ನ್ಯಾಷನಲ್ ಎಲಿಜಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ (NEET)ನಿಂದ ಸಂಪೂರ್ಣ ವಿನಾಯಿತಿ ನೀಡುವ ಮಸೂದೆಯನ್ನು ತಮಿಳುನಾಡು ಸರ್ಕಾರ ಅಂಗೀಕರಿಸಿದೆ. ನೀಟ್ನಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳ ಬದುಕು ದುಸ್ತರವಾಗಿದೆ ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ನೀಟ್ ಪರೀಕ್ಷೆಯಿಂದ ಸಂಪೂರ್ಣ ವಿನಾಯಿತಿ ನೀಡುವ ಮಸೂದೆಗೆ ಅಂಗೀಕಾರ ಹಾಕಿದ್ದಾರೆ. ಈ ವೇಳೆ ತಮಿಳುನಾಡು ವಿರೋಧ ಪಕ್ಷ ಎಐಎಡಿಎಂಕೆ ಸಭಾತ್ಯಾಗ ಮಾಡಿದೆ.
“ನೀಟ್ ವಿರುದ್ಧದ ಮಸೂದೆಯನ್ನು ಇಂದು ಅಂಗೀಕರಿಸಲಾಗಿದೆ. ಇದಕ್ಕೆ ನೀವು (ಎಐಎಡಿಎಂಕೆ) ಸಹಕಾರ ನೀಡಬೇಕು. ಎಲ್ಲ ವಿರೋಧ ಪಕ್ಷಗಳಲ್ಲೂ ಇದನ್ನುಒಪ್ಪಿಕೊಳ್ಳಬೇಕು” ಎಂದು ಸ್ಟಾಲಿನ್ ಕೋರಿದ್ದಾರೆ. “ನೀಟ್ ವಿರುದ್ಧ ಕಾನೂನು ಸಮರ ಆರಂಭವಾಗಿದೆ. ತಮಿಳುನಾಡು ಸರ್ಕಾರ ನೀಟ್ ವಿರುದ್ಧ ನಿರ್ಣಯ ಕೈಗೊಳ್ಳಲಿದೆ” ಎಂದು ಸ್ಟಾಲಿನ್ ಭಾನುವಾರ ಘೋಷಿಸಿದ್ದರು.
“ಪೋಷಕರು ಹಾಗೂ ವಿದ್ಯಾರ್ಥಿಗಳು ತಮಿಳುನಾಡು ಸರ್ಕಾರದ ನಿರ್ಧಾರದಿಂದ ಸಂಪೂರ್ಣ ಗೊಂದಲಕ್ಕೀಡಾಗಿದ್ದಾರೆ. ನೀಟ್ ತಮಿಳುನಾಡಿನಲ್ಲಿ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಉಂಟಾಗಿದೆ. ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ವೈದ್ಯಕೀಯ ಪರೀಕ್ಷೆಯ ಆಕಾಂಕ್ಷಿಯ ಸಾವಿನ ಕುರಿತು ಚರ್ಚೆಗೆ ಸರ್ಕಾರ ಅವಕಾಶ ನೀಡಿಲ್ಲ” ಎಂದು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಆರೋಪಿಸಿದ್ದಾರೆ.
“ಸರ್ಕಾರ NEET ರದ್ದುಗೊಳಿಸುವುದಾಗಿ ಹೇಳಿದ್ದರಿಂದ ವಿದ್ಯಾರ್ಥಿಗಳು ಸರಿಯಾಗಿ ಸಿದ್ಧರಾಗಿರಲಿಲ್ಲ” ಎಂದು ಅವರು ಆಪಾದಿಸಿದ್ದಾರೆ.
ಈ ಬಾರಿಯ ನೀಟ್ ಪರೀಕ್ಷೆಗೆ ಮುನ್ನ ಸೇಲಂನಲ್ಲಿ ಧನುಷ್ ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದನು. 19 ವರ್ಷದ ಧನುಷ್ 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದರೂ ಸಹ ಎರಡು ಭಾರಿ ನೀಟ್ ಪರೀಕ್ಷೆ ಬರೆದು ಅಗತ್ಯ ಅಂಕಗಳನ್ನು ಪಡೆಯದೆ ಮನನೊಂದಿದ್ದರು. ಅದೇ ರೀತಿ ನೀಟ್ನಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದೆ ಹಲವು ವಿದ್ಯಾರ್ಥಿಗಳು ಸಾವಿಗೆ ಶರಣಾಗುತ್ತಿರುವುದನ್ನು ಗಮನಿಸಬಹುದು.
ಮಸೂದೆ ಹೇಳುವುದೇನು?
12ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ವೈದ್ಯಕೀಯ, ದಂತವೈದ್ಯಕೀಯ, ಭಾರತೀಯ ವೈದ್ಯಕೀಯ, ಹೋಮಿಯೋಪತಿ ವಿಷಯಗಳಿಗೆ ಸಂಬಂಧಿಸಿದ ಸ್ನಾತಕ ಪದವಿ ಕೋರ್ಸ್ಗಳಿಗೆ ಪ್ರವೇಶ ನೀಡಲಾಗುವುದು. ಪದವಿ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ನೀಡುವಾಗ ನೀಟ್ ಅವಶ್ಯವಿಲ್ಲ. 12ನೇ ತರಗತಿಯಲ್ಲಿ ನಡೆಸುವ ಅರ್ಹತಾ ಪರೀಕ್ಷೆಗಳ ಅಂಕಗಳನ್ನು ಪರಿಗಣಿಸಿ “ಸಾಮಾನ್ಯ ವಿಧಾನ”ದಲ್ಲಿ ವೈದ್ಯಕೀಯ ಪದವಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಬೇಕು.
ಬಹುಪಾಲು ವಿದ್ಯಾರ್ಥಿಗಳಿಗೆ ‘ನೀಟ್’ ಬೇಡ: ನ್ಯಾಯಮೂರ್ತಿ ರಾಜನ್
ತಮಿಳುನಾಡಿನ ನಿರ್ಣಯ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಅಶಕ್ತ ಸಮುದಾಯಗಳ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣದಿಂದ ದೂರ ಉಳಿದು, ಮುಖ್ಯವಾಹಿನಿ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ತಮಿಳುನಾಡು ಕೈಗೊಂಡಿರುವ ಈ ನಿರ್ಧಾರ ಗ್ರಾಮೀಣ ವಿದ್ಯಾರ್ಥಿಗಳು ವೈದ್ಯರಾಗಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಲವರು ಸ್ಟಾಲಿನ್ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಅಂದಹಾಗೆ ಪಳನಿಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ನೀಟ್ ಪರೀಕ್ಷೆಯನ್ನು ತಮಿಳುನಾಡಿನಲ್ಲಿ ಪರಿಚಯಿಸಲಾಯಿತು. ಜಯಲಲಿತಾ ಅವರ ಅವಧಿಯಲ್ಲೂ ನೀಟ್ ಇರಲಿಲ್ಲ ಎಂದು ಸ್ಟಾಲಿನ್ ಟೀಕಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ನೀಟ್ ಪರೀಕ್ಷೆಯಲ್ಲಿ 6 ಅಂಕ ಗಳಿಸಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆ!