Homeಮುಖಪುಟಮೀಸಲು ಸೌಲಭ್ಯ - ಭಾಗ ಎರಡು; ಮೀಸಲಾತಿ ಬಗ್ಗೆ ಮಾತು-ಕತೆ

ಮೀಸಲು ಸೌಲಭ್ಯ – ಭಾಗ ಎರಡು; ಮೀಸಲಾತಿ ಬಗ್ಗೆ ಮಾತು-ಕತೆ

- Advertisement -
- Advertisement -

ಇದು ಕೆಲವು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ಭಿಕ್ಷುಕಿ ಹಾಗೂ ಅವಳ ಪುಟ್ಟ ಮಗಳ ಬಗ್ಗೆ ನಾನು ಸುದ್ದಿ ಮಾಡಿದ್ದೆ. ಅದನ್ನು ನೋಡಿ ಪೊಲೀಸರು ಅವಳನ್ನು ಆಸ್ಪತ್ರೆಗೆ ಕಳಿಸಿಕೊಡಲು ನಿರ್ಧಾರ ಮಾಡಿದರು. ಆದರೆ ಆಗ ಆ ಹೆಣ್ಣುಮಗಳಿಗೆ ಏಡ್ಸ್ ಬಂದುಬಿಟ್ಟಿದೆ ಎಂದು ಗಾಳಿ ಸುದ್ದಿ ಆಗಿದ್ದರಿಂದ ಅವಳನ್ನು ಮುಟ್ಟಲು ಯಾರೂ ಮುಂದೆ ಬರುತ್ತಾ ಇರಲಿಲ್ಲ. ಆಗ ನಾನು ಆಂಬುಲೆನ್ಸ್ ಚಾಲಕನ ಜೊತೆ ಸೇರಿ ಅವಳನ್ನು ಎತ್ತಿಕೊಂಡು ಆಂಬುಲೆನ್ಸ್‌ನಲ್ಲಿ ಹಾಕಿ ಕಳಿಸಿದೆವು. ಇದನ್ನು ನೋಡಿದ್ದ ನನ್ನ ಸ್ನೇಹಿತ, ಸಹೋದ್ಯೋಗಿ ಇಮ್ರಾನ್ ಗೌಹಾರ್ ಅವರು ಕೆಲವು ಸ್ನೇಹಿತರ ಮುಂದೆ ಇದನ್ನು ಹೇಳಿದ್ದರು. ಆಗ ಕೆಲವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸುದ್ದಿಗಾಗಿ ಹಾಗೂ ಆ ಮಹಿಳೆಗೆ ಸಹಾಯ ಮಾಡಿದ್ದಕ್ಕೆ ನನಗೆ ಅಭಿನಂದನೆ ಸಲ್ಲಿಸಿದ್ದರು.

ಈ ರೀತಿ ಅಭಿನಂದನೆ ಸಲ್ಲಿಸಿದ್ದವರೊಳಗೆ ಒಬ್ಬರು ಹಿರಿಯ ಮಹಿಳಾ ಪತ್ರಕರ್ತರೂ ಇದ್ದರು. ಅವರು ಆಗ ಬೆಂಗಳೂರಿನ ಇಂಗ್ಲಿಷು ಪತ್ರಿಕೆಯೊಂದರಲ್ಲಿ ಹಿರಿಯ ವರದಿಗಾರರಾಗಿದ್ದರು. ರಾಜಕೀಯ, ಪರಿಸರ-ಅರಣ್ಯ, ಆರೋಗ್ಯ ಇತ್ಯಾದಿ ವಿಷಯಗಳ ಸುದ್ದಿ ಮಾಡಿ ಅನುಭವ ಇದ್ದ ಅವರು ಆಗ ಹೊಸ ಕ್ಷೇತ್ರವಾದ ಐಟಿ-ಬಿಟಿ
ಸುದ್ದಿ ಕೂಡ ಮಾಡುತ್ತಾ ಇದ್ದರು. ಅವರು “ನೀವು ತುಂಬ ಒಳ್ಳೆ ಕೆಲಸ ಮಾಡಿದೀರಂತೆ. ವರದಿಗಾರರು ಬರೇ ಸುದ್ದಿ ಬರೆದು ಸುದ್ದಿ ಆಗಬಾರದು, ಇಂತಹ ಕೆಲಸಗಳಿಂದಲೂ ಸುದ್ದಿ ಆಗಬೇಕು” ಎಂದರು. ಕ್ಷೇತ್ರಕಾರ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಮ್ಮಿ ಇದ್ದ ಕಾಲದಲ್ಲಿ ಅವರು ಅನೇಕ ಅಪಾಯಕಾರಿ ಜಾಗಗಳಿಗೆ ಹೋಗಿ ಸುದ್ದಿ ಮಾಡಿದ್ದರು. ತುಂಬ ಧೈರ್ಯವಂತರು, ದುಡಿವಾನರು ಎಂದು ಹೆಸರು ಗಳಿಸಿದ್ದರು. ಮಹಿಳೆಯರ ಹಕ್ಕುಗಳ ಬಗ್ಗೆ, ಕೂಲಿ ಕಾರ್ಮಿಕರ ಬರೆದಿದ್ದರು, ಗಟ್ಟಿಯಾಗಿ ಮಾತಾಡುತ್ತಿದ್ದರು. ನಮ್ಮ ಓರಿಗೆಯ ಹುಡುಗರ ಕಣ್ಣಲ್ಲಿ ಆದರ್ಶ ಪತ್ರಕರ್ತರು ಅನ್ನಿಸಿಕೊಂಡಿದ್ದರವರು.

ಅವರು ಆಮೇಲೆ ತುಂಬ ಪರಿಚಯವಾದರು. ಕೆಲಸದ ಮೇಲೆ ಹೊರಗಡೆ ಹೋದಾಗಲೆಲ್ಲಾ ಮಾತಾಡುತ್ತಿದ್ದರು. “ನಿಮ್ಮಂತಹ ಕಿರಿಯರು ತುಂಬ ಪ್ರಗತಿಪರ ನಿಲುವುಗಳನ್ನು ಇಟ್ಟುಕೊಂಡಿರುವುದು ತುಂಬ ಖುಷಿಯ ವಿಷಯ. ನೀವು ಹೀಗೆ ಬರೆಯುತ್ತಾ ಇರಿ” ಎಂದೆಲ್ಲಾ ಹುರಿದುಂಬಿಸುತ್ತಾ ಇರುತ್ತಿದ್ದರು.

ಒಂದು ದಿನ ದೂರದ ಕಾರ್ಯಕ್ರಮಕ್ಕೆ ಹೋದಾಗ ಸರಕಾರಿ ಬಸ್ಸಿನಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದರು. ಅದೂ ಇದೂ ಮಾತಾಡುತ್ತಾ ನಾವು ಮೀಸಲಾತಿಯ ಬಗ್ಗೆ ಮಾತಾಡಲು ಶುರು ಮಾಡಿದೆವು.

ಅವರ ಮಾತುಗಳನ್ನು ಕೇಳಿದ ಕೆಲವೇ ಕ್ಷಣಗಳಲ್ಲಿ ಅವರ ಪ್ರಗತಿಪರ ನಿಲುವುಗಳು ಕೇವಲ ಕೆಲವೇ ವಿಷಯಗಳಿಗೆ ಸೀಮಿತವಾಗಿವೆ ಅಂತ ನನಗೆ ಖಚಿತವಾಗಿಹೋಯಿತು. ಅವರು “ಈ ದೇಶ ಮೀಸಲಾತಿಯಿಂದಾಗಿಯೇ ಹಾಳಾಗಿ ಹೋಗಿದೆ, ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲ, ನಾನು ಮೊನ್ನೆ ಒಂದು ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಹೋಗಿದ್ದೆ, ಅಲ್ಲಿ ಎಲ್ಲವೂ ತುಂಬ ನಿಧಾನ, ಯಾಕೆ ಅಂತ ನೋಡಿದರೆ ಅಲ್ಲಿ ಎಲ್ಲಾ ಕಡೆ ಈ ಎಸ್‌ಸಿ ಎಸ್‌ಟಿಗಳು ತುಂಬಿಕೊಂಡಿದ್ದಾರೆ, ಈ ಪಿಡುಗಿನಿಂದ ನಮಗೆ ಯಾವಾಗ ಮುಕ್ತಿ ಸಿಗುತ್ತದೋ ಗೊತ್ತಿಲ್ಲ ಎನ್ನುವಂತಹ ನುಡಿಮುತ್ತುಗಳನ್ನು ಉದುರಿಸಿದರು.

ನಾನು ಮೊದಲಿಗೆ ಸುಮ್ಮನೆ ಕುಳಿತಿದ್ದೆ. ಅವರು “ಇದರ ಬಗ್ಗೆ ನೀವು ಏನು ಹೇಳುತ್ತೀರಿ? ಇದೆಲ್ಲಾ ಸರಿ ಅಲ್ಲ, ಅಲ್ಲವೇ” ಎಂದು ನನ್ನ ಅಭಿಪ್ರಾಯ ಕೇಳಿದರು. ನಾನು ಏನೂ ಹೇಳದೇ ಇದ್ದಾಗ “ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ನಿಮಗೆ ನಿಮ್ಮದೇ ಆದ ಅಭಿಪ್ರಾಯ ಇದೆ. ಇದರ ಬಗ್ಗೆ ಇಲ್ಲವೇ?” ಎಂದರು. ಆಗ ನಾನು ಮಾತಾಡಲು ಶುರು ಮಾಡಿದೆ. ನಮ್ಮ ಸಮಾಜದ ಕ್ರೂರ ಜಾತಿಪಥ, ಅದರ ವಿವಿಧ ಆಯಾಮಗಳು, ಅದರ ದೆಸೆಯಿಂದಾಗಿ ಸತತ ಹಿಂಸೆ ಅನುಭವಿಸುತ್ತಿರುವ ಸಮುದಾಯಗಳು, ಅವರು ಎದುರಿಸುವ ಸವಾಲುಗಳು, ಹಾಗೂ ಈ ಸಮಸ್ಯೆಗೆ ಸುಲಭ ಪರಿಹಾರಗಳು ಇಲ್ಲ ಎನ್ನುವ ವಿಷಯಗಳನ್ನು ನನಗೆ ತಿಳಿದಂತೆ ಹೇಳಿದೆ. ಅವರಿಗೆ ಮನವರಿಕೆ ಆಗಲಿಲ್ಲ. ಅಯ್ಯೋ ಅದೆಲ್ಲಾ ಎಲ್ಲೋ ಹಳ್ಳಿಯಲ್ಲಿ ಇರಬೇಕು. ಬೆಂಗಳೂರು-ಮೈಸೂರುಗಳಲ್ಲಿ ಈ ಸಮಸ್ಯೆ ಇಲ್ಲ. ಅಷ್ಟಾಗಿಯೂ ಮೀಸಲಾತಿ ಇರಬೇಕಾದರೆ ಬಡವರ ಮಕ್ಕಳಿಗೆ ಇರಲಿ. ಸಾಹುಕಾರರ ಮಕ್ಕಳಿಗೆ ಏಕೆ? ಕೊನೆಗೆ ಲುಕ್ಸಾನ ಆಗೋದು ದೇಶಕ್ಕೆ ಅಲ್ಲವೇ, ಇತ್ಯಾದಿ ಮಾತಾಡಿದರು. ಇದು ವಿವಿಧ ಸಮುದಾಯದ ಮಕ್ಕಳಿಗೆ ಸಮಾನ ಅವಕಾಶ ಸೃಷ್ಟಿಸುವ ಪ್ರಯತ್ನ ಅನ್ನುವುದು ಅವರಿಗೆ ಹೊಳೆಯಲಿಲ್ಲ.

ಅವರ ಪಟ್ಟಿಯ ಪಾಯಿಂಟುಗಳೆಲ್ಲ ಖಾಲಿ ಆಗಿ ಕೊನೆಗೆ ಅವರು ಏನೋ ಒಂದು ಅಪಶಬ್ದ ಬಳಸಿದರು. ನೀವು ಏನೇ ಹೇಳಿ, ಮೀಸಲಾತಿ ಇರಲೇಬಾರದು. ಅದೇ ಎಲ್ಲ ಸಮಸ್ಯೆಗಳಿಗೆ ಮೂಲ ಅಂತಂದರು. ಆಗ ನಾನು ಮೀಸಲಾತಿ ಇರಬಾರದು ಎನ್ನುವುದಾದರೆ ಬಸ್ಸಿನಲ್ಲಿ ಮುಂದಿನ ಸೀಟು ಇರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಶೌಚಾಲಯ ಇರಬಾರದು ಅಂತ ಹೇಳಿದೆ. ಆಗ ಅವರು ಸುಮ್ಮನೆ ಆದರು. ಆ ಕಾರ್ಯಕ್ರಮ ಮುಗಿಯುವವರೆಗೂ ನನ್ನನ್ನು ಮಾತಾಡಿಸಲಿಲ್ಲ. ಆ ನಂತರ ಅನೇಕ ಸಾರಿ ನಾನಾಗಿಯೇ ಮಾತಾಡಿಸಿದರೂ ಅವರು ಮಾತಾಡಲಿಲ್ಲ. ನಾನು ಏನೋ ಅತಿ ಅಸಹ್ಯವಾದ, ಅಮಾನವೀಯವಾದ ಮಾತು ಅಡಿಬಿಟ್ಟೆ ಎನ್ನುವಂತೆ ನನ್ನನ್ನು ನೋಡಿ ಸುಮ್ಮನೆ ಆಗಿಬಿಟ್ಟರು. ನನ್ನ ಉದ್ದೇಶ ಕೆಟ್ಟದ್ದು ಆಗಿರಲಿಲ್ಲ ಎಂದು, ನಾನು ಹೇಳಿದ್ದು ಕೇವಲ ಸಮ ಅವಕಾಶದ ಉದಾಹರಣೆ ಅಂತೆಲ್ಲಾ ಒಂದೆರಡು ಬಾರಿ ಹೇಳಲು ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಆನಂತರ ಸುಮ್ಮನಾಗಿ ಹೋದೆ.

ಈ ರೀತಿಯ ಜನ ನಮಗೆ ಎಲ್ಲ ಕಡೆ ಸಿಗುತ್ತಾರೆ. ಅವರು ಮಾತಾಡುವ ಜೋರು ಮತ್ತು ಓಘಗಳನ್ನು ನೋಡಿದರೆ ಅವರದೇ ಸರಿ, ನಮ್ಮದೇ ತಪ್ಪು ಎನ್ನುವ ಭಾವನೆ ಬರುತ್ತದೆ. ಅಂತಹ ಜನರ ಹತ್ತಿರ ಈ ವಿಷಯಗಳ ಬಗ್ಗೆ ಮಾತಾಡಬೇಕೋ, ಅಥವಾ ಮೌನವಾಗಿ ಇರಬೇಕೋ ತಿಳಿಯದೆ ಹೋಗಿಬಿಡುತ್ತದೆ. ಅದು “ನಮ್ಮ ವಿಚಾರಗಳನ್ನು ನಾವು ಬೇರೆಯವರಿಗೆ ತಿಳಿಸಬೇಕೋ ಅಥವಾ ನಮ್ಮಲ್ಲಿಯೇ ಇಟ್ಟುಕೊಳ್ಳಬೇಕೋ” ಎನ್ನುವ ವಾದದ ಭಾಗ. ಅದು ಅವರವರಿಗೆ ಬಿಟ್ಟ ವಿಚಾರ.

ಇಂತಹುದೆ ಒಂದು ಮಾತುಕತೆ ಒಮ್ಮೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಜೊತೆ ನಡೆದಿತ್ತು.

ಅವರ ವಿವಿಯಲ್ಲಿ ಒಂದು ವಿಚಾರ ಸಂಕಿರಣಕ್ಕಾಗಿ ನಾವು ಇಬ್ಬರು ಪತ್ರಕರ್ತರು ಹೋಗಿದ್ದೆವು. ನಮ್ಮ ಜೊತೆಗೆ ಒಬ್ಬ ಹಿರಿಯ ಸಮಾಜ ಕಾರ್ಯಕರ್ತರು ಇದ್ದರು. ಬೆಳಗ್ಗಿನ ತಿಂಡಿ ಮಾಡುವಾಗ ಆ ಪ್ರಾಧ್ಯಾಪಕರು ನಮ್ಮನ್ನು ಭೇಟಿ ಮಾಡಿದರು. “ನಾವು ಒಂದು ಸೇವಾ ಸಂಸ್ಥೆ ಮಾಡೀವಿ, ಅದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡ್ತೇವಿ. ಈ ವರ್ಷ ಒಬ್ಬ ಸಮಗಾರ ಹುಡುಗಿಗೆ ಕೊಟ್ಟುಬಿಟ್ಟಿವಿ” ಎಂದು ಆ ಹೋರಾಟಗಾರರು ಹೇಳಿದರು. ಆಗ ಆ ಪ್ರಾಧ್ಯಾಪಕರು “ನಾವು ಸಮಗಾರರು ಸರ್, ಅಗದೀ ಖರೆ ಸಮಗಾರರು ಅಂದ್ರ ನಾವ” ಅಂತ ಹೇಳಿದರು. ಹೌದೇ, ನನಗೆ ಗೊತ್ತಿಲ್ಲ. ಬಹಳ ಸಂತೋಷ ಎಂದು ಆ ಹಿರಿಯ ಹೋರಾಟಗಾರರು ಹೇಳಿದರು. ಆ ಪ್ರಾಧ್ಯಾಪಕರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಮೇಲುಜಾತಿಗೆ ಸೇರಿದವರು ಅಂತ ನನಗೆ ಗೊತ್ತಿತ್ತು. “ಅಯ್ಯೋ ಅವರು ಜೋಕು ಮಾಡುತ್ತಾರೆ ಸರ್ ಅಂತ ಹೇಳಿ ನಾನು ನಕ್ಕೆ. ಆ ಹಿರಿಯರು ಒಂಥರಾ ಕಸಿವಿಸಿಯಾಗಿ ಸುಮ್ಮನೆ ಕೂತರು.

ಆ ಪ್ರಾಧ್ಯಾಪಕರು ಸುಮ್ಮನೆ ಕೂಡಲಿಲ್ಲ. ಅವರಿಗೆ ಚುಚ್ಚಿದಂತಾಗಿ ಜೋರಾಗಿ ಮಾತನಾಡಲು ಶುರು ಮಾಡಿದರು. ಮೀಸಲು ವ್ಯವಸ್ಥೆ ವಿರುದ್ಧ ಕೂಗಾಡಿದರು. “ನಮ್ಮ ವಿವಿಯಲ್ಲಿ ನೋಡಿ. ನಾಲಾಯಕರು ಎಲ್ಲ ಸೀನಿಯಾರ್ಟಿ ತೊಗೊಂಡುಬಿಡ್ತಾರೆ. ನಮ್ಮ ನೋಟಸು ಓದಿ ಪಾಸು ಆದವರು ನಮಗಿಂತ ಮುಂದೆ ಹೋಗುತ್ತಾ ಇದ್ದಾರೆ. ನಾವು ಕೆಲಸಕ್ಕೆ ಸೇರಿದ ಮೇಲೆ ಹುಟ್ಟಿದವರು ನಮಗಿಂತ ಸೀನಿಯರ್ ಹೇಗೆ ಆಗುತ್ತಾರೆ? ನಾವೆಲ್ಲ ಸೇರಿ ಇದರ ವಿರುದ್ಧ ಹೋರಾಟ ಮಾಡಬೇಕು. ಈ ಅನಿಷ್ಟ ವ್ಯವಸ್ಥೆಯನ್ನು ನಾವು ಬೆಂಬಲಿಸಬಾರದು” ಅಂತ ಫರಮಾನು ಹೊರಡಿಸಿದರು.

ಆಗ ನಾನು “ಇರಲಿ ಬಿಡ್ರಿ ಸರ್. ಅದನ್ನು ಆಮ್ಯಾಲೆ ನೋಡೋಣ. ಈಗ ಪ್ರತಿಭೆ ಅಂದ್ರ ಏನು, ಅದರ ವಿರೋಧಿ ಅಂದ್ರ ಏನು ಅನ್ನೋದು ಗ್ಯಾರಂಟಿ ಮಾಡಿಕೊಳ್ಳೋಣ” ಅಂತ ಹೇಳಿ ಮಾತಾಡಲು ಶುರು ಮಾಡಿದೆ. ಅವರು ಮನೋವಿಜ್ಞಾನದ ಶಿಕ್ಷಕರು ಅಂತ ನನಗೆ ಗೊತ್ತಿತ್ತು. ಅಮೆರಿಕದ ವರ್ಣಭೇದ ನೀತಿ, ಯುರೋಪಿನ ಅಲ್ಪಸಂಖ್ಯಾತರು ಹಾಗೂ ಅವರ ಬುದ್ಧಿಮತ್ತೆ ಇತ್ಯಾದಿಗಳ ಬಗ್ಗೆ ಆಗಿರುವ ಸಂಶೋಧನೆಗಳ ಉದಾಹರಣೆ ನೀಡಿದೆ. ತಮ್ಮ ವಿಷಯದ ಬಗ್ಗೆ ಇನ್ನೊಬ್ಬರು ಯಾರೋ ಅಧಿಕಾರಯುತವಾಗಿ ಮಾತಾಡುವುದು ಅವರಿಗೆ ಅಪಚನವಾಯಿತು. ಅವರು ಇಲ್ಲ. ಅವು ನಮಗೆ ಸಂಬಂಧ ಇಲ್ಲ. ಅವೆಲ್ಲಾ ‘ಪ್ರಾಬ್ಲಮ್ಸ್ ಆಫ್ ಎ ಡಿಫರೆಂಟ್ ಸೊಸೈಟಿ’ ಅಂತಂದರು.

ಕೊನೆಗೆ ನಾನು “ನೋಡಿ ಸಾರ್, ನೀವು ಹೇಳೋದನ್ನ, ಬರೆ ವಾದಕ್ಕಾಗಿ ಅಂತ ಆದರೂ ಒಪ್ಪೋಣ. ಆದರೆ ನೀವು ಒಂದು ಮಾತು ನನಗೆ ಹೇಳಬೇಕು. ನೀವು ನಿಮ್ಮ ಜೀವನದಾಗ ಎಷ್ಟು ಸರಿ ಡೊನೇಶನ್‌ಗೆ ಬೈದಿರಿ? ನೀವು ಎಷ್ಟು ಸಲ ಮೀಸಲಾತಿಗೆ ಬೈದಿರಿ, ಅಷ್ಟೇ ಸರಿ ಡೊನೇಶನ್‌ಗೆ ಬೈದಿರಿ ಅಂತ ಆದರೆ ಮುಂದೆ ಮಾತು ಆಡಬಹುದು” ಅಂತಂದೆ.

ಮೀಸಲಾತಿ ಎನ್ನುವುದು ಪ್ರತಿಭೆಯ ಪರವಾಗಿ ಇರುವ ಕಾನೂನು. ವಿವಿಧ ಸಮಾಜಗಳು ಮೀಸಲು ಸೌಲಭ್ಯ ಪಡೆಯುವುದರಿಂದ ತಮ್ಮ ತಮ್ಮ ಸಮಾಜದ ಹುಡುಗರು- ಹುಡುಗಿಯರು ತಮ್ಮ ತಮ್ಮ ಪ್ರತಿಭೆ ತೋರಿಸಲು ಸಾಧ್ಯವಾಗುತ್ತದೆ. ಇದರಿಂದ ಆಗುವ ಅನುಕೂಲ ಏನೆಂದರೆ, ವಿವಿಧ ಸಮುದಾಯದಲ್ಲಿರುವ ಅತಿ ಹೆಚ್ಚು ಬುದ್ಧಿವಂತ ಹುಡುಗ- ಹುಡುಗಿಯರು ತಮ್ಮ ತಮ್ಮ ಪ್ರತಿಭೆ ತೋರಿಸಲು ಸಾಧ್ಯವಾಗುತ್ತದೆ. ಪ್ರತಿ ಸಮುದಾಯದ ಒಳಗೆ ಸ್ಪರ್ಧೆ ನಡೆದು ತಮ್ಮ ತಮ್ಮ ಜಾತಿ-ಉಪಜಾತಿಗಳ ಒಳಗಿನ ಅರ್ಹ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜು ಸೀಟು ಅಥವಾ ನೌಕರಿ ದೊರಕುವಂತೆ ಆಗುತ್ತದೆ. ಇನ್ನು ಯಾವ ಮೀಸಲು ಸೌಲಭ್ಯ ಪಡೆದ ವಿದ್ಯಾರ್ಥಿಯೂ ಕೂಡ ಸಾಮಾನ್ಯ ವರ್ಗದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡೋದಿಲ್ಲ. ಅವರು ಇಬ್ಬರೂ ತಮ್ಮ ತಮ್ಮ ವೃಂದಗಳಲ್ಲಿ ಸೀಮಿತ ಸ್ಪರ್ಧೆ ಮಾಡುತ್ತಾರೆ. ಆದ್ದರಿಂದ, ಅವರ ಸೀಟನ್ನು ಇವರು ಕಸಿದುಕೊಳ್ಳುವ ಪ್ರಸಂಗ ಬರೋದಿಲ್ಲ, ಅಂತ ತಿಳಿಹೇಳಿದೆ.

ಕೊನೆಯದಾಗಿ, ನೋಡಿ ಮೀಸಲಾತಿ ವ್ಯವಸ್ಥೆ ಅಡಿಯಲ್ಲಿ ಅಭ್ಯರ್ಥಿಗಳ ನಡುವೆ, ಅವರ ಸಾಮರ್ಥ್ಯದ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತದೆ. ಆದರೆ, ಡೊನೇಶನ್ ವ್ಯವಸ್ಥೆ ಅಡಿಯಲ್ಲಿ ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ಇಲ್ಲ. ಅವರ ಅಪ್ಪಂದಿರ ನಡುವೆ, ಅವರ ಪಾಕೆಟ್ಟಿನಲ್ಲಿ ಎಷ್ಟು ಹಣ ಇದೆ ಇನ್ನುವ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತದೆ. ಇದು ನಿಜವಾದ ಪ್ರತಿಭೆಯ ವಿರೋಧಿ ಅಂತ ಹೇಳಿದೆ. ಆದರೆ ಅವರು ತಮ್ಮ ಮನಸ್ಸಿನ ಬಾಗಿಲನ್ನು ಕೋಟೆಯ ಬಾಗಿಲಿನಂತೆ ಮುಚ್ಚಿಬಿಟ್ಟಿದ್ದರು. ತನ್ನ ಪೂರ್ವಗ್ರಹಗಳ ವಿರುದ್ಧ ಇರುವ ನಿಲುವನ್ನು ಸ್ವೀಕರಿಸುವ ಔದಾರ್ಯ ಅವರಿಗೆ ಇರಲಿಲ್ಲ.

“ಇಲ್ಲ. ಇಲ್ಲ. ಹಂಗ ಹೆಂಗ ಆಗತದ? ಅದು ಬ್ಯಾರೆ, ಇದು ಬ್ಯಾರೆನ. ಡೊನೇಶನ್ ಪ್ರತಿಭೆ ವಿರೋಧಿ ಇರಬಹುದು. ಆದರ ಮೀಸಲಾತಿ ಮಾತ್ರ ಖಾತ್ರಿಯಾಗಿ ಪ್ರತಿಭೆ ವಿರೋಧಿ. ಅವು ಎರಡೂ ಇರಲಾರದ ಸಮಾಜದಲ್ಲಿ ನಾವು ಇರಬೇಕು. ನನಗಂತೂ ಇದು ಸಾಕಾಗಿ ಹೊಗೇತೀ” ಎಂದು ಅವರು ಅವಲತ್ತುಕೊಂಡರು.

ಅಷ್ಟೊತ್ತಿಗೆ ಕಾರ್ಯಕ್ರಮ ಶುರು ಆಯಿತು. ಅದರಲ್ಲಿ ಸಮಕಾಲೀನ ಜಾಗತಿಕ ಸಂದರ್ಭದಲ್ಲಿ ಸಬ್ ಅಲಟರ್ನ್ ಸಮುದಾಯಗಳ ಸಮಜೋ-ಆರ್ಥಿಕೋ-ರಾಜಕೀಯೋ-ಸಾಂಸ್ಕೃತಿಕೋ ಸವಾಲುಗಳು ಮತ್ತು ಪರಿಹಾರಗಳು ಅನ್ನುವ ಬಗ್ಗೆ ಘನಘೋರ ಭಾಷಣ ಮಾಡಿದರು.

ಇಂತಹ ಅನುಭವ ನಿಮ್ಮದೂ ಆಗಿರಬಹುದು. ನಮಗೆ ಸಿಕ್ಕವರು ನಿಮಗೂ ಸಿಕ್ಕಿರಬಹುದು. ಒಬ್ಬರ ಸುದ್ದಿ ಒಬ್ಬರು ಹಂಚಿಕೊಳ್ಳಬೇಕು ಎನ್ನುವುದಕ್ಕಾಗಿ ಇಷ್ಟೆಲ್ಲಾ ಹೇಳಬೇಕಾಯಿತು ಅಷ್ಟೇ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.


ಇದನ್ನೂ ಓದಿ: ಒಬಿಸಿ ಕಾಯ್ದೆ ತಿದ್ದುಪಡಿ 2021 ಹಿನ್ನೆಲೆ; ಮೀಸಲು ಸೌಲಭ್ಯ – ಭಾಗ ಒಂದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...