“ಸದ್ದಾಂ ಹುಸೇನ್ ಮತ್ತು ಗಡಾಫಿ ಕೂಡಾ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು” ಎಂದು ಹೇಳಿರುವ ರಾಹುಲ್ ಗಾಂಧಿ, ಮತ್ತೊಮ್ಮೆ ಭಾರತದ ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬ್ರೌನ್ ವಿಶ್ವವಿದ್ಯಾಲಯದ ಅಶುತೋಷ್ ವರ್ಷನಿ ಅವರೊಂದಿಗಿನ ಆನ್ಲೈನ್ ಸಂವಾದದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಇರಾಕ್ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಹಾಗೂ ಲಿಬಿಯಾದ ಮುಅಮ್ಮರ್ ಗಡಾಫಿ ಸಹ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ಅವನತಿಯಾಗುತ್ತಿದೆ ಎಂಬ ಅಧ್ಯಯನದ ವರದಿಗಳ ಆಧಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, “ಸದ್ದಾಂ ಹುಸೇನ್ ಮತ್ತು ಗಡಾಫಿ ಸಹ ಚುನಾವಣೆ ನಡೆಸುತ್ತಿದ್ದರು. ಜೊತೆಗೆ ಅದರಲ್ಲಿ ಗೆಲುವನ್ನೂ ಸಾಧಿಸುತ್ತಿದ್ದರು. ಅಲ್ಲಿ ಮತದಾನ ನಡೆಯುತ್ತಿರುವುದು ಮುಖ್ಯವಲ್ಲ. ಆದರೆ ಆ ಮತವನ್ನು ರಕ್ಷಿಸಲು ಯಾವುದೇ ಸಾಂವಿಧಾನಿಕ ಚೌಕಟ್ಟು ಇರಲಿಲ್ಲ ಎಂಬುದು ಮುಖ್ಯ” ಎಂದು ಹೇಳಿದರು.
Live: My interaction with Prof Ashutosh Varshney, faculty & students of Brown University. https://t.co/1goKjIgp9H
— Rahul Gandhi (@RahulGandhi) March 16, 2021
ಇದನ್ನೂ ಓದಿ: ರಾಜಕೀಯವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಪ್ರಜಾಪ್ರಭುತ್ವ ಇರಬೇಕು – ಸಿದ್ದರಾಮಯ್ಯ
“ಚುನಾವಣೆ ಎಂಬುದು ಜನರು ಮತ ಯಂತ್ರಗಳಲ್ಲಿ ಬಟನ್ ಒತ್ತುವುದು ಮಾತ್ರವಲ್ಲ. ಚುನಾವಣೆ ಎಂಬುದು ನಿರೂಪಣೆಯ ಕುರಿತದ್ದಾಗಿದ್ದು, ದೇಶದ ಸಾಂವಿಧಾನಿಕ ಚೌಕಟ್ಟು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ? ಚುನಾವಣೆ ನ್ಯಾಯಯುತವಾಗಿ ನಡೆಯುತ್ತಿದೆಯೇ? ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆಯೇ? ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಾಗಿದೆ. ಮತದಾನದಲ್ಲಿ ಈ ಎಲ್ಲ ವಿಷಯಗಳು ಮುಖ್ಯವೆನಿಸುತ್ತದೆ” ಎಂದು ಹೇಳಿದರು.
ಭಾರತದ ಪ್ರಜಾಪ್ರಭುತ್ವ ಈಗ ಚುನಾಯಿತ ನಿರಂಕುಶಾಧಿಪತ್ಯದ ಸ್ಥಿತಿಗೆ ಇಳಿದಿದೆ ಎಂದು ಸ್ವೀಡನ್ನ ಗೊಟೆನ್ಬರ್ಗ್ ವಿಶ್ವವಿದ್ಯಾಲಯದ ವಿ-ಡೆಮ್ ಸ್ವತಂತ್ರ ಸಂಶೋಧನಾ ಸಂಸ್ಥೆಯ ಪ್ರಜಾಪ್ರಭುತ್ವ ವರದಿ 2021ರಲ್ಲಿ ಉಲ್ಲೇಖಿಸಿದೆ.
ಅಮೆರಿಕದ ಫ್ರೀಡಮ್ ಹೌಸ್ ಭಾರತವನ್ನು ‘ಮುಕ್ತ ದೇಶ’ದಿಂದ ‘ಭಾಗಶಃ ಮುಕ್ತ ದೇಶ’ ಎನ್ನುವ ದರ್ಜೆಗೆ ಇಳಿಸಿ, ಭಾರತದಲ್ಲಿ ಪ್ರಜಾಪ್ರಭುತ್ವ ಅವನತಿಯಾಗುತ್ತಿದೆ ಎಂದು ವರದಿ ಬಿಡುಗಡೆಗೊಳಿಸಿತ್ತು.
ಈ ವರದಿಗಳನ್ನು ಆಧರಿಸಿ, ರಾಹುಲ್ ಗಾಂಧಿ ಭಾರತ ಇನ್ನುಮುಂದೆ ಪ್ರಜಾಪ್ರಭುತ್ವ ರಾಷ್ಟ್ರವಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಭಾರತ ಈಗ ಪ್ರಜಾಪ್ರಭುತ್ವ ರಾಷ್ಟ್ರವಲ್ಲ: ಸ್ವೀಡನ್ ವರದಿ ಉಲ್ಲೇಖಿಸಿದ ರಾಹುಲ್ ಗಾಂಧಿ



??