ಗುಜರಾತ್ನ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ಭೂಪೇಂದ್ರ ಪಟೇಲ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದರು. ಬಿಜೆಪಿ ಆಡಳಿತ ನಡೆಸುತ್ತಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜ್ಯ ರಾಜಧಾನಿಯಾದ ಗಾಂಧಿನಗರದ ಹೊಸ ಸಚಿವಾಲಯದ ಸಂಕೀರ್ಣದೊಳಗಿನ ಹೆಲಿಪ್ಯಾಡ್ ಮೈದಾನದಲ್ಲಿ ಸಮಾರಂಭ ನಡೆದಿದೆ. ಗುಜರಾತ್ನ 18ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಪ್ರಮಾಣ ವಚನ ಬೋಧಿಸಿದ್ದಾರೆ. ಸಮಾರಂಭದಲ್ಲಿ ನೂತನ ಸಚಿವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಸಮಾರಂಭದ ಸಿದ್ದತೆಯನ್ನು ಐಎಎಸ್ ಅಧಿಕಾರಿಗಳ ಸಮಿತಿಯು ಮಾಡಿತ್ತು. ಸುಮಾರು 20,000 ಜನರಿಗೆ ಅವಕಾಶ ಕಲ್ಪಿಸುವ ಹೆಲಿಪ್ಯಾಡ್ ಮೈದಾನದಲ್ಲಿ ವೇದಿಕೆ ನಿರ್ಮಿಸಲಾಗಿತ್ತು.
ತಾಲೂಕು ಮತ್ತು ನಗರ ಮಟ್ಟದ ಬಿಜೆಪಿ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಪಕ್ಷದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಎಪಿಎಂಸಿ ಅಧ್ಯಕ್ಷರು/ಉಪಾಧ್ಯಕ್ಷರು, ನಿರ್ದೇಶಕರು, ಗ್ರಾಮ ಪಂಚಾಯಿತಿಗಳ ಸರಪಂಚ್ಗಳು, ಜನಸಂಘ ಕಾಲದ ಪಕ್ಷದ ಹಿರಿಯ ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಗುಜರಾತ್ನಲ್ಲಿ ಪಕ್ಷದ ಚುನಾವಣಾ ಪ್ರಚಾರದ ಸಮಯದಲ್ಲಿ ಹಲವಾರು ರಾಷ್ಟ್ರಮಟ್ಟದ ನಾಯಕರನ್ನು ಕರೆತರಲಾಗಿತ್ತು. ಅವರೆಲ್ಲರೂ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಭಾಗವಾಗಿದ್ದರು ಎಂದು ವರದಿಯಾಗಿದೆ.
ಅಹಮದಾಬಾದ್ ನಗರದ ಘಾಟ್ಲೋಡಿಯಾ ಕ್ಷೇತ್ರದಿಂದ 1.92 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಭೂಪೇಂದ್ರ ಪಟೇಲ್ ಅವರನ್ನು ಚುನಾಯಿತ ಶಾಸಕರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ನಡೆದ ಗುಜರಾತ್ ವಿಧಾನಸಭೆಯ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳ ಪೈಕಿ 156 ಸ್ಥಾನಗಳಲ್ಲಿ ಬೆಜೆಪಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಸತತ ಏಳನೇ ಬಾರಿಗೆ ವಿಜಯ ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದರೆ, ಆಮ್ ಆದ್ಮಿ ಪಕ್ಷ (ಎಎಪಿ) ಐದು ಸ್ಥಾನಗಳನ್ನು ಗೆಲ್ಲುವ ರಾಜ್ಯದಲ್ಲಿ ಖಾತೆ ತೆರೆದಿದೆ.
ಕನುಭಾಯಿ ದೇಸಾಯಿ, ಋಷಿಕೇಶ್ ಪಟೇಲ್, ರಾಘವಜಿ ಪಟೇಲ್, ಬಲವಂತಸಿಂಹ ರಜಪೂತ, ಕುಂವರ್ಜಿ ಬವಲಿಯಾ, ಮುಳು ಬೇರ, ಕುಬೇರ್ ದಿಂಡೋರ್, ಭಾನುಬೆನ್ ಬಬಾರಿಯಾ ಅವರು ಕ್ಯಾಬಿನೇಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.