Homeಕರ್ನಾಟಕಕರ್ನಾಟಕದ ಕೆಸರುಗದ್ದೆ ರಾಜಕಾರಣದಲ್ಲಿ ಉದಯಿಸುವುದೇ ಹೊಸ ಪಕ್ಷ?

ಕರ್ನಾಟಕದ ಕೆಸರುಗದ್ದೆ ರಾಜಕಾರಣದಲ್ಲಿ ಉದಯಿಸುವುದೇ ಹೊಸ ಪಕ್ಷ?

- Advertisement -
- Advertisement -

ಸಿದ್ರಾಮಯ್ಯ ಹೊಸ ಪ್ರಾದೇಶಿಕ ಪಕ್ಷ ಕಟ್ತಾರಂತೆ! ಯಡ್ಯೂರಪ್ಪನೂ ಜೊತೆಗೂಡ್ತಾರಂತೆ! ಕೆ.ಜೆ.ಜಾರ್ಜ್ ಒಡೆತನದ ಹಿಲ್‍ಟನ್ ಹೊಟೇಲ್‍ನಲ್ಲಿ ಅದಾಗಲೇ ಮೊದಲ ಸುತ್ತಿನ ಸಭೆ ಮುಗಿದುಹೋಗಿದೆಯಂತೆ! ಹೊಸ ಪಕ್ಷದ ಲಾಂಛನದಲ್ಲಿ ಬಸವಣ್ಣ, ಕುವೆಂಪು, ದೇವರಾಜ್ ಅರಸು, ಟಿಪ್ಪೂ ಸುಲ್ತಾನ್ ಫೋಟೊಗಳೂ ಫಿಕ್ಸ್ ಆಗಿವೆಯಂತೆ……. ಇವು ಸದ್ಯದ ಬ್ರೇಕಿಂಗ್ ನ್ಯೂಸ್‍ಗಳು!

ರಾಜಕೀಯ ವಿದ್ಯಮಾನಗಳಲ್ಲಿ ಹೇಗೆ ಎಲ್ಲವೂ ಸತ್ಯ ಎಂದು ನಂಬಲಿಕ್ಕಾಗುವುದಿಲ್ಲವೋ, ಹಾಗೆಯೇ ಎಲ್ಲವೂ ಸುಳ್ಳು ಎಂದು ತಳ್ಳಿಹಾಕಲಿಕ್ಕೂ ಬರುವುದಿಲ್ಲ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‍ನೊಳಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಹೊಸ ಪಕ್ಷದ ಪ್ರಸವಕ್ಕೆ ಒಂದೀಟು ನರಳಾಟ ಶುರುವಾದರೂ ಅಚ್ಚರಿಯಿಲ್ಲ. ಯಾಕೆಂದರೆ ಈ ಮೂರೂ ಪಕ್ಷಗಳು ಈಗ ಅಕ್ಷರಶಃ ಮುರಿದ ಮನೆಯಂತಾಗಿವೆ. ಕಾಂಗ್ರೆಸ್‍ನೊಳಗೆ ಮುನಿಯಪ್ಪ, ಮೊಯ್ಲಿ, ಹರಿಪ್ರಸಾದ್ ತರಹದ ಹಳೇ ನಾಣ್ಯಗಳು ಸಿದ್ದು ವಿರುದ್ಧ ಗರಂ ಆಗಿದ್ದರೆ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಎಂಬ ಮುಖವಾಡದ ಹಿಂದೆ ಅವಿತು ಬಿ.ಎಲ್.ಸಂತೋಷ್ ಕೊಡುತ್ತಿರುವ ಕಾಟಕ್ಕೆ ಯಡ್ಯೂರಪ್ಪ ಫುಲ್ ಹೈರಾಣಾಗಿ ಹೋಗಿದ್ದಾರೆ. ಅತ್ತ ಒಕ್ಕಲಿಗರ ಜಾತಿರಾಜಕಾರಣವನ್ನೇ ಅವಲಂಬಿಸಿದ್ದ ಜೆಡಿಎಸ್‍ನ ಕುಮಾರಸ್ವಾಮಿ ಕುಲಗುರು ಆದಿಚುಂಚನಗಿರಿಯ ನಿರ್ಮಲಾನಂದರ ಫೋನಿಗೇ ಕಳ್ಳಗಿವಿಯಾನಿಸಿದ ಆರೋಪ ಹೊತ್ತು ಕೊಸರಾಡುತ್ತಿದ್ದಾರೆ. ಒಕ್ಕಲಿಗರೇ ನಿರ್ಣಾಯಕರಾದ ತುಮಕೂರು, ಮಂಡ್ಯ ಕ್ಷೇತ್ರಗಳಲ್ಲಿ ಅಜ್ಜ-ಮೊಮ್ಮಗ ಒಟ್ಟೊಟ್ಟಿಗೆ ಸೋತಾಗಲೆ ಜೆಡಿಎಸ್‍ನ ಜಾತಿ ಕೆಮಿಸ್ಟ್ರಿ ಸಣ್ಣಗೆ ಸೊರಗಿದ ಸುಳಿವು ಸಿಕ್ಕಿದ್ದವು. ಈಗ ಕುಮಾರಸ್ವಾಮಿ ಮೇಲೆ ಬಂದಿರುವ ಆರೋಪ ಪಕ್ಷವನ್ನು ಮತ್ತಷ್ಟು ಮೆತ್ತಗಾಗಿಸಿದರೆ ಅಚ್ಚರಿಯಿಲ್ಲ.

ಸಾಮಾನ್ಯವಾಗಿ ರಾಜಕಾರಣ ಹೀಗೆ ಹೋಲ್‍ಸೇಲಾಗಿ ಅಸ್ಥಿರತೆಗೆ ಸಿಲುಕಿದಾಗ ಹೊಸ ಪಕ್ಷದಂತಹ ಸುದ್ದಿಗಳು ಹುಟ್ಟೋದು ಸಹಜ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶ ನೋಡಿದರೆ ಇದು ಒಂದು `ಸುದ್ದಿ’ಯಾಗಿ ಕೆಲದಿನ ಸದ್ದು ಮಾಡಬಹುದೇ ವಿನಾಃ ದೀರ್ಘಕಾಲದ ‘ವಿದ್ಯಮಾನ’ವಾಗುವ ಸಾಧ್ಯತೆ ಬಲು ಕ್ಷೀಣ!
ಇಲ್ಲಿ ಯಡ್ಯೂರಪ್ಪ ಮತ್ತು ಸಿದ್ರಾಮಯ್ಯನವರ ಸೋಕಾಲ್ಡ್ `ಜಂಟಿಯಾನ’ಕ್ಕಿರುವ `ಲೋಕಲ್ ಸಿಂಪ್ಟಮ್’ಗಳಿಗೂ ಮುನ್ನ ಪ್ರಾದೇಶಿಕ ಪಕ್ಷಗಳ ಹುಟ್ಟು-ಅಸ್ತಿತ್ವಗಳ ಜಟಿಲತೆಯನ್ನೊಮ್ಮೆ ಗಮನಿಸೋಣ.

ಈಗ ಭಾರತದಲ್ಲಿ ನಾಲ್ಕು ಡಜನ್‍ಗು ಹೆಚ್ಚು ಪ್ರಾದೇಶಿಕ ಪಕ್ಷಗಳಿವೆ. ಬೇರೆಬೇರೆ ಕಾಲಘಟ್ಟದಲ್ಲಿ ರೂಪುತಳೆದ (ಶಿರೋಮಣಿ ಅಕಾಲಿದಳ ಮತ್ತು ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ನಂತವು ಸ್ವಾತಂತ್ರಪೂರ್ವದಲ್ಲೇ ಅಸ್ತಿತ್ವಕ್ಕೆ ಬಂದಂತವು) ಇವುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಪ್ರಾದೇಶಿಕ ಪಕ್ಷಗಳು ಹುಟ್ಟಲು ಮುಖ್ಯವಾಗಿ ನಾಲ್ಕು ಕಾರಣಗಳು ಅಥವಾ ಪ್ರಚೋದನೆಗಳನ್ನು ನಾವು ಗುರುತಿಸಬಹುದು. ಮೊದಲನೆಯದ್ದು, ತನ್ನ ರಾಜ್ಯಕ್ಕೆ ಅಥವಾ ಪ್ರದೇಶಕ್ಕೆ ಹೆಚ್ಚಿನ ಅಧಿಕಾರವನ್ನು ಬೇಡುವ `ಪ್ರಾದೇಶಿಕ ಸ್ವಾಯತ್ತತೆ’ (ಉದಾ: ಜಮ್ಮು-ಕಾಶ್ಮೀರದ ನ್ಯಾಶನಲ್ ಕಾನ್ಫರೆನ್ಸ್). ಎರಡನೆಯದು, ಪ್ರತ್ಯೇಕ ರಾಜ್ಯದ ಕೂಗು (ಉದಾ: ತೆಲಂಗಾಣ ರಾಷ್ಟ್ರೀಯ ಸಮಿತಿ – ಟಿಆರ್‌ಎಸ್). ಮೂರನೆಯದು, ಪ್ರಾದೇಶಿಕ ಜನಾಂಗೀಯ ಅಸ್ಮಿತೆಯ ಸ್ವಾಭಿಮಾನ (ಉದಾ: ಮಹಾರಾಷ್ಟ್ರದ ಶಿವಸೇನೆ ಮತ್ತು ತಮಿಳುನಾಡಿನ ದ್ರಾವಿಡ ಪಕ್ಷಗಳು). ನಾಲ್ಕನೆಯದು, ಪ್ರಾದೇಶಿಕ ಪ್ರಬಲ (ಸಂಖ್ಯಾವಾರು) ಜಾತಿಗಳ ಧ್ರುವೀಕರಣ (ಉದಾ: ಸಮಾಜವಾದಿ ಪಕ್ಷ, ಆರ್‍ಜೆಡಿ).

ಆದರೆ ಆಮ್ ಆದ್ಮಿ ಪಕ್ಷ ಈ ನಾಲ್ಕು ಕಾರಣಗಳಿಗೆ ಅಪವಾದದಂತೆ ಹುಟ್ಟಿತು. ವಾಸ್ತವದಲ್ಲಿ ಸಾರ್ವತ್ರಿಕ ಸಾಮಾಜಿಕ ಜಾಗೃತಿಯ ಭಾಗವಾಗಿ ಜನ್ಮತಳೆದ ಆಮ್ ಆದ್ಮಿ ಪಾರ್ಟಿ ದಿಲ್ಲಿ ಅಥವಾ ಹರಿಯಾಣಕ್ಕಷ್ಟೆ ಸೀಮಿತವಾದಂತಹ ಒಂದು ಪ್ರಾದೇಶಿಕ ಪಕ್ಷವಾಗಿರಲಿಲ್ಲ. ಸಮರ್ಥ ಪರ್ಯಾಯ ರಾಷ್ಟ್ರೀಯ ಪಕ್ಷವಾಗುವ ಸಾಧ್ಯತೆ ಅದಕ್ಕಿತ್ತು. ಆದರೆ ಅರವಿಂದ್ ಕೇಜ್ರಿವಾಲರು ದಿಲ್ಲಿಗಷ್ಟೇ ಸೀಮಿತಗೊಳಿಸಿ ಪ್ರಾದೇಶಿಕ ಪಕ್ಷಕ್ಕೆ ಸಂಕುಚಿತಗೊಳಿಸಿದರು.

ಸದ್ಯದ ಕರ್ನಾಟಕ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆ ಗಮನಿಸಿದರೆ ಈ ನಾಲ್ಕರಲ್ಲಿ ಯಾವ ಪ್ರಚೋದನೆಯೂ ಮತ್ತೊಂದು ಪಕ್ಷವನ್ನು ಹುಟ್ಟುಹಾಕುವಷ್ಟು ಫಲವತ್ತತೆ ಪಡೆದಿಲ್ಲ. ಇದ್ದರೆ, ನಾಲ್ಕನೆಯ ಪ್ರಚೋದನೆ ಮಾತ್ರ ಸಣ್ಣ ಸಾಧ್ಯತೆ ತೆರೆದಿಡಬಹುದು. ಆದರೆ 2013ರಲ್ಲೇ ಈ ಪ್ರಯತ್ನಕ್ಕೆ ಮುಂದಾಗಿದ್ದ ಯಡ್ಯೂರಪ್ಪನವರು ಲಿಂಗಾಯತರ ಜಾತಿ ಧ್ರುವೀಕರಣವನ್ನು ಆಧರಿಸಿ ಕಟ್ಟಿದ ಕೆಜೆಪಿ ಹೀನಾಯ ಹಿನ್ನಡೆ ಕಂಡಿತ್ತು. ಬಿಜೆಪಿಯನ್ನು ಮಕಾಡೆ ಮಲಗಿಸಿದ್ದಷ್ಟೇ ಅದರ ಸಾಧನೆ.

ಇತ್ತ ಸಿದ್ದರಾಮಯ್ಯನವರನ್ನು `ಅಹಿಂದ’ ನಾಯಕ ಎನ್ನಲಾಗುತ್ತದೆಯಾದರು `ಅಹಿಂದ’ ಎನ್ನುವುದು ಒಂದು ಸಮಾನ ಬೆಸುಗೆಯ ಸಾಮಾಜಿಕ ಸಂರಚನೆಯಲ್ಲ. ಹತ್ತುಹಲವು ತಳಸಮುದಾಯಗಳ, ಹಿಂದುಳಿದ ವರ್ಗಗಳ ಒಂದು ರಾಜಕೀಯ ಏಕೀಕರಣದ ದನಿಯಷ್ಟೆ. ಆಳವಾದ ಬೆಸುಗೆಯಿಲ್ಲದ ಈ ಸಮುದಾಯಗಳು ಪ್ರಬಲ ಜಾತಿಯೊಂದರಂತೆ ಸಾರ್ವತ್ರಿಕವಾಗಿ ಒಂದು ಪಕ್ಷದ ಮತಗಳಾಗಿ ರೂಪಾಂತರವಾಗುವುದು ಎಷ್ಟು ಕಷ್ಟವೋ, ಪ್ರಾದೇಶಿಕವಾಗಿ ಒಂದುಕಡೆ ಸಾಂದ್ರಿತವಾಗದೆ ಅಲ್ಲಲ್ಲಿ ಚದುರಿಹೋಗಿರುವುದೂ ನಮ್ಮ ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಈ ಅಹಿಂದ ಸಮುದಾಯಗಳಿಗಿರುವ ದೊಡ್ಡ ಹಿನ್ನಡೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ರಾಮಯ್ಯನವರ ಜನಪ್ರಿಯ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಪಕ್ಷ ಕಳೆದ ಸಾಲಿಗಿಂತ ಶೇ.1.4ನಷ್ಟು ಹೆಚ್ಚು ಮತಗಳಿಸಿದರೂ (ಒಟ್ಟು ಶೇ.38.14) ಕೇವಲ ಎಂಬತ್ತು ಎಂಎಲ್‍ಎಗಳನ್ನಷ್ಟೇ ಗೆಲ್ಲಿಸಿಕೊಳ್ಳಲು ಸಾಧ್ಯವಾಯ್ತು.
2013ರಲ್ಲಿ ಶೇ.36.74 ಮತ ಗಳಿಸಿದ್ದರೂ ಕಾಂಗ್ರೆಸ್ 122 ಸ್ಥಾನ ಗಳಿಸಿತ್ತು.

ಆ ಸಲ ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ಮತ್ತು ನಾಯಕ ಜನಾಂಗದ ಮತಗಳು ಯಡ್ಯೂರಪ್ಪ (ಕೆಜೆಪಿ) ಮತ್ತು ಶ್ರೀರಾಮುಲು (ಬಿಎಸ್‍ಆರ್ ಕಾಂಗ್ರೆಸ್) ಕಾರಣಕ್ಕೆ ಛಿದ್ರಗೊಂಡಿದ್ದರಿಂದ ಅಹಿಂದ ಮತಗಳ ಕ್ರೋಢೀಕರಣವು ಗೆಲುವಿನ ಸ್ಥಾನಗಳಾಗಿ ಪರಿವರ್ತನೆಗೊಂಡಿದ್ದವು. 2018ರಲ್ಲಿ ಮತಗಳಿಕೆ ಶೇ.1.4ರಷ್ಟು ಹೆಚ್ಚಾದರು (ಇವೂ ಅಹಿಂದ ಮತಗಳೆನ್ನುವುದರಲ್ಲಿ ಯಾವ ಸಂಶಯವಿಲ್ಲ್ಲ) ಕಾಂಗ್ರೆಸ್‍ಗೆ ಅವು ಸ್ಥಾನಗಳಾಗಿ ಪರಿವರ್ತನೆಯಾಗಿಲಿಲ್ಲ. ಯಾಕೆಂದರೆ ಆಯಾ ಕ್ಷೇತ್ರದಲ್ಲಿ ನಿರ್ಣಾಯಕವೆನಿಸುವಷ್ಟು ಸಾಂದ್ರಿತವಾದ ಪ್ರಭಾವಿ ಜಾತಿಮತಗಳು ಬಿಜೆಪಿ ಪರವಾಗಿ ಧ್ರುವೀಕರಣಗೊಂಡಿದ್ದವು. ಇದು ಅಹಿಂದ ಸಮುದಾಯಕ್ಕಿರುವ ದೊಡ್ಡ ಮಿತಿಯೂ ಹೌದು.

ಅಲ್ಲದೇ, ಅಹಿಂದ ಮತಗಳ ರಾಜಕಾರಣದ ಅಂತಃಸತ್ವ ಇರುವುದೇ ಪ್ರಬಲ ಜಾತಿಗಳ ವಿರುದ್ಧ ಸೆಣೆಸುವುದರಲ್ಲಿ. ಉತ್ತರದಲ್ಲಿ ಲಿಂಗಾಯತರು ಮತ್ತು ದಕ್ಷಿಣದಲ್ಲಿ ಒಕ್ಕಲಿಗರ ರಾಜಕಾರಣವನ್ನು ಪ್ರತಿರೋಧಿಸುವುದೇ ಅಹಿಂದ ರಾಜಕಾರಣದ ಅಡಿಪಾಯ. ಆ ಕಾರಣಕ್ಕೇ ಸಿದ್ರಾಮಯ್ಯರನ್ನು ಈ ಸಮುದಾಯಗಳು ತಮ್ಮ ನಾಯಕ ಎಂದು ಸ್ವೀಕರಿಸಿವೆ. ಒಂದೊಮ್ಮೆ ಸಿದ್ದು-ಯಡ್ಯೂರಪ್ಪ ಒಂದಾಗಿ ಹೊಸ ರಾಜಕಾರಣ ಶುರು ಮಾಡಿದರೆ ಆಗಲೂ ಈ ಅಹಿಂದ ಮತಗಳು ತಮ್ಮ ಪಾರಂಪಾರಿಕ ಸೆಣೆಸಾಟವನ್ನು ಬದಿಗಿರಿಸಿ ಸಿದ್ದು ಬೆನ್ನಿಗೆ ನಿಲ್ಲುತ್ತವಾ? ಎಂಬ ಪ್ರಶ್ನೆಯೂ ಉದ್ಭವಿಸುತ್ತೆ. ಯಾಕೆಂದರೆ ಜೆಡಿಎಸ್ (ಒಕ್ಕಲಿಗರು) ಜೊತೆ ಕಾಂಗ್ರೆಸ್ (ಅಹಿಂದ) ಮೈತ್ರಿ ಮಾಡಿಕೊಂಡು ನಡೆಸಿದ 2019ರ ಲೋಕಸಭಾ ಫಲಿತಾಂಶ ಇಲ್ಲಿ ಎಚ್ಚರಿಕೆಯ ಗಂಟೆಯಂತೆ ಕೆಲಸ ಮಾಡುತ್ತೆ.

ಇನ್ನು, ಅಷ್ಟೂ ಪ್ರಾದೇಶಿಕ ಪಕ್ಷಗಳ ಸಂರಚನೆಯನ್ನು ಗಮನಿಸಿದರೆ ಅರ್ಥವಾಗುವ ಮತ್ತೊಂದು ಪಾಠವೆಂದರೆ, ಅವು ಏಕವ್ಯಕ್ತಿ ಅಥವಾ ಒಂದು ಕುಟುಂಬದ ಆಸ್ತಿಯಂತೆ ತಮ್ಮ ಅಸ್ತಿತ್ವ ಉಳಿಸಿಕೊಂಡಿರೋದು. ಸಮಾಜವಾದಿ ಪಕ್ಷಕ್ಕೆ ಮುಲಾಯಂ ಯಾದವ್ ಕುಟುಂಬ, ಆರ್‍ಜೆಡಿಗೆ ಲಾಲು ಪ್ರಸಾದ್, ಬಿಜು ಜನತಾದಳ್‍ಗೆ ನವೀನ್ ಪಟ್ನಾಯಕ್, ತೃಣಮೂಲ ಕಾಂಗ್ರೆಸ್‍ಗೆ ಮಮತಾ ದೀದಿ, ಡಿಎಂಕೆಗೆ ಕರುಣಾನಿಧಿ ಫ್ಯಾಮಿಲಿ, ಟಿಆರ್‍ಎಸ್‍ಗೆ ಕೆ.ಚಂದ್ರಶೇಖರ್ ರಾವ್, ಶಿವಸೇನೆಗೆ ಠಾಕ್ರೆ ಕುಟುಂಬ, ವೈಎಸ್‍ಆರ್ ಕಾಂಗ್ರೆಸ್‍ಗೆ ಜಗನ್ ಕುಟುಂಬ, ರಾಷ್ಟ್ರೀಯ ಲೋಕದಳಕ್ಕೆ ಅಜಿತ್ ಸಿಂಗ್ ಕುಟುಂಬ, ಜೆಡಿಎಸ್‍ಗೆ ದೇವೇಗೌಡರ ಫ್ಯಾಮಿಲಿ… ಹೀಗೆ ಅವೆಲ್ಲವೂ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ಪಾಳೆಗಾರಿಕೆಯಲ್ಲೆ ಬಾಳುತ್ತಿವೆ. ಎಷ್ಟು ಅಲ್ಲಗಳೆದರು ಇದು ವಾಸ್ತವ.

1920ರಲ್ಲೇ ಅಸ್ತಿತ್ವಕ್ಕೆ ಬಂದ ಶಿರೋಮನಿ ಅಕಾಲಿದಳ ಪಂಜಾಬಿಗರ ಅಸ್ಮಿತೆಯ ಸಾಮೂಹಿಕ ನಾಯಕತ್ವದ ಪಕ್ಷವಾಗಿ ಗುರುತಿಸಿಕೊಂಡಿತ್ತು. ಆದರೆ 1970ರನಂತರ, ಪ್ರಕಾಶ್ ಸಿಂಗ್ ಬಾದಲ್ ಅಕಾಲಿದಳದ ನಾಲ್ಕನೆಯ ಸಿಎಂ ಆದ ತರುವಾಯ ಅದು ಬಾದಲ್ ಫ್ಯಾಮಿಲಿಯ ಕೌಟುಂಬಿಕ ಆಸ್ತಿಯಾಗಿದೆ. ಹೀಗಿರುವಾಗ ಅಹಿಂದ ಮತಸಮೂಹದ ಲೀಡರಿಕೆ ಹೊಂದಿರುವ ಸಿದ್ರಾಮಯ್ಯ ಮತ್ತು ಲಿಂಗಾಯತ ಲೀಡರಿಕೆಯ ಯಡ್ಯೂರಪ್ಪ ಜೊತೆಗೂಡಿ ಪ್ರಾದೇಶಿಕ ಪಕ್ಷ ಹುಟ್ಟುಹಾಕಿದರೆ, ಅದು ಮತ್ತೊಂದು ರಾಜಕೀಯ ಹೊಯ್ದಾಟವಾಗುವುದೆ ವಿನಾಃ ಒಂದು ಪರ್ಯಾಯ ಪಕ್ಷವಾಗಿ ರೂಪುಗೊಳ್ಳುವ ಸಾಧ್ಯತೆಯೇ ಇಲ್ಲ. ಯಾಕೆಂದರೆ ಇವರಿಬ್ಬರ ಪ್ರತಿಷ್ಠೆಗಳೇ ಆ ಪ್ರಯತ್ನಕ್ಕೆ ಮುಳುವಾಗುತ್ತವೆ.

ಇನ್ನು ಯಡಿಯೂರಪ್ಪರನ್ನು ಪಕ್ಕಕ್ಕಿಟ್ಟು ಸಿದ್ದು ಏಕಾಂಗಿಯಾಗಿ ಪಕ್ಷ ಕಟ್ಟಲು ಹೊರಟರೆ, ಮೊದಲೇ ವಿವರಿಸಿದಂತೆ `ಅಹಿಂದ’ ಮತಗಳ ರಾಜಕೀಯ ಮಿತಿಗಳು ಅವರನ್ನು ಅತಂತ್ರಗೊಳಿಸಲಿವೆ.
ಅಷ್ಟಕ್ಕೂ ಸಿದ್ರಾಮಯ್ಯನವರಿಗೆ ಈ ಅನುಭವ ಹೊಸದೇನೂ ಅಲ್ಲ. 2005ರಲ್ಲಿ ದೇವೇಗೌಡರ ಜೊತೆ ಮುನಿಸಿಕೊಂಡು ಅಹಿಂದ ಸಂಘಟನೆಯ ಕಾರಣಕ್ಕೇ ಜೆಡಿಎಸ್‍ನಿಂದ ಹೊರಬಂದಾಗ ಕಾಂಗ್ರೆಸ್ ಸೇರುವ ಮುನ್ನ ಅಖಿಲ ಭಾರತೀಯ ಪ್ರಗತಿಪರ ಜನತಾದಳ (ಎಬಿಪಿಜೆಡಿ) ಅನ್ನೋ ಒಂದು ಪ್ರಯೋಗ ಮಾಡಿದ್ದರು. ಅಧಿಕೃತವಾಗಿ ಆ ಪಕ್ಷವನ್ನು ಹುಟ್ಟುಹಾಕದಿದ್ದರು, ಆಗ ಎದುರಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈಸೂರಿನಲ್ಲಿ ಎಬಿಪಿಜೆಡಿಯ ಹುರಿಯಾಳುಗಳನ್ನು ಕಣಕ್ಕಿಳಿಸಿದ್ದರು. ಒಟ್ಟು 46 ಸ್ಥಾನಗಳಲ್ಲಿ ಕಾಂಗ್ರೆಸ್ 17 ಸ್ಥಾನ ಗಳಿಸಿದರೆ, ಎಬಿಪಿಜೆಡಿ ಅದಕ್ಕಿಂತಲೂ ಎರಡು ಕಡಿಮೆ, ಅಂದರೆ 15 ಸ್ಥಾನಗಳಲ್ಲಷ್ಟೇ ಗೆದ್ದಿತ್ತು. ಒಂದೇ ನೆಮ್ಮದಿಯ ಸಂಗತಿಯೆಂದರೆ, ತಾವು ಹೊರಬಂದಿದ್ದ ಜೆಡಿಎಸ್ ಸಾಮಥ್ರ್ಯವನ್ನು ಕೇವಲ 11ಕ್ಕೆ ಸೀಮಿತಗೊಳಿಸಿದ್ದರು. ಆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಜಿ.ಪಂ. ಚುಕ್ಕಾಣಿ ಹಿಡಿದಿದ್ದರೆ ಸಿದ್ರಾಮಯ್ಯನವರ ತೀರ್ಮಾನ ಏನಾಗುತ್ತಿತ್ತೋ ಗೊತ್ತಿಲ್ಲ, ಆದರೆ ಈ ಹಿಂದೆ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಹೈರಾಣಾದ ದಿಗ್ಗಜರುಗಳ ಪ್ರಯತ್ನಗಳನ್ನು ಆ ಫಲಿತಾಂಶ ಕಣ್ಮುಂದೆ ತಂದಿರಬಹುದು. ಅವರು ಸೋನಿಯಾ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಆಗಿನ್ನು, ತಾನು ಸಿಎಂ ಆಗಬೇಕೆಂಬ ಉತ್ಕಟ ಬಯಕೆ ಅವರ ಮನಸ್ಸಲ್ಲಿತ್ತು. ಆಗಲೇ ಅವರು ಹೊಸ ಪಕ್ಷ ಕಟ್ಟುವ ಉಸಾಬರಿಗೆ ಹೋಗದೆ ಕಾಂಗ್ರೆಸ್ ಸೇರಿದ್ದರು.

ದೇಶದ ಸದ್ಯದ ಪರಿಸ್ಥಿತಿ ಗಮನಿಸಿದರೆ, ಹೊಸ ಪಕ್ಷ ಹುಟ್ಟುವುದಿರಲಿ ಇರುವ ಪಕ್ಷಗಳೇ ತಮ್ಮ ಅಸ್ತಿತ್ವ ಉಳಿಸಿಕೊಂಡರೆ ಸಾಕೆನ್ನುವ ವಾತಾವರಣವಿದೆ. ಹೀಗೆ ಹೇಳಲು ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ನ ದುಸ್ಥಿತಿ ಖಂಡಿತ ಮಾನದಂಡವಲ್ಲ; ಯಾಕೆಂದರೆ ಅದು ಆ ಪಕ್ಷದ ಸ್ವಯಂಕೃತ ಅಪರಾಧ. ಆದರೆ ಪ್ರಜಾಪ್ರಭುತ್ವಕ್ಕೆ ಘಾತುಕವಾಗುವಂತೆ ಒಂದು ಪೊಲಿಟಿಕಲ್ ಪಾರ್ಟಿ ಏಕಪಕ್ಷೀಯವಾಗಿ ಬೆಳೆಯಬಹುದಾದ ಅಪಾಯಕಾರಿ ಮಟ್ಟವನ್ನೂ ಮೀರಿ ಬಿಜೆಪಿ ಉಲ್ಬಣಿಸಿರುವ ಕಾಲದಲ್ಲಿ ಅಧಿಕಾರ ದುರುಪಯೋಗ ಅನ್ನೋದು ದ್ವೇಷ ರಾಜಕಾರಣದ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಬಂಗಾಳದ ದೀದಿಯಂತಹ ದೀದಿಯೇ ಬಿಜೆಪಿಯ ಕುತಂತ್ರಗಳ ಮುಂದೆ ಹೈರಾಣಾಗುತ್ತಿದ್ದಾರೆ. ಚಿದಂಬರಂ, ಡೀಕೆ ಶಿವಕುಮಾರ್ ಥರದವರು ಜೈಲು ಪಾಲಾಗುತ್ತಿದ್ದಾರೆ. ಅಂತದ್ದರಲ್ಲಿ ಯಡ್ಯೂರಪ್ಪವರು ಮೋದಿ-ಶಾ ಜೋಡಿಯ ಇಡಿ, ಸಿಬಿಐ ಅಸ್ತ್ರಗಳ ಮುಂದೆ ಮಕ್ಕಳ ಭವಿಷ್ಯವನ್ನು ಬಲಿಕೊಟ್ಟು ಈ ಇಳಿವಯಸ್ಸಿನಲ್ಲಿ ಸೆಣೆಸುತ್ತಾರಾ?

ಹೆಚ್ಚೆಂದರೆ, ತಮ್ಮ ವಿರುದ್ಧ ತಿರುಗಿಬಿದ್ದಿರುವ ಸವಕಲು ಸೀನಿಯರ್‍ಗಳನ್ನು ತೆಪ್ಪಗಾಗಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ತರುವಷ್ಟರಮಟ್ಟಿಗೆ ಸಿದ್ದು `ಹೊಸಪಕ್ಷ’ ಎಂಬ ಅಸ್ತ್ರವನ್ನು ಬಳಸಬಹುದು. ಆದರೆ ಯಡಿಯೂರಪ್ಪನವರ ಮಟ್ಟಿಗೆ ಆ ಸಾಧ್ಯತೆಯೂ ಇಲ್ಲ. ಅವರಿಗೆ ಅನುಕೂಲವಾಗುವುದಕ್ಕಿಂತ ಅನಾನುಕೂಲ ಆಗುವುದೇ ಹೆಚ್ಚೆನ್ನಬಹುದು. ಯಾಕೆಂದ್ರೆ, ಸಿದ್ರಾಮಯ್ಯನವರ ಹೈಕಮಾಂಡ್ ಎಷ್ಟು ನಿತ್ರಾಣವಾಗಿದೆಯೋ ಯಡ್ಯೂರಪ್ಪನವರ ಹೈಕಮಾಂಡ್ ಅಷ್ಟೇ ಬಲಿಷ್ಠವಾಗಿದೆ. ಹಾಗಾಗಿ ಯಡ್ಯೂರಪ್ಪ `ಹೊಸಪಕ್ಷ’ ಆಪಾದನೆಯಿಂದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ, ಈಗಾಗಲೇ ಬಿ.ಎಲ್.ಸಂತೋಷ್ ಬೀಸಿ ಕೂತಿರುವ ಬಲೆಗೆ ಸುಲಭ ಬಲಿಪಶುವಾಗಿ ನರಳಾಡಬೇಕಾಗಬಹುದು. ಒಂದಂತೂ ಸತ್ಯ, ಕೆಸರುಗದ್ದೆಯಂತಾಗಿರುವ ಕರ್ನಾಟಕದ ರಾಜಕಾರಣದಲ್ಲಿ `ಹೊಸಪಕ್ಷದ ಉದಯ’ವೆಂಬ ಟಿಆರ್‍ಪಿ ಸರಕಿಗೆ ಕನ್ನಡದ ನ್ಯೂಸ್ ಚಾನೆಲ್‍ಗಳು ಕ್ಯಾಮೆರಾ ನೆಟ್ಟು ಕೂತಿರುವುದರ ಹಿಂದೆ ಸ್ಪಷ್ಟ ಲೆಕ್ಕಾಚಾರಗಳು ಇದ್ದಂತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...