Homeಮುಖಪುಟಎಕ್ಸಿಟ್ ಪೋಲ್ಸ್ ಹೊರ ಹಾಕಿದ ‘ಸರ್‍ಪ್ರೈಸ್’ಗಳು... ಈ ಪೋಲ್ಸ್ ಬಗ್ಗೆ ಅನುಮಾನ ಏಕೆಂದರೆ.....

ಎಕ್ಸಿಟ್ ಪೋಲ್ಸ್ ಹೊರ ಹಾಕಿದ ‘ಸರ್‍ಪ್ರೈಸ್’ಗಳು… ಈ ಪೋಲ್ಸ್ ಬಗ್ಗೆ ಅನುಮಾನ ಏಕೆಂದರೆ…..

ಆದರೆ, 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಈ ಸಂಸ್ಥೆಗಳು ಬಿಜೆಪಿ ಪರವಾಗಿಯೇ ಸಮೀಕ್ಷೆ ‘ರೂಪಿಸಿದ್ದವು’ ಮತ್ತು ಇದೇ ಚಾನೆಲ್‍ಗಳು ತುತ್ತೂರಿ ಊದಿದ್ದವು. ‘ಗ್ರೇಟ್ ಲೀಡರ್’ ವಾಜಪೇಯಿ 2004ರಲ್ಲಿ ಮಕಾಡೆ ಮಲಗಿದರು.

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಎಕ್ಸಿಟ್ ಪೋಲ್ಸ್ ಮತ್ತೆ ಮೋದಿಯೇ ಪ್ರಧಾನಿ ಎಂಬರ್ಥದಲ್ಲಿ ಬಂದಿವೆ. ಆದರೆ, ಇವು ಹಲವು ‘ಸರ್‍ಪ್ರೈಸ್’ ಅಂಶಗಳನ್ನೂ ನಮ್ಮ ಮುಂದಿಟ್ಟಿವೆ. 2014ರಲ್ಲಿ ಮೋದಿ ಹವಾ ಇದ್ದಾಗ ಈ ಎಲ್ಲ ಪೋಲ್ಸ್ ಹೆಚ್ಚೂ-ಕಡಿಮೆ ಸತ್ಯವನ್ನೇ ನುಡಿದಿದ್ದವು. ಆದರೆ 2004, 2009 ರಲ್ಲಿ ಇವು ನೀಡಿದ ಫಲಿತಾಂಶ ಉಲ್ಟಾಪಪ್ಟಾ ಆಗಿತ್ತು. ಈ ಸಲವೂ ಹಾಗೇಕೆ ಆಗಬಾರದು ಎಂಬ ಪ್ರಶ್ನೆ ಇಟ್ಟುಕೊಂಡೇ, ಈ ಸಲದ ಪೋಲ್ಸ್‍ಗಳ ಕುರಿತು ಒಂದು ಬರಹ ಇಲ್ಲಿದೆ…

ಬಿಜೆಪಿ ಪರವಾದ ಒಂದು ಸಣ್ಣ ಸುದ್ದಿ ಬಂದರೂ ಪಟಾಕಿ ಹೊಡೆಯುವ ‘ಮೋದಿ ಭಕ್ತರೇ’ ಎಕ್ಸಿಟ್ ಪೋಲ್ ಬಂದ ಮೇಲೂ ಅಂತಹ ಉತ್ಸಾಹ ತೋರಿಲ್ಲ! ಯಡಿಯೂರಪ್ಪ ಬಿಟ್ಟರೆ ಉಳಿದವರಿಗೆ ಈ ಎಕ್ಸಿಟ್ ಪೋಲ್ ಉತ್ಸಾಹವನ್ನೇನೂ ಕೊಟ್ಟಂತಿಲ್ಲವಲ್ಲ? ಆದರೆ, ಬಿಜೆಪಿಯೇ ಅಧಿಕಾರದಲ್ಲಿ ಇರಲಿ ಎಂದು ಬಯಸುವ ಶೇರು ಮಾರುಕಟ್ಟೆಯಲ್ಲಿ ಈ ಸಂಭ್ರಮ ಕಂಡಿದೆ.

ವಿಷಯ ಏನೆಂದರೆ, ಈ ಎಕ್ಸಿಟ್ ಪೋಲ್‍ಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಆದರೆ, ‘ಬುದ್ಧಿವಂತರು’ ನಡೆಸುವ ಸ್ಟಾಕ್ ಮಾರ್ಕೆಟ್ ಹುಚ್ಚೆದ್ದು ಕುಣಿದಿದೆ. ಅದಕ್ಕೂ ಗೊತ್ತು ಈ ಎಕ್ಸಿಟ್ ಪೋಲ್ ನಮಗಾಗಿಯೇ ಮಾಡಿದ್ದು ಎಂದು… ಮೂರು-ನಾಲ್ಕು ದಿನಗಳ ವಹಿವಾಟು ಎಂದರೆ ಅದು 20 ಲಕ್ಷ ಕೋಟಿಗಳ ದಂಧೆ!ಇದನ್ನೆಲ್ಲ ಬಿಡೋಣ… ಈಗ ನೇರವಾಗಿ ಎಕ್ಸಿಟ್ ಪೋಲ್ ಹೇಳಿದ್ದು ಸತ್ಯಕ್ಕಿಂತ ಹೇಗೆ ದೂರ ಎಂದು ನೋಡೋಣ….

ರಾಜ್ಯ ಬಿಜೆಪಿ 18-24: ಎಲ್ಲಿಂದ ಹೆಚ್ಚುವರಿ ಗಳಿಕೆ?

ಕರ್ನಾಟಕದಲ್ಲಿ 28ರಲ್ಲಿ ಬಿಜೆಪಿ 18-24ರವರೆಗೂ ಸೀಟು ಗೆಲ್ಲುವುದಂತೆ! ಇದು ಬಿಜೆಪಿಯ ಕಾರ್ಯಕರ್ತರಿಗೇ ‘ಭಯ’ ಹುಟ್ಟಿಸುವ ನ್ಯೂಸ್! ಎಲ್ಲಿಂದ ಅವರು ಗೆಲ್ಲುತ್ತಾರೆ? ಕಳೆದ ಸಲ 17 ಗೆದ್ದಿದ್ದರು. ಈಗ ಅದಕ್ಕಿಂತ ಹೆಚ್ಚುವರಿಯಾಗಿ ಗೆಲ್ಲಬಹುದಾದ 3-5 ಕ್ಷೇತ್ರ ಇವೆಯಾ? ಇದುವರೆಗಿನ ಅಂದಾಜಿನಂತೆ ಕೆಲವು ಬಿಜೆಪಿ ಎಂಪಿಗಳು ಸೋಲಬಹುದು. ಈ ಸೋತ ಕ್ಷೇತ್ರಗಳನ್ನು ಕವರ್ ಮಾಡಿಕೊಂಡು 20-23 ತಲುಪಲು ಬಿಜೆಪಿ ಹೊಸ ಕ್ಷೇತ್ರಗಳನ್ನು ಗೆಲ್ಲಬೇಕಲ್ಲ? ಇನ್ನೊಂದು ವಿಷಯ, ಸಮೀಕ್ಷೆ ಮಾಡಿದ ಸಂಸ್ಥೆ ಮತ್ತು ಅದರ ಸಹಭಾಗಿಯಾಗಿ ಅದನ್ನು ಪ್ರಕಟಿಸಿದ ಚಾನೆಲ್‍ಗಳ ಪ್ರಕಾರ, 2014ರ ಲೆಕ್ಕದಲ್ಲಿ ಇಲ್ಲಿ 17 ಬಿಜೆಪಿ ಸಂಸದರು ಇದ್ದಾರೆ! ಬಳ್ಳಾರಿಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋತ ಮೇಲೆ ಬಿಜೆಪಿ ಸಂಸದರ ಸಂಖ್ಯೆ 16… ಈ ಪ್ರಾಥಮಿಕ ಅಂಕಿಸಂಖ್ಯೆಯ ತಿಳುವಳಿಕೆ ಇಲ್ಲದವರು ಅದೆಂತಹಾ ಸಮೀಕ್ಷೆ ಮಾಡಿದರು… ಅದನ್ನು ಫ್ಯಾಕ್ತುವಲ್ ಎರರ್ ಅಂದುಕೊಳ್ಳಲೂ ಆಗಲ್ಲ. ಏಕೆಂದರೆ, ಇಲ್ಲಿ ಮೈತ್ರಿಯ ಪರಿಣಾಮವಾಗಿಯೇ ಬಳ್ಳಾರಿಯಲ್ಲಿ ದೊಡ್ಡ ಲೀಡ್ ಬಂದಿದ್ದು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಮತ್ತು ನಿತ್ಯ ಸಿಎಂ ಆಕಾಂಕ್ಷಿ ಯಡಿಯೂರಪ್ಪನವರ ಸ್ವಂತ ಕ್ಷೇತ್ರದಲ್ಲಿ ಅವರ ಮಗ ಜೆಡಿಎಸ್ ವಿರುದ್ಧ ಕೇವಲ 50 ಸಾವಿರ ಓಟುಗಳಿಂದ ಗೆದ್ದರಲ್ಲವೇ? ಅದು ಮೈತ್ರಿಯ ಎಫೆಕ್ಟ್ ಅಲ್ಲವೇ?

ಎಕ್ಸಿಟ್ ಪೋಲ್ಸ್ ಪ್ರಕಾರ, ಸದ್ಯ ಇಲ್ಲಿ ಮೈತ್ರಿಯ ಪ್ರಭಾವ ಇಲ್ಲ, ಓಕೆ ಎನ್ನೋಣ… ಬಿಜೆಪಿಗೆ ಹೆಚ್ಚುವರಿ ಸೀಟು ಗೆಲ್ಲಲು ಕಾರಣವಾದ ಅಂಶವೂ ನಮಗೆ ಕಾಣುತ್ತಿಲ್ಲವಲ್ಲ?

ಆಶ್ಚರ್ಯಗಳು, ಪ್ರಶ್ನೆಗಳು, ಸಂಶಯಗಳು
ಹೀಗಾಗಿ, ಈಗ ಪ್ರಕಟವಾಗಿರುವ ಎಕ್ಸಿಟ್ ಪೋಲ್ಸ್‍ಗಳ ಮೆಥಡಾಲಜಿಯ ಬಗ್ಗೆಯೇ ಒಂದು ಸಂಶಯ ಶುರುವಾಗಿದೆ… ಹಾಗಂತ, ಇದೇನೂ ಮೊದಲಲ್ಲ, ಹಲವಾರು ರಾಜ್ಯ ವಿಧಾನಸಭೆಗಳ ಚುನಾವಣೆಗಳ ಸಂದರ್ಭದಲ್ಲೂ ಈ ಸಮೀಕ್ಷೆಗಳು ನೆಗೆದು ಬಿದ್ದಿವೆ. ಹಾಗಿದ್ದರೂ, ಇವು ಮತ್ತೆ ಮತ್ತೆ ‘ತಾವು ಅಕ್ಯುರೇಟ್’ ಎಂದು ನಮ್ಮ ಮುಂದೆ ಬರುತ್ತಿವೆ. ಅಷ್ಟಕ್ಕೂ, ಯಾರಿದು ಸಿ-ವೋಟರ್? ಯಾವುದಿದು ನೆಲ್ಸನ್? ಟುಡೆಸ್ ಚಾಣಕ್ಯದ ಹಿನ್ನೆಲೆಯೇನು? ಈ ಕುರಿತಾಗಿ ಯಾವುದೂ ಪಾರದರ್ಶಕವಾಗೇ ಇಲ್ಲ. ಈ ಎಲ್ಲ ಬಿಸಿನೆಸ್ ಕಂಪನಿಗಳು (ದಂಧೆಕೋರರು) ನಮ್ಮ ಮುಂದೆ ಹಾಜರಾಗುವುದು ಚಾನೆಲ್‍ಗಳ ಮೂಲಕ! ಈ ಚಾನೆಲ್‍ಗಳೇ ಈಗ ಎಕ್ಸಿಟ್ ಪೋಲ್ಸ್ ದಂಧೆಯ ಸಾರ್ವಜನಿಕ ಮುಖಗಳು….

ದಲ್ಲಾಳಿಗಳು ಅನ್ನಬಾರದೇಕೆ? ನಿನ್ನೆ ಎಕ್ಸಿಟ್ ಪೋಲ್ ಪ್ರಕಟವಾದ ನಂತರ ಸ್ಟಾಕ್ ಮಾರ್ಕೆಟಿನಲ್ಲಿ ಸಂಭ್ರಮ! ಅದಾನಿ ಕಂಪನಿಗಳ ಶೇರು ವಹಿವಾಟಿನಲ್ಲಿ ಶೇ.13ರಷ್ಟು ಹೆಚ್ಚಳ!

ಎನ್‍ಡಿಎಗೆ ಅತಿ ಹೆಚ್ಚು ಸೀಟು 345 ಇದ್ದರೆ, ಉಳಿದ ಬಹುತೇಕ ಸಂಸ್ಥೆಗಳು 300ಕ್ಕೂ ಹೆಚ್ಚು ನೀಡಿವೆ. ಎನ್‍ಡಿಎಗೆ 240-260 ರ ಸಂಖ್ಯೆಯನ್ನು ಎರಡೇ ಎರಡು ಕಂಪನಿ ನೀಡಿವೆ… ಸರಾಸರಿ 300 ದಾಟದೇ ಇರುತ್ತಾ?
ಇವುಗಳಲ್ಲಿ ನಿರ್ದಿಷ್ಟ ಪಕ್ಷದ ಪರವಾಗಿ ಸಮೀಕ್ಷೆಯನ್ನು ರೂಪಿಸಿಕೊಡುವುದಕ್ಕಾಗಿ ಸಿಕ್ಕಿ ಹಾಕಿಕೊಂಡಿದ್ದ ಸಿ-ವೋಟರ್ ಇದೆ.

ಪುಣ್ಯಕ್ಕೆ ‘ಪ್ರಜಾವಾಣಿ’ಯಾದರೂ, ಸಮೀಕ್ಷೆಗಳು ನಿಜವಾದ ನಿದರ್ಶನಗಳು ಕಡಿಮೆ’ ಎಂದು ಮುಖಪುಟದ ಟೈಟಲ್ಲಿನಲ್ಲಿ ಹಾಕಿದೆ…

Statistics ಎಂಬ ಆಟ!
Probability ಅನ್ನೋ ಜೂಜು!

ಈಗ ಮತ್ತೆ ನಿನ್ನೆಯ ಎಕ್ಸಿಟ್ ಪೋಲ್‍ಗೆ ಬರೋಣ. ಅವು ಹತ್ತಿರಕ್ಕೆ ಸಮೀಪ ಇರಬಹುದು, ಸರಿ ಒಪ್ಪೋಣ. ಆದರೆ ಅದನ್ನೆಲ್ಲ ವೈಜ್ಞಾನಿಕ, ಗಣಿತಶಾಸ್ತ್ರೀಯ ಮಾನದಂಡ, ಅಲ್ಗೋರಿಥಮ್‍ಗಳ ನೆರವಿನಿಂದ ಮಾಡಲಾಗಿದೆ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಈ ಎಕ್ಸಿಟ್ ಪೋಲ್‍ಗಳಿಗೆ ಮಹಾ ಯಶಸ್ಸು ಅಂತಾ ಸಿಕ್ಕಿದ್ದರೆ, ಅದು 2014ರ ಚುನಾವಣೆಯಲ್ಲಿ… ನಿಖರ ಸಂಖ್ಯೆ ಹೇಳಲಾಗದಿದ್ದರೂ, ಈ ಸಲ ಮೋದಿ ಸರ್ಕಾರವೇ ಅಂತಾ ಜನರೇ ಹೇಳುತ್ತಿದ್ದರು. (ಹಾಗೆ ಅವರನ್ನು ಮಾಧ್ಯಮಗಳು, ಸುಶಿಕ್ಷಿತರು ನಂಬಿಸಿದ್ದರು!)… ಜನರು ಹೇಳಿದ್ದನ್ನೇ ಈ ಪೋಲ್‍ಗಳು ಹೇಳಿದ್ದವು.

ಆದರೆ, 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಈ ಸಂಸ್ಥೆಗಳು ಬಿಜೆಪಿ ಪರವಾಗಿಯೇ ಸಮೀಕ್ಷೆ ‘ರೂಪಿಸಿದ್ದವು’ ಮತ್ತು ಇದೇ ಚಾನೆಲ್‍ಗಳು ತುತ್ತೂರಿ ಊದಿದ್ದವು. ‘ಗ್ರೇಟ್ ಲೀಡರ್’ ವಾಜಪೇಯಿ 2004ರಲ್ಲಿ ಮಕಾಡೆ ಮಲಗಿದರು. 2009ರಲ್ಲಿ ಮನಮೋಹನಸಿಂಗ್‍ರನ್ನು ಜರಿದು, ಅವಮಾನ ಮಾಡಿದ ಮೇಲೂ, ಈ ಸಲ ಎನ್‍ಡಿಎ ಎಂದು ಹೇಳಿದ್ದ ಸಮೀಕ್ಷೆಗಳು ಬಕ್ಕಬರಲು ಮಲಗಿದ್ದವು!
ಈ ದೇಶದಲ್ಲಿ ಈಗ ಸಮೀಕ್ಷೆಯೂ ಒಂದು ದಂಧೆಯಾಗಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದ್ವೇಷ’ ಬಿತ್ತುವ ಮೂರನೇ ಅನಿಮೇಟೆಡ್ ವೀಡಿಯೊವನ್ನು ಹಂಚಿಕೊಂಡ ಬಿಜೆಪಿ: ಮೌನವಹಿಸಿರುವ ಚು. ಆಯೋಗ

0
ಲೋಕಸಭೆಯ ಹೊಸ್ತಿಲಲ್ಲಿ ಬಿಜೆಪಿ ಮೀಸಲಾತಿ ಬಗ್ಗೆ ಮುಸ್ಲಿಮರು ಮತ್ತು ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡು ದ್ವೇಷ ಬಿತ್ತುವ ಮೂರನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಚು.ಅಯೋಗ ಮಾತ್ರ  ಮೌನವಾಗಿರುವುದು ಕಂಡು ಬಂದಿದೆ. ಕರ್ನಾಟಕ ಬಿಜೆಪಿ, ಮೀಸಲಾತಿ...