Homeಅಂಕಣಗಳುಡೊಳ್ಳಿನ ಪದಗಳ `ಹುಡುಗಿಯರ’ ಹಾಡಿಕೆಗೆ ಘನತೆ ತಂದ ಸುಮಿತ್ರ ಮುಗಳಿಹಾಳ

ಡೊಳ್ಳಿನ ಪದಗಳ `ಹುಡುಗಿಯರ’ ಹಾಡಿಕೆಗೆ ಘನತೆ ತಂದ ಸುಮಿತ್ರ ಮುಗಳಿಹಾಳ

- Advertisement -
- Advertisement -

ಬಿ.ಎ, ಬಿ.ಎಡ್ ಮಾಡಿಯೂ ಶಿಕ್ಷಕಿ ಆಗಬೇಕೆನ್ನುವ ಕನಸಿಗಿಂತ ಪಿ.ಎಸ್.ಐ ಆಗಬೇಕೆಂದು ಹುಡುಗಿ ಕನಸು ಕಟ್ಟುತ್ತಾಳೆ. ಅದಕ್ಕಾಗಿ ಕೋಚಿಂಗ್ ಹೋಗುತ್ತಾಳೆ. ಕಷ್ಟಪಟ್ಟು ಓದುತ್ತಾಳೆ. ತುಂಬಾ ಕಡಿಮೆ ಅಂತರದಲ್ಲಿ ಆಯ್ಕೆ ತಪ್ಪಿಹೋಗುತ್ತದೆ. ಎರಡು ಮೂರು ಬಾರಿ ಹೀಗೆಯೇ ಆಗುತ್ತದೆ. ಕೊನೆಗೆ ಈ ಹುಡುಗಿ ಸರಕಾರಿ ನೌಕರಿಗೆ ಹೋಗಬಾರದೆಂದು ನಿರ್ಧರಿಸುತ್ತಾಳೆ.

ಈ ಹುಡುಗಿ ಆ ಹೊತ್ತಿಗಾಗಲೆ ಡೊಳ್ಳಿನ ಹಾಡಿಕೆಯಲ್ಲಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯಳಾಗಿದ್ದಳು. ಹಾಗಾಗಿ ತನ್ನ ಡೊಳ್ಳಿನ ಹಾಡಿಕೆ ಮೇಳಕ್ಕೆ ಮತ್ತಷ್ಟು ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾಳೆ. ಇದೀಗ ಹದಿನೈದಕ್ಕಿಂತ ಹೆಚ್ಚಿನ ಡೊಳ್ಳಿನ ಮೇಳಗಳಿಗೆ ಗುರುವಾಗಿದ್ದಾರೆ. ಈತನಕ ನಾಲ್ಕೈದು ಸಾವಿರಕ್ಕೂ ಹೆಚ್ಚು ಹಾಡಿಕೆ ಪ್ರದರ್ಶನ ಕೊಟ್ಟಿದ್ದಾರೆ. ಕನಿಷ್ಠ ತಿಂಗಳಿಗೆ ಒಂದು ಲಕ್ಷದಷ್ಟು ಆದಾಯವಿದೆ.

ಯೂಟೂಬಲ್ಲಿ ಒಂದೊಂದು ಹಾಡಿಗೆ ನಾಲ್ಕೈದು ಲಕ್ಷ ವೀಕ್ಷಣೆಗಳಿವೆ. ಒಟ್ಟಾರೆ ಇವರ ಹಾಡಿಕೆಗೆ ಮೂರು ಕೋಟಿಗಿಂತ ಹೆಚ್ಚು ವೀಕ್ಷಣೆಗಳಾಗಿವೆ. ಅಂತೆಯೇ ನೂರಾರು ಹುಡುಗಿಯರು ಡೊಳ್ಳಿನ ಹಾಡಿಕೆಗೆ ಬರಲು ಪ್ರೇರಣೆಯಾಗಿದ್ದಾರೆ. ವಾಗ್ವಾದಕ್ಕೆ ನಿಂತರೆ ಗಂಡಸರ ಮೇಳಗಳು ಬೆದರುತ್ತವೆ. ಆ ಹುಡುಗಿಯೇ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಮುಗಳಿಹಾಳದ ಹಾಲುಮತದ ಯಲ್ಲಪ್ಪ-ಯಲ್ಲವ್ವರ ನಾಲ್ಕನೆ ಮಗಳು ಸುಮಿತ್ರ.

ಕುರುಬ ಸಮುದಾಯದ ಹಾಲುಮತದ ಪ್ರಸಾರಕ್ಕಾಗಿ ಹುಟ್ಟಿಕೊಂಡ ಡೊಳ್ಳಿನ ಹಾಡುಗಳು ಜನಪದ ಗೀತ ಸಂಪ್ರದಾಯದಲ್ಲಿ ವಿಶಿಷ್ಟವಾಗಿವೆ. ಉತ್ತರ ಕರ್ನಾಟಕದಿಂದ ಮಹಾರಾಷ್ಟ್ರದವರೆಗಿನ ಹಳ್ಳಿಗಳಲ್ಲಿ ಡೊಳ್ಳಿನ ಹಾಡುಗಳಿಗೆ ಪ್ರಮುಖ ಸ್ಥಾನವಿದೆ. ಡೊಳ್ಳಿನ ಹಾಡುಗಳನ್ನು ಬರೆಯುವ ನೂರಾರು ಕವಿಗಳಿದ್ದಾರೆ.

ಕಳೆದ ಒಂದೆರಡು ದಶಕದಿಂದ ಗಂಡಸರ ಪಾರಮ್ಯವೇ ಆಗಿದ್ದ ಡೊಳ್ಳಿನ ಹಾಡಿಕೆಗೆ ಮಹಿಳೆಯರ ಪ್ರವೇಶವಾಗಿದೆ. ಎಂಬತ್ತರ ದಶಕದಲ್ಲಿ ಬಾಗಲಕೋಟೆ ಜಿಲ್ಲೆಯ ಯಲ್ಲಟ್ಟಿಯ ಅಂಧ ಅಜ್ಜಿ ನೀಲವ್ವ ಬಿರಡಿ ಡೊಳ್ಳಿನ ಹಾಡುಗಳನ್ನು ಹಾಡುತ್ತಿದ್ದರು. ಇದರ ಪ್ರಭಾವ ಎಂಬಂತೆ ಮಣ್ಣೂರಿನ ರೇಣುಕಾ ಮತ್ತು ಅಕ್ಷತಾ ಹಾಡಿಕೆಗೆ ಬಂದರು. ಇಲ್ಲಿಂದ ಹುಡುಗಿಯರು ಡೊಳ್ಳಿನ ಹಾಡಿಕೆಗೆ ಬರುವಿಕೆ ಶುರುವಾಯಿತು. ಈಗ ಆರೇಳು ವರ್ಷದ ಮಕ್ಕಳಿಂದಿಡಿದು ಇಪ್ಪತ್ತೈದರ ವಯೋಮಾನದ ಹುಡುಗಿಯರತನಕ ಐವತ್ತಕ್ಕೂ ಹೆಚ್ಚು ಹುಡುಗಿಯರು ಡೊಳ್ಳಿನ ಪದಗಳನ್ನು ಹಾಡುತ್ತಿದ್ದಾರೆ. ಇದೊಂದು ಹೊಸ ಟ್ರೆಂಡ್ ಆಗಿ ಬದಲಾಗಿದೆ.

ಸುಮಿತ್ರ ಮುಗಳಿಹಾಳ ಡೊಳ್ಳಿನ ಹಾಡಿಕೆಗೆ ಬರುವ ಮುನ್ನ ರೇಣುಕಾ ಮೀನಾಕ್ಷಿ ಮೊದಲಾದವರು ಮೇಷ್ಟ್ರುಗಳು ಬರೆದ ಹಾಡುಗಳನ್ನು ಹಾಡುತ್ತಿದ್ದರಷ್ಟೆ. ವಾಗ್ವಾದ ಚರ್ಚೆ ಬಂದಾಗ ಪದಕಟ್ಟಿದ ಮೇಷ್ಟ್ರು ಚರ್ಚೆ ಸಂವಾದ ಮಾಡುತ್ತಿದ್ದರೆ ವಿನಃ ಹಾಡಿದ ಹುಡುಗಿಯರು ಚರ್ಚೆಸುತ್ತಿರಲಿಲ್ಲ. ಸುಮಿತ್ರ ಹಾಡುತ್ತಾ ಹಾಡುತ್ತಾ, ಹಾಡಿನ ಸಾಹಿತ್ಯಕ್ಕೆ ಪೂರಕವಾದ ಹಾಲುಮತ ಪುರಾಣ ಮತ್ತು ಸಂಶೋಧನೆಗಳನ್ನು ಓದಲು ತೊಡಗುತ್ತಾಳೆ. ಹಾಗಾಗಿ ರಾಮಾಯಣ, ಮಹಾಭಾರತ, ಹಾಲುಮತ ಪುರಾಣ, ಕುರುಬ ಸಮುದಾಯದ ಅಧ್ಯಯನ, ವಚನಕಾರರ, ದಾಸರ, ತತ್ವಪದಕಾರರ ಪುಸ್ತಕಗಳ ಸಂಗ್ರಹ ಸುಮಿತ್ರಾ ಅವರಲ್ಲಿದೆ.

ಪ್ರತಿಬಾರಿ ಹೊಸ ಪದ ಕಟ್ಟುವಾಗ ಹಾಲುಮತದ ಪುರಾಣ ಮುಂತಾದ ಪುಸ್ತಕಗಳನ್ನು ಅಧ್ಯಯನ ಮಾಡುತ್ತಾರೆ. ಹೀಗೆ ಸಾಹಿತ್ಯದ ಓದಿನಿಂದ ಸ್ವತಃ ಡೊಳ್ಳಿನ ಪದಗಳನ್ನು ರಚಿಸುತ್ತಾಳೆ. ಹೀಗಾಗಿ ತಾನೇ ಸ್ವತಃ ರಚಿಸಿದ ಹಾಡನ್ನು ಹಾಡುತ್ತಿದ್ದರಿಂದ ಯಾರೇ ವಾಗ್ವಾದ ಮಾಡಿದರೂ ಅದಕ್ಕೆ ಸುಮಿತ್ರಾಳೇ ಉತ್ತರ ಕೊಡತೊಡಗುತ್ತಾಳೆ. ಸುಮಿತ್ರ ಅವರ ಈ ವಾಗ್ವಾದದ ಮಾದರಿಯ ಪ್ರಭಾವ ಈಗಿನ ಹುಡುಗಿಯರಲ್ಲಿ ಕಾಣುತ್ತಿದೆ.

“ಅಜ್ಜನು ಡೊಳ್ಳಿನ ಪದಗಳನ್ನು ಹಾಡತಿದ್ರು. ಕೌಜಲಗಿ ನಿಂಗಮ್ಮ ನಮ್ಮಜ್ಜನ್ನ ಕರಕೊಂಡು ಹಾಡತಿದ್ದರಂತೆ, ಹಂಗಾಗಿ ನಮ್ಮ ಅಪ್ಪ ಡೊಳ್ಳಿನ ಪದ ಹಾಡಾಕ ಹತ್ತಿದ್ರು. ಹಿಂಗಾಗಿ ಮೊದಲಿನಿಂದ್ಲೂ ಮನಿಯಾಗ ಹಾಡಿಕಿ ಸಂಪ್ರದಾಯವಿತ್ತು. ನಾನು ಸಣ್ಣಾಕಿ ಇದ್ದಾಗ ಹಾಡಿಕೆ ಕೇಳೋದು ನೋಡೋದು ಮಾಡತಿದ್ದೆ. ನಾನು ಹಾಡ್ತೀನಿ ಅಂದ್ರ, ಸಮಾಜದಲ್ಲಿ ಹಂಗ್ ಅಂತಾರ ಹಿಂಗ್ ಅಂತಾರ ಗಂಡಸರ ಮಧ್ಯೆ ನಿಂತು ಹಾಡಬಾರದು ಅನ್ತಿದ್ರು. ಒಟ್ಟ ಡೊಳ್ಳಿನ ಪದದ ಸಪ್ಪಳ ಕೇಳತಂದ್ರ ರಾತ್ರೆಲ್ಲ ನಿದ್ದೆ ಅತ್ತಾಂಗಿಲ್ಲರೀ..ಅದು ಬಂದ್ ಆಗೋಮಟ ಮನಿಯಾಗ ಎದ್ದ ಕುಂದರತಿದ್ದೆ. ದಾಟಿಗಳು ತಲೀಯಾಗ ಉಳೀತಿತ್ತು.

ನೀ ಹಿಂಗ್ ಹಾಡವ್ವಾ, ಹಿಂಗ್ ದಾಟಿ ಬರಕೋ ಅಂತ ಯಾರೂ ಕಲಿಸಿಲ್ಲ. ಅವ್ವ ಸಣ್ಣಾಕಿದ್ದಾಗ ರಾಮಾಯಣ ಮಹಾಭಾರತದ ಕತಿ ಹೇಳತಿದ್ಲು ಅದು ನನ್ನ ತಲಿಯಾಗಿತ್ತು. ನಾನು ಹಾಡೋದಕ್ಕ ಕಾಕಾಗಳು ವಿರೋಧಿಸಿದ್ರು, ಊರಾಗ ವಿರೋಧಿಸಿದ್ರು, ಬಾಳಂದ್ರ ಬಾಳ ಕಾಡಿದ್ರು. ಅದನ್ನ ಹೇಳಿದ್ರ ಕಣ್ಣಾಗ ನೀರು ಬರ್ತಾವ. ಹೆಣ್ಣ ಆದರೂ ಒಂದು ಗಂಡಿನ ರೂಪದಲ್ಲಿ ತೋರಿಸಬೇಕಪಾ ಅಂತೇಳಿ ಎಲ್ಲರ ವಿರೋಧ ಮೀರಿ ಇಲ್ಲಿಗೆ ಬಂದು ನಿಂತೀನಿ” ಎಂದು ಸುಮಿತ್ರ ಹಾಡಿಕೆ ಪಯಣ ನೆನೆಯುತ್ತಾರೆ.

ಮಾಳಿಂಗರಾಯನ ಇತಿಹಾಸದಲ್ಲಿ ಎದುರುಬದುರು ಹಾಡುವಾಗ ಗಂಡಿನವರು ಮಾಳಿಂಗರಾಯನ ಪವಾಡ ಹೇಳಿದರೆ, ಇವರು ಮಾಳಿಂಗರಾಯನ ತಾಯಿಯ ಬಗ್ಗೆ ಹೇಳುತ್ತಾರೆ. ಗಂಡಿನ ಪಾರ್ಟಿ ಮಾಳಿಂಗರಾಯ ನನ ಅಪ್ಪ ಹುಲಿಹಾಲ ತಂದು ಬೀರಪ್ಪನಿಗೆ ಉಣಿಸ್ಯಾನೋ ಅಂತ ಹೇಳಿದ್ರೆ, ಮಾಳಿಂಗರಾಯ ಹುಲಿಹಾಲ ಉಣಿಸಬೇಕಾದ್ರೆ ತಾಯಿ ಹಡದಾಳ, ಉಲುಜಂತಿ ಗ್ರಾಮದಲ್ಲಿ ತಾಯಿ ಕನ್ನವ್ವನ ಆಶೀರ್ವಾದ ತಗಂಡು ಹುಲಿಹಾಲ ತರೋಕ ಹೋಗ್ಯಾನ’ ಅಂತ ಹೇಳತಾ, ಮಾಳಿಂಗರಾಯ ಹೆಚ್ಚು ಎನ್ನುವಾಗಲೂ ಮಾಳಿಂಗರಾಯನ ತಾಯಿಯನ್ನು ಇವರು ಎತ್ತಿ ಹಿಡಿಯುತ್ತಾರೆ. ಇಷ್ಟರಮಟ್ಟಿಗೆ ಒಂದು ಜನಪದ ಪಠ್ಯದ ಹಾಡಿಕೆಗೆ ಹೆಣ್ಣಿನ ಕಣ್ಣೋಟ ಸಾಧ್ಯವಾಗಿದೆ.

ಸುಮಿತ್ರಾರ ಹಾಡುಗಳಲ್ಲಿ ಹೆಣ್ಣು ಗಂಡು ಹೇಳಿದಂಗೆ ಕೇಳಿಕೊಂಡು ಚೆಂದನ ಸಂಸಾರ ಮಾಡಬೇಕು ಎನ್ನುವಂತಹ ಯಥಾಸ್ಥಿತಿಯ ಆಶಯವೂ ಇದೆ. ಆದರೆ ಎದುರು ಗಂಡಿನ ಮೇಳ ಹೆಣ್ಣನ್ನು ಕುಹಕ ಮಾಡಿದಾಗ ನಡೆಯುವ ಬಿರುಸಿನ ಚರ್ಚೆಯಲ್ಲಿ ಸುಮಿತ್ರಾ ಹೆಣ್ಣಿಲ್ಲದೆ ಕೇವಲ ಗಂಡಿಗೆ ಅಸ್ತಿತ್ವವಿಲ್ಲ ಎನ್ನುವುದನ್ನು ತುಂಬಾ ಖಡಕ್ ಆಗಿ ನಿರೂಪಿಸುತ್ತಾರೆ.

ಡೊಳ್ಳಿನ ಹಾಡಿನ ಏರುಧ್ವನಿಯಲ್ಲಿ ಹೆಣ್ಣಿನ ಕೋಮಲ ಧ್ವನಿ ಸಪ್ಪೆಯೆನಿಸುತ್ತದೆ. ಹಾಗಾಗಿ ಸುಮಿತ್ರಾರ ಧ್ವನಿ ಗಂಡಿನಂತೆ ಬಿರುಸು. ಸ್ಟೇಜಿನ ದೇಹಭಾಷೆಯೂ ಗಂಡನ್ನು ಮೀರಿಸುವಂಥದ್ದು. ಹೀಗೆ ಡೊಳ್ಳಿನ ಹಾಡಿನ ನುಡಿಗಟ್ಟನ್ನು ಬದಲಿಸುತ್ತಿರುವ ಸುಮಿತ್ರಾರ ಹಾಡಿಕೆ ಪಯಣಕ್ಕೆ ಡೊಳ್ಳಿನ ಪದದ ಕವಿ ಕೇದಾರ ಕೆಂಪಟ್ಟಿ ಮಾಸ್ತರರ ಮಾರ್ಗದರ್ಶನವಿದೆ. ತನ್ನ ಮೂರುಜನ ಅಕ್ಕಂದಿರಾದ ರೇಣುಕಾ, ಸರೋಜಿನಿ, ಉದ್ದವ್ವರನ್ನು ಮದುವೆ ಮಾಡಿಕೊಟ್ಟು ಮನೆ ಜವಾಬ್ದಾರಿ ಹೊರಲು ಗಂಡು ಮಗನಿರಬೇಕು ಎನ್ನುವ ನಂಬಿಕೆಯನ್ನು ಸುಮಿತ್ರ ಬದಲಿಸಿದ್ದಾರೆ. ಸುಮಿತ್ರಾ ಅವರ ಹಾಡಿಕೆ ಪಯಣ ಮತ್ತಷ್ಟು ಜನರನ್ನು ತಲುಪಲಿ ಎಂದು ಪತ್ರಿಕೆ ಶುಭ ಹಾರೈಸುತ್ತದೆ.

ಸುಮಿತ್ರಾ ಮುಗಳಿಹಾಳ ಎಂದು ಟೈಪಿಸಿದರೆ, ಯೂಟೂಬಿನಲ್ಲಿ ನೂರಾರು ವೀಡಿಯೋಗಳು ನೋಡಲು ಸಿಗುತ್ತವೆ.

ಅರುಣ್ ಜೋಳದಕೂಡ್ಲಿಗಿ


ಓದಿ:

ನಮ್ಮ ನಡುವಿನ ಮಂದಣ್ಣ – ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಜಾಗತಿಕ ಸುಂಕವನ್ನು ಶೇ.15ಕ್ಕೆ ಏರಿಸಿದ ಟ್ರಂಪ್

ಪ್ರತಿ ಸುಂಕ ನೀತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು, ಎಲ್ಲಾ ದೇಶಗಳ ಆಮದಿನ ಮೇಲೆ ಹೊಸದಾಗಿ 10 ಶೇಕಡ ಜಾಗತಿಕ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ...

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...