Homeಮುಖಪುಟತಬ್ಲಿಘಿದು ಬೇಜವಾಬ್ದಾರಿ, ಸರ್ಕಾರದ್ದು ಹೊಣೆಗೇಡಿತನ : ಅದಕ್ಕಿಂತಲೂ ಭೀಕರ ಕಮ್ಯುನಲ್ ವೈರಸ್

ತಬ್ಲಿಘಿದು ಬೇಜವಾಬ್ದಾರಿ, ಸರ್ಕಾರದ್ದು ಹೊಣೆಗೇಡಿತನ : ಅದಕ್ಕಿಂತಲೂ ಭೀಕರ ಕಮ್ಯುನಲ್ ವೈರಸ್

ಈ ವಿಚಾರದಲ್ಲಿ ಇನ್ನೂ ಹೆಚ್ಚು ಬೇಜವಾಬ್ದಾರಿತನ ಮತ್ತು ದುರುದ್ದೇಶದಿಂದ ನಡೆದುಕೊಂಡಿದ್ದು ಮಾಧ್ಯಮಗಳು. ಕಮ್ಯುನಲ್ ಅಲ್ಲ ಎಂದು ಬಗೆಯಲಾಗಿರುವ ಮಾಧ್ಯಮಗಳೂ ಕೆಟ್ಟದಾಗಿ ನಡೆದುಕೊಂಡವು.

- Advertisement -
- Advertisement -

ಬಹುಶಃ ಉಚ್ಚೆಯಲ್ಲಿ ಮೀನು ಹಿಡಿಯುವುದು ಎಂದರೆ ಇದೇ ಇರಬಹುದು. ಪ್ರಪಂಚವೇ ಒಂದು ಮಾನವೀಯ ಬಿಕ್ಕಟ್ಟಿನಲ್ಲಿ ತಲ್ಲಣಗೊಂಡಿರುವಾಗಲೂ ತಮಗೆ ಹಿಡಿದಿರುವ ಕೋಮುವೈರಸ್‌ನಿಂದ ಕೆಲವರು ಹೊರಬರಲಾಗಲಿಲ್ಲ. ಇದು ಕೇವಲ ವೈರಸ್ಸಾ ಅಥವಾ ಶಸ್ತ್ರಚಿಕಿತ್ಸೆಯನ್ನೇ ಬೇಡುವ ಕ್ಯಾನ್ಸರ್‍ರಾ ಹೇಳಲಾಗದು.

ನಿನ್ನೆ ಕ್ಯಾನ್ಸರ್ ತಜ್ಞರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಚೀನಾದ ಅಧ್ಯಕ್ಷರ ಫೋಟೋ ಹಾಕಿ ‘ಸೃಷ್ಟಿಕರ್ತ’ನೆಂದೂ, ಮುಸ್ಲಿಂ ಗುಂಪೊಂದರ ಫೋಟೋ ಹಾಕಿ ‘ಹಂಚಿಕೆದಾರರು’ ಎಂದೂ ಬರೆದಿದ್ದ ಚಿತ್ರ ಅದು. ಅದನ್ನು ನೋಡಿದ ಕನಿಷ್ಠ ನೂರು ಜನ ವೈದ್ಯರಿಗೂ ಅದು ತಪ್ಪೆಂದು ಅನಿಸಲಿಲ್ಲ. ಇದು ಈ ದೇಶಕ್ಕೆ ಹತ್ತಿದ ವೈರಸ್‌ಗಳಲ್ಲಿ ಕೊರೊನಾಗಿಂತ ಅಪಾಯಕಾರಿಯಾದವು ಬಹಳಷ್ಟಿವೆ ಎಂಬುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಿದೆ. ನಿಜಾಮುದ್ದೀನ್ ಪ್ರಕರಣವು ಅದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಝ್ ಮಸೀದಿಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿದ್ದ ತಬ್ಲಿಘಿ ಜಮಾತ್‌ನದ್ದು ಖಂಡಿತವಾಗಿ ಬೇಜವಾಬ್ದಾರಿ ವರ್ತನೆ. ಏಕೆಂದರೆ ಆ ಹೊತ್ತಿಗಾಗಲೇ ಹಲವು ದೇಶಗಳಲ್ಲಿ ಕೊರೊನಾದ ಸೋಂಕು ವ್ಯಾಪಿಸಿತ್ತು ಮತ್ತು ಈ ಸಮ್ಮೇಳನದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಆಹ್ವಾನಿತರಾಗಿದ್ದರು. ಅಲ್ಲಿಂದಾಚೆಗೂ ಅವರು ತೆಗೆದುಕೊಂಡಿದ್ದೇವೆಂದು ಹೇಳುತ್ತಿರುವ ಕ್ರಮಗಳೂ ಸಹಾ ಅವರು ಸಂಪೂರ್ಣ ಹೊಣೆಗಾರಿಕೆಯಿಂದ ವರ್ತಿಸಿದ್ದಾರೆಂದು ಸಾಬೀತು ಮಾಡುವುದಿಲ್ಲ. ಆದರೆ, ನಿಸ್ಸಂದೇಹವಾಗಿ ಹೇಳಬಹುದಾದ ಸಂಗತಿಯೆಂದರೆ ಸರ್ಕಾರವೂ ಕ್ರಿಮಿನಲ್ ನಿರ್ಲಕ್ಷ್ಯ ತೋರಿದೆ.

ಮುಖ್ಯವಾಗಿ ಮಾರ್ಚ್ 13-14ರಂದು ನಡೆದ ಅಂರ‍್ರಾಷ್ಟ್ರೀಯ ಸಮ್ಮೇಳನದ ನಂತರವೂ ಮರ್ಕಝ್‌ನಲ್ಲಿ ಜನರು ಉಳಿದುಕೊಂಡಿದ್ದಾರೆ. ಇಡೀ ಪ್ರಕರಣದ ವಿವರಗಳು ಯಾವುದೇ ಪಕ್ಷಪಾತವಿಲ್ಲದೇ ಹೊರಬೀಳಬೇಕು. ಆಗ ಉಳಿದ ವಿವರಗಳು ಗೊತ್ತಾಗಲು ಸಾಧ್ಯ. ಅದರಲ್ಲೂ ನಿರ್ದಿಷ್ಟವಾಗಿ 22, 23 ಮತ್ತು 24ರ ಘಟನಾವಳಿಗಳ ವಿವರಗಳು ಹೊರಬರಬೇಕು. ತಬ್ಲಿಘಿ ಹೇಳಿರುವಂತೆ ‘ಇಲ್ಲೇ ಉಳಿದುಕೊಂಡಿರುವ ಇತರರನ್ನು ಕಳಿಸಲು ವಾಹನ ಪಾಸ್ ಕೊಡಿ ಎಂದು ಎಷ್ಟು ಕೇಳಿದರೂ ಸರ್ಕಾರೀ ಅಧಿಕಾರಿಗಳು ಸ್ಪಂದಿಸಲಿಲ್ಲ’ ಎನ್ನುವುದೇ ನಿಜವಾದರೆ ಸಂಬಂಧಪಟ್ಟ ಅಧಿಕಾರಿಗಳ ನಿಜವಾದ ಉದ್ದೇಶದ ಬಗ್ಗೆಯೇ ಶಂಕೆ ಏಳುತ್ತದೆ. ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು ತಬ್ಲಿಘಿನ ಈ ಹೇಳಿಕೆಯನ್ನು ಅಲ್ಲಗಳೆದಿಲ್ಲ ಎಂಬುದನ್ನು ಗಮನಿಸಬೇಕು.

ದೆಹಲಿಯ ನಿಜಾಮುದ್ದಿನ್ ಮರ್ಕಝ್ ನಲ್ಲಿ ನಡೆದುದ್ದೇನು? ನಡೆಯದೇ ಇದ್ದುದ್ದೇನು? ಇಲ್ಲಿ ಕೇಳಿ….

Posted by Naanu Gauri on Tuesday, March 31, 2020

ಮಾರ್ಚ್ 23ರಂದು ಎಚ್ಚರಿಕೆ ನೀಡಲಾಗಿತ್ತು ಎಂಬ ಪೊಲೀಸರ ಹೇಳಿಕೆಯನ್ನು ತಬ್ಲಿಘಿ ಸಹಾ ಅಲ್ಲಗಳೆದಿಲ್ಲ; ಅದಕ್ಕೆ ಉತ್ತರವಾಗಿ ಮಾರ್ಚ್ 24ರಂದು ತಾವು ಬರೆದ ಪತ್ರ ಮತ್ತು ಪತ್ರದಲ್ಲೂ, ಪೊಲೀಸರ ವಿಡಿಯೋದಲ್ಲೂ ಅವರು ಹೇಳಿರುವಂತೆ ಲಾಕ್‌ಡೌನ್ ಸಂದರ್ಭದಲ್ಲಿ ಹೊರಕಳಿಸುವುದು ಹೇಗೆ ಎಂಬ ಪ್ರಶ್ನೆಗೆ ಯಾರು ಉತ್ತರ ಕೊಡುವುದೂ ಕಷ್ಟ. ಹಿಂದೂಸ್ತಾನ್ ಟೈಮ್ಸ್‌ನಲ್ಲಿ ವರದಿಯಾಗಿರುವ ಹಾಗೆ ‘ಅದಿನ್ನೂ ಲಾಕ್‌ಡೌನ್ ಹೊಸದಾಗಿ ಘೋಷಣೆಯಾಗಿತ್ತು. ಅತ್ಯಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ನಾವು ಪಾಸ್ ನೀಡಬಹುದಾಗಿತ್ತು ಮತ್ತು ಇವರನ್ನು ಸಾಗಿಸುವುದು ಅತ್ಯಗತ್ಯವೆಂದು ಹೇಗೆ ಹೇಳುವುದು? ಹಾಗಾಗಿಯೇ ಪಾಸ್ ನೀಡಲಿಲ್ಲ’. ಅಂದರೆ, ಇಂತಹ ಲಾಕ್‌ಡೌನ್ ಅನುಭವವಿಲ್ಲದ ಜನರು ಮಾಡುವ ತಪ್ಪುಗಳು ಎರಡೂ ಕಡೆಯಿಂದ ಆಗಿವೆ. ‘ಜನರ ಸಾಗಾಣಿಕೆ’ಯೂ ಅತ್ಯಗತ್ಯ ಎಂಬುದು ಈ ಪ್ರಕರಣದಲ್ಲೂ ಮತ್ತೆ ಸಾಬೀತಾಗಿದೆ.

ಈ ವಿಚಾರದಲ್ಲಿ ಇನ್ನೂ ಹೆಚ್ಚು ಬೇಜವಾಬ್ದಾರಿತನ ಮತ್ತು ದುರುದ್ದೇಶದಿಂದ ನಡೆದುಕೊಂಡಿದ್ದು ಮಾಧ್ಯಮಗಳು. ಕಮ್ಯುನಲ್ ಅಲ್ಲ ಎಂದು ಬಗೆಯಲಾಗಿರುವ ಮಾಧ್ಯಮಗಳೂ ಕೆಟ್ಟದಾಗಿ ನಡೆದುಕೊಂಡವು. ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಮತ್ತು ದಿ ಪ್ರಿಂಟ್‌ನ ಸಂಪಾದಕ ಶೇಖರ್ ಗುಪ್ತಾ ಅವರ ಮಾತುಗಳನ್ನು ಇಲ್ಲಿ ನೀಡಲಾಗಿದೆ.

‘ತಬ್ಲಿಘಿ ಜಮಾತ್ – ಮರ್ಕಾಜ್‌ನವರು ಮಾರ್ಚ್ ಎರಡನೇ ವಾರದಲ್ಲಿ ಒಂದು ದೊಡ್ಡ ಸಮಾವೇಶ ಅಯೋಜಿಸಿದ್ದು ಒಂದು ದುಡುಕಿನ, ದುಸ್ಸಾಹಸದ ಕೆಲಸವೇ ಆಗಿತ್ತು. ವಿಶೇಷವಾಗಿ ಕೋವಿಡ್-19 ಪೀಡಿತ ದೇಶಗಳ ಅಂತರರಾಷ್ಟ್ರೀಯ ಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ನೀಡಿದ್ದು ಬೇಜವಾಬ್ದಾರಿತನದ ಕೆಲಸ; ಇದು ಸರಳ ತರ್ಕವನ್ನು ಉಲ್ಲಂಘಿಸಿದಂತೆ. ಫೆಬ್ರುವರಿ ತಿಂಗಳ ಮಧ್ಯದಲ್ಲಿ ಮಲೇಷಿಯದಲ್ಲಿ 16 ಸಾವಿರ ಜನರು ತಬ್ಲಿಘಿಯ ಒಂದು ಸಮಾವೇಶದಲ್ಲಿ ಭಾಗವಹಿಸಿದ್ದರು. ಆರು ದೇಶಗಳಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳು ಈ ಸಮಾವೇಶದಿಂದಾಗಿರುವುದು ಎಂದು ಹೇಳಲಾಗಿತ್ತು. ದೆಹಲಿಯ ಮರ್ಕಾಜ್ ಸಭೆಗೆ ಮಲೇಷಿಯದಲ್ಲಿ ಆದ ಸಮಾವೇಶದಲ್ಲಿ ಭಾಗವಹಿಸಿದ ಧರ್ಮಗುರುಗಳೂ ಹಾಜರಾಗಿದ್ದರು. ಇದು ಬೇಜವಾಬ್ದಾರಿಯ ಕೆಲಸ.

ಮಾರ್ಚ್ 11ರಂದೇ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಅನ್ನು ಒಂದು ಪ್ಯಾಂಡೆಮಿಕ್ (ಸಾಂಕ್ರಾಮಿಕ) ರೋಗ ಎಂದು ಘೋಷಿಸಿದಾಗಲೇ ದೆಹಲಿಯ ಸಮಾವೇಶವನ್ನು ನಿಲ್ಲಿಸಬೇಕಾಗಿತ್ತು, ದೆಹಲಿ ಸರಕಾರದ ಹಾಗೂ ಕೇಂದ್ರ ಸರಕಾರದ ಲಾಕ್‌ಡೌನ್‌ಗಾಗಿ ಕಾಯಬೇಕಾಗಿರಲಿಲ್ಲ.

ಆದರೆ, ಅದರೊಂದಿಗೆ ನಮ್ಮ ಸರಕಾರಗಳೂ ಕೋವಿಡ್-19 ಭೀತಿಗೆ ಎಚ್ಚೆತ್ತುಕೊಂಡಿದ್ದು ತುಂಬಾ ತಡವಾಗಿ ಎನ್ನುವುದೂ ಅಷ್ಟೇ ಸತ್ಯ. ಆ ಸಮಾವೇಶಕ್ಕೆ ಪೊಲೀಸರ ಅನುಮತಿ ಇಲ್ಲದಿದ್ದರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ; ನಿಝಾಮುದ್ದೀನ್ ಪೊಲೀಸ್ ಸ್ಟೇಷನ್‌ಗೆ ಮರ್ಕಝ್ ಕೇವಲ 100 ಮೀಟರ್ ದೂರದಲ್ಲಿದೆ. ಆ ಸ್ಥಳದಲ್ಲಿ ಆಗ ಗೂಢಚರ್ಯೆ ಇಲಾಖೆಯ ಅಧಿಕಾರಿಗಳು ಇದ್ದರು ಎನ್ನುವುದೂ ಸತ್ಯ. (ಆ ಅಧಿಕಾರಿಗಳ ಆರೋಗ್ಯದ ಪರೀಕ್ಷೆ ಮೊದಲು ಮಾಡಿಸಿ) ಈ ಸಭೆಯ ಬಗ್ಗೆ ದೆಹಲಿ ಸರಕಾರಕ್ಕೆ ಮಾಹಿತಿ ಇರದೇ ಇರುವುದಕ್ಕೆ ಛಾನ್ಸೇ ಇಲ್ಲ.

ನಾವೆಲ್ಲರೂ ಮೊದಲ ಹಂತಗಳಲ್ಲಿ ತಪ್ಪು ಮಾಡಿದ್ದೀವಿ ಎನ್ನುವುದು ಒಪ್ಪಿಕೊಳ್ಳುವ. ಆದರೆ ದೆಹಲಿ ಸರಕಾರದಿಂದಲೇ ಮಾರ್ಚ್ 13ರಂದು ಆದೇಶ ಜಾರಿಗೊಳಿಸಿದ ನಂತರ ದೆಹಲಿ ಸರಕಾರ ಮತ್ತು ದೆಹಲಿ ಪೊಲೀಸ್ ಏನು ಮಾಡುತ್ತಿದ್ದವು? ಆ ಸಭೆಯನ್ನು ಆಡಳಿತವು ಅಲ್ಲಿಗೇ ಏಕೆ ನಿಲ್ಲಿಸಲಿಲ್ಲ? ಅದರ ನಂತರವೂ ಸಭೆಯನ್ನು ಮರ್ಕಾಜ್ ಮುಂದುವರೆಸಿದ್ದು ಅಕ್ಷಮ್ಯ. But there is no way it went under the radar. ಅದಕ್ಕಿಂತ ಮುಖ್ಯವಾಗಿ, ಕೋವಿಡ್-19 ಪ್ರಬಾಧಿತ ದೇಶಗಳಿಂದ ಜನರು ಏರ್‌ಪೋರ್ಟ್‌ಗಳಲ್ಲಿ ಪರೀಕ್ಷೆಗೆ ಒಳಗಾಗದೇ ಹೇಗೆ ಬಂದರು?

ಆದರೆ ಇದನ್ನು ಕೊರೊನಾ ಜಿಹಾದ್ ಎಂದು ಕರೆದು, ಕೋವಿಡ್-19 ಹರಡುವುದಕ್ಕೆ ಮುಸ್ಲಿಮ್ ಸಮುದಾಯವನ್ನು ದೂಷಿಸುವ ಕಥನವನ್ನು ಕಟ್ಟುತ್ತಿರುವುದು ನಿಜಕ್ಕೂ ಮಾನಸಿಕ ಅಸ್ವಸ್ಥತೆ. ಇದನ್ನು ಕೆಲವು ಬಲಪಂಥೀಯ ಮುಖ್ಯವಾಹಿನಿಯ ಮಾಧ್ಯಮಗಳು ಮಾಡುತ್ತಲೇ ಇವೆ. ಮುಸ್ಲಿಮರೇನೋ ಮೆಕ್ಕಾ ಮತ್ತು ಗಲ್ಫ್‌ನಿಂದ ಕೋವಿಡ್-19 ಅನ್ನು ಭಾರತಕ್ಕೆ ತಂದಿದ್ದಾರೆ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕುಟುಂಬದ ಮಧ್ಯಮ ವರ್ಗದ, ಮೇಲ್ಜಾತಿಗಳ ಸಾಫ್ಟ್ವೇರ್ ಇಂಜಿನಿಯರ್‌ಗಳು ಪಾಶ್ಚಾತ್ಯ ದೇಶಗಳಿಂದ ಬರುವಾಗ ಕೋವಿಡ್-19ನ್ನು ತಮ್ಮೊಂದಿಗೆ ತರಲಿಲ್ಲವೇ? ಈ ಹಿಪಾಕ್ರಸಿಗೆ ಕೊನೆಯೇ ಕಾಣುತ್ತಿಲ್ಲ.

ದಕ್ಷಿಣ ಕೊರಿಯಾದ ಒಂದು ಕ್ರಿಶ್ಚಿಯನ್ ಗುಂಪನ್ನು ಸುಪರ್-ಸ್ಪ್ರೆಡರ್ ಎಂದು ನಾಮಕರಣ ಮಾಡಲಾಗಿತ್ತು, ಈಗ ಮರ್ಕಾಜ್‌ಅನ್ನೂ ಅದೇ ಹೆಸರಿನಿಂದ ಕರೆಯಲಾಗುತ್ತಿದೆ. ಇರಾನ್‌ನಲ್ಲಿ ಈ ರೋಗ ವ್ಯಾಪಕವಾಗಿ ಹರಡಿದ್ದಕ್ಕೆ ಅಲ್ಲಿ ಆಯೋಜಿಸಲಾಗಿದ್ದ ಹಬ್ಬಗಳು ಕಾರಣ ಎನ್ನಲಾಗುತ್ತಿದೆ. ಅಲ್ಲಿಯ ಪ್ರಾರ್ಥನಾಸ್ಥಳಗಳನ್ನು ಮುಚ್ಚಿದಾಗ, ಅಲ್ಲಿಯ ಸಾಂಪ್ರದಾಯಿಕ ಜನರು ಕಷ್ಟದ ಸಮಯದಲ್ಲಿ ದೇವರೇ ಕಾಪಾಡಬಲ್ಲ ಎನ್ನುತ್ತ ಪ್ರಾರ್ಥನಾಸ್ಥಳಗಳಿಗೆ ಮುಗಿಬಿದ್ದರು.

ಭಾರತದ ಸ್ಥಿತಿಯೂ ಭಿನ್ನವಿಲ್ಲ. ಇಟಲಿ ಮತ್ತು ಜರ್ಮನಿಗೆ ಪ್ರವಾಸ ಮಾಡಿದ್ದ ಒಬ್ಬ ಸಿಖ್ ಬೋಧಕ ಸಂತ ಬಲದೇವ್‌ಸಿಂಗ್ ತನಗೆ ಕೋವಿಡ್-19 ಸೋಂಕಿನ ಲಕ್ಷಣಗಳಿದ್ದರೂ ಮನೆಯಲ್ಲಿ ಇರುವುದನ್ನು ಬಿಟ್ಟು ಸತ್ಸಂಗಗಳನ್ನು ಅಯೋಜಿಸಿ, ಆನಂದಪುರ ಸಾಹಿಬ್‌ನಲ್ಲಿ ನಡೆಯುವ ಹೋಲಾ ಮೊಹಲ್ಲಾ ಎನ್ನುವ ದೊಡ್ಡ ಹಬ್ಬದಲ್ಲಿ ಬಾಗವಹಿಸಿದ್ದರು. ಅವರನ್ನೂ ಸೂಪರ್-ಸ್ಪ್ರೆಡರ್ ಎಂದು ಕರೆಯಲಾಗಿತ್ತು. ಅವರನ್ನು ಮತ್ತೇ ಹೋಮ್ ಕ್ವಾರಂಟೀನ್‌ನಲ್ಲಿ ಇಟ್ಟ ನಂತರ, ಅವರ ಸುತ್ತ ಕೋವಿಡ್-19 ನ 33 ಪ್ರಕರಣಗಳು ಪತ್ತೆಯಾದವು.

ಭಾರತದ ಅತ್ಯಂತ ದೊಡ್ಡ ದೇವಾಲಯಗಳು ತಮ್ಮ ಕಾರ್ಯವನ್ನು ನಿಲ್ಲಿಸಿದ್ದೂ ತಬ್ಲಿಘಿ ಜಮಾತ್ ಮರ್ಕಾಜ್ ತನ್ನ ಸಭೆಯನ್ನು ನಿಲ್ಲಿಸಿದ ನಂತರವೇ. ಉತ್ತರ ಪ್ರದೇಶದ ಸನ್ಯಾಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯಲ್ಲಿ ಒಂದು ವಾರಕಾಲ ರಾಮನವಮಿ ಸಂಭ್ರಮಾಚರಣೆಯನ್ನು ಆಯೋಜಿಸುವುದಾಗಿ ಪಟ್ಟುಹಿಡಿದಿದ್ದರು; ಅಲ್ಲಿ ಲಕ್ಷಾಂತರ ಜನ ಸೇರುವವರಿದ್ದರು. ಆ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಹಲವು ಮನವಿಗಳ ನಂತರವೂ ಅದನ್ನು ರದ್ದುಗೊಳಿಸಲು ನಿರಾಕರಿಸಿದರು. ಈ ಬಿಕ್ಕಟ್ಟಿಗೆ ಅವರು ನೀಡಿದ ಉತ್ತರದ ಸಾರಾಂಶ ಇಷ್ಟು “ರಾಮ ನಮ್ಮನ್ನು ನೋಡಿಕೊಳ್ಳುತ್ತಾನೆ”. ಅದೃಷ್ಟವಶಾತ್ ಮೋದಿ ಹೇರಿದ ಲಾಕ್‌ಡೌನ್‌ನಿಂದ ಸಂಭ್ರಮಾಚರಣೆ ಆಗಲಿಲ್ಲ. ಆದರೆ, ಯೋಗಿ ಆದಿತ್ಯನಾಥ ಅವರು ರಾಮಲಲ್ಲಾ ಜೊತೆಗೆ ಅಯೋಧ್ಯೆಗೆ ಭೇಟಿ ನೀಡದೇ ಬಿಡಲಿಲ್ಲ; ಸಾಮಾಜಿಕ ಅಂತರದ ಎಲ್ಲಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ.

ಎಲ್ಲಾ ಧರ್ಮಗಳ ಅಂಧ ನಂಬಿಕೆ – ಎಲ್ಲಾ ಧರ್ಮಗಳು, ಇದಕ್ಕೆ ಯಾವುದೇ ಅಪವಾದವಿಲ್ಲ – ದೇವರು ನಮ್ಮನ್ನು ನೋಡಿಕೊಳ್ಳುತ್ತಾನೆ ಎನ್ನುವುದು ಸರಳ ಮೂರ್ಖತನ. ಹಿಂದಿನ ಶತಮಾನಗಳಲ್ಲಿ, ಯಾವುದೇ ಸಾಂಕ್ರಾಮಿಕ ರೋಗ ಹರಡಿದಾಗ, ಆಗಿನ ಸರಕಾರಗಳು ಏನು ಮಾಡಬೇಕು ಎಂಬುದು ತೋಚದೇ, ತಮ್ಮನ್ನು ಕಾಪಾಡಲು ದೇವರಲ್ಲಿ ಮೊರೆಯಿಡುತ್ತ ಸಾಮೂಹಿಕ ಪ್ರಾರ್ಥನಾ ಸಭೆಗಳನ್ನು ಆಯೋಜಿಸುತ್ತಿದ್ದವು. ಇಂತಹ ಪ್ರಾರ್ಥನೆಗಳಲ್ಲಿ ಭಾಗವಹಿಸಿ ಸಾಂಕ್ರಾಮಿಕ ಹರಡಲು ಜನರು ದಾರಿ ಮಾಡಿಕೊಡುತ್ತಿದ್ದರು. ಯಾರು ತಮ್ಮನ್ನು ತಾವು ಕಾಪಾಡಿಕೊಳ್ಳುವುದಿಲ್ಲವೋ ಅವರಿಗೆ ದೇವರೂ ಸಹಾಯ ಮಾಡುವುದಿಲ್ಲ.

ಆದರೆ ಕೆಲವು ವಿವೇಕವುಳ್ಳ ಜನರೂ ಇದ್ದಾರೆ. ವ್ಯಾಟಿಕನ್‌ನ ಕ್ಯಾಥಲಿಕ್ ಚರ್ಚ್ ಹಾಗೂ ಸೌದಿ ಅರೇಬಿಯಾದ ಕಾಬಾ ಬಾಗಿಲು ಹಾಕಿದ್ದಾರೆ. ಭಾರತದಲ್ಲಿ ಎಲ್ಲಾ ದೊಡ್ಡ ದೇವಸ್ಥಾನಗಳ ಬಾಗಿಲು ಮುಚ್ಚಿದ್ದಾರೆ. ವಿಶ್ವಾದ್ಯಂತ ಬೌದ್ಧರು ತಮ್ಮ ಹೊಸ ವರ್ಷದ ಸಂಭ್ರಮಾಚರಣೆಯನ್ನು ರದ್ದುಗೊಳಿಸಿದ್ದಾರೆ. ಬಹುಶಃ ಇತಿಹಾಸದಲ್ಲಿ ಮೊದಲ ಬಾರಿ ಕರಗವನ್ನೂ ರದ್ದುಗೊಳಿಸಲಾಗಿದೆ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...