ಕೇಂದ್ರ ಸರ್ಕಾರ ಅಸಂವಿಧಾನಿಕವಾಗಿ ಜಾರಿಗೊಳಿಸುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ- 2020 ವಿರೋಧಿಸಿ ನವೆಂಬರ್-26 ರಂದು ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸಲು ಎಡ ವಿದ್ಯಾರ್ಥಿ ಸಂಘಟನೆಗಳ ಜಂಟಿ ಒಕ್ಕೂಟ ಕರೆ ನೀಡಿದೆ. ಇಂದು ಬೆಂಗಳೂರಿನ ಸೂರಿ ಭವನದಲ್ಲಿ ಸಭೆ ಸೇರಿದ ಎಡ ವಿದ್ಯಾರ್ಥಿ ಸಂಘಟನೆಗಳಾದ AISF, SFI, AIDSO, AISA ಮತ್ತು KVS, “ಹೊಸ ಶಿಕ್ಷಣ ನೀತಿ ಮೇಲುನೋಟಕ್ಕೆ ಎಲ್ಲರೂ ಒಪ್ಪಿಕೊಳ್ಳುವಂತಿದ್ದರೂ ಅದರ ಆಂತರ್ಯದಲ್ಲಿ ಶಿಕ್ಷಣದ ಖಾಸಗೀಕರಣ, ಕೇಸರೀಕರಣ, ಇತಿಹಾಸ ತಿರುಚುವಿಕೆ ಸೇರಿದಂತೆ ಹಲವು ಅಂಶಗಳು ಅಡಕವಾಗಿದೆ ಎಂದು ಹೇಳಿದೆ.
“ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇದ್ದು, ಭಾರತದ ಇನ್ನುಳಿದ ರಾಷ್ಟ್ರೀಯ ಪ್ರಾದೇಶಿಕ ಭಾಷೆಗಳಲ್ಲಿ ಇಲ್ಲ. ಸಾರ್ವಜನಿಕವಾಗಿ ಹಾಗೂ ಕೇಂದ್ರ ಮತ್ತು ರಾಜ್ಯಗಳ ಶಾಸನ ಸಭೆಯಲ್ಲಿ ಚರ್ಚೆಯಾಗದೆ, ಅದರ ಸಾಧಕ-ಬಾಧಕಗಳನ್ನು ಅರಿಯದೆ ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೂಲೆಯಾಗುತ್ತದೆ” ಎಡ ವಿದ್ಯಾರ್ಥಿ ಸಂಘಟನೆಗಳ ಜಂಟಿ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ!
“ಮೇಲುನೋಟಕ್ಕೆ ಹೊಸ ಶಿಕ್ಷಣ ನೀತಿ ಎಲ್ಲರೂ ಒಪ್ಪಿಕೊಳ್ಳುವಂತಿದ್ದರೂ, ಅದರ ಆಂತರ್ಯದಲ್ಲಿ ಶಿಕ್ಷಣದ ಖಾಸಗೀಕರಣ, ಕೇಸರಿಕರಣ, ಇತಿಹಾಸ ತಿರುಚುಏಕೆ ಈ ರೀತಿ ಹತ್ತು ಹಲವು ಅಂಶಗಳು ಅಡಕವಾಗಿರುವುದು ಕಾಣುತ್ತದೆ. ನಮ್ಮ ರಾಜ್ಯದಲ್ಲೂ ಸಹ ಕೇಂದ್ರದ ಒತ್ತಡದ ಮೇರೆಗೆ ಯಾವುದೇ ರೀತಿಯ ಜನಾಭಿಪ್ರಾಯ ಸಂಗ್ರಹಿಸದೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿರುವುದು ಖಂಡನೀಯ” ಎಂದು ಅದು ಹೇಳಿದೆ.
ರಾಜ್ಯ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಯನ್ನು ಚರ್ಚೆಗೆ ಬಿಡಬೇಕು ಎಂದು ಹೇಳಿರುವ ಸಂಘಟನೆಗಳು, ಅದರಲ್ಲಿನ ಶಿಕ್ಷಣದ ಕೇಸರೀಕರಣ, ಕೇಂದ್ರೀಕರಣ, ಕೋಮುವಾದೀಕರಣ ಹೇರುವ ಅಂಶಗಳನ್ನು ಕೈಬಿಡಬೇಕು ಹಾಗೂ ಅದರ ಸಾಧಕ-ಬಾಧಕಗಳನ್ನು ಅರಿತು ನಂತರ ಲೋಪ ದೋಷಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ: ಶಿಕ್ಷಣವನ್ನು ವೇಗವಾಗಿ ವ್ಯಾಪಾರ ಮಾಡಲು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ತರುತ್ತಿದೆ; ರಮೇಶ್ ಪಟ್ನಾಯಕ್
ಇಷ್ಟೇ ಅಲ್ಲದೆ ವಿದ್ಯಾರ್ಥಿ ಸಂಘಟನೆಗಳು ತಮ್ಮ ಬೇಡಿಕೆಯನ್ನು ಕೂಡಾ ಸರ್ಕಾರಗಳ ಮುಂದೆ ಇಟ್ಟಿದೆ.
- ಶಿಕ್ಷಣ ಕ್ಷೇತ್ರ ಸಂವಿಧಾನದ ಶೆಡ್ಯೂಲ್ -07 ರಂತೆ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಆದರೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜ್ಯ ಸರ್ಕಾರಗಳಿಗೆ ಇರುವ ಶಿಕ್ಷಣ ಕ್ಷೇತ್ರ ಅಧಿಕಾರ, ಹಕ್ಕುಗಳನ್ನು ಮೊಟಕುಗೊಳಿಸಿ ಶಿಕ್ಷಣವನ್ನು ನೀತಿ ನಿರೂಪಣೆಯ ಅಧಿಕಾರಿಗಳನ್ನು ಕೇಂದ್ರೀಕರಣಗೊಳಿಸುವ ಅಂಶಗಳನ್ನು ರಾಜ್ಯ ಸರ್ಕಾರ ವಿರೋಧಿಸಬೇಕು. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ಸರ್ಕಾರಕ್ಕಿರುವ ಅಧಿಕಾರ ಹಕ್ಕುಗಳನ್ನು ಕಾಯ್ದಿರಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಉಳಿಸಲು ಮುಂದಾಗಬೇಕು.
- ಸರ್ಕಾರವೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಸಂವಿಧಾನದ ಮಾನ್ಯತೆ ಪಡೆದ ಎಲ್ಲ ಭಾಷೆಗಳಿಗೆ ಅನುವಾದಿಸಿ ಅಧ್ಯಯನಕ್ಕೆ ಅವಕಾಶ ನೀಡಿ, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಅಂಗನವಾಡಿ, ಬಿಸಿಯೂಟ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರೂ ಚರ್ಚಿಸಿ ತಿದ್ದುಪಡಿ ಸಲಹೆಗಳನ್ನು ನೀಡಲು ಅಗತ್ಯವಾದ ಕಾಲವಕಾಶ ನೀಡಬೇಕು.
- ಕೇಂದ್ರ ಸರ್ಕಾರದ ಸಚಿವ ಸಂಪುಟ ಅನುಮೋದಿತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ರಾಜ್ಯ ವಿಧಾನಸಭೆ, ವಿಧಾನ ಪರಿಷತ್ತಿನ ಉಭಯ ಸದನಗಳಲ್ಲಿ ಸಮಗ್ರ ಚರ್ಚೆ ನಡೆಸಬೇಕು. ಈ ಸದನದಲ್ಲಿ ಈ ಕುರಿತು ಜನಪ್ರತಿನಿಧಿಗಳು ಮಾತನಾಡಬೇಕು.
- ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಪ್ರಸ್ತಾಪಿಸಿರುವ ತ್ರಿಭಾಷಾ ಸೂತ್ರವನ್ನು ತಮಿಳುನಾಡು ರಾಜ್ಯ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರ ವಿರೋಧಿಸಬೇಕು.
- ಕೊರೊನಾ-ಕಾಲಾವಧಿಯಲ್ಲಿ ದೇಶದ ಭವಿಷ್ಯವನ್ನು ರೂಪಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಯ ಕುರಿತು ರಾಜ್ಯ ಸರ್ಕಾರದ ಮಂತ್ರಿಗಳು ನಡೆಸುತ್ತಿರುವ ಏಕಮುಖವಾದ, ಅಪ್ರಜಾಸತ್ತಾತ್ಮಕವಾದ ಅನುಷ್ಠಾನದ ತಯಾರಿಗಳನ್ನು ಕೈ ಬಿಡಲು ಒತ್ತಾಯಿಸಬೇಕು.
ಇದನ್ನೂ ಓದಿ: ಹೊಸ ಶಿಕ್ಷಣ ನೀತಿ ಏನು? ಎತ್ತ?


