ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಹಲವು ದಶಕಗಳಿಂದ ಜಾರಿಯಲ್ಲಿದ್ದ ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನವನ್ನು ನಿಲ್ಲಿಸಿರುವ ಕೇಂದ್ರ ಸರ್ಕಾರ ಈಗ, ಅಲ್ಪ ಸಂಖ್ಯಾತ ವರ್ಗದ ಮಕ್ಕಳು ಉನ್ನತ ಶಿಕ್ಷಣ ಮುಂದುವರಿಸಲು ನೀಡಲಾಗುತ್ತಿದ್ದ ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್ (ಎಂಎಎನ್ಎಫ್) ಸ್ಥಗಿತಗೊಳಿಸುವ ತೀರ್ಮಾನವನ್ನೂ ಪ್ರಕಟಿಸಿದೆ. ಇದು ಅತ್ಯಂತ ಖಂಡನೀಯ ನಡೆ ಎಂದು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮಹಾಪೋಷಕರಾದ ವಿ.ಪಿ.ನಿರಂಜನಾರಾಧ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಾದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ನಿಲ್ಲಿಸುವ ಮೂಲಕ ಸಂವಿಧಾನದ ಪರಿಚ್ಚೇಧ 21ಎ ಅನ್ವಯ ಕೊಡಮಾಡಿರುವ ಶಿಕ್ಷಣದ ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಉನ್ನತ ಶಿಕ್ಷಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವಕಾಶವನ್ನು ಒದಗಿಸಲು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ 1948ರ ಪರಿಚ್ಚೇಧ 26ರ ಅನ್ವಯ ಹಾಗೂ ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲಾಗಿದೆ. ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಿದ್ದ ಫೆಲೋಶಿಪ್ ಅವಕಾಶವನ್ನು ಕಸಿಯಲಾಗಿದೆ. ದೆಹಲಿಯ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿಯ ಶಿಫಾರಸ್ಸಿನ ಅನ್ವಯ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಿದ್ದ ಫೆಲೋಶಿಪ್ ನಿಲ್ಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಅಲ್ಪ ಸಂಖ್ಯಾತ ವರ್ಗದ ಶಿಕ್ಷಣ ದಯನೀಯ ಪರಿಸ್ಥಿತಿಯಲ್ಲಿದೆ ಎಂದು ನ್ಯಾಯಮೂರ್ತಿ ಸಾಚಾರ್ ಸಮಿತಿಯ ವರದಿ ತಿಳಿಸಿತ್ತು. ಎಂಎಎನ್ಎಫ್ ಪ್ರಾರಂಭಿಸಿತ್ತು. ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ್ದ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿಗಳನ್ನು ಒಳಗೊಂಡಂತೆ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ವಿದ್ಯಾರ್ಥಿವೇತನ ಕಾರ್ಯಕ್ರಮ ಇದಾಗಿತ್ತು ಎಂದು ನಿರಂಜನಾರಾಧ್ಯ ವಿವರಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಹೆಸರನ್ನು ಈ ವಿದ್ಯಾರ್ಥಿವೇತನಕ್ಕೆ ಇಡಲಾಗಿತ್ತು. ಈ ಫೆಲೋಶಿಪ್ ವಿದ್ಯಾರ್ಥಿಗಳ ಬೋಧನಾ ಶುಲ್ಕ, ಹಾಸ್ಟೆಲ್ ಸೌಕರ್ಯಗಳು ಮತ್ತು ಇತರ ಶೈಕ್ಷಣಿಕ ವೆಚ್ಚಗಳ ವೆಚ್ಚವನ್ನು ಒಳಗೊಂಡಿದ್ದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ ನಿರ್ವಹಿಸಲ್ಪಡುತ್ತಿತ್ತು. ಆರ್ಥಿಕ ಸ್ಥಿತಿಯ ವಿಷಯದಲ್ಲಿ ಅತ್ಯಂತ ಹಿಂದುಳಿದಿದ್ದ ಈ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಗಳ ವ್ಯಾಪ್ತಿಯಿಂದ ಹೊರಗಿದ್ದರು. ಸಾಚಾರ್ ಸಮಿತಿಯು ಉನ್ನತ ಶಿಕ್ಷಣದಲ್ಲಿ ಅಲ್ಪಸಂಖ್ಯಾತ ಸಮುದಾಯ ಅತ್ಯಂತ ಕಡಿಮೆ ಅನುಪಾತವನ್ನು ಹೊಂದಿದ್ದನ್ನು ಗುರುತಿಸಿ, ಉನ್ನತ ಶಿಕ್ಷಣದಲ್ಲಿ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಈ ಆರ್ಥಿಕ ಪ್ರೋತ್ಸಾಹವನ್ನು ಶಿಫಾರಸ್ಸು ಮಾಡಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಬಿಜೆಪಿಯಲ್ಲಿ ಸ್ಥಾನ ಪಡೆಯಲು ರೌಡಿಗಳ ಕ್ರೈಮ್ ಸ್ಕೋರ್ ಹೆಚ್ಚಳ: ಕಾಂಗ್ರೆಸ್ ಆರೋಪ
ಕೇಂದ್ರ ಸರ್ಕಾರದ ಈ ನಡೆ ಅತ್ಯಂತ ತುಳಿತಕ್ಕೊಳಗಾದ ಮತ್ತು ಅವಕಾಶ ವಂಚಿತ ವರ್ಗಗಳ ಶೈಕ್ಷಣಿಕ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ. ಕೇಂದ್ರದ ಈ ಕ್ರಮವು ದಲಿತ, ಬಹುಜನ, ಆದಿವಾಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿರೋಧಿ ನಡೆಯಾಗಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಗೌಪ್ಯ ಅಜೆಂಡಾಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಪೂರ್ಣವಾಗಿ ದುರ್ಬಲಗೊಳಿಸುವುದರ ಜೊತೆಗೆ ಶಿಕ್ಷಣವನ್ನು ಮುಂದುವರಿಸಲು ಅವಕಾಶ ವಂಚಿತ ಸಮುದಾಯಗಳಿಗಿದ್ದ ಎಲ್ಲಾ ಉತ್ತೇಜಕಗಳನ್ನು ಕಡಿತಗೊಳಿಸುವ ಮೂಲಕ ಶಿಕ್ಷಣದ ಖಾಸಗೀಕರಣವನ್ನು ವೇಗವರ್ಧನಗೊಳಿಸುವುದಾಗಿದೆ ಎಂಬುದನ್ನು ನಾಡಿನ ಜನತೆ ಈಗಲಾದರು ಅರಿಯಬೇಕಿದೆ ಎಂದು ಮನವಿ ಮಾಡಿದ್ದಾರೆ.
ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ವಿದ್ಯಾರ್ಥಿಗಳಿಗೆ ಲಭ್ಯವಿರುವ ಈ ಯೋಜನೆಗಳ ಮಹತ್ವವನ್ನು ಸಂವಿಧಾನದಲ್ಲಿ ನಂಬಿಕೆ ಇರುವ ಎಲ್ಲರೂ ಅರಿಯಬೇಕಿದೆ. ಇವುಗಳನ್ನು ಮುಂದುವರಿಸಲು ಒಕ್ಕೊರಲಿನಿಂದ ಒತ್ತಾಯಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


