Homeಮುಖಪುಟಮೀಸಲು ಸೌಲಭ್ಯ - ಭಾಗ ಎರಡು; ಮೀಸಲಾತಿ ಬಗ್ಗೆ ಮಾತು-ಕತೆ

ಮೀಸಲು ಸೌಲಭ್ಯ – ಭಾಗ ಎರಡು; ಮೀಸಲಾತಿ ಬಗ್ಗೆ ಮಾತು-ಕತೆ

- Advertisement -
- Advertisement -

ಇದು ಕೆಲವು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ಭಿಕ್ಷುಕಿ ಹಾಗೂ ಅವಳ ಪುಟ್ಟ ಮಗಳ ಬಗ್ಗೆ ನಾನು ಸುದ್ದಿ ಮಾಡಿದ್ದೆ. ಅದನ್ನು ನೋಡಿ ಪೊಲೀಸರು ಅವಳನ್ನು ಆಸ್ಪತ್ರೆಗೆ ಕಳಿಸಿಕೊಡಲು ನಿರ್ಧಾರ ಮಾಡಿದರು. ಆದರೆ ಆಗ ಆ ಹೆಣ್ಣುಮಗಳಿಗೆ ಏಡ್ಸ್ ಬಂದುಬಿಟ್ಟಿದೆ ಎಂದು ಗಾಳಿ ಸುದ್ದಿ ಆಗಿದ್ದರಿಂದ ಅವಳನ್ನು ಮುಟ್ಟಲು ಯಾರೂ ಮುಂದೆ ಬರುತ್ತಾ ಇರಲಿಲ್ಲ. ಆಗ ನಾನು ಆಂಬುಲೆನ್ಸ್ ಚಾಲಕನ ಜೊತೆ ಸೇರಿ ಅವಳನ್ನು ಎತ್ತಿಕೊಂಡು ಆಂಬುಲೆನ್ಸ್‌ನಲ್ಲಿ ಹಾಕಿ ಕಳಿಸಿದೆವು. ಇದನ್ನು ನೋಡಿದ್ದ ನನ್ನ ಸ್ನೇಹಿತ, ಸಹೋದ್ಯೋಗಿ ಇಮ್ರಾನ್ ಗೌಹಾರ್ ಅವರು ಕೆಲವು ಸ್ನೇಹಿತರ ಮುಂದೆ ಇದನ್ನು ಹೇಳಿದ್ದರು. ಆಗ ಕೆಲವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸುದ್ದಿಗಾಗಿ ಹಾಗೂ ಆ ಮಹಿಳೆಗೆ ಸಹಾಯ ಮಾಡಿದ್ದಕ್ಕೆ ನನಗೆ ಅಭಿನಂದನೆ ಸಲ್ಲಿಸಿದ್ದರು.

ಈ ರೀತಿ ಅಭಿನಂದನೆ ಸಲ್ಲಿಸಿದ್ದವರೊಳಗೆ ಒಬ್ಬರು ಹಿರಿಯ ಮಹಿಳಾ ಪತ್ರಕರ್ತರೂ ಇದ್ದರು. ಅವರು ಆಗ ಬೆಂಗಳೂರಿನ ಇಂಗ್ಲಿಷು ಪತ್ರಿಕೆಯೊಂದರಲ್ಲಿ ಹಿರಿಯ ವರದಿಗಾರರಾಗಿದ್ದರು. ರಾಜಕೀಯ, ಪರಿಸರ-ಅರಣ್ಯ, ಆರೋಗ್ಯ ಇತ್ಯಾದಿ ವಿಷಯಗಳ ಸುದ್ದಿ ಮಾಡಿ ಅನುಭವ ಇದ್ದ ಅವರು ಆಗ ಹೊಸ ಕ್ಷೇತ್ರವಾದ ಐಟಿ-ಬಿಟಿ
ಸುದ್ದಿ ಕೂಡ ಮಾಡುತ್ತಾ ಇದ್ದರು. ಅವರು “ನೀವು ತುಂಬ ಒಳ್ಳೆ ಕೆಲಸ ಮಾಡಿದೀರಂತೆ. ವರದಿಗಾರರು ಬರೇ ಸುದ್ದಿ ಬರೆದು ಸುದ್ದಿ ಆಗಬಾರದು, ಇಂತಹ ಕೆಲಸಗಳಿಂದಲೂ ಸುದ್ದಿ ಆಗಬೇಕು” ಎಂದರು. ಕ್ಷೇತ್ರಕಾರ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಮ್ಮಿ ಇದ್ದ ಕಾಲದಲ್ಲಿ ಅವರು ಅನೇಕ ಅಪಾಯಕಾರಿ ಜಾಗಗಳಿಗೆ ಹೋಗಿ ಸುದ್ದಿ ಮಾಡಿದ್ದರು. ತುಂಬ ಧೈರ್ಯವಂತರು, ದುಡಿವಾನರು ಎಂದು ಹೆಸರು ಗಳಿಸಿದ್ದರು. ಮಹಿಳೆಯರ ಹಕ್ಕುಗಳ ಬಗ್ಗೆ, ಕೂಲಿ ಕಾರ್ಮಿಕರ ಬರೆದಿದ್ದರು, ಗಟ್ಟಿಯಾಗಿ ಮಾತಾಡುತ್ತಿದ್ದರು. ನಮ್ಮ ಓರಿಗೆಯ ಹುಡುಗರ ಕಣ್ಣಲ್ಲಿ ಆದರ್ಶ ಪತ್ರಕರ್ತರು ಅನ್ನಿಸಿಕೊಂಡಿದ್ದರವರು.

ಅವರು ಆಮೇಲೆ ತುಂಬ ಪರಿಚಯವಾದರು. ಕೆಲಸದ ಮೇಲೆ ಹೊರಗಡೆ ಹೋದಾಗಲೆಲ್ಲಾ ಮಾತಾಡುತ್ತಿದ್ದರು. “ನಿಮ್ಮಂತಹ ಕಿರಿಯರು ತುಂಬ ಪ್ರಗತಿಪರ ನಿಲುವುಗಳನ್ನು ಇಟ್ಟುಕೊಂಡಿರುವುದು ತುಂಬ ಖುಷಿಯ ವಿಷಯ. ನೀವು ಹೀಗೆ ಬರೆಯುತ್ತಾ ಇರಿ” ಎಂದೆಲ್ಲಾ ಹುರಿದುಂಬಿಸುತ್ತಾ ಇರುತ್ತಿದ್ದರು.

ಒಂದು ದಿನ ದೂರದ ಕಾರ್ಯಕ್ರಮಕ್ಕೆ ಹೋದಾಗ ಸರಕಾರಿ ಬಸ್ಸಿನಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದರು. ಅದೂ ಇದೂ ಮಾತಾಡುತ್ತಾ ನಾವು ಮೀಸಲಾತಿಯ ಬಗ್ಗೆ ಮಾತಾಡಲು ಶುರು ಮಾಡಿದೆವು.

ಅವರ ಮಾತುಗಳನ್ನು ಕೇಳಿದ ಕೆಲವೇ ಕ್ಷಣಗಳಲ್ಲಿ ಅವರ ಪ್ರಗತಿಪರ ನಿಲುವುಗಳು ಕೇವಲ ಕೆಲವೇ ವಿಷಯಗಳಿಗೆ ಸೀಮಿತವಾಗಿವೆ ಅಂತ ನನಗೆ ಖಚಿತವಾಗಿಹೋಯಿತು. ಅವರು “ಈ ದೇಶ ಮೀಸಲಾತಿಯಿಂದಾಗಿಯೇ ಹಾಳಾಗಿ ಹೋಗಿದೆ, ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲ, ನಾನು ಮೊನ್ನೆ ಒಂದು ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಹೋಗಿದ್ದೆ, ಅಲ್ಲಿ ಎಲ್ಲವೂ ತುಂಬ ನಿಧಾನ, ಯಾಕೆ ಅಂತ ನೋಡಿದರೆ ಅಲ್ಲಿ ಎಲ್ಲಾ ಕಡೆ ಈ ಎಸ್‌ಸಿ ಎಸ್‌ಟಿಗಳು ತುಂಬಿಕೊಂಡಿದ್ದಾರೆ, ಈ ಪಿಡುಗಿನಿಂದ ನಮಗೆ ಯಾವಾಗ ಮುಕ್ತಿ ಸಿಗುತ್ತದೋ ಗೊತ್ತಿಲ್ಲ ಎನ್ನುವಂತಹ ನುಡಿಮುತ್ತುಗಳನ್ನು ಉದುರಿಸಿದರು.

ನಾನು ಮೊದಲಿಗೆ ಸುಮ್ಮನೆ ಕುಳಿತಿದ್ದೆ. ಅವರು “ಇದರ ಬಗ್ಗೆ ನೀವು ಏನು ಹೇಳುತ್ತೀರಿ? ಇದೆಲ್ಲಾ ಸರಿ ಅಲ್ಲ, ಅಲ್ಲವೇ” ಎಂದು ನನ್ನ ಅಭಿಪ್ರಾಯ ಕೇಳಿದರು. ನಾನು ಏನೂ ಹೇಳದೇ ಇದ್ದಾಗ “ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ನಿಮಗೆ ನಿಮ್ಮದೇ ಆದ ಅಭಿಪ್ರಾಯ ಇದೆ. ಇದರ ಬಗ್ಗೆ ಇಲ್ಲವೇ?” ಎಂದರು. ಆಗ ನಾನು ಮಾತಾಡಲು ಶುರು ಮಾಡಿದೆ. ನಮ್ಮ ಸಮಾಜದ ಕ್ರೂರ ಜಾತಿಪಥ, ಅದರ ವಿವಿಧ ಆಯಾಮಗಳು, ಅದರ ದೆಸೆಯಿಂದಾಗಿ ಸತತ ಹಿಂಸೆ ಅನುಭವಿಸುತ್ತಿರುವ ಸಮುದಾಯಗಳು, ಅವರು ಎದುರಿಸುವ ಸವಾಲುಗಳು, ಹಾಗೂ ಈ ಸಮಸ್ಯೆಗೆ ಸುಲಭ ಪರಿಹಾರಗಳು ಇಲ್ಲ ಎನ್ನುವ ವಿಷಯಗಳನ್ನು ನನಗೆ ತಿಳಿದಂತೆ ಹೇಳಿದೆ. ಅವರಿಗೆ ಮನವರಿಕೆ ಆಗಲಿಲ್ಲ. ಅಯ್ಯೋ ಅದೆಲ್ಲಾ ಎಲ್ಲೋ ಹಳ್ಳಿಯಲ್ಲಿ ಇರಬೇಕು. ಬೆಂಗಳೂರು-ಮೈಸೂರುಗಳಲ್ಲಿ ಈ ಸಮಸ್ಯೆ ಇಲ್ಲ. ಅಷ್ಟಾಗಿಯೂ ಮೀಸಲಾತಿ ಇರಬೇಕಾದರೆ ಬಡವರ ಮಕ್ಕಳಿಗೆ ಇರಲಿ. ಸಾಹುಕಾರರ ಮಕ್ಕಳಿಗೆ ಏಕೆ? ಕೊನೆಗೆ ಲುಕ್ಸಾನ ಆಗೋದು ದೇಶಕ್ಕೆ ಅಲ್ಲವೇ, ಇತ್ಯಾದಿ ಮಾತಾಡಿದರು. ಇದು ವಿವಿಧ ಸಮುದಾಯದ ಮಕ್ಕಳಿಗೆ ಸಮಾನ ಅವಕಾಶ ಸೃಷ್ಟಿಸುವ ಪ್ರಯತ್ನ ಅನ್ನುವುದು ಅವರಿಗೆ ಹೊಳೆಯಲಿಲ್ಲ.

ಅವರ ಪಟ್ಟಿಯ ಪಾಯಿಂಟುಗಳೆಲ್ಲ ಖಾಲಿ ಆಗಿ ಕೊನೆಗೆ ಅವರು ಏನೋ ಒಂದು ಅಪಶಬ್ದ ಬಳಸಿದರು. ನೀವು ಏನೇ ಹೇಳಿ, ಮೀಸಲಾತಿ ಇರಲೇಬಾರದು. ಅದೇ ಎಲ್ಲ ಸಮಸ್ಯೆಗಳಿಗೆ ಮೂಲ ಅಂತಂದರು. ಆಗ ನಾನು ಮೀಸಲಾತಿ ಇರಬಾರದು ಎನ್ನುವುದಾದರೆ ಬಸ್ಸಿನಲ್ಲಿ ಮುಂದಿನ ಸೀಟು ಇರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಶೌಚಾಲಯ ಇರಬಾರದು ಅಂತ ಹೇಳಿದೆ. ಆಗ ಅವರು ಸುಮ್ಮನೆ ಆದರು. ಆ ಕಾರ್ಯಕ್ರಮ ಮುಗಿಯುವವರೆಗೂ ನನ್ನನ್ನು ಮಾತಾಡಿಸಲಿಲ್ಲ. ಆ ನಂತರ ಅನೇಕ ಸಾರಿ ನಾನಾಗಿಯೇ ಮಾತಾಡಿಸಿದರೂ ಅವರು ಮಾತಾಡಲಿಲ್ಲ. ನಾನು ಏನೋ ಅತಿ ಅಸಹ್ಯವಾದ, ಅಮಾನವೀಯವಾದ ಮಾತು ಅಡಿಬಿಟ್ಟೆ ಎನ್ನುವಂತೆ ನನ್ನನ್ನು ನೋಡಿ ಸುಮ್ಮನೆ ಆಗಿಬಿಟ್ಟರು. ನನ್ನ ಉದ್ದೇಶ ಕೆಟ್ಟದ್ದು ಆಗಿರಲಿಲ್ಲ ಎಂದು, ನಾನು ಹೇಳಿದ್ದು ಕೇವಲ ಸಮ ಅವಕಾಶದ ಉದಾಹರಣೆ ಅಂತೆಲ್ಲಾ ಒಂದೆರಡು ಬಾರಿ ಹೇಳಲು ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಆನಂತರ ಸುಮ್ಮನಾಗಿ ಹೋದೆ.

ಈ ರೀತಿಯ ಜನ ನಮಗೆ ಎಲ್ಲ ಕಡೆ ಸಿಗುತ್ತಾರೆ. ಅವರು ಮಾತಾಡುವ ಜೋರು ಮತ್ತು ಓಘಗಳನ್ನು ನೋಡಿದರೆ ಅವರದೇ ಸರಿ, ನಮ್ಮದೇ ತಪ್ಪು ಎನ್ನುವ ಭಾವನೆ ಬರುತ್ತದೆ. ಅಂತಹ ಜನರ ಹತ್ತಿರ ಈ ವಿಷಯಗಳ ಬಗ್ಗೆ ಮಾತಾಡಬೇಕೋ, ಅಥವಾ ಮೌನವಾಗಿ ಇರಬೇಕೋ ತಿಳಿಯದೆ ಹೋಗಿಬಿಡುತ್ತದೆ. ಅದು “ನಮ್ಮ ವಿಚಾರಗಳನ್ನು ನಾವು ಬೇರೆಯವರಿಗೆ ತಿಳಿಸಬೇಕೋ ಅಥವಾ ನಮ್ಮಲ್ಲಿಯೇ ಇಟ್ಟುಕೊಳ್ಳಬೇಕೋ” ಎನ್ನುವ ವಾದದ ಭಾಗ. ಅದು ಅವರವರಿಗೆ ಬಿಟ್ಟ ವಿಚಾರ.

ಇಂತಹುದೆ ಒಂದು ಮಾತುಕತೆ ಒಮ್ಮೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಜೊತೆ ನಡೆದಿತ್ತು.

ಅವರ ವಿವಿಯಲ್ಲಿ ಒಂದು ವಿಚಾರ ಸಂಕಿರಣಕ್ಕಾಗಿ ನಾವು ಇಬ್ಬರು ಪತ್ರಕರ್ತರು ಹೋಗಿದ್ದೆವು. ನಮ್ಮ ಜೊತೆಗೆ ಒಬ್ಬ ಹಿರಿಯ ಸಮಾಜ ಕಾರ್ಯಕರ್ತರು ಇದ್ದರು. ಬೆಳಗ್ಗಿನ ತಿಂಡಿ ಮಾಡುವಾಗ ಆ ಪ್ರಾಧ್ಯಾಪಕರು ನಮ್ಮನ್ನು ಭೇಟಿ ಮಾಡಿದರು. “ನಾವು ಒಂದು ಸೇವಾ ಸಂಸ್ಥೆ ಮಾಡೀವಿ, ಅದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡ್ತೇವಿ. ಈ ವರ್ಷ ಒಬ್ಬ ಸಮಗಾರ ಹುಡುಗಿಗೆ ಕೊಟ್ಟುಬಿಟ್ಟಿವಿ” ಎಂದು ಆ ಹೋರಾಟಗಾರರು ಹೇಳಿದರು. ಆಗ ಆ ಪ್ರಾಧ್ಯಾಪಕರು “ನಾವು ಸಮಗಾರರು ಸರ್, ಅಗದೀ ಖರೆ ಸಮಗಾರರು ಅಂದ್ರ ನಾವ” ಅಂತ ಹೇಳಿದರು. ಹೌದೇ, ನನಗೆ ಗೊತ್ತಿಲ್ಲ. ಬಹಳ ಸಂತೋಷ ಎಂದು ಆ ಹಿರಿಯ ಹೋರಾಟಗಾರರು ಹೇಳಿದರು. ಆ ಪ್ರಾಧ್ಯಾಪಕರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಮೇಲುಜಾತಿಗೆ ಸೇರಿದವರು ಅಂತ ನನಗೆ ಗೊತ್ತಿತ್ತು. “ಅಯ್ಯೋ ಅವರು ಜೋಕು ಮಾಡುತ್ತಾರೆ ಸರ್ ಅಂತ ಹೇಳಿ ನಾನು ನಕ್ಕೆ. ಆ ಹಿರಿಯರು ಒಂಥರಾ ಕಸಿವಿಸಿಯಾಗಿ ಸುಮ್ಮನೆ ಕೂತರು.

ಆ ಪ್ರಾಧ್ಯಾಪಕರು ಸುಮ್ಮನೆ ಕೂಡಲಿಲ್ಲ. ಅವರಿಗೆ ಚುಚ್ಚಿದಂತಾಗಿ ಜೋರಾಗಿ ಮಾತನಾಡಲು ಶುರು ಮಾಡಿದರು. ಮೀಸಲು ವ್ಯವಸ್ಥೆ ವಿರುದ್ಧ ಕೂಗಾಡಿದರು. “ನಮ್ಮ ವಿವಿಯಲ್ಲಿ ನೋಡಿ. ನಾಲಾಯಕರು ಎಲ್ಲ ಸೀನಿಯಾರ್ಟಿ ತೊಗೊಂಡುಬಿಡ್ತಾರೆ. ನಮ್ಮ ನೋಟಸು ಓದಿ ಪಾಸು ಆದವರು ನಮಗಿಂತ ಮುಂದೆ ಹೋಗುತ್ತಾ ಇದ್ದಾರೆ. ನಾವು ಕೆಲಸಕ್ಕೆ ಸೇರಿದ ಮೇಲೆ ಹುಟ್ಟಿದವರು ನಮಗಿಂತ ಸೀನಿಯರ್ ಹೇಗೆ ಆಗುತ್ತಾರೆ? ನಾವೆಲ್ಲ ಸೇರಿ ಇದರ ವಿರುದ್ಧ ಹೋರಾಟ ಮಾಡಬೇಕು. ಈ ಅನಿಷ್ಟ ವ್ಯವಸ್ಥೆಯನ್ನು ನಾವು ಬೆಂಬಲಿಸಬಾರದು” ಅಂತ ಫರಮಾನು ಹೊರಡಿಸಿದರು.

ಆಗ ನಾನು “ಇರಲಿ ಬಿಡ್ರಿ ಸರ್. ಅದನ್ನು ಆಮ್ಯಾಲೆ ನೋಡೋಣ. ಈಗ ಪ್ರತಿಭೆ ಅಂದ್ರ ಏನು, ಅದರ ವಿರೋಧಿ ಅಂದ್ರ ಏನು ಅನ್ನೋದು ಗ್ಯಾರಂಟಿ ಮಾಡಿಕೊಳ್ಳೋಣ” ಅಂತ ಹೇಳಿ ಮಾತಾಡಲು ಶುರು ಮಾಡಿದೆ. ಅವರು ಮನೋವಿಜ್ಞಾನದ ಶಿಕ್ಷಕರು ಅಂತ ನನಗೆ ಗೊತ್ತಿತ್ತು. ಅಮೆರಿಕದ ವರ್ಣಭೇದ ನೀತಿ, ಯುರೋಪಿನ ಅಲ್ಪಸಂಖ್ಯಾತರು ಹಾಗೂ ಅವರ ಬುದ್ಧಿಮತ್ತೆ ಇತ್ಯಾದಿಗಳ ಬಗ್ಗೆ ಆಗಿರುವ ಸಂಶೋಧನೆಗಳ ಉದಾಹರಣೆ ನೀಡಿದೆ. ತಮ್ಮ ವಿಷಯದ ಬಗ್ಗೆ ಇನ್ನೊಬ್ಬರು ಯಾರೋ ಅಧಿಕಾರಯುತವಾಗಿ ಮಾತಾಡುವುದು ಅವರಿಗೆ ಅಪಚನವಾಯಿತು. ಅವರು ಇಲ್ಲ. ಅವು ನಮಗೆ ಸಂಬಂಧ ಇಲ್ಲ. ಅವೆಲ್ಲಾ ‘ಪ್ರಾಬ್ಲಮ್ಸ್ ಆಫ್ ಎ ಡಿಫರೆಂಟ್ ಸೊಸೈಟಿ’ ಅಂತಂದರು.

ಕೊನೆಗೆ ನಾನು “ನೋಡಿ ಸಾರ್, ನೀವು ಹೇಳೋದನ್ನ, ಬರೆ ವಾದಕ್ಕಾಗಿ ಅಂತ ಆದರೂ ಒಪ್ಪೋಣ. ಆದರೆ ನೀವು ಒಂದು ಮಾತು ನನಗೆ ಹೇಳಬೇಕು. ನೀವು ನಿಮ್ಮ ಜೀವನದಾಗ ಎಷ್ಟು ಸರಿ ಡೊನೇಶನ್‌ಗೆ ಬೈದಿರಿ? ನೀವು ಎಷ್ಟು ಸಲ ಮೀಸಲಾತಿಗೆ ಬೈದಿರಿ, ಅಷ್ಟೇ ಸರಿ ಡೊನೇಶನ್‌ಗೆ ಬೈದಿರಿ ಅಂತ ಆದರೆ ಮುಂದೆ ಮಾತು ಆಡಬಹುದು” ಅಂತಂದೆ.

ಮೀಸಲಾತಿ ಎನ್ನುವುದು ಪ್ರತಿಭೆಯ ಪರವಾಗಿ ಇರುವ ಕಾನೂನು. ವಿವಿಧ ಸಮಾಜಗಳು ಮೀಸಲು ಸೌಲಭ್ಯ ಪಡೆಯುವುದರಿಂದ ತಮ್ಮ ತಮ್ಮ ಸಮಾಜದ ಹುಡುಗರು- ಹುಡುಗಿಯರು ತಮ್ಮ ತಮ್ಮ ಪ್ರತಿಭೆ ತೋರಿಸಲು ಸಾಧ್ಯವಾಗುತ್ತದೆ. ಇದರಿಂದ ಆಗುವ ಅನುಕೂಲ ಏನೆಂದರೆ, ವಿವಿಧ ಸಮುದಾಯದಲ್ಲಿರುವ ಅತಿ ಹೆಚ್ಚು ಬುದ್ಧಿವಂತ ಹುಡುಗ- ಹುಡುಗಿಯರು ತಮ್ಮ ತಮ್ಮ ಪ್ರತಿಭೆ ತೋರಿಸಲು ಸಾಧ್ಯವಾಗುತ್ತದೆ. ಪ್ರತಿ ಸಮುದಾಯದ ಒಳಗೆ ಸ್ಪರ್ಧೆ ನಡೆದು ತಮ್ಮ ತಮ್ಮ ಜಾತಿ-ಉಪಜಾತಿಗಳ ಒಳಗಿನ ಅರ್ಹ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜು ಸೀಟು ಅಥವಾ ನೌಕರಿ ದೊರಕುವಂತೆ ಆಗುತ್ತದೆ. ಇನ್ನು ಯಾವ ಮೀಸಲು ಸೌಲಭ್ಯ ಪಡೆದ ವಿದ್ಯಾರ್ಥಿಯೂ ಕೂಡ ಸಾಮಾನ್ಯ ವರ್ಗದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡೋದಿಲ್ಲ. ಅವರು ಇಬ್ಬರೂ ತಮ್ಮ ತಮ್ಮ ವೃಂದಗಳಲ್ಲಿ ಸೀಮಿತ ಸ್ಪರ್ಧೆ ಮಾಡುತ್ತಾರೆ. ಆದ್ದರಿಂದ, ಅವರ ಸೀಟನ್ನು ಇವರು ಕಸಿದುಕೊಳ್ಳುವ ಪ್ರಸಂಗ ಬರೋದಿಲ್ಲ, ಅಂತ ತಿಳಿಹೇಳಿದೆ.

ಕೊನೆಯದಾಗಿ, ನೋಡಿ ಮೀಸಲಾತಿ ವ್ಯವಸ್ಥೆ ಅಡಿಯಲ್ಲಿ ಅಭ್ಯರ್ಥಿಗಳ ನಡುವೆ, ಅವರ ಸಾಮರ್ಥ್ಯದ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತದೆ. ಆದರೆ, ಡೊನೇಶನ್ ವ್ಯವಸ್ಥೆ ಅಡಿಯಲ್ಲಿ ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ಇಲ್ಲ. ಅವರ ಅಪ್ಪಂದಿರ ನಡುವೆ, ಅವರ ಪಾಕೆಟ್ಟಿನಲ್ಲಿ ಎಷ್ಟು ಹಣ ಇದೆ ಇನ್ನುವ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತದೆ. ಇದು ನಿಜವಾದ ಪ್ರತಿಭೆಯ ವಿರೋಧಿ ಅಂತ ಹೇಳಿದೆ. ಆದರೆ ಅವರು ತಮ್ಮ ಮನಸ್ಸಿನ ಬಾಗಿಲನ್ನು ಕೋಟೆಯ ಬಾಗಿಲಿನಂತೆ ಮುಚ್ಚಿಬಿಟ್ಟಿದ್ದರು. ತನ್ನ ಪೂರ್ವಗ್ರಹಗಳ ವಿರುದ್ಧ ಇರುವ ನಿಲುವನ್ನು ಸ್ವೀಕರಿಸುವ ಔದಾರ್ಯ ಅವರಿಗೆ ಇರಲಿಲ್ಲ.

“ಇಲ್ಲ. ಇಲ್ಲ. ಹಂಗ ಹೆಂಗ ಆಗತದ? ಅದು ಬ್ಯಾರೆ, ಇದು ಬ್ಯಾರೆನ. ಡೊನೇಶನ್ ಪ್ರತಿಭೆ ವಿರೋಧಿ ಇರಬಹುದು. ಆದರ ಮೀಸಲಾತಿ ಮಾತ್ರ ಖಾತ್ರಿಯಾಗಿ ಪ್ರತಿಭೆ ವಿರೋಧಿ. ಅವು ಎರಡೂ ಇರಲಾರದ ಸಮಾಜದಲ್ಲಿ ನಾವು ಇರಬೇಕು. ನನಗಂತೂ ಇದು ಸಾಕಾಗಿ ಹೊಗೇತೀ” ಎಂದು ಅವರು ಅವಲತ್ತುಕೊಂಡರು.

ಅಷ್ಟೊತ್ತಿಗೆ ಕಾರ್ಯಕ್ರಮ ಶುರು ಆಯಿತು. ಅದರಲ್ಲಿ ಸಮಕಾಲೀನ ಜಾಗತಿಕ ಸಂದರ್ಭದಲ್ಲಿ ಸಬ್ ಅಲಟರ್ನ್ ಸಮುದಾಯಗಳ ಸಮಜೋ-ಆರ್ಥಿಕೋ-ರಾಜಕೀಯೋ-ಸಾಂಸ್ಕೃತಿಕೋ ಸವಾಲುಗಳು ಮತ್ತು ಪರಿಹಾರಗಳು ಅನ್ನುವ ಬಗ್ಗೆ ಘನಘೋರ ಭಾಷಣ ಮಾಡಿದರು.

ಇಂತಹ ಅನುಭವ ನಿಮ್ಮದೂ ಆಗಿರಬಹುದು. ನಮಗೆ ಸಿಕ್ಕವರು ನಿಮಗೂ ಸಿಕ್ಕಿರಬಹುದು. ಒಬ್ಬರ ಸುದ್ದಿ ಒಬ್ಬರು ಹಂಚಿಕೊಳ್ಳಬೇಕು ಎನ್ನುವುದಕ್ಕಾಗಿ ಇಷ್ಟೆಲ್ಲಾ ಹೇಳಬೇಕಾಯಿತು ಅಷ್ಟೇ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.


ಇದನ್ನೂ ಓದಿ: ಒಬಿಸಿ ಕಾಯ್ದೆ ತಿದ್ದುಪಡಿ 2021 ಹಿನ್ನೆಲೆ; ಮೀಸಲು ಸೌಲಭ್ಯ – ಭಾಗ ಒಂದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...