‘ಅಸ್ಸಲಾಮು ಅಲೈಕುಮ್’ ಮತ್ತು ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಆದೇಶವನ್ನು ಸೋಮವಾರ, ಸೆಪ್ಟೆಂಬರ್ 14 ರಂದು ರಾಜ್ಯ ಸರ್ಕಾರ ಹೊರಡಿಸಿದೆ. ಖರಗ್ಪುರದ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಾನೋ ಅವರನ್ನು ರಾಜ್ಯ ಸಶಸ್ತ್ರ ಪಡೆಯ 4ನೇ ಬಟಾಲಿಯನ್ನ ಡೆಪ್ಯುಟಿ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ.
ಅವರ ಜಾಗಕ್ಕೆ ಚಂದನ್ನಗರ್ ಪೊಲೀಸ್ ಕಮಿಷನರೇಟ್ನ ಹೆಚ್ಚುವರಿ ಉಪ ಪೊಲೀಸ್ ಕಮಿಷನರ್ ಆಗಿದ್ದ ಪಾರ್ಥ ಘೋಷ್ ಅವರನ್ನು ನೇಮಿಸಲಾಗಿದೆ.
ಬುಷ್ರಾ ಬಾನೋ ಅವರು ನಾಗರಿಕ ಸೇವೆಗೆ ಸೇರಿದ ತಮ್ಮ ಪ್ರಯಾಣವನ್ನು ಹಂಚಿಕೊಳ್ಳುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ನಂತರ ಈ ವರ್ಗಾವಣೆ ನಡೆದಿದೆ. ವಿಡಿಯೋದಲ್ಲಿ ಅವರು “ಅಸ್ಸಲಾಮು ಅಲೈಕುಮ್”, “ಇನ್ಶಾ ಅಲ್ಲಾ” ಎಂದು ಶುಭಕೋರಿ, ಕೊನೆಯಲ್ಲಿ “ಜಜಾಕಲ್ಲಾ” ಎಂದು ಹೇಳಿ ಮಾತು ಮುಗಿಸಿದ್ದರು.
ಅಧಿಕಾರಿಯು ವಂದೇ ಮಾತರಂ ಅಥವಾ ಜೈ ಹಿಂದ್ ಎಂದು ಹೇಳಿಲ್ಲ ಎಂದು ಆರೋಪಿಸಿ ‘ಹಿಂದೂ ಲೀಗಲ್ ಫಂಡ್’ ಸರ್ಕಾರಕ್ಕೆ ದೂರು ನೀಡಿತ್ತು.
“ಭಾರತೀಯ ರಾಜ್ಯವನ್ನು ಪ್ರತಿನಿಧಿಸುವ ಸೇವೆಯಲ್ಲಿರುವ ಅಧಿಕಾರಿಯು ತಟಸ್ಥತೆಯನ್ನು ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸಂವಹನದಲ್ಲಿ ರಾಷ್ಟ್ರೀಯ ಅಭಿವ್ಯಕ್ತಿಗಳನ್ನು ಬಳಸಬೇಕು” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಸಂಸ್ಥೆಯು, ಐಪಿಎಸ್ ಅಧಿಕಾರಿ ವಿರುದ್ಧ ತನಿಖೆಗೆ ಆಗ್ರಹಿಸಿತ್ತು.
ತಮ್ಮ ಪ್ರಯಾಣದ ಅನುಭವ ಹಂಚಿಕೊಂಡ ಐಪಿಎಸ್ ಬುಷ್ರಾ ಬಾನೋ
ಐಪಿಎಸ್ ಬುಷ್ರಾ ಬಾನೋ ಅವರ ವಿಡಿಯೋ ಮುಖ್ಯವಾಗಿ ಸೌದಿ ಅರೇಬಿಯಾದ ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಭಾರತದ ಅತ್ಯಂತ ಗೌರವಾನ್ವಿತ ಸರ್ಕಾರಿ ಹುದ್ದೆಗೆ ತಲುಪಿದ ಅವರ ಪ್ರಯಾಣದ ಕುರಿತಾಗಿತ್ತು. ಅಧ್ಯಯನ ಸಾಮಗ್ರಿಗಳು, ಟೆಸ್ಟ್ ಸರಣಿಗಳು ಮತ್ತು ಗ್ರಂಥಾಲಯದ ಸೌಲಭ್ಯವನ್ನು ಒದಗಿಸಿ ನೆರವಾದ ಎಎಂಯು ವಸತಿ ತರಬೇತಿ ಅಕಾಡೆಮಿಗೆ ಅವರು ಶ್ರೇಯಸ್ಸು ಸಲ್ಲಿಸಿದ್ದರು.
ಅವರು ಪಶ್ಚಿಮ ಬಂಗಾಳ ಕೆಡರ್ನ 2021 ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರ ಮೊದಲ ಪೋಸ್ಟಿಂಗ್ ಹೂಗ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್ (ಎಎಸ್ಪಿ) ಆಗಿತ್ತು. ಈ ವರ್ಷದ ಜೂನ್ನಲ್ಲಿ ಅವರಿಗೆ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಬಡ್ತಿ ನೀಡಲಾಗಿತ್ತು. ಪ್ರಸ್ತುತ ಖರಗ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.


