Homeಮುಖಪುಟಸುಧಾಕರ್‌ v/s ಶ್ರೀರಾಮುಲು : ಕೊರೋನಾ ಎಮರ್ಜೆನ್ಸಿ ನಡುವೆ ಸ್ವಪ್ರತಿಷ್ಠೆಯೇ ಹೆಚ್ಚಾಯ್ತಾ ಸಚಿವರಿಗೆ?

ಸುಧಾಕರ್‌ v/s ಶ್ರೀರಾಮುಲು : ಕೊರೋನಾ ಎಮರ್ಜೆನ್ಸಿ ನಡುವೆ ಸ್ವಪ್ರತಿಷ್ಠೆಯೇ ಹೆಚ್ಚಾಯ್ತಾ ಸಚಿವರಿಗೆ?

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸಾವಿರಾರು ಕೋಟಿ ರೂ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಳ್ಳುವ ಜವಾಬ್ದಾರಿಯನ್ನೂ ರಾಜ್ಯ ಸರ್ಕಾರ ಡಾ|ಕೆ. ಸುಧಾಕರ್ ಅವರಿಗೆ ನೀಡಿದೆ ಎನ್ನಲಾಗುತ್ತಿದೆ.

- Advertisement -
- Advertisement -

ಇಡೀ ವಿಶ್ವದ ಎದುರು ಕೊರೋನಾ ಎಂಬ ಮಾರಣಾಂತಿಕ ವೈರಸ್ ಸೃಷ್ಟಿಸಿರುವ ಮೃತ್ಯಕೂಪ ಊಹೆಗೂ ನಿಲುಕದಷ್ಟು ದೊಡ್ಡದಾಗಿ ಬೆಳೆದಿದೆ. ಚೀನಾ ದೇಶದ ವುಹಾನ್ ಎಂಬ ಪಟ್ಟಣದ ಮಾಂಸದ ಅಂಗಡಿಯೊಂದರ ಬಳಿ ಸೃಷ್ಟಿಯಾದ ಈ ವೈರಸ್ ಜಗತ್ತಿನಾದ್ಯಂತ ಸುಮಾರು 35,000 ಸಾವಿರ ಜೀವಗಳನ್ನು ಆಹುತಿ ತೆಗೆದುಕೊಂಡಿದೆ, 7 ಲಕ್ಷ ಜನರಿಗೆ ಈ ಸೋಂಕು ವ್ಯಾಪಿಸಿದೆ ಹಾಗೂ 186 ರಾಷ್ಟ್ರಗಳಿಗೆ ಸಾವಿನ ಬೆದರಿಕೆ ಒಡ್ಡಿದೆ ಎಂದರೆ ಈ ವೈರಸ್ ಹುಟ್ಟುಹಾಕಿರುವ ಭೀತಿಯನ್ನು ನೀವೆ ಊಹಿಸಬಹುದು.

ಈ ಹಿಂದೆಯೂ ಜಗತ್ತು ಇದ್ದಕಿಂತ ಮಾರಣಾಂತಿಕ ವೈರಸ್‌ ಅನ್ನು ಕಂಡಿದೆ. ಆದರೆ, ಜಗತ್ತನ್ನು ಈ ಪರಿ ಬಿಡದಂತೆ ಕಾಡಿದ ಮತ್ತೊಂದು ವೈರಸ್ ಇರಲಿಕ್ಕಿಲ್ಲ ಎನ್ನುತ್ತಿದೆ ವೈಜ್ಞಾನಿಕ ಜಗತ್ತು.

ಜನವರಿ ತಿಂಗಳಲ್ಲೇ ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೋನಾ ವೈರಸ್ ಹಾವಳಿ ಭಾರತಕ್ಕೆ ಅಷ್ಟಾಗಿ ಬರಲು ಸಾಧ್ಯವಿಲ್ಲ ಎಂದೇ ಭಾವಿಸಲಾಗಿತ್ತು. ಇದೇ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ವಹಿಸದೆ ಅಸಡ್ಡೆ ತೋರಿದ್ದವು. ಆದರೆ, ಊರ ಸುಟ್ಟ ಕಿಡಿ ಇಂದು ಮನೆಗೂ ವ್ಯಾಪಿಸಿದೆ.

ಅಧಿಕಾರಸ್ಥರ ಅಸಡ್ಡೆಗೆ ಭಾರತದಲ್ಲೂ ಕೊರೋನಾ ಸುಮಾರು 50 ಜನರನ್ನು ಬಲಿ ಪಡೆದಿದೆ. ಮೊದಲ ಕೊರೋನಾ ಸಾವು ಕರ್ನಾಟಕದಲ್ಲೇ ದಾಖಲಾಗಿತ್ತು ಎಂಬುದು ಉಲ್ಲೇಖಾರ್ಹ. ಇನ್ನೂ ಸುಮಾರು 2000ಕ್ಕೂ ಹೆಚ್ಚು ಜನರಿಗೆ ಈ ಸೋಂಕು ಹರಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಘೋಷಿಸಲಾದ ಲಾಕ್ಡೌನ್ ನಡುವೆಯೂ ದೇಶದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದರೆ ಪರಿಸ್ಥಿತಿಯನ್ನು ಊಹಿಸಬಹುದು.
ಇಂತಹ ಸಂದರ್ಭದಲ್ಲಿ ಆಡಳಿತರೂಢ ಪಕ್ಷದವರು ತುಸು ಹೆಚ್ಚೇ ಎಂಬಂತೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ರಾಜಕೀಯವನ್ನು ಬದಿಗಿಟ್ಟು ಜನರನ್ನು ಈ ಮಹಾಮಾರಿಯಿಂದ ಕಾಪಾಡಬೇಕಾದ ತುರ್ತು ಅಗತ್ಯವಿದೆ. ಆದರೆ, ಜನ ಜೀವ ಭಯದಲ್ಲಿ ದಿನದೂಡುತ್ತಿರುವ ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ರಾಜ್ಯದ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ಇಬ್ಬರು ಸಚಿವರುಗಳ ತಮ್ಮ ಸ್ವ ಪ್ರತಿಷ್ಠೆಗಾಗಿ ಬೀದಿಕಾಳಗಕ್ಕಿಳಿದಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಅಪಕ್ವತೆಯನ್ನು ಬಟಾಬಯಲು ಮಾಡಿದ್ದಾರೆ.

ಶ್ರೀರಾಮುಲು v/s ಸುಧಾಕರ್ ಅಧಿಕಾರದ ಕಿತ್ತಾಟ

ಮಾರ್ಚ್ ಮೊದಲ ವಾರದವರೆಗೆ ರಾಜ್ಯದಲ್ಲಿ ಎಲ್ಲವೂ ಸರಿಯಾಗೇ ಇತ್ತು. ಚೀನಾ, ಸ್ಪೈನ್ ಇಟಲಿಯಲ್ಲಿ ಸಾಲು ಸಾಲು ಜನರ ಹೆಣ ಬೀಳಿಸಿದ್ದ ಕೊರೋನಾ ಭಾರತದಲ್ಲಿ ಆಗಿನ್ನು ತನ್ನ ಖಾತೆಯನ್ನು ತೆರೆದಿರಲಿಲ್ಲ. ಹೀಗಾಗಿ ರಾಜ್ಯ ಮತ್ತು ರಾಷ್ಟ್ರ ತಣ್ಣಗೇ ಇತ್ತು. ಆರೋಗ್ಯ ಸಚಿವ ಶ್ರೀರಾಮುಲು ಸಹ ತನ್ನ ಮಗಳ ಮದುವೆಯಲ್ಲಿ ತಲ್ಲೀನರಾಗಿದ್ದರು.

ಆದರೆ, ಮಾರ್ಚ್ 12 ರಂದು ಕಲಬುರ್ಗಿಯಲ್ಲಿ 76 ವರ್ಷದ ವೃದ್ಧ ಕೊರೋನಾಗೆ ದೇಶದಲ್ಲೇ ಮೊದಲ ವ್ಯಕ್ತಿಯಾಗಿ ಸಾವಿಗೀಡಾಗುತ್ತಿದ್ದಂತೆ ರಾಜ್ಯ ಮಾತ್ರವಲ್ಲ ಇಡೀ ದೇಶ ಎಚ್ಚೆತ್ತಿತ್ತು. ಆಗಿನ್ನೂ ನಿದ್ದೆಯಿಂದ ಎದ್ದಿದ್ದ ಎರಡೂ ಸರ್ಕಾರಗಳು ಕೊರೋನಾ ಹರಡದಂತೆ ತಡೆಯಲು ನಾನಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾದವು. ಆದರೆ, ಆಗಲೂ ಸಹ ಸಚಿವ ಶ್ರೀರಾಮುಲು ಮಾತ್ರ ಇನ್ನೂ ಎಚ್ಚೆತ್ತಿರಲಿಲ್ಲ.

ಮಗಳ ಮದುವೆ ಮೂಡ್‌ನಲ್ಲೇ ಇದ್ದ ಆರೋಗ್ಯ ಸಚಿವ ಶ್ರೀರಾಮುಲು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತಮ್ಮ ಮನೆಗೆ ಕರೆದು ಕೆಲ ಸಭೆ ನಡೆಸಿ ಸೂಚನೆ ನೀಡುವ ಗಿಮಿಕ್ ಮಾಡಿದರಾದರೂ ಸರಿಯಾದ ಅಂಕಿಅಂಶಗಳಿಲ್ಲದೆ ಸುದ್ದಿಗೋಷ್ಠಿಗಳಲ್ಲಿ ಪೇಚಿಗೆ ಸಿಲುಕಿ ಆಡಳಿತ ಸರ್ಕಾರವನ್ನೂ ಮುಜುಗರಕ್ಕೆ ಒಳಪಡಿಸಿದ್ದ ಘಟನೆಗಳು ನಡೆದಿದ್ದವು. ಅಲ್ಲದೆ, ಗಂಭೀರ ವಿಚಾರದ ಕುರಿತ ಶ್ರೀರಾಮುಲು ಅವರ ಈ ಮಟ್ಟದ ಅಸಡ್ಡೆ ಸ್ವತಃ ಸಿಎಂ ಯಡಿಯೂರಪ್ಪ ಅವರ ಕೆಂಗಣ್ಣಿಗೂ ಗುರಿಯಾಗಿತ್ತು.

ಆದರೆ, ಇಂತಹದ್ದೇ ಸಂದರ್ಭಕ್ಕೆ ಕಾದಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ|ಕೆ. ಸುಧಾಕರ್ ಸಚಿವ ಶ್ರೀರಾಮುಲು ಅವರ ಅನುಪಸ್ಥಿತಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರದಲ್ಲಿ ತನ್ನ ಮೂಗು ತೂರಿಸಿದ್ದರು. ಅಷ್ಟೇ ಅಲ್ಲ ರಾಜ್ಯದ ಉದ್ದಗಲಕ್ಕೂ ಓಡಾಡುವ ಮೂಲಕ ತಾನೇ ಆರೋಗ್ಯ ಸಚಿವ ಎಂಬಂತೆ ಮಾಧ್ಯಮಗಳ ಎದುರು ಸಾಕಷ್ಟು ಸ್ಕೋಪ್ ಸಹ ತೆಗೆದುಕೊಂಡಿದ್ದರು. ಈ ಘಟನೆ ಇದೀಗ ಇಬ್ಬರು ಸಚಿವರ ಪ್ರತಿಷ್ಠೆಗೆ ಕಾರಣವಾಗಿದೆ.

ಬಡ್ತಿ ಪಡೆದ ಕೆ. ಸುಧಾಕರ್

ಆಪರೇಷನ್ ಕಮಲದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಮೂಲಕ ಮೊದಲ ಬಾರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಪಡೆದಿದ್ದ ಡಾ|ಕೆ. ಸುಧಾಕರ್ ಅವರಿಗೆ ಕೊರೋನಾ ಕುರಿತ ಶ್ರೀರಾಮಲು ಅವರ ಅಸಡ್ಡೆ ಲಾಭವಾಯಿತು ಮತ್ತು ಜನರ-ಮಾಧ್ಯಮದ ಎದುರು ಒಳ್ಳೆಯ ಹೆಸರು ಗಳಿಸಲೂ ಅನುಕೂಲವಾಯಿತು.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದಂತೆ ರಾಜ್ಯದ ಉದ್ದಗಲಕ್ಕೂ ಓಡಾಡಿದ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಎಲ್ಲಾ ಜಿಲ್ಲೆಗಳಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು ಅಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಲು ಆರಂಭಿಸಿದರು. ಪ್ರತಿದಿನ ಸಂಜೆ ಪತ್ರಿಕಾಗೋಷ್ಠಿ ನಡೆಸಲು ಮುಂದಾದರು. ಒಂದರ್ಥದಲ್ಲಿ ತಾವೇ ಆರೋಗ್ಯ ಇಲಾಖೆ ಸಚಿವ ಎಂಬಂತೆ ಬಿಂಬಿತವಾಗಲಾರಂಭಿಸಿದರು.

ಸಚಿವ ಸುಧಾಕರ್ ಅವರ ಕೆಲಸ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೂ ಬಂದು ಮೆಚ್ಚುಗೆಗೂ ಪಾತ್ರವಾಗಿತ್ತು. ಮಾಧ್ಯಮಗಳೂ ಸಹ ಸುಧಾಕರ್ ಕೆಲಸಕ್ಕೆ ಮೆಚ್ಚುಗೆಯನ್ನು ತೋರಿದ್ದವು. ಇಷ್ಟು ಸಾಕಿತ್ತು ಶ್ರೀರಾಮುಲು ಕಣ್ಣು ಕೆಂಪಾಗಿಸಲು.

ಕೊರೋನಾ ಟಾಸ್ಕ್ ಫೋರ್ಸ್‌ ಬಯಲು ಮಾಡಿತು ಇವರ ಒಣ ಜಗಳ

ಕೊರೋನಾ ವಿಚಾರದಲ್ಲಿ ಸಚಿವ ಸುಧಾಕರ್ ಅವರ ಕೆಲಸಕ್ಕೆ ಮಣೆ ಹಾಕಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯ ಇಲಾಖೆಯಲ್ಲಿ ಅವರಿಗೂ ಅಧಿಕಾರವನ್ನು ಹಂಚಿಕೆ ಮಾಡಿದ್ದರು. ಅಲ್ಲದೆ, ಕೊರೋನಾ ನಿಯಂತ್ರಣಕ್ಕೆ ರಚಿಸಲಾಗಿದ್ದ “ಕೊರೋನಾ ಟಾಸ್ಕ್ ಫೋರ್ಸ್‌” ಜವಾಬ್ದಾರಿಯನ್ನು ಸುಧಾಕರ್‌ಗೆ ನೀಡಲಾಯಿತು. ಟಾಸ್ಕ್ ಫೋರ್ಸ್‌ ಬೆಂಗಳೂರು ಜವಾಬ್ದಾರಿಯನ್ನು ಸುಧಾಕರ್‌ಗೂ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲುಗೂ ಹಂಚಿಕೆ ಮಾಡಲಾಗಿತ್ತು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ಸರಿ ಸಮಾನವಾಗಿ ಅಧಿಕಾರ ಹಂಚಿದ್ದಕ್ಕೆ ರಾಮುಲು ಸಿಎಂ ಬಿಎಸ್‌ವೈ ಬಳಿ ಗರಂ ಆಗಿದ್ದರು. ಸುಧಾಕರ್‌ಗೆ ನನ್ನ ಇಲಾಖೆಯಲ್ಲಿ ಸರಿಸಮಾನ ಅಧಿಕಾರ ನೀಡಿರುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಹೀಗಾಗಿ ಟಾಸ್ಕ್ ಫೋರ್ಸ್‌ ಕುರಿತ ಆದೇಶವನ್ನು ಮಾರ್ಪಾಡು ಮಾಡುವಂತೆ ಸಿಎಂಗೆ ಶ್ರೀರಾಮುಲು ಒತ್ತಡ ಹಾಕಿದ್ದರು.

ಮತ್ತೊಂದೆಡೆ ಈ ಕುರಿತು ಮಾಧ್ಯಮಗಳಿಗೆ ಬಹಿರಂಗವಾಗಿಯೇ ಪ್ರತಿಕ್ರಿಯೆ ನೀಡಿದ್ದ ಡಾ| ಸುಧಾಕರ್, “ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ. ಬೆಂಗಳೂರಿನ ಜವಾಬ್ದಾರಿಯನ್ನು ನನಗೆ ಹಾಗೂ ಇತರೆ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಿ ಸಿಎಂ ಆದೇಶಿಸಿದ್ದಾರೆ.
ಆದರೆ, ಟಾಸ್ಕ್ ಫೋರ್ಸ್ ನಿರ್ವಹಣೆ ಎಂಬುದು ಜವಾಬ್ದಾರಿಯುತ ಕೆಲಸವಾಗಿದ್ದು, ಇದನ್ನು ಒಬ್ಬರೇ ಮಾನಿಟರ್ ಮಾಡುವ ಹಾಗಿರಬೇಕು. ಯಾರಿಗಾದ್ರು ಒಬ್ಬರಿಗೆ ಜವಾಬ್ದಾರಿ ಇದ್ದರೆ ಅವರು ಉತ್ತರದಾಯಿತ್ವರಾಗಬೇಕು. ಜವಾಬ್ದಾರಿಗಳು ಹರಿದು ಹಂಚಿ ಹೋಗುವುದರಿಂದ ಗೊಂದಲಗಳೇ ಅಧಿಕ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಡೀ ಟಾಸ್ಕ್ ಫೋರ್ಸ್‌ ಅಧಿಕಾರವನ್ನು ತನಗೇ ನೀಡಬೇಕು ಎಂಬಂತೆ ವರ್ತಿಸತೊಡಗಿದರು.

ಇದೀಗ ಈ ಟಾಸ್ಕ್ ಫೋರ್ಸ್‌ ರಾಜ್ಯದಲ್ಲಿ ನಿರ್ವಹಿಸುತ್ತಿರುವ ಕೆಲಸ ಏನು? ಸೋಂಕು ಹರಡದಂತೆ ತಡೆಯುವಲ್ಲಿ ಈ ಫೋರ್ಸ್ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ. ಅಲ್ಲದೆ, ಕೆಲಸ ಮಾಡುವ ವಿಚಾರದಲ್ಲಿ ಈ ಇಬ್ಬರೂ ಸಚಿವರ ನಡುವೆ ಯಾವುದೇ ತಾಳ ಮೇಳ ಇದ್ದಂತೆಯೂ ಕಾಣಿಸುತ್ತಿಲ್ಲ. ಆದರೆ, ಪಕ್ಷದಲ್ಲಿ ಹಿರಿಯನಾದ ತನನ್ನು ವಲಸೆ ಸಚಿವ ಸುಧಾಕರ್ ಸೈಡ್‌ಲೈನ್ ಮಾಡಿರುವ ಸಿಟ್ಟು ರಾಮುಲು ಅವರ ವರ್ತನೆಯಲ್ಲಿ ಎದ್ದು ಕಾಣಿಸುತ್ತಿದೆ.

ಈ ನಡುವೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಳ್ಳುವ ಜವಾಬ್ದಾರಿಯನ್ನೂ ಸಹ ರಾಜ್ಯ ಸರ್ಕಾರ ಡಾ|ಕೆ. ಸುಧಾಕರ್ ಅವರಿಗೇ ನೀಡಿದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ಎಲ್ಲಾ ಪ್ರಸಂಗಗಳನ್ನೂ ಬಿಜೆಪಿ ನಾಯಕರ ಒಣ ಪ್ರತಿಷ್ಠೆಯ ಕಿತ್ತಾಟವನ್ನು ಬಟಾಬಯಲು ಮಾಡಿದೆ.

ಒಂದೆಡೆ ಕೊರೋನಾ ಒಂದೊಂದೇ ದೇಶಗಳನ್ನು ಅಪೋಷನ ತೆಗೆದುಕೊಳ್ಳುತ್ತಿದೆ. ವಿಶ್ವದಲ್ಲಿ ಅತ್ಯುತ್ತಮ ಆರೋಗ್ಯ ಸೌಲಭ್ಯ ಹೊಂದಿರುವ ಅಮೆರಿಕದಂತಹಾ ಅಮೆರಿಕಾ ಸಹ ಕೊರೋನಾ ಎದುರು ಮಂಡಿಯೂರಿ ಕುಳಿತಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ನಮ್ಮದೇ ರಾಜ್ಯದಲ್ಲಿನ ಇಬ್ಬರು ಸಚಿವರುಗಳು ಅಧಿಕಾರಕ್ಕಾಗಿ ಹೀಗೆ ಕಿತ್ತಾಟ ನಡೆಸುತ್ತಿರುವುದು ವಿಪರ್ಯಾಸವೇ ಸರಿ. ಇಷ್ಟಕ್ಕೂ ಇದು ಅಧಿಕಾರ ಮುಖ್ಯವೇ? ಅಥವಾ ಜೀವ ಮುಖ್ಯವೇ? ಎಂದು ಯೋಚಿಸಬೇಕಾದ ಸಂದಿಗ್ಧ ಕಾಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...