Homeಮುಖಪುಟಒಳಮೀಸಲಾತಿಯೇ ಸಾಮಾಜಿಕ ನ್ಯಾಯವಾಗುವ ಜಾಯಮಾನದಲ್ಲಿದ್ದೇವೆ

ಒಳಮೀಸಲಾತಿಯೇ ಸಾಮಾಜಿಕ ನ್ಯಾಯವಾಗುವ ಜಾಯಮಾನದಲ್ಲಿದ್ದೇವೆ

ದಲಿತ ವಿರೋಧಿ ರಾಜಕೀಯ ಶಕ್ತಿಗಳ ಎದುರು ಮಂಡಿಯೂರಿ ಒಳಮೀಸಲಾತಿ ಪಡೆಯುತ್ತೇವೆ ಎಂಬ ಮಾದಿಗ ಸಮುದಾಯದ ನಡೆ ಕೂಡ ಆತುರದ ತೀರ್ಮಾನವಾಗಿದೆ. ದಲಿತತ್ವವನ್ನೇ ಸಮಾಜದಿಂದ ನಿರ್ಬಂಧಿಸುವ, ಮೀಸಲಾತಿಯನ್ನೇ ಬುಡಮೇಲು ಮಾಡಲು ಹೊರಟಿರುವವರು ಒಳಮೀಸಲಾತಿ ಜಾರಿಗೆ ನೆರವಾಗುತ್ತಾರೆಂಬ ನಂಬಿಕೆಯೇ ಅಸಂಗತವಾಗಿದೆ ಎಂಬುದನ್ನು ಮಾದಿಗ ಸಮುದಾಯವು ಮನಗಾಣಬೇಕಾಗಿದೆ.

- Advertisement -
- Advertisement -

ದಲಿತ ಲೋಕದೊಳಗಣ ಒಳಮೀಸಲಾತಿ ಕಾರಣಕ್ಕಾಗಿ ಏರ್ಪಟ್ಟಿರುವ ಸಾಮಾಜಿಕ ಕಂದಕ ಹಾಗೂ ರಾಜಕೀಯ ವೈಷಮ್ಯಗಳು ಖಂಡಿತ ದಲಿತತ್ವದ ಅಸ್ಮಿತೆಯನ್ನು ಒಡೆದು ಹಾಕುತ್ತದೆ ಎಂಬ ಆತಂಕ ಹಾಗೂ ತಲ್ಲಣಗಳನ್ನು ಸಂಯಮದಿಂದ ಎದುರಾಗುವ ಅಗತ್ಯವಿದೆ. ಕರ್ನಾಟಕದಲ್ಲಿ ಒಳಮೀಸಲಾತಿ ಹೋರಾಟವನ್ನು ಮಾದಿಗರ ಹೋರಾಟ ಮಾತ್ರವೆಂದು ನೋಡುತ್ತಿರುವ ಇತರೆ ಸೋದರ ಸಮುದಾಯಗಳ ನಡೆ ಖಂಡಿತವಾಗಿ ಯುಕ್ತವಾಗಿಲ್ಲ. ಪರಸ್ಪರ ಮುಕ್ತವಾಗಿ ಸಂವಾದಿಸುವ ಸಂಯಮವೇ ಸಾಧ್ಯವಿಲ್ಲವೆನ್ನುವಷ್ಟರ ಮಟ್ಟಿಗೆ ಪೂರ್ವಗ್ರಹಗಳಿಗೆ, ಆಂತರಿಕ ಪ್ರಜಾಸತ್ತೆಯ ನಂಬಿಕೆಗಳನ್ನೆ ಬುಡಮೇಲು ಮಾಡುತ್ತಿರುವ ಅಪನಂಬಿಕೆ ಹಾಗೂ ಕಲ್ಪಿತ ಊಹಾಪೋಹಗಳಿಗೆ ದಲಿತ ಸಮುದಾಯಗಳೇ ಒಳಗಾಗುತ್ತಿವೆ ಎಂಬುದು ಆತಂಕಕಾರಿ ಬೆಳವಣಿಗೆ.

ದಲಿತರೊಳಗೆ ಉಂಟಾಗಿರುವ ಈ ಬಗೆಯ ಬಿಕ್ಕಟ್ಟುಗಳನ್ನು ಅರ್ಥಮಾಡಿಕೊಳ್ಳುತ್ತಲೇ ಒಳಮೀಸಲಾತಿಯು ಸಾಮಾಜಿಕ ನ್ಯಾಯದ ಎರಡನೇ ಹಂತ ಎಂಬ ಸ್ಪಷ್ಟ ತಿಳುವಳಿಕೆಗೆ ಬರಬೇಕಾಗಿದೆ. ದಲಿತತ್ವವನ್ನು ಕೇವಲ ಭಾವನಾತ್ಮಕವಾಗಿ ನೋಡದೆ ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಮುನ್ನಲೆಯ ಪ್ರಕ್ರಿಯೆ ಎಂದೇ ಈ ಹೊತ್ತಿನಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಈ ದಲಿತತ್ವವೆಂಬ ಒಂದು ಕೊಡೆಯ ನೆರಳಲ್ಲಿಯೂ ಕೇಂದ್ರ, ಮಧ್ಯ ಹಾಗೂ ಅಂಚು ಎಂಬ ಸಾಮಾಜಿಕ ಸ್ತರಗಳು ನಿರ್ಮಾಣವಾಗಿವೆ. ಇದನ್ನು ಎದುರಾಗಿ ಒಳಮೀಸಲಾತಿಯ ಹೋರಾಟವನ್ನು ಮಾಡಬೇಕಾಗಿದೆ. ಅಲ್ಲದೆಯೇ ಆಳುವ ಸರ್ಕಾರಗಳು ಈ ಏಕಕೊಡೆ ನೆರಳಿಗೆ ಬೇರೆ ಸ್ಪೃಶ್ಯ ಜಾತಿಗಳನ್ನು ತಂದು ಸೇರಿಸಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಇದೆ. ಜೊತೆಗೆ ಈ ದಲಿತತ್ವದೊಳಗೆ ನಿರ್ಮಾಣವಾಗಿರುವ ಈ ಸ್ಪೃಶ್ಯ ಹಾಗೂ ಅಸ್ಪೃಶ್ಯ ಎಂಬ ಗೋಡೆಗಳ ಕಠೋರ ವಾಸ್ತವವನ್ನು ಸಹ ಒಳಮೀಸಲಾತಿಗಾಗಿ ಒತ್ತಾಯಿಸುವ ಸಂದರ್ಭದಲ್ಲಿ ಹೇಗೆ ನಿಭಾಯಿಸಿಕೊಳ್ಳಬೇಕು ಎಂದೂ ಯೋಚಿಸಬೇಕಿದೆ. ಈ ವಾಸ್ತವವನ್ನು ತಳ್ಳಿ ಹಾಕಿ ನಾವು ದಲಿತರ ಐಕ್ಯತೆಯ ಬಗ್ಗೆ ಮಾತಾಡುವುದು ಭ್ರಮಾತ್ಮಕವಾದ ದಲಿತತ್ವವೆಂದೇ ಹೇಳಬೇಕಾಗುತ್ತದೆ.

ತಮಿಳುನಾಡಿನಲ್ಲಿ ಅಸ್ಪೃಶ್ಯ ಆರುಂಧತಿ ಸಮುದಾಯವು ಜಾಡಮಾಲಿಗಳ ಕಸುಬುನ್ನೆ ಜೀವನಕ್ಕೆ ಅವಲಂಬಿಸಿದೆ. ಈ ಸಮುದಾಯಗಳ ನಲವತ್ತು ಕುಟುಂಬಗಳ ಊರಲ್ಲಿ ಇಂದಿಗೂ ಈ ಸಮುದಾಯದ ಮಕ್ಕಳು ಕಳೆದ ಇಪ್ಪತ್ತು ವರ್ಷಗಳಿಂದಲೂ ಅಂಗನವಾಡಿ ಶಾಲೆಗೆ ಹೋಗಿಲ್ಲ. ಅಲ್ಲದೆ ಇಲ್ಲಿನ ದಲಿತ ಪ್ರಬಲ ಜಾತಿಯಾದ ಪಲ್ಲರ್ ಜಾತಿ ಈ ಆರುಂಧತಿ ಸಮುದಾಯವನ್ನು ತುಚ್ಛವಾಗಿ ನೋಡುತ್ತದೆ ಎಂಬ ಸಾಮಾಜಿಕ ಸನ್ನಿವೇಶಗಳನ್ನು ಖಂಡಿತ ಬಚ್ಚಿಡಲಾಗದು. ಬೀದಿ ಬೀದಿ ತಿರುಗುವ ಸಿಂಧ್ ಮಾದಿಗ ಸಮುದಾಯವನ್ನು ಹೇಗೆ ಮುನ್ನಲೆಗೆ ತರುವುದು? ಅಲ್ಲದೆ ಹೊಲೆಯರು ಮಾದಿಗರನ್ನು ಕೀಳಾಗಿ ನೋಡುವುದಿದೆ. ವಿಚಿತ್ರವೆಂದರೇ, ಹೊಲೆಯರಲ್ಲಿಯೇ ಹಳೆಮಕ್ಕಳು ಎಂಬ ಒಳಪಂಗಡ ಇದ್ದು, ಈ ಉಪಜಾತಿಯವರು ಏನಾದರೂ ಎಂಬ ಬಗ್ಗೆ ಈಗ ಮಾಹಿತಿಯೇ ಇಲ್ಲದಂತಾಗಿದೆ. ಹಾಗೆಯೇ ಮಾದಿಗರು ಕೂಡ ತಮ್ಮ ಒಳಗಣ ದಕ್ಕಲಿಗರನ್ನು ತುಚ್ಛವಾಗಿ ಕಾಣುತ್ತಾರೆ. ದಲಿತ ಜಗತ್ತಿನೊಳಗಡೆಯೇ ಇರುವ ಅದೃಶ್ಯ ಹಾಗೂ ಅಜ್ಞಾತ ಜಾತಿಗಳ ಬಗ್ಗೆ ಯಾರು ಮಾತಾಡುತ್ತಾರೆ. ಇವುಗಳನ್ನು ಸಾಂಸ್ಕೃತಿಕ ಭಿನ್ನತೆ ಎಂದು ಮಾನ್ಯಮಾಡುವ ಅಗತ್ಯವಿಲ್ಲ. ಸಾಮಾಜಿಕವಾಗಿ ದಲಿತ ಜಾತಿ ತನ್ನದೇ ಸೋದರ ಜಾತಿಯನ್ನು ದೂರೀಕರಿಸುವುದರ ವಿಪರ್ಯಾಸವಿದು.

ಕೊರಚ/ಕೊರಮ, ಲಂಬಾಣಿ ಹಾಗೂ ಭೋವಿ ಸ್ಪೃಶ್ಯ ಸಮುದಾಯಗಳನ್ನು ದಲಿತ ಅಸ್ಪೃಶ್ಯ ಸಮುದಾಯಗಳ ಅವಮಾನಗಳ ಜೊತೆ ತಾಳೆ ಹಾಕಿ ಅವುಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಿರುವುದು ವೋಟ್ ಬ್ಯಾಂಕ್ ರಾಜಕಾರಣದ ಅತಿರೇಕವೆನ್ನಬಹುದು. ಹಾಗೆಯೇ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡದೆ ಅಸ್ಪೃಶ್ಯ ಜಾತಿಗಳ ಪಾಲಿಗೆ ಈ ಸ್ಪೃಶ್ಯ ಜಾತಿಗಳನ್ನು ಆಳುವ ಸರ್ಕಾರಗಳು ಸೇರಿಸುವುದರ ರಾಜಕಾರಣವನ್ನು ದಲಿತ ಹೋರಾಟ ಸಕಾರಾತ್ಮಕವಾಗಿ ಪ್ರಶ್ನಿಸಬೇಕಿತ್ತು. ಸಮಗ್ರವಾದ ದಲಿತ ಹೋರಾಟದ ಅಸ್ಮಿತೆಯೇ ಇಲ್ಲದ ಈ ಹೊತ್ತಲ್ಲಿ ನಾನಾ ಸಂಘಟನೆಗಳು ‘ಎತ್ತು ಏರಿಗೆ ಕೋಣ ನೀರಿಗೆ’ ಅನ್ನುವ ಸ್ಥಿತಿಯಲ್ಲಿದ್ದು, ಪಕ್ಷ ರಾಜಕಾರಣದ ಅತಿರೇಕಗಳೇ ಸಾಮಾಜಿಕ ನ್ಯಾಯ ಕೊಡಿಸುತ್ತವೆ ಎಂಬ ನಂಬಿಕೆಗಳಿಗೆ ಒಳಗಾಗಿವೆ. ಅಲ್ಲದೆಯೇ ಮೀಸಲಾತಿಗೆ ಸಾಮಾಜಿಕ ಅಸಮಾನತೆಯೇ ಮಾನದಂಡವೆಂಬ ಸಂವಿಧಾನಬದ್ಧವಾದ ವಿಚಾರಗಳನ್ನು ಆಳುವ ಸರ್ಕಾರಗಳು ತಮ್ಮ ವೋಟ್ ಬ್ಯಾಂಕಿನ ಹಿತಾಸಕ್ತಿಗೆ ಅನುಗುಣವಾಗಿ ವಿರೂಪಗೊಳಿಸುತ್ತಿವೆ. ಈ ಮೀಸಲಾತಿ ದಲಿತರಿಗೆ ರಾಜಕೀಯ ಶಕ್ತಿಯಾಗಿ ದಕ್ಕಬಾರದು ಎಂಬ ಹುನ್ನಾರ ನಡೆಸುತ್ತಿವೆ. ಈ ಮುಖೇನ ದಲಿತರ ಮೀಸಲಾತಿಯ ಸಮಾನ ಹಂಚಿಕೆಯ ಒಳ ಬಿಕ್ಕಟ್ಟುಗಳ ಆಂಶಿಕ ಕಾರಣಗಳ ಹಿನ್ನಲೆಯಲ್ಲಿ ಸಾಮಾಜಿಕ ಹಾಗೂ ರಾಜಕೀಯ ಐಕ್ಯತೆಯ ದಲಿತತ್ವವನ್ನೆ ಒಡೆದು ಹಾಕುವ ರಾಜಕಾರಣವನ್ನು ಆಳುವ ಸರ್ಕಾರಗಳು ಮಾಡುತ್ತಿವೆ. ಹೀಗಾಗಿ ಎಲ್ಲ ಪಕ್ಷದಲ್ಲೂ ಇರುವ ದಲಿತರಾಜಕಾರಣಿಗಳು ಅಸಹಾಯಕರಾಗಿ ತಮ್ಮ ಪಕ್ಷದ ಬಾಲಂಗೋಚಿಗಳಾಗಿ ಮಾತ್ರ ಉಳಿದಿದ್ದಾರೆ. ಮತ್ತು ಆಳುವ ಸರ್ಕಾರಗಳ ದೃಷ್ಟಿಯಲ್ಲಿ ದಲಿತರು ಈಗಲೂ ಅಗ್ಗದ ಅಸಹಾಯಕ ತಬ್ಬಲಿ ಸಮುದಾಯಗಳಾಗಿಯೇ ಉಳಿದಿವೆ.

ಆದರೆ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ವರ್ಗೀಕರಣಕ್ಕಾಗಿ ಮೋದಿ ಸರ್ಕಾರ ರೋಹಿಣಿ ಸಿಂಗ್ ಆಯೋಗವನ್ನು ರಚಿಸಿದೆ. ಇದನ್ನು ಸ್ವಾಗತಿಸೋಣ ಆದರೆ ದಲಿತ ಒಳಮೀಸಲಾತಿಯ ವಿಚಾರಗಳು ಯಾವ ಸರ್ಕಾರಗಳಿಗೂ ಕಾಣುತ್ತಿಲ್ಲ ಏಕೆ. ದಲಿತರೇ ಎಲ್ಲ ರಾಜಕೀಯ ಪಕ್ಷಗಳ ಬಳಿ ದುಂಬಾಲು ಬಿದ್ದು ಹೋಗುವ ನಿಕೃಷ್ಟ ಸ್ಥಿತಿಗೆ ಒಳಗಾಗಿದ್ದಾರೆ. ದಲಿತ ಸಮುದಾಯಗಳ ಈ ರಾಜಕೀಯ ದೌರ್ಬಲ್ಯ ಅವರ ಸಾಮಾಜಿಕ ದೌರ್ಬಲ್ಯವೂ ಸಹ ಆಗಿದೆ. ಇದನ್ನು ಮರೆತಿರುವ ದಲಿತ ಸಮುದಾಯಗಳು ಒಳಮೀಸಲಾತಿಯ ಸಂದರ್ಭದಲ್ಲಿ ಇಂತಹ ದೌರ್ಬಲ್ಯಗಳನ್ನು ಮೀರುವ ಸಾಧ್ಯತೆಗಳನ್ನೂ ಕಂಡುಕೊಳ್ಳಬೇಕು.

ಅಂದಿನ ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ವಿಸ್ತರಣೆಯ ರಾಜಕೀಯ ದುರದ್ದೇಶದ ಪರಿಣಾಮವೇ ಇಂದಿನ ಒಳಮೀಸಲಾತಿ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ವಿಚಾರದಲ್ಲಿ ದಲಿತರ ಪರವಾಗಿ ಈ ಪಟ್ಟಿಯನ್ನು ಪರಿಷ್ಕರಿಸಿ ಅಸ್ಪೃಶ್ಯ ಸಮುದಾಯಗಳಿಗೆ ನ್ಯಾಯ ಕೊಡುವ ಧೈರ್ಯವನ್ನು ಯಾವ ಸರ್ಕಾರಗಳು ಮಾಡಲಾರವು. ಆದರೆ ರಾತ್ರೋರಾತ್ರಿ ಶೇ.10 ರಷ್ಟು ಮೀಸಲಾತಿಯನ್ನು ಆರ್ಥಿಕ ಹಿಂದುಳಿದಿರುವಿಕೆಯ ಕಾರಣಕ್ಕೆ ಮೇಲ್ಜಾತಿಗಳಿಗೆ ಜಾರಿ ಮಾಡಿಬಿಡುತ್ತವೆ. ನಿಜವಾಗಲೂ ಈ ಮೀಸಲಾತಿಯನ್ನು ಜಾರಿ ಮಾಡಿದಾಗ ಯಾವುದೇ ತೀವ್ರ ಪ್ರತಿಭಟನೆಗಳು ಆಗಲಿಲ್ಲ. ಮೀಸಲಾತಿಯ ಮೂಲಭೂತ ಅಂಶಗಳಾದ ಸಾಮಾಜಿಕ ಅಸಮಾನತೆ ಹಾಗೂ ಹಿಂದುಳಿದಿರುವಿಕೆಯ ವಿಚಾರಗಳನ್ನು ಹೀಗೆ ತಿರುಚಿ, ಅದನ್ನು ಕೇವಲ ಬಡತನ ನಿರ್ಮೂಲನದ ಆರ್ಥಿಕ ಯೋಜನೆ ಎಂದು, ಮೇಲ್ಜಾತಿಗಳಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಿ ಜಾರಿ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಯಾವ ದಲಿತ ಸಮುದಾಯಗಳು ಪ್ರಬಲವಾಗಿ ಖಂಡನೆ ಮಾಡಲಿಲ್ಲ. ಈ ವಿಚಾರದಲ್ಲಿ ದಲಿತ ರಾಜಕಾರಣಿಗಳು ಹಲ್ಲಿಲ್ಲದ ಹಾವಾಗಿಬಿಟ್ಟಿದ್ದಾರೆ. ಆಳುವ ಸರ್ಕಾರಗಳ ಈ ಇಬ್ಬಂದಿತನ ಹಾಗೂ ದಲಿತ ವಿರೋಧಿ ನಡವಳಿಕೆಗಳು ಒಳಮೀಸಲಾತಿಯನ್ನು ತಮ್ಮ ಪಕ್ಷರಾಜಕಾರಣದ ಹಿತಾಸಕ್ತಿಗನುಗುಣವಾಗಿ ದಾಳ ಮಾಡಿಕೊಳ್ಳಲು ಮುಂದಾಗಿವೆ. ಅಲ್ಲದೇ ಸರ್ಕಾರಗಳು ಖಾಸಗಿ ಕ್ಷೇತ್ರದಲ್ಲಿ ದಲಿತ ಹಾಗೂ ಹಿಂದುಳಿದವರ ಮೀಸಲಾತಿಯನ್ನು ಜಾರಿ ಮಾಡುವ ಬಗ್ಗೆ ಕಿಂಚಿತ್ತೂ ಆಸಕ್ತಿವಹಿಸಿಲ್ಲ.

ಕರ್ನಾಟಕದಲ್ಲಿ ಒಳಮೀಸಲಾತಿ ಹೋರಾಟಕ್ಕೆ ಎರಡು ದಶಕಗಳೂ ಮೀರಿದ ಇತಿಹಾಸವಿದೆ. ದುರಂತವೆಂದರೇ ಇದು ಕೇವಲ ಮಾದಿಗ ಸಮುದಾಯ ಹೋರಾಟವೆಂದು ಭಾವಿಸಿದ ಇತರೆ ದಲಿತ ಸಮುದಾಯಗಳು ಕಳೆದ ಎರಡು ದಶಕಗಳಿಂದ ಕೆಲಸಕ್ಕೆ ಬಾರದ ಪೂರ್ವಗ್ರಹಗಳಿಂದ ಪರಸ್ಪರ ವಿರೋಧವನ್ನು ಉಸಿರಾಡಿದವೆ ಹೊರತು, ಈ ವಿಚಾರದಲ್ಲಿ ಪಾರದರ್ಶಕವಾಗಿ ಮತ್ತು ಹೊಣೆಗಾರಿಕೆಯಿಂದ ನಡೆದುಕೊಳ್ಳುತ್ತಲೇ ಇಲ್ಲ. ತೀರಾ ಅವಕಾಶವಂಚಿತ ದಲಿತ ಸಮುದಾಯಗಳ ಬಗ್ಗೆ ದಲಿತ ಸಮುದಾಯಗಳಲ್ಲಿಯೇ ಕನಿಷ್ಠ ಸೌಜನ್ಯದ ಸ್ಪಂದನೆ, ಮುಕ್ತ ಮಾತುಕತೆಗಳು ಸಾಧ್ಯವಾಗಲೇ ಇಲ್ಲ. ಅದರಲ್ಲೂ ಸ್ಪೃಶ್ಯ ಜಾತಿಗಳು ಕೇವಲ ಊಹಾತ್ಮಕವಾದ ರಾಜಕೀಯ ಪ್ರೇರಿತ ಅನುಮಾನಗಳಿಗೆ ಒಳಗಾಗಿ ಒಳಮೀಸಲಾತಿಯ ವಿಚಾರ ಹಾಗೂ ಹೋರಾಟಗಳನ್ನು ನಕಾರಾತ್ಮಕವಾಗಿ ನೋಡುತ್ತಿವೆ. ಅಲ್ಲದೆ ಈ ಜಾತಿಗಳು ಅವಕಾಶಕ್ಕಾಗಿ ಮಾತ್ರ ದಲಿತತ್ವವನ್ನು ಬಳಸುತ್ತಿವೆಯೇ ಹೊರತು ತಮ್ಮ ಬದುಕಿನ ಅಥವಾ ಸಾಮಾಜಿಕ ಒಡನಾಟದಲ್ಲಿ ಅಸ್ಪೃಶ್ಯ ಜಾತಿಗಳನ್ನು ದೂರವಿಟ್ಟಿವೆ. ರಾಜಕೀಯವಾಗಿ ಈ ಸ್ಪೃಶ್ಯ ದಲಿತ ಜಾತಿಗಳ ಈ ಇಬ್ಬಂದಿತನದಿಂದಲೇ ಅಸ್ಪೃಶ್ಯ ಜಾತಿಗಳ ಸಾಮಾಜಿಕ ಆಕ್ರೋಶಕ್ಕೂ ಗುರಿಯಾಗಿವೆ. ಆದುದರಿಂದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಪ್ರಬಲವಾದ ಹೋರಾಟವನ್ನು ರೂಪಿಸಲು ಸ್ಪೃಶ್ಯ ಜಾತಿಗಳು ಮುಂದಾಗುವುದರ ಜೊತೆಗೆ ಅನವಶ್ಯಕವಾದ ಒಳಮೀಸಲಾತಿ ವಿರೋಧಿ ವಿಚಾರಗಳನ್ನು ಕೈಬಿಡುವುದು ದಲಿತ ಐಕ್ಯತೆಯ ದೃಷ್ಟಿಯಿಂದ ಗುಣಾತ್ಮಕವಾದ ನಡೆಯಾಗುತ್ತದೆ.

ದಲಿತ ವಿರೋಧಿ ರಾಜಕೀಯ ಶಕ್ತಿಗಳ ಎದುರು ಮಂಡಿಯೂರಿ ಒಳಮೀಸಲಾತಿ ಪಡೆಯುತ್ತೇವೆ ಎಂಬ ಮಾದಿಗ ಸಮುದಾಯದ ನಡೆ ಕೂಡ ಆತುರದ ತೀರ್ಮಾನವಾಗಿದೆ. ದಲಿತತ್ವವನ್ನೇ ಸಮಾಜದಿಂದ ನಿರ್ಬಂಧಿಸುವ, ಮೀಸಲಾತಿಯನ್ನೇ ಬುಡಮೇಲು ಮಾಡಲು ಹೊರಟಿರುವವರು ಒಳಮೀಸಲಾತಿ ಜಾರಿಗೆ ನೆರವಾಗುತ್ತಾರೆಂಬ ನಂಬಿಕೆಯೇ ಅಸಂಗತವಾಗಿದೆ ಎಂಬುದನ್ನು ಮಾದಿಗ ಸಮುದಾಯವು ಮನಗಾಣಬೇಕಾಗಿದೆ. ಮೇಲಾಗಿ ತೀರಾ ಅವಕಾಶವಂಚಿತ ದಲಿತ ಜಾತಿಗಳ ಪರ ನಿಲ್ಲುವುದೇ ಸಾಮಾಜಿಕ ನ್ಯಾಯ ಹಾಗೂ ಅಂಬೇಡ್ಕರ್ ಪ್ರೇರಿತ ಸಮಾನತೆಯ ದಾರಿ ಎಂಬ ಖಚಿತತೆಯೊಂದಿಗೆ ಈ ಒಳಮೀಸಲಾತಿ ಜಾರಿಗಾಗಿ ದೃಢವಾಗಿ ನಿಲ್ಲಬೇಕಾದ್ದು ನಮ್ಮೆಲ್ಲರ ನಡೆ ಹಾಗೂ ಬದ್ಧತೆಯಾಗಬೇಕಿದೆ.

ತಾತ್ವಿಕವಾಗಿ ಮತ್ತು ವೈಚಾರಿಕವಾಗಿ ಅಂಬೇಡ್ಕರ್ ಪ್ರಜ್ಞೆಯ ಮೇಲೆ ದಲಿತತ್ವವನ್ನು ಒಪ್ಪಿಕೊಂಡಿರುವ ಸಮುದಾಯಗಳು ಸಾಮಾಜಿಕವಾಗಿ ಮೀಸಲಾತಿಯಿಂದ ಸಮಾನವಾಗಿ ಬಲಗೊಂಡಿವೆಯೇ ಎಂಬ ಪ್ರಶ್ನೆಗಳನ್ನು ದಲಿತ ಚಳವಳಿ ಹಾಗೂ ಬುದ್ಧಿಜೀವಿಗಳು ಆಗಿಂದಾಗ್ಗೆ ಕೇಳಿಕೊಳ್ಳಬೇಕಿತ್ತು. ಈ ಕುರಿತು ಸಮುದಾಯಗಳ ರಾಜಕೀಯ ಹಾಗೂ ಸಾಮಾಜಿಕ ಪ್ರಗತಿಯ ಸ್ಥಿತಿಗತಿಗಳನ್ನು ಆಗಿಂದಾಗ್ಗೆ ಪರಿಶೀಲಿಸುವ ಸಮೀಕ್ಷೆಗಳನ್ನು ನಿರ್ವಹಿಸಿಬೇಕಿತ್ತು. ಈ ಬಗೆಯ ರಚನಾತ್ಮಕ ಅವಲೋಕನದ ದಾರಿಯನ್ನು ಪ್ರಜ್ಞಾಪೂರ್ವಕವಾಗಿ ಈ ಚಳವಳಿ ನಿರ್ವಹಿಸಿದ್ದರೆ ದಲಿತ ಸಮುದಾಯಗಳ ಈ ಪರಸ್ಪರ ವೈಷಮ್ಯಗಳ ಹಾಗೂ ವೈರುಧ್ಯಗಳ ಅಂತರದ ಪ್ರಮಾಣವನ್ನು ಸಕಾರಾತ್ಮಕವಾಗಿ ಕಡಿಮೆ ಮಾಡಬಹುದಿತ್ತೇನೊ!

ಇನ್ನು ದಲಿತ ಲೋಕವು ಸಮಾನತೆಯಿಂದ ಕೂಡಿರಬೇಕೆಂಬ ಆಶಯಗಳನ್ನು ಹೊಂದಿದೆಯೇ ಹೊರತು, ಈ ಸಮಾನತೆ ಎಂಬುದು ಈ ಲೋಕದ ಸಮುದಾಯಗಳ ಬದುಕಿನ ವಾಸ್ತವವಾಗಿ ಪರಿವರ್ತನೆಗೊಂಡಿಲ್ಲ. ಈ ನಿಜವನ್ನು ದಲಿತ ಹೋರಾಟಗಾರರೂ, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮರೆಮಾಡದೆ ಒಪ್ಪಿಕೊಳ್ಳಬೇಕಾಗುತ್ತದೆ. ಅಸಮಾನತೆಗೆ ಒಳಗೆ ಮತ್ತು ಹೊರಗೆ ಎಂಬ ಬೇಧವಿರಬಾರದು. ಆದ್ದರಿಂದ ಇಂತಹ ತಡೆಗೋಡೆಗಳ ಬಗ್ಗೆಯೂ ಯಾವ ಹಿಂಜರಿಕೆ ಇಲ್ಲದೆ ಮಾತಾಡಬೇಕಾಗುತ್ತದೆ. ಅಂದು ಈ ದಲಿತಲೋಕದ ಸಾಮಾಜಿಕ ಒಳ ಅಂತರ ಮತ್ತು ವೈರುಧ್ಯಗಳು ದಸಂಸಕ್ಕೆ ಚಾರಿತ್ರಿಕವಾಗಿ ಮುಖ್ಯವಾಗಿರಲಿಲ್ಲ. ಆದರೆ ಈಗ ಇವುಗಳನ್ನು ಎದುರಾಗದೆ ದಲಿತ ಚಳವಳಿ, ಸಾಹಿತ್ಯ ಹಾಗೂ ರಾಜಕೀಯ ಚಿಂತನೆ ಸಾಗುವಂತೆಯೇ ಇಲ್ಲ. ಈ ಕಾರಣದಿಂದಲೇ ಮೀಸಲಾತಿಯ ವರ್ಗೀಕರಣದ ಒತ್ತಾಯಗಳನ್ನು, ದಲಿತ ಲೋಕದೊಳಗೆ ಇನ್ನೂ ಏಳಿಗೆ ಕಾಣದೆ ಅಸ್ಪೃಶ್ಯವಾಗಿಯೇ ಉಳಿದಿರುವ ಸಮುದಾಯಗಳ ಹಕ್ಕೊತ್ತಾಯಗಳು ಎಂದೇ ನಾವು ಅರ್ಥಮಾಡಿಕೊಳ್ಳಬೇಕಿದೆ.

ಪ್ರಕಾಶ್ ಮಂಟೇದ

ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೂ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಸಮಕಾಲೀನ ಸಂಗತಿಗಳ ಬಗ್ಗೆ ಹೊಸ ನೋಟಗಳನ್ನು ನೀಡಬಲ್ಲ ಯುವ ಚಿಂತಕರು.


ಇದನ್ನೂ ಓದಿ: ಮೀಸಲಾತಿ ಮತ್ತು ಒಳಮೀಸಲಾತಿ ಎರಡೂ ಒಂದೆ..: ಬೆಟ್ಟಯ್ಯ ಕೋಟೆ ಸಂದರ್ಶನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...