Homeಮುಖಪುಟಹಿರಿಯ ವಿದ್ವಾಂಸ, ಖ್ಯಾತ ಇತಿಹಾಸಕಾರ ಪ್ರೊ. ಷ. ಶೆಟ್ಟರ್‌ ಇನ್ನಿಲ್ಲ

ಹಿರಿಯ ವಿದ್ವಾಂಸ, ಖ್ಯಾತ ಇತಿಹಾಸಕಾರ ಪ್ರೊ. ಷ. ಶೆಟ್ಟರ್‌ ಇನ್ನಿಲ್ಲ

- Advertisement -
- Advertisement -

ಕನ್ನಡ ಸಾಂಸ್ಕೃತಿಕ ಕ್ಷೇತ್ರದ ಹಿರಿಯ ವಿದ್ವಾಂಸ, ಅಂತರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಪ್ರೊ. ಷಡಕ್ಷರಪ್ಪ ಶೆಟ್ಟರ್ (1935-2020) ರವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಒಂದು ವಾರದಿಂದಲೂ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರ ಅಗಲಿಕೆಯಿಂದ ಕನ್ನಡ ಸಾಂಸ್ಕೃತಿಕ ಲೋಕ ಬಡವಾಯಿತು, ತುಂಬಲಾರದ ನಷ್ಟ ಎಂದು ಬಹಳಷ್ಟು ಜನ ಸಂತಾಪ ಸೂಚಿಸಿದ್ದಾರೆ.

ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ಶಾಸನ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಸಾಹಿತ್ಯದ ಕುರಿತು ಪ್ರೊ.ಶೆಟ್ಟರ್ ಅವರು ಬರೆದ ಸುಮಾರು 30ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳು ಬಹಳಷ್ಟು ಜನರನ್ನು ಪ್ರಭಾವಿಸಿದೆ. ಇಂದಿಗೂ ಸಾವಿರಾರು ಜನರು ಅವರನ್ನು ತಮ್ಮ ಮಾರ್ಗದರ್ಶಕರು, ಗುರುಗಳು ಎಂದೇ ಪರಿಗಣಿಸುತ್ತಿದ್ದಾರೆ.

ಸ್ವಲ್ಪ ತಡವಾಗಿ ಕನ್ನಡದಲ್ಲಿ ಬರೆಯಲು ಆರಂಭಿಸಿದ ಅವರು ತಮ್ಮ ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ, ಹಳಗನ್ನಡ- ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ , ಹಳಗನ್ನಡ ಭಾಷೆ, ಭಾಷಾ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ, ಪ್ರಾಕೃತ ಜಗದ್ವಲಯ ಮೊದಲಾದ ಕೃತಿಗಳ ಮೂಲಕ ಕಳೆಗುಂದುತ್ತಿದ್ದ ಕನ್ನಡ ಸಂಶೋಧನೆಗೆ ನವ ಚೈತನ್ಯ ನೀಡಿದರು. ಕಳೆದ ನಾಲ್ಕಾರು ವರ್ಷಗಳಿಂದ ಅವರು ತೊಡಗಿಸಿಕೊಂಡಿದ್ದ ಶಾಸನಾಧರಿತ ಯೋಜನೆಗಳನ್ನು ಈಗ ಯಾರು ಮುಗಿಸಿಕೊಡುವರೋ ತಿಳಿದಿಲ್ಲ ಎಂದು ದೆಹಲಿಯ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಪುರುಷೋತ್ತಮ ಬಿಳಿಮನೆಯವರು ಸಂತಾಪ ಸೂಚಿಸಿದ್ದಾರೆ.

ಷ.ಶೆಟ್ಟರ್ ಅಗಲಿಕೆ ತೋರಿಕೆಗಲ್ಲದೆ ನಿಜಾರ್ಥದಲ್ಲಿ ತುಂಬಲಾರದ ನಷ್ಟ. ಶಾಸನಾಧ್ಯಯನ ಜನಸಾಮಾನ್ಯರಿಗಲ್ಲ ಎನ್ನುವ ವಾತಾವರಣ ಇರುವಾಗ ಶಾಸನಗಳಲ್ಲಿಯೇ ಜನಸಾಮಾನ್ಯರ ಬದುಕನ್ನು ಹುಡುಕಲೆತ್ನಿಸಿದ ದೈತ್ಯ ಪ್ರತಿಭೆ. ಅವರ ಕೃತಿಗಳನ್ನು ಓದುತ್ತಿದ್ದರೆ ಅವರ ಕಠಿಣ ಶ್ರಮ ಪಾಂಡಿತ್ಯ ಆಳದ ಹುಡುಕಾಟದ ಹಂಬಲಗಳು ಉಸಿರಿನಂತೆ ತಾಕುತ್ತವೆ ಎಂದು ಅರುಣ್‌ ಜೋಳದ ಕೂಡ್ಲಿಗಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ಸ್ನಾತಕೋತ್ತರ ಹಂತದಲ್ಲಿ ನನಗೆ ಇತಿಹಾಸ ಬೋಧಿಸಿದ ಗುರುಗಳು, 1986 ರಿಂದ 1995 ರವರೆಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಹಿರಿಯ ಸಹೋದ್ಯೋಗಿಯಾಗಿ ನನಗೆ ಮಾರ್ಗದರ್ಶನ ಮಾಡಿದ ಹಿತೈಷಿಗಳು, ಬಹುಶ್ರುತ ವಿದ್ವಾಂಸರು ಮತ್ತು ಖ್ಯಾತ ಇತಿಹಾಸಕಾರರಾದ ಪ್ರೊ. ಷಡಕ್ಷರಪ್ಪ ಶೆಟ್ಟರ್ ಅವರು ಇನ್ನಿಲ್ಲ. ಅವರ ಅಗಲಿಕೆಯ ಶೂನ್ಯವನ್ನು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ ಸಾಧ್ಯವಾಗಲಿ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವೆ ಎಂದು ಅಶೋಕ್‌ ಶೆಟ್ಟರ್‌ರವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇವರಿಗೆ ಕುಂದಕುಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್, ಮಾಸ್ತಿ ಪ್ರಶಸ್ತಿ, ರನ್ನ ಪ್ರಶಸ್ತಿ, 2016ರ ಶಾಸ್ತ್ರೀಯ ಕನ್ನಡ ವಾಙ್ಮಯದ ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...