Homeಕರ್ನಾಟಕಸೋದೆ ಸ್ವಾಮಿಯಿಂದ ಸಮೃದ್ಧ ಶಿರೂರು ಮಠದ ಲೂಟಿ!!

ಸೋದೆ ಸ್ವಾಮಿಯಿಂದ ಸಮೃದ್ಧ ಶಿರೂರು ಮಠದ ಲೂಟಿ!!

- Advertisement -
- Advertisement -

| ಶುದ್ಧೋದನ |

ಬೇಕಂತಲೇ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಿಸಲು ಪೇಜಾವರರ ತಂಡ ಹಿಂದೇಟು ಹಾಕುತ್ತ ದಿವಾಳಿ ಎದ್ದಿರುವ ಸೋದೆ ಮಠದ ಪೀಠಾಧಿಪತಿ ವಿಶ್ವ ವಲ್ಲಭನಿಗೆ ಲೂಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಶಿರೂರು ಮಠದ ಅನುಯಾಯಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ.

ಉಡುಪಿ ಅಷ್ಟ ಮಠದ ರೆಬೆಲ್-ರಂಗೀಲಾ ಸ್ವಾಮಿ ಲಕ್ಷ್ಮೀವರತೀರ್ಥ ಹೆಂಡ ಹೊಡೆಹೊಡೆದೇ ಸತ್ತುಹೋದರಾ ಅಥವಾ ಎಂಟು ಯತಿಗಳ ದ್ವೇಷಾಸೂಯೆಯ ಸಂಘರ್ಷದಿಂದ ವಿಷಪ್ರಾಶನವಾಗಿ ಜೀವತೆತ್ತರಾ ಪೇಜಾವರ ಸ್ವಾಮಿಯ ಮಹಿಮೆಯಿಂದ ಶಿರೂರು ಸ್ವಾಮಿಯ ಶಂಕಾಸ್ಪದ ಅವಸಾನದ ತನಿಖೆ ಅಡ್ಡದಾರಿ ಹಿಡಿದು ಮಾಧ್ವರ ಬೃಂದಾವನದಡಿ ಸಮಾಧಿಯಾಗಿ ಹೋಯಿತೆಂಬ ರೋಚಕ ಚರ್ಚೆ ಉಡುಪಿಯ ರಥಬೀದಿಯಲ್ಲಿ ದಿನಕ್ಕೊಂದು ಆಯಾಮ ಪಡೆಯುತ್ತಲೇ ಇದೆ!!

ಕೃಷ್ಣ ಮಠದ ಎಂಟು ಸಂತರ ನೂರೆಂಟು ಸಮೂನೆಯ ಲೌಕಿಕ-ಸಾಂಸಾರಿಕ ಕತೆ-ಉಪಕತೆಗಳು ಚಾಲ್ತಿಯಲ್ಲಿವೆ. ಇದರಲ್ಲಿ ಶಿರೂರು ಸ್ವಾಮಿಯದು ಮಾತ್ರ ದೊಡ್ಡಮಟ್ಟದ ಪ್ರಚಾರ ಪಡೆದುಕೊಂಡಿತ್ತು. ಇದಕ್ಕಾತನ ಭಂಡಾಟ ಮತ್ತು ಬಂಡುಕೋರ ಬುದ್ಧಿ ಕಾರಣವಾಗಿತ್ತು. ಪುತ್ತಿಗೆ ಮಠಾಧೀಶ ಒಬ್ಬನ ಬಿಟ್ಟು ಉಳಿದೆಲ್ಲರನ್ನು ಆತ ಎದುರು ಹಾಕಿಕೊಂಡಿದ್ದ. ಪೊಲಿಟಿಕಲ್ ಸ್ವಾಮಿ ಪೇಜಾವರರಿಗಂತೂ ತನ್ನ ಬಂಡವಾಳ ಬಯಲು ಮಾಡುವ ಶಿರೂರು ಸ್ವಾಮಿ ಮುಖ ಕಂಡರಾಗುತ್ತಿರಲಿಲ್ಲ. ಶಿರೂರು ಮಠದ ದ್ವಂದ್ವ ಮಠ-ಸೋದೆ ಮಠದ ವಿಶ್ವವಲ್ಲಭ ಸ್ವಾಮಿ ಲಕ್ಷ್ಮೀವರ ವಿರೋಧಿ ಗ್ಯಾಂಗಿನ ಮುಂದಾಳತ್ವ ವಹಿಸಿದ್ದ ಸೋದೆ-ಶಿರೂರು ಬೀದಿ ಕಚ್ಚಾಟ ಲೋಕ ಪ್ರಸಿದ್ಧ!

ಸೋದೆ ಮಠ ಬಂಟಕರ್ ಎಂಬಲ್ಲಿ ನಡೆಸುತ್ತಿರುವ ಪ್ಲಾಪ್ ಇಂಜಿನಿಯರಿಂಗ್ ಕಾಲೇಜು ಮತ್ತಿತರ ವ್ಯವಹಾರದಿಂದ ಕಡಿಮೆ ಎಂದರೂ ಐವತ್ತು ಕೋಟಿ ಹಾನಿಗೆ ಬಿದ್ದಿದೆ. ಹೀಗಾಗಿ ಸೋದೆ ಸ್ವಾಮಿ ವಿಶ್ವವಲ್ಲಭನ ಕಣ್ಣು ಶಿರೂರು ಮಠದ ಆಗರ್ಭ ಸಂಪತ್ತಿನ ಮೇಲೆ ಬಿದ್ದಿತ್ತು. ಹೇಗಾದರೂ ಮಾಡಿ ಲಕ್ಷ್ಮೀವರನ ಪಳಗಿಸುವ ಹಠಕ್ಕಾತ ಬಿದ್ದಿದ್ದ. ಇದಕ್ಕೆ ಪೇಜಾವರರಾದಿಯಾಗಿ ಉಳಿದ ಆರು ಯತಿಗಳ ಕುಮ್ಮಕ್ಕೂ ಇತ್ತು. ಶಿರೂರು ಸ್ವಾಮಿ ಸಾಯುವ ಎರಡು ದಿನ ಮೊದಲು ಸಂಚೊಂದು ನಡೆಯುತ್ತಿದೆಯೆಂದು ಪೊಲೀಸ್ ಠಾಣೆಗೆ ಖುದ್ದು ಹೋಗಿ ವಿಶ್ವವಲ್ಲಭನ ಮೇಲೆ ದೂರು ದಾಖಲಿಸಿ ಬಂದಿದ್ದ. ವಿಪರ್ಯಾಸ ಎಂದರೆ, ಇದೇ ವಿಶ್ವವಲ್ಲಭ ಈಗ ಶಿರೂರು ಮಠವನ್ನು ಅಕ್ರಮವಾಗಿ ಕಬ್ಜಾ ಮಾಡಿಕೊಂಡು ಭೋಗಿಸುತ್ತಿದ್ದಾನೆ.

ಲಕ್ಷ್ಮೀವರ ತೀರಿಕೊಂಡ ಒಂದೂವರೆ ತಿಂಗಳು ತನಿಖೆಯ ನೆಪದಲ್ಲಿ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿಯ ಪೊಲೀಸ್ ಪಡೆಯ ವಶದಲ್ಲಿತ್ತು. ಶಿರೂರು ಮಠ ಒಂದು ದಿನ ಏಕಾಏಕಿ ಎಸ್ಪಿ ಸಾಹೇಬರು ಕೋಟಿ-ಕೋಟಿ ಮೌಲ್ಯದ ನಗ-ನಗದು, ಕಟ್ಟಡ-ಕಾಂಪ್ಲೆಕ್ಸ್, ತೋಟ-ಸೈಟ್, ಪ್ರಾಚ್ಯ ವಸ್ತು (ದುಬಾರಿ ಪ್ರಾಚ್ಯವಸ್ತು ಸಂಗ್ರಹಿಸುವ ಹವ್ಯಾಸ ಶಿರೂರು ಸ್ವಾಮಿಗಿತ್ತು) ಇನ್ನಿತರ ಆಸ್ತಿ-ಪಾಸ್ತಿಯ ಶಿರೂರು ಮಠವನ್ನು ದ್ವಂದ್ವ ಮಠ (ಪರಸ್ಪರ ಹಕ್ಕುಬಾಧ್ಯತೆಗಳ ಎರಡು ಮಠಗಳು) ಎಂಬ “ಆಧಾರ”ದಲ್ಲಿ ಸೋದೆ ಮಠಕ್ಕೆ ಹಸ್ತಾಂತರಿಸಿ ಬಿಟ್ಟರು. ಇದು ಶುದ್ಧ ಕಾನೂನುಬಾಹಿರ. ಹೀಗೆ ಹಸ್ತಾಂತರ ಮಾಡುವ ಯಾವ ಆಧಿಕಾರವೂ ಪೊಲೀಸರಿಗಿಲ್ಲ. “ದ್ವಂದ್ವ ಮಠ” ಎಂಬ ಪದಪ್ರಯೋಗ ಮಾಧ್ವರ ಮಠಗಳ ಪ್ರಚೀನ ಸಂಪ್ರದಾಯದ ಪುಸ್ತಕಗಳಲ್ಲಾಗಲಿ, ನ್ಯಾಯಾಲಯದ ತೀರ್ಪಿನಲ್ಲಾಗಲಿ ಇಲ್ಲ. ಕೇವಲ ಉತ್ತರಾಧಿಕಾರಿ ನೇಮಿಸುವ ಹೊಣೆಗಾರಿಕೆಯಷ್ಟೇ ಉಳಿದ ಯತಿಗಳಿಗಿದೆ.

ಮಠವೊಂದರ ಸ್ವಾಮಿ ಗತಿಸಿದಾಗ ಆ ಮಠದ ಸ್ಥಿರ-ಚರ ಆಸ್ತಿ, ನಗ-ನಾಣ್ಯಗಳನ್ನೆಲ್ಲ ದಾಖಲೆ ಸಮೇತ ಮಹಜರು ಮಾಡಿ ಧಾರ್ಮಿಕ ದತ್ತಿ ಇಲಾಖೆ ವಶಕ್ಕೆ ಪಡೆಯಬೇಕು. ಇದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಆದೇಶದ ಬಳಿಕವೇ ಆಗಬೇಕು. ಅಂದರೆ ಮುಖ್ಯಕಾರ್ಯದರ್ಶಿ ಆ ಮಠದ ಉಸ್ತುವಾರಿ ವಹಿಸಿಕೊಳ್ಳಬೇಕು. ಆ ನಂತರ ಜಿಲ್ಲಾಡಳಿತ ಅಥವಾ ಧಾರ್ಮಿಕ ದತ್ತಿ ಇಲಾಖೆ ಮಠದ ಆಡಳಿತ ನಡೆಸಬೇಕು. ಉತ್ತರಾಧಿಕಾರಿ ನೇಮಕಾತಿಯ ತನಕ. 1954ರಲ್ಲಿ ಸರ್ವೋಚ್ಚ ನ್ಯಾಯಾಲಯ “ಲಕ್ಷ್ಮೀಂದ್ರ ತೀರ್ಥ” ಕೇಸ್‍ನಲ್ಲಿ ನೀಡಿರುವ ತೀರ್ಪಿನಲ್ಲಿ ಇದನ್ನೇ ದಪ್ಪ ಅಕ್ಷರದಲ್ಲಿ ದಾಖಲಿಸಿದೆ! ಇಂಥ ನ್ಯಾಯಬದ್ಧ ಕ್ರಮ ಯಾವುದೂ ಶಿರೂರು ಮಠದ ಆಡಳಿತ ಹಸ್ತಾಂತರದ ಹೊತ್ತಲ್ಲಿ ಸರ್ಕಾರದಿಂದ ಆಗಿಲ್ಲ. ಇದು ಪೇಜಾವರರ ಪವಾಡ!!

ಬೇಕಂತಲೇ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಿಸಲು ಪೇಜಾವರರ ತಂಡ ಹಿಂದೇಟು ಹಾಕುತ್ತ ದಿವಾಳಿ ಎದ್ದಿರುವ ಸೋದೆ ಮಠದ ಪೀಠಾಧಿಪತಿ ವಿಶ್ವ ವಲ್ಲಭನಿಗೆ ಲೂಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಶಿರೂರು ಮಠದ ಅನುಯಾಯಿಗಳು ಬೊಬ್ಬೆಹೊಡೆಯುತ್ತಿದ್ದಾರೆ. ಸೋದೆ ಮಠ ಉಸಿರಾಡುತ್ತಿರುವುದೇ ಶಿರೂರು ಮಠದ ಕಾಂಪ್ಲೆಕ್ಸ್‍ನಿಂದ ಬರುವ ಸುಮಾರು ಹದಿನೇಳೂವರೆ ಲಕ್ಷರೂ ಬಾಡಿಗೆಯಿಂದ. ವಿಶ್ವವಲ್ಲಭ ಮನಸೋ ಇಚ್ಛೆ ಶಿರೂರು ಮಠದ ಸಂಪತ್ತು ನುಂಗುತ್ತಿದ್ದಾನೆ. ಹಲವು ಸ್ವತ್ತುಗಳನ್ನು ಪರಭಾರೆ ಮಾಡಿ ಕಾಸು ಮಾಡಿದ್ದಾನೆ. ಸಾವಿರಾರು ಕೋಟಿ ಬೆಲೆಯ ಮಣಿಪಾಲದ ಕುಂಡೆಲ್ ಕಾಡು (ತೋಟ) ಮತ್ತು ಕಲ್ಸಂಕದ ಕನಕ ಮಾಲ್ ಮಾರಲು ಪ್ಲಾನ್ ಹಾಕುತ್ತಿದ್ದಾನೆ. ರತ್ನಕುಮಾರ್ ಎಂಬ ವಿಶ್ವವಲ್ಲಭ ಈತನ ಸಲಹೆ ಕೇಳಿಯೇ ಬರೋಬ್ಬರಿ 25 ಕೋಟಿ ಸಾಲದ ಶೂಲಕ್ಕೇರಿದ್ದಾನೆ. 1994-95ರಲ್ಲಿ ಉಡುಪಿಯಲ್ಲಾದ ಬಹುಕೋಟಿ ಭೂಹಗರಣದ ಕಿಂಗ್‍ಪಿನ್ ಈ ರತ್ನ. ಆಗ ಬಂಧಿಸಲ್ಪಟ್ಟಿದ್ದ ರತ್ನ ತೆರಿಗೆ ವಂಚನೆ ಕೇಸುಗಳೂ ಇವೆ.

ಈ ರತ್ನ ಸಲಹಿದ್ದೇ ಶಿರೂರು ಸ್ವಾಮಿ, ಶಿರೂರು ಮಠದ ವ್ಯವಹಾರದ ಅಂದರ್-ಬಾಹರ್ ಬಲ್ಲ ಈತ ಗುರು ದಿವಂಗತನಾಗುತ್ತಲೇ ವೈರಿ ಪಡೆಗೆ ಶರಣಾಗಿ ಆಡಳಿತಾಧಿಕಾರಿ ಆಗಿದ್ದಾನೆ. ಸೋದೆ ಮಠದ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದ್ದೇ ಈ ದೋಖಾವಾಲನ ಸಲಹೆ ಮೇರೆಗೆ! ಕರ್ನಾಟಕ ಬ್ಯಾಂಕ್ ಮತ್ತಿತರ ಸಹಕಾರಿ ಬ್ಯಾಂಕಿಂದ 25-30 ಕೋಟಿ ಸಾಲ ಈ ಕಾಲೇಜಿಗಾಗಿ ಎತ್ತಿರುವ ಸ್ವಾಮಿ ಈಗ ಹಾನಿ ತಾಳಲಾರದೆ ಒದ್ದಾಡುತ್ತಿದ್ದಾನೆ. ಕಾಲೇಜಿನ ಗುಣಮಟ್ಟ ಕೆಟ್ಟಿರುವುದರಿಂದ ಪ್ರವೇಶಾರ್ಥಿಗಳೂ ಕಡಿಮೆಯಾಗಿದ್ದಾರೆ. ಈಚೆಗೆ ಸಾಲ ವಸೂಲಿಗೆಂದು ಬಂದಿದ್ಧ ಬ್ಯಾಂಕಿನವರಿಗೆ ಸ್ವಾಮಿ ರೋಪು ಹಾಕಿ ಕಳಿಸಿದ್ದಾನೆ. ದುಬೈನಲ್ಲಿ ಹೆಲ್ತ್‍ಸೆಂಟರ್ ದಂಧೆ ನಡೆಸುವ ಉಡುಪಿ ಮೂಲದ ಮಲ್ಟಿಮಿಲೇನರ್ ಬಿ.ಆರ್.ಶೆಟ್ಟಿಗೆ ಕಾಲೇಜು ವಹಿಸಲು ಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಸಿಇಓ ರತ್ನ ಮತ್ತವನ ಬೆನ್ನಿಗಿರುವ ಲ್ಯಾಂಡ್ ಮಾಫಿಯಾ ಕಾಲೇಜನ್ನು ದುಗ್ಗಾಣಿ ಬೆಲೆಗೆ ಖರೀದಿಸಲು ಸ್ಕೆಚ್ ಹಾಕುತ್ತಿದೆ. ತನ್ನನ್ನು ಸಾಲದಿಂದ ಸಾಕು ಮಾಡಲು ಒಂದಿಷ್ಟು ಹಣ ಕೊಡುವಂತೆ ಪರ್ಯಾಯ ಪೀಠಸ್ಥ ಸ್ವಾಮಿ ಪಲಿಮಾರು ವಿದ್ಯಾಧೀಶಗೆ ಈಗ ವಿಶ್ವವಲ್ಲಭ ಗಂಟು ಬಿದ್ದಿದ್ದಾನೆ. “ಇಲ್ಲ ಮಾರಾಯಾ ನನ್ನಲ್ಲಿ ಹಣ ಇಲ್ಲ” ನಾನೇ ಸಾಲ ಮಾಡಿ ಪರ್ಯಾಯಕ್ಕೆ ಕುಂತಿದ್ದೇನೆ” ಎಂದು ಪಲಿಮಾರು ಸ್ವಾಮಿ ಹೇಳುತ್ತಿದ್ದಾನೆ. ಬಿ.ಆರ್.ಶೆಟ್ಟಿ ಬೇಡದ ಈ ತಗಡು ಕಾಲೇಜು ರತ್ನನ ಗ್ಯಾಂಗು ಕಬಳಿಸುವುದು ಖಾತ್ರಿ.

ಎರಡೂ ಕೈಯಿಂದ ಶಿರೂರು ಮಠದ ಆಸ್ತಿ ಮುಕ್ಕುತ್ತಿದ್ದರೂ ಸೋದಿ ಸ್ವಾಮಿಗೆ ಮಾನಸಿಕ ನೆಮ್ಮದಿಯೇ ಇಲ್ಲದಾಗಿದೆ. ಮೊದಲೇ ಒಂಥರಾ ವಿಕ್ಷಿಪ್ತ ಮನಸ್ಥಿತಿಯ ವಿಶ್ವವಲ್ಲಭ ಈಗಂತೂ ಮಾನಸಿಕ ಸಮಸ್ಯೆ-ಕಾಯಿಲೆಗೆ ಬಿದ್ದಿದ್ದಾನೆ. ಸಾಲ-ಸೂಲಗಳಿಂದ ಕಂಗೆಟ್ಟಿರುವ ವಿಶ್ವವಲ್ಲಭನಿಗೆ ಮನೋವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ. 2012-14ರ ತನ್ನ ಪರ್ಯಾಯ ಪರ್ವದಲ್ಲಿ ಪರೀಕ್ಷೆಯಲ್ಲಿ ಫೇಲಾದನೆಂಬ ಕಾರಣಕ್ಕೆ ಒಡಹುಟ್ಟಿದ ತಮ್ಮನಿಗೆ ಚೊಂಬಿನಿಂದ ಹೊಡೆದು ಕೊಂದೇ ಹಾಕಿದ್ದ ವಿಶ್ವವಲ್ಲಭ ಎಂಬ ಮಾತುಗಳಿವೆ! ಆದರೆ ರಾಜಕೀಯ ಸನ್ಯಾಸಿಯ ಆಶ್ರಯ ಬಲದಿಂದ ನಡೆಯಲೇ ಇಲ್ಲ. ಕಾನೂನಿನಂತೆ ಕಳಂಕಿತನೂ, ಮೋಸ-ವಂಚನೆಯಲ್ಲಿ ಪ್ರವೀಣನೂ ಆಗಿರುವ ರತ್ನಕುಮಾರ್‍ನನ್ನು ಶಿರೂರು ಮಠಕ್ಕೆ ಆಡಳಿತಾಧಿಕಾರಿ ನೇಮಿಸಿರುವ ವಿಶ್ವವಲ್ಲಭ ಹಗಲು ದರೋಡೆ ಮಾಡುತ್ತಿದ್ದಾನೆ.

ಪ್ರಜ್ಞಾಪೂರ್ವಕ ಕಾನೂನು ಉಲ್ಲಂಘನೆ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಕಡಗಣೆ ನಡೆದರೂ ಜಿಲ್ಲಾಡಳಿತ ತೆಪ್ಪಗಿರುವುದು ಅನೇಕ ಅನುಮಾನ ಹುಟ್ಟುಹಾಕಿದೆ. ರತ್ನಕುಮಾರ್ ಆಗರ್ಭ ಶ್ರೀಮಂತ ಶಿರೂರು ಮಠದ ಆಡಳಿತ ನಡೆಸುವುದೇ ಜಿಲ್ಲಾಡಳಿತಕ್ಕೆ ಇನ್ನೂ ಕಾಣಿಸಿಲ್ಲವಾ? ಈಗ ವಿಶ್ವವಲ್ಲಭ ಮತ್ತು ಪೇಜಾವರರ ಜಂಟೀ ಕಾರಸ್ಥಾನದಿಂದ ಮಾಧ್ವ ಬ್ರಾಹ್ಮಣ ಸಂಕುಲ ಒಡೆದುಹೋಗಿದೆ. ಕ್ಷೋಭೆ ಜೋರಾಗುತ್ತಿದೆ. ಶಿರೂರು ಶಿಷ್ಯ ವರ್ಗ ಬೀದಿಗಿಳಿವ ಮೊದಲೇ ಕರಾವಳಿಯವರೇ ಆದ ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಎಚ್ಚೆತ್ತುಕೊಳ್ಳುವರಾ? ಪೇಜಾವರ ಪದತಳದಲ್ಲಿ ಮಂತ್ರಿಗಿರಿ ಇಟ್ಟು ಪಾವನರಾಗುವರಾ?

ಸೋದೆಯೂ ಸಾಹಿತಿ ಆರ್ಯರ ಸಮಾಧಿಯೂ

ಅಹಂಕಾರಿ-ಹುಂಬುತನದ ಸೋದೆ ಸ್ವಾಮಿಗೆ ಸತ್ತುಹೋಗಿರುವ ಶಿರೂರು ಸ್ವಾಮಿಗಳ ಮೇಲೆ ಒಂಥರಾ ಸ್ಯಾಡಿಸ್ಟ್ ಸಿಟ್ಟು. ಡ್ರಾಮ್ ಸ್ವಾಮಿ ಲಕ್ಷ್ಮೀವರರ ಬೆನ್ನಿಗೆ ಬಿದ್ದಿದ್ದ ಸೋದೆ ಸ್ವಾಮಿ ಈಗ ಆತನ ಅಣ್ಣ ಆರ್ಯ ಆಚಾರ್ಯರ ಸಮಾಧಿಗೂ ಗಂಟು ಬಿದ್ದಿದ್ದಾನೆ. ಶಿರೂರು ಮಠದ 29ನೇ ಯತಿ ಲಕ್ಷ್ಮೀಮನೋಜ್ಞರು ಸಂನ್ಯಾಸತ್ವದ ಬೂಟಾಟಿಕೆ ವಿರೋಧಿಸಿ ಪೀಠತ್ಯಾಗ ಮಾಡಿದ್ದರು. ಆನಂತರ ಅವರು ಧಾರವಾಡ ಸೇರಿ “ಆರ್ಯ ಆಚಾರ್ಯ” ಎಂಬ ಕಾವ್ಯನಾಮದಿಂದ ಸಾಹಿತ್ಯಲೋಕದಲ್ಲಿ ಪ್ರಸಿದ್ಧರಾಗಿದ್ದರು. ಕೆಲವು ವರ್ಷಗಳ ಹಿಂದೆ ತೀರಿಕೊಂಡ ಅವರ ಸಮಾಧಿಯನ್ನು ಶಿರೂರು ಮೂಲಮಠದ ಹಿಂದಿನ ತೆಂಗಿನ ತೋಟದಲ್ಲಿ ಸ್ಥಾಪಿಸಲಾಗಿದೆ.

ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯದಲ್ಲಿ 45ಕ್ಕಿಂತ ಹೆಚ್ಚು ಕೃತಿ ರಚಿಸಿರುವ ಆರ್ಯ ನವ್ಯ ಚಿತ್ರಕಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಅಗ್ರಪಂಕ್ತಿಯಲ್ಲಿದ್ದರು. ಸೋದೆ ಸ್ವಾಮಿಗೆ ಈ ಅಣ್ಣ-ತಮ್ಮರ ಮೇಲೆ ಅದ್ಯಾವ ಪೂರ್ವಾಗ್ರಹವೋ ಏನೋ? ಅಷ್ಟ ಮಂಗಳ ಆರೋಢ ಪ್ರಶ್ನೆಯ ಭೋಂಗು ಬಿಡುತ್ತಾ ಆರ್ಯರ ಸಮಾಧಿ ಕಿತ್ತು ಹಾಕಲು ಜಿದ್ದಿಗಾತ ಬಿದ್ದಿದ್ದಾನೆ. ದಾವಣಗೆರೆಯಲ್ಲಿ ತುಲಾಭಾರ ಮಾಡಿಸಿಕೊಳ್ಳುವಾಗ ತಕ್ಕಡಿ ತಲೆ ಮೇಲೆ ಬಿದ್ದ ನಂತರ ಸೋದೆ ಸ್ವಾಮಿ ಹುಚ್ಚು ಹೆಚ್ಚಾಗಿದೆ ಎಂಬ ಮಾತು ಕಾವಿ ವಲಯದಲ್ಲಿ ಕೇಳಿ ಬರುತ್ತಿದೆ!! ಊರಿಗೆಲ್ಲಾ ಧರ್ಮಸೂಕ್ಷ್ಮ ಬೋಧಿಸುವ ಉಡುಪಿ ಮಠದ ಯಜಮಾನ ಪೇಜಾವರರಿಗೆ ಮಾತ್ರ ಇದ್ಯಾವುದೂ ಅರ್ಥವಾಗುತ್ತಿಲ್ಲ, ಪಾಪ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸೋದೆ ಮಠದ ಸ್ವಾಮೀಜಿಗಳ ಬಗ್ಗೆ ಇಂಥ ಅವಹೇಳನಕಾರಿ ಲೇಖನ ಬರೆಯುವ ಮುಂಚೆ ನೀವು ಗುರುಗಳ್ಳನ್ನು ಸಂದರ್ಶನಮಾಡಿ ಸರಿಯಾದ ಮಾಹಿತಿಯನ್ನು ಪಡೆಯಬೇಕಿತ್ತು. ನಿಮ್ಮ ಈ ಬೇಜವಾಬ್ದಾರಿಯ ಲೇಖನವು ಸೋದೆ ಮಠದ ಕೊಟ್ಟಿಯಂತರ ಶಿಷ್ಯ ಸಮುದಾಯದವರಿಗೆ ನೋವು ಉಂಟು ಮಾಡಿದೆ.

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...