ದೆಹಲಿ-ಎನ್ಸಿಆರ್ ಪ್ರದೇಶದಲ್ಲಿನ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ಮನೆಗಳಿಗೆ ಸ್ಥಳಾಂತರಿಸುವಂತೆ ಆಗಸ್ಟ್ 11ರಂದು ಇಬ್ಬರು ನ್ಯಾಯಾಧೀಶರ ಪೀಠ ಹೊರಡಿಸಿದ ನಿರ್ದೇಶನಗಳಿಗೆ ತಡೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ (ಆ.14) ಕಾಯ್ದಿರಿಸಿದೆ.
ಒಂದೆಡೆ ಜನರು ಬೀದಿ ನಾಯಿಗಳಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಪ್ರಾಣಿ ಪ್ರಿಯರು ಬೀದಿ ನಾಯಿಗಳ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಬೀದಿಗಿಳಿದಿದ್ದಾರೆ. ಈ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು, ಬೀದಿ ನಾಯಿಗಳ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದವರು, ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಇತರರಿಂದ ವಿವರವಾದ ವಾದ-ಪ್ರತಿವಾದಿಗಳನ್ನು ಆಲಿಸಿ, ಅವರಿಂದ ದಾಖಲೆಗಳನ್ನು ಸ್ವೀಕರಿಸಿ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿದೆ.
“ಬೀದಿ ನಾಯಿಗಳ ವಿಚಾರದಲ್ಲಿ ಸರ್ಕಾರ ಏನೂ ಮಾಡುತ್ತಿಲ್ಲ. ಅಧಿಕಾರಿಗಳೂ ಕೂಡ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಈ ವಿಚಾರದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲಿ ಮಧ್ಯ ಪ್ರವೇಶ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರೂ ಈ ವಿಚಾರದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೆಹಲಿ-ಎನ್ಸಿಆರ್ ಪ್ರದೇಶದ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು 8 ವಾರಗಳ ಒಳಗೆ ಆಶ್ರಯ ಮನೆಗಳಿಗೆ ಸ್ಥಳಾಂತರಿಸಬೇಕು. ಹಂತ ಹಂತವಾಗಿ ಆಶ್ರಯ ಮನೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಆಗಸ್ಟ್ 11ರಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠ ದೆಹಲಿ ಸರ್ಕಾರದ ಅಧಿಕಾರಿಗಳಿಗೆ ಆದೇಶಿಸಿತ್ತು. ಈ ಆದೇಶಕ್ಕೆ ಗುರುವಾರ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ.
ದೆಹಲಿ ಸರ್ಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರತಿ ವರ್ಷ ಸುಮಾರು 37 ಲಕ್ಷ ನಾಯಿ ಕಡಿತದ ಘಟನೆಗಳು ಸಂಭವಿಸುತ್ತವೆ ಎಂದು ನ್ಯಾಯಾಲಯಕ್ಕೆ ದತ್ತಾಂಶವನ್ನು ಮಂಡಿಸಿದರು. ಪ್ರತಿದಿನ ಸರಾಸರಿ 10,000 ನಾಯಿ ಕಡಿತದ ಘಟನೆಗಳು ನಡೆಯುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್ಒ) ಅಂಕಿ ಅಂಶಗಳ ಪ್ರಕಾರ, ವಾರ್ಷಿಕವಾಗಿ 20,000 ರೇಬೀಸ್ ಸಾವುಗಳು ಸಂಭವಿಸುತ್ತವೆ ಎಂದು ಮಾಹಿತಿ ನೀಡಿದರು.
ಬೀದಿ ನಾಯಿಗಳ ಕಾಟದಿಂದಾಗಿ ಮಕ್ಕಳು ಹೊರಗೆ ಆಟವಾಡಲು ಸಾಧ್ಯವಾಗುತ್ತಿಲ್ಲ ಎಂದು ಮೆಹ್ತಾ ಒತ್ತಿ ಹೇಳಿದರು. ರೋಗ ನಿರೋಧಕತೆಗೆ ಸಂಬಂಧಿಸಿದಂತೆ ನಾಯಿಗಳಿಗೆ ಲಸಿಕೆ ಹಾಕಿದರೂ, ಅದು ಮಕ್ಕಳನ್ನು ಅಂಗವಿಕಲಗೊಳಿಸುವುದನ್ನು ತಡೆಯಲು ಸಾಧ್ಯವಿಲ್ಲ. ಯಾರೂ ನಾಯಿಗಳನ್ನು ಕೊಲ್ಲಬೇಕೆಂದು ಹೇಳುತ್ತಿಲ್ಲ. ಜನರ ಸುರಕ್ಷತೆಗಾಗಿ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ವಾದಿಸಿದರು.
ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ)ಯನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಅದರ ನಿಷ್ಕ್ರಿಯತೆಯಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂದು ಕಿಡಿಕಾರಿತು.
“ಸಂಸತ್ತು ನಿಯಮಗಳು ಮತ್ತು ಕಾನೂನುಗಳನ್ನು ರೂಪಿಸುತ್ತದೆ. ಆದರೆ, ಅವುಗಳನ್ನು ಜಾರಿಗೆ ತರುವುದಿಲ್ಲ. ಒಂದೆಡೆ, ಜನರು ಬೀದಿ ನಾಯಿಗಳಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ, ಪ್ರಾಣಿ ಪ್ರಿಯರು ಅವುಗಳ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ, ಎಲ್ಲರೂ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ. ಈ ಪ್ರಕರಣದಲ್ಲಿ ಮಧ್ಯಪ್ರವೇಶ ಅರ್ಜಿಗಳನ್ನು ಹಾಕಿರುವ ಎಲ್ಲರೂ ಅಫಿಡವಿಟ್ಗಳನ್ನು ಸಲ್ಲಿಸಬೇಕು ಮತ್ತು ಪುರಾವೆಗಳನ್ನು ಒದಗಿಸಬೇಕು” ಎಂದು ಪೀಠ ಹೇಳಿದೆ.
ಆಗಸ್ಟ್ 11ರ ಆದೇಶವನ್ನು ಪ್ರಶ್ನಿಸಿದ ಎಲ್ಲರೂ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತು.
ನ್ಯಾಯಾಲಯವು ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ, ಅರ್ಜಿದಾರರಾದ ಎನ್ಜಿಒಗಳು ಮತ್ತು ಇತರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಆಗಸ್ಟ್ 11ರ ಆದೇಶಕ್ಕೆ ತಡೆ ನೀಡುವಂತೆ ಕೋರಿದರು. ಬೀದಿ ನಾಯಿಗಳನ್ನು ಸಾಕಲು ಸಾಕಷ್ಟು ಆಶ್ರಯ ಮನೆಗಳಿಲ್ಲ ಎಂದು ಹೇಳಿದರು.
ಪರ್ಯಾಯವಾಗಿ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ನಿಯಮಗಳು ಈಗಾಗಲೇ ಜಾರಿಯಲ್ಲಿವೆ ಮತ್ತು ಈ ವಿಷಯದ ಬಗ್ಗೆ ಸಂಸತ್ತಿನ ಶಾಸನವಿದೆ ಎಂದು ಸಿಬಲ್ ವಾದಿಸಿದರು.
ಆಗಸ್ಟ್ 11ರ ಆದೇಶವನ್ನು ಪ್ರಶ್ನಿಸಿದ ಅವರು, “ಎಂಸಿಡಿ ಇಲ್ಲಿಯವರೆಗೆ ಏನು ಮಾಡಿದೆ? ಅವರು ವರ್ಷಗಳಿಂದ ಏನು ಮಾಡುತ್ತಿದ್ದಾರೆ? ಅವರು ಆಶ್ರಯ ಮನೆಗಳನ್ನು ನಿರ್ಮಿಸಿದ್ದಾರೆಯೇ? ಅವರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡದ ಕಾರಣ, ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಅವುಗಳಿಗೆ ಮಾಲೀಕರಿಲ್ಲದ ಕಾರಣ, ಸಮುದಾಯವು ಅವುಗಳನ್ನು ನೋಡಿಕೊಳ್ಳುತ್ತಿದೆ” ಎಂದು ಹೇಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದು


