Homeಅಂಕಣಗಳುಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

ಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

- Advertisement -
- Advertisement -

ರೈತ ಪ್ರತಿಭಟನೆಗಳ ಭಾಗವಾಗಿ ಮಹಿಳೆಯರು ಯಾಕಿದ್ದಾರೆ?

ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಮೊನ್ನೆ ವಿಚಾರಣೆಯ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯಿದು. ಮನೆಗೆ ಮರಳುವಂತೆ ಅವರ ಮನ ಒಲಿಸಿರಿ. ಇಲ್ಲವಾದರೆ ಈ ಸಂಬಂಧ ಆದೇಶ ನೀಡಬೇಕಾದೀತು ಎಂದೂ ಅವರು ಹೇಳಿದರು.

ದೇಶದ ಕೃಷಿ ಶ್ರಮಿಕ ಪಡೆಯ ಶೇ.42ರಷ್ಟು ಮಹಿಳೆಯರೇ ಆಗಿದ್ದಾರೆ. ಆದರೆ ಅವರ ಕೃಷಿ ಜಮೀನಿನ ಒಡೆತನದ ಮಾತು ಬಂದರೆ ಆಕೆಯ ಹೆಸರಿಗಿರುವುದು ಕೇವಲ ಶೇ.ಎರಡರಷ್ಟು ಭೂಮಿ ಮಾತ್ರ ಎಂದು ರಾಷ್ಟ್ರೀಯ ಆನ್ವಯಿಕ ಆರ್ಥಶಾಸ್ತ್ರೀಯ ಸಂಶೋಧನಾ ಸಂಸ್ಥೆ 2018ರಲ್ಲಿ ಹೇಳಿದೆ.

2011ರ ಜನಗಣತಿಯ ಪ್ರಕಾರ ಗ್ರಾಮೀಣ ಭಾರತದ ಶೇ.65ರಷ್ಟು ಮಹಿಳೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒಕ್ಕಲುತನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮನ್ನೂ ರೈತರೆಂದು ವರ್ಗೀಕರಿಸಬೇಕೆಂಬುದು ಮಹಿಳೆಯರ ಬಹುಕಾಲದ ಬೇಡಿಕೆ. ಬಿತ್ತನೆ, ಮಾರಾಟದ ತೀರ್ಮಾನಗಳಲ್ಲೂ ಆಕೆಗೆ ದನಿಯಿಲ್ಲ. ಆದರೆ ಕೃಷಿವ್ಯವಸ್ಥೆಯ ಕೇಂದ್ರಬಿಂದು ಅವರು. ಬಿತ್ತನೆಯಿಂದ ಹಿಡಿದು ಕಟಾವಿನ ತನಕ, ದನ ಮೇಯಿಸುವುದರಿಂದ ಹಿಡಿದು ಹಾಲು ಹಿಂಡುವ ತನಕ ಗಂಡಸಿಗೆ ಸರಿಸಮ ಇಲ್ಲವೇ ಮಿಗಿಲಾದ ಶ್ರಮ ಆಕೆಯದು.

ಎಂಟು ನೂರು ಮಂದಿ ಮಹಿಳೆಯರು ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ಬಹಿರಂಗ ಪ್ರತಿಭಟನಾ ಪತ್ರ ಬರೆದಿದ್ದಾರೆ. ಕೃಷಿಯಲ್ಲಿ ಮಹಿಳೆಯರದು ಪ್ರಧಾನ ಪಾತ್ರ ಎಂಬ ವಾಸ್ತವವನ್ನು ನಿಮ್ಮ ಹೇಳಿಕೆಗಳು ಅವಮಾನಗೊಳಿಸಿವೆ. ಮಹಿಳೆಯು ಹಾಲಿ ರೈತ ಪ್ರತಿಭಟನೆಯ ಆತ್ಮ ಮತ್ತು ಹೃದಯವೆಂಬುದನ್ನು ಕಾಣಿರಿ. ಸರ್ಕಾರಿ ಅಂಕಿ ಅಂಶಗಳಲ್ಲಿ ಮಹಿಳಾ ರೈತರು ಮಟಾ ಮಾಯವಾಗಿರುವ ಜೀವಿಗಳು. ರೈತರ ಆತ್ಮಹತ್ಯೆಗಳ ನಿಜ ಭಾರವನ್ನು ಹೊರಬೇಕಾಗಿರುವ ಕಷ್ಟಜೀವಿ ಆಕೆ. ಸಾವಿಗಿಂತ ಬದುಕೇ ಕ್ರೂರ ಆಕೆಯ ಪಾಲಿಗೆ. ಆಕೆ ಕೇವಲ ರೈತನ ತಾಯಿ ಪತ್ನಿ, ಮಗಳು, ಸೋದರಿ, ಸೊಸೆ ಮಾತ್ರವೇ ಆಗಿರುತ್ತಾಳೆ. ರೈತಳೆಂದು ಆಕೆಯನ್ನು ಕರೆಯುವುದಿಲ್ಲ ಸರ್ಕಾರ. ಇದೀಗ ಸುಪ್ರೀಮ್ ಕೋರ್ಟಿನ ಮನಸ್ಥಿತಿಯೂ ಭಿನ್ನವಾಗಿಲ್ಲ.

ಈ ರೈತ ಪ್ರತಿಭಟನೆಯು ಕೇವಲ ಕೃಷಿ ಕಾನೂನುಗಳಿಗೆ ವಿರೋಧವನ್ನು ಸಿಡಿಸಿರುವುದಲ್ಲದೆ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಆವರಣವಾಗಿ ಹೊಮ್ಮಿರುವುದನ್ನು ಗಮನಿಸಿರಿ. ಆವರ ಪಾತ್ರವನ್ನು ಕಡೆಗಣಿಸುವುದು ಅತೀವ ಅವಹೇಳನಕರ ಎಂದಿದ್ದಾರೆ. ಈ ಕೃಷಿ ಕಾನೂನುಗಳಿಂದಾಗಿ ಒಕ್ಕಲುತನದ ಆದಾಯಗಳು ಮತ್ತಷ್ಟು ಕುಸಿದರೆ ಅದರ ನೇರ ಭಾರ ಹೊರುವವರು ಮನೆವಾರ್ತೆಯನ್ನು ನೋಡಿಕೊಳ್ಳಬೇಕಾಗಿರುವ ಹೆಣ್ಣುಮಕ್ಕಳೇ. ಪ್ರತಿಭಟನೆಯ ಸ್ಥಳಗಳಲ್ಲಿ ಮಾತ್ರವಲ್ಲದೆ ದೇಶದ ಉದ್ದಗಲಕ್ಕೆ ಭಾಷಣಗಳನ್ನು ಸಂಘಟಿಸುವ, ಸಭೆಗಳನ್ನು ಏರ್ಪಡಿಸುವ, ಪತ್ರಿಕಾಗೋಷ್ಠಿ ನಡೆಸುವ, ವೈದ್ಯೋಪಚಾರ ನೀಡುವ, ಅಡುಗೆ ಮಾಡುವ ಕ್ರಿಯೆಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಯಮಾಡಿ ಕೃಷಿಯಲ್ಲಿ ಮಹಿಳಾ ರೈತರ ಪಾತ್ರವನ್ನು ಗುರುತಿಸಿರಿ ಮತ್ತು ನಿಮ್ಮ ಪುರುಷಾಧಿಪತ್ಯದ ಮನಸ್ಥಿತಿಯಿಂದ ಹೊರಬನ್ನಿರಿ ಎಂದು ಮಹಿಳೆಯರು ಸುಪ್ರೀಮ್ ಕೋರ್ಟಿಗೆ ಝಾಡಿಸಿದ್ದಾರೆ.

ಮಹಿಳೆಯ ದುಡಿಮೆಯನ್ನು ಭಾರತೀಯ ಪುರುಷಾಧಿಪತ್ಯದ ರಾಜಕೀಯ ಸಾಮಾಜಿಕ ಆರ್ಥಿಕ ವ್ಯವಸ್ಥೆ ಗುರುತಿಸಿಯೇ ಇಲ್ಲ. ಆದಿಕಾಲದ ಬೇಟೆಗಾರ ಪುರುಷ ಈಟಿ ಮತ್ತು ಬೀಸು ಕೋಲನ್ನಷ್ಟೇ ಹಿಡಿದು ಹಗುರಕ್ಕೆ ನಡೆಯುತ್ತಿದ್ದರೆ, ಆತನ ಹಿಂದೆ ಹೆಜ್ಜೆ ಹಾಕುತ್ತಿದ್ದ ಆಕೆಯ ಮೇಲೆ ಅವರಿಬ್ಬರ ಕೂಸು, ಬಿಡಾರ ಹೂಡಿದರೆ ಛಾವಣಿಯಾಗಬಲ್ಲ ಪರಿಕರ, ಬುತ್ತಿ ಗಂಟುಗಳ ಜೊತೆಗೆ ಅಗೆಯುವ ಬಡಿಗೆಯ ಒಜ್ಜೆ. ಕೂಳು ಬೇಯಿಸಲು ಕಟ್ಟಿಗೆಯನ್ನು ಆಯುವುದು, ನೀರು ಹೊರುವುದು ಅಡಿಗೆ ಮಾಡುವುದು ಆಕೆಯದೇ ಕೆಲಸ. ಹೆಣ್ಣು ಗಂಡುಗಳ ನಡುವೆ ಸಾರ್ವತ್ರಿಕ ಶ್ರಮ ವಿಭಜನೆ ಎಂದರೆ ಆಕೆಯ ಪಾಲಿಗೆ ಮೈ ಮುರಿಯುವ ಗಾಣದೆತ್ತಿನ ಎಡೆಬಿಡದ ದುಡಿತ. ಕ್ರೀಡೆ, ಕನಸು, ಧರ್ಮ, ಕಲಾತ್ಮಕ ಅಭಿವ್ಯಕ್ತಿ, ಆಚರಣೆಗಳು ಆತನದೇ ವಿಶೇಷಾಧಿಕಾರ. ಪಶುಗಳನ್ನು ಪಳಗಿಸಿದ ನಂತರ ಪುರುಷ ಅವುಗಳನ್ನು ನೊಗಕ್ಕೆ ಹಚ್ಚಿ ದುಡಿಸಿದ. ಪಳಗಿಸಿದ ಪಶು ಸತ್ತಾಗ ಪುನಃ ನೊಗಕ್ಕೆ ನೇಗಿಲಿಗೆ ಹೆಗಲು ಕೊಟ್ಟದ್ದು ಆಕೆಯ. ಹಿಂದೆ ನಿಂತು ಆಕೆಯನ್ನು ನಡೆಸಿದ ಅಧಿಕಾರ ಆತನದೇ. ಇಂದಿಗೂ ಬಹಳಷ್ಟು ರೈತಾಪಿ ಕುಟುಂಬಗಳಲ್ಲಿ ಎತ್ತುಗಳನ್ನು ನಡೆಸಿಕೊಂಡಷ್ಟು ಉತ್ತಮವಾಗಿ ಹೆಣ್ಣನ್ನು ನಡೆಸಿಕೊಳ್ಳುವುದಿಲ್ಲ. ಆಕೆ ಕಂತೆ ಒಗೆದರೆ ಮತ್ತೊಬ್ಬ ತೊತ್ತು ಬೇಡಿಕೊಂಡು ಬಂದಾಳು. ಆದರೆ ಎತ್ತುಗಳು ಸತ್ತರೆ ಮತ್ತೆ ತರಲು ಹಣ ಸುರಿಯಬೇಕಲ್ಲ?

ಕೆಲಸ ಒಜ್ಜೆಯದು ಎಂದು ಆಕೆ ಎಂದೂ ಮಾಡದೆ ಬಿಟ್ಟವಳಲ್ಲ. ಬುದ್ಧಿಶಕ್ತಿ ಬೇಕಿರುವ ಮತ್ತು ನಿರ್ವಹಣಾ ಕೌಶಲ ಒಳಗೊಳ್ಳುವ ಕೆಲಸವನ್ನು ಆಕೆಗೆ ನಿರಾಕರಿಸಲಾಗಿತ್ತು. ಕತ್ತೆ ಕಾಯುವ ಕೆಲಸಾನೂ ಕೂಡ ಆಕೆಗೆ ಕೊಡುತ್ತಿರಲಿಲ್ಲ. ದಾರಿಯ ದೂರವನ್ನು ಕತ್ತೆಯ ಮೇಲೆ ಕುಳಿತು ಕ್ರಮಿಸುವ ರೈತಾಪಿ ಪುರುಷ ಮತ್ತು ಜೊತೆ ಜೊತೆಯಲ್ಲೇ ಓಡು ನಡಿಗೆಯಲ್ಲಿ ಧಾವಿಸುವ ಆತನ ಪತ್ನಿಯನ್ನು ಈಗಲೂ ಅಲ್ಲಲ್ಲಿ ಕಾಣುವುದು ಸಾಧ್ಯ. ಸಿರಿವಂತ ಪ್ರಪಂಚದಲ್ಲಿ ಈ ಸಂಬಂಧ ಕುಟುಂಬದ ಕಾರು ಸವಾರಿಯ ಸುಖ ಗಂಡನದಾದರೆ, ನಡೆದು ದೂರ ಕ್ರಮಿಸುವ ಇಲ್ಲವೇ ಬಸ್ಸಿನಲ್ಲಿ ಓಡಾಡುವ ಹೆಂಡತಿಯ ದೃಶ್ಯವಾಗಿ ಬದಲಾದೀತು

Photo Courtesy: The Indian Express

.

ಭಾರದ, ಮೈಮುರಿಯುವ, ನಿತ್ಯ ಮಾಡಿದ್ದನ್ನೇ ಮಾಡುವ ಅರ್ಥವಿಲ್ಲದ ದುಡಿತ ಆಕೆಯದು. ಜಗತ್ತಿನ ತುಂಬೆಲ್ಲ ಇದೇ ಕತೆ. ಕೂಳು ಬೇಯಿಸುವ ವಿರಳ ಉರುವಲನ್ನು ಹುಡುಕಿ ಹೆಕ್ಕಿ ಮುರಿದು ಹೊರೆಯಾಗಿ ಬಿಗಿದು ತಲೆಯ ಮೇಲೋ ಬೆನ್ನ ಮೇಲೆಯೋ ಹೊತ್ತು ತರುವವಳು ಆಕೆಯೇ. ದುರ್ಲಭ ನೀರನ್ನು ದೂರದಿಂದ ನೆತ್ತಿ ನುಗ್ಗಾಗುವಂತೆ ಹೊತ್ತು ತರುವುದು ಈಗಲೂ ಆಕೆಯದೇ ಕೆಲಸ. ಪುರುಷರು ಭಾರದ ನೀರನ್ನು ಹೊರುವುದು ವಿರಳವಾಗಿ ಲಭಿಸುವ ನೋಟ. ಶ್ರಮವನ್ನು ಹಗುರ ಮಾಡುವ ಊರ್ಜೆಯ ಮೂಲ ದೊರೆತ ಮರುಕ್ಷಣವೇ ಅಂತಹ ಕೆಲಸವನ್ನು ಪುರುಷರು ಬಾಚಿಕೊಳ್ಳುವರು.

ಸೊಂಟ ಬಗ್ಗಿಸಿಯೋ ಕುಕ್ಕರಗಾಲಲ್ಲಿ ಕುಳಿತೋ ಕಳೆಗುದ್ದಲಿ ಮತ್ತು ಪಿಕಾಸಿಗಳಲ್ಲೇ ಮಾಡಬೇಕಿದ್ದಷ್ಟು ದಿನ ಉಳುಮೆಯ ಕೆಲಸ ಆಕೆಯದು. ಟ್ರ್ಯಾಕ್ಟರುಗಳು, ಟಿಲ್ಲರುಗಳು ಬಂದೊಡನೆಯೇ ಆತನದಾಗಿಬಿಡುತ್ತದೆ!

ವಿಶ್ವಸಂಸ್ಥೆಯ ಯೋಜನೆಯೊಂದು ಮಹಿಳಾ ವ್ಯಾಪಾರಿಗಳಿಗೆ ಹಂಚಿದ ಬೈಸಿಕಲ್‌ಗಳನ್ನು ಕಿತ್ತುಕೊಂಡು ಸವಾರಿ ಮಾಡಿದವರು ಅವರ ಗಂಡಂದಿರು. ಮಹಿಳೆಯರು ಎಂದಿಂತೆ ತಮ್ಮ ಉತ್ಪನ್ನಗಳ ಮೂಟೆ ಹೊರೆಯನ್ನು ನೆತ್ತಿಯ ಮೇಲೆ ಹೊತ್ತು ಮೈಲಿಗಟ್ಟಲೆ ನಡೆಯುವುದು ತಪ್ಪಲಿಲ್ಲ. ಅನಾದಿಕಾಲದಿಂದ ಮಹಿಳೆಯ ಶ್ರಮ ಶಕ್ತಿಯ ಕುರಿತ ಈ ವ್ಯಾಖ್ಯಾನ ಖ್ಯಾತ ಸ್ತ್ರೀ ಚಿಂತಕಿ ಜರ್ಮೇನ್ ಗ್ರೀರ್ ಅವರದು. The Whole Woman ಎಂಬ ಕೃತಿಯಲ್ಲಿ ಹೆಣ್ಣು ಗಂಡಿನ ನಡುವೆ ಶ್ರಮ ಶಕ್ತಿ ವಿಭಜನೆಯ ಈ ಅನ್ಯಾಯದ ತಾರತಮ್ಯವನ್ನು ಬಿಡಿಸಿಡುತ್ತಾರೆ.

ಹೆರವರ ಹೊಲಗಳಲ್ಲಿ ಕೂಲಿ ಮಾಡುವ ಹೆಣ್ಣಾಳುಗಳಿಗೆ ಅರ್ಧ ಕೂಲಿಯ ಅವಮಾನ ಯುಗಗಳಿಂದ ನಡೆದು ಬಂದದ್ದು. ತೆಲುಗಿನ ಸಣ್ಣ ಕತೆಯೊಂದರಲ್ಲಿ ಗಂಡ ಹೆಂಡತಿ ಇಬ್ಬರೂ ಕೂಲಿಯಾಳುಗಳು. ಪರಸ್ಥಳಕ್ಕೆ ಪಯಣದ ಸಂದರ್ಭ. ಬಸ್ಸೇರಿ ಕುಳಿತವರ ಬಳಿ ಬರುವ ಕಂಡಕ್ಟರ್ ಎರಡು ಟಿಕೆಟ್‌ಗಳ ದರ ತೆರುವಂತೆ ಹೇಳುತ್ತಾನೆ. ಅದ್ಯಾಕೆ ಎರಡು ಟಿಕೆಟುಗಳ ರೊಕ್ಕ ಕೊಡಲಿ… ನನಗೆ ಪೂರ್ತಿ ಕೂಲಿ ಕೊಟ್ರೆ ಆಕೆಗೆ ಕೊಡೋದು ಅರ್ಧ ಕೂಲಿಯೇ. ಕೂಲಿಯಾದರೆ ಅರ್ಧ, ಟಿಕೆಟ್ಟಾದರೆ ಪೂರ್ತಿ! ಈ ಅನ್ಯಾಯ ಯಾಕೆ? ಒಂದೂವರೆ ಟಿಕೆಟ್ ಹರೀರ್ರಿ ಎಂದು ಪ್ರತಿಭಟಿಸುತ್ತಾನೆ ಗಂಡ. ಬಸ್ಸಲ್ಲಿ ಕುಳಿತ ಜನ ಆತನ ವಾದಕ್ಕೆ ಪಕಪಕನೆ ನಗುತ್ತಾರೆ. ಕತೆ ಅಲ್ಲಿಗೆ ಮುಗಿದುಹೋಗುತ್ತದೆ.

ಪಿತೃಪ್ರಧಾನ ವ್ಯವಸ್ಥೆಯ ಪಿರಮಿಡ್ ತುದಿಯಲ್ಲಿ ಶತಮಾನಗಳಿಂದ ಪವಡಿಸಿರುವ ಸ್ತ್ರೀದ್ವೇಷಿಗಳು ಈ ವಿಚಾರವನ್ನು ಒಪ್ಪಲಿಕ್ಕಿಲ್ಲ. ಸುಪ್ರೀಮ್ ಕೋರ್ಟು ಅರಿವಿನ ಆಗರ, ನ್ಯಾಯದಾನದ ತವನಿಧಿ ಎಂಬ ನಂಬಿಕೆಯಿದೆ. ಅದರ ನಡೆನುಡಿಗಳು ಈ ನಂಬಿಕೆಯ ತಳಹದಿಯನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಇರಬೇಕೇ ವಿನಾ ಸಡಿಲುಗೊಳಿಸಕೂಡದು.


ಇದನ್ನೂ ಓದಿ: ರೈತ ಮಹಿಳಾ ದಿನ: ರೈತರಿಗೆ ಬೆಂಬಲ ಘೋಷಿಸಿ ದೇಶವ್ಯಾಪಿ‌ ಪ್ರತಿಭಟನೆ ನಡೆಸಲು ಮಹಿಳೆಯರ ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...