ಪಶ್ಚಿಮ ಬಂಗಾಳದಲ್ಲಿ “ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು ಎಂಬ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.”
ಪಶ್ಚಿಮ ಬಂಗಾಳದ ಗಡಿ ಜಿಲ್ಲೆಗಳಲ್ಲಿ ಈಗ ಒಂದು ರೀತಿಯ ಭಯ ಮತ್ತು ಆತಂಕ ಮನೆಮಾಡಿದೆ. ರಾಜ್ಯ ಸರ್ಕಾರದ “ಪತ್ತೆ ಹಚ್ಚಿ, ಹೆಸರು ಅಳಿಸಿ, ಗಡಿಪಾರು ಮಾಡಿ” ಎಂಬ ಆಕ್ರಮಣಕಾರಿ ಹೊಸ ನೀತಿ, ದಿಢೀರನೆ ತಲೆಯೆತ್ತುತ್ತಿರುವ ಸಶಸ್ತ್ರ ನಿರ್ಬಂಧಿತ ಕೇಂದ್ರಗಳು ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಇವೆಲ್ಲವೂ ಸೇರಿ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ತಾವು ಸ್ವಂತ ದೇಶದಲ್ಲೇ ‘ವಿದೇಶಿಗರು’ ಎಂದು ಹಣೆಪಟ್ಟಿ ಕಟ್ಟಿಸಿಕೊಳ್ಳಬೇಕಾಗುತ್ತದೆಯೇ ಎಂಬ ನಡುಕ ಹುಟ್ಟಿಸಿದೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡುವವರೆಗೆ ಇಡಲು ರಾಜ್ಯದಲ್ಲಿ ಇಂತಹ ವಿಶೇಷ ಕೇಂದ್ರಗಳನ್ನು ತೆರೆಯಲಾಗಿದೆ.
“ನಾನು ನನ್ನ ಕುಟುಂಬದ ಎಲ್ಲರ ವೋಟರ್ ಐಡಿ, ಪಡಿತರ ಚೀಟಿಗಳನ್ನು ಯಾವಾಗಲೂ ಜೊತೆಯಲ್ಲೇ ಇಟ್ಟುಕೊಂಡಿರುತ್ತೇನೆ. ತರಕಾರಿ ಮಾರ್ಕೆಟ್ಗೆ ಹೋದರೂ ಇವುಗಳನ್ನು ಜೇಬಿನಲ್ಲಿಟ್ಟುಕೊಂಡು ಹೋಗುವುದು ಕಳೆದ ಎರಡು ತಿಂಗಳಿನಿಂದ ಅಭ್ಯಾಸವಾಗಿಬಿಟ್ಟಿದೆ. ನನ್ನೊಳಗೆ ಒಂದು ಆತಂಕ ಕೆಲಸ ಮಾಡುತ್ತಿದೆ ಎಂಬುದನ್ನು ನಾನು ನಿರಾಕರಿಸುವುದಿಲ್ಲ, ಅದಕ್ಕೆ ನನ್ನ ಧರ್ಮದ ಗುರುತೇ ಕಾರಣ,” ಎನ್ನುತ್ತಾರೆ ಮಾಲ್ಡಾದ ಮೋತಾಬರಿಯ ತೈಮೂರ್ ಖಾನ್.
91 ಲಕ್ಷ ಮತದಾರರ ಹೆಸರುಗಳು ಮಾಯ:
ಈ ಭಯಕ್ಕೆ ಮುಖ್ಯ ಕಾರಣ, 2026ರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ. ಈ ಪರಿಷ್ಕರಣೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 91ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದು ರಾಜ್ಯದ ಒಟ್ಟು ಮತದಾರರ ಶೇಕಡಾ 10.9 ರಷ್ಟಾಗಿದ್ದು, ಇದರಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
“SIR ಪ್ರಕ್ರಿಯೆಯಿಂದಾಗಿ ಈ ಬಾರಿ ನನಗೆ ವೋಟ್ ಹಾಕಲು ಆಗಲಿಲ್ಲ. ನನ್ನ ಕುಟುಂಬದ ಮೂವರ ಹೆಸರು ವೋಟರ್ ಲಿಸ್ಟ್ನಲ್ಲಿಲ್ಲ. ಈಗ ನಮಗಾಗಿ ವಕೀಲರು ಯಾವಾಗ ಕೋರ್ಟ್ನಲ್ಲಿ ಹೋರಾಡುತ್ತಾರೋ ಗೊತ್ತಿಲ್ಲ,” ಎನ್ನುತ್ತಾರೆ ಲಾಲ್ಗೋಲಾದ ಗುಲ್ಶನ್ ಶೇಖ್. “ಪೊಲೀಸರು ಸಿಕ್ಕಸಿಕ್ಕವರನ್ನು ಬಾಂಗ್ಲಾದೇಶಿಗರು ಎಂದು ಕರೆದು ಬಂಧಿಸುತ್ತಿದ್ದಾರೆ. ನಮ್ಮ ಏಳು ತಲೆಮಾರುಗಳು ಇದೇ ಮಣ್ಣಿನಲ್ಲಿ ಹುಟ್ಟಿ ಬೆಳೆದಿವೆ, ಆದರೆ ಇಂತಹ ಗಂಡಾಂತರ ನಮಗೆ ಎಂದೂ ಬಂದಿರಲಿಲ್ಲ,” ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.
ಇದರಿಂದ ಮುರ್ಷಿದಾಬಾದ್ ಮತ್ತು ಮಾಲ್ಡಾ ಜಿಲ್ಲೆಗಳು ತೀವ್ರವಾಗಿ ತತ್ತರಿಸಿವೆ. ಮುಸ್ಲಿಂ ಬಾಹುಳ್ಯವಿರುವ, ನದಿ ಕೊರೆತಕ್ಕೆ ಸಿಲುಕುವ ಮುರ್ಷಿದಾಬಾದ್ ಜಿಲ್ಲೆಯೊಂದರಲ್ಲೇ 4.55 ಲಕ್ಷಕ್ಕೂ ಹೆಚ್ಚು ಮತದಾರರು ಅನರ್ಹರಾಗಿದ್ದು, ಅವರ ಭವಿಷ್ಯ ಈಗ ನ್ಯಾಯಾಲಯದ ಕೈಯಲ್ಲಿದೆ. ಇತ್ತ ಮಾಲ್ಡಾದಲ್ಲಿ 2.93 ಲಕ್ಷ ಜನರು ನ್ಯಾಯಾಂಗ ಪರಿಶೀಲನೆಯ ನಂತರ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ.
ನೆರೆ ಪ್ರವಾಹ ಮತ್ತು ಕಣ್ಮರೆಯಾಗುವ ದಾಖಲೆಗಳು
ವೋಟರ್ ಲಿಸ್ಟ್ನಿಂದ ಹೊರಬಿದ್ದು, ನ್ಯಾಯಾಧಿಕರಣದ (Tribunal) ಅನುಮತಿಗಾಗಿ ಕಾಯುತ್ತಿರುವ ಜನರಿಗೆ ಈ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಜೈಲುಗಳಂತಹ ಕೇಂದ್ರಗಳು ತಮಗೆ ವಿದೇಶಿಗರಂತೆ ತೊಂದರೆ ನೀಡಬಹುದು ಎಂಬ ಭಯವನ್ನು ಹೆಚ್ಚಿಸಿವೆ. ವಿಶೇಷವಾಗಿ ನದಿ ತಟದ ಮತ್ತು ದ್ವೀಪ ಪ್ರದೇಶಗಳಲ್ಲಿ (Char areas) ವಾಸಿಸುವ ಜನರಲ್ಲಿ ಈ ಆತಂಕ ತೀವ್ರವಾಗಿದೆ. ಏಕೆಂದರೆ, ಪ್ರತಿ ವರ್ಷ ಬರುವ ಭೀಕರ ಪ್ರವಾಹ ಮತ್ತು ನದಿ ದಂಡೆ ಕುಸಿತಕ್ಕೆ ಇವರ ಜಮೀನು, ಮನೆ ಮತ್ತು ಪ್ರಮುಖ ದಾಖಲೆಗಳು ಕೊಚ್ಚಿಹೋಗಿರುತ್ತವೆ.

ಮಾಲ್ಡಾದ ಕಾಲಿಯಾಚಕ್ನ ಶಿಕ್ಷಕ ಅಲಿ ಹುಸೇನ್ ತಮಗಿರುವ ಆತಂಕವನ್ನು ಹೀಗೆ ಹಂಚಿಕೊಳ್ಳುತ್ತಾರೆ: “ಯಾರಾದರೂ ಪೊಲೀಸರ ಜೊತೆ ಸಣ್ಣ ಜಗಳ ಮಾಡಿಕೊಂಡರೂ ಸಾಕು, ಪೊಲೀಸರು ತಮ್ಮ ಅಧಿಕಾರ ಬಳಸಿ ಅವರನ್ನು ಬಾಂಗ್ಲಾದೇಶಿ ಎಂದು ಮುದ್ರೆ ಒತ್ತಿ ಗಡಿಪಾರು ಮಾಡಬಹುದು ಎಂಬ ಭಯ ಎಲ್ಲರಲ್ಲಿದೆ. ಇಲ್ಲಿ ಕಾನೂನು ಅಥವಾ ಕೋರ್ಟ್ಗಳು ಮಧ್ಯಪ್ರವೇಶಿಸಲು ಯಾವುದೇ ಅವಕಾಶ ಸಿಗುತ್ತಿಲ್ಲ. ಹಾಗಾಗಿ ಭಯ ಪಡುವುದು ಸಹಜ ತಾನೇ?”
ಸರ್ಕಾರದ ಬಿಗಿ ನಿಲುವು
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಈ ಅಭಿಯಾನವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಹಕೀಂಪುರ ಗಡಿಯ ಬಳಿ ಬಾಂಗ್ಲಾದೇಶಿಗರು ಜಮಾಯಿಸುತ್ತಿದ್ದಾರೆ ಎಂಬ ವರದಿಗಳ ನಂತರ ಅವರು, “ಬೇಗ ಬೇಗ ಓಡಿಹೋಗಿ, ಇಲ್ಲದಿದ್ದರೆ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ” ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಈ ಕ್ರಮವು ಕೇಂದ್ರ ಗೃಹ ಸಚಿವಾಲಯವು ಮೇ ೨೦೨೫ ರಲ್ಲಿ ಹೊರಡಿಸಿದ ಗಡಿಪಾರು ಮಾರ್ಗಸೂಚಿಗಳಿಗೆ ತಳುಕುಹಾಕಿಕೊಂಡಿದೆ. ಈ ಮಾರ್ಗಸೂಚಿಗಳ ಪ್ರಕಾರ, ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ರಚನೆ, ಬಯೋಮೆಟ್ರಿಕ್ ಟ್ರ್ಯಾಕಿಂಗ್, ದಾಖಲೆಗಳ ಪರಿಶೀಲನೆ, ಅಕ್ರಮವಾಗಿ ಪಡೆದ ಗುರುತಿನ ಚೀಟಿಗಳ ರದ್ದು, ಪ್ರತಿ ತಿಂಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಮತ್ತು ಶಂಕಿತ ವಿದೇಶಿಗರನ್ನು ಸಾಮಾನ್ಯ ಜೈಲಿನಲ್ಲಿಡುವ ಬದಲು ಪ್ರತ್ಯೇಕ ‘ಹೋಲ್ಡಿಂಗ್ ಸೆಂಟರ್’ಗಳಲ್ಲಿ ಇಡುವುದು ಕಡ್ಡಾಯವಾಗಿದೆ.
ಮಾಲ್ಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅನುಪಮ್ ಸಿಂಗ್ ಮಾತನಾಡಿ, “ಅಕ್ರಮ ನುಸುಳುಕೋರರನ್ನು ಬಂಧಿಸಿ ಇಲ್ಲಿ ಇರಿಸಲಾಗುತ್ತಿದೆ. ಅವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ನಂತರ ರಾಜ್ಯ ಗುಪ್ತಚರ ಇಲಾಖೆ (IB), ಬಿಎಸ್ಎಫ್ (BSF) ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ನಾವು ಕೇವಲ ನೋಡಲ್ ಏಜೆನ್ಸಿಯಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ,” ಎಂದಿದ್ದಾರೆ.
ರಾಜಕೀಯದ ಒಳಸುಳಿಗಳು
ಪೊಲೀಸರು ಇವರನ್ನು ಹೇಗೆ ಗುರುತಿಸುತ್ತಿದ್ದಾರೆ ಎಂಬ ಪ್ರಕ್ರಿಯೆಯನ್ನು ಬಹಿರಂಗಪಡಿಸಿಲ್ಲವಾದರೂ, ಗುಪ್ತಚರ ಅಧಿಕಾರಿಗಳು ತಳಮಟ್ಟದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರಿಂದ ಮಾಹಿತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುರ್ಷಿದಾಬಾದ್ನ ಆರ್ಎಸ್ಎಸ್ (RSS) ನಾಯಕ ಸಖಾರಾವ್ ಸರ್ಕಾರ್ ಮಾತನಾಡಿ, “ಸರ್ಕಾರ ಡಿಟೆನ್ಷನ್ ಕ್ಯಾಂಪ್ಗಳನ್ನು ನಿರ್ಮಿಸಿದೆ. ಅಲ್ಲಿ ಇರಬೇಕಾದವರು ಬರಲು ಶುರುವಾಗಿದ್ದಾರೆ. ಈ ಕಟ್ಟಡಗಳು ಬೇಗನೆ ಭರ್ತಿಯಾಗಲಿವೆ. ನುಸುಳುಕೋರರನ್ನು ಹೇಗೆ ಬೇರುಸಹಿತ ಕಿತ್ತೊಗೆಯಬೇಕು ಎಂಬುದು ಅಮಿತ್ ಶಾ ಅವರಿಗೆ ಚೆನ್ನಾಗಿ ಗೊತ್ತು. ಆ ಕೆಲಸ ಈಗ ಆರಂಭವಾಗಿದೆ,” ಎಂದು ಹೇಳಿದ್ದಾರೆ.
ಲಾಲ್ಗೋಲಾದ ಬಹಾದುರ್ಪುರ ಪಂಚಾಯತ್ ಬಳಿಯ ‘ಪದ್ಮಾ ಭವನ’ ಈಗ ಸಶಸ್ತ್ರ ಕಾವಲಿನ ಹೋಲ್ಡಿಂಗ್ ಸೆಂಟರ್ ಆಗಿ ಮಾರ್ಪಟ್ಟಿದೆ. ಇತ್ತ ಮಾಲ್ಡಾದ ಬಾಗ್ಬಾರಿಯಲ್ಲಿ ಸ್ವಸಹಾಯ ಸಂಘದ ಕಟ್ಟಡವೊಂದನ್ನು ಕೋಟೆಯಂತೆ ಮಾರ್ಪಡಿಸಲಾಗಿದೆ. ಇಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಭಿಕ್ಷೆ ಬೇಡುತ್ತಿದ್ದ ಒಂಬತ್ತು ಜನರನ್ನು ಬಂಧಿಸಿ ಇಡಲಾಗಿದೆ.
ಟಿಎಂಸಿ ನಾಯಕ ಹಾಗೂ ವಕೀಲ ಕೃಷ್ಣೇಂದು ನಾರಾಯಣ್ ಚೌಧರಿ ಮಾತನಾಡಿ, “ಈ ಕ್ಯಾಂಪ್ಗಳ ಬಗ್ಗೆ ಜನರಲ್ಲಿ ಭೀತಿ ಹರಡಿರುವುದು ನಿಜ. ಅವರು ಭಾರತಕ್ಕೆ ಏಕೆ ಬಂದರು ಎಂಬುದನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ಯಾರೋ ಭಿಕ್ಷೆ ಬೇಡಲು ಬರುವುದು ಒಂದು ವಿಷಯ, ಆದರೆ ಜೀವನೋಪಾಯಕ್ಕಾಗಿ ಅಥವಾ ಯಾವುದೋ ದುರುದ್ದೇಶದಿಂದ ಬರುವುದು ಬೇರೆ ವಿಷಯ,” ಎಂದಿದ್ದಾರೆ.
ಅಸ್ಸಾಂ ಮಾದರಿಗೂ ಬಂಗಾಳ ಮಾದರಿಗೂ ಇರುವ ವ್ಯತ್ಯಾಸ
ಬಂಗಾಳದ ಈ ಹೊಸ ಹೋಲ್ಡಿಂಗ್ ಸೆಂಟರ್ಗಳನ್ನು ಅಸ್ಸಾಂನ ‘ಟ್ರಾನ್ಸಿಟ್ ಕ್ಯಾಂಪ್’ ವ್ಯವಸ್ಥೆಗೆ ಹೋಲಿಸಲಾಗುತ್ತಿದೆ. ಅಸ್ಸಾಂನಲ್ಲಿ ವಿದೇಶಿಗರ ನ್ಯಾಯಾಧಿಕರಣ (Foreigners’ Tribunals) ಮತ್ತು ಎನ್ಆರ್ಸಿ (NRC) ಪ್ರಕ್ರಿಯೆಯ ಮೂಲಕ ಕೋರ್ಟ್ ಆದೇಶಗಳ ಮೇರೆಗೆ ಶಂಕಿತರನ್ನು ಬಂಧಿಸಲಾಗುತ್ತಿತ್ತು. ಆದರೆ ಪಶ್ಚಿಮ ಬಂಗಾಳದ ಮಾದರಿಯು ಅದಕ್ಕಿಂತ ಭಿನ್ನವಾಗಿದ್ದು, ಇದು ಸಂಪೂರ್ಣವಾಗಿ ಜಿಲ್ಲಾ ಮಟ್ಟದ ಆಡಳಿತಾತ್ಮಕ ಪರಿಶೀಲನೆ ಮತ್ತು ಪೊಲೀಸ್-ಗಡಿ ಭದ್ರತಾ ಪಡೆಗಳ ನೇರ ಸಮನ್ವಯದ ಮೇಲೆ ನಡೆಯುತ್ತಿದೆ.
ಮಾನವ ಹಕ್ಕುಗಳ ಕಾರ್ಯಕರ್ತ ಸುಕಾಂತ ದಾಸ್ ಆಕ್ರೋಶ ವ್ಯಕ್ತಪಡಿಸುತ್ತಾ, “ಈ ಪ್ರಕ್ರಿಯೆಯ ಮೂಲಕ ಪ್ರಜಾಪ್ರಭುತ್ವದ ಕ್ರಾಂತಿ ಮತ್ತು ಉಸಿರುಗಟ್ಟಿಸಿ ಕೊಲೆ ಮಾಡಲಾಗುತ್ತಿದೆ. ಮೊದಲು ಭದ್ರ ಬುನಾದಿಯನ್ನು ದುರ್ಬಲಗೊಳಿಸಿ, ಜನರ ಒಂದು ವರ್ಗದ ಮೇಲೆ ಕೀಳು ಹಣೆಪಟ್ಟಿ ಹಚ್ಚಲಾಗುತ್ತಿದೆ. ಯಾರು ನಾಗರಿಕ ಮತ್ತು ಯಾರು ಶತ್ರು ಎಂಬುದನ್ನು ಕಾನೂನು ನಿರ್ಧರಿಸುತ್ತಿಲ್ಲ, ಬದಲಿಗೆ ಆಡಳಿತಗಾರರ ಇಷ್ಟದಂತೆ ತೀರ್ಮಾನವಾಗುತ್ತಿದೆ. ಇದು ಅತ್ಯಂತ ಭಯಾನಕ ಪರಿಸ್ಥಿತಿ,” ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಮತ್ತು ಕಹಿ ವಾಸ್ತವ
ಬೀರ್ಭೂಮ್ನ ಪೈಕರ್ ನಿವಾಸಿ ಸುನಾಲಿ ಖಾತುನ್ ಅವರ ಕಥೆ ಈ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತದ ಖಾಯಂ ನಿವಾಸಿಯಾಗಿದ್ದರೂ ಆಕೆಯನ್ನು ಮತ್ತು ಆಕೆಯ ಕುಟುಂಬವನ್ನು ಬಾಂಗ್ಲಾದೇಶಿಗರು ಎಂದು ಹಣೆಪಟ್ಟಿ ಕಟ್ಟಿ ದೆಹಲಿಯಲ್ಲಿ ಬಂಧಿಸಲಾಯಿತು. ನಂತರ ಅವರನ್ನು ದೌರ್ಜನ್ಯ ನಡೆಸಿ ಬಲವಂತವಾಗಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿ ಅವರು ಕಾಡು ಮತ್ತು ಜೈಲುಗಳಲ್ಲಿ 111 ದಿನಗಳ ಕಾಲ ನರಕಯಾತನೆ ಅನುಭವಿಸಿದರು. ಸುನಾಲಿ ಹೇಗೋ ಭಾರತಕ್ಕೆ ಮರಳಿದ್ದಾರೆ, ಆದರೆ ಆಕೆಯ ಪತಿ ಮತ್ತು ನೆರೆಹೊರೆಯ ಸ್ವೀಟಿ ಬೀಬಿ ಮತ್ತು ಅವರ ಇಬ್ಬರು ಮಕ್ಕಳು ಇನ್ನೂ ಅಲ್ಲೇ ಸಿಲುಕಿದ್ದಾರೆ.

ಸುನಾಲಿ ಮಾತನಾಡಿ, “ಮೇ 22ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನಾನು ಕೇಳಿದೆ. ನನ್ನ ಪತಿ, ಇಬ್ಬರು ಗಂಡು ಮಕ್ಕಳು ಮತ್ತು ಸ್ವೀಟಿ ಬೀಬಿಯನ್ನು ಹತ್ತು ದಿನಗಳ ಒಳಗಾಗಿ ಭಾರತಕ್ಕೆ ವಾಪಸ್ ಕರೆತಂದು ಅವರ ಪೌರತ್ವವನ್ನು ಪರಿಶೀಲಿಸಬೇಕು ಎಂದು ಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ,” ಎಂದಿದ್ದಾರೆ. ಆದರೆ, ಸುನಾಲಿ ಅವರನ್ನು ವಾಪಸ್ ಕರೆತರಲು ಮೊದಲು ಶ್ರಮಿಸಿದ್ದ ಟಿಎಂಸಿ ಸಂಸದ ಸಮೀರುಲ್ ಇಸ್ಲಾಂ, “ನಾವು ಈಗ ಈ ವಿಷಯದ ಬಗ್ಗೆ ಗಮನಕೊಡಲು ಸಾಧ್ಯವಿಲ್ಲ” ಎಂದು ಕೈತೊಳೆದುಕೊಂಡಿದ್ದಾರೆ.
ಇದೇ ವೇಳೆ ಹಿರಿಯ ವಕೀಲ ಸಬ್ಯಸಾಚಿ ಚಟರ್ಜಿ ಮಾತನಾಡಿ, “ಅವರು ಭಾರತೀಯ ನಾಗರಿಕರು ಎಂಬುದನ್ನು ಸಾಬೀತುಪಡಿಸುವ ದಾಖಲೆಗಳು ಈಗಾಗಲೇ ಸಿಕ್ಕಿವೆ. ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರ ಮೊದಲು ಅವರನ್ನು ಹತ್ತು ದಿನದೊಳಗೆ ವಾಪಸ್ ಕರೆತರಬೇಕು. ಯಾವುದೇ ದಾಖಲೆ ಪರಿಶೀಲಿಸದೆ ಬಂಗಾಳಿ ಮಾತನಾಡುವ ಭಾರತೀಯರನ್ನು ನೇರವಾಗಿ ಬಾಂಗ್ಲಾದೇಶಕ್ಕೆ ತಳ್ಳುವುದು ಎಷ್ಟರ ಮಟ್ಟಿಗೆ ಕಾನೂನುಬದ್ಧ?” ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಇವುಗಳನ್ನು ಅಧಿಕೃತವಾಗಿ ‘ಹೋಲ್ಡಿಂಗ್ ಸೆಂಟರ್’ ಎಂದು ಕರೆಯುತ್ತಿದ್ದರೂ, ಸ್ಥಳೀಯ ಜನರಿಗೆ ಮಾತ್ರ ಇವು ‘ಡಿಟೆನ್ಷನ್ ಕ್ಯಾಂಪ್’ (ಬಂಧನ ಶಿಬಿರ) ಗಳಾಗಿಯೇ ಕಾಣಿಸುತ್ತಿವೆ. ತಾವು ಹುಟ್ಟಿ ಬೆಳೆದ ಏಕೈಕ ತಾಯ್ನಾಡಿನಲ್ಲಿಯೇ ತಾವೆಲ್ಲಿ ವಿದೇಶಿಗರಾಗಿಬಿಡುತ್ತೇವೋ ಎಂಬ ಕಡು ಬಡವರ ಮತ್ತು ವೋಟರ್ ಲಿಸ್ಟ್ನಿಂದ ಕೈಬಿಡಲ್ಪಟ್ಟ ಅಲ್ಪಸಂಖ್ಯಾತರ ಆತಂಕ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಕರ್ನಾಟಕದಲ್ಲಿ ಭಾರತದ ಚುನಾವಣಾ ಆಯೋಗದ (ECI) ವತಿಯಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಜೂನ್ 30 ರಿಂದ ಜುಲೈ 29, 2026 ರವರೆಗೆ ಮನೆ-ಮನೆಗೆ ತೆರಳಿ ನಡೆಸಲಿದೆ. ಇದು ರಾಜ್ಯದಲ್ಲಿ 24 ವರ್ಷಗಳ ನಂತರ ನಡೆಯುತ್ತಿರುವ ಬೃಹತ್ ಕಸರತ್ತಾಗಿದೆ. ಹಾಗಾಗಿ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರರು ತಮ್ಮಲ್ಲಿರುವ ದಾಖಲೆಗಳನ್ನು ಸಿದ್ದಪಡಿಸಿಟ್ಟುಕೊಂಡು, ಅಪ್ಪಿ ತಪ್ಪಿಯೂ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಹೊರಗುಳಿಯದಂತೆ ನೊಡಿಕೊಳ್ಳಬೇಕಿದೆ.
Source : ದಿ ವೈರ್


