ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಅವರನ್ನು ಅವರ ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಬುಧವಾರ ಖುಲಾಸೆಗೊಳಿಸಿದೆ. ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಆನ್ಲೈನ್ ವಿಚಾರಣೆಯಲ್ಲಿ ಈ ಆದೇಶ ನೀಡಿದ್ದಾರೆ.
“ನ್ಯಾಯಾಧೀಶರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದು ಏಳೂವರೆ ವರ್ಷಗಳ ಸಂಪೂರ್ಣ ಹಿಂಸೆಯಾಗಿದೆ. ತೀರ್ಪನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಈಗ ದೊಡ್ಡ ಪರಿಹಾರ ಸಿಕ್ಕಿದೆ” ಎಂದು ಶಶಿ ತರೂರ್ ನ್ಯಾಯಾಧೀಶರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಿ: ಸಿಎಂಗೆ ಸಿದ್ದರಾಮಯ್ಯ ಪತ್ರ
— Shashi Tharoor (@ShashiTharoor) August 18, 2021
ಪೊಲೀಸರು ಆತ್ಮಹತ್ಯೆಗೆ ಕುಮ್ಮಕ್ಕು ಸೇರಿದಂತೆ ವಿವಿಧ ಆರೋಪಗಳನ್ನು ದಾಖಲಿಸುವಂತೆ ನ್ಯಾಯಾಲಯಕ್ಕೆ ಕೋರಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಶಿ ತರೂರ್ ಪರ ವಕೀಲ, “ಎಸ್ಐಟಿ ಈಗಾಗಲೆ ನಡೆಸಿದ ತನಿಖೆಯು ಶಶಿ ತರೂರ್ ಅವರನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಿದೆ” ಎಂದು ವಾದಿಸಿದ್ದಾರೆ.
ಸುನಂದಾ ಪುಷ್ಕರ್ ಅವರು ಜನವರಿ 17, 2014 ರ ರಾತ್ರಿ ದೆಹಲಿಯ ಐಷಾರಾಮಿ ಹೋಟೆಲ್ನ ಸೂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆ ಸಮಯದಲ್ಲಿ ಶಶಿ ತರೂರ್ ಅವರ ಅಧಿಕೃತ ಬಂಗಲೆಯನ್ನು ನವೀಕರಿಸುತ್ತಿದ್ದ ಕಾರಣ ದಂಪತಿಗಳು ಹೋಟೆಲ್ನಲ್ಲಿ ತಂಗಿದ್ದರು.
ಇದನ್ನೂ ಓದಿ: ಹೆಸರು ಬದಲಾವಣೆ ಮುಂದುವರೆಸಿದ ಬಿಜೆಪಿ: ಉತ್ತರ ಪ್ರದೇಶದ ಅಲಿಗಢ ಮರುನಾಮಕರಣಕ್ಕೆ ಪ್ರಸ್ತಾಪ
ದೆಹಲಿ ಪೊಲೀಸರು ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ (ಗಂಡ ಅಥವಾ ಗಂಡನ ಸಂಬಂಧಿಗಳು ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು 306 ರ ಅಡಿಯಲ್ಲಿ ಆರೋಪ ಹೊರಿಸಿದ್ದರು, ಆದರೆ ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿಲ್ಲ. ಜುಲೈ 5, 2018 ರಂದು ಅವರಿಗೆ ಪ್ರಕರಣದಲ್ಲಿ ಜಾಮೀನು ನೀಡಲಾಯಿತು.
ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ 2010 ರಲ್ಲಿ ವಿವಾಹವಾದರು. ನಾಲ್ಕು ವರ್ಷಗಳ ನಂತರ ಸಂಭವಿಸಿದ ಸುನಂದಾ ಸಾವು ರಾಜಕೀಯ ವಲಯಗಳಲ್ಲಿ ಭಾರಿ ಊಹಾಪೋಹಗಳಿಗೆ ಕಾರಣವಾಯಿತು. ಸುನಂದಾ ವಿಷ ಸೇವಿಸಿದ್ದಾರೆ ಎಂದು ಪೊಲೀಸರು ಮೊದಲು ಹೇಳಿಕೊಂಡಿದ್ದರು. ಒಂದು ವರ್ಷದ ನಂತರ, ಅವರು ಯಾವುದೇ ಶಂಕಿತರನ್ನು ಹೆಸರಿಸದೆ ಕೊಲೆ ಪ್ರಕರಣವನ್ನು ದಾಖಲಿಸಿದರು.
ಪ್ರಕರಣದಲ್ಲಿ ರಾಜಕೀಯ ವಿರೋಧಿಗಳಿಂದ ಪದೇ ಪದೇ ಗುರಿಯಾಗುತ್ತಿದ್ದ ತರೂರ್, ತಮ್ಮ ಮೇಲಿನ ಆರೋಪಗಳನ್ನು, “ಅಸಂಬದ್ಧ, ಆಧಾರರಹಿತ, ದುರುದ್ದೇಶಪೂರಿತ ಮತ್ತು ಪ್ರತೀಕಾರ ಅಭಿಯಾನದ ಉತ್ಪನ್ನ” ಎಂದು ಕರೆದಿದ್ದರು.
ಇದನ್ನೂ ಓದಿ: ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ 66% ರಿಂದ 24% ಕ್ಕೆ ಕುಸಿತ: ಇಂಡಿಯಾ ಟುಡೆ ಸಮೀಕ್ಷೆ