Homeಅಂಕಣಗಳುಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

ಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

- Advertisement -
- Advertisement -

ರೈತ ಪ್ರತಿಭಟನೆಗಳ ಭಾಗವಾಗಿ ಮಹಿಳೆಯರು ಯಾಕಿದ್ದಾರೆ?

ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಮೊನ್ನೆ ವಿಚಾರಣೆಯ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯಿದು. ಮನೆಗೆ ಮರಳುವಂತೆ ಅವರ ಮನ ಒಲಿಸಿರಿ. ಇಲ್ಲವಾದರೆ ಈ ಸಂಬಂಧ ಆದೇಶ ನೀಡಬೇಕಾದೀತು ಎಂದೂ ಅವರು ಹೇಳಿದರು.

ದೇಶದ ಕೃಷಿ ಶ್ರಮಿಕ ಪಡೆಯ ಶೇ.42ರಷ್ಟು ಮಹಿಳೆಯರೇ ಆಗಿದ್ದಾರೆ. ಆದರೆ ಅವರ ಕೃಷಿ ಜಮೀನಿನ ಒಡೆತನದ ಮಾತು ಬಂದರೆ ಆಕೆಯ ಹೆಸರಿಗಿರುವುದು ಕೇವಲ ಶೇ.ಎರಡರಷ್ಟು ಭೂಮಿ ಮಾತ್ರ ಎಂದು ರಾಷ್ಟ್ರೀಯ ಆನ್ವಯಿಕ ಆರ್ಥಶಾಸ್ತ್ರೀಯ ಸಂಶೋಧನಾ ಸಂಸ್ಥೆ 2018ರಲ್ಲಿ ಹೇಳಿದೆ.

2011ರ ಜನಗಣತಿಯ ಪ್ರಕಾರ ಗ್ರಾಮೀಣ ಭಾರತದ ಶೇ.65ರಷ್ಟು ಮಹಿಳೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒಕ್ಕಲುತನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮನ್ನೂ ರೈತರೆಂದು ವರ್ಗೀಕರಿಸಬೇಕೆಂಬುದು ಮಹಿಳೆಯರ ಬಹುಕಾಲದ ಬೇಡಿಕೆ. ಬಿತ್ತನೆ, ಮಾರಾಟದ ತೀರ್ಮಾನಗಳಲ್ಲೂ ಆಕೆಗೆ ದನಿಯಿಲ್ಲ. ಆದರೆ ಕೃಷಿವ್ಯವಸ್ಥೆಯ ಕೇಂದ್ರಬಿಂದು ಅವರು. ಬಿತ್ತನೆಯಿಂದ ಹಿಡಿದು ಕಟಾವಿನ ತನಕ, ದನ ಮೇಯಿಸುವುದರಿಂದ ಹಿಡಿದು ಹಾಲು ಹಿಂಡುವ ತನಕ ಗಂಡಸಿಗೆ ಸರಿಸಮ ಇಲ್ಲವೇ ಮಿಗಿಲಾದ ಶ್ರಮ ಆಕೆಯದು.

ಎಂಟು ನೂರು ಮಂದಿ ಮಹಿಳೆಯರು ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ಬಹಿರಂಗ ಪ್ರತಿಭಟನಾ ಪತ್ರ ಬರೆದಿದ್ದಾರೆ. ಕೃಷಿಯಲ್ಲಿ ಮಹಿಳೆಯರದು ಪ್ರಧಾನ ಪಾತ್ರ ಎಂಬ ವಾಸ್ತವವನ್ನು ನಿಮ್ಮ ಹೇಳಿಕೆಗಳು ಅವಮಾನಗೊಳಿಸಿವೆ. ಮಹಿಳೆಯು ಹಾಲಿ ರೈತ ಪ್ರತಿಭಟನೆಯ ಆತ್ಮ ಮತ್ತು ಹೃದಯವೆಂಬುದನ್ನು ಕಾಣಿರಿ. ಸರ್ಕಾರಿ ಅಂಕಿ ಅಂಶಗಳಲ್ಲಿ ಮಹಿಳಾ ರೈತರು ಮಟಾ ಮಾಯವಾಗಿರುವ ಜೀವಿಗಳು. ರೈತರ ಆತ್ಮಹತ್ಯೆಗಳ ನಿಜ ಭಾರವನ್ನು ಹೊರಬೇಕಾಗಿರುವ ಕಷ್ಟಜೀವಿ ಆಕೆ. ಸಾವಿಗಿಂತ ಬದುಕೇ ಕ್ರೂರ ಆಕೆಯ ಪಾಲಿಗೆ. ಆಕೆ ಕೇವಲ ರೈತನ ತಾಯಿ ಪತ್ನಿ, ಮಗಳು, ಸೋದರಿ, ಸೊಸೆ ಮಾತ್ರವೇ ಆಗಿರುತ್ತಾಳೆ. ರೈತಳೆಂದು ಆಕೆಯನ್ನು ಕರೆಯುವುದಿಲ್ಲ ಸರ್ಕಾರ. ಇದೀಗ ಸುಪ್ರೀಮ್ ಕೋರ್ಟಿನ ಮನಸ್ಥಿತಿಯೂ ಭಿನ್ನವಾಗಿಲ್ಲ.

ಈ ರೈತ ಪ್ರತಿಭಟನೆಯು ಕೇವಲ ಕೃಷಿ ಕಾನೂನುಗಳಿಗೆ ವಿರೋಧವನ್ನು ಸಿಡಿಸಿರುವುದಲ್ಲದೆ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಆವರಣವಾಗಿ ಹೊಮ್ಮಿರುವುದನ್ನು ಗಮನಿಸಿರಿ. ಆವರ ಪಾತ್ರವನ್ನು ಕಡೆಗಣಿಸುವುದು ಅತೀವ ಅವಹೇಳನಕರ ಎಂದಿದ್ದಾರೆ. ಈ ಕೃಷಿ ಕಾನೂನುಗಳಿಂದಾಗಿ ಒಕ್ಕಲುತನದ ಆದಾಯಗಳು ಮತ್ತಷ್ಟು ಕುಸಿದರೆ ಅದರ ನೇರ ಭಾರ ಹೊರುವವರು ಮನೆವಾರ್ತೆಯನ್ನು ನೋಡಿಕೊಳ್ಳಬೇಕಾಗಿರುವ ಹೆಣ್ಣುಮಕ್ಕಳೇ. ಪ್ರತಿಭಟನೆಯ ಸ್ಥಳಗಳಲ್ಲಿ ಮಾತ್ರವಲ್ಲದೆ ದೇಶದ ಉದ್ದಗಲಕ್ಕೆ ಭಾಷಣಗಳನ್ನು ಸಂಘಟಿಸುವ, ಸಭೆಗಳನ್ನು ಏರ್ಪಡಿಸುವ, ಪತ್ರಿಕಾಗೋಷ್ಠಿ ನಡೆಸುವ, ವೈದ್ಯೋಪಚಾರ ನೀಡುವ, ಅಡುಗೆ ಮಾಡುವ ಕ್ರಿಯೆಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಯಮಾಡಿ ಕೃಷಿಯಲ್ಲಿ ಮಹಿಳಾ ರೈತರ ಪಾತ್ರವನ್ನು ಗುರುತಿಸಿರಿ ಮತ್ತು ನಿಮ್ಮ ಪುರುಷಾಧಿಪತ್ಯದ ಮನಸ್ಥಿತಿಯಿಂದ ಹೊರಬನ್ನಿರಿ ಎಂದು ಮಹಿಳೆಯರು ಸುಪ್ರೀಮ್ ಕೋರ್ಟಿಗೆ ಝಾಡಿಸಿದ್ದಾರೆ.

ಮಹಿಳೆಯ ದುಡಿಮೆಯನ್ನು ಭಾರತೀಯ ಪುರುಷಾಧಿಪತ್ಯದ ರಾಜಕೀಯ ಸಾಮಾಜಿಕ ಆರ್ಥಿಕ ವ್ಯವಸ್ಥೆ ಗುರುತಿಸಿಯೇ ಇಲ್ಲ. ಆದಿಕಾಲದ ಬೇಟೆಗಾರ ಪುರುಷ ಈಟಿ ಮತ್ತು ಬೀಸು ಕೋಲನ್ನಷ್ಟೇ ಹಿಡಿದು ಹಗುರಕ್ಕೆ ನಡೆಯುತ್ತಿದ್ದರೆ, ಆತನ ಹಿಂದೆ ಹೆಜ್ಜೆ ಹಾಕುತ್ತಿದ್ದ ಆಕೆಯ ಮೇಲೆ ಅವರಿಬ್ಬರ ಕೂಸು, ಬಿಡಾರ ಹೂಡಿದರೆ ಛಾವಣಿಯಾಗಬಲ್ಲ ಪರಿಕರ, ಬುತ್ತಿ ಗಂಟುಗಳ ಜೊತೆಗೆ ಅಗೆಯುವ ಬಡಿಗೆಯ ಒಜ್ಜೆ. ಕೂಳು ಬೇಯಿಸಲು ಕಟ್ಟಿಗೆಯನ್ನು ಆಯುವುದು, ನೀರು ಹೊರುವುದು ಅಡಿಗೆ ಮಾಡುವುದು ಆಕೆಯದೇ ಕೆಲಸ. ಹೆಣ್ಣು ಗಂಡುಗಳ ನಡುವೆ ಸಾರ್ವತ್ರಿಕ ಶ್ರಮ ವಿಭಜನೆ ಎಂದರೆ ಆಕೆಯ ಪಾಲಿಗೆ ಮೈ ಮುರಿಯುವ ಗಾಣದೆತ್ತಿನ ಎಡೆಬಿಡದ ದುಡಿತ. ಕ್ರೀಡೆ, ಕನಸು, ಧರ್ಮ, ಕಲಾತ್ಮಕ ಅಭಿವ್ಯಕ್ತಿ, ಆಚರಣೆಗಳು ಆತನದೇ ವಿಶೇಷಾಧಿಕಾರ. ಪಶುಗಳನ್ನು ಪಳಗಿಸಿದ ನಂತರ ಪುರುಷ ಅವುಗಳನ್ನು ನೊಗಕ್ಕೆ ಹಚ್ಚಿ ದುಡಿಸಿದ. ಪಳಗಿಸಿದ ಪಶು ಸತ್ತಾಗ ಪುನಃ ನೊಗಕ್ಕೆ ನೇಗಿಲಿಗೆ ಹೆಗಲು ಕೊಟ್ಟದ್ದು ಆಕೆಯ. ಹಿಂದೆ ನಿಂತು ಆಕೆಯನ್ನು ನಡೆಸಿದ ಅಧಿಕಾರ ಆತನದೇ. ಇಂದಿಗೂ ಬಹಳಷ್ಟು ರೈತಾಪಿ ಕುಟುಂಬಗಳಲ್ಲಿ ಎತ್ತುಗಳನ್ನು ನಡೆಸಿಕೊಂಡಷ್ಟು ಉತ್ತಮವಾಗಿ ಹೆಣ್ಣನ್ನು ನಡೆಸಿಕೊಳ್ಳುವುದಿಲ್ಲ. ಆಕೆ ಕಂತೆ ಒಗೆದರೆ ಮತ್ತೊಬ್ಬ ತೊತ್ತು ಬೇಡಿಕೊಂಡು ಬಂದಾಳು. ಆದರೆ ಎತ್ತುಗಳು ಸತ್ತರೆ ಮತ್ತೆ ತರಲು ಹಣ ಸುರಿಯಬೇಕಲ್ಲ?

ಕೆಲಸ ಒಜ್ಜೆಯದು ಎಂದು ಆಕೆ ಎಂದೂ ಮಾಡದೆ ಬಿಟ್ಟವಳಲ್ಲ. ಬುದ್ಧಿಶಕ್ತಿ ಬೇಕಿರುವ ಮತ್ತು ನಿರ್ವಹಣಾ ಕೌಶಲ ಒಳಗೊಳ್ಳುವ ಕೆಲಸವನ್ನು ಆಕೆಗೆ ನಿರಾಕರಿಸಲಾಗಿತ್ತು. ಕತ್ತೆ ಕಾಯುವ ಕೆಲಸಾನೂ ಕೂಡ ಆಕೆಗೆ ಕೊಡುತ್ತಿರಲಿಲ್ಲ. ದಾರಿಯ ದೂರವನ್ನು ಕತ್ತೆಯ ಮೇಲೆ ಕುಳಿತು ಕ್ರಮಿಸುವ ರೈತಾಪಿ ಪುರುಷ ಮತ್ತು ಜೊತೆ ಜೊತೆಯಲ್ಲೇ ಓಡು ನಡಿಗೆಯಲ್ಲಿ ಧಾವಿಸುವ ಆತನ ಪತ್ನಿಯನ್ನು ಈಗಲೂ ಅಲ್ಲಲ್ಲಿ ಕಾಣುವುದು ಸಾಧ್ಯ. ಸಿರಿವಂತ ಪ್ರಪಂಚದಲ್ಲಿ ಈ ಸಂಬಂಧ ಕುಟುಂಬದ ಕಾರು ಸವಾರಿಯ ಸುಖ ಗಂಡನದಾದರೆ, ನಡೆದು ದೂರ ಕ್ರಮಿಸುವ ಇಲ್ಲವೇ ಬಸ್ಸಿನಲ್ಲಿ ಓಡಾಡುವ ಹೆಂಡತಿಯ ದೃಶ್ಯವಾಗಿ ಬದಲಾದೀತು

Photo Courtesy: The Indian Express

.

ಭಾರದ, ಮೈಮುರಿಯುವ, ನಿತ್ಯ ಮಾಡಿದ್ದನ್ನೇ ಮಾಡುವ ಅರ್ಥವಿಲ್ಲದ ದುಡಿತ ಆಕೆಯದು. ಜಗತ್ತಿನ ತುಂಬೆಲ್ಲ ಇದೇ ಕತೆ. ಕೂಳು ಬೇಯಿಸುವ ವಿರಳ ಉರುವಲನ್ನು ಹುಡುಕಿ ಹೆಕ್ಕಿ ಮುರಿದು ಹೊರೆಯಾಗಿ ಬಿಗಿದು ತಲೆಯ ಮೇಲೋ ಬೆನ್ನ ಮೇಲೆಯೋ ಹೊತ್ತು ತರುವವಳು ಆಕೆಯೇ. ದುರ್ಲಭ ನೀರನ್ನು ದೂರದಿಂದ ನೆತ್ತಿ ನುಗ್ಗಾಗುವಂತೆ ಹೊತ್ತು ತರುವುದು ಈಗಲೂ ಆಕೆಯದೇ ಕೆಲಸ. ಪುರುಷರು ಭಾರದ ನೀರನ್ನು ಹೊರುವುದು ವಿರಳವಾಗಿ ಲಭಿಸುವ ನೋಟ. ಶ್ರಮವನ್ನು ಹಗುರ ಮಾಡುವ ಊರ್ಜೆಯ ಮೂಲ ದೊರೆತ ಮರುಕ್ಷಣವೇ ಅಂತಹ ಕೆಲಸವನ್ನು ಪುರುಷರು ಬಾಚಿಕೊಳ್ಳುವರು.

ಸೊಂಟ ಬಗ್ಗಿಸಿಯೋ ಕುಕ್ಕರಗಾಲಲ್ಲಿ ಕುಳಿತೋ ಕಳೆಗುದ್ದಲಿ ಮತ್ತು ಪಿಕಾಸಿಗಳಲ್ಲೇ ಮಾಡಬೇಕಿದ್ದಷ್ಟು ದಿನ ಉಳುಮೆಯ ಕೆಲಸ ಆಕೆಯದು. ಟ್ರ್ಯಾಕ್ಟರುಗಳು, ಟಿಲ್ಲರುಗಳು ಬಂದೊಡನೆಯೇ ಆತನದಾಗಿಬಿಡುತ್ತದೆ!

ವಿಶ್ವಸಂಸ್ಥೆಯ ಯೋಜನೆಯೊಂದು ಮಹಿಳಾ ವ್ಯಾಪಾರಿಗಳಿಗೆ ಹಂಚಿದ ಬೈಸಿಕಲ್‌ಗಳನ್ನು ಕಿತ್ತುಕೊಂಡು ಸವಾರಿ ಮಾಡಿದವರು ಅವರ ಗಂಡಂದಿರು. ಮಹಿಳೆಯರು ಎಂದಿಂತೆ ತಮ್ಮ ಉತ್ಪನ್ನಗಳ ಮೂಟೆ ಹೊರೆಯನ್ನು ನೆತ್ತಿಯ ಮೇಲೆ ಹೊತ್ತು ಮೈಲಿಗಟ್ಟಲೆ ನಡೆಯುವುದು ತಪ್ಪಲಿಲ್ಲ. ಅನಾದಿಕಾಲದಿಂದ ಮಹಿಳೆಯ ಶ್ರಮ ಶಕ್ತಿಯ ಕುರಿತ ಈ ವ್ಯಾಖ್ಯಾನ ಖ್ಯಾತ ಸ್ತ್ರೀ ಚಿಂತಕಿ ಜರ್ಮೇನ್ ಗ್ರೀರ್ ಅವರದು. The Whole Woman ಎಂಬ ಕೃತಿಯಲ್ಲಿ ಹೆಣ್ಣು ಗಂಡಿನ ನಡುವೆ ಶ್ರಮ ಶಕ್ತಿ ವಿಭಜನೆಯ ಈ ಅನ್ಯಾಯದ ತಾರತಮ್ಯವನ್ನು ಬಿಡಿಸಿಡುತ್ತಾರೆ.

ಹೆರವರ ಹೊಲಗಳಲ್ಲಿ ಕೂಲಿ ಮಾಡುವ ಹೆಣ್ಣಾಳುಗಳಿಗೆ ಅರ್ಧ ಕೂಲಿಯ ಅವಮಾನ ಯುಗಗಳಿಂದ ನಡೆದು ಬಂದದ್ದು. ತೆಲುಗಿನ ಸಣ್ಣ ಕತೆಯೊಂದರಲ್ಲಿ ಗಂಡ ಹೆಂಡತಿ ಇಬ್ಬರೂ ಕೂಲಿಯಾಳುಗಳು. ಪರಸ್ಥಳಕ್ಕೆ ಪಯಣದ ಸಂದರ್ಭ. ಬಸ್ಸೇರಿ ಕುಳಿತವರ ಬಳಿ ಬರುವ ಕಂಡಕ್ಟರ್ ಎರಡು ಟಿಕೆಟ್‌ಗಳ ದರ ತೆರುವಂತೆ ಹೇಳುತ್ತಾನೆ. ಅದ್ಯಾಕೆ ಎರಡು ಟಿಕೆಟುಗಳ ರೊಕ್ಕ ಕೊಡಲಿ… ನನಗೆ ಪೂರ್ತಿ ಕೂಲಿ ಕೊಟ್ರೆ ಆಕೆಗೆ ಕೊಡೋದು ಅರ್ಧ ಕೂಲಿಯೇ. ಕೂಲಿಯಾದರೆ ಅರ್ಧ, ಟಿಕೆಟ್ಟಾದರೆ ಪೂರ್ತಿ! ಈ ಅನ್ಯಾಯ ಯಾಕೆ? ಒಂದೂವರೆ ಟಿಕೆಟ್ ಹರೀರ್ರಿ ಎಂದು ಪ್ರತಿಭಟಿಸುತ್ತಾನೆ ಗಂಡ. ಬಸ್ಸಲ್ಲಿ ಕುಳಿತ ಜನ ಆತನ ವಾದಕ್ಕೆ ಪಕಪಕನೆ ನಗುತ್ತಾರೆ. ಕತೆ ಅಲ್ಲಿಗೆ ಮುಗಿದುಹೋಗುತ್ತದೆ.

ಪಿತೃಪ್ರಧಾನ ವ್ಯವಸ್ಥೆಯ ಪಿರಮಿಡ್ ತುದಿಯಲ್ಲಿ ಶತಮಾನಗಳಿಂದ ಪವಡಿಸಿರುವ ಸ್ತ್ರೀದ್ವೇಷಿಗಳು ಈ ವಿಚಾರವನ್ನು ಒಪ್ಪಲಿಕ್ಕಿಲ್ಲ. ಸುಪ್ರೀಮ್ ಕೋರ್ಟು ಅರಿವಿನ ಆಗರ, ನ್ಯಾಯದಾನದ ತವನಿಧಿ ಎಂಬ ನಂಬಿಕೆಯಿದೆ. ಅದರ ನಡೆನುಡಿಗಳು ಈ ನಂಬಿಕೆಯ ತಳಹದಿಯನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಇರಬೇಕೇ ವಿನಾ ಸಡಿಲುಗೊಳಿಸಕೂಡದು.


ಇದನ್ನೂ ಓದಿ: ರೈತ ಮಹಿಳಾ ದಿನ: ರೈತರಿಗೆ ಬೆಂಬಲ ಘೋಷಿಸಿ ದೇಶವ್ಯಾಪಿ‌ ಪ್ರತಿಭಟನೆ ನಡೆಸಲು ಮಹಿಳೆಯರ ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...