ನಿನ್ನೆ ಸಂಜೆ ಬಿಡುಗಡೆಯಾಗಿರುವ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಎನ್.ಡಿ.ಎ ಮತ್ತೆ ಬಹುಮತದ ಮೂಲಕ ಅಧಿಕಾರಕ್ಕೆ ಮರಳುತ್ತದೆ ಎಂದು ಹೇಳಿವೆ. ಇದಕ್ಕೆ ವಿವಿಧ ರಾಜಕೀಯ ಮುಖಂಡರು ಏನು ಹೇಳಿದ್ದಾರೆ ಎಂಬುದನ್ನು ಇಲ್ಲಿ ನೀಡಿದ್ದೇವೆ.
ಜನರ ನಾಡಿ ಮಿಡಿತವನ್ನು ಅರಿಯುವಲ್ಲಿ ಎಕ್ಸಿಟ್ ಪೋಲ್ಗಳು ವಿಫಲವಾಗಿವೆ. ಗ್ರೌಂಡ್ ರಿಯಾಲಿಟಿಯಿಂದ ದೂರವಾದ ತಪ್ಪು ಸಮೀಕ್ಷೆಯೆಂಬುದನ್ನು ಹಲವು ಸಂಗತಿಗಳು ತೋರಿಸುತ್ತಿವೆ. ನಿಸ್ಸಂದೇಹವಾಗಿ ಆಂದ್ರದಲ್ಲಿ ಟಿಡಿಪಿ ಈ ಬಾರಿ ಸರ್ಕಾರ ರಚಿಸಲಿದೆ. ಹಾಗೆಯೇ ನಮಗೆ ಕೇಂದ್ರದಲ್ಲಿ ಬಿಜೆಪಿಯೇತರ ಪಕ್ಷಗಳು ಸೇರಿ, ಬಿಜೆಪಿಯೇತರ ಸರ್ಕಾರ ರಚಿಸುವ ವಿಶ್ವಾಸವಿದೆ. – ಚಂದ್ರಬಾಬು ನಾಯ್ಡು, ಆಂಧ್ರ ಮುಖ್ಯ ಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ.
ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ತಪ್ಪೆಂದು ನಾನು ನಂಬುತ್ತೇನೆ. ಕಳೆದ ವಾರ ಆಸ್ಟ್ರೇಲಿಯಾದಲ್ಲಿ 56 ವಿಭಿನ್ನ ರೀತಿಯ ಎಕ್ಸಿಟ್ ಪೋಲ್ಗಳು ತಪ್ಪಾಗಿವೆ. ಭಾರತದ ಮತದಾರರು ಈ ಸರ್ಕಾರದ ಭಯದಿಂದಾಗಿ ಚುನಾವಣೋತ್ತರ ಸಮೀಕ್ಷೆಗಳಿಗೆ ಸತ್ಯ ಹೇಳಿಲ್ಲದಿರಬಹುದು. ಮೇ 23ರ ಫಲಿತಾಂಶದವರೆಗೂ ಕಾಯೋಣ. – ಶಶಿ ತರೂರ್, ಕಾಂಗ್ರೆಸ್ ಮುಖಂಡ
ಎಕ್ಸಿಟ್ ಪೋಲ್ ಗಾಸಿಪ್ ನಲ್ಲಿ ನನಗೆ ನಂಬಿಕೆಯಿಲ್ಲ. ಸಾವಿರಾರು ಇವಿಎಂಗಳನ್ನು ತಿರುಚುವ ಅಥವಾ ಸ್ಥಳಾಂತರಿಸುವ ಹುನ್ನಾರ ನಡೆದಿದೆ. ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ, ಗಟ್ಟಿಯಾಗಿ ಮತ್ತು ಧೃಢವಾಗಿ ಈ ಕದನದಲ್ಲಿ ಹೋರಾಡಬೇಕೆಂದು ಮನವಿ ಮಾಡುತ್ತೇನೆ – ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್
ಅರವಿಂದ್ ಕೇಜ್ರಿವಾಲ್ರವರು ಮಮತಾ ಬ್ಯಾನರ್ಜಿಯವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.
ಪ್ರತಿಯೊಂದು ಎಕ್ಸಿಟ್ ಪೋಲ್ ಕೂಡ ತಪ್ಪಾಗಿರುವುದಿಲ್ಲ. ಇದು ಟಿವಿಯನ್ನು ಬಂದ್ ಮಾಡುವ, ಸಾಮಾಜಿಕ ಜಾಲತಾಣಗಳಿಂದ ಲಾಗೌಟ್ ಮಾಡಿಕೊಂಡು ಮೇ 23ಕ್ಕೆ ಭೂಮಿ ತನ್ನ ಅಕ್ಷದ ಮೇಲೆ ತಿರುಗುತ್ತಾ ಎಂದು ಕಾಯುವುದು ಒಳ್ಳೆಯದು. – ಒಮರ್ ಅಬ್ದುಲ್ಲ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ.
ನಾನು ಈ ಮೊದಲೇ 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದಾಗ ಯಾರು ನಂಬಿರಲಿಲ್ಲ. ಈಗ ನೋಡಿ ಮತಗಟ್ಟೆ ಸಮೀಕ್ಷೆಗಳು ಅದನ್ನೇ ಹೇಳಿವೆ. ಈಗಾದರೂ ಎಲ್ಲರಿಗೂ ಮನವರಿಕೆ ಆಗಿರಬಹುದು. – ಯಡಿಯೂರಪ್ಪ, ಬಿಜೆಪಿ ರಾಜ್ಯಧ್ಯಕ್ಷರು, ಕರ್ನಾಟಕ.
ಮತಗಟ್ಟೆ ಸಮೀಕ್ಷೆಗಳು ಸಂಪೂರ್ಣ ಸುಳ್ಳು, ಹಾಗೊಂದು ವೇಳೆ ಬಿಜೆಪಿ ಗೆದ್ದಿದ್ದೆ ಆದರೆ ಅದು ಇವಿಎಂ ಮೇಲೆ ಅನುಮಾನ ಹುಟ್ಟಿಸುವಂತೆ ಮಾಡುತ್ತದೆ.
– ಜಿ ಪರಮೇಶ್ವರ್, ಉಪಮುಖ್ಯಮಂತ್ರಿ, ಹಾಗೂ ಕಾಂಗ್ರೆಸ್ ಮುಖಂಡರು, ಕರ್ನಾಟಕ
ಎಕ್ಸಿಟ್ ಪೋಲ್ ನೋಡಿದರೆ ಕ್ಷಣಿಕ ಸುಖ ಅನ್ನಿಸುತ್ತದೆ. ಶಾಶ್ವತ ಸಂತೋಷಕ್ಕೆ ಮುನ್ನ ಬಂದು, ನಂತರ ಮಾಯವಾಗುತ್ತದೆ. ನಮಗೆ ಶಾಶ್ವತ ಸುಖ ಮುಖ್ಯ – ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಧ್ಯಕ್ಷರು, ಕರ್ನಾಟಕ.
ಇದನ್ನು ಓದಿ: ವಿವಿಧ ಸಮೀಕ್ಷಾ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಗಳು ಎನ್ ಡಿ ಎ ಗೆ ಸ್ಪಷ್ಟ ಬಹುಮತ ಎಂದು ಹೇಳುತ್ತಿವೆ