ಬಿಜೆಪಿ ಸಂಸದೆ ಹಾಗೂ ಮಾಲೇಗಾಂವ್ ಬಾಂಬ್ ಸ್ಫೋಟ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್ರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಕ್ರಮಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವ್ಯಂಗ್ಯ ಮತ್ತು ಟೀಕೆಗಳು ವ್ಯಕ್ತವಾಗಿವೆ. ಪ್ರಗ್ಯಾ ಸಿಂಗ್ ವಿರುದ್ಧ ಟ್ವಿಟ್ಟಿಗರು ಕಿಡಿಕಾರಿದ್ದು, ಕೇಂದ್ರದ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ 21 ಸದಸ್ಯರ ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ಮಾಲೇಗಾಂವ್ ಬಾಂಬ್ ಸ್ಫೋಟ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್ರನ್ನು ನೇಮಕ ಮಾಡಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಮೋದಿ ಸರ್ಕಾರವನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್, ವಿವಾದಾತ್ಮಕ ಹೇಳಿಕೆಗಳಿಂದಲೇ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದಾರೆ. ಸಾಧ್ವಿಯನ್ನು ಸಮಿತಿಗೆ ನೇಮಕ ಮಾಡಿರುವ ಬಿಜೆಪಿ ಸರ್ಕಾರದ ಕ್ರಮ ದೌರ್ಭಾಗ್ಯಪೂರ್ಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಅಲ್ಲದೇ ಕಮಲನಾಥ್ ಸರ್ಕಾರದಲ್ಲಿ ಸಚಿವರಾಗಿರುವ ಪಿ.ಸಿ.ಶರ್ಮಾ, ಬಿಜೆಪಿಯ ಕ್ರಮವನ್ನು ಖಂಡಿಸಿದ್ದಾರೆ. ಬಿಜೆಪಿ ಹೇಳೋದೊಂದು ಮಾಡೋದೊಂದು ಮಾಡುತ್ತೆ. ಆಡುವ ಮಾತು ಮತ್ತು ಬಿಜೆಪಿಯ ಕ್ರಿಯೆಗೂ ಸಂಬಂಧವೇ ಇರುವುದಿಲ್ಲ. ಮಾಲೇಗಾಂವ್ ಸ್ಫೋಟದ ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದರು. ಆದರೆ ತನಿಖೆ ಮಾಡದೇ, ಈಗ ರಕ್ಷಣಾ ಸಚಿವಾಲಯದ ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ನಿರ್ಣಾಯಕ ಹಂತ ತಲುಪಿದ ಸರ್ಕಾರ ರಚನೆ ಗುದ್ದಾಟ: ಸೇನಾಗೆ ಕಾಂಗ್ರೆಸ್ ಬೆಂಬಲ..!
ಬಾಂಬ್ ಸ್ಫೋಟ ಆರೋಪಿ ಪ್ರಗ್ಯಾ ಠಾಕೂರ್ರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿಗೆ ನೇಮಿಸಲಾಗಿದೆ. ಇದು ”ಮಾಸ್ಟರ್ ಸ್ಟ್ರೋಕ್..! ಗಡಿಗಳನ್ನು ರಕ್ಷಿಸಲು ಅಂತಿಮವಾಗಿ ಪ್ರಗ್ಯಾ ಅವರ ‘ಶಾರ್ಪ್’ ಮತ್ತು ‘ಮಾರಕ ಶಕ್ತಿ’ಯನ್ನು ಬಳಸಬಹುದು ಎಂದು ಟ್ವಿಟ್ಟಿಗರು ಕೇಂದ್ರದ ಕಾಲೆಳೆದಿದ್ದಾರೆ. ಬಾಂಬ್ ತಯಾರಿಕೆ ವಿಧಾನವನ್ನೂ ಕಲಿಯಬಹುದು ಎಂದು ಕೆಲವರು ಟ್ವೀಟ್ ಮಾಡಿ, ಮೋದಿ ಸರ್ಕಾರವನ್ನು ಅಪಹಾಸ್ಯ ಮಾಡಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಪ್ರಗ್ಯಾ ಸಿಂಗ್ ಠಾಕೂರ್, ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ ಅದು ತೀವ್ರ ವಿವಾದಕ್ಕೀಡಾಗುತ್ತಿದ್ದಂತೆ ಹೇಳಿಕೆಯನ್ನು ವಾಪಸ್ ಪಡೆದಿದ್ದರು.