ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಐ.ಎ.ಎಸ್ ಅಧಿಕಾರಿ ಟಿ.ಭೂಬಾಲನ್ ಅವರನ್ನು ಸರ್ಕಾರ ಇತ್ತಿಚಿಗೆ ಬೆಳಗಾವಿಯ ಮಲಪ್ರಭಾ –ಘಟಪ್ರಭಾ ಯೋಜನೆಯ ವಿಶೇಷ ಜಿಲ್ಲಾಧಿಕಾರಿ (ಭೂ ಸ್ವಾಧೀನ) ಹುದ್ದೆಗೆ ಹಠಾತ್ತನೆ ವರ್ಗಾಣೆ ಮಾಡಿತ್ತು. ಗೋಕಾಕ್ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯ್ನಾಗಿಯೂ ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಬಂದಿದ್ದವು.
ಆಯುಕ್ತರಾಗಿದ್ದ ಭೂಬಾಲನ್ರವರು ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡತ್ತಿದ್ದ ರೀತಿ ಜನಮನ್ನಣೆ ಗಳಿಸಿತ್ತು.. ಈಗ ಅವರನ್ನು ತುರ್ತು ವರ್ಗ ಮಾಡಿರುವ ರೀತಿ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದ್ದು. ಹಾಲಿ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಮತ್ತು ಅವರ ಮಗ ಶಾಸಕ ಜ್ಯೋತಿ ಗಣೇಶ್ ಮುಂತಾದ ಬಿಜೆಪಿಯ ಜನಪ್ರತಿನಿಧಿಗಳು ಮತ್ತು ಕೆಲವು ಗುತ್ತಿಗೆದಾರರು ಸೇರಿ ಅವರನ್ನು ಎತ್ತಂಗಡಿ ಮಾಡಿಸಿದ್ಧಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅಧಿಕಾರಿ ಭೂಬಾಲನ್ಗೆ ‘ಸ್ಮಾರ್ಟ್ ಸಿಟೀಸ್ ಕೌನ್ಸಿಲ್ ಇಂಡಿಯಾ’ ಕೊಡುವ ಅತ್ಯುತ್ತಮ ವ್ಯವಸ್ಥಾಪಕ ನಿರ್ದೇಶಕ ಪ್ರಶಸ್ತಿಯನ್ನು ನೀಡಿದ ಮರುದಿನವೇ ಇವರನ್ನು ವರ್ಗಮಾಡಿ ಆದರ್ಶ ಕುಮಾರ್ ಎನ್ನುವವರನ್ನು ರಾಜ್ಯ ಸರ್ಕಾರ ನೇಮಿಸಿದೆ.
ಹಣದ ದುರುಪಯೋಗದ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದ ಭೂಬಾಲನ್ ಹಣ ಸೋರಿಕೆಯಾಗದೆ ಸರಿಯಾಗಿ ಯೋಜನೆಗೆ ಮಾತ್ರ ಖರ್ಚಾಗುವ ಕಡೆ ಗಮನ ಕೊಡುತ್ತಿದ್ದರು ಎಂದು ಜನಸಾಮಾನ್ಯರು ಹೇಳುತ್ತಾರೆ. ಪಾಲಿಕೆಯ ಆಯುಕ್ತರಾಗಿ ಅತ್ಯಲ್ಫ ಅವಧಿಯಲ್ಲಿಯೇ ತೆರಿಗೆ ಸಂಗ್ರಹ ಸೇರಿದಂತೆ ಸಾಕಷ್ಟು ಸುಧಾರಣೆಗಳನ್ನು ತಂದಿದ್ದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಹಾಗೂ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಕಾರ್ಯನಿವರ್ಹಹಿಸುತ್ತಿರುವ ಕೆಲವು ಗುತ್ತಿಗೆದಾರರ ನಿರ್ಲಕ್ಷ್ಯವನ್ನು ಗಮನಿಸಿ ಲಕ್ಷಾಂತರ ರೂಪಾಯಿಗಳ ದಂಡ ವಿಧಿಸುವ ಮೂಲಕ ಚುರುಕು ಮುಟ್ಟಿಸಿದ್ದರು. ಭೂಬಾಲನ್ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಮೇಲೆ ಕಾಮಗಾರಿಗಳಿಗೆ ವೇಗ ನೀಡಿ 712 ಕೋಟಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಮಾಜಿ ಮೇಯರ್, ಉಪ ಮೇಯರ್ ಸೇರಿದಂತೆ ಪಾಲಿಕೆ ಸದಸ್ಯರು ಅನಧಿಕೃತವಾಗಿ ತಮ್ಮ ವಶಕ್ಕೆ ಪಡೆದಿದ್ದ 22 ನೀರಿನ ಘಟಕಗಳನ್ನು ಭೂ ಬಾಲನ್ ಪಾಲಿಕೆಯ ಸುಪರ್ದಿಗೆ ಪಡೆದಿದ್ದರು.
ಈ ಅಧಿಕಾರಿಯ ಮೇಲೆ ಅಸಮಾಧಾನಗೊಂಡ ಗುತ್ತಿಗೆದಾರರೆಲ್ಲ ರಾಜಕಾರಣಿಗಳ ಹತ್ತಿರ ಅವಲತ್ತುಕೊಂಡಿದ್ದಾರೆ. ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳಿಂದ ನಾವು ಮುಂದೆ ನಿಮಗೆ ಕಮಿಷನ್ ಕೊಡಲು ಆಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಪ್ರಾಮಾಣಿಕ ನಡೆಯೇ ಭೂಬಾಲನ್ ವರ್ಗಾವಣೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ವರ್ಗಾವಣೆಯಾಗುತ್ತಲೇ ಜನರು ಸಿಡಿದೆದ್ದಿದ್ದಾರೆ. ವರ್ಗಾವಣೆ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಜನಾಕ್ರೋಶವನ್ನು ಮನಗಂಡ ಶಾಸಕ ಜ್ಯೋತಿಗಣೇಶ್ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರಬರೆದು ಭೂಬಾಲನ್ ಅವರನ್ನು ಮತ್ತೆ ನೇಮಕ ಮಾಡುವಂತೆ ಕೋರಿದ್ದಾರೆ. ಆದರೆ ಅಧಿಕಾರಿಯ ವರ್ಗಾವಣೆಯಿಂದ ಸಿಟ್ಟಾದ ಜನರನ್ನು ಸಮಾಧಾನ ಮಾಡಲು ಮಾತ್ರ ಈ ನಾಟಕ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಆದರೂ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನ ಯಾವುದೇ ರಾಜಕಾರಣಿ ಮಾತಾಡದೆ ಬಾಯಿ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಏಕೆಂದರೆ ಪ್ರಾಮಾಣಿಕ ಅಧಿಕಾರಿ ಅವರಿಗೂ ಬೇಕಾಗಿಲ್ಲ ತಾನೇ?