Homeಮುಖಪುಟತಬ್ಲಿಘಿದು ಬೇಜವಾಬ್ದಾರಿ, ಸರ್ಕಾರದ್ದು ಹೊಣೆಗೇಡಿತನ : ಅದಕ್ಕಿಂತಲೂ ಭೀಕರ ಕಮ್ಯುನಲ್ ವೈರಸ್

ತಬ್ಲಿಘಿದು ಬೇಜವಾಬ್ದಾರಿ, ಸರ್ಕಾರದ್ದು ಹೊಣೆಗೇಡಿತನ : ಅದಕ್ಕಿಂತಲೂ ಭೀಕರ ಕಮ್ಯುನಲ್ ವೈರಸ್

ಈ ವಿಚಾರದಲ್ಲಿ ಇನ್ನೂ ಹೆಚ್ಚು ಬೇಜವಾಬ್ದಾರಿತನ ಮತ್ತು ದುರುದ್ದೇಶದಿಂದ ನಡೆದುಕೊಂಡಿದ್ದು ಮಾಧ್ಯಮಗಳು. ಕಮ್ಯುನಲ್ ಅಲ್ಲ ಎಂದು ಬಗೆಯಲಾಗಿರುವ ಮಾಧ್ಯಮಗಳೂ ಕೆಟ್ಟದಾಗಿ ನಡೆದುಕೊಂಡವು.

- Advertisement -
- Advertisement -

ಬಹುಶಃ ಉಚ್ಚೆಯಲ್ಲಿ ಮೀನು ಹಿಡಿಯುವುದು ಎಂದರೆ ಇದೇ ಇರಬಹುದು. ಪ್ರಪಂಚವೇ ಒಂದು ಮಾನವೀಯ ಬಿಕ್ಕಟ್ಟಿನಲ್ಲಿ ತಲ್ಲಣಗೊಂಡಿರುವಾಗಲೂ ತಮಗೆ ಹಿಡಿದಿರುವ ಕೋಮುವೈರಸ್‌ನಿಂದ ಕೆಲವರು ಹೊರಬರಲಾಗಲಿಲ್ಲ. ಇದು ಕೇವಲ ವೈರಸ್ಸಾ ಅಥವಾ ಶಸ್ತ್ರಚಿಕಿತ್ಸೆಯನ್ನೇ ಬೇಡುವ ಕ್ಯಾನ್ಸರ್‍ರಾ ಹೇಳಲಾಗದು.

ನಿನ್ನೆ ಕ್ಯಾನ್ಸರ್ ತಜ್ಞರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಚೀನಾದ ಅಧ್ಯಕ್ಷರ ಫೋಟೋ ಹಾಕಿ ‘ಸೃಷ್ಟಿಕರ್ತ’ನೆಂದೂ, ಮುಸ್ಲಿಂ ಗುಂಪೊಂದರ ಫೋಟೋ ಹಾಕಿ ‘ಹಂಚಿಕೆದಾರರು’ ಎಂದೂ ಬರೆದಿದ್ದ ಚಿತ್ರ ಅದು. ಅದನ್ನು ನೋಡಿದ ಕನಿಷ್ಠ ನೂರು ಜನ ವೈದ್ಯರಿಗೂ ಅದು ತಪ್ಪೆಂದು ಅನಿಸಲಿಲ್ಲ. ಇದು ಈ ದೇಶಕ್ಕೆ ಹತ್ತಿದ ವೈರಸ್‌ಗಳಲ್ಲಿ ಕೊರೊನಾಗಿಂತ ಅಪಾಯಕಾರಿಯಾದವು ಬಹಳಷ್ಟಿವೆ ಎಂಬುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಿದೆ. ನಿಜಾಮುದ್ದೀನ್ ಪ್ರಕರಣವು ಅದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಝ್ ಮಸೀದಿಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿದ್ದ ತಬ್ಲಿಘಿ ಜಮಾತ್‌ನದ್ದು ಖಂಡಿತವಾಗಿ ಬೇಜವಾಬ್ದಾರಿ ವರ್ತನೆ. ಏಕೆಂದರೆ ಆ ಹೊತ್ತಿಗಾಗಲೇ ಹಲವು ದೇಶಗಳಲ್ಲಿ ಕೊರೊನಾದ ಸೋಂಕು ವ್ಯಾಪಿಸಿತ್ತು ಮತ್ತು ಈ ಸಮ್ಮೇಳನದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಆಹ್ವಾನಿತರಾಗಿದ್ದರು. ಅಲ್ಲಿಂದಾಚೆಗೂ ಅವರು ತೆಗೆದುಕೊಂಡಿದ್ದೇವೆಂದು ಹೇಳುತ್ತಿರುವ ಕ್ರಮಗಳೂ ಸಹಾ ಅವರು ಸಂಪೂರ್ಣ ಹೊಣೆಗಾರಿಕೆಯಿಂದ ವರ್ತಿಸಿದ್ದಾರೆಂದು ಸಾಬೀತು ಮಾಡುವುದಿಲ್ಲ. ಆದರೆ, ನಿಸ್ಸಂದೇಹವಾಗಿ ಹೇಳಬಹುದಾದ ಸಂಗತಿಯೆಂದರೆ ಸರ್ಕಾರವೂ ಕ್ರಿಮಿನಲ್ ನಿರ್ಲಕ್ಷ್ಯ ತೋರಿದೆ.

ಮುಖ್ಯವಾಗಿ ಮಾರ್ಚ್ 13-14ರಂದು ನಡೆದ ಅಂರ‍್ರಾಷ್ಟ್ರೀಯ ಸಮ್ಮೇಳನದ ನಂತರವೂ ಮರ್ಕಝ್‌ನಲ್ಲಿ ಜನರು ಉಳಿದುಕೊಂಡಿದ್ದಾರೆ. ಇಡೀ ಪ್ರಕರಣದ ವಿವರಗಳು ಯಾವುದೇ ಪಕ್ಷಪಾತವಿಲ್ಲದೇ ಹೊರಬೀಳಬೇಕು. ಆಗ ಉಳಿದ ವಿವರಗಳು ಗೊತ್ತಾಗಲು ಸಾಧ್ಯ. ಅದರಲ್ಲೂ ನಿರ್ದಿಷ್ಟವಾಗಿ 22, 23 ಮತ್ತು 24ರ ಘಟನಾವಳಿಗಳ ವಿವರಗಳು ಹೊರಬರಬೇಕು. ತಬ್ಲಿಘಿ ಹೇಳಿರುವಂತೆ ‘ಇಲ್ಲೇ ಉಳಿದುಕೊಂಡಿರುವ ಇತರರನ್ನು ಕಳಿಸಲು ವಾಹನ ಪಾಸ್ ಕೊಡಿ ಎಂದು ಎಷ್ಟು ಕೇಳಿದರೂ ಸರ್ಕಾರೀ ಅಧಿಕಾರಿಗಳು ಸ್ಪಂದಿಸಲಿಲ್ಲ’ ಎನ್ನುವುದೇ ನಿಜವಾದರೆ ಸಂಬಂಧಪಟ್ಟ ಅಧಿಕಾರಿಗಳ ನಿಜವಾದ ಉದ್ದೇಶದ ಬಗ್ಗೆಯೇ ಶಂಕೆ ಏಳುತ್ತದೆ. ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು ತಬ್ಲಿಘಿನ ಈ ಹೇಳಿಕೆಯನ್ನು ಅಲ್ಲಗಳೆದಿಲ್ಲ ಎಂಬುದನ್ನು ಗಮನಿಸಬೇಕು.

ದೆಹಲಿಯ ನಿಜಾಮುದ್ದಿನ್ ಮರ್ಕಝ್ ನಲ್ಲಿ ನಡೆದುದ್ದೇನು? ನಡೆಯದೇ ಇದ್ದುದ್ದೇನು? ಇಲ್ಲಿ ಕೇಳಿ….

Posted by Naanu Gauri on Tuesday, March 31, 2020

ಮಾರ್ಚ್ 23ರಂದು ಎಚ್ಚರಿಕೆ ನೀಡಲಾಗಿತ್ತು ಎಂಬ ಪೊಲೀಸರ ಹೇಳಿಕೆಯನ್ನು ತಬ್ಲಿಘಿ ಸಹಾ ಅಲ್ಲಗಳೆದಿಲ್ಲ; ಅದಕ್ಕೆ ಉತ್ತರವಾಗಿ ಮಾರ್ಚ್ 24ರಂದು ತಾವು ಬರೆದ ಪತ್ರ ಮತ್ತು ಪತ್ರದಲ್ಲೂ, ಪೊಲೀಸರ ವಿಡಿಯೋದಲ್ಲೂ ಅವರು ಹೇಳಿರುವಂತೆ ಲಾಕ್‌ಡೌನ್ ಸಂದರ್ಭದಲ್ಲಿ ಹೊರಕಳಿಸುವುದು ಹೇಗೆ ಎಂಬ ಪ್ರಶ್ನೆಗೆ ಯಾರು ಉತ್ತರ ಕೊಡುವುದೂ ಕಷ್ಟ. ಹಿಂದೂಸ್ತಾನ್ ಟೈಮ್ಸ್‌ನಲ್ಲಿ ವರದಿಯಾಗಿರುವ ಹಾಗೆ ‘ಅದಿನ್ನೂ ಲಾಕ್‌ಡೌನ್ ಹೊಸದಾಗಿ ಘೋಷಣೆಯಾಗಿತ್ತು. ಅತ್ಯಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ನಾವು ಪಾಸ್ ನೀಡಬಹುದಾಗಿತ್ತು ಮತ್ತು ಇವರನ್ನು ಸಾಗಿಸುವುದು ಅತ್ಯಗತ್ಯವೆಂದು ಹೇಗೆ ಹೇಳುವುದು? ಹಾಗಾಗಿಯೇ ಪಾಸ್ ನೀಡಲಿಲ್ಲ’. ಅಂದರೆ, ಇಂತಹ ಲಾಕ್‌ಡೌನ್ ಅನುಭವವಿಲ್ಲದ ಜನರು ಮಾಡುವ ತಪ್ಪುಗಳು ಎರಡೂ ಕಡೆಯಿಂದ ಆಗಿವೆ. ‘ಜನರ ಸಾಗಾಣಿಕೆ’ಯೂ ಅತ್ಯಗತ್ಯ ಎಂಬುದು ಈ ಪ್ರಕರಣದಲ್ಲೂ ಮತ್ತೆ ಸಾಬೀತಾಗಿದೆ.

ಈ ವಿಚಾರದಲ್ಲಿ ಇನ್ನೂ ಹೆಚ್ಚು ಬೇಜವಾಬ್ದಾರಿತನ ಮತ್ತು ದುರುದ್ದೇಶದಿಂದ ನಡೆದುಕೊಂಡಿದ್ದು ಮಾಧ್ಯಮಗಳು. ಕಮ್ಯುನಲ್ ಅಲ್ಲ ಎಂದು ಬಗೆಯಲಾಗಿರುವ ಮಾಧ್ಯಮಗಳೂ ಕೆಟ್ಟದಾಗಿ ನಡೆದುಕೊಂಡವು. ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಮತ್ತು ದಿ ಪ್ರಿಂಟ್‌ನ ಸಂಪಾದಕ ಶೇಖರ್ ಗುಪ್ತಾ ಅವರ ಮಾತುಗಳನ್ನು ಇಲ್ಲಿ ನೀಡಲಾಗಿದೆ.

‘ತಬ್ಲಿಘಿ ಜಮಾತ್ – ಮರ್ಕಾಜ್‌ನವರು ಮಾರ್ಚ್ ಎರಡನೇ ವಾರದಲ್ಲಿ ಒಂದು ದೊಡ್ಡ ಸಮಾವೇಶ ಅಯೋಜಿಸಿದ್ದು ಒಂದು ದುಡುಕಿನ, ದುಸ್ಸಾಹಸದ ಕೆಲಸವೇ ಆಗಿತ್ತು. ವಿಶೇಷವಾಗಿ ಕೋವಿಡ್-19 ಪೀಡಿತ ದೇಶಗಳ ಅಂತರರಾಷ್ಟ್ರೀಯ ಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ನೀಡಿದ್ದು ಬೇಜವಾಬ್ದಾರಿತನದ ಕೆಲಸ; ಇದು ಸರಳ ತರ್ಕವನ್ನು ಉಲ್ಲಂಘಿಸಿದಂತೆ. ಫೆಬ್ರುವರಿ ತಿಂಗಳ ಮಧ್ಯದಲ್ಲಿ ಮಲೇಷಿಯದಲ್ಲಿ 16 ಸಾವಿರ ಜನರು ತಬ್ಲಿಘಿಯ ಒಂದು ಸಮಾವೇಶದಲ್ಲಿ ಭಾಗವಹಿಸಿದ್ದರು. ಆರು ದೇಶಗಳಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳು ಈ ಸಮಾವೇಶದಿಂದಾಗಿರುವುದು ಎಂದು ಹೇಳಲಾಗಿತ್ತು. ದೆಹಲಿಯ ಮರ್ಕಾಜ್ ಸಭೆಗೆ ಮಲೇಷಿಯದಲ್ಲಿ ಆದ ಸಮಾವೇಶದಲ್ಲಿ ಭಾಗವಹಿಸಿದ ಧರ್ಮಗುರುಗಳೂ ಹಾಜರಾಗಿದ್ದರು. ಇದು ಬೇಜವಾಬ್ದಾರಿಯ ಕೆಲಸ.

ಮಾರ್ಚ್ 11ರಂದೇ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಅನ್ನು ಒಂದು ಪ್ಯಾಂಡೆಮಿಕ್ (ಸಾಂಕ್ರಾಮಿಕ) ರೋಗ ಎಂದು ಘೋಷಿಸಿದಾಗಲೇ ದೆಹಲಿಯ ಸಮಾವೇಶವನ್ನು ನಿಲ್ಲಿಸಬೇಕಾಗಿತ್ತು, ದೆಹಲಿ ಸರಕಾರದ ಹಾಗೂ ಕೇಂದ್ರ ಸರಕಾರದ ಲಾಕ್‌ಡೌನ್‌ಗಾಗಿ ಕಾಯಬೇಕಾಗಿರಲಿಲ್ಲ.

ಆದರೆ, ಅದರೊಂದಿಗೆ ನಮ್ಮ ಸರಕಾರಗಳೂ ಕೋವಿಡ್-19 ಭೀತಿಗೆ ಎಚ್ಚೆತ್ತುಕೊಂಡಿದ್ದು ತುಂಬಾ ತಡವಾಗಿ ಎನ್ನುವುದೂ ಅಷ್ಟೇ ಸತ್ಯ. ಆ ಸಮಾವೇಶಕ್ಕೆ ಪೊಲೀಸರ ಅನುಮತಿ ಇಲ್ಲದಿದ್ದರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ; ನಿಝಾಮುದ್ದೀನ್ ಪೊಲೀಸ್ ಸ್ಟೇಷನ್‌ಗೆ ಮರ್ಕಝ್ ಕೇವಲ 100 ಮೀಟರ್ ದೂರದಲ್ಲಿದೆ. ಆ ಸ್ಥಳದಲ್ಲಿ ಆಗ ಗೂಢಚರ್ಯೆ ಇಲಾಖೆಯ ಅಧಿಕಾರಿಗಳು ಇದ್ದರು ಎನ್ನುವುದೂ ಸತ್ಯ. (ಆ ಅಧಿಕಾರಿಗಳ ಆರೋಗ್ಯದ ಪರೀಕ್ಷೆ ಮೊದಲು ಮಾಡಿಸಿ) ಈ ಸಭೆಯ ಬಗ್ಗೆ ದೆಹಲಿ ಸರಕಾರಕ್ಕೆ ಮಾಹಿತಿ ಇರದೇ ಇರುವುದಕ್ಕೆ ಛಾನ್ಸೇ ಇಲ್ಲ.

ನಾವೆಲ್ಲರೂ ಮೊದಲ ಹಂತಗಳಲ್ಲಿ ತಪ್ಪು ಮಾಡಿದ್ದೀವಿ ಎನ್ನುವುದು ಒಪ್ಪಿಕೊಳ್ಳುವ. ಆದರೆ ದೆಹಲಿ ಸರಕಾರದಿಂದಲೇ ಮಾರ್ಚ್ 13ರಂದು ಆದೇಶ ಜಾರಿಗೊಳಿಸಿದ ನಂತರ ದೆಹಲಿ ಸರಕಾರ ಮತ್ತು ದೆಹಲಿ ಪೊಲೀಸ್ ಏನು ಮಾಡುತ್ತಿದ್ದವು? ಆ ಸಭೆಯನ್ನು ಆಡಳಿತವು ಅಲ್ಲಿಗೇ ಏಕೆ ನಿಲ್ಲಿಸಲಿಲ್ಲ? ಅದರ ನಂತರವೂ ಸಭೆಯನ್ನು ಮರ್ಕಾಜ್ ಮುಂದುವರೆಸಿದ್ದು ಅಕ್ಷಮ್ಯ. But there is no way it went under the radar. ಅದಕ್ಕಿಂತ ಮುಖ್ಯವಾಗಿ, ಕೋವಿಡ್-19 ಪ್ರಬಾಧಿತ ದೇಶಗಳಿಂದ ಜನರು ಏರ್‌ಪೋರ್ಟ್‌ಗಳಲ್ಲಿ ಪರೀಕ್ಷೆಗೆ ಒಳಗಾಗದೇ ಹೇಗೆ ಬಂದರು?

ಆದರೆ ಇದನ್ನು ಕೊರೊನಾ ಜಿಹಾದ್ ಎಂದು ಕರೆದು, ಕೋವಿಡ್-19 ಹರಡುವುದಕ್ಕೆ ಮುಸ್ಲಿಮ್ ಸಮುದಾಯವನ್ನು ದೂಷಿಸುವ ಕಥನವನ್ನು ಕಟ್ಟುತ್ತಿರುವುದು ನಿಜಕ್ಕೂ ಮಾನಸಿಕ ಅಸ್ವಸ್ಥತೆ. ಇದನ್ನು ಕೆಲವು ಬಲಪಂಥೀಯ ಮುಖ್ಯವಾಹಿನಿಯ ಮಾಧ್ಯಮಗಳು ಮಾಡುತ್ತಲೇ ಇವೆ. ಮುಸ್ಲಿಮರೇನೋ ಮೆಕ್ಕಾ ಮತ್ತು ಗಲ್ಫ್‌ನಿಂದ ಕೋವಿಡ್-19 ಅನ್ನು ಭಾರತಕ್ಕೆ ತಂದಿದ್ದಾರೆ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕುಟುಂಬದ ಮಧ್ಯಮ ವರ್ಗದ, ಮೇಲ್ಜಾತಿಗಳ ಸಾಫ್ಟ್ವೇರ್ ಇಂಜಿನಿಯರ್‌ಗಳು ಪಾಶ್ಚಾತ್ಯ ದೇಶಗಳಿಂದ ಬರುವಾಗ ಕೋವಿಡ್-19ನ್ನು ತಮ್ಮೊಂದಿಗೆ ತರಲಿಲ್ಲವೇ? ಈ ಹಿಪಾಕ್ರಸಿಗೆ ಕೊನೆಯೇ ಕಾಣುತ್ತಿಲ್ಲ.

ದಕ್ಷಿಣ ಕೊರಿಯಾದ ಒಂದು ಕ್ರಿಶ್ಚಿಯನ್ ಗುಂಪನ್ನು ಸುಪರ್-ಸ್ಪ್ರೆಡರ್ ಎಂದು ನಾಮಕರಣ ಮಾಡಲಾಗಿತ್ತು, ಈಗ ಮರ್ಕಾಜ್‌ಅನ್ನೂ ಅದೇ ಹೆಸರಿನಿಂದ ಕರೆಯಲಾಗುತ್ತಿದೆ. ಇರಾನ್‌ನಲ್ಲಿ ಈ ರೋಗ ವ್ಯಾಪಕವಾಗಿ ಹರಡಿದ್ದಕ್ಕೆ ಅಲ್ಲಿ ಆಯೋಜಿಸಲಾಗಿದ್ದ ಹಬ್ಬಗಳು ಕಾರಣ ಎನ್ನಲಾಗುತ್ತಿದೆ. ಅಲ್ಲಿಯ ಪ್ರಾರ್ಥನಾಸ್ಥಳಗಳನ್ನು ಮುಚ್ಚಿದಾಗ, ಅಲ್ಲಿಯ ಸಾಂಪ್ರದಾಯಿಕ ಜನರು ಕಷ್ಟದ ಸಮಯದಲ್ಲಿ ದೇವರೇ ಕಾಪಾಡಬಲ್ಲ ಎನ್ನುತ್ತ ಪ್ರಾರ್ಥನಾಸ್ಥಳಗಳಿಗೆ ಮುಗಿಬಿದ್ದರು.

ಭಾರತದ ಸ್ಥಿತಿಯೂ ಭಿನ್ನವಿಲ್ಲ. ಇಟಲಿ ಮತ್ತು ಜರ್ಮನಿಗೆ ಪ್ರವಾಸ ಮಾಡಿದ್ದ ಒಬ್ಬ ಸಿಖ್ ಬೋಧಕ ಸಂತ ಬಲದೇವ್‌ಸಿಂಗ್ ತನಗೆ ಕೋವಿಡ್-19 ಸೋಂಕಿನ ಲಕ್ಷಣಗಳಿದ್ದರೂ ಮನೆಯಲ್ಲಿ ಇರುವುದನ್ನು ಬಿಟ್ಟು ಸತ್ಸಂಗಗಳನ್ನು ಅಯೋಜಿಸಿ, ಆನಂದಪುರ ಸಾಹಿಬ್‌ನಲ್ಲಿ ನಡೆಯುವ ಹೋಲಾ ಮೊಹಲ್ಲಾ ಎನ್ನುವ ದೊಡ್ಡ ಹಬ್ಬದಲ್ಲಿ ಬಾಗವಹಿಸಿದ್ದರು. ಅವರನ್ನೂ ಸೂಪರ್-ಸ್ಪ್ರೆಡರ್ ಎಂದು ಕರೆಯಲಾಗಿತ್ತು. ಅವರನ್ನು ಮತ್ತೇ ಹೋಮ್ ಕ್ವಾರಂಟೀನ್‌ನಲ್ಲಿ ಇಟ್ಟ ನಂತರ, ಅವರ ಸುತ್ತ ಕೋವಿಡ್-19 ನ 33 ಪ್ರಕರಣಗಳು ಪತ್ತೆಯಾದವು.

ಭಾರತದ ಅತ್ಯಂತ ದೊಡ್ಡ ದೇವಾಲಯಗಳು ತಮ್ಮ ಕಾರ್ಯವನ್ನು ನಿಲ್ಲಿಸಿದ್ದೂ ತಬ್ಲಿಘಿ ಜಮಾತ್ ಮರ್ಕಾಜ್ ತನ್ನ ಸಭೆಯನ್ನು ನಿಲ್ಲಿಸಿದ ನಂತರವೇ. ಉತ್ತರ ಪ್ರದೇಶದ ಸನ್ಯಾಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯಲ್ಲಿ ಒಂದು ವಾರಕಾಲ ರಾಮನವಮಿ ಸಂಭ್ರಮಾಚರಣೆಯನ್ನು ಆಯೋಜಿಸುವುದಾಗಿ ಪಟ್ಟುಹಿಡಿದಿದ್ದರು; ಅಲ್ಲಿ ಲಕ್ಷಾಂತರ ಜನ ಸೇರುವವರಿದ್ದರು. ಆ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಹಲವು ಮನವಿಗಳ ನಂತರವೂ ಅದನ್ನು ರದ್ದುಗೊಳಿಸಲು ನಿರಾಕರಿಸಿದರು. ಈ ಬಿಕ್ಕಟ್ಟಿಗೆ ಅವರು ನೀಡಿದ ಉತ್ತರದ ಸಾರಾಂಶ ಇಷ್ಟು “ರಾಮ ನಮ್ಮನ್ನು ನೋಡಿಕೊಳ್ಳುತ್ತಾನೆ”. ಅದೃಷ್ಟವಶಾತ್ ಮೋದಿ ಹೇರಿದ ಲಾಕ್‌ಡೌನ್‌ನಿಂದ ಸಂಭ್ರಮಾಚರಣೆ ಆಗಲಿಲ್ಲ. ಆದರೆ, ಯೋಗಿ ಆದಿತ್ಯನಾಥ ಅವರು ರಾಮಲಲ್ಲಾ ಜೊತೆಗೆ ಅಯೋಧ್ಯೆಗೆ ಭೇಟಿ ನೀಡದೇ ಬಿಡಲಿಲ್ಲ; ಸಾಮಾಜಿಕ ಅಂತರದ ಎಲ್ಲಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ.

ಎಲ್ಲಾ ಧರ್ಮಗಳ ಅಂಧ ನಂಬಿಕೆ – ಎಲ್ಲಾ ಧರ್ಮಗಳು, ಇದಕ್ಕೆ ಯಾವುದೇ ಅಪವಾದವಿಲ್ಲ – ದೇವರು ನಮ್ಮನ್ನು ನೋಡಿಕೊಳ್ಳುತ್ತಾನೆ ಎನ್ನುವುದು ಸರಳ ಮೂರ್ಖತನ. ಹಿಂದಿನ ಶತಮಾನಗಳಲ್ಲಿ, ಯಾವುದೇ ಸಾಂಕ್ರಾಮಿಕ ರೋಗ ಹರಡಿದಾಗ, ಆಗಿನ ಸರಕಾರಗಳು ಏನು ಮಾಡಬೇಕು ಎಂಬುದು ತೋಚದೇ, ತಮ್ಮನ್ನು ಕಾಪಾಡಲು ದೇವರಲ್ಲಿ ಮೊರೆಯಿಡುತ್ತ ಸಾಮೂಹಿಕ ಪ್ರಾರ್ಥನಾ ಸಭೆಗಳನ್ನು ಆಯೋಜಿಸುತ್ತಿದ್ದವು. ಇಂತಹ ಪ್ರಾರ್ಥನೆಗಳಲ್ಲಿ ಭಾಗವಹಿಸಿ ಸಾಂಕ್ರಾಮಿಕ ಹರಡಲು ಜನರು ದಾರಿ ಮಾಡಿಕೊಡುತ್ತಿದ್ದರು. ಯಾರು ತಮ್ಮನ್ನು ತಾವು ಕಾಪಾಡಿಕೊಳ್ಳುವುದಿಲ್ಲವೋ ಅವರಿಗೆ ದೇವರೂ ಸಹಾಯ ಮಾಡುವುದಿಲ್ಲ.

ಆದರೆ ಕೆಲವು ವಿವೇಕವುಳ್ಳ ಜನರೂ ಇದ್ದಾರೆ. ವ್ಯಾಟಿಕನ್‌ನ ಕ್ಯಾಥಲಿಕ್ ಚರ್ಚ್ ಹಾಗೂ ಸೌದಿ ಅರೇಬಿಯಾದ ಕಾಬಾ ಬಾಗಿಲು ಹಾಕಿದ್ದಾರೆ. ಭಾರತದಲ್ಲಿ ಎಲ್ಲಾ ದೊಡ್ಡ ದೇವಸ್ಥಾನಗಳ ಬಾಗಿಲು ಮುಚ್ಚಿದ್ದಾರೆ. ವಿಶ್ವಾದ್ಯಂತ ಬೌದ್ಧರು ತಮ್ಮ ಹೊಸ ವರ್ಷದ ಸಂಭ್ರಮಾಚರಣೆಯನ್ನು ರದ್ದುಗೊಳಿಸಿದ್ದಾರೆ. ಬಹುಶಃ ಇತಿಹಾಸದಲ್ಲಿ ಮೊದಲ ಬಾರಿ ಕರಗವನ್ನೂ ರದ್ದುಗೊಳಿಸಲಾಗಿದೆ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...