Homeಅಂಕಣಗಳುಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

ಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

- Advertisement -
- Advertisement -

ರೈತ ಪ್ರತಿಭಟನೆಗಳ ಭಾಗವಾಗಿ ಮಹಿಳೆಯರು ಯಾಕಿದ್ದಾರೆ?

ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಮೊನ್ನೆ ವಿಚಾರಣೆಯ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯಿದು. ಮನೆಗೆ ಮರಳುವಂತೆ ಅವರ ಮನ ಒಲಿಸಿರಿ. ಇಲ್ಲವಾದರೆ ಈ ಸಂಬಂಧ ಆದೇಶ ನೀಡಬೇಕಾದೀತು ಎಂದೂ ಅವರು ಹೇಳಿದರು.

ದೇಶದ ಕೃಷಿ ಶ್ರಮಿಕ ಪಡೆಯ ಶೇ.42ರಷ್ಟು ಮಹಿಳೆಯರೇ ಆಗಿದ್ದಾರೆ. ಆದರೆ ಅವರ ಕೃಷಿ ಜಮೀನಿನ ಒಡೆತನದ ಮಾತು ಬಂದರೆ ಆಕೆಯ ಹೆಸರಿಗಿರುವುದು ಕೇವಲ ಶೇ.ಎರಡರಷ್ಟು ಭೂಮಿ ಮಾತ್ರ ಎಂದು ರಾಷ್ಟ್ರೀಯ ಆನ್ವಯಿಕ ಆರ್ಥಶಾಸ್ತ್ರೀಯ ಸಂಶೋಧನಾ ಸಂಸ್ಥೆ 2018ರಲ್ಲಿ ಹೇಳಿದೆ.

2011ರ ಜನಗಣತಿಯ ಪ್ರಕಾರ ಗ್ರಾಮೀಣ ಭಾರತದ ಶೇ.65ರಷ್ಟು ಮಹಿಳೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒಕ್ಕಲುತನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮನ್ನೂ ರೈತರೆಂದು ವರ್ಗೀಕರಿಸಬೇಕೆಂಬುದು ಮಹಿಳೆಯರ ಬಹುಕಾಲದ ಬೇಡಿಕೆ. ಬಿತ್ತನೆ, ಮಾರಾಟದ ತೀರ್ಮಾನಗಳಲ್ಲೂ ಆಕೆಗೆ ದನಿಯಿಲ್ಲ. ಆದರೆ ಕೃಷಿವ್ಯವಸ್ಥೆಯ ಕೇಂದ್ರಬಿಂದು ಅವರು. ಬಿತ್ತನೆಯಿಂದ ಹಿಡಿದು ಕಟಾವಿನ ತನಕ, ದನ ಮೇಯಿಸುವುದರಿಂದ ಹಿಡಿದು ಹಾಲು ಹಿಂಡುವ ತನಕ ಗಂಡಸಿಗೆ ಸರಿಸಮ ಇಲ್ಲವೇ ಮಿಗಿಲಾದ ಶ್ರಮ ಆಕೆಯದು.

ಎಂಟು ನೂರು ಮಂದಿ ಮಹಿಳೆಯರು ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ಬಹಿರಂಗ ಪ್ರತಿಭಟನಾ ಪತ್ರ ಬರೆದಿದ್ದಾರೆ. ಕೃಷಿಯಲ್ಲಿ ಮಹಿಳೆಯರದು ಪ್ರಧಾನ ಪಾತ್ರ ಎಂಬ ವಾಸ್ತವವನ್ನು ನಿಮ್ಮ ಹೇಳಿಕೆಗಳು ಅವಮಾನಗೊಳಿಸಿವೆ. ಮಹಿಳೆಯು ಹಾಲಿ ರೈತ ಪ್ರತಿಭಟನೆಯ ಆತ್ಮ ಮತ್ತು ಹೃದಯವೆಂಬುದನ್ನು ಕಾಣಿರಿ. ಸರ್ಕಾರಿ ಅಂಕಿ ಅಂಶಗಳಲ್ಲಿ ಮಹಿಳಾ ರೈತರು ಮಟಾ ಮಾಯವಾಗಿರುವ ಜೀವಿಗಳು. ರೈತರ ಆತ್ಮಹತ್ಯೆಗಳ ನಿಜ ಭಾರವನ್ನು ಹೊರಬೇಕಾಗಿರುವ ಕಷ್ಟಜೀವಿ ಆಕೆ. ಸಾವಿಗಿಂತ ಬದುಕೇ ಕ್ರೂರ ಆಕೆಯ ಪಾಲಿಗೆ. ಆಕೆ ಕೇವಲ ರೈತನ ತಾಯಿ ಪತ್ನಿ, ಮಗಳು, ಸೋದರಿ, ಸೊಸೆ ಮಾತ್ರವೇ ಆಗಿರುತ್ತಾಳೆ. ರೈತಳೆಂದು ಆಕೆಯನ್ನು ಕರೆಯುವುದಿಲ್ಲ ಸರ್ಕಾರ. ಇದೀಗ ಸುಪ್ರೀಮ್ ಕೋರ್ಟಿನ ಮನಸ್ಥಿತಿಯೂ ಭಿನ್ನವಾಗಿಲ್ಲ.

ಈ ರೈತ ಪ್ರತಿಭಟನೆಯು ಕೇವಲ ಕೃಷಿ ಕಾನೂನುಗಳಿಗೆ ವಿರೋಧವನ್ನು ಸಿಡಿಸಿರುವುದಲ್ಲದೆ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಆವರಣವಾಗಿ ಹೊಮ್ಮಿರುವುದನ್ನು ಗಮನಿಸಿರಿ. ಆವರ ಪಾತ್ರವನ್ನು ಕಡೆಗಣಿಸುವುದು ಅತೀವ ಅವಹೇಳನಕರ ಎಂದಿದ್ದಾರೆ. ಈ ಕೃಷಿ ಕಾನೂನುಗಳಿಂದಾಗಿ ಒಕ್ಕಲುತನದ ಆದಾಯಗಳು ಮತ್ತಷ್ಟು ಕುಸಿದರೆ ಅದರ ನೇರ ಭಾರ ಹೊರುವವರು ಮನೆವಾರ್ತೆಯನ್ನು ನೋಡಿಕೊಳ್ಳಬೇಕಾಗಿರುವ ಹೆಣ್ಣುಮಕ್ಕಳೇ. ಪ್ರತಿಭಟನೆಯ ಸ್ಥಳಗಳಲ್ಲಿ ಮಾತ್ರವಲ್ಲದೆ ದೇಶದ ಉದ್ದಗಲಕ್ಕೆ ಭಾಷಣಗಳನ್ನು ಸಂಘಟಿಸುವ, ಸಭೆಗಳನ್ನು ಏರ್ಪಡಿಸುವ, ಪತ್ರಿಕಾಗೋಷ್ಠಿ ನಡೆಸುವ, ವೈದ್ಯೋಪಚಾರ ನೀಡುವ, ಅಡುಗೆ ಮಾಡುವ ಕ್ರಿಯೆಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಯಮಾಡಿ ಕೃಷಿಯಲ್ಲಿ ಮಹಿಳಾ ರೈತರ ಪಾತ್ರವನ್ನು ಗುರುತಿಸಿರಿ ಮತ್ತು ನಿಮ್ಮ ಪುರುಷಾಧಿಪತ್ಯದ ಮನಸ್ಥಿತಿಯಿಂದ ಹೊರಬನ್ನಿರಿ ಎಂದು ಮಹಿಳೆಯರು ಸುಪ್ರೀಮ್ ಕೋರ್ಟಿಗೆ ಝಾಡಿಸಿದ್ದಾರೆ.

ಮಹಿಳೆಯ ದುಡಿಮೆಯನ್ನು ಭಾರತೀಯ ಪುರುಷಾಧಿಪತ್ಯದ ರಾಜಕೀಯ ಸಾಮಾಜಿಕ ಆರ್ಥಿಕ ವ್ಯವಸ್ಥೆ ಗುರುತಿಸಿಯೇ ಇಲ್ಲ. ಆದಿಕಾಲದ ಬೇಟೆಗಾರ ಪುರುಷ ಈಟಿ ಮತ್ತು ಬೀಸು ಕೋಲನ್ನಷ್ಟೇ ಹಿಡಿದು ಹಗುರಕ್ಕೆ ನಡೆಯುತ್ತಿದ್ದರೆ, ಆತನ ಹಿಂದೆ ಹೆಜ್ಜೆ ಹಾಕುತ್ತಿದ್ದ ಆಕೆಯ ಮೇಲೆ ಅವರಿಬ್ಬರ ಕೂಸು, ಬಿಡಾರ ಹೂಡಿದರೆ ಛಾವಣಿಯಾಗಬಲ್ಲ ಪರಿಕರ, ಬುತ್ತಿ ಗಂಟುಗಳ ಜೊತೆಗೆ ಅಗೆಯುವ ಬಡಿಗೆಯ ಒಜ್ಜೆ. ಕೂಳು ಬೇಯಿಸಲು ಕಟ್ಟಿಗೆಯನ್ನು ಆಯುವುದು, ನೀರು ಹೊರುವುದು ಅಡಿಗೆ ಮಾಡುವುದು ಆಕೆಯದೇ ಕೆಲಸ. ಹೆಣ್ಣು ಗಂಡುಗಳ ನಡುವೆ ಸಾರ್ವತ್ರಿಕ ಶ್ರಮ ವಿಭಜನೆ ಎಂದರೆ ಆಕೆಯ ಪಾಲಿಗೆ ಮೈ ಮುರಿಯುವ ಗಾಣದೆತ್ತಿನ ಎಡೆಬಿಡದ ದುಡಿತ. ಕ್ರೀಡೆ, ಕನಸು, ಧರ್ಮ, ಕಲಾತ್ಮಕ ಅಭಿವ್ಯಕ್ತಿ, ಆಚರಣೆಗಳು ಆತನದೇ ವಿಶೇಷಾಧಿಕಾರ. ಪಶುಗಳನ್ನು ಪಳಗಿಸಿದ ನಂತರ ಪುರುಷ ಅವುಗಳನ್ನು ನೊಗಕ್ಕೆ ಹಚ್ಚಿ ದುಡಿಸಿದ. ಪಳಗಿಸಿದ ಪಶು ಸತ್ತಾಗ ಪುನಃ ನೊಗಕ್ಕೆ ನೇಗಿಲಿಗೆ ಹೆಗಲು ಕೊಟ್ಟದ್ದು ಆಕೆಯ. ಹಿಂದೆ ನಿಂತು ಆಕೆಯನ್ನು ನಡೆಸಿದ ಅಧಿಕಾರ ಆತನದೇ. ಇಂದಿಗೂ ಬಹಳಷ್ಟು ರೈತಾಪಿ ಕುಟುಂಬಗಳಲ್ಲಿ ಎತ್ತುಗಳನ್ನು ನಡೆಸಿಕೊಂಡಷ್ಟು ಉತ್ತಮವಾಗಿ ಹೆಣ್ಣನ್ನು ನಡೆಸಿಕೊಳ್ಳುವುದಿಲ್ಲ. ಆಕೆ ಕಂತೆ ಒಗೆದರೆ ಮತ್ತೊಬ್ಬ ತೊತ್ತು ಬೇಡಿಕೊಂಡು ಬಂದಾಳು. ಆದರೆ ಎತ್ತುಗಳು ಸತ್ತರೆ ಮತ್ತೆ ತರಲು ಹಣ ಸುರಿಯಬೇಕಲ್ಲ?

ಕೆಲಸ ಒಜ್ಜೆಯದು ಎಂದು ಆಕೆ ಎಂದೂ ಮಾಡದೆ ಬಿಟ್ಟವಳಲ್ಲ. ಬುದ್ಧಿಶಕ್ತಿ ಬೇಕಿರುವ ಮತ್ತು ನಿರ್ವಹಣಾ ಕೌಶಲ ಒಳಗೊಳ್ಳುವ ಕೆಲಸವನ್ನು ಆಕೆಗೆ ನಿರಾಕರಿಸಲಾಗಿತ್ತು. ಕತ್ತೆ ಕಾಯುವ ಕೆಲಸಾನೂ ಕೂಡ ಆಕೆಗೆ ಕೊಡುತ್ತಿರಲಿಲ್ಲ. ದಾರಿಯ ದೂರವನ್ನು ಕತ್ತೆಯ ಮೇಲೆ ಕುಳಿತು ಕ್ರಮಿಸುವ ರೈತಾಪಿ ಪುರುಷ ಮತ್ತು ಜೊತೆ ಜೊತೆಯಲ್ಲೇ ಓಡು ನಡಿಗೆಯಲ್ಲಿ ಧಾವಿಸುವ ಆತನ ಪತ್ನಿಯನ್ನು ಈಗಲೂ ಅಲ್ಲಲ್ಲಿ ಕಾಣುವುದು ಸಾಧ್ಯ. ಸಿರಿವಂತ ಪ್ರಪಂಚದಲ್ಲಿ ಈ ಸಂಬಂಧ ಕುಟುಂಬದ ಕಾರು ಸವಾರಿಯ ಸುಖ ಗಂಡನದಾದರೆ, ನಡೆದು ದೂರ ಕ್ರಮಿಸುವ ಇಲ್ಲವೇ ಬಸ್ಸಿನಲ್ಲಿ ಓಡಾಡುವ ಹೆಂಡತಿಯ ದೃಶ್ಯವಾಗಿ ಬದಲಾದೀತು

Photo Courtesy: The Indian Express

.

ಭಾರದ, ಮೈಮುರಿಯುವ, ನಿತ್ಯ ಮಾಡಿದ್ದನ್ನೇ ಮಾಡುವ ಅರ್ಥವಿಲ್ಲದ ದುಡಿತ ಆಕೆಯದು. ಜಗತ್ತಿನ ತುಂಬೆಲ್ಲ ಇದೇ ಕತೆ. ಕೂಳು ಬೇಯಿಸುವ ವಿರಳ ಉರುವಲನ್ನು ಹುಡುಕಿ ಹೆಕ್ಕಿ ಮುರಿದು ಹೊರೆಯಾಗಿ ಬಿಗಿದು ತಲೆಯ ಮೇಲೋ ಬೆನ್ನ ಮೇಲೆಯೋ ಹೊತ್ತು ತರುವವಳು ಆಕೆಯೇ. ದುರ್ಲಭ ನೀರನ್ನು ದೂರದಿಂದ ನೆತ್ತಿ ನುಗ್ಗಾಗುವಂತೆ ಹೊತ್ತು ತರುವುದು ಈಗಲೂ ಆಕೆಯದೇ ಕೆಲಸ. ಪುರುಷರು ಭಾರದ ನೀರನ್ನು ಹೊರುವುದು ವಿರಳವಾಗಿ ಲಭಿಸುವ ನೋಟ. ಶ್ರಮವನ್ನು ಹಗುರ ಮಾಡುವ ಊರ್ಜೆಯ ಮೂಲ ದೊರೆತ ಮರುಕ್ಷಣವೇ ಅಂತಹ ಕೆಲಸವನ್ನು ಪುರುಷರು ಬಾಚಿಕೊಳ್ಳುವರು.

ಸೊಂಟ ಬಗ್ಗಿಸಿಯೋ ಕುಕ್ಕರಗಾಲಲ್ಲಿ ಕುಳಿತೋ ಕಳೆಗುದ್ದಲಿ ಮತ್ತು ಪಿಕಾಸಿಗಳಲ್ಲೇ ಮಾಡಬೇಕಿದ್ದಷ್ಟು ದಿನ ಉಳುಮೆಯ ಕೆಲಸ ಆಕೆಯದು. ಟ್ರ್ಯಾಕ್ಟರುಗಳು, ಟಿಲ್ಲರುಗಳು ಬಂದೊಡನೆಯೇ ಆತನದಾಗಿಬಿಡುತ್ತದೆ!

ವಿಶ್ವಸಂಸ್ಥೆಯ ಯೋಜನೆಯೊಂದು ಮಹಿಳಾ ವ್ಯಾಪಾರಿಗಳಿಗೆ ಹಂಚಿದ ಬೈಸಿಕಲ್‌ಗಳನ್ನು ಕಿತ್ತುಕೊಂಡು ಸವಾರಿ ಮಾಡಿದವರು ಅವರ ಗಂಡಂದಿರು. ಮಹಿಳೆಯರು ಎಂದಿಂತೆ ತಮ್ಮ ಉತ್ಪನ್ನಗಳ ಮೂಟೆ ಹೊರೆಯನ್ನು ನೆತ್ತಿಯ ಮೇಲೆ ಹೊತ್ತು ಮೈಲಿಗಟ್ಟಲೆ ನಡೆಯುವುದು ತಪ್ಪಲಿಲ್ಲ. ಅನಾದಿಕಾಲದಿಂದ ಮಹಿಳೆಯ ಶ್ರಮ ಶಕ್ತಿಯ ಕುರಿತ ಈ ವ್ಯಾಖ್ಯಾನ ಖ್ಯಾತ ಸ್ತ್ರೀ ಚಿಂತಕಿ ಜರ್ಮೇನ್ ಗ್ರೀರ್ ಅವರದು. The Whole Woman ಎಂಬ ಕೃತಿಯಲ್ಲಿ ಹೆಣ್ಣು ಗಂಡಿನ ನಡುವೆ ಶ್ರಮ ಶಕ್ತಿ ವಿಭಜನೆಯ ಈ ಅನ್ಯಾಯದ ತಾರತಮ್ಯವನ್ನು ಬಿಡಿಸಿಡುತ್ತಾರೆ.

ಹೆರವರ ಹೊಲಗಳಲ್ಲಿ ಕೂಲಿ ಮಾಡುವ ಹೆಣ್ಣಾಳುಗಳಿಗೆ ಅರ್ಧ ಕೂಲಿಯ ಅವಮಾನ ಯುಗಗಳಿಂದ ನಡೆದು ಬಂದದ್ದು. ತೆಲುಗಿನ ಸಣ್ಣ ಕತೆಯೊಂದರಲ್ಲಿ ಗಂಡ ಹೆಂಡತಿ ಇಬ್ಬರೂ ಕೂಲಿಯಾಳುಗಳು. ಪರಸ್ಥಳಕ್ಕೆ ಪಯಣದ ಸಂದರ್ಭ. ಬಸ್ಸೇರಿ ಕುಳಿತವರ ಬಳಿ ಬರುವ ಕಂಡಕ್ಟರ್ ಎರಡು ಟಿಕೆಟ್‌ಗಳ ದರ ತೆರುವಂತೆ ಹೇಳುತ್ತಾನೆ. ಅದ್ಯಾಕೆ ಎರಡು ಟಿಕೆಟುಗಳ ರೊಕ್ಕ ಕೊಡಲಿ… ನನಗೆ ಪೂರ್ತಿ ಕೂಲಿ ಕೊಟ್ರೆ ಆಕೆಗೆ ಕೊಡೋದು ಅರ್ಧ ಕೂಲಿಯೇ. ಕೂಲಿಯಾದರೆ ಅರ್ಧ, ಟಿಕೆಟ್ಟಾದರೆ ಪೂರ್ತಿ! ಈ ಅನ್ಯಾಯ ಯಾಕೆ? ಒಂದೂವರೆ ಟಿಕೆಟ್ ಹರೀರ್ರಿ ಎಂದು ಪ್ರತಿಭಟಿಸುತ್ತಾನೆ ಗಂಡ. ಬಸ್ಸಲ್ಲಿ ಕುಳಿತ ಜನ ಆತನ ವಾದಕ್ಕೆ ಪಕಪಕನೆ ನಗುತ್ತಾರೆ. ಕತೆ ಅಲ್ಲಿಗೆ ಮುಗಿದುಹೋಗುತ್ತದೆ.

ಪಿತೃಪ್ರಧಾನ ವ್ಯವಸ್ಥೆಯ ಪಿರಮಿಡ್ ತುದಿಯಲ್ಲಿ ಶತಮಾನಗಳಿಂದ ಪವಡಿಸಿರುವ ಸ್ತ್ರೀದ್ವೇಷಿಗಳು ಈ ವಿಚಾರವನ್ನು ಒಪ್ಪಲಿಕ್ಕಿಲ್ಲ. ಸುಪ್ರೀಮ್ ಕೋರ್ಟು ಅರಿವಿನ ಆಗರ, ನ್ಯಾಯದಾನದ ತವನಿಧಿ ಎಂಬ ನಂಬಿಕೆಯಿದೆ. ಅದರ ನಡೆನುಡಿಗಳು ಈ ನಂಬಿಕೆಯ ತಳಹದಿಯನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಇರಬೇಕೇ ವಿನಾ ಸಡಿಲುಗೊಳಿಸಕೂಡದು.


ಇದನ್ನೂ ಓದಿ: ರೈತ ಮಹಿಳಾ ದಿನ: ರೈತರಿಗೆ ಬೆಂಬಲ ಘೋಷಿಸಿ ದೇಶವ್ಯಾಪಿ‌ ಪ್ರತಿಭಟನೆ ನಡೆಸಲು ಮಹಿಳೆಯರ ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...

SIR | ಸೆಕ್ಸ್ ವರ್ಕರ್ಸ್, ಅವರ ಮಕ್ಕಳ ಬಳಿ ದಾಖಲೆಗಳಿಲ್ಲ : ಮಹಾರಾಷ್ಟ್ರ ಸಿಇಒಗೆ ಪತ್ರ ಬರೆದ ರಾಷ್ಟ್ರೀಯ ಸಂಸ್ಥೆ

ದಾಖಲಾತಿ ಮತ್ತು ಪರಿಶೀಲನೆ ಅಗತ್ಯತೆಗಳ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಲೈಂಗಿಕ ಕಾರ್ಯಕರ್ತೆಯರು ಮತ್ತು ಅವರ ಮಕ್ಕಳನ್ನು ಹೊರಗಿಡದಂತೆ ನೋಡಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು...

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...