ಕಾಂಗ್ರೆಸ್ಸಿನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಲಯವೂ ತಿರಸ್ಕರಿಸಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹರ್ ಅವರು, ಡಿ.ಕೆ ಶಿವಕುಮಾರ್ ಪರ ವಾದ ಮತ್ತು ಪ್ರತಿವಾದ ಆಲಿಸಿದರು. ಬಳಿಕ ಯಾವುದೇ ಕಾರಣಕ್ಕೂ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶ ಹೊರಡಿಸುವ ಮೂಲಕ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣವೂ ತನಿಖಾ ಹಂತದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ 317 ಬ್ಯಾಂಕ್ ಖಾತೆ ಮತ್ತು ಬೇನಾಮಿ ಆಸ್ತಿ ಬಗ್ಗೆಯೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಾಕ್ಷಿ ತೋರಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ಪರಿಶೀಲನೆಯೂ ನಡೆಯುತ್ತಿದೆ. ಡಿಕೆಶಿ ಅಕ್ರಮ ಹಣ ಮತ್ತು ಬೇನಾಮಿ ಆಸ್ತಿ ಸತ್ಯಾಸತ್ಯತೆ ಬಯಲಿಗೆಳುವ ಮಹತ್ವದ ಘಟ್ಟವಾಗಿದೆ. ಇದೇ ಸಂದರ್ಭದಲ್ಲಿ ಜಾಮೀನು ನೀಡಿದರೆ, ಪ್ರಕರಣದ ಸಾಕ್ಷಿಗಳ ಮೇಲೆ ಭಾರೀ ಪರಿಣಾಮ ಬೀರಬಹುದು. ಹಾಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅಜಯ್ ಕುಮಾರ್ ಕುಹರ್ ಖಡಕ್ಕಾಗಿ ಹೇಳಿದ್ದಾರೆ.
ಇನ್ನು ಡಿ.ಕೆ ಶಿವಕುಮಾರ್ ಓರ್ವ ಪ್ರಭಾವಿ ರಾಜಕಾರಣಿ. ಪ್ರಕರಣದ ದಾಖಲೆಗಳನ್ನು ನಾಶ ಮಾಡಬಹುದು ಎಂಬ ವಾದವನ್ನು ನಾವು ತಳ್ಳಿ ಹಾಕಲಾಗುವುದಿಲ್ಲ. ಈ ಪ್ರಕರಣದ ತಾರ್ಕಿಕ ಅಂತ್ಯಕ್ಕಾಗಿ ಇಡಿ ಸಂಸ್ಥೆಯೂ ಸ್ವಂತಂತ್ರವಾಗಿ ತನಿಖೆ ನಡೆಸಬೇಕಿದೆ. ತನಿಖೆಗೆ ಆರೋಪಿ ಸಹಕರಿಸಬೇಕಿದೆ. ಈ ಮುನ್ನವೇ ನಾವು ಡಿಕೆಶಿಗೆ ಜಾಮೀನು ನೀಡಿದರೆ, ತನಿಖೆಗೆ ಅಡ್ಡಿಯಾಗಲಿದೆ. ಆದ್ದರಿಂದ ಜಾಮೀನು ಅರ್ಜಿ ನಿರಾಕರಿಸಿದ್ದೇವೆ ಎಂದು ನ್ಯಾಯಮೂರ್ತಿ ನೀಡಿದ ತೀರ್ಪಿನ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡರೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊರೆದೊಯ್ಯಬಹುದು. ಇದಕ್ಕೆ ಇಡಿ ಅಧಿಕಾರಿಗಳು ಸಂಪೂರ್ಣವಾಗಿ ಸಹಕರಿಸುವಂತೆ ಆದೇಶಿಸಿದ್ದೇವೆ. ಅಲ್ಲದೇ ಇವರ ಆರೋಗ್ಯದ ಬಗ್ಗೆ ಗಮನಹರಿಸುವಂತೆ ಜೈಲಿನ ಅಧಿಕಾರಿಗಳು ಸೂಚಿಸಿದ್ದೇವೆ ಎಂದು ಸಿಬಿಐ ವಿಶೇಷ ನ್ಯಾಯಲಯ ಡಿಕೆಶಿ ಪರ ವಕೀಲರಿಗೆ ಹೇಳಿದೆ.
ಸಿಬಿಐ ವಿಶೇಷ ನ್ಯಾಯಲಯ ಜಾಮೀನು ನಿರಾಕರಣೆ ಮಾಡಿದ ಕಾರಣ ಮತ್ತೆ ಡಿಕೆಶಿಗೆ ಮುಂದಿನ ಅಕ್ಟೋಬರ್ 1ರವರೆಗೂ ತಿಹಾರ್ ಜೈಲಿನಲ್ಲೇ ಇರಬೇಕಾಗಿದೆ. ಇಲ್ಲದೇ ಹೋದಲ್ಲಿ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಡಿಕೆಶಿ ನಾಳೆ ಮತ್ತೊಮ್ಮೆ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು.