Homeಕರ್ನಾಟಕಛತ್ತೀಸ್ ಘಡದಲ್ಲಿ ನಕ್ಸಲರ ಹತ್ಯೆ ನಿಲ್ಲಿಸಿ, ಮಾತುಕತೆ ನಡೆಸಿ: ಕೇಂದ್ರಕ್ಕೆ ಶಾಂತಿಗಾಗಿ ನಾಗರಿಕರ ವೇದಿಕೆ ಒತ್ತಾಯ

ಛತ್ತೀಸ್ ಘಡದಲ್ಲಿ ನಕ್ಸಲರ ಹತ್ಯೆ ನಿಲ್ಲಿಸಿ, ಮಾತುಕತೆ ನಡೆಸಿ: ಕೇಂದ್ರಕ್ಕೆ ಶಾಂತಿಗಾಗಿ ನಾಗರಿಕರ ವೇದಿಕೆ ಒತ್ತಾಯ

- Advertisement -
- Advertisement -

ಬೆಂಗಳೂರು: ಛತ್ತೀಸ್‌ ಘಡದಲ್ಲಿ ಕೇಂದ್ರ ಸರ್ಕಾರ ನಡೆಸಿರುವ ನಕ್ಸಲರ ಹಾಗೂ ಆದಿವಾಸಿಗಳ ಮಾರಣಹೋಮವನ್ನು ಖಂಡಿಸುತ್ತೇವೆ ಮತ್ತು ಅಲ್ಲಿ ಭದ್ರತಾ ಪಡೆಗಳ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲಿಸಿ ಮಾತುಕತೆಯ ಮೂಲಕ ಶಾಂತಿ ಮರುಸ್ಥಾಪಿಸಿ ಎಂದು ರಾಜ್ಯದ ಶಾಂತಿಗಾಗಿ ನಾಗರಿಕರ ವೇದಿಕೆ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವೇದಿಕೆಯು, ಛತ್ತೀಸ್‌ ಘಡದಲ್ಲಿ ಕಳೆದ ಆರು ತಿಂಗಳಿಂದ CRPF, CoBRA, ಗ್ರೇ ಹೌಂಡ್‌ ಮುಂತಾದ ಪಡೆಗಳ ನೇತೃತ್ವದಲ್ಲಿ ನಕ್ಸಲ್‌ ಚಳವಳಿಯನ್ನು ಹತ್ತಿಕ್ಕಲು ತೀವ್ರತರನಾದ ಪ್ರಯತ್ನಗಳು ನಡೆಯುತ್ತಿವೆ. ಇದುವರೆಗೆ ಕಳೆದ 6 ತಿಂಗಳಲ್ಲಿ 300ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಇದರಲ್ಲಿ ಕೆಲವರು ಪ್ರಮುಖ ನಕ್ಸಲರು ಇದ್ದಾರೆ. ಆದರೆ ದೊಡ್ಡ ಸಂಖ್ಯೆಯಲ್ಲಿ ಆದಿವಾಸಿ ಯುವಕರನ್ನೂ ಸಹ ನಕ್ಸಲ್‌ ಹಣೆಪಟ್ಟಿ ಕಟ್ಟಿ ಕೊಲ್ಲಲಾಗಿದೆ. ಇದು ಖಂಡನೀಯ ಎಂದು ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಇದೇ ಮಾರ್ಚ್ ಅಂತ್ಯದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ [ಮಾವೋಯಿಸ್ಸ್‌] ನಕ್ಸಲ್‌ ಸಂಘಟನೆಯ ಕೇಂದ್ರ ಸಮಿತಿಯು, ಜನರ ಹಿತರಕ್ಷಣೆಯ ದೃಷ್ಟಿಯಿಂದ ತಾವು ಮಾತುಕತೆಗೆ ಸಿದ್ಧವಿರುವುದಾಗಿ ತೆಲಂಗಾಣ, ಛತ್ತೀಸ್‌ ಘಡ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ಆದರೆ ಮಾತುಕತೆಯನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ ಏಪ್ರಿಲ್‌ 2೦ರಿಂದ ‘ಆಪರೇಷನ್ ಕಗಾರ್‌’ ಅನ್ನು ಆರಂಭಿಸಿದೆ. 24 ಸಾವಿರ ಸಂಖ್ಯೆಯ ಪೋಲೀಸ್‌ ಬಲಗಳನ್ನು ನಿಯೋಜಿಸಿ ನಕ್ಸಲರ ಕೇಂದ್ರ ತಾಣವಾದ ಕರ್ರೆಗುಟ್ಟಲು ಪರ್ವತ ಶ್ರೀಣಿಗಳನ್ನು ಸುತ್ತುವರೆದು ನಕ್ಸಲರ ಮತ್ತು ಆದಿವಾಸಿಗಳ ಹತ್ಯೆಯನ್ನು ಮುಂದುವರೆಸಿದೆ. ಇತ್ತೀಚಿಗೆ ಮಾವೋವಾದಿಗಳ ಪ್ರಧಾನ ಕಾರ್ಯದರ್ಶಿಯಾದ ಬಸವರಾಜು ಅವರನ್ನೂ ಒಳಗೊಂಡಂತೆ ಇನ್ನು ಅನೇಕರನ್ನು ಭೀಕರವಾಗಿ ಹತ್ಯೆಗೈಯ್ಯಲಾಗಿದೆ ಎಂದು ವೇದಿಕೆಯು ತಿಳಿಸಿದೆ.

ಛತ್ತೀಸ್‌ ಘಡದ ಮುಖ್ಯಮಂತ್ರಿ ವಿಷ್ಣು ದೇವ ಮತ್ತು ಕೇಂದ್ರ ಗೃಹಸಚಿವ ಅಮೀತ್‌ ಶಾ ಇಬ್ಬರೂ, “ನಕ್ಸಲರೊಂದಿಗೆ ಮಾತುಕತೆ ಇಲ್ಲ, ಕೇವಲ ನಿರ್ನಾಮ” ಎಂದು ಪ್ರತಿಕ್ರಿಯಿಸಿರುವುದು ಅವರ ರಕ್ತದಾಹಿ ಧೋರಣೆಯನ್ನು ಸೂಚಿಸುತ್ತದೆ. ಮಾತುಕತೆಗೆ ಮುಂದಾದವರನ್ನು ಹತ್ಯೆಗೈಯ್ಯುವುದು ಅನಾಗರೀಕ ಮತ್ತು ಫ್ಯಾಸಿಸ್ಟ್‌ ನಡತೆಯಾಗಿದೆ. ಅಲ್ಲದೆ ನಕ್ಸಲರು ಅನುಸರಿಸುತ್ತಿರುವ ಮಾರ್ಗವನ್ನು ನಾವು ಒಪ್ಪದಿರಬಹುದು. ಆದರೆ ಅವರು ಸಾಮಾಜಿಕ ಬದಲಾವಣೆಗಾಗಿ ಸಶಸ್ತ್ರ ಹಿಡಿದಿರುವ ಸಾಮಾಜಿಕ ಹೋರಾಟಗಾರರು ಎಂಬುದನ್ನು ನಾವು ಮನಗಾಣಬೇಕಿದೆ. ಹೋರಾಟಗಾರರನ್ನು ಕ್ರಿಮಿನಲ್‌ ಗಳಂತೆ ನಡೆಸಿಕೊಳ್ಳುವುದು ಮಹಾಪರಾಧವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ದೊಡ್ಡ ಸಂಖ್ಯೆಯಲ್ಲಿ ಆದಿವಾಸಿ ಯುವಕರನ್ನು ಕೊಲ್ಲುವುದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲದ್ದು. ಕೇಂದ್ರ ಸರ್ಕಾರ ಈ ರಕ್ತಪಿಪಾಸುತನವನ್ನು ಬಿಡಬೇಕು ಮತ್ತು ನಕ್ಸಲರೊಂದಿಗೆ ಮಾತುಕತೆಯನ್ನು ಆರಂಭಿಸಿ ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂದು ಶಾಂತಿಗಾಗಿ ನಾಗರೀಕ ವೇದಿಕೆ ಆಗ್ರಹಿಸಿದೆ.

ಮಾತುಕತೆಗೆ ಪೂರ್ವಭಾವಿಯಾಗಿ ಕದನವಿರಾಮ ಜಾರಿಗೊಳ್ಳಬೇಕು, ಎರಡೂ ಕಡೆಯವರು ಶಸ್ತ್ರಗಳನ್ನು  ಕೆಳಗಿಟ್ಟು ಮಾತುಕತೆಗಳಿಗೆ ಬೇಕಾದ ವಾತಾವರಣವನ್ನು ನಿರ್ಮಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ನಕ್ಸಲರನ್ನು ಪ್ರಜಾತಾಂತ್ರಿಕ ಹಾಗೂ ಮಾನವೀಯ ನೆಲೆಯ ಮೇಲೆ ಮುಖ್ಯವಾಹಿನಿಗೆ ತರುವ ವಿಚಾರದಲ್ಲಿ ಕರ್ನಾಟಕ ಒಂದು ಉತ್ತಮ ಮಾದರಿಯನ್ನು ಕಟ್ಟಿಕೊಟ್ಟಿದೆ. ನಾಗರೀಕ ಸಮಾಜದ ಮಧ್ಯಪ್ರವೇಶದ ಮೂಲಕ ನಡೆದ ಈ ಪ್ರಯತ್ನದಿಂದಾಗಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ನಡೆಯುತ್ತಿದ್ದ ಸಶಸ್ತ್ರ ಚಟುವಟಿಕೆ ಸಕರಾತ್ಮಕ ರೀತಿಯಲ್ಲಿ ಸಮಾರೋಪಗೊಂಡಿದೆ. ಕರ್ನಾಟಕದಿಂದ ಕೇಂದ್ರ ಸರ್ಕಾರ ಕಲಿಯಬೇಕು ಮತ್ತು ನಾಗರೀಕ ಸಮಾಜದ ಮಧ್ಯಸ್ತಿಕೆಯೊಂದಿಗೆ ಮಾತುಕತೆಯ ಮೂಲಕ ಈ ಸಂಘರ್ಷವನ್ನು ಸಮಾರೋಪಗೊಳಿಸಬೇಕು ಎಂದು ಶಾಂತಿಗಾಗಿ ನಾಗರೀಕ ವೇದಿಕೆಯ ನಗರಗೆರೆ ರಮೇಶ, ವಿ.ಎಸ್.‌ಶ್ರೀಧರ್, ತಾರಾ ರಾವ್‌, ನೂರ್‌ ‍ಶ್ರೀಧರ್.‌ ಕೆ.ಪಿ. ಶ್ರೀಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ| ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮೇಕಳಿ‌ಯ ಲೋಕೇಶ್ವರ ಸ್ವಾಮಿ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -