನೆರವಿಗೆ ಮುಂದಾಗಿದ್ದು ಅಮೆರಿಕಾದ ಸಿಐಎ ಮತ್ತು ಭಾರತದ ಸರ್ಕಾರ. ಇದರಿಂದಾಗಿ ಟಿಬೆಟ್ ಸೈನ್ಯ ರೂಪಗೊಂಡಿತ್ತಾದರೂ ಚೀನಾದ ದಬ್ಬಾಳಿಕೆ ನಿಲ್ಲಲಿಲ್ಲ. ಆಗ ಟಿಬೆಟ್ ಜನ ದಂಗೆ ಎದ್ದರು. ಇದಕ್ಕೆ ಪ್ರತಿಯಾಗಿ ಟಿಬೆಟಿಯನ್ನರ ಪರಮಗುರು ದಲೈ ಲಾಮರನ್ನೇ ಮುಗಿಸಲು ಚೀನಾ ಸಂಚು ರೂಪಿಸಿತು. ಆಗ ಅನಿವಾರ್ಯವಾಗಿ ದಲೈಲಾಮಾ ಅವರು ಭಾರತಕ್ಕೆ ಓಡಿಬಂದು ಇಲ್ಲಿ ರಕ್ಷಣೆ ಪಡೆಯಬೇಕಾಯಿತು. ಹೀಗೆ ದಲೈಲಾಮಾ ತಪ್ಪಿಸಿಕೊಂಡ ನಂತರ ಟಿಬೆಟ್ ಮೇಲೆ ಚೀನಾ ತನ್ನ ಕ್ರೌರ್ಯವನ್ನು ಹೆಚ್ಚಿಸಿ ಲಕ್ಷಾಂತರ ಜನರನ್ನು ಕೊಂದು ಹಾಕಿತು.

ದಲೈಲಾಮಾರೊಂದಿಗೆ ಸಾವಿರಾರು ಟಿಬೆಟಿಯನ್ನರು ಭಾರತದಲ್ಲಿ ವಾಸಿಸಲಾರಂಭಿಸಿದರು. ಮಾತ್ರವಲ್ಲ, ಅವರಲ್ಲಿ ನೂರಾರು ಜನ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಕೂಲಿಗಳಾಗಿ ದುಡಿಯಲಾರಂಭಿಸಿದರು. ಹಾಗೆ ದುಡಿಯುತ್ತಾ, ಟೆಂಟ್‍ನಲ್ಲಿ ವಾಸಿಸುತ್ತಿದ್ದ ದಂಪತಿಗಳಿಗೆ ಒಂದು ದಿನ ರಸ್ತೆಬದಿಯಲ್ಲಿ ಜನಿಸಿದ ಕವಿಯೇ ಈ ಟೆಂಜಿನ್‍ಟ್ಸಂಡು.

ಚೆನೈನಲ್ಲಿರುವ ಲಯೋಲಾ ಕಾಲೇಜಿನಿಂದ ಪದವಿ, ಮುಂಬೈನಲ್ಲಿ ಸ್ನಾತಕೋತ್ತರ ಪದವಿ ಪಡೆದ ಟೆಂಜಿನ್ ಶೇಕ್ಸ್‍ಪಿಯರ್‍ನೊಂದಿಗೆ ಕನ್ನಡದ ಎ.ಕೆ.ರಾಮಾನುಜನ್ ಅವರನ್ನು ಅನುಸರಿಸುತ್ತ ಕವಿಯಾಗಿ ರೂಪುಗೊಂಡರು. ಜೊತೆಗೆ ಟಿಬೆಟ್‍ನ ಸ್ವಾತಂತ್ರ್ಯದ ಕಿಚ್ಚನ್ನೂ ತಮ್ಮ ಎದೆಯಲ್ಲಿ ಹೊತ್ತಿಸಿಕೊಂಡರು. ಆತನೇ ಹೇಳುವಂತೆ “ಟಿಬೆಟ್‍ನಲ್ಲಿ ಕ್ರಾಂತಿಯನ್ನು ಪ್ರಾರಂಭಿಸಲು ಅಲ್ಲಿಗೆ ಹೋದೆ. ಆದರೆ ಕೆಲದಿನಗಳಲ್ಲೇ ಈ ರೋಮಾಂಚಕ ಬಂಡಾಯಗಾರರನ್ನು ಬಂಧಿಸಿ, ಹೊಡೆದು, ಲಾಸಾದಲ್ಲಿನ ಜೈಲಿಗೆ ದೂಡಿದರು. ಜೈಲಿನಲ್ಲಿ ಜೊತೆಗಿದ್ದ ಬಂಧಿಯೊಬ್ಬ ‘ಸ್ವತಂತ್ರ ಟಿಬೆಟ್‍ಗಾಗಿ ನಿನ್ನ ಎದೆ ಬೆಂಕಿ ಹತ್ತಿ ಉರಿದರೂ ಅದರ ಹೊಗೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸು’ ಎಂದು ಉಪದೇಶ ನೀಡಿದ. ಆದರೆ ಭಗತ್‍ಸಿಂಗ್‍ನ ಅಭಿಮಾನಿಯಾದ ಈ ಅನನುಭವಿ ಕ್ರಾಂತಿಕಾರಿ ಅಷ್ಟೊತ್ತಿಗಾಗಲೇ ತಾನು ಟಿಬೆಟ್‍ಅನ್ನು ಬಿಡುಗಡೆಗೊಳಿಸಲು ಬಂದಿರುವುದಾಗಿ ಕೊಚ್ಚಿಕೊಂಡಿದ್ದ.”

ಟಿಬೆಟ್ ಮೇಲೆ ಚೀನಾ ದಾಳಿ ಮಾಡಿ ಅಲ್ಲಿನ ಜನರನ್ನು ತನ್ನ ಸರ್ವಾಧಿಕಾರಿ ಧೋರಣೆಗೆ ಗುರಿ ಮಾಡಿ ಈಗ್ಗೆ ಐವತ್ತು ವರ್ಷಗಳಾಗಿವೆ. ಈ ಐದು ದಶಕಗಳಲ್ಲಿ ಟಿಬೆಟ್‍ನಲ್ಲಿರುವ ಆರು ಮಿಲಿಯನ್ ಜನರು ಮತ್ತು ಗಡಿಪಾರಾಗಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಇಂದು ಬದುಕುತ್ತಿರುವ ಲಕ್ಷಾಂತರ ಟಿಬೆಟಿಯನ್ನರು ಹಂಬಲಿಸುತ್ತಿರುವುದು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ. ಸ್ವಾಭಿಮಾನದ ಬದುಕಿಗಾಗಿ. ಬೌದ್ಧ ಧರ್ಮೀಯರಾದ ಟಿಬೆಟಿಯನ್ನರು ತಮ್ಮ ಕನಸನ್ನು ನನಸಾಗಿಸಲು ಅನುಸರಿಸುತ್ತಿರುವುದು ಅಹಿಂಸಾತ್ಮಕ ಹಾದಿಯನ್ನು. ಆದರೆ ಆ ಹಾದಿ ಎಷ್ಟು ಕಷ್ಟಕರವಾಗಿದೆ ಎಂಬುದನ್ನು ಟೆಂಜಿನ್ ಅವರ ಈ ಪದ್ಯ ಬಿಂಬಿಸುತ್ತದೆ.

ನನ್ನ ಅಪ್ಪ ಸತ್ತ
ತನ್ನ ಮನೆ, ತನ್ನ ಹಳ್ಳಿ
ತನ್ನ ದೇಶಕ್ಕಾಗಿ ಹೋರಾಡುತ್ತಾ.
ಆದರೆ ನಾವು ಬೌದ್ಧರು.
ಜನ ಹೇಳುತ್ತಾರೆ ನಾವು
ಶಾಂತರಾಗಿರಬೇಕೆಂದು,
ಅಹಿಂಸಾವಾದಿಗಳಾಗಿರಬೇಕೆಂದು.
ಆದ್ದರಿಂದ ನಾನು ನನ್ನ ವೈರಿಗಳನ್ನು
ಕ್ಷಮಿಸಿದೆ.
ಹಲವೊಮ್ಮೆ ಅನ್ನಿಸುತ್ತೆ,
ಹಾಗೆ ಕ್ಷಮಿಸುವ ಮೂಲಕ
ನಾನು ನನ್ನ ತಂದೆಗೆ
ದ್ರೋಹ ಬಗೆದೆನೆಂದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...