Homeಮುಖಪುಟಒಳಮೀಸಲಾತಿಯೇ ಸಾಮಾಜಿಕ ನ್ಯಾಯವಾಗುವ ಜಾಯಮಾನದಲ್ಲಿದ್ದೇವೆ

ಒಳಮೀಸಲಾತಿಯೇ ಸಾಮಾಜಿಕ ನ್ಯಾಯವಾಗುವ ಜಾಯಮಾನದಲ್ಲಿದ್ದೇವೆ

ದಲಿತ ವಿರೋಧಿ ರಾಜಕೀಯ ಶಕ್ತಿಗಳ ಎದುರು ಮಂಡಿಯೂರಿ ಒಳಮೀಸಲಾತಿ ಪಡೆಯುತ್ತೇವೆ ಎಂಬ ಮಾದಿಗ ಸಮುದಾಯದ ನಡೆ ಕೂಡ ಆತುರದ ತೀರ್ಮಾನವಾಗಿದೆ. ದಲಿತತ್ವವನ್ನೇ ಸಮಾಜದಿಂದ ನಿರ್ಬಂಧಿಸುವ, ಮೀಸಲಾತಿಯನ್ನೇ ಬುಡಮೇಲು ಮಾಡಲು ಹೊರಟಿರುವವರು ಒಳಮೀಸಲಾತಿ ಜಾರಿಗೆ ನೆರವಾಗುತ್ತಾರೆಂಬ ನಂಬಿಕೆಯೇ ಅಸಂಗತವಾಗಿದೆ ಎಂಬುದನ್ನು ಮಾದಿಗ ಸಮುದಾಯವು ಮನಗಾಣಬೇಕಾಗಿದೆ.

- Advertisement -
- Advertisement -

ದಲಿತ ಲೋಕದೊಳಗಣ ಒಳಮೀಸಲಾತಿ ಕಾರಣಕ್ಕಾಗಿ ಏರ್ಪಟ್ಟಿರುವ ಸಾಮಾಜಿಕ ಕಂದಕ ಹಾಗೂ ರಾಜಕೀಯ ವೈಷಮ್ಯಗಳು ಖಂಡಿತ ದಲಿತತ್ವದ ಅಸ್ಮಿತೆಯನ್ನು ಒಡೆದು ಹಾಕುತ್ತದೆ ಎಂಬ ಆತಂಕ ಹಾಗೂ ತಲ್ಲಣಗಳನ್ನು ಸಂಯಮದಿಂದ ಎದುರಾಗುವ ಅಗತ್ಯವಿದೆ. ಕರ್ನಾಟಕದಲ್ಲಿ ಒಳಮೀಸಲಾತಿ ಹೋರಾಟವನ್ನು ಮಾದಿಗರ ಹೋರಾಟ ಮಾತ್ರವೆಂದು ನೋಡುತ್ತಿರುವ ಇತರೆ ಸೋದರ ಸಮುದಾಯಗಳ ನಡೆ ಖಂಡಿತವಾಗಿ ಯುಕ್ತವಾಗಿಲ್ಲ. ಪರಸ್ಪರ ಮುಕ್ತವಾಗಿ ಸಂವಾದಿಸುವ ಸಂಯಮವೇ ಸಾಧ್ಯವಿಲ್ಲವೆನ್ನುವಷ್ಟರ ಮಟ್ಟಿಗೆ ಪೂರ್ವಗ್ರಹಗಳಿಗೆ, ಆಂತರಿಕ ಪ್ರಜಾಸತ್ತೆಯ ನಂಬಿಕೆಗಳನ್ನೆ ಬುಡಮೇಲು ಮಾಡುತ್ತಿರುವ ಅಪನಂಬಿಕೆ ಹಾಗೂ ಕಲ್ಪಿತ ಊಹಾಪೋಹಗಳಿಗೆ ದಲಿತ ಸಮುದಾಯಗಳೇ ಒಳಗಾಗುತ್ತಿವೆ ಎಂಬುದು ಆತಂಕಕಾರಿ ಬೆಳವಣಿಗೆ.

ದಲಿತರೊಳಗೆ ಉಂಟಾಗಿರುವ ಈ ಬಗೆಯ ಬಿಕ್ಕಟ್ಟುಗಳನ್ನು ಅರ್ಥಮಾಡಿಕೊಳ್ಳುತ್ತಲೇ ಒಳಮೀಸಲಾತಿಯು ಸಾಮಾಜಿಕ ನ್ಯಾಯದ ಎರಡನೇ ಹಂತ ಎಂಬ ಸ್ಪಷ್ಟ ತಿಳುವಳಿಕೆಗೆ ಬರಬೇಕಾಗಿದೆ. ದಲಿತತ್ವವನ್ನು ಕೇವಲ ಭಾವನಾತ್ಮಕವಾಗಿ ನೋಡದೆ ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಮುನ್ನಲೆಯ ಪ್ರಕ್ರಿಯೆ ಎಂದೇ ಈ ಹೊತ್ತಿನಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಈ ದಲಿತತ್ವವೆಂಬ ಒಂದು ಕೊಡೆಯ ನೆರಳಲ್ಲಿಯೂ ಕೇಂದ್ರ, ಮಧ್ಯ ಹಾಗೂ ಅಂಚು ಎಂಬ ಸಾಮಾಜಿಕ ಸ್ತರಗಳು ನಿರ್ಮಾಣವಾಗಿವೆ. ಇದನ್ನು ಎದುರಾಗಿ ಒಳಮೀಸಲಾತಿಯ ಹೋರಾಟವನ್ನು ಮಾಡಬೇಕಾಗಿದೆ. ಅಲ್ಲದೆಯೇ ಆಳುವ ಸರ್ಕಾರಗಳು ಈ ಏಕಕೊಡೆ ನೆರಳಿಗೆ ಬೇರೆ ಸ್ಪೃಶ್ಯ ಜಾತಿಗಳನ್ನು ತಂದು ಸೇರಿಸಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಇದೆ. ಜೊತೆಗೆ ಈ ದಲಿತತ್ವದೊಳಗೆ ನಿರ್ಮಾಣವಾಗಿರುವ ಈ ಸ್ಪೃಶ್ಯ ಹಾಗೂ ಅಸ್ಪೃಶ್ಯ ಎಂಬ ಗೋಡೆಗಳ ಕಠೋರ ವಾಸ್ತವವನ್ನು ಸಹ ಒಳಮೀಸಲಾತಿಗಾಗಿ ಒತ್ತಾಯಿಸುವ ಸಂದರ್ಭದಲ್ಲಿ ಹೇಗೆ ನಿಭಾಯಿಸಿಕೊಳ್ಳಬೇಕು ಎಂದೂ ಯೋಚಿಸಬೇಕಿದೆ. ಈ ವಾಸ್ತವವನ್ನು ತಳ್ಳಿ ಹಾಕಿ ನಾವು ದಲಿತರ ಐಕ್ಯತೆಯ ಬಗ್ಗೆ ಮಾತಾಡುವುದು ಭ್ರಮಾತ್ಮಕವಾದ ದಲಿತತ್ವವೆಂದೇ ಹೇಳಬೇಕಾಗುತ್ತದೆ.

ತಮಿಳುನಾಡಿನಲ್ಲಿ ಅಸ್ಪೃಶ್ಯ ಆರುಂಧತಿ ಸಮುದಾಯವು ಜಾಡಮಾಲಿಗಳ ಕಸುಬುನ್ನೆ ಜೀವನಕ್ಕೆ ಅವಲಂಬಿಸಿದೆ. ಈ ಸಮುದಾಯಗಳ ನಲವತ್ತು ಕುಟುಂಬಗಳ ಊರಲ್ಲಿ ಇಂದಿಗೂ ಈ ಸಮುದಾಯದ ಮಕ್ಕಳು ಕಳೆದ ಇಪ್ಪತ್ತು ವರ್ಷಗಳಿಂದಲೂ ಅಂಗನವಾಡಿ ಶಾಲೆಗೆ ಹೋಗಿಲ್ಲ. ಅಲ್ಲದೆ ಇಲ್ಲಿನ ದಲಿತ ಪ್ರಬಲ ಜಾತಿಯಾದ ಪಲ್ಲರ್ ಜಾತಿ ಈ ಆರುಂಧತಿ ಸಮುದಾಯವನ್ನು ತುಚ್ಛವಾಗಿ ನೋಡುತ್ತದೆ ಎಂಬ ಸಾಮಾಜಿಕ ಸನ್ನಿವೇಶಗಳನ್ನು ಖಂಡಿತ ಬಚ್ಚಿಡಲಾಗದು. ಬೀದಿ ಬೀದಿ ತಿರುಗುವ ಸಿಂಧ್ ಮಾದಿಗ ಸಮುದಾಯವನ್ನು ಹೇಗೆ ಮುನ್ನಲೆಗೆ ತರುವುದು? ಅಲ್ಲದೆ ಹೊಲೆಯರು ಮಾದಿಗರನ್ನು ಕೀಳಾಗಿ ನೋಡುವುದಿದೆ. ವಿಚಿತ್ರವೆಂದರೇ, ಹೊಲೆಯರಲ್ಲಿಯೇ ಹಳೆಮಕ್ಕಳು ಎಂಬ ಒಳಪಂಗಡ ಇದ್ದು, ಈ ಉಪಜಾತಿಯವರು ಏನಾದರೂ ಎಂಬ ಬಗ್ಗೆ ಈಗ ಮಾಹಿತಿಯೇ ಇಲ್ಲದಂತಾಗಿದೆ. ಹಾಗೆಯೇ ಮಾದಿಗರು ಕೂಡ ತಮ್ಮ ಒಳಗಣ ದಕ್ಕಲಿಗರನ್ನು ತುಚ್ಛವಾಗಿ ಕಾಣುತ್ತಾರೆ. ದಲಿತ ಜಗತ್ತಿನೊಳಗಡೆಯೇ ಇರುವ ಅದೃಶ್ಯ ಹಾಗೂ ಅಜ್ಞಾತ ಜಾತಿಗಳ ಬಗ್ಗೆ ಯಾರು ಮಾತಾಡುತ್ತಾರೆ. ಇವುಗಳನ್ನು ಸಾಂಸ್ಕೃತಿಕ ಭಿನ್ನತೆ ಎಂದು ಮಾನ್ಯಮಾಡುವ ಅಗತ್ಯವಿಲ್ಲ. ಸಾಮಾಜಿಕವಾಗಿ ದಲಿತ ಜಾತಿ ತನ್ನದೇ ಸೋದರ ಜಾತಿಯನ್ನು ದೂರೀಕರಿಸುವುದರ ವಿಪರ್ಯಾಸವಿದು.

ಕೊರಚ/ಕೊರಮ, ಲಂಬಾಣಿ ಹಾಗೂ ಭೋವಿ ಸ್ಪೃಶ್ಯ ಸಮುದಾಯಗಳನ್ನು ದಲಿತ ಅಸ್ಪೃಶ್ಯ ಸಮುದಾಯಗಳ ಅವಮಾನಗಳ ಜೊತೆ ತಾಳೆ ಹಾಕಿ ಅವುಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಿರುವುದು ವೋಟ್ ಬ್ಯಾಂಕ್ ರಾಜಕಾರಣದ ಅತಿರೇಕವೆನ್ನಬಹುದು. ಹಾಗೆಯೇ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡದೆ ಅಸ್ಪೃಶ್ಯ ಜಾತಿಗಳ ಪಾಲಿಗೆ ಈ ಸ್ಪೃಶ್ಯ ಜಾತಿಗಳನ್ನು ಆಳುವ ಸರ್ಕಾರಗಳು ಸೇರಿಸುವುದರ ರಾಜಕಾರಣವನ್ನು ದಲಿತ ಹೋರಾಟ ಸಕಾರಾತ್ಮಕವಾಗಿ ಪ್ರಶ್ನಿಸಬೇಕಿತ್ತು. ಸಮಗ್ರವಾದ ದಲಿತ ಹೋರಾಟದ ಅಸ್ಮಿತೆಯೇ ಇಲ್ಲದ ಈ ಹೊತ್ತಲ್ಲಿ ನಾನಾ ಸಂಘಟನೆಗಳು ‘ಎತ್ತು ಏರಿಗೆ ಕೋಣ ನೀರಿಗೆ’ ಅನ್ನುವ ಸ್ಥಿತಿಯಲ್ಲಿದ್ದು, ಪಕ್ಷ ರಾಜಕಾರಣದ ಅತಿರೇಕಗಳೇ ಸಾಮಾಜಿಕ ನ್ಯಾಯ ಕೊಡಿಸುತ್ತವೆ ಎಂಬ ನಂಬಿಕೆಗಳಿಗೆ ಒಳಗಾಗಿವೆ. ಅಲ್ಲದೆಯೇ ಮೀಸಲಾತಿಗೆ ಸಾಮಾಜಿಕ ಅಸಮಾನತೆಯೇ ಮಾನದಂಡವೆಂಬ ಸಂವಿಧಾನಬದ್ಧವಾದ ವಿಚಾರಗಳನ್ನು ಆಳುವ ಸರ್ಕಾರಗಳು ತಮ್ಮ ವೋಟ್ ಬ್ಯಾಂಕಿನ ಹಿತಾಸಕ್ತಿಗೆ ಅನುಗುಣವಾಗಿ ವಿರೂಪಗೊಳಿಸುತ್ತಿವೆ. ಈ ಮೀಸಲಾತಿ ದಲಿತರಿಗೆ ರಾಜಕೀಯ ಶಕ್ತಿಯಾಗಿ ದಕ್ಕಬಾರದು ಎಂಬ ಹುನ್ನಾರ ನಡೆಸುತ್ತಿವೆ. ಈ ಮುಖೇನ ದಲಿತರ ಮೀಸಲಾತಿಯ ಸಮಾನ ಹಂಚಿಕೆಯ ಒಳ ಬಿಕ್ಕಟ್ಟುಗಳ ಆಂಶಿಕ ಕಾರಣಗಳ ಹಿನ್ನಲೆಯಲ್ಲಿ ಸಾಮಾಜಿಕ ಹಾಗೂ ರಾಜಕೀಯ ಐಕ್ಯತೆಯ ದಲಿತತ್ವವನ್ನೆ ಒಡೆದು ಹಾಕುವ ರಾಜಕಾರಣವನ್ನು ಆಳುವ ಸರ್ಕಾರಗಳು ಮಾಡುತ್ತಿವೆ. ಹೀಗಾಗಿ ಎಲ್ಲ ಪಕ್ಷದಲ್ಲೂ ಇರುವ ದಲಿತರಾಜಕಾರಣಿಗಳು ಅಸಹಾಯಕರಾಗಿ ತಮ್ಮ ಪಕ್ಷದ ಬಾಲಂಗೋಚಿಗಳಾಗಿ ಮಾತ್ರ ಉಳಿದಿದ್ದಾರೆ. ಮತ್ತು ಆಳುವ ಸರ್ಕಾರಗಳ ದೃಷ್ಟಿಯಲ್ಲಿ ದಲಿತರು ಈಗಲೂ ಅಗ್ಗದ ಅಸಹಾಯಕ ತಬ್ಬಲಿ ಸಮುದಾಯಗಳಾಗಿಯೇ ಉಳಿದಿವೆ.

ಆದರೆ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ವರ್ಗೀಕರಣಕ್ಕಾಗಿ ಮೋದಿ ಸರ್ಕಾರ ರೋಹಿಣಿ ಸಿಂಗ್ ಆಯೋಗವನ್ನು ರಚಿಸಿದೆ. ಇದನ್ನು ಸ್ವಾಗತಿಸೋಣ ಆದರೆ ದಲಿತ ಒಳಮೀಸಲಾತಿಯ ವಿಚಾರಗಳು ಯಾವ ಸರ್ಕಾರಗಳಿಗೂ ಕಾಣುತ್ತಿಲ್ಲ ಏಕೆ. ದಲಿತರೇ ಎಲ್ಲ ರಾಜಕೀಯ ಪಕ್ಷಗಳ ಬಳಿ ದುಂಬಾಲು ಬಿದ್ದು ಹೋಗುವ ನಿಕೃಷ್ಟ ಸ್ಥಿತಿಗೆ ಒಳಗಾಗಿದ್ದಾರೆ. ದಲಿತ ಸಮುದಾಯಗಳ ಈ ರಾಜಕೀಯ ದೌರ್ಬಲ್ಯ ಅವರ ಸಾಮಾಜಿಕ ದೌರ್ಬಲ್ಯವೂ ಸಹ ಆಗಿದೆ. ಇದನ್ನು ಮರೆತಿರುವ ದಲಿತ ಸಮುದಾಯಗಳು ಒಳಮೀಸಲಾತಿಯ ಸಂದರ್ಭದಲ್ಲಿ ಇಂತಹ ದೌರ್ಬಲ್ಯಗಳನ್ನು ಮೀರುವ ಸಾಧ್ಯತೆಗಳನ್ನೂ ಕಂಡುಕೊಳ್ಳಬೇಕು.

ಅಂದಿನ ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ವಿಸ್ತರಣೆಯ ರಾಜಕೀಯ ದುರದ್ದೇಶದ ಪರಿಣಾಮವೇ ಇಂದಿನ ಒಳಮೀಸಲಾತಿ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ವಿಚಾರದಲ್ಲಿ ದಲಿತರ ಪರವಾಗಿ ಈ ಪಟ್ಟಿಯನ್ನು ಪರಿಷ್ಕರಿಸಿ ಅಸ್ಪೃಶ್ಯ ಸಮುದಾಯಗಳಿಗೆ ನ್ಯಾಯ ಕೊಡುವ ಧೈರ್ಯವನ್ನು ಯಾವ ಸರ್ಕಾರಗಳು ಮಾಡಲಾರವು. ಆದರೆ ರಾತ್ರೋರಾತ್ರಿ ಶೇ.10 ರಷ್ಟು ಮೀಸಲಾತಿಯನ್ನು ಆರ್ಥಿಕ ಹಿಂದುಳಿದಿರುವಿಕೆಯ ಕಾರಣಕ್ಕೆ ಮೇಲ್ಜಾತಿಗಳಿಗೆ ಜಾರಿ ಮಾಡಿಬಿಡುತ್ತವೆ. ನಿಜವಾಗಲೂ ಈ ಮೀಸಲಾತಿಯನ್ನು ಜಾರಿ ಮಾಡಿದಾಗ ಯಾವುದೇ ತೀವ್ರ ಪ್ರತಿಭಟನೆಗಳು ಆಗಲಿಲ್ಲ. ಮೀಸಲಾತಿಯ ಮೂಲಭೂತ ಅಂಶಗಳಾದ ಸಾಮಾಜಿಕ ಅಸಮಾನತೆ ಹಾಗೂ ಹಿಂದುಳಿದಿರುವಿಕೆಯ ವಿಚಾರಗಳನ್ನು ಹೀಗೆ ತಿರುಚಿ, ಅದನ್ನು ಕೇವಲ ಬಡತನ ನಿರ್ಮೂಲನದ ಆರ್ಥಿಕ ಯೋಜನೆ ಎಂದು, ಮೇಲ್ಜಾತಿಗಳಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಿ ಜಾರಿ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಯಾವ ದಲಿತ ಸಮುದಾಯಗಳು ಪ್ರಬಲವಾಗಿ ಖಂಡನೆ ಮಾಡಲಿಲ್ಲ. ಈ ವಿಚಾರದಲ್ಲಿ ದಲಿತ ರಾಜಕಾರಣಿಗಳು ಹಲ್ಲಿಲ್ಲದ ಹಾವಾಗಿಬಿಟ್ಟಿದ್ದಾರೆ. ಆಳುವ ಸರ್ಕಾರಗಳ ಈ ಇಬ್ಬಂದಿತನ ಹಾಗೂ ದಲಿತ ವಿರೋಧಿ ನಡವಳಿಕೆಗಳು ಒಳಮೀಸಲಾತಿಯನ್ನು ತಮ್ಮ ಪಕ್ಷರಾಜಕಾರಣದ ಹಿತಾಸಕ್ತಿಗನುಗುಣವಾಗಿ ದಾಳ ಮಾಡಿಕೊಳ್ಳಲು ಮುಂದಾಗಿವೆ. ಅಲ್ಲದೇ ಸರ್ಕಾರಗಳು ಖಾಸಗಿ ಕ್ಷೇತ್ರದಲ್ಲಿ ದಲಿತ ಹಾಗೂ ಹಿಂದುಳಿದವರ ಮೀಸಲಾತಿಯನ್ನು ಜಾರಿ ಮಾಡುವ ಬಗ್ಗೆ ಕಿಂಚಿತ್ತೂ ಆಸಕ್ತಿವಹಿಸಿಲ್ಲ.

ಕರ್ನಾಟಕದಲ್ಲಿ ಒಳಮೀಸಲಾತಿ ಹೋರಾಟಕ್ಕೆ ಎರಡು ದಶಕಗಳೂ ಮೀರಿದ ಇತಿಹಾಸವಿದೆ. ದುರಂತವೆಂದರೇ ಇದು ಕೇವಲ ಮಾದಿಗ ಸಮುದಾಯ ಹೋರಾಟವೆಂದು ಭಾವಿಸಿದ ಇತರೆ ದಲಿತ ಸಮುದಾಯಗಳು ಕಳೆದ ಎರಡು ದಶಕಗಳಿಂದ ಕೆಲಸಕ್ಕೆ ಬಾರದ ಪೂರ್ವಗ್ರಹಗಳಿಂದ ಪರಸ್ಪರ ವಿರೋಧವನ್ನು ಉಸಿರಾಡಿದವೆ ಹೊರತು, ಈ ವಿಚಾರದಲ್ಲಿ ಪಾರದರ್ಶಕವಾಗಿ ಮತ್ತು ಹೊಣೆಗಾರಿಕೆಯಿಂದ ನಡೆದುಕೊಳ್ಳುತ್ತಲೇ ಇಲ್ಲ. ತೀರಾ ಅವಕಾಶವಂಚಿತ ದಲಿತ ಸಮುದಾಯಗಳ ಬಗ್ಗೆ ದಲಿತ ಸಮುದಾಯಗಳಲ್ಲಿಯೇ ಕನಿಷ್ಠ ಸೌಜನ್ಯದ ಸ್ಪಂದನೆ, ಮುಕ್ತ ಮಾತುಕತೆಗಳು ಸಾಧ್ಯವಾಗಲೇ ಇಲ್ಲ. ಅದರಲ್ಲೂ ಸ್ಪೃಶ್ಯ ಜಾತಿಗಳು ಕೇವಲ ಊಹಾತ್ಮಕವಾದ ರಾಜಕೀಯ ಪ್ರೇರಿತ ಅನುಮಾನಗಳಿಗೆ ಒಳಗಾಗಿ ಒಳಮೀಸಲಾತಿಯ ವಿಚಾರ ಹಾಗೂ ಹೋರಾಟಗಳನ್ನು ನಕಾರಾತ್ಮಕವಾಗಿ ನೋಡುತ್ತಿವೆ. ಅಲ್ಲದೆ ಈ ಜಾತಿಗಳು ಅವಕಾಶಕ್ಕಾಗಿ ಮಾತ್ರ ದಲಿತತ್ವವನ್ನು ಬಳಸುತ್ತಿವೆಯೇ ಹೊರತು ತಮ್ಮ ಬದುಕಿನ ಅಥವಾ ಸಾಮಾಜಿಕ ಒಡನಾಟದಲ್ಲಿ ಅಸ್ಪೃಶ್ಯ ಜಾತಿಗಳನ್ನು ದೂರವಿಟ್ಟಿವೆ. ರಾಜಕೀಯವಾಗಿ ಈ ಸ್ಪೃಶ್ಯ ದಲಿತ ಜಾತಿಗಳ ಈ ಇಬ್ಬಂದಿತನದಿಂದಲೇ ಅಸ್ಪೃಶ್ಯ ಜಾತಿಗಳ ಸಾಮಾಜಿಕ ಆಕ್ರೋಶಕ್ಕೂ ಗುರಿಯಾಗಿವೆ. ಆದುದರಿಂದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಪ್ರಬಲವಾದ ಹೋರಾಟವನ್ನು ರೂಪಿಸಲು ಸ್ಪೃಶ್ಯ ಜಾತಿಗಳು ಮುಂದಾಗುವುದರ ಜೊತೆಗೆ ಅನವಶ್ಯಕವಾದ ಒಳಮೀಸಲಾತಿ ವಿರೋಧಿ ವಿಚಾರಗಳನ್ನು ಕೈಬಿಡುವುದು ದಲಿತ ಐಕ್ಯತೆಯ ದೃಷ್ಟಿಯಿಂದ ಗುಣಾತ್ಮಕವಾದ ನಡೆಯಾಗುತ್ತದೆ.

ದಲಿತ ವಿರೋಧಿ ರಾಜಕೀಯ ಶಕ್ತಿಗಳ ಎದುರು ಮಂಡಿಯೂರಿ ಒಳಮೀಸಲಾತಿ ಪಡೆಯುತ್ತೇವೆ ಎಂಬ ಮಾದಿಗ ಸಮುದಾಯದ ನಡೆ ಕೂಡ ಆತುರದ ತೀರ್ಮಾನವಾಗಿದೆ. ದಲಿತತ್ವವನ್ನೇ ಸಮಾಜದಿಂದ ನಿರ್ಬಂಧಿಸುವ, ಮೀಸಲಾತಿಯನ್ನೇ ಬುಡಮೇಲು ಮಾಡಲು ಹೊರಟಿರುವವರು ಒಳಮೀಸಲಾತಿ ಜಾರಿಗೆ ನೆರವಾಗುತ್ತಾರೆಂಬ ನಂಬಿಕೆಯೇ ಅಸಂಗತವಾಗಿದೆ ಎಂಬುದನ್ನು ಮಾದಿಗ ಸಮುದಾಯವು ಮನಗಾಣಬೇಕಾಗಿದೆ. ಮೇಲಾಗಿ ತೀರಾ ಅವಕಾಶವಂಚಿತ ದಲಿತ ಜಾತಿಗಳ ಪರ ನಿಲ್ಲುವುದೇ ಸಾಮಾಜಿಕ ನ್ಯಾಯ ಹಾಗೂ ಅಂಬೇಡ್ಕರ್ ಪ್ರೇರಿತ ಸಮಾನತೆಯ ದಾರಿ ಎಂಬ ಖಚಿತತೆಯೊಂದಿಗೆ ಈ ಒಳಮೀಸಲಾತಿ ಜಾರಿಗಾಗಿ ದೃಢವಾಗಿ ನಿಲ್ಲಬೇಕಾದ್ದು ನಮ್ಮೆಲ್ಲರ ನಡೆ ಹಾಗೂ ಬದ್ಧತೆಯಾಗಬೇಕಿದೆ.

ತಾತ್ವಿಕವಾಗಿ ಮತ್ತು ವೈಚಾರಿಕವಾಗಿ ಅಂಬೇಡ್ಕರ್ ಪ್ರಜ್ಞೆಯ ಮೇಲೆ ದಲಿತತ್ವವನ್ನು ಒಪ್ಪಿಕೊಂಡಿರುವ ಸಮುದಾಯಗಳು ಸಾಮಾಜಿಕವಾಗಿ ಮೀಸಲಾತಿಯಿಂದ ಸಮಾನವಾಗಿ ಬಲಗೊಂಡಿವೆಯೇ ಎಂಬ ಪ್ರಶ್ನೆಗಳನ್ನು ದಲಿತ ಚಳವಳಿ ಹಾಗೂ ಬುದ್ಧಿಜೀವಿಗಳು ಆಗಿಂದಾಗ್ಗೆ ಕೇಳಿಕೊಳ್ಳಬೇಕಿತ್ತು. ಈ ಕುರಿತು ಸಮುದಾಯಗಳ ರಾಜಕೀಯ ಹಾಗೂ ಸಾಮಾಜಿಕ ಪ್ರಗತಿಯ ಸ್ಥಿತಿಗತಿಗಳನ್ನು ಆಗಿಂದಾಗ್ಗೆ ಪರಿಶೀಲಿಸುವ ಸಮೀಕ್ಷೆಗಳನ್ನು ನಿರ್ವಹಿಸಿಬೇಕಿತ್ತು. ಈ ಬಗೆಯ ರಚನಾತ್ಮಕ ಅವಲೋಕನದ ದಾರಿಯನ್ನು ಪ್ರಜ್ಞಾಪೂರ್ವಕವಾಗಿ ಈ ಚಳವಳಿ ನಿರ್ವಹಿಸಿದ್ದರೆ ದಲಿತ ಸಮುದಾಯಗಳ ಈ ಪರಸ್ಪರ ವೈಷಮ್ಯಗಳ ಹಾಗೂ ವೈರುಧ್ಯಗಳ ಅಂತರದ ಪ್ರಮಾಣವನ್ನು ಸಕಾರಾತ್ಮಕವಾಗಿ ಕಡಿಮೆ ಮಾಡಬಹುದಿತ್ತೇನೊ!

ಇನ್ನು ದಲಿತ ಲೋಕವು ಸಮಾನತೆಯಿಂದ ಕೂಡಿರಬೇಕೆಂಬ ಆಶಯಗಳನ್ನು ಹೊಂದಿದೆಯೇ ಹೊರತು, ಈ ಸಮಾನತೆ ಎಂಬುದು ಈ ಲೋಕದ ಸಮುದಾಯಗಳ ಬದುಕಿನ ವಾಸ್ತವವಾಗಿ ಪರಿವರ್ತನೆಗೊಂಡಿಲ್ಲ. ಈ ನಿಜವನ್ನು ದಲಿತ ಹೋರಾಟಗಾರರೂ, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮರೆಮಾಡದೆ ಒಪ್ಪಿಕೊಳ್ಳಬೇಕಾಗುತ್ತದೆ. ಅಸಮಾನತೆಗೆ ಒಳಗೆ ಮತ್ತು ಹೊರಗೆ ಎಂಬ ಬೇಧವಿರಬಾರದು. ಆದ್ದರಿಂದ ಇಂತಹ ತಡೆಗೋಡೆಗಳ ಬಗ್ಗೆಯೂ ಯಾವ ಹಿಂಜರಿಕೆ ಇಲ್ಲದೆ ಮಾತಾಡಬೇಕಾಗುತ್ತದೆ. ಅಂದು ಈ ದಲಿತಲೋಕದ ಸಾಮಾಜಿಕ ಒಳ ಅಂತರ ಮತ್ತು ವೈರುಧ್ಯಗಳು ದಸಂಸಕ್ಕೆ ಚಾರಿತ್ರಿಕವಾಗಿ ಮುಖ್ಯವಾಗಿರಲಿಲ್ಲ. ಆದರೆ ಈಗ ಇವುಗಳನ್ನು ಎದುರಾಗದೆ ದಲಿತ ಚಳವಳಿ, ಸಾಹಿತ್ಯ ಹಾಗೂ ರಾಜಕೀಯ ಚಿಂತನೆ ಸಾಗುವಂತೆಯೇ ಇಲ್ಲ. ಈ ಕಾರಣದಿಂದಲೇ ಮೀಸಲಾತಿಯ ವರ್ಗೀಕರಣದ ಒತ್ತಾಯಗಳನ್ನು, ದಲಿತ ಲೋಕದೊಳಗೆ ಇನ್ನೂ ಏಳಿಗೆ ಕಾಣದೆ ಅಸ್ಪೃಶ್ಯವಾಗಿಯೇ ಉಳಿದಿರುವ ಸಮುದಾಯಗಳ ಹಕ್ಕೊತ್ತಾಯಗಳು ಎಂದೇ ನಾವು ಅರ್ಥಮಾಡಿಕೊಳ್ಳಬೇಕಿದೆ.

ಪ್ರಕಾಶ್ ಮಂಟೇದ

ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೂ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಸಮಕಾಲೀನ ಸಂಗತಿಗಳ ಬಗ್ಗೆ ಹೊಸ ನೋಟಗಳನ್ನು ನೀಡಬಲ್ಲ ಯುವ ಚಿಂತಕರು.


ಇದನ್ನೂ ಓದಿ: ಮೀಸಲಾತಿ ಮತ್ತು ಒಳಮೀಸಲಾತಿ ಎರಡೂ ಒಂದೆ..: ಬೆಟ್ಟಯ್ಯ ಕೋಟೆ ಸಂದರ್ಶನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...