ಕೊರೊನಾ ಮೊದಲನೆ ಅಲೆಯ ಸಮಯದಲ್ಲಿ ಸೋಂಕು ಹರಡಲು ತಬ್ಲೀಘಿಗಳೇ ಕಾರಣ ಎಂಬ ಕಾರ್ಯಕ್ರಮವನ್ನು ಮಾಡಿದ್ದ ‘ನ್ಯೂಸ್ 18 ಕನ್ನಡ’ ಚಾನೆಲ್, ಇಂದು (ಬುಧವಾರ) ರಾತ್ರಿ 8:30-9:15 ರ ಒಳಗಾಗಿ ತನ್ನ ತಪ್ಪು ವರದಿಗಾಗಿ ಕ್ಷಮೆಯಾಚಿಸಲಿದೆ.
2020 ರ ಕೊರೊನಾ ಸಾಂಕ್ರಮಿಕ ಸಮಯದಲ್ಲಿ ತಬ್ಲೀಘಿ ಜಮಾತ್ ಅನ್ನು ಗುರಿಯಾಗಿಸಿ ಕೊಂಡಿದ್ದಕ್ಕೆ ಕನ್ನಡ ಚಾನೆಲ್ಗಳಾದ ‘ನ್ಯೂಸ್ 18 ಕನ್ನಡ’ ಮತ್ತು ‘ಸುವರ್ಣ ನ್ಯೂಸ್’ಗೆ, ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBSA) ಯು ಕ್ರಮವಾಗಿ 1 ಲಕ್ಷ ಮತ್ತು 50 ಸಾವಿರ ದಂಡವನ್ನು ವಿಧಿಸಿದೆ. ಜೊತೆಗೆ ಇದೇ ವಿಷಯಕ್ಕೆ ಇಂಗ್ಲಿಷ್ ನ್ಯೂಸ್ ಚಾನೆಲ್ ಟೈಮ್ಸ್ ನೌ ಅನ್ನು NBSA ಖಂಡಿಸಿದೆ.
ಇದನ್ನೂ ಓದಿ: ANI ಪತ್ರಕರ್ತನನ್ನು ಕೆಟ್ಟ ಪದ ಬಳಸಿ ನಿಂದಿಸಿದ ಯುಪಿ ಸಿಎಂ ಯೋಗಿ: ವಿಡಿಯೋ ನಿಜವೆಂದ ಆಲ್ಟ್ನ್ಯೂಸ್
ಬೆಂಗಳೂರು ಮೂಲದ ‘ಹೇಟ್ ಸ್ಪೀಚ್ ಬೇಡ’ ಎಂಬ ದ್ವೇಷ ಭಾಷಣಗಳ ವಿರುದ್ದದ ಅಭಿಯಾವು NBSA ಗೆ ದೂರುಗಳನ್ನು ಸಲ್ಲಿಸಿ, ಏಪ್ರಿಲ್ 1, 2020 ರಂದು ತಬ್ಲಿಘಿ ಜಮಾಅತ್ ಬಗ್ಗೆ ‘ನ್ಯೂಸ್ 18 ಕನ್ನಡ’ ಪ್ರಸಾರ ಮಾಡಿದ ಎರಡು ಕಾರ್ಯಕ್ರಮಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ದೂರಿನ ವಿಚಾರಣೆ ನಡೆಸಿದ NBSA ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು, “… ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ರೀತಿ ಹೆಚ್ಚು ಆಕ್ಷೇಪಾರ್ಹವಾಗಿತ್ತು. ಸುದ್ದಿ ವರದಿಯು ಶುದ್ಧ ಊಹಾಪೋಹವನ್ನು ಆಧರಿಸಿತ್ತು. ಕಾರ್ಯಕ್ರಮದ ಧ್ವನಿ, ವಸ್ತು, ಭಾಷೆ ಒರಟಾಗಿದ್ದು, ಪೂರ್ವಾಗ್ರಹ ಮತ್ತು ಅಗೌರವದಿಂದ ಕೂಡಿತ್ತು … ” ಎಂದು ಹೇಳಿದ್ದರು.
ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕೆ ನ್ಯೂಸ್ 18 ಕನ್ನಡಕ್ಕೆ NBSA 1 ಲಕ್ಷ ದಂಡ ವಿಧಿಸಿದೆ. ಅಲ್ಲದೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೂನ್ 23 ರಂದು ರಾತ್ರಿ 9 ಗಂಟೆಯ ಸುದ್ದಿಗೆ ಮುಂಚಿತವಾಗಿ ಕ್ಷಮೆಯಾಚಿಸುವುದನ್ನು ಪ್ರಸಾರ ಮಾಡಬೇಕು ಎಂದು ಚಾನೆಲ್ಗೆ ನಿರ್ದೇಶನ ನೀಡಿದೆ. ಜೊತೆಗೆ ಎಲ್ಲಾ ವೆಬ್ ಪೋರ್ಟಲ್ಗಳಿಂದ ಎರಡು ಕಾರ್ಯಕ್ರಮಗಳ ವೀಡಿಯೊಗಳನ್ನು ತೆಗೆಯುವಂತೆ ಪ್ರಾಧಿಕಾರವು ಚಾನೆಲ್ ಅನ್ನು ಕೇಳಿದೆ. ಅದರಂತೆ ಚಾನೆಲ್ ಇಂದು ರಾತ್ರಿ ಕ್ಷಮೆ ಕೇಳಲಿದೆ.
ಇದನ್ನೂ ಓದಿ: ದಿಶಾಳ ವಾಟ್ಸಾಪ್ ಚಾಟ್ಸ್, ತನಿಖಾ ಮಾಹಿತಿ ಸೋರಿಕೆ: ನ್ಯೂಸ್ ಚಾನೆಲ್ಗಳಿಗೆ ನೋಟಿಸ್!
ಈ ಬಗ್ಗೆ ಮಾಹಿತಿ ನೀಡಿರುವ ‘ಹೇಟ್ ಸ್ಪೀಚ್ ಬೇಡ’ ಅಭಿಯಾನವು, “ನ್ಯೂಸ್ 18 ಕನ್ನಡವು ‘ವಿಷ’, ‘ನರಕ’, ‘ನಿಜಾಮುದ್ದೀನ್ ನಂಜು’ ಮುಂತಾದ ಪದಗಳನ್ನು ಬಳಸಿ, ತಬ್ಲಿಘಿ ಜಮಾಅತ್ ವಿರುದ್ಧ ಕೋಮು ಮತ್ತು ದ್ವೇಷದ ಪ್ರಸಾರಕ್ಕಾಗಿ, ನ್ಯೂಸ್ 18 ಕನ್ನಡಕ್ಕೆ ಕ್ಷಮೆಯಾಚನೆಯನ್ನು ಪ್ರಸಾರ ಮಾಡಲು ‘ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ’ (NBSA) ಆದೇಶಿಸಿದೆ. ಅಲ್ಲದೆ 1 ಲಕ್ಷ ದಂಡವನ್ನೂ ವಿಧಿಸಿದೆ. ಇವತ್ತು ರಾತ್ರಿ 8:30 PM – 9:15 PM ನಡುವೆ ನ್ಯೂಸ್ 18 ಕನ್ನಡ ವೀಕ್ಷಿಸಿ. NBSA ಆದೇಶದಂತೆ ನಮ್ಮೆಲ್ಲರಿಗೂ ಮತ್ತು ರಾಷ್ಟ್ರಕ್ಕೆ ಕ್ಷಮೆಯಾಚನೆಯನ್ನು ಮಾಡುತ್ತದೆಯೇ ಎಂದು ನೋಡೋಣ” ಎಂದು ಹೇಳಿದೆ.
ಇವತ್ತು @News18Kannada ನ್ಯೂಸ್ 18 ಕನ್ನಡವನ್ನು8:30 PM – 9:15 PM ನಡುವೆ ವೀಕ್ಷಿಸಿ. NBSA ಆದೇಶದಂತೆ ನಮ್ಮೆಲ್ಲರಿಗೂ ಮತ್ತು ರಾಷ್ಟ್ರಕ್ಕೆ ಕ್ಷಮೆಯಾಚನೆಯನ್ನು ಮಾಡುತ್ತದೆಯೇ ಎಂದು ನೋಡೋಣ.#News18KannadaApology pic.twitter.com/AJqSlYS1Co
— Hate Speech Beda (@HateSpeechBeda) June 23, 2021
NBSA ನ್ಯೂಸ್ 18 ಕನ್ನಡ ಮಾತ್ರವಲ್ಲದೆ ಕನ್ನಡದ ಮತ್ತೊಂದು ಚಾನೆಲ್ ಆದ ‘ಸುವರ್ಣ ನ್ಯೂಸ್’ಗೆ ಕೂಡಾ ತಬ್ಲೀಘಿಗಳ ವಿರುದ್ದ ಕಾರ್ಯಕ್ರಮ ಮಾಡಿದ್ದಕ್ಕೆ 50 ಸಾವಿರ ದಂಡವನ್ನು ಹಾಕಿತ್ತು. ಜೊತೆಗೆ ಆದೇಶದಲ್ಲಿ, “ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ಹರಡುವಿಕೆಯ ಸಂಪೂರ್ಣ ಆಪಾದನೆಯನ್ನು ತಬ್ಲಿಘಿ ಜಮಾಅತ್ ಮೇಲೆ ಹಾಕಲಾಗಿದ್ದು, ಅದನ್ನು ನಿರ್ದಿಷ್ಟ ಸಮುದಾಯದ ವಿರುದ್ದ ತಿರುಗಿಸಲಾಗಿದೆ. ಜೊತೆಗೆ ಕಾರ್ಯಕ್ರಮಗಳ ಶೀರ್ಷಿಕೆಗಳು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಕಪಟತೆಯನ್ನು ಹೊಂದಿವೆ.
ಈ ಕಾರ್ಯಕ್ರಮಗಳಲ್ಲಿ ಖಂಡಿತವಾಗಿಯೂ ಸಮತೋಲನ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆಯ ಕೊರತೆಯಿದೆ. ಅಲ್ಲದೆ ಈ ಕಾರ್ಯಕ್ರಮಗಳು ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಬಹಿರಂಗವಾಗಿ ಪೂರ್ವಾಗ್ರಹ ಪೀಡಿತವಾಗಿದ್ದವು” ಎಂದು ಹೇಳಿತ್ತು.
ಇದನ್ನೂ ಓದಿ: ತಬ್ಲೀಘಿ ಜಮಾತ್ ಗುರಿಯಾಗಿಸಿ ಕಾರ್ಯಕ್ರಮ: ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡಕ್ಕೆ 1.5 ಲಕ್ಷ ದಂಡ