Homeಅಂತರಾಷ್ಟ್ರೀಯನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

- Advertisement -
- Advertisement -

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ ಬಂದಿದೆ. ಈತನಿಗೆ ಸಂಬಂಧಿಸಿದ ವರದಿಯೊಂದರ ಬಿಡುಗಡೆಯತ್ತ ಜನರ ಚಿತ್ತ ನೆಟ್ಟಿದೆ.

ಯಾರು ಈ ಜೆಫ್ರಿ ಎಪ್‌ಸ್ಟೀನ್?

ಅಮೆರಿಕದ ನ್ಯೂಯಾರ್ಕ್‌ನಲ್ಲಿ 1953ರಲ್ಲಿ ಜನಿಸಿದ ಜೆಫ್ರಿ ಎಪ್‌ಸ್ಟೀನ್, ಆರಂಭದಲ್ಲಿ ಶಿಕ್ಷಕನಾಗಿದ್ದ. ನಂತರ ಬೇರ್ ಸ್ಟಿಯರ್ನ್ಸ್ ಎಂಬ ದೊಡ್ಡ ಹಣಕಾಸು ಸಂಸ್ಥೆಗೆ ಕೆಲಸಕ್ಕೆ ಸೇರಿಕೊಂಡ. ಆ ಬಳಿಕ ತನ್ನದೇ ಆದ ಸ್ವಂತ ಹಣಕಾಸು ನಿರ್ವಹಣಾ ಕಂಪನಿ ಶುರುಮಾಡಿದ ಎಪ್‌ಸ್ಟೀನ್, ನಂತರ ಕೋಟ್ಯಾಧಿಪತಿಯಾಗಿ ಬೆಳೆದ. ಆ ಬಳಿಕ ಅಮೆರಿಕದ ಅನೇಕ ಪ್ರಸಿದ್ಧ ಮತ್ತು ಅಧಿಕಾರಶಾಹಿ ಜನರ ಗೆಳೆಯನಾದ. ಅಮೆರಿಕದ ಅಧ್ಯಕ್ಷರು, ರಾಜಕುಮಾರರು, ವಿಜ್ಞಾನಿಗಳು, ಸೆಲೆಬ್ರಿಟಿಗಳು ಸೇರಿದಂತೆ ಪ್ರಭಾವಿಗಳು ಈತನ ಗೆಳೆಯರಾಗಿದರು.

ಹೀಗಿರುವಾಗ, 2005ರ ಮಾರ್ಚ್ ತಿಂಗಳಲ್ಲಿ ಫ್ಲಾರಿಡಾದ ಪಾಮ್ ಬೀಚ್ ಪೊಲೀಸ್ ಠಾಣೆಯಲ್ಲಿ ಎಪ್‌ಸ್ಟೀನ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ತನ್ನ 14 ವರ್ಷದ ಮಗಳನ್ನು ಒಬ್ಬ ಶ್ರೀಮಂತ ವ್ಯಕ್ತಿ ಆತನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆ ಮಹಿಳೆ ಆರೋಪಿಸಿದ್ದರು. ಮಹಿಳೆ ಆರೋಪ ಮಾಡಿದ ವ್ಯಕ್ತಿ ಜೆಫ್ರಿ ಎಪ್‌ಸ್ಟೀನ್ ಎಂಬುವುದು ನಂತರ ವರದಿಯಾಗಿತ್ತು.

ಎಪ್‌ಸ್ಟೀನ್ ತನ್ನ ಮಗಳ ಬಟ್ಟೆ ಬಿಚ್ಚಿಸಿ ಬರೀ ಒಳ ಉಡುಪಿನಲ್ಲಿ ಮಸಾಜ್ ಮಾಡಿಸಿಕೊಂಡಿದ್ದಾನೆ. ಇದಕ್ಕಾಗಿ ಮಗಳಿಗೆ 3 ಸಾವಿರ ಡಾಲರ್ ( 20 ಸಾವಿರ ರೂಪಾಯಿ) ಹಣ ಕೊಟ್ಟಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ವಿವರಿಸಿದ್ದರು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ಇದು ಒಂದು ಹುಡುಗಿಯ ಕಥೆಯಲ್ಲ, ಇದರ ಹಿಂದೆ ದೊಡ್ಡ ಜಾಲವಿದೆ ಎಂದು ಗೊತ್ತಾಗಿತ್ತು. ತನಿಖೆ ವೇಳೆ, “ಪ್ರತಿದಿನ 2-3 ಚಿಕ್ಕ ಹುಡುಗಿಯರು ಬರುತ್ತಿದ್ದರು, ಮಸಾಜ್ ಮಾಡಿ ಹಣ ಪಡೆದು ಹೋಗುತ್ತಿದ್ದರು” ಎಂದು ಎಪ್‌ಸ್ಟೀನ್‌ನ ಮನೆಕೆಲಸದವರು ಪೊಲೀಸರಿಗೆ ತಿಳಿಸಿದ್ದರು.

ಅಲ್ಲದೆ, ಪೊಲೀಸರಿಗೆ ಎಪ್‌ಸ್ಟೀನ್ ಮನೆಯ ಟ್ರಾಶ್‌ನಲ್ಲಿ (ಕಸದ ಡಬ್ಬದಿಂದ) ಹಲವು ಹುಡುಗಿಯರ ಫೋನ್ ನಂಬರ್‌ಗಳು, ಶಾಲಾ ಸಂದೇಶಗಳು, ಒಳ ಉಡುಪುಗಳ ಫೋಟೋಗಳು ಸಿಕ್ಕಿದ್ದವು. ತನಿಖೆ ವೇಳೆ, ಕನಿಷ್ಠ 36 ಚಿಕ್ಕ ವಯಸ್ಸಿನ ಹುಡುಗಿಯರು (ಕೆಲವರಿಗೆ 14-15 ವರ್ಷ ಮಾತ್ರ) ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರಿಗೆ ಗೊತ್ತಾಗಿತ್ತು. ಹುಡುಗಿಯರು ಒಬ್ಬರನ್ನೊಬ್ಬರು ‘ರಿಕ್ರೂಟ್’ (ನೇಮಕ) ಮಾಡಿಕೊಂಡು ಬರುತ್ತಿದ್ದರು. ಒಬ್ಬಳು ಹುಡುಗಿ ಇನ್ನೊಬ್ಬಳನ್ನು ಕರೆ ತಂದರೆ ಎಪ್‌ಸ್ಟೀನ್‌ ಹೆಚ್ಚು ಹಣ ಕೊಡುತ್ತಿದ್ದ ಎಂಬುವುದು ಬಹಿರಂಗವಾಗಿತ್ತು.

ಪ್ರಕರಣ ಸಂಬಂಧ 2005-2006ರಲ್ಲಿ ಪಾಮ್ ಬೀಚ್ ಪೊಲೀಸರು ಎಪ್‌ಸ್ಟೀನ್ ಅನ್ನು ಮೊದಲ ಬಾರಿಗೆ ಬಂಧಿಸಿದ್ದರು. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಕೂಡ ಪ್ರಕರಣದ ತನಿಖೆ ನಡೆಸಿತ್ತು. ಆದರೆ 2008ರಲ್ಲಿ ಎಪ್‌ಸ್ಟೀನ್‌ಗೆ ಬಹಳ ಕಡಿಮೆ ಒಪ್ಪಂದ ಶಿಕ್ಷೆಯನ್ನು ವಿಧಿಸಲಾಗಿತ್ತು.

ಅಂದರೆ, ಸಣ್ಣ ಆರೋಪಕ್ಕೆ ತಪ್ಪೊಪ್ಪಿಗೆ ಹೇಳಿ, ಕೇವಲ 13 ತಿಂಗಳು ಎಪ್‌ಸ್ಟೀನ್‌ ಜೈಲಿನಲ್ಲಿದ್ದ (ಅದೂ ಕೂಡ ವಾರದಲ್ಲಿ 6 ದಿನ ಕೆಲಸಕ್ಕೆ ಹೋಗಲು ಅನುಮತಿ ಇತ್ತು). ಶ್ರೀಮಂತ ಮತ್ತು ಪ್ರಭಾವಿ ಜನರ ಗೆಳೆಯನಾದ ಕಾರಣ ಎಪ್‌ಸ್ಟೀನ್‌ಗೆ ಕಡಿಮೆ ಶಿಕ್ಷೆ ವಿಧಿಸಲಾಗಿತ್ತು ಎಂದು ಜನರು ಈಗಲೂ ಹೇಳುತ್ತಾರೆ.

2019ರಲ್ಲಿ ಎರಡನೇ ಬಾರಿಗೆ ಎಪ್‌ಸ್ಟೀನ್‌ ಬಂಧನ

2008ರಲ್ಲಿ ಒಪ್ಪಂದ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎಪ್‌ಸ್ಟೀನ್‌, 2019ರಲ್ಲಿ ಎರಡನೇ ಬಾರಿಗೆ ಬಂಧನಕ್ಕೊಳಗಾದ. ಎರಡನೇ ಬಂಧನಕ್ಕೆ ಜನಾಕ್ರೋಶವೇ ಪ್ರಮುಖ ಕಾರಣ ಎನ್ನಬಹುದು.

2008ರಲ್ಲಿ ಫ್ಲಾರಿಡಾದಲ್ಲಿ ಸುಮಾರು 36-40 ಹುಡುಗಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಇದ್ದರೂ, ವಾರದಲ್ಲಿ 6 ದಿನ ರಜೆಯೊಂದಿಗೆ ಕೇವಲ 13 ತಿಂಗಳ ಜೈಲು ಶಿಕ್ಷೆಯನ್ನು ಎಪ್‌ಸ್ಟೀನ್‌ಗೆ ವಿಧಿಸಲಾಗಿತ್ತು. ಇದನ್ನು ಜನರು, ಮಾಧ್ಯಮಗಳು ಮತ್ತು ಬಾಲಕಿಯರ ಪರ ವಕೀಲರು ‘ಅನ್ಯಾಯ’ ಎಂದು 10 ವರ್ಷಗಳಿಂದ ಪ್ರಶ್ನಿಸುತ್ತಿದ್ದರು.

2018 ಅಕ್ಟೋಬರ್-ನವೆಂಬರ್‌ ತಿಂಗಳಲ್ಲಿ ಮಯಾಮಿ ಹೆರಾಲ್ಡ್ ಪತ್ರಿಕೆಯು ಎಪ್‌ಸ್ಟೀನ್‌ನ ಲೈಂಗಿಕ ದೌರ್ಜನ್ಯಗಳ ಬಗ್ಗೆ ದೊಡ್ಡ ತನಿಖಾ ವರದಿಯನ್ನು ಪ್ರಕಟಿಸಿತು. ಪತ್ರಕರ್ತೆ ಜೂಲಿ ಕೆ. ಬ್ರೌನ್ ಅವರು ‘Perversion of Justice’ಎಂಬ ಸರಣಿ ಲೇಖನಗಳನ್ನು ಬರೆದರು. ದೌರ್ಜನ್ಯಕ್ಕೊಳಗಾದ ಹಲವು ಬಾಲಕಿಯರನ್ನು ಸಂಪರ್ಕಿಸಿ ಅವರ ಕಥೆಗಳನ್ನು ಜೂಲಿ ಪ್ರಕಟಿಸಿದರು. 2008ರ ಒಪ್ಪಂದವನ್ನು ಎಪ್‌ಸ್ಟೀನ್‌ಗೆ ಸಹಾಯ ಮಾಡಿದ್ದ ಆಗಿನ ಪ್ರಾಸಿಕ್ಯೂಟರ್ ಅಲೆಕ್ಸಾಂಡರ್ ಅಕೋಸ್ಟಾ (ನಂತರ ಟ್ರಂಪ್ ಸರ್ಕಾರದಲ್ಲಿ ಕಾರ್ಮಿಕ ಸಚಿವನಾಗಿದ್ದ) ಮಾಡಿಸಿದ್ದ ಎಂದು ಬಯಲು ಮಾಡಿದರು. ಈ ವರದಿಗಳು ಅಮೆರಿಕಾದಾದ್ಯಂತ ದೊಡ್ಡ ಆಕ್ರೋಶ ಉಂಟುಮಾಡಿದವು.

2017-2019ರಲ್ಲಿ #MeToo ಚಳವಳಿಯ ಪ್ರಭಾವದಿಂದ ಎಪ್‌ಸ್ಟೀನ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂತು. 2018-2019ರಲ್ಲಿ ನ್ಯೂಯಾರ್ಕ್‌ನಲ್ಲಿ ಹೊಸ ಫೆಡರಲ್ ತನಿಖೆ ಆರಂಭವಾಯಿತು. ಮಯಾಮಿ ಹೆರಾಲ್ಡ್ ವರದಿಯ ನಂತರ ನ್ಯೂಯಾರ್ಕ್‌ನ ಸದರ್ನ್ ಡಿಸ್ಟ್ರಿಕ್ಟ್ ಫೆಡರಲ್ ಪ್ರಾಸಿಕ್ಯೂಟರ್ ಕಚೇರಿ (ಎಸ್‌ಡಿಎನ್‌ವೈ) ಮತ್ತೆ ಪ್ರಕರಣವನ್ನು ತೆರೆಯಿತು. ಹೊಸ ಸಾಕ್ಷಿಗಳು ಮುಂದೆ ಬಂದರು. 2008ರ ಫ್ಲಾರಿಡಾ ಒಪ್ಪಂದ ನ್ಯೂಯಾರ್ಕ್‌ಗೆ ಅನ್ವಯವಾಗುವುದಿಲ್ಲ ಎಂದು ನಿರ್ಧರಿಸಲಾಯಿತು (ಯಾಕೆಂದರೆ ಅನೇಕ ಅಪರಾಧಗಳು ನ್ಯೂಯಾರ್ಕ್ ಮತ್ತು ವರ್ಜಿನ್ ದ್ವೀಪಗಳಲ್ಲೂ ನಡೆದಿದ್ದವು). 1990ರ ದಶಕದಿಂದ 2019ರವರೆಗೆ ಡಜನ್‌ಗಟ್ಟಲೆ ಚಿಕ್ಕ ಹುಡುಗಿಯರನ್ನು ಲೈಂಗಿಕ ಕಳ್ಳಸಾಗಣೆ ಮಾಡಿದ ಆರೋಪವನ್ನು ಎಪ್‌ಸ್ಟೀನ್ ಮೇಲೆ ಹೊರಿಸಲಾಯಿತು.

ಜುಲೈ 6,2019ರಲ್ಲಿ ಎಪ್‌ಸ್ಟೀನ್ ಮತ್ತೆ ಬಂಧನಕ್ಕೊಳಗಾದ. ಎಪ್‌ಸ್ಟೀನ್ ತನ್ನ ಖಾಸಗಿ ಜೆಟ್‌ನಲ್ಲಿ ಫ್ರಾನ್ಸ್‌ನಿಂದ ನ್ಯೂಯಾರ್ಕ್‌ಗೆ ಬಂದೊಡನೆ ವಿಮಾನ ನಿಲ್ದಾಣದಲ್ಲೇ ಎಫ್‌ಬಿ ಅಧಿಕಾರಿಗಳು ಬಂಧಿಸಿದರು.

ನಂತರ ತೀರ್ಪಿಗೆ ಕಾಯುತ್ತಿದ್ದಾಗ, ಅಂದರೆ ಆಗಸ್ಟ್ 10, 2019ರಂದು ನ್ಯೂಯಾರ್ಕ್‌ ಜೈಲಿನಲ್ಲಿ ಎಪ್‌ಸ್ಟೀನ್ ನಿಗೂಢವಾಗಿ ಸಾವನ್ನಪ್ಪಿದ. ಎಪ್‌ಸ್ಟೀನ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಅಧಿಕಾರಿಗಳು ಅಧಿಕೃತವಾಗಿ ಹೇಳಿದರು. ಆದರೆ, ಈ ಹೇಳಿಕೆಯನ್ನು ಇಂದಿಗೂ ಅನೇಕ ಜನರು ನಂಬಿಲ್ಲ. ಎಪ್‌ಸ್ಟೀನ್ ಪ್ರಭಾವಿಗಳ ಹೆಸರು ಬಹಿರಂಗಪಡಿಸಬಾರದು ಎಂದು ವ್ಯವಸ್ಥಿತವಾಗಿ ಕೊಲ್ಲಿಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಎಪ್‌ಸ್ಟೀನ್ ಸಾವಿನ ನಂತರ, ಆತನ ದೀರ್ಘಕಾಲದ ಗೆಳತಿ ಘಿಸ್ಲೇನ್ ಮ್ಯಾಕ್ಸ್‌ವೆಲ್‌ಗೆ 2021ರಲ್ಲಿ ಲೈಂಗಿಕ ಕಳ್ಳಸಾಗಣೆಗೆ ಸಹಾಯ ಮಾಡಿದ ಆರೋಪದಲ್ಲಿ ಶಿಕ್ಷೆ ವಿಧಿಸಲಾಯಿತು. ಈಗ ಆಕೆ ಜೈಲಿನಲ್ಲಿದ್ದಾಳೆ.

ಲೊಲಿಟಾ ಎಕ್ಸ್‌ಪ್ರೆಸ್

ಎಪ್‌ಸ್ಟೀನ್ ಒಡೆತನದಲ್ಲಿದ್ದ ಖಾಸಗಿ ಬೋಯಿಂಗ್ ವಿಮಾನಕ್ಕೆ ‘ಲೊಲಿಟಾ ಎಕ್ಸ್‌ಪ್ರೆಸ್’ ಎಂಬ ಅಡ್ಡ ಹೆಸರು ಇತ್ತು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಇದೇ ವಿಮಾನದ ಮೂಲಕ ಕಳ್ಳ ಸಾಗಣೆ, ಗ್ರಾಹಕರ ಸಾಗಣೆಯನ್ನು ಮಾಡಲಾಗುತ್ತಿತ್ತು ಎಂಬ ಆರೋಪವಿದೆ.

ರಷ್ಯಾದ ಲೇಖಕ ವ್ಲಾಡಿಮಿರ್ ನಬಕೋವ್ (Vladimir Nabokov) 1955ರಲ್ಲಿ ಬರೆದ ಲೊಲಿಟಾ (Lolita) ಎಂಬ ವಿವಾದಾತ್ಮಕ ಕಾದಂಬರಿಯಿಂದ ಪ್ರೇರಣೆ ಪಡೆದು ಈ ಅಡ್ಡ ಹೆಸರನ್ನು ನಾಮಕರಣ ಮಾಡಲಾಗಿದೆ. ವಯಸ್ಕ ವ್ಯಕ್ತಿಯೊಬ್ಬ 12 ರ ಬಾಲಕಿಯೊಬ್ಬಳಲ್ಲಿ ಲೈಂಗಿಕ ಆಕರ್ಷಣೆ ಹೊಂದುವುದು ಈ ಕಾದಂಬರಿಯ ವಿಷಯ. ಈ ಕಥೆಯನ್ನು ಆಧರಿಸಿ ಹಾಲಿವುಡ್‌ನಲ್ಲಿ ಲೊಲಿಟಾ ಎಂಬ ಚಿತ್ರವೂ ತೆರೆ ಕಂಡಿದೆ.

ಎಪ್‌ಸ್ಟೀನ್ ಒಡೆತನದ ಖಾಸಗಿ ದ್ವೀಪಗಳಿಗೆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಇದೇ ವಿಮಾನದ ಮೂಲಕ ಕರೆದೊಯ್ಯಲಾಗುತ್ತಿತ್ತು. ಹಾಗಾಗಿಯೇ, ‘ಲೊಲಿಟಾ ಎಕ್ಸ್‌ಪ್ರೆಸ್’ ಎಂದು ಕುಖ್ಯಾತಿಗೊಂಡಿದೆ. ಈ ವಿಮಾನದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಪ್ರಯಾಣಿಸಿದ್ದಾರೆ ಎನ್ನುವುದು ಗುರುತರ ಆರೋಪ.

ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act)

ಜನಾಕ್ರೋಶವೇ ಬದಲಾವಣೆ ತರುತ್ತದೆ ಎಂಬಂತೆ, ಎಪ್‌ಸ್ಟೀನ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎರಡನೇ ಬಾರಿಗೆ ಬಂಧನಕ್ಕೊಳಗಾಗಿದ್ದು ಜನಾಕ್ರೋಶದ ಕಾರಣಕ್ಕೆ. ಇಲ್ಲದಿದ್ದರೆ, ಪ್ರಭಾವಿಗಳು ಕಾನೂನಿನ ಕಣ್ಣಿಗೆ ಮಣ್ಣೆರಚಿ ಎಪ್‌ಸ್ಟೀನ್‌ ಅನ್ನು ರಕ್ಷಿಸುವ ಮೂಲಕ ತಮ್ಮ ಕಳ್ಳಾಟವನ್ನು ಮುಚ್ಚಿ ಹಾಕುತ್ತಿದ್ದರು. ದೇಶದ ಜನರನ್ನು ವಂಚಿಸುತ್ತಿದ್ದರು. ಆದರೂ, ಎಪ್‌ಸ್ಟೀನ್ ಜೈಲಿನಲ್ಲಿ ಸಾಯುವ ಮೂಲಕ ಪ್ರಕರಣದ ನಿಗೂಢತೆ ಬಯಲಾಗಿಲ್ಲ. ಪ್ರಭಾವಿಗಳ ಹೆಸರು ಹೊರ ಬಂದಿಲ್ಲ. ಇದೀಗ ಜನಾಕ್ರೋಶದ ಕಾರಣಕ್ಕೇ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ ಜಾರಿಗೆ ಬಂದಿದೆ. ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿರುವ ಪ್ರಕರಣದ ವಿವರಗಳಿಗಾಗಿ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಏನಿದು ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್?

ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ ಎಂಬುವುದು ಅಮೆರಿಕದ ಸಂಸತ್ತು ಅಂಗೀಕರಿಸಿದ ಕಾನೂನು. ಇದಕ್ಕೆ 2025ರ ನವೆಂಬರ್ 19ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿ ಜಾರಿಗೊಳಿಸಿದ್ದಾರೆ. ಈ ಕಾಯ್ದೆಯು ಜೆಫ್ರಿ ಎಪ್‌ಸ್ಟೀನ್ ಪ್ರಕರಣದ ತನಿಖೆ ಮತ್ತು ಆರೋಪಕ್ಕೆ ಸಂಬಂಧಿಸಿದ ಯುಎಸ್ ನ್ಯಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಸಾರ್ವಜನಿಕಗೊಳಿಸುವುದನ್ನು ಕಡ್ಡಾಯ ಮಾಡುತ್ತದೆ.

ನ್ಯಾಯ ಇಲಾಖೆಯು ಎಪ್‌ಸ್ಟೀನ್‌ ಪ್ರಕರಣದ ತನಿಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ದಾಸ್ತಾನುಗಳು, ಸಂನಿವೇಶಗಳು, ತನಿಖಾ ವಸ್ತುಗಳನ್ನು ಹುಡುಕಾಟಕ್ಕೆ ಸಾಧ್ಯವಾದ ಮತ್ತು ಡೌನ್‌ಲೋಡ್ ಮಾಡಬಹುದಾದ ಫಾರ್ಮ್ಯಾಟ್‌ನಲ್ಲಿ ಪ್ರಕಟಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಪ್ರಸ್ತುತ ಜೈಲಿನಲ್ಲಿರುವ ಎಪ್‌ಸ್ಟೀನ್‌ ಗೆಳತಿ ಘಿಸ್ಲೇನ್ ಮ್ಯಾಕ್ಸ್‌ವೆಲ್‌ಗೆ ಸಂಬಂಧಿಸಿದ ವಸ್ತುಗಳು, ಫ್ಲೈಟ್ ಲಾಗ್‌ಗಳು, ಪ್ರಯಾಣ ದಾಖಲೆಗಳು, ಮತ್ತು ತನಿಖೆಯಲ್ಲಿ ಕಂಡು ಬಂದ ಹೆಸರುಗಳು ಅಥವಾ ಉಲ್ಲೇಖಗಳು (ಸರ್ಕಾರಿ ಅಧಿಕಾರಿಗಳ ಸಹಿತ) ಕೂಡ ಇದರಲ್ಲಿ ಸೇರಿವೆ.

ಕಾನೂನು ಜಾರಿಯಾದ 30 ದಿನಗಳೊಳಗೆ ಈ ದಾಖಲೆಗಳನ್ನು ಪ್ರಕಟಿಸಬೇಕು. ಒತ್ತಡಕ್ಕೊಳಗಾದ ವ್ಯಕ್ತಿಗಳ ವೈಯಕ್ತಿಕ ಮಾಹಿತಿ, ಪ್ರಸ್ತುತ ನಡೆಯುತ್ತಿರುವ ಫೆಡರಲ್ ತನಿಖೆಗಳಿಗೆ ಅಪಾಯ ಒಡ್ಡುವ ವಸ್ತುಗಳು ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳನ್ನು ಮರೆಮಾಚಬಹುದು. ಪ್ರಕಟಣೆಯ ನಂತರ 15 ದಿನಗಳೊಳಗೆ, ನ್ಯಾಯ ಇಲಾಯಖೆಯು ಸಂಸತ್ತಿನ ಕಾನೂನು ಸಮಿತಿಗಳಿಗೆ ಪ್ರಕಟಿಸಿದ ಮಾಹಿತಿಯ ವರ್ಗಗಳು, ಮರೆಮಾಚಿದ ಅಂಶಗಳ ಸಾರಾಂಶ, ಮತ್ತು ದಾಖಲೆಗಳಲ್ಲಿ ಹೆಸರಿಸಲಾದ ಸರ್ಕಾರಿ ಅಧಿಕಾರಿಗಳ ಪಟ್ಟಿಯನ್ನು ವರದಿ ಮಾಡಬೇಕು.

ದಾಖಲೆ ಬಿಡುಗಡೆ ಯಾವಾಗ?

ಕಾನೂನು ಜಾರಿಯಾದ 30 ದಿನಗಳೊಳಗೆ (ನವೆಂಬರ್ 19ರಿಂದ ಡಿಸೆಂಬರ್ 19, 2025ರವರೆಗೆ) ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು. ಈಗ 8 ದಿನಗಳು ಕಳೆದಿವೆ, ಇನ್ನೂ 23 ದಿನಗಳು ಉಳಿದಿವೆ. ಅಟಾರ್ನಿ ಜನರಲ್ ಪ್ಯಾಮ್ ಬಾಂಡಿ ಅವರು ಡಿಸೆಂಬರ್ ಮಧ್ಯದೊಳಗೆ ದಾಖಲೆ ಬಿಡುಗಡೆಗೊಳಿಸುವ ಸೂಚನೆ ನೀಡಿದ್ದಾರೆ. ಆದರೆ ಹೊಸ ತನಿಖೆಗಳಿಂದ ವಿಳಂಬ ಆಗಬಹುದು ಎಂದು ವರದಿಗಳು ಹೇಳಿವೆ.

ನ್ಯಾಯ ಇಲಾಖೆ ಈಗ 300 ಗಿಗಾಬೈಟ್‌ಗೂ ಹೆಚ್ಚಿನ ದಾಖಲೆಗಳನ್ನು (ಫ್ಲೈಟ್ ಲಾಗ್‌ಗಳು, ಸಾಕ್ಷಿ ಸನ್ನಿವೇಶಗಳು, ತನಿಖಾ ವಸ್ತುಗಳು, ಘಿಸ್ಲೇನ್ ಮ್ಯಾಕ್ಸ್‌ವೆಲ್‌ಗೆ ಸಂಬಂಧಿಸಿದ ಮಾಹಿತಿ) ಹುಡುಕಾಟಕ್ಕೆ ಸಾಧ್ಯವಾದ ಮತ್ತು ಡೌನ್‌ಲೋಡ್ ಮಾಡಬಹುದಾದ ಫಾರ್ಮ್ಯಾಟ್‌ನಲ್ಲಿ ತಯಾರಿಸುತ್ತಿದೆ. ಎಫ್‌ಬಿಐ ಈಗಾಗಲೇ ದಾಖಲೆಗಳನ್ನು ವಿಶ್ಲೇಷಿಸಲು ಸುಮಾರು 1 ಮಿಲಿಯನ್ ಡಾಲರ್ ಖರ್ಚು ಮಾಡಿದ್ದು, ‘ಸ್ಪೆಷಲ್ ರೆಡ್ಯಾಕ್ಷನ್ ಪ್ರಾಜೆಕ್ಟ್’ ಎಂಬ ಹೆಸರಿನಲ್ಲಿ ಕೆಲಸ ನಡೆಯುತ್ತಿದೆ ಎಂದು ವರದಿಗಳು ವಿವರಿಸಿವೆ.

ಎಪ್‌ಸ್ಟೀನ್ ಪ್ರಕರಣದಲ್ಲಿ ಯಾವೆಲ್ಲ ಪ್ರಭಾವಿಗಳ ಹೆಸರು ಕೇಳಿ ಬಂದಿದೆ..? ದಾಖಲೆ ಬಿಡುಗಡೆಯಾದರೆ ಟ್ರಂಪ್‌ಗೆ ಸಮಸ್ಯೆ ಇದೆಯಾ?

ಎಪ್‌ಸ್ಟೀನ್ ಪ್ರಕರಣದಲ್ಲಿ ಹಲವು ಪ್ರಭಾವಿಗಳ ಹೆಸರುಗಳು ಕೋರ್ಟ್ ದಾಖಲೆಗಳು, ಫ್ಲೈಟ್ ಲಾಗ್‌ಗಳು, ಬ್ಲ್ಯಾಕ್ ಬುಕ್ ಮತ್ತು ಇತ್ತೀಚಿನ ಇಮೇಲ್‌ಗಳುಗಳಲ್ಲಿ ಕಂಡುಬಂದಿವೆ. ಇದರ್ಥ ಅವರೆಲ್ಲರೂ ಅಪರಾಧದಲ್ಲಿ ಭಾಗವಹಿಸಿದ್ದಾರೆ ಎಂದಲ್ಲ. ಹೆಚ್ಚಿನವುಗಳು ಸಾಧಾರಣ ಸ್ನೇಹ ಅಥವಾ ಭೇಟಿಗಳನ್ನು ಸೂಚಿಸುತ್ತವೆ ಎಂದು ವರದಿಗಳು ಹೇಳುತ್ತವೆ.

ರಾಜಕೀಯ ನಾಯಕರಾದ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಹಿಲರಿ ಕ್ಲಿಂಟನ್, ಬಿಲ್ ರಿಚರ್ಡ್‌ಸನ್, ಎಹುದ್ ಬಾರಕ್, ಲ್ಯಾರಿ ಸಮರ್ಸ್, ಸ್ಟೀವ್ ಬ್ಯಾನನ್, ರೀಡ್ ಹಾಫ್‌ಮನ್, ರಾಯಲ್ ಫ್ಯಾಮಿಲಿಯ ಪ್ರಿನ್ಸ್ ಆಂಡ್ರ್ಯೂ, ಸೆಲೆಬ್ರಿಟಿಗಳು/ಕಲಾವಿದರಾದ ಮೈಕಲ್ ಜ್ಯಾಕ್ಸನ್, ಡೇವಿಡ್ ಕಾಪರ್‌ಫೀಲ್ಡ್, ಲೆಓನಾರ್ಡೊ ಡಿ ಕ್ಯಾಪ್ರಿಯೊ, ಕೆವಿನ್ ಸ್ಪೇಸಿ, ನೌಮಿ ಕ್ಯಾಂಪ್‌ಬೆಲ್, ಬ್ರೂಸ್ ವಿಲಿಸ್, ಕೇಟ್ ಬ್ಲಾಂಚೆಟ್, ರಾಲ್ಫ್ ಫೈನ್ಸ್, ಕ್ರಿಸ್ ಇವಾನ್ಸ್ ಸೇರಿದಂತೆ ಹಲವು ಪ್ರಭಾವಿಗಳ ಹೆಸರುಗಳು ಎಪ್‌ಸ್ಟೀನ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ.

ಟ್ರಂಪ್‌ಗೆ ಅಪಾಯವಿದೆಯಾ?

ಟ್ರಂಪ್ ಮತ್ತು ಎಪ್‌ಸ್ಟೀನ್ ನಡುವೆ 15 ವರ್ಷಗಳ ಸ್ನೇಹವಿತ್ತು. ಫ್ಲೈಟ್ ಲಾಗ್‌ಗಳಲ್ಲಿ ಟ್ರಂಪ್ ಹೆಸರಿದೆ. ಮ್ಯಾರ್-ಎ-ಲಾಗೊ ಕ್ಲಬ್ ಸದಸ್ಯತ್ವವನ್ನು ಟ್ರಂಪ್ ಹೊಂದಿದ್ದರು. ಆದರೆ, 2007ರಿಂದ ಟ್ರಂಪ್ ಎಪ್‌ಸ್ಟೀನ್ ಸಖ್ಯ ತೊರೆದಿದ್ದರು ಎಂದು ವರದಿಯಾಗಿದೆ.

2025ರ ನವೆಂಬರ್‌ನಲ್ಲಿ ಬಿಡುಗಡೆಯಾದ ಇಮೇಲ್‌ಗಳಲ್ಲಿ ಎಪ್‌ಸ್ಟೀನ್ ಹುಡುಗಿಯರ ಬಗ್ಗೆ ತಿಳಿದಿದ್ದರು ಮತ್ತು ಒಬ್ಬಳು ಸಂತ್ರಸ್ತೆ ಜೊತೆ ಗಂಟೆಗಳ ಕಾಲ ನನ್ನ ಮನೆಯಲ್ಲಿ ಕಳೆದಿದ್ದಾರೆ ಎಂದು ಬರೆದಿದ್ದರು. ಆದರೆ, ಇದು ಎಪ್‌ಸ್ಟೀನ್‌ನ ಆರೋಪ ಮಾತ್ರ; ಯಾವುದೇ ಸಾಕ್ಷ್ಯವಿಲ್ಲ.

ವರ್ಜೀನಿಯಾ ಗಿಫ್ರೆ 2016ರಲ್ಲಿ ಟ್ರಂಪ್ ಯಾವುದೇ ದೌರ್ಜನ್ಯದಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ. ಟ್ರಂಪ್ “ಹೋಕ್ಸ್” ಎಂದು ಕರೆದು, ಎಪ್‌ಸ್ಟೀನ್ ಅನ್ನು “ಕ್ರೀಪ್” ಎಂದು ಕರೆದಿದ್ದಾರೆ. ನ್ಯಾಯ ಇಲಾಖೆ 2025ರ ಮೆಮೊದಲ್ಲಿ ಟ್ರಂಪ್ ವಿರುದ್ಧ ಯಾವುದೇ ತನಿಖೆಗೆ ಆಧಾರವಿಲ್ಲ ಎಂದಿದೆ.

ಟ್ರಂಪ್‌ಗೆ ರಾಜಕೀಯ/ಬಹಿರಂಗ ಒತ್ತಡವಿದೆ (ಇಮೇಲ್‌ಗಳಿಂದ). ಆದರೆ, ಕಾನೂನು ಅಪಾಯವಿಲ್ಲ. ನ್ಯಾಯ ಇಲಾಖೆ ಸ್ಪಷ್ಟಪಡಿಸಿದಂತೆ. ಹೆಚ್ಚಿನ ದಾಖಲೆಗಳ ಬಿಡುಗಡೆಯ ನಂತರ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...